ಅನಕೃ ಶತಮಾನೋತ್ಸವ ಸಂದರ್ಭದಲ್ಲಿ ಅನಕೃ ರವರ ಸಂಧ್ಯಾರಾಗ ಓದುವ ಕಾದಂಬರಿಯನ್ನು, ಕೇಳುವ ಕಾದಂಬರಿಯಾಗಿ ಪರಿವರ್ತಿಸಿ ಅನಕೃ ಪ್ರತಿಷ್ಟಾನದವರು ಕನ್ನಡದ ಸಾಹಿತ್ಯ ಕ್ಷೇತ್ರಕ್ಕೆ ಹೊಸ ಕಾಣಿಕೆಯನ್ನು ಪ್ರಥಮವಾಗಿ ನೀಡಿದ್ದಾರೆ.
ಇದೇ ಜೂನ್ 25 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಡಾ.ಬಿ.ವಿ.ರಾಜಾರಾಂ ಅವರು ಸರಳವಾಗಿ ಸುಂದರವಾಗಿ ನಡೆಸಿಕೊಟ್ಟ ಬಿಡುಗಡೆ ಸಮಾರಂಭದಲ್ಲಿ 95 ವರ್ಷ ವಯಸ್ಸಿನ ಹಿರಿಯ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಮತ್ತು ಅನಕೃ ಪ್ರತಿಷ್ಠಾನದ ಅಧ್ಯಕ್ಷ ಹಾರ್ನಳ್ಳಿ ರಾಮಸ್ವಾಮಿಯವರು ಮುಖ್ಯ ಅತಿಥಿಗಳಾಗಿದ್ದರು. ಸಿಡಿ ಬಿಡುಗಡೆಯನ್ನು ಶ್ರೀ ವಿ. ಲಕ್ಷ್ಮಿನಾರಾಯಣ್, ವ್ಯವಸ್ಥಾಪಕ ನಿರ್ದೇಶಕರು, ನಿರ್ಮಾಣ್ ಶೆಲ್ಟರ್ಸ್, ಬೆಂಗಳೂರು ಇವರು ನಡೆಸಿಕೊಟ್ಟರು.
ಸುಂದರ ಸುಶ್ರಾವ್ಯ ಸರಸ್ವತಿ ಪ್ರಾರ್ಥನೆಯಿಂದ ಪ್ರಾರಂಭವಾದ ಕಾರ್ಯಕ್ರಮ ಆಡಂಬರ ಇಲ್ಲದ ಸರಳ ನಿರೂಪಣೆಯಿಂದಾಗಿ ಸಂತೋಷ ಕೊಟ್ಟಿತು. ಈ ಹೊಸ ಪ್ರಯತ್ನದಲ್ಲಿ ಭಾಗವಹಿಸಿದವರಿಗೆಲ್ಲಾ ಹಿರಿಯರಾದ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರಿಂದ ನೆನಪಿನ ಕಾಣಿಕೆಯನ್ನು ಕೊಡಲಾಯಿತು. ಕಲಾವಿದರ ಸಂಭ್ರಮ ಭಾಗವಹಿಸಿದ ನಮಗೆಲ್ಲರಿಗೂ ಖುಷಿಕೊಟ್ಟಿತು.
ಬಿಡುಗಡೆಯಾದ ಸಿಡಿ ಯ ತುಣುಕುಗಳನ್ನು ಕೇಳಿ ಈ ಸಿಡಿಯನ್ನು ಕೊಳ್ಳಬೇಕೆಂದು ಆಸೆಯಾಗಿ ಈ ಸಿಡಿಯನ್ನು ಕೊಂಡಿದ್ದಾಯಿತು. ಮನೆಗೆ ಹೋದೊಡನೆ ಕಂಪ್ಯೂಟರ್ ನಲ್ಲಿ ಹಾಕಿ ಕೇಳಿದಾಗ ಆದ ಸಂತೋಷ ಅಷ್ಟಿಷ್ಟಲ್ಲ. ಸಾಕಷ್ಟು ಅನಕ್ಷರಸ್ಥರೇ ಇರುವ ನಮ್ಮ ಸಮಾಜದಲ್ಲಿ (ಅಲ್ಲದೆ ಸಾಕಷ್ಟು ಅಕ್ಷರಸ್ಥರಲ್ಲಿ ಕನ್ನಡ ಅನಕ್ಷರಸ್ಥರೇ ಹೆಚ್ಚಿರುವ ಬೆಂಗಳೂರಿನಲ್ಲಿ) ಇನ್ನು ಕನ್ನಡ ಕಾದಂಬರಿಯನ್ನು ಆಸ್ವಾದಿಸುವುದು ಬರಿಯ ಕನಸಾಗಿ ಉಳಿಯುವುದಿಲ್ಲ ಅನ್ನುವ ವಿಷಯವೇ ನನಗೆ ಖುಷಿ ಕೊಟ್ಟಿದ್ದು.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಘಟಿಸಿದ ಇಂತಹ ಚರಿತ್ರಾರ್ಹ ತಿರುವನ್ನು ನಾವೆಲ್ಲರೂ ಸ್ವಾಗತಿಸಬೇಕು. ಅಂತಹ ಸಾಹಸಕ್ಕೆ ಕೈ ಹಾಕಿದ ಅನಕೃ ಪ್ರತಿಷ್ಠಾನ ವನ್ನು ಅಭಿನಂದಿಸುವುದು ಮಾತ್ರವಲ್ಲದೆ ಆ ಸಿಡಿ ಯನ್ನು ಕೊಂಡು, ಕೇಳಬೇಕಾಗಿದೆ.
ರೂ.150/- ಬೆಲೆ ಬಾಳುವ ಈ ಸಿಡಿಯನ್ನು ಕೊಳ್ಳುವ ಆಸಕ್ತರು ಎ.ಕೆ.ಗೌತಮ್ ಅವರನ್ನು ಸಂಪರ್ಕಿಸಬಹುದು. ಅವರ ಮೊಬೈಲ್ ನಂ.9448066205 ಹಾಗೇ ಅವರ ಇಮೈಲ್ ವಿಳಾಸ shobha.goutham@gmail.com.
ಇಲ್ಲವೇ ನಮ್ಮನ್ನು ಸಂಪರ್ಕಿಸಿ.
Filed under: ಬಿಡುಗಡೆ | Tagged: ಅನಕೃ, ಕೇಳುವ ಕಾದಂಬರಿ, ಸಂಧ್ಯಾರಾಗ




