
ಅರಮನೆ ಮೈದಾನದಲ್ಲಿ ಶುಕ್ರವಾರ ಆರಂಭವಾಗುವ ಪುಸ್ತಕೋತ್ಸವದಲ್ಲಿ 340 ಕ್ಕೂ ಹೆಚ್ಚು ಮಳಿಗೆಗಳಿವೆ. ಲಕ್ಷಾಂತರ ಪುಸ್ತಕಗಳಿವೆ. ಇದೊಂದು ಜ್ಞಾನ ಭಂಡಾರ.
ಪುಸ್ತಕ ಪ್ರಿಯರು ಕಾತರದಿಂದ ನಿರೀಕ್ಷಿಸುವ ಬೆಂಗಳೂರು ಪುಸ್ತಕ ಹಬ್ಬ ಶುಕ್ರವಾರ 06-11-2009 ದಿಂದ ಹತ್ತು ದಿನ ಕಾಲ ಅರಮನೆ ಮೈದಾನದಲ್ಲಿ ನಡೆಯಲಿದೆ.
ಏಷ್ಯಾದ ಎರಡನೇ ಅತಿ ದೊಡ್ಡ ಪುಸ್ತಕೋತ್ಸವ ಎನ್ನುವುದು ಇದರ ಹೆಗ್ಗಳಿಕೆ. ಈ ಬಾರಿಯದು ಏಳನೇ ವರ್ಷದ ಪುಸ್ತಕೋತ್ಸವ.
ಮೂರು ಲಕ್ಷಕ್ಕೂ ಅಧಿಕ ಮಂದಿ ಪುಸ್ತಕ ಪ್ರೇಮಿಗಳು ಭೇಟಿ ಸಂಘಟಕರ ಅಂದಾಜು. ಈ ಕಾರಣದಿಂದಾಗಿಯೇ ದೇಶದ ಪ್ರಮುಖ ಪ್ರಕಾಶಕರು ತಮ್ಮ ಪುಸ್ತಕಗಳ ಬೃಹತ್ ಸಂಗ್ರಹದೊಡನೆ ಇಲ್ಲಿ ಭಾಗವಹಿಸುತ್ತಿದ್ದಾರೆ.
ಈ ಬಾರಿ 340ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಬೆಂಗಳೂರು ಪುಸ್ತಕೋತ್ಸವ 2009 ರ ಕಾರ್ಯಕ್ರಮ ನಿರ್ದೇಶಕ ಬಿ. ಎಸ್. ರಘುರಾಮ್ ಹೇಳುತ್ತಾರೆ.
ಈ ಬಾರಿ ಕನ್ನಡ ಮಳಿಗೆಗಳಿಗೆ ಪುಸ್ತಕ ಪ್ರಾಧಿಕಾರ ರಿಯಾಯ್ತಿ ನೀಡಿದೆ. ಹೀಗಾಗಿ ಕನ್ನಡ ಪ್ರಕಾಶಕರಿಗೆ ಸುಲಭ ದರದಲ್ಲಿ ಮಳಿಗೆಗಳು ದೊರೆಯಲಿವೆ.
ಈ ಬಾರಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪುಸ್ತಕೋತ್ಸವಕ್ಕೆ ಉಚಿತ ಪ್ರವೇಶ. ಆದರೆ ಸಾರ್ವಜನಿಕರಿಗೆ 20 ರೂ ಶುಲ್ಕ.
ಸಾಂಸ್ಕೃತಿಕ ಕಾರ್ಯಕ್ರಮ : ಪುಸ್ತಕೋತ್ಸವದ ಅವಧಿಯಲ್ಲಿ ಪ್ರತಿದಿನ ಸಂಜೆ 6 ರಿಂದ 8 ರವರೆಗೆ ಸಾಂಸ್ಕೃತಿಕ ರಸದೌತಣ ಆಯೋಜಿಸಲಾಗುತ್ತದೆ.
ಇದಕ್ಕಾಗಿ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ವಿನಾಯಕ ಕೃಷ್ಣ ಗೋಕಾಕ ಸಾಂಸ್ಕೃತಿಕ ವೇದಿಕೆ ನಿರ್ಮಿಸಲಾಗಿದೆ. ಏಕೆಂದರೆ ಇದು ಗೋಕಾಕರ ಜನ್ಮ ಶತಮಾನೋತ್ಸವ ವರ್ಷ.
- ಆರ್. ಬಿ. ಕೃಪೆ : ಪ್ರಜಾವಾಣಿ
Filed under: Uncategorized



