ಹೇಳತೇನ ಕೇಳ…ಕನ್ನಡಕ್ಕೆ ಮತ್ತೊಂದು ಜ್ಞಾನಪೀಠ ಪ್ರಶಸ್ತಿ

ಕನ್ನಡದ ಹಿರಿಯ ಕವಿ ಚಂದ್ರಶೇಖರ ಕಂಬಾರರಿಗೀಗ ಜ್ಞಾನಪೀಠ ಪ್ರಶಸ್ತಿಯ ಸಂಭ್ರಮ. ಹದಿಮೂರು ವರ್ಷಗಳ ಅಂತರದ ನಂತರ ಕಂಬಾರರ ಮೂಲಕ ಕನ್ನಡಕ್ಕೆ ಮತ್ತೊಂದು ಜ್ಞಾನಪೀಠ ದೊರೆಯುವುದರೊಂದಿಗೆ, ಕನ್ನಡದ `ಜ್ಞಾನಪೀಠ ಸಪ್ತರ್ಷಿ ಮಂಡಲ`ದ ಪುನರ‌್ರಚನೆಯಾಗಿದ್ದು, ಆ ಸಂಖ್ಯೆ ಎಂಟಕ್ಕೇರಿದೆ. ಕನ್ನಡದ ಜ್ಞಾನಪೀಠಿಗಳದೀಗ `ಅಷ್ಟ ದಿಕ್ಪಾಲಕ` ಪಡೆ.

ಏಳು ಲಕ್ಷ ರೂಪಾಯಿ ನಗದು, ಸರಸ್ವತಿ ದೇವಿಯ ಕಂಚಿನ ಪ್ರತಿಮೆ ಹಾಗೂ ಬಿನ್ನವತ್ತಳೆ ಹೊಂದಿರುವ ಜ್ಞಾನಪೀಠ ಪ್ರಶಸ್ತಿ ಭಾರತೀಯ ಸಾಹಿತ್ಯಕ್ಷೇತ್ರದಲ್ಲಿ ಅತ್ಯುನ್ನತ ಗೌರವ. ಈ ಮೇರುಮನ್ನಣೆಗೆ ಕಂಬಾರರು ಪಾತ್ರ. ಅನೇಕ ವರ್ಷಗಳಿಂದ ಜ್ಞಾನಪೀಠ ಕಂಬಾರರತ್ತ ಮುಖ ಮಾಡಿಯೇ ಇತ್ತಾದರೂ, ಮುಹೂರ್ತ ಕೂಡಿಬಂದಿರುವುದು ಈಗ. ಜ್ಞಾನಪೀಠದ ಪ್ರಭೆಯಲ್ಲಿ ಮಿನುಗುತ್ತಿರುವ ಕಂಬಾರರ ಬಗ್ಗೆ ಮಾತನಾಡುವಾಗ ಅವರ ದಶಮುಖಗಳು ಕಣ್ಮುಂದೆ ಸುಳಿಯುತ್ತವೆ. ನಾಟಕಕಾರ, ಕಾದಂಬರಿಕಾರ, ಕನ್ನಡ ವಿಶ್ವವಿದ್ಯಾಲಯದ ಬುನಾದಿ ಗಟ್ಟಿಗೊಳಿಸಿದ ಆಡಳಿತಗಾರ, ಸಂಶೋಧಕ- ಹೀಗೆ ಕಂಬಾರರದು ಬಹುರೂಪ. ಆದರೆ, ಇವೆಲ್ಲವುಗಳ ಮುನ್ನೆಲೆಯಲ್ಲಿ ನಿಲ್ಲುವುದು ಅವರ ಕಾವ್ಯಪ್ರೀತಿ. ಕಾವ್ಯವೆನ್ನುವುದು ಅವರ ಪಾಲಿಗೆ ಆತ್ಮದ ಕಸುಬುದಾರಿಕೆ.

`ಕವಿ ಮತ್ತು ಕವಿತೆ ಮುಖಾಮುಖಿಯಾಗಬೇಕು. ಕಾವ್ಯ ರಚನೆ ಅಂದ್ರೆ ಅದು ಏಕಾಂತದ ಸಂವಾದ, ಗುದ್ದಾಟ. ಇದರ ಅರಿವು ಕವಿಗೆ ಇರಬೇಕು. ನನ್ನ ಎಲ್ಲವನ್ನೂ ಹಿಂಡಿ ಹೊರಬಂದಿದೆ ಎನ್ನಿಸಬೇಕು ಕವಿತೆ. ಅದು, ಆತ್ಮ ಹಿಂಡಿ ಬರಬೇಕು. ನೀರು ಕಡೆದರೆ ಬೆಣ್ಣೆ ಬರುತ್ತಲ್ಲ, ಹಾಗೆ. ಅದು ಹುಡುಗಿಯೊಂದಿಗಿನ ಪ್ರೀತಿಯಂತೆ ತೀರಾ ಖಾಸಗಿಯಾದುದು. ದೇವರ ಮುಂದೆಯೂ ಹೇಳಿಕೊಳ್ಳಲಾಗದ ಪ್ರೀತಿಯಂತಹದ್ದು`. ಇದು ಕಾವ್ಯದ ಬಗ್ಗೆ ಕಂಬಾರರ ನಿಲುವು.

ಶೀರ್ಷಿಕೆ: ಸಿಂಗಾರೆವ್ವ ಮತ್ತು ಅರಮನೆ ಲೇಖಕರು: ಚಂದ್ರಶೇಖರ ಕಂಬಾರ ಪ್ರಕಾಶಕರು:ಪ್ರಿಂಟರ್ಸ್ ಪ್ರಕಾಶನ ಪುಟ:೨೦೨

ಈವರೆಗಿನ ಹೇಳತೇನ ಕೇಳ…
ಕಾವ್ಯ: ಮುಗುಳು, ಹೇಳತೇನ ಕೇಳ, ತಕರಾರಿನವರು, ಸಾವಿರದ ನೆರಳು, ಚಕೋರಿ, ಆಯ್ದ ಕವನಗಳು, ಬೆಳ್ಳಿಮೀನು, ಈವರೆಗಿನ ಹೇಳತೇನ ಕೇಳ (ಸಮಗ್ರ-1994), ಅಕ್ಕಕ್ಕು ಹಾಡುಗಳೇ, ಎಲ್ಲಿದೆ ಶಿವಾಪುರ?
ನಾಟಕ: ಬೆಂಬತ್ತಿದ ಕಣ್ಣು, ನಾರ್ಸಿಸಸ್, ಋಷ್ಯಶೃಂಗ, ಜೋಕುಮಾರಸ್ವಾಮಿ, ಚಾಳೇಶ, ಸಂಗ್ಯಾಬಾಳ್ಯಾ ಅನಬೇಕೋ ನಾಡೊಳಗ, ಕಿಟ್ಟಿಯ ಕಥೆ, ಖರೋಖರ, ಮತಾಂತರ, ಹರಕೆಯ ಕುರಿ, ಸಾಂಬಶಿವ ಪ್ರಹಸನ, ಸಿರಿ ಸಂಪಿಗೆ, ಹುಲಿಯ ನೆರಳು, ಬೆಪ್ಪು ತಕ್ಕಡಿ ಬೋಳೇಶಂಕರ, ಪುಷ್ಪರಾಶಿ, ತುಕ್ರನ ಕನಸು, ಮಹಾಮಾಯಿ, ಶಿವರಾತ್ರಿ.
ಕಾದಂಬರಿ: ಅಣ್ಣತಂಗಿ, ಕರಿಮಾಯಿ, ಜಿ.ಕೆ.ಮಾಸ್ತರ ಪ್ರಣಯ ಪ್ರಸಂಗ, ಸಿಂಗಾರೆವ್ವ ಮತ್ತು ಅರಮನೆ, ಶಿಖರ ಸೂರ್ಯ.

ಸಂಶೋಧನೆ: ಸಂಗ್ಯಾ ಬಾಳ್ಯಾ, ಬಣ್ಣೀಸಿ ಹಾಡವ್ವ ನನ್ನ ಬಳಗ, ಬಯಲಾಟ, ಮಾತಾಡೋ ಲಿಂಗವೇ, ನಮ್ಮ ಜಾನಪದ, ಬಂದಿದೆ ನನ್ನ ಜಡೆಯೊಳಗೆ, ಕನ್ನಡ ನಾಟಕ ಸಂಪುಟ, ಕನ್ನಡ ಜಾನಪದ ವಿಶ್ವಕೋಶ, ಲಕ್ಷಾಪತಿ ರಾಜನ ಕತೆ, ಬೇಡರ ಹುಡುಗ ಮತ್ತು ಗಿಳಿ, ಕಾಸಿಗೊಂದು ಸೇರು, ನೆಲದ ಮರೆಯ ನಿದಾನ, ಬೃಹದ್ದೇಶಿ ಚಿಂತನೆ.

ಪಿಎಚ್.ಡಿ ಮಹಾಪ್ರಬಂಧ: ಉತ್ತರ ಕರ್ನಾಟಕದ ಜಾನಪದ ರಂಗಭೂಮಿ.

ಪ್ರಶಸ್ತಿ-ಪುರಸ್ಕಾರ: ರಾಜ್ಯ ನಾಟಕ ಅಕಾಡೆಮಿ ಬಹುಮಾನಗಳು, ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನಗಳು, ಕೇರಳದ ಆಶಾನ್ ಪ್ರಶಸ್ತಿ, ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇತ್ಯಾದಿ.

ಕಂಬಾರರ ಆಸೆ : ಒಂದರಿಂದ ಹತ್ತನೆಯ ತರಗತಿಯವರೆಗೆ ಸರ್ಕಾರವೇ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕು. ಅಲ್ಲದೆ, ಅಂಗನವಾಡಿಯಿಂದ ಸ್ನಾತಕೋತ್ತರ ವಿಜ್ಞಾನ, ಕಲೆ ಪದವಿಗಳನ್ನು ಕನ್ನಡದಲ್ಲೇ ಕಲಿಸುವ ಮಹಾವಿದ್ಯಾಲಯವೊಂದು ಕನ್ನಡ ನೆಲದಲ್ಲಿ ತಲೆಯೆತ್ತಬೇಕು.

 

ಕೃಪೆ: ಪ್ರಜಾವಾಣಿ

2 Responses

  1. sangrahayOgya lEkhana.

  2. parichaya madiddakke dhanyavadagalu

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.