ತುರ್ತು ಪರಿಸ್ಥಿತಿಯ ಕರಾಳ ಮುಖ

ಸ್ವತಂತ್ರ ಭಾರತದ ಚರಿತ್ರೆಯ ಕಪ್ಪು ಚುಕ್ಕೆಯಂತಿರುವ ತುರ್ತು ಪರಿಸ್ಥಿತಿ ಕೊನೆಗೊಂಡು ಇಪ್ಪತೈದು ವರ್ಷಗಳಾದರೂ ಅದರ ಕಹಿನೆನಪುಗಳು ಇನ್ನೂ ಮಾಸಿಲ್ಲ. ಅನೇಕ ಅಮಾಯಕರ ಸಾವುನೋವಿಗೆ ಕಾರಣವಾದ ತುರ್ತ ಪರಿಸ್ಥಿತಿ, ಪ್ರಜಾಪ್ರಭುತ್ವದ ಅಡಿಗಲ್ಲನ್ನೇ ಅಲ್ಲಾಡಿಸಿದ ಕರಾಳ ಸಂದರ್ಭ. ಆ ಕರಾಳ ದಿನಗಳಲ್ಲಿ ಕೇರಳದ ಅಮಾಯಕ ವಿದ್ಯಾರ್ಥಿಯೊಬ್ಬ ವ್ಯವಸ್ಥೆಯ ಕಬಂಧ ಬಾಹುಗಳಿಗೆ ಬಲಿಯಾದದ್ದು, ಮಗ ನಾಪತ್ತೆಯಾಗಿರುವನೆಂದು ತಿಳಿದು ಅವನನ್ನು ಹುಡುಕಲು ವೃದ್ಧ ತಂದೆಯೊಬ್ಬ ಪಟ್ಟ ಪಡಿಪಾಟಲುಗಳ ಕಥನ `ತುರ್ತ ಪರಿಸ್ಥಿತಿಯ ಕರಾಳ ಮುಖಕೃತಿ. ಮಗನನ್ನು ಕಳಕೊಂಡ ತಂದೆ (ಈಚರ್ ವಾರಿಯರ್) ಸ್ವತಃ ಈ ಕಥನ ಬರೆದಿರುವುದು ವಿಶೇಷ. ಈ ಅಪರೂಪದ ಕೃತಿಯನ್ನು ಲೇಖಕಿ ಸಾರಾ ಅಬೂಬಕರ್ ಕನ್ನಡಕ್ಕೆ ತಂದಿದ್ದಾರೆ.

ತಂದೆಯ ಅಸಹಾಯಕ ಸ್ಥಿತಿ, ರಾಜಕಾರಣಿಗಳ ಕಣ್ಣಾಮುಚ್ಚಾಲೆ, ಪೋಲೀಸರ ದರ್ಪ, ಪತ್ರಿಕೆಗಳ ಇಬ್ಬಗೆಯ ನೀತಿ, ಜನತೆಯಲ್ಲಿನ ಗುಪ್ತಗಾಮಿನಿಯಂಥ ಮಾನವೀಯತೆ ಕೃತಿಯುದ್ದಕ್ಕೂ ಕಾಣಬಹುದು. ವಾರಿಯರ್ ಅವರ ಸಂಕಟ ಓದುಗರದೂ ಆಗುವುದು ಕೃತಿ ವೈಶಿಷ್ಟ್ಯ. ತಂದೆಯೊಬ್ಬನ ಈ ದಾರುಣ ಕಥನ ಕೇರಳ ರಾಜಕೀಯದ ವಿವಿಧ ಮುಖಗಳನ್ನು ಅನಾವರಣಗೊಳಿಸುತ್ತದೆ ಹಾಗೂ ತುರ್ತ ಪರಿಸ್ಥಿತಿಗೆ ಕಾರಣವಾದವರ ಕುರಿತು ಬೇಸರ ಮೂಡಿಸುತ್ತದೆ.

ಕನ್ನಡದ ನೆಲದಲ್ಲಿಯೇ ನಡೆದ ಘಟನೆ ಎನ್ನುವಷ್ಟು ಸಹಜವಾಗಿ ಸಾರಾ ಅನುವಾದವಿದೆ.

ಶೀರ್ಷಿಕೆ : ತುರ್ತು ಪರಿಸ್ಥಿತಿಯ ಕರಾಳ ಮುಖ ಲೇಖಕರು : ಪ್ರೊ. ಈಚರ್ ವಾರಿಯರ್ ಅನುವಾದ : ಸಾರಾ ಅಬೂಬಕರ್ ಪ್ರಕಾಶಕರು : ಚಂದ್ರಗಿರಿ ಪ್ರಕಾಶನ ಪುಟಗಳು : 73 ಬೆಲೆ: ರೂ.50/-

ಕೃಪೆ : ಪ್ರಜಾವಾಣಿ

ಕನ್ನಡ ವೈದ್ಯಕೀಯ ಪದಗಳ ಸಮಸ್ಯೆ ಮತ್ತು ಪರಿಹಾರ

ಡಾ. ನಾ. ಸೋಮೇಶ್ವರ ವೃತ್ತಿಯಿಂದ ವೈದ್ಯರು; ಪ್ರವೃತ್ತಿಯಿಂದ ವೈದ್ಯಕೀಯ ಲೇಖಕರು. ಅವರು ಕನ್ನಡದ ಗಮನಾರ್ಹ ವೈದ್ಯ-ಲೇಖಕರಲ್ಲೊಬ್ಬರು. ಕನ್ನಡವನ್ನು ಸುಲಲಿತವಾಗಿ, ಕನ್ನಡದ ಮೂಲಕ ವೈದ್ಯ ಪರಿಕಲ್ಪನೆಗಳನ್ನು ಸಲೀಸಾಗಿ ಎದುರಿನ ವ್ಯಕ್ತಿ ಅಥವಾ ಓದುಗನಿಗೆ ತಲುಪಿಸುವಲ್ಲಿ ಅವರು ನಿಸ್ಸೀಮರು.

ಸೋಮೇಶ್ವರ ಅವರ `ಕನ್ನಡ ವೈದ್ಯಕೀಯ ಪದಗಳ ಸಮಸ್ಯೆ ಮತ್ತು ಪರಿಹಾರಕೃತಿ ಅನೇಕ ವೈದ್ಯಕೀಯ ಪದಗಳ ಬಳಕೆಯ ಕುರಿತು ಬೆಳಕನ್ನು ಚೆಲ್ಲುತ್ತದೆ. `ಅರಿವು ಎಲ್ಲರ ಹಕ್ಕು‘, `ಇಂಗ್ಲೀಷರು ಎಡವಿದ ಕಥೆ‘, `ಪಾರಿಭಾಷಿಕ ಪದಗಳ ಗುಣ ಲಕ್ಷಣಗಳು‘, `ಠಂಕ ಸೂತ್ರಗಳು‘, `ಕನ್ನಡ ವೈದ್ಯಕೀಯ ಪಾರಿಭಾಷಿಕ ಪದಗಳುಎನ್ನುವ ಈ ಅಧ್ಯಾಯಗಳಲ್ಲಿ ಲೇಖಕರು ತಮ್ಮ ಕೃತಿಯ ವಸ್ತುವನ್ನು ವಿವರಿಸಿದ್ದಾರೆ. ವೈದ್ಯ ವಿದ್ಯಾರ್ಥಿಗಳಿಗೆ, ವೈದ್ಯ ಸಾಹಿತ್ಯದಲ್ಲಿ ಆಸಕ್ತಿಯುಳ್ಳ ಜನಸಾಮಾನ್ಯರಿಗೆ ಉಪಯುಕ್ತವಾದ ಪುಸ್ತಕವಿದು.

ಮುನ್ನುಡಿ ಬರೆದಿರುವ ಮತ್ತೊಬ್ಬ ವೈದ್ಯ-ಸಾಹಿತಿ ಡಾ. ಸಿ. ಆರ್. ಚಂದ್ರಶೇಖರ್ ಅವರು, ವೈದ್ಯ ಸಾಹಿತ್ಯ ರಚನೆಯಲ್ಲಿ ಉಂಟಾಗುವ ಗೊಂದಲಗಳ ಕುರಿತು ಚರ್ಚಿಸಿದ್ದಾರೆ. `ಸೋಮೇಶ್ವರ ಅವರು ವೈದ್ಯ ಸಾಹಿತಿಗಳನ್ನು ಚಿಂತನೆಗೆ ಹಚ್ಚುವ ಕೆಲಸ ಮಾಡಿದ್ದಾರೆ. ನಮ್ಮ ವೈದ್ಯ-ವೈದ್ಯೇತರ ಸಾಹಿತಿಗಳು ಮತ್ತು ವೈದ್ಯ ಸಾಹಿತ್ಯಾಸಕ್ತರು ಈ ಪುಸ್ತಕವನ್ನು ಓದಿ, ಒಂದು ಸರ್ವಸಮ್ಮತ ವಿಧಿ ವಿಧಾನಗಳನ್ನು ಪಾಲಿಸುವರೆಂದು ಆಶಿಸುತ್ತೇನೆ.ಎಂದು ಮುನ್ನುಡಿಕಾರರು ಅಭಿಪ್ರಾಯ ಪಟ್ಟಿದ್ದಾರೆ.

ಶೀರ್ಷಿಕೆ : ಕನ್ನಡ ವೈದ್ಯಕೀಯ ಪದಗಳ ಸಮಸ್ಯೆ ಮತ್ತು ಪರಿಹಾರ ಲೇಖಕರು : ಡಾ. ನಾ. ಸೋಮೇಶ್ವರ ಪ್ರಕಾಶಕರು : ಪ್ರತಿಭಾ ಪ್ರಕಾಶನ, ಮೈಸೂರು ಪುಟಗಳು : 129 ಬೆಲೆ: ರೂ.50/-

ಕೃಪೆ : ಪ್ರಜಾವಾಣಿ

ಗರಿ ಬಿಚ್ಚಿವೆ `ಬೆಳ್ಳಕ್ಕಿ ಹಿಂಡು’ – ಕವಿ ಎಕ್ಕುಂಡಿಗೆ ನಮನ

ಭವಕೆ ಬರುವಾಗಲೇ ಭಗವಂತ ಇಟ್ಟಿರುವ

ಮಣಿದೀಪವೊಂದೊಂದು ಹೃದಯದೊಳಗೆ

ಕೊನೆಗೊಮ್ಮೆ ಕತ್ತಲು ಕವಿದಾಗ

ಇರಲೆಂದು

ಮುಕ್ತಿ ಲಿಪಿ ಓದಿಸಲು ನಿಮ್ಮ ಬಳಿಗೆ…

ದೂರವಿದ್ದವರನ್ನು ಹತ್ತಿರಕೆ ತರಬೇಕು

ಹರಿವ ಹೊಳೆಗೂ ಉಂಟು ಎರಡು

ತೋಳು, ನೆಲವಪ್ಪಿದ ಎರಡು ದಂಡೆಗಳು

ಬಾಂಧವ್ಯ ಬೆಸೆಯಬೇಕಲ್ಲವೆ?…

ಈ ಎರಡು ಬೇರೆ ಬೇರೆ ಪದ್ಯದ ಸಾಲುಗಳು ಸುಬ್ಬಣ್ಣ ರಂಗನಾಥ ಎಕ್ಕುಂಡಿಯವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ `ಬಕುಲದ ಹೂವುಗಳುಕವನ ಸಂಕಲನದಿಂದ ಉದ್ಧರಿಸಿದಂಥವು. ದೈವತ್ವ, ಮನುಷ್ಯ ಸಂಬಂಧ – ಎರಡರಲ್ಲೂ ಬಹಳವಾಗಿ ನಂಬಿಕೆಯಿದ್ದ ಎಕ್ಕುಂಡಿಯವರ ಮತ್ತೆರಡು ವಿಚಿತ್ರ ಆಸಕ್ತಿ ಎಂದರೆ ಮಧ್ವ ಸಿದ್ಧಾಂತ ಮತ್ತು ಮಾರ್ಕ್ಸ್ ವಾದ ಪತಿಪಾದನೆ. ಇಲ್ಲಿ ಮಧ್ವ ಸಿದ್ಧಾಂತ ಎನ್ನುವುದನ್ನು ಕೊಂಚ ವ್ಯಾಪಕವಾದ ಅರ್ಥದಲ್ಲಿ ನೋಡಿ: ಎಕ್ಕುಂಡಿಯವರಿಗೆ ಮಧ್ಯಕಾಲೀನ ಭಾಗವತ ಪರಂಪರೆಯಲ್ಲಿದ್ದ ವಿಶ್ವಾಸ ಮತ್ತು ಉದಾರ ನಿಲುವು ಇವು ಅಂತರ್ಗತವಾಗಿತ್ತು ಎಂದುಕೊಳ್ಳಬಹುದೇನೋ. ಅಂತೆಯೇ ಎಕ್ಕುಂಡಿ ಭಾಗವತ ಹಿನ್ನೆಲೆಯ ಅನೇಕ ಪೌರಾಣಿಕ ಸಂಗತಿಗಳನ್ನು ತೆಗೆದುಕೊಂಡು ಪದ್ಯ ರಚಿಸಿದ್ದಾರೆ. ಕಥನ ಕವನಗಳೂ ಇವೆ.

ಕನ್ನಡದಲ್ಲಿ ಪೌರಾಣಿಕ ವಿವರಗಳನ್ನು ಆಯ್ಕೆಮಾಡಿ ಕಾವ್ಯ ರಚಿಸಿದವರು ಪ್ರಮುಖವಾಗಿ ಇಬ್ಬರು. ಒಬ್ಬರು ಪುತಿನ, ಇನ್ನೊಬ್ಬರು ಸು.ರಂ.ಎಕ್ಕುಂಡಿ. ಇವರಿಬ್ಬರೂ ಕನ್ನಡದ ಬೇರೆ ಬೇರೆ ಪ್ರಕಾರಗಳಲ್ಲಿ ಕೈಯಾಡಿಸಿದ್ದರೂ ಪುರಾಣ ಪ್ರತಿಪಾದನೆ ಮತ್ತು ಆಧುನಿಕ ಆಶೋತ್ತರಗಳ ಕವಿಗಳಾಗಿಯೇ ಉಳಿದುಕೊಂಡವರು. ಪುತಿನ ನವೋದಯ ಕಾಲದ ಕವಿಯಾಗಿಯೇ ನಿಂತರೆ ಎಕ್ಕುಂಡಿ ಕೆ.ಎಸ್.ನರಸಿಂಹಸ್ವಾಮಿಯವರಂತೆ ಎಲ್ಲ ಕಾವ್ಯಪಂಥದ ಆಶಯಗಳನ್ನೂ ಒಳಗೊಂಡೇ ಸುಮಾರು ನಲವತ್ತು ವರ್ಷಗಳ ಕಾಲ ಕಾವ್ಯ ಕೃಷಿಯಲ್ಲಿ ಇದ್ದವರು. ಎಕ್ಕುಂಡಿಯವರ ಕಾವ್ಯನಿರ್ಮಿತಿಗೆ ಭಾಗವತ ಪರಂಪರೆಯ ಹಿನ್ನೆಲೆ ಇದ್ದರೂ ಅವರಲ್ಲಿ ಬಂಡಾಯದ ಅಂಶಗಳೂ ಇದ್ದವು. ಯಾಕೆಂದರೆ ಅವರ ಬದುಕು ರಮ್ಯವಾದ ಹಿನ್ನೆಲೆಯನ್ನೇನೂ ಹೊಂದಿರಲಿಲ್ಲ.

1923 ರಲ್ಲಿ ಹಾವೇರಿ ಜಿಲ್ಲೆಯ ರಾಣೆ ಬೆನ್ನೂರಿನಲ್ಲಿ ಜನಿಸಿದ ಎಕ್ಕುಂಡಿಯವರಿಗೆ ಐದನೆಯ ವಯಸ್ಸಿನಲ್ಲೇ ಪಿತೃವಿಯೋಗವಾಯಿತು. ಇದರಿಂದ ಅವರು ಸತ್ಯಬೋಧಸೇವಾ ಸಂಘ ನಡೆಸುತ್ತಿದ್ದ ವಾಚನಾಲಯದ ಪುಸ್ತಕಗಳನ್ನು ಮನೆಮನೆ ಹಂಚುವ ಕಾಯಕ ಮಾಡಬೇಕಾಯಿತು. ಇದು ಸತ್ಕಾರ್ಯವೇ ಆಗಿದ್ದುದರಿಂದ ಎಕ್ಕುಂಡಿಯವರಿಗೆ ಓದುವ ಅಭ್ಯಾಸ ಹತ್ತಿತು. ನಂತರ ಶಾಲಾ ಪ್ರವೇಶ, ಗುರುಗಳ ಒಲವು, ಆಮೇಲೆ ಬೇಂದ್ರೆ, ಶ್ರೀರಂಗ, ವಿ.ಕೃ.ಗೋಕಾಕ, ಶಂಬಾ ಜೋಷಿಯವರ ದರ್ಶನ ದೊರಕಿತು. ಎಕ್ಕುಂಡಿಯವರು ಪದವಿ ಮುಗಿಸಿದ ತರುವಾಯ ಉತ್ತರ ಕನ್ನಡ ಜಿಲ್ಲೆಯ ಬಂಕಿಕೊಡ್ಲದ ಆನಂದಾಶ್ರಮ ಪ್ರೌಢಶಾಲೆಯಲ್ಲಿ ಬಹು ದೀರ್ಘಕಾಲ ಶಿಕ್ಷಕರಾಗಿ ಕೆಲಸ ಮಾಡಿದರು. ಬಾಲ್ಯ ಕಾಲದಲ್ಲಿ ಕಷ್ಟದ ದಿನಗಳನ್ನು ತಳ್ಲಿದ ಎಕ್ಕುಂಡಿಯವರಿಗೆ ಅವರ ನೌಕರಿ ಪರಿಸರದಲ್ಲಿ ಕಣ್ಣಿಗೆ ಬಿದ್ದದ್ದು ಬುಡಕಟ್ಟು ಸಮೂಹದ ಹಾಲಕ್ಕಿ ಒಕ್ಕಲಿಗರು! ಜೊತೆಗೆ ಸಮುದ್ರದ ಅಲೆಗಳು, ಸಂಜೆಯ ಸೂರ್ಯಾಸ್ತ, ಹಾಯುವ ಬೆಳ್ಳಕ್ಕಿಗಳು, ಮೀನುಗಾರ ಬೆಸ್ತರು ಕಾಣಿಸಿಕೊಂಡರು. ಬದುಕಿನಲ್ಲಿ ಬಡತನ, ಸಂಕಷ್ಟವಿದ್ದರೂ ಅದರ ಸುತ್ತ ಸೌಂದರ್ಯವೂ ಇದೆ ಎಂಬ ಅರಿವು ಅವರದಾಯಿತು. ದುಡಿಮೆಯಿದ್ದರೆ, ಸರಳತೆಯ ದೃಢ ಮನಸ್ಸಿದ್ದರೆ ಜೀವನ ಸಾಗಿಸುವುದು ಪ್ರಯಾಸದ ಕೆಲಸವೆನಲ್ಲ ಎಂಬುದನ್ನೂ ಎಕ್ಕುಂಡಿ ತಿಳಿದರು. ಇಲ್ಲಿಯೇ ಗಮನಿಸಬೇಕಾದ ಇನ್ನೊಂದು ಸಂಗತಿ-ಎಕ್ಕುಂಡಿಯವರ ಕಾವ್ಯಕೃಷಿ ಆರಂಭವಾದುದು ದುಃಖ ಪ್ರಚೋದನೆಯಿಂದಲೇ! ಕರುಣೆ ತುಂಬಿದ ವಾಲ್ಮೀಕಿಗೆ ಕ್ರೌಂಚ ಪಕ್ಷಿಯ ಸಾವೇ ಶೋಕ ತಂದು ಕಾವ್ಯದ ಉಗಮಕ್ಕೆ ಕಾರಣವಾದಂತೆ, ಸುಭಾಷ್ ಚಂದ್ರ ಬೋಸರ ಅಕಾಲಿಕ ಅಸ್ತಮಾನ ಎಕ್ಕುಂಡಿಯವರ ಮೊದಲ ಶೋಕಗೀತೆಗೆ ಕಾರಣವಾಯಿತಂತೆ. ಜಗತ್ತಿನ ಬಗ್ಗೆ ಕರುಣೆ, ಪ್ರೀತಿ ಇಲ್ಲದವ ನಿಜವಾದ ಕವಿಯಾಗಲಾರ.

ಎಕ್ಕುಂಡಿಯವರು ಮಾನವ ಜಗತ್ತು ಮತ್ತು ಅಲ್ಲಿಯ ಜೀವ ಸಂಬಂಧ ಕುರಿತು ಅಪಾರ ಪ್ರೀತಿ, ಕರುಣೆ ಇದ್ದವರು. ಜೀವನ-ಸಾವಿನ ನೋವು ಬಲ್ಲವರಾಗಿದ್ದರು. ಅಧ್ಯಯನ, ಅಧ್ಯಾಪನ, ಕಾವ್ಯರಚನೆ ಇಷ್ಟರಲ್ಲೇ ಬಹುಕಾಲ ಕಳೆದ ಎಕ್ಕುಂಡಿಯವರಿಗೆ ಬೇರೊಂದು ಪ್ರಚಾರ ಜಗತ್ತಿನ ಅರಿವು ಇದ್ದಂತಿರಲಿಲ್ಲ. ಹಾಗಾಗಿ ಅವರು ಬಕುಲ ಪುಷ್ಪ ಮಾದರಿಯ `ಬೆಳ್ಳಕ್ಕಿಗಳು‘, `ಮತ್ಸ್ಯಗಂಧಿ‘, `ಗೋಧಿಯ ತೆನೆಗಳು‘, `ಹಾವಾಡಿಗರ ಹುಡುಗ‘, `ಆನಂದ ತೀರ್ಥರುಮುಂತಾಗಿ ಕವನ ಸಂಕಲನಗಳನ್ನು ಪ್ರಕಟಿಸಿದರು. ಈ ಬಗೆಯ ನಿರಂತರ ಕಾವ್ಯ ಕಾಯಕಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ, ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಬಹುಮಾನ ಸಂದಾಯವಾದವು. 1995ರ ಆಗಸ್ಟ್ನಲ್ಲಿ ತೀರಿಕೊಂಡ ಸುಬ್ಬಣ್ಣ ರಂಗನಾಥ ಎಕ್ಕುಂಡಿಯವರ ಸಮಗ್ರ ಕಾವ್ಯ ನಮ್ಮ ಕಣ್ಣಮುಂದಿದೆ. ಕಾವ್ಯರಸಿಕರು ಅವರ ನೆನಪನ್ನು ವಿಸ್ಮೃತಿಗೆ ತಳ್ಳದೆ ಮತ್ತೆ ಬಕುಲದ ಹೂಗಳನ್ನು ಆಘ್ರಾಣಿಸುವಂತಾಗಲಿ.

***ಡಾ.ಕೃಷ್ಣಮೂತರ್ಿ ಹನೂರ***

ಶೀರ್ಷಿಕೆ : ಬೆಳ್ಳಕ್ಕಿ ಹಿಂಡು ಲೇಖಕರು : ಸು. ರಂ. ಎಕ್ಕುಂಡಿ ಪ್ರಕಾಶಕರು : ಸಂಚಯ ಪ್ರಕಾಶನ ಪುಟಗಳು : 560 ಬೆಲೆ: ರೂ.350/-

ಕೃಪೆ : ಪ್ರಜಾವಾಣಿ

ಮಕ್ಕಳ ಕಾದಂಬರಿ

ಈಗಾಗಲೇ ಮಕ್ಕಳ ಕಾದಂಬರಿಗಳನ್ನು ಬರೆದು ಅನುಭವವಿರುವ ಶರಣಗೌಡ ಎರಡೆತ್ತಿನ ಅವರ ಹೊಸ ಮಕ್ಕಳ ಕಾದಂಬರಿ `ಸಪ್ತರ್ಷಿ
ದ್ವೀಪವಿದ್ಯಾರ್ಥಿ ಗಳ ಸ್ವಾರಸ್ಯ ಹಾಗೂ ಕೌತುಕಭರಿತ ಪ್ರವಾಸ ಕಥನ ಲೇಖಕರ ಸುಲಲಿತ ನಿರೂಪಣೆಯಲ್ಲಿ ಮೂಡಿ ಬಂದಿದೆ.

ಮಕ್ಕಳ ಮನಸ್ಸಿಗೆ ರಂಜನೆ ಒದಗಿಸುವುದು `ಸಪ್ತರ್ಷಿ ದ್ವೀಪಕಾದಂಬರಿಯ ಮುಖ್ಯ ಉದ್ದೇಶವಾಗಿದ್ದರೂ, ರಂಜನೆಯ ಜೊತೆಗೆ ದೇಶಭಕ್ತಿ ಹಾಗೂ ಸಾಹಸ ಪ್ರವೃತ್ತಿ ಉದ್ದೀಪನದ ಕೆಲಸವನ್ನೂ ಕಾದಂಬರಿ ಮಾಡುತ್ತದೆ.

`ಶಾಲೆ, ಬೋಧಕ ವರ್ಗ ಮತ್ತು ವಿದ್ಯಾರ್ಥಿ ಗಳಲ್ಲಿಯ ಸರಸ ಸುಮಧುರ ಪ್ರೀತಿ ವಿಶ್ವಾಸಗಳ ಸಂಬಂಧವನ್ನು ಶರಣಗೌಡ ಅವರು ಸೊಗಸಾಗಿ-ಸಹಜವಾಗಿ ಕಥನ ರೂಪಕವಾಗಿ ಅಭಿವ್ಯಕ್ತಿಗೊಳಿಸಿದ್ದಾರೆಎಂದು ಈಶ್ವರಚಂದ್ರ ಚಿಂತಾಮಣಿ ಮುನ್ನುಡಿಯಲ್ಲಿ ಶ್ಲಾಘಿಸಿದ್ದಾರೆ. ಕಾದಂಬರಿಯಲ್ಲಿ ಬಳಸಿಕೊಂಡಿರುವ ಚಿತ್ರಗಳು ಪುಸ್ತಕದ ಸೌಂದರ್ಯವನ್ನು ಹೆಚ್ಚಿಸಿವೆ.

ಶೀರ್ಷಿಕೆ : ಸಪ್ತರ್ಷಿ ದ್ವೀಪ ಲೇಖಕರು : ಶರಣಗೌಡ ಎರಡೆತ್ತಿನ ಪ್ರಕಾಶಕರು : ಆನಂದಕಂದ ಗ್ರಂಥಮಾಲೆ ಪುಟಗಳು : 104 ಬೆಲೆ: ರೂ.50/-

ಕೃಪೆ : ಪ್ರಜಾವಾಣಿ

ಜನಪದ ದನಿ ಪ್ರಾದೇಶಿಕ ಬನಿ

ಕಲಿಗಣನಾಥ ಗುಡದೂರು ಅವರ ಎಂಟು ಕಥೆಗಳ ಸಂಕಲನ `ಮತಾಂತರ‘. ಮಾಜಿಕ, ರಾಜಕೀಯ, ಆರ್ಥಿಕವಾದ ಹಲವು ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಅವುಗಳಿಗೆ ಮುಖಾಮುಖಿಯಾಗುವ, ನೊಂದ ಮನಸ್ಸುಗಳಿಗೆ ಸಾಂತ್ವನ ಬಯಸುವ ಮಾನವಪರ ಕಾಳಜಿ ಸಂಕಲನದ ಕಥೆಗಳಲ್ಲಿ ಪ್ರಧಾನ ಆಶಯವಾಗಿ ಬಿಂಬಿತವಾಗಿದೆ.

ಆಧುನಿಕತೆಯ ಒತ್ತಡದಲ್ಲಿ ತಮ್ಮ ಅಸ್ತಿತ್ವಗಳನ್ನು ಉಳಿಸಿಕೊಳ್ಳುವ ತವಕದಲ್ಲಿ ಗ್ರಾಮೀಣ ಸಮುದಾಯಗಳು, ದುಡಿಯುವ ವರ್ಗಗಳು ಇವೆ. ಈ ಸಂದರ್ಭದಲ್ಲಿ ಶ್ರಮಿಕ ಸಂಸ್ಕೃತಿಗಳಿಗೆ ದನಿಯಾಗಬೇಕಾದ ಅಗತ್ಯವಿದೆ ಎಂಬುದನ್ನು ಇಲ್ಲಿನ ಕಥೆಗಳು ಸೂಚಿಸುತ್ತವೆ. ಸಾಮಾಜಿಕವಾಗಿ ನಿಕೃಷ್ಟವಾದ, ಅವಕೃಪೆಗೆ ಗುರಿಯಾದ ಸಂಗತಿಗಳು ಕಥೆಗಳ ಆವರಣವನ್ನು ಹೊಕ್ಕಿರುವುದು ಗಮನಾರ್ಹ ಸಂಗತಿ.

`ಈ ದಾಹ ದೊಡ್ಡದು‘, `ಕಾಗದದ ದೋಣಿಕಥೆಗಳ ಆವರಣ ಮೇಲ್ನೋಟದಲ್ಲಿ ಸಾಮಾನ್ಯವೆನಿಸಿದರೂ ಮನಕಲಕುವ ಸಂಗತಿಯನ್ನು ಹೊತ್ತಿವೆ. ಆಹಾರ ತಯಾರಿಸುವ ಕಾರ್ಖನೆ ಅಮಾಯಕ ಜನರ ಶೋಷಣಗೆ ಕಾರಣವಾಗುವ ಭಯಾನಕ ಸ್ಥಿತಿಯನ್ನು ಚಿತ್ರಿಸುವಾಗ ಮನುಷ್ಯನ ದಾಹ ಎಷ್ಟು ದೊಡ್ಡದು ಎಂಬ ಗಾಬರಿಯಲ್ಲೇ ಓದುಗರಿಗೆ ಅನ್ನದ ಸಮಸ್ಯೆಯ ಹೊಸ ಅನುಭವವೊಂದು ಕಾದಿರುತ್ತದೆ. `ಕಾಗದದ ದೋಣಿಕತೆಯಲ್ಲಿ ಪಾಯಿಖಾನೆ ಮಾಲೀಕ ರುದ್ರಪ್ಪ ಮತ್ತು ಅವನ ಸೇವಕ ಕರ್ಣ ಪಾತ್ರಧಾರಿಗಳು; ಶೌಚಾಲಯದಲ್ಲಿನ ಕೆಲಸಗಾರರ ಸ್ಥಿತಿಗತಿಗಳು, ಅಲ್ಲಿಗೆ ಬರುವವರ ತಳಮಳ – ಇವುಗಳೆಲ್ಲಾ ಕಥೆಯಲ್ಲಿ ಸೇರಿಕೊಂಡಿವೆ. ದಿನನಿತ್ಯ ನೋಡುವ ದೃಶ್ಯವಾದರೂ ಸಮಸ್ಯೆ ಗಂಭೀರವಾದುದು.

ಕೌಟುಂಬಿಕ ಸಮಸ್ಯೆಗಳಿಂದ ಹಿಡಿದು ಒಟ್ಟು ಪರಿಸರದ ಮೇಲಾಗುತ್ತಿರುವ ಆಕ್ರಮಣಶೀಲತೆಯಂತ ಗಮನ ಸೆಳೆಯುವ `ಉರಿವ ಕೆಂಡದ ಮೇಲೆಸ್ವಾತಂತ್ರ್ಯಾನಂತರದಲ್ಲಿ ಭಾರತದ ಗ್ರಾಮೀಣ ಸ್ಥಿತಿಗಳ ಆತ್ಮಾವಲೋಕನವೆಂಬಂತೆ ಚಿತ್ರಿತವಾಗಿದೆ. ಇವತ್ತಿನ ಭಾರತದ ಸಾಂಸ್ಕೃತಿಕ ನೆಲೆಯ ಸ್ವರೂಪವನ್ನು ಅನಾವರಣಗೊಳಿಸುವ ಕಥೆ `ಮತಾಂತರ‘. ಪರಂಪರೆ ಮತ್ತು ಆಧುನಿಕತೆಗಳ ಸಂಸರ್ಗದಿಂದ ಹರಡಿಕೊಳ್ಳುವ ಕಥೆ ವಾಸ್ತವ ಸನ್ನಿವೇಶವನ್ನು ಮನವರಿಕೆ ಮಾಡುತ್ತದೆ. ಮೂಲಭೂತವಾದಿಗಳ ವರ್ತನೆಯಲ್ಲಿ ಜಾತ್ಯಾತೀತ ಮನಸ್ಸುಗಳು, ಅಕ್ಷರ ಸಂಸ್ಕೃತಿಯಿಂದ ವಂಚಿತರಾದವರು ಹಾಗೂ ಅಸ್ಪೃಶ್ಯರು ದಕ್ಕಲಾರದನ್ನ ದಕ್ಕಿಸಿಕೊಳ್ಲಲು ಮಾಡುವ ಪ್ರಯತ್ನಗಳು, `ಮತಾಂತರಪ್ರಕ್ರಿಯೆಗಳು – ಹೀಗೆ ಒಟ್ಟು ಸಾಂಸ್ಕೃತಿಕ ಸಂಘರ್ಷವಾಗಿ ಮೈದಾಳುವ ಕಥೆ ಸಮಸ್ಯೆಯ ನಿರಂತತೆಯನ್ನ ಸೂಚಿಸುತ್ತದೆ.

ಕನಸು ನನಸಾಗುವ ಬಗೆಗಿನ ವೈಚಾರಿಕ ನೆಲೆಯೊಂದಿಗೆ ಸಾಗುವ `ಆಗಸ್ಟ್ 15′ ಕಥೆಯಲ್ಲಿ ಬೌಗೋಳಿಕ ಚಹರೆಗಳೊಮದಿಗೆ ಸಾಮಾಜಿಕ ಸಮಸ್ಯೆಗಳು ತೆಕ್ಕೆಗೊಂಡಿದ್ದು ಬದುಕಿನ ವೈರುಧ್ಯಗಳ ಚಿತ್ರಣವಿದೆ. ಬಸವನಗೌಡನ ಶೋಷಣೆ ಅತಿರೇಕದ್ದಾಗಿದ್ದರೆ, ಮಲ್ಲ ಕನಸನ್ನ ನನಸನ್ನಾಗಿಸಿಕೊಳ್ಳಬೇಕೆನ್ನುವವನು. ನಡೆನುಡಿಗಳ ವ್ಯತ್ಯಾಸ ಗುರುತಿಸುವ ಮಲ್ಲನ ನಿರಾಶೆ ಮತ್ತು ಕೋಪದಲ್ಲಿ ಬದ್ದತೆಯ ಪ್ರಶ್ನೆಗಳು ಪುಟಿದೇಳುತ್ತವೆ. ಭೂಮಿ ಮತ್ತು ತಾಯಿಯ ಅವಿನಾಭಾವ ಸಂಬಂಧವನ್ನು ಚಿತ್ರಿಸುವ `ಅವ್ವದಲ್ಲಿ ಭೂಮಿಯನ್ನು ಕಬಳಿಸುವ ಕಂಪನಿಗಳು ತಮ್ಮ ಹೊಲದಲ್ಲಿ ಗಂಗಮ್ಮನನ್ನ ಮಣ್ಣುಮಾಡಲು ಬಿಡಲಾರದ ಸ್ಥಿತಿಯನ್ನು ನಿರ್ಮಿಸತ್ತವೆ. ಅವ್ಯಾಹತವಾಗಿ ಭೂಸ್ವಾಧೀನದ ವಿರುದ್ಧ ಜನತೆ ತಿರುಗಿಬೀಳುವ ಸ್ಥಿತಿಯನ್ನು ಈ ಕಥೆ ಹೇಳುತ್ತದೆ.

`ಮತಾಂತರಸಂಕಲನದ ಕಥೆಗಳ ಸನ್ನಿವೇಶಗಳು, ಘಟನೆಗಳು ಜರುಗುವುದೆಲ್ಲ ಗುಲ್ಬರ್ಗಾ, ರಾಯಚೂರು ಪರಿಸರದಲ್ಲಿ. ನೋವು, ನಿರಾಶೆ, ಶೋಷಣೆಯಂತಹ ವಸ್ತುವೇ ಇಲ್ಲಿ ಪ್ರಧಾನ ಸ್ಥಾನ ಪಡೆದಿದ್ದು ಗ್ರಾಮೀಣ ಬದುಕಿನ ವಸ್ತುಸ್ಥಿತಿಯನ್ನು ಕಟ್ಟಿಕೊಡುವಲ್ಲಿ ಹಾಗೂ ಜನಪರವಾದ ಆಶಯವನ್ನು ಪ್ರಕಟಿಸುವಲ್ಲಿ ಕಥೆಗಾರರು ತಕ್ಕಮಟ್ಟಿಗೆ ಯಶಸು ಸಾಧಿಸಿದ್ದಾರೆ. ಪ್ರಾದೇಶಿಕ ಬನಿಯ ದೃಷ್ಟಿಯಿಂದಲೂ ಸಂಕಲನ ಗಮನ ಸೆಳೆಯುತ್ತದೆ.

ಶೀರ್ಷಿಕೆ : ಮತಾಂತರ ಲೇಖಕರು : ಕಲಿಗಣನಾಥ ಗುಡದೂರು ಪ್ರಕಾಶಕರು : ಸಂಸ್ಕೃತಿ ಪ್ರಕಾಶನ ಪುಟಗಳು : 96 ಬೆಲೆ: ರೂ.65/-

ಕೃಪೆ : ಪ್ರಜಾವಾಣಿ

ಕಾಪ್ಸೂಲ್ ತಂತ್ರದ ಮಕ್ಕಳ ಕಥೆಗಳು

ಗುಳಿಗೆಯ ರೂಪದಲ್ಲಿ ಪ್ರತಿ ವಿಷಯವನ್ನೂ ನೀಡುವುದು ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಜನಪ್ರಿಯಗೊಳ್ಳುತ್ತಿರುವ ಕಥನ ತಂತ್ರ. ಓದಲಿಕ್ಕೆ ಪುರಸೊತ್ತಿಲ್ಲದ, ಕೇವಲ ಓದುವ ಸುಖಕ್ಕಾಗಿ ಮಾತ್ರ ಪುಸ್ತಕ ಕೈಗೆತ್ತಿಕೊಳ್ಳುವ ಸಹೃದಯರು ಕಡಿಮೆ ಆಗುತ್ತಿರುವುದೇ ಈ ಕ್ಯಾಪ್ಸೂಲ್ ತಂತ್ರದ ಜನಪ್ರಿಯತೆಗೆ ಕಾರಣ. ಇಂಥ ಸಂದರ್ಭದಲ್ಲಿ ಜೀನಹಳ್ಳಿ ಸಿದ್ದಲಿಂಗಪ್ಪನವರ ಕೃತಿ ಪ್ರಕಟವಾಗಿದೆ.

ಮನೋವಿಕಾಸಕ್ಕಾಗಿ, ಮನರಂಜನೆಗಾಗಿ ಅಥವಾ ಭಾಷೆ ಕಲಿಯುವ ಉದ್ದೇಶದಿಂದ ಮಕ್ಕಳು ಕಥೆ ಕೇಳುವ ಕಾಲ ಮುಗಿಯಿತು ಎಂದು ಲೇಖಕರು ಭಾವಿಸಿರುವುದರಿಂದಲೋ ಏನೋ, ಕಥೆಗಳಿಗೆ ಜಾಣ್ಮೆಯ ನಂಟು ಕಲ್ಪಿಸಿದ್ದಾರೆ. ಇಲ್ಲಿನ ಕಥೆಗಳನ್ನು ಓದುವ ಮಕ್ಕಳು ಕಥೆಯ ಖುಷಿಯೊಂದಿಗೆ – ಒಗಟು, ಗಾದೆಯನ್ನು ಅಥವಾ ಗಣಿತದ ಲೆಕ್ಕವನ್ನು ಕಲಿಯುತ್ತಾರೆ ಎನ್ನುವ ಆಶಯ ಅವರದ್ದು.

`ಮಕ್ಕಳ ಜಾಣ್ಮೆಯ ಕಥೆಗಳುಪುಸ್ತಕದಲ್ಲಿ ಒಟ್ಟು ಮೂವತ್ತಮೂರು ಕಥೆಗಳಿವೆ. ಮಕ್ಕಳ ಸಾಹಿತ್ಯ ರಚನೆಯಲ್ಲಿ ಪಳಗಿರುವ ಸಿದ್ಧಲಿಂಗಪ್ಪನವರು ಸಲೀಸಾಗಿ ಕಥೆ ಹೇಳಿದ್ದಾರೆ. ಕಥೆಗಳಿಗೆ ಪೂರಕವಾಗಿ ಬಳಸಿಕೊಂಡಿರುವ ಚಿತ್ರಗಳು ಪುಸ್ತಕದ ಸೊಗಸು ಹೆಚ್ಚಿಸಿವೆ.

ಕಥೆಗಳ ಮೂಲಕ ಕಲಿಕೆಯೂ ಸಾಧ್ಯವಿರುವುದರಿಂದ ಪೋಷಕರು ಕೂಡ ಈ ಕಥೆಯನ್ನು ಓದಿ ಎಂದು ತಮ್ಮ ಮಕ್ಕಳ ಬೆನ್ನು ತಟ್ಟಬಹುದು. ಮಕ್ಕಳು ತಾವು ಓದಿದ ಈ ಕಥೆಗಳನ್ನು ಗೆಳೆಯರೊಂದಿಗೆ ಹೇಳಿಕೊಂಡು ಪಾಠದ ಆಟ ಆಡಲೂ ಬಹುದು. ಆದರೆ ಕಥೆಯ ಸ್ವಾರಸ್ಯಕಿಂತ, ಕಥೆಯ ಮೂಲಕ ಉಂಟಾಗಬಹುದಾದ ಮನೋವಿಕಾಸಕ್ಕಿಂತಲೂ ಜಾಣ್ಮೆಯ ಅಂಶವೇ ಇಲಿನ ಕಥೆಗಳಲ್ಲಿ ಹೆಚ್ಚಾಗಿವೆ. ಈ ಜಾಣ್ಮೆಯ ಕಸರತ್ತು ಮಕ್ಕಳ ಲೋಕದ ರಮ್ಯತೆಯನ್ನು ಮರೆಸುವಂತಹದ್ದು. ಕಲಿಕೆ ಎನ್ನುವುದು ಪರೋಕ್ಷ ಸಾಧನೆ ಆಗಬೇಕೇ ಹೊರತು ಅದುವೇ ಮುಖ್ಯವಾಗಬಾರದು.

ಶೀರ್ಷಿಕೆ : ಮಕ್ಕಳ ಜಾಣ್ಮೆಯ ಕಥೆಗಳು ಲೇಖಕರು : ಜೀನಹಳ್ಳಿ ಸಿದ್ಡಲಿಂಗಪ್ಪ ಪ್ರಕಾಶಕರು : ಪ್ರೇಮ ಪ್ರಕಾಶನ ಪುಟಗಳು : 160 ಬೆಲೆ: ರೂ.80/-

ಕೃಪೆ : ಪ್ರಜಾವಾಣಿ

ಪ್ರತಿಭೆ ವಿವಾದಗಳಿಂದ ಸದಾ ಸುದ್ದಿಯಲ್ಲಿರುವ ಅಮಿತಾಬ್

ಭಾರತೀಯ ಚಿತ್ರರಂಗದ ದೊಡ್ಡ ಹೆಸರುಗಳಲ್ಲಿ ಅಮಿತಾಭ್ ಬಚ್ಚನ್ ದೊಡ್ಡ ಹೆಸರು. ಪ್ರತಿಭೆ ವಿವಾದಗಳಿಂದ ಸದಾ ಸುದ್ದಿಯಲ್ಲಿರುವ ಅಮಿತಾಬ್ ಒಂದರ್ಥದಲ್ಲಿ ಆಧುನಿಕ ಹಿಂದಿ ಚಿತ್ರರಂಗದ ಪ್ರತಿನಿಧಿಯಂತೆ ಕಾಣಿಸಿಕೊಂಡವರು. ಈ ವರ್ಣರಂಜಿತ ನಟನ ಬದುಕಿನ ವಿವರಗಳನ್ನು ಎನ್. ಸಿ. ಮಹೇಶ್ ಒಂದೆಡೆ ಕಲೆ ಹಾಕಿದ್ದಾರೆ. ವಿವಿಧ ಮೂಲಗಳ ಮೂಲಕ ಸ್ವಾರಸ್ಯಕರ ಮಾಹಿತಿ ಒಗ್ಗೂಡಿಸಿ ಕನ್ನಡಕ್ಕೆ ತಂದಿದ್ದಾರೆ.

ಒಟ್ಟು ಇಪ್ಪತ್ತಮೂರು ಅಧ್ಯಾಯಗಳಲ್ಲಿ ಬಚ್ಚನ್ನರ ಜೀವನಗಾಥೆಯನ್ನು ಕಟ್ಟಿಕೊಡಲು ಮಹೇಶ್ ಯತ್ನಿಸಿದ್ದಾರೆ. ಬಾಲ್ಯದ ದಿನಗಳಿಂದ ಹಿಡಿದು ಇವತ್ತಿನ ಅಮಿತಾಬ್ ವರೆಗಿನ ಚಿತ್ರಣ ಪುಸ್ತಕದಲ್ಲಿದೆ. ಅಮಿತಾಬ್ ಅನಿಸಿಕೆಗಳು, ಆತನ ಬಗ್ಗೆ ಇತರರ ಅನಿಸಿಕೆಗಳು, ಪತ್ನಿ ಹಾಗೂ ಪುತ್ರ ಕಂಡಂತೆ ಅಮಿತಾಬ್- ಹೀಗೆ ಅಪರೂಪದ ವ್ಯಕ್ತಿತ್ವವನ್ನು ಭಿನ್ನ ದೃಷ್ಟಿಕೋನಗಳ ಮೂಲಕ ಅರ್ಥ ಮಾಡಿಸುವ ಪ್ರಯತ್ನ ಮೆಚ್ಚುಗೆ ಗಳಿಸುತ್ತದೆ.

`ಅಮಿತಾಭ್ : ಒಂದು ಕಲಾಗಾಥೆಕೃತಿಗೆ ಜನಪ್ರಿಯ ಕಥನ ಶೈಲಿಯ ಸರಾಗ ದಕ್ಕಿದೆ. ಗೊಂದಲವಿಲ್ಲದ ನೇರ ಭಾಷೆಯಲ್ಲಿ ಹಾಗೂ ಲೇಖಕರು ತಮಗೆ ದಕ್ಕಿದ ನಟನನ್ನು ಓದುಗರಿಗೆ ಪರಿಚಯಿಸುವ ಪ್ರಮಾಣಿಕತೆ ಈ ಪುಸ್ತಕದಲ್ಲಿ ಕಾಣುತ್ತದೆ. ಆಕರ್ಷಕ ಮುಖಪುಟ ಗಮನ ಸೆಳೆಯುತ್ತದೆ.

ಒಳಪುಟಗಳಲ್ಲಿ ಕೆಲವು ಚಿತ್ರ ಇದ್ದರೂ, ಅಮಿತಾಬ್ ಅವರ ಸಿನಿಮಾ ಜೀವನ ಬಿಂಬಿಸುವ ಚಿತ್ರಮಾಲಿಕೆಯನ್ನು ಸಂಗ್ರಹಿಸಿ ನೀಡಬಹುದಿತ್ತು. ಅಮಿತಾಭ್ ರನ್ನೊಮ್ಮೆ ಭೇಟಿ ಮಾಡಿ, ವಿಶೇಷ ಸಂದರ್ಶನ ನಡೆಸಿದ್ದರೆ ಪುಸ್ತಕದ ಅರ್ಥ ಸಾಧ್ಯತೆ ಇನ್ನಷ್ಟು ಹೆಚ್ಚುತ್ತಿತ್ತು.

ಶೀರ್ಷಿಕೆ : ಅಮಿತಾಭ್ : ಒಂದು ಕಲಾಗಾಥೆ ಲೇಖಕರು : ಎನ್. ಸಿ. ಮಹೇಶ್ ಪ್ರಕಾಶಕರು : ರೂಪ ಪ್ರಕಾಶನ ಪುಟಗಳು : 120 ಬೆಲೆ: ರೂ.60/-

ಕೃಪೆ : ಪ್ರಜಾವಾಣಿ

ಚಿತ್ರದುರ್ಗದ ಕೋಟೆ ಪರಿಸರದ ದೇವಾಲಯಗಳು

ಈ ವಿಷಯದ ಬಗ್ಗೆ ಇದೇ ಮೊದಲ ಬಾರಿಗೆ ಇಂತಹದೊಂದು ಪುಸ್ತಕ ಹೊರಬಂದಿದೆ. ಎನ್. ಎಸ್. ಮಹಂತೇಶ ಇನ್ನೂ ಯುವಕರಾದರೂ ಆಳವಾದ ಅಧ್ಯಯನ ಹಾಗೂ ಅಗಾಧವಾದ ಕ್ಷೇತ್ರಕಾರ್ಯದ ಮೂಲಕ ಈಗಾಗಲೇ ಚಿತ್ರದುರ್ಗ ಇತಿಹಾಸದ ಬಗ್ಗೆ ಇರುವ ತಕ್ಕ ಮಟ್ಟಿನ ಸಂಶೋಧನಾ ಗ್ರಂಥಗಳ ಜತೆಗೆ ಮತ್ತೊಂದು ಹೊಸ ವಿಷಯವನ್ನು ಸೇರ್ಪಡೆ ಮಾಡಿದ್ದಾರೆ.

ಹುಲ್ಲೂರು ಶ್ರೀನಿವಾಸ ಜೋಯಿಸ, ಲಕ್ಷ್ಮಣ ತೆಲಗಾವಿ, ಬಿ. ರಾಜಶೇಖರಪ್ಪ, ಶ್ರೀ ಶೈಲಾರಾಧ್ಯ – ಮುಂತಾದ ನಾಡಿನ ಹೆಸರಾಂತ ಸಂಶೋಧಕರು ಚಿತ್ರದುರ್ಗದ ಇತಿಹಾಸದ ಬಗ್ಗೆ ಅಪಾರ ಸಂಶೋಧನೆ ಮಾಡಿದ್ದಾರೆ. ಅವರ ಕೆಲಸದ ಮುಂದುವರಿಕೆಯಾಗಿ ಪುಸ್ತಕ ಗಮನ ಸೆಳೆಯುತ್ತದೆ.

ಶೀರ್ಷಿಕೆ : ಚಿತ್ರದುರ್ಗದ ಕೋಟೆ ಪರಿಸರದ ದೇವಾಲಯಗಳು ಲೇಖಕರು : ಎನ್. ಎಸ್. ಮಹಂತೇಶ ಪ್ರಕಾಶಕರು : ರೇಣುಕ ಪ್ರಕಾಶನ ಪುಟಗಳು : 160 ಬೆಲೆ: ರೂ.100/-

ಕೃಪೆ : ಸುಧಾ

ಅಸ್ತವ್ಯಸ್ತವಾಗಿದ್ದ ಕನ್ನಡ ನಾಡಿನ ಚರಿತ್ರೆಯ ಚೌಕಟ್ಟನ್ನು ವ್ಯಸ್ತಗೊಳಿಸಿದ ಸಂಶೋಧಕ

`ಅಸ್ತವ್ಯಸ್ತವಾಗಿದ್ದ ಕನ್ನಡ ನಾಡಿನ ಚರಿತ್ರೆಯ ಚೌಕಟ್ಟನ್ನು ವ್ಯಸ್ತಗೊಳಿಸಿದಬಹುದೊಡ್ಡ ಸಂಶೋಧಕ, ರಾಷ್ಟ್ರಕವಿ ಗೋವಿಂದ ಪೈ ಅವರ ಕುರಿತು ಬೆಂಗಳೂರಿನ ಸುರಾನಾ ಕಾಲೇಜು ಏರ್ಪಡಿಸಿದ್ದ ವಿಚಾರಸಂಕಿರಣವನ್ನು ಸಾರ್ಥಕಗೊಳಿಸುವಷ್ಟು ಅಚ್ಚುಕಟ್ಟಾಗಿ, ಸುಂದರವಾಗಿ ಈ ಪುಸ್ತಕ ಮೂಡಿ ಬಂದಿದೆ.

ಕೇಂದ್ರ ಸಾಹಿತ್ಯ ಅಕಾಡಮಿ ಸಹಯೋಗದೊಂದಿಗೆ ನಡೆದ ಈ ಚರ್ಚೆಯಲ್ಲಿ ನಾಡಿನ ಹಲವು ವಿದ್ವಾಂಸರು ಗೋವಿಂದ ಪೈಗಳ ಬಹುಮುಖಿ ಸಾಧನೆಯ ನುಡಿ ತೋರಣ ಕಟ್ಟಿ ಕೊಟ್ಟಿದ್ದಾರೆ. ಅಸಾಧಾರಣ ಕೆಲಸ ಮಾಡಿಯೂ ಗೋವಿಂದ ಪೈಗಳ ಕುರಿತ ಗ್ರಂಥ ಬಂದಿರುವುದು ಕಡಿಮೆಯೇ. ಆ ನಿಟ್ಟಿನಲ್ಲಿ ಇದೊಂದು ಸಾರ್ಥಕ ಕೆಲಸ. ಶಾಸ್ತ್ರಜ್ಞ ಗೋವಿಂದ ಪೈ, ಕನ್ನಡ ಸಂಸ್ಕೃತಿ ಶೋಧನೆ, ಪೈ ಅವರ ಹೊಸಗನ್ನಡ ಸಾಹಿತ್ಯ ವಿಮರ್ಶೆ , ಹೆಬ್ಬೆರಳು ನಾಟಕದ ಪ್ರಾಯೋಗಿಕ ವಿಮರ್ಶೆ – ಇವೇ ಮುಂತಾದ ಲೇಖನಗಳು ಗಂಥದ ಮೌಲ್ಯ ಹೆಚ್ಚಿಸಿವೆ.

ಶೀರ್ಷಿಕೆ : ಗೋವಿಂದ ಪೈ ಸಂಸ್ಕೃತಿ ಲೋಕ ಸಂಪಾದಕರು : ಕೆ. ಈ. ರಾಧಾಕೃಷ್ಣ ಪ್ರಕಾಶಕರು : ವಸಂತ ಪ್ರಕಾಶನ ಪುಟಗಳು : 264 ಬೆಲೆ: ರೂ.140/-

ಕೃಪೆ : ಸುಧಾ

ಎರಡೇ ಪಾತ್ರಗಳ ವಿಶಿಷ್ಟ ನಾಟಕ

ವಿವಿದೆಡೆಗಳಲ್ಲಿ ಪ್ರದರ್ಶನ ಕಂಡಿರುವ ಯು. ಮೋಹನಚಂದ್ರ ಅವರ ಈ ಕಿರುನಾಟಕ ಈಗ ಕೃತಿಯ ರೂಪದಲ್ಲಿ ಪ್ರಕಟವಾಗಿದೆ. ಸುಮಾರು ಮೂರು ದಶಕಗಳ ರಂಗಭೂಮಿ ಅನುಭವ ಹೊಂದಿರುವ ಮೋಹನಚಂದ್ರರ ಈ ಕೃತಿ ಪುರುಷ-ಸ್ತ್ರೀ ಮನಸ್ಸುಗಳ ಪಾತಳಿಗಳನ್ನು ಕೆದಕುವ ಕೆಲಸ ಮಾಡುತ್ತದೆ.

ಶತಶತಮಾನಗಳಿಂದಲೂ ಹೆಣ್ಣು ಶೋಷಣೆಗೆ ಒಳಗಾಗುತ್ತಿದ್ದಾಳೆ ಎನ್ನುವ ಆಪಾದನೆಯ ವಿಶ್ಲೇಷಣೆ ನಾಟಕದಲ್ಲಿದೆ. ಇದೇ ವೇಳೆ ಪುರುಷನ ಹತ್ತಿಕ್ಕುವ ಗುಣದ ವಿಶ್ಲೇಷಣೆಯೂ ಇದೆ. ಆದರೆ ಇಲ್ಲಿನ ಪ್ರಕೃತಿ-ಪುರುಷ ಪಾತ್ರಗಳು ಯಾವ ಸಿದ್ಧ ಚೌಕಟ್ಟಿಗೂ ಸಿಲುಕದೆ, ಸ್ವತಂತ್ರ ಮನಃಸ್ಥಿತಿಯಲ್ಲಿ ವರ್ತಿಸುವುದು ಹಾಗೂ ನಾಟಕಕಾರರು ಯಾವ ಪಾತ್ರವನ್ನೂ ಸಾಮಾನ್ಯೀಕರಿಸದಿರುವುದು ಗಮನಾರ್ಹ.

`ಈ ನಾಟಕ ಹೊಸ ರೀತಿಯ ರಂಗ ಸಾಧ್ಯತೆಗಳಿಗೆ ನಾಂದಿ ಹಾಡಿದೆ. ಇದು `ನಟರ ನಾಟಕ‘. ಈ ನಾಟಕ ಆಡಲು ತಂತ್ರರಹಿತ ನಿಜ ನಟ ಹುಟ್ಟಲೇಬೇಕಾಗುತ್ತದೆ. ಪರಿಣಾಮಕಾರಿ ಸಂವಹನದ ದೃಷ್ಟಿಯಿಂದ ಆಪ್ತ ರಂಗಭೂಮಿ ಮಾಧ್ಯಮದಲ್ಲಿ ಈ ನಾಟಕ ಪ್ರದರ್ಶನಗೊಳ್ಳುವುದು ಹೆಚ್ಚು ಸೂಕ್ತಎಂದು ಹಿನ್ನುಡಿಯಲ್ಲಿ ನಾ. ಶ್ರೀನಿವಾಸ್ ಅಭಿಪ್ರಾಯಪಟ್ಟಿದ್ದಾರೆ.

ಮೋಹನಚಂದ್ರರ ನಾಟಕದಲ್ಲಿ ರಂಜನೆಗಿಂತಲೂ ಚಿಂತನೆಯ ಗುಣ ಹೆಚ್ಚು. ಹಾಗಾಗಿ ರಂಗಭೂಮಿಯ ಪ್ರಮುಖ ಉದ್ದೇಶ ಇಲ್ಲಿ ಗೌಣವಾಗಿದೆ.

ಶೀರ್ಷಿಕೆ : ಇವಾಳಜ್ಜಿಯೂ ಆದಮಜ್ಜನೂ ಲೇಖಕರು : ಮೋಹನ ಚಂದ್ರ ಯು ಪ್ರಕಾಶಕರು : ಸಂವೇದಿ ಪುಟಗಳು : 43 ಬೆಲೆ: ರೂ.30/-

ಕೃಪೆ : ಪ್ರಜಾವಾಣಿ