ತುಳು ನಾಡಿನ ಭೂತ ಕಟ್ಟುವ ಪಂಬ ಜನಾಂಗದ ಬದುಕಿನ ಚಿತ್ರಣ

ವೀರಪ್ಪ ಮೊಯಿಲಿಯವರ ಕಾದಂಬರಿ `ತೆಂಬೆರೆತುಳುನಾಡಿನ ಭೂತಕಟ್ಟುವ ಪಂಬ ಜನಾಂಗದ ಬದುಕನ್ನು ಚಿತ್ರಿಸುತ್ತದೆ. ಈ ಜನಾಂಗದ ನಂಬಿಕೆಗಳು, ಸಂಪ್ರದಾಯ, ನ್ಯಾಯ, ಆಚರಣೆಗಳು ಇವೆಲ್ಲವನ್ನು ಒಂದು ಬೀಸಿನಲ್ಲಿ ಹಿಡಿದಿಡುವ ಪ್ರಯತ್ನವಾಗಿ ಈ ಕಾದಂಬರಿ ಇದೆ.

ಕಾದಂಬರಿಯು ತನ್ನ ವಿವರಗಳಲ್ಲಿ ದಟ್ಟವಾದ ಮಾನವಶಾಸ್ತ್ರೀಯವಾಗಿ ತುಳುನಾಡಿನ ಬದುಕನ್ನು ಹಿಡಿದಿಡುತ್ತದೆ. ಇದರೊಂದಿಗೆ ಲೇಖಕರು ಯಕ್ಷಗಾನ ಪ್ರಸಂಗ, ಸಿರಿ-ಕಲ್ಲುರ್ಟಿ ಬಗೆಯ ಪಾಡ್ದನಗಳನ್ನು, ಭೂತಾರಾಧನೆಯನ್ನು ಕೊಡುತ್ತಾ, ಅವುಗಳನ್ನು ಕಾದಂಬರಿಯ ವಾತಾವರಣದಲ್ಲಿ ಬೆರೆಸುತ್ತಾರೆ. ಇದೆಲ್ಲದರಿಂದಾಗಿ ಕಾದಂಬರಿಗೆ ಬೇರೆಯದೇ ಆದ ಅನನ್ಯ ಹೊಳಹುಗಳು ದೊರಕಿದಂತಾಗುತ್ತದೆ. ಇದರೊಂದಿಗೆ ದಕ್ಷಿಣ ಕನ್ನಡದ ಶೂದ್ರರು, ದಲಿತರ ಬದುಕು ದೈವಗಳು, ದೇವರು ಹಾಗೂ ನಂಬಿಕೆಗಳ ಹಿನ್ನೆಲೆಯಲ್ಲಿ ಚಿತ್ರಣಗೊಳ್ಳುವ ಪರಿ ಅನನ್ಯ.

ಬೆನ್ನುಡಿಯಲ್ಲಿ ಡಾ. ಬಿ.ಎ.ವಿವೇಕ ರೈ ಹೇಳಿದಂತೆ, `ಜನಾಂಗ ಮತ್ತು ಪ್ರದೇಶ, ಸತ್ಯ ಮತ್ತು ನ್ಯಾಯ, ಪರಂಪರೆ ಮತ್ತು ಆಧುನಿಕತೆಗಳು, ಪರಿಕಲ್ಪನೆಗಳು, ಆದರ್ಶ ಮತ್ತು ವಾಸ್ತವಗಳ ಮುಖಾಮುಖಿಯಲ್ಲಿ ಇಲ್ಲಿ ಮರು ವ್ಯಾಖ್ಯಾನಕ್ಕೆ ಒಳಗಾಗಿವೆ, ಹೊಸ ಅರ್ಥಗಳನ್ನು ಪಡೆದಿವೆ‘.

ಈಚೆಗೆ ಇದು ಹಿಂದಿಗೂ ಅನುವಾದವಾಗಿದೆ.

ಶೀರ್ಷಿಕೆ : ತೆಂಬೆರೆ ಲೇಖಕರು : ಎಂ. ವೀರಪ್ಪ ಮೊಯಿಲಿ ಪ್ರಕಾಶಕರು : ಮಹೇಶ್ವರಿ ಪ್ರಕಾಶನ ಪುಟಗಳು : 176 ಬೆಲೆ: ರೂ. 115/-

ಕೃಪೆ : ಪ್ರಜಾವಾಣಿ

ಇವು ಕತೆಗಳಲ್ಲ, ವಾಸ್ತವ ಘಟನೆಗಳು

ಇವು ಕಥೆಗಳಲ್ಲ. ವಾಸ್ತವ ಘಟನೆಗಳು ಎಂದು ಲೇಖಕರು ನೆನಪಿಸಿದ್ದಾರೆ. ಕಳೆದ 26 ವರ್ಷಗಳ ಕಾಲ ಪೋಲೀಸ್ ಅಧಿಕಾರಿಯಾಗಿ ಕೈಗೊಂಡ ತನಿಖೆಗಳಲ್ಲಿ ಯಶಸ್ವಿಯಾದವುಗಳನ್ನು ಸ್ವಾರಸ್ಯಕರವಾಗಿ ಪಾಲಾಕ್ಷಯ್ಯ ಇಲ್ಲಿ ಹೇಳಿಕೊಂಡು ಹೋಗಿದ್ದಾರೆ. ಹಾಗಾಗಿ ಇವು ಕತೆಯ ಸ್ವರೂಪವನ್ನೂ ಪಡೆದಿವೆ.

ಪೋಲೀಸರಿಗೆ ಗೊತ್ತಾಗದಿದ್ದ ಕೊಲೆ, ಪತ್ತೆ ಮಾಡಲು ಸಾಧ್ಯವೇ ಇಲ್ಲವೆಂದು ಫೈಲು ಮುಚ್ಚಿ ಹಾಕಿದ್ದ ಕೊಲೆ, ಸತ್ತ ವ್ಯಕ್ತಿ ಯಾರೆಂದು ಗೊತ್ತೇ ಆಗದೆ ದಿಕ್ಕು ತಪ್ಪಿಸಿದ ಪ್ರಕರಣ – ಇನ್ನೂ ಇಂತಹದೇ ಅತಿ ಕ್ಲಿಷ್ಟಕರವಾದ 9 ಕೊಲೆ ಪ್ರಕರಣಗಳನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಜೈಲಿಗೆ ಕಳುಹಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ತಮ್ಮ ವೃತ್ತಿಯಲ್ಲಿ ದಕ್ಕಿದ ಅನುಭವಗಳನ್ನು ಹೇಳಬಲ್ಲ ಬರಹಗಾರ ಅವರೊಳಗಿದ್ದಾನೆ.

ಇಲ್ಲಿನ ಬಹುತೇಕ ಎಲ್ಲಾ ಕತೆಗಳೂ ಉದಯ ಟಿವಿ ಕ್ರೈಂ ಸ್ತೋರಿ ಧಾರಾವಾಹಿಯಲ್ಲಿ ಪ್ರಸಾರವಾಗಿ ಜನಪ್ರಿಯತೆ ಗಳಿಸಿವೆ. ಹೀಗೆ ಬೇರೆ ವೃತ್ತಿಯಲ್ಲಿ ನೈಪುಣ್ಯತೆ ಹೊಂದಿದವರು ತಮ್ಮ ಅನುಭವಗಳನ್ನು ಪರಿಣಾಮಕಾರಿಯಾಗಿ ಹೇಳಿಕೊಂಡಲ್ಲಿ ಕನ್ನಡ ಸಾಹಿತ್ಯದ ವೈವಿಧ್ಯತೆಯನ್ನು ಹೆಚ್ಚಿಸುತ್ತದೆ. ಬಯಲಾಟದ ಕಲಾವಿದರೂ ಆಗಿರುವ ಪಾಲಾಕ್ಷಯ್ಯ ಅವರ ಸಾಂಸ್ಕೃತಿಕ ಸೂಕ್ಷ್ಮ ಸಂವೇದನೆ ಅವರ ವೃತ್ತಿ ಕೌಶಲ್ಯವನ್ನೂ ಹೆಚ್ಚಿಸಿರುವುದು ಕುತೂಹಲಕಾರಿ ಬೆಳವಣಿಗೆ.

ಶೀರ್ಷಿಕೆ: ಶಬ್ದ ದೊಳಗಣ ನಿಶ್ಯಬ್ದ ಲೇಖಕರು: ಡಿ. ಪಾಲಾಕ್ಷಯ್ಯ ಪ್ರಕಾಶಕರು : ನೀಲಾ ಪ್ರಕಾಶನ ಪುಟಗಳು : 179 ಬೆಲೆ:ರೂ.100/-

ಕೃಪೆ : ಸುಧಾ

ಭಾಷಾ ಶಾಸ್ತ್ರದ ಹಿನ್ನೆಲೆಯಲ್ಲಿ ಸಾಹಿತ್ಯ ಕೃತಿಗಳು

ಈ ಕೃತಿಯಲ್ಲಿನ ಲೇಖನಗಳು ಭಾಷಾಶಾಸ್ತ್ರಕ್ಕೆ ನೇರವಾಗಿಯೋ ಪರೋಕ್ಷವಾಗಿಯೋ ಸಂಬಂಧಿಸಿವೆ. ಸಾಹಿತ್ಯಕೃತಿಗಳನ್ನು ಭಾಷಾಶಾಸ್ತ್ರದ ಹಿನ್ನೆಲೆಯಲ್ಲಿ ಲೇಖಕರು ವಿಶ್ಲೇಷಿಸಿದ್ದಾರೆ.

`ನವೋದಯ ಕಾವ್ಯದ ಭಾಷೆ ಮತ್ತು ಆಲೋಚನೆ‘ `ರೂಪಕಗಳ ಬಳಕೆಹಾಗೂ `ಜಿ.ಎಸ್.ಎಸ್. ಕಾವ್ಯ ಭಾಷೆ‘-ಎಂಬ ಲೇಖನಗಳಲ್ಲಿ ಮುಖ್ಯವಾಗಿ ಶಬ್ದಗಳ ಬಳಕೆಯನ್ನು ಆಧರಿಸಿದ ವಿಶ್ಲೇಷಣೆಯಿದೆ. `ಹರಿವ ನೀರಿದು: ಒಂದು ಭಾಷಿಕ ವಿಶ್ಲೇಷಣೆಎಂಬುದು ವಾಕ್ಯರಚನೆಯನ್ನಾಧರಿಸಿದೆ. `ಪಾಂಡುವಿನ ಮರಣ ಪ್ರಸಂಗಹಾಗೂ `ಮಾಸ್ತಿಯವರ ಕತೆಗಳ ಭಾಷೆಗಳಲ್ಲಿ ವಾಕ್ಯಗಳ ಒಳರಚನೆ ಹಾಗೂ ಭಾಷೇತರ ಮಾಹಿತಿಗಳ ಹಿನ್ನೆಲೆಯಲ್ಲಿ ವಸ್ತುವನ್ನು ನೋಡುವ ಪ್ರಯತ್ನವಿದೆ. `ಶಂ. ಬಾ. ಅವರ ದೃಷ್ಟಿಯಲ್ಲಿ ಭಾಷೆ ಮತ್ತು ಸಂಸ್ಕೃತಿ‘ `ಕನ್ನಡ ನುಡಿಯ ಜೀವಾಳ‘ – ಲೇಖನಗಳಲ್ಲಿ `ಭಾಷೆಯ ಹಿನ್ನೆಲೆಯಲ್ಲಿ ಅವುಗಳ ರಚನೆಯನ್ನು ಗಮನಿಸಲಾಗಿದೆ.

`ಭಾಷೆ ಮತ್ತು ಸ್ವಾತಂತ್ರ್ಯ‘ `ಭಾಷೆಯ ಮನೋವೈಜ್ಞಾನಿಕ ನೆಲೆ‘ `ಅಶಾಬ್ದಿಕ ಆಲೋಚನೆಗಳು‘ – ಈ ಮೂರು ಲೇಖನಗಳು ಭಾಷಾಂತರವಾಗಿದ್ದು ಆಧುನಿಕ ಭಾಷಾ ಚಿಂತನೆಗಳ ಸ್ವರೂಪವನ್ನು ಪರಿಚಯಿಸುತ್ತವೆ. ಬರವಣಿಗೆ ಓದುಗರನ್ನು ಮುಖಾಮುಖಿಯಾಗುವ ಶಕ್ತಿಯನ್ನು ಹೊಂದಿದೆ.

ಶೀರ್ಷಿಕೆ: ಅರ್ಥರೇಖೆ ಲೇಖಕರು: ಕೃಷ್ಣ ಪರಮೇಶ್ವರ ಭಟ್ಟ ಪ್ರಕಾಶಕರು : ಕನ್ನಡ ಸಂಘ, ಕ್ರೈಸ್ಟ್ ಕಾಲೇಜು ಪುಟಗಳು : 12+180 ಬೆಲೆ:ರೂ.140/-

ಕೃಪೆ : ಹೊಸತು

ಸ್ತ್ರೀವಾದ ಅಲ್ಲ ಸ್ತ್ರೀಪ್ರಜ್ಞೆ

ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಕುರಿತ ಲೇಖನಗಳ ಸಂಗ್ರಹ ಇದು. ಇವು ನಮ್ಮ ಸಮಾಜದಲ್ಲಿ ನಡೆಯುತ್ತಲೇ ಇರುವ ಘಟನೆಗಳನ್ನು ಆಧರಿಸಿ, ಸ್ತ್ರೀಗೆ ಆಗುತ್ತಿರುವ ಅನ್ಯಾಯ, ಅನಿಷ್ಟಗಳನ್ನು ವಿಮರ್ಶಿಸುತ್ತದೆ, ಮತ್ತು ಆ ಮೂಲಕ ತಿಳಿವನ್ನುಂಟುಮಾಡುತ್ತವೆ.

ಸ್ತ್ರೀಯರ ಕುರಿತು ಈ ಸಮಾಜ ಕಟ್ಟಿಕೊಂಡ ಅರಿವಿನ ಎಲ್ಲ ಆಯಾಮಗಳನ್ನು, ಅವುಗಳ ಹಿಂದಿನ ನಿಜಸ್ಥಿತಿಯನ್ನು ಪ್ರಸ್ತುತ ಸಂಕಲನದ ಲೇಖನಗಳು ವಿಶ್ಲೇಷಿಸುತ್ತವೆ. `ಈ ವಿಶ್ಲೇಷಣೆಯನ್ನು `ಸ್ತ್ರೀವಾದಎನ್ನುವುದಕ್ಕಿಂತ `ಸ್ತ್ರೀಪ್ರಜ್ಞೆಎಂದು ಕರೆಯುವುದೇ ಸೂಕ್ತ‘ – ಎಂದು ಮುನ್ನುಡಿಯಲ್ಲಿ ಜಿ. ರಾಜಶೇಖರ್ ಹೇಳಿರುವುದು ವಸ್ತುನಿಷ್ಟ ಸಂಗತಿಯೇ ಆಗಿದೆ. ಅಲ್ಲದೆ, ವಾದಗಳನ್ನು ಮೀರಿದ ಮಾನವೀಯ ಅಂತಃಕರಣದ ತುಡಿತ, ನ್ಯಾಯದ ಪರ ನಿಲುವು – ಇವೇ ಲೇಖಕಿಯ ಪ್ರತಿಯೊಂದು ಮಾತಿನಲ್ಲೂ ಎದ್ದುಕಾಣುತ್ತದೆ.

ಶೀರ್ಷಿಕೆ: ಉತ್ತರೆಯ ಅಳಲು ಲೇಖಕರು: ಕೆ. ಶಾರದಾ ಭಟ್ ಪ್ರಕಾಶಕರು : ಸುಮಂತ ಪ್ರಕಾಶನ ಪುಟಗಳು : 152 ಬೆಲೆ:ರೂ.75/-

ಕೃಪೆ : ಹೊಸತು

ರಂಗ ಸುರೇಶ

ಕೆಲವು ವರುಷಗಳ ಹಿಂದಿನ ಚಿತ್ರಕ್ಕೂ ಇವತ್ತು ಕಾಣಿಸುತ್ತಿರುವ ಚಿತ್ರಣಕ್ಕೂ ಇರುವ ವ್ಯತ್ಯಾಸ ಗಮನಿಸಿ. ಆರೆಂಟು ವರುಷಗಳ ಹಿಂದೆ ಹೊಸ ನಾಟಕಗಳ ಸೃಷ್ಟಿ ಬಹುತೇಕ ನಿಂತೇ ಹೋಗಿತ್ತು. ಹವ್ಯಾಸಿ ರಂಗ ತಂಡಗಳು ಕತೆಯನ್ನೋ ಕಾದಂಬರಿಯನ್ನೋ ನಾಟಕರೂಪಕ್ಕೆ ಅಳವಡಿಸಿಕೊಳ್ಳಬೇಕಾದ ಅನಿವಾರ್ಯ ಇತ್ತು.

ಆದರೆ ಕಳೆದ ಒಂದೆರಡು ವರುಷಗಳಿಂದ ಸಾಕಷ್ಟು ಹೊಸ ನಾಟಕಗಳನ್ನು ಬರೆಯುತ್ತಿದ್ದಾರೆ. ಸೂರಿ, ವಿವೇಕ ಶಾನಭಾಗ, ಅಕ್ಷರ, ಮಂಜುನಾಥ ಮುಂತಾದವರ ಜೊತೆ ಹೊಸಬರೂ ಸೇರಿಕೊಂಡು ಈ ವರುಷ ನಾಟಕದ ಹುಲುಸು ಫಸಲು.

ರಂಗಭೂಮಿಯ ಜೊತೆಗೆ ಹಲವಾರು ವರುಷಗಳ ಆಪ್ತ ಒಡನಾಟ ಇಟ್ಟುಕೊಂಡಿರುವ ಬಿ. ಸುರೇಶರ ಹೊಸ ನಾಟಕ ಪ್ರಕಟವಾಗಿದೆ. ಒಂದು ಆಧುನಿಕ ಪುರಾಣ ಎಂಬ ಉಪಶೀರ್ಷಿಕೆಯೊಂದಿಗೆ ಹೊರಬಂದಿರುವ ಈ ನಾಟಕದ ಹೆಸರು `ಗಿರಿಜಾ ಕಲ್ಯಾಣ‘. ಅತ್ಯಂತ ಸಮಕಾಲೀನ ವಸ್ತುವನ್ನು ಜನಪದ ಕೌದಿಯಲ್ಲಿ ಅಲಂಕರಿಸಿ ಮುಂದಿಟ್ಟಿದ್ದಾರೆ ಸುರೇಶ್.

ಬಿ ಸುರೇಶ್ ಅಕ್ಷರ ವ್ಯವಸಾಯದ ರಭಸ ಎಂಥವರನ್ನೂ ಬೆರಗಾಗಿಸೀತು ಎರಡು ಮೆಗಾ ಸೀರಿಯಲ್, ಜೊತೆಗೆ ಹೋರಾಟ, ಪುಸ್ತಕ ಪ್ರೀತಿ, ಸಂಘಟನೆ, ಸಿನಿಮಾ – ಹೀಗೆ ಅವರು ನಿಜವಾದ ಅರ್ಥದಲ್ಲಿ ಬಹುಮುಖಿ. ಹಾಗಂತ ಈ ಯಾವ ಕ್ಷೇತ್ರಕ್ಕೂ ಅವರಿಂದ ಅನ್ಯಾಯವಾಗಿಲ್ಲ. ಇವೆಲ್ಲ ಕೆಲಸಗಳ ನಡುವೆ ಆಸಕ್ತಿ ಹುಟ್ಟಿಸುವ ಸಮಾರಂಭಗಳಿಗೆ ಅವರು ಖಾಯಂ ಪ್ರೇಕ್ಷಕ.

ರೈತನ ಆತ್ಮಹತ್ಯೆಯನ್ನು ರೈತರ ಮಡದಿಯ ಕಣ್ಣಿಂದ ನೋಡುವ ವಿಶಿಷ್ಟ ನಾಟಕ `ಗಿರಿಜಾ ಕಲ್ಯಾಣ‘. ಬಿ. ಜಯಶ್ರೀ ತಂಡ ಇದನ್ನು ಈಗಾಗಲೇ ರಂಗಕ್ಕೆ ತಂದಿದೆ. ಮರಾಠಿ ಮತ್ತು ಹಿಂದಿಗೆ ಅನುವಾದವಾಗಿದೆ. ಗಿರಿಜಾ ಕಿ ಸಪ್ನೆ ಹೆಸರಲ್ಲಿ ಎಂ ಎಸ್ ಸತ್ಯು ಇಪ್ಟಾ ಮುಂಬೈಗಾಗಿ ನಿರ್ದೇಶಿಸಿದ್ದಾರೆ ಕೂಡಾ.

ಇದು ಜೀವದ ಜಾತ್ರೆ

ಇದು ಮುಗಿಯದ ಯಾತ್ರೆ

ಕನಸಿನಂಗಳ ಸೇರಿ ತೇಲೋಣ

ಬೆಳದಿಂಗಳ ಬೋನ ತಿನ್ನೋಣ

ಒಸ ಕನಸಿನ ಕತೆಯ ಹೇಳೋಣ

ಕಣ್ಣಗಲದ ಆಗಸವ ಬರೆಯೋಣ

ಎಂದು ಬರೆಯುತ್ತಾ ಸುರೇಶ್ ಕವಿಯೂ ಆಗುತ್ತಾರೆ.

ಬೆನ್ನುಡಿಯಲ್ಲಿ ಸಮಕಾಲೀನ ಇತಿಹಾಸವನ್ನು ಜಾನಪದೀಯ ಸ್ವರೂಪದೊಂದಿಗೆ ಕನ್ನಡ ರಂಗಭೂಮಿಗೆ ತಂದ ಉದಾಹರಣೆಗಳ ವಿರಳ ಎಂಬ ಮಾತಿದೆ. ಸಮಕಾಲೀನವಾದದ್ದು ಇತಿಹಾಸ ಹೇಗಾಗುತ್ತದೆ.

ಶೀರ್ಷಿಕೆ: ಗಿರಿಜಾ ಕಲ್ಯಾಣ ಲೇಖಕರು: ಬಿ. ಸುರೇಶ ಪ್ರಕಾಶಕರು : ಅಭಿನವ ಪುಟಗಳು : 100 ಬೆಲೆ:ರೂ.50/-

ಕೃಪೆ : ಕನ್ನಡ ಪ್ರಭಾ

ರಂಗಕ್ರಿಯೆಗಳ ವರ್ತಮಾನಗಳು

ರಂಗಾಸಕ್ತ ಸಿರಿಗೆರೆ ಯರಿಸ್ವಾಮಿಯವರ ರಂಗಭೂಮಿಯನ್ನೇ ಕೇಂದ್ರವಾಗಿಟ್ಟುಕೊಂಡು ಬರೆದ ಬರಹಗಳು ಇಲ್ಲಿವೆ. ಮುಂಬೈ ನಾಟಕ ಪ್ರಯೋಗಗಳಿಂದ ಹಿಡಿದು ಕರ್ನಾಟಕ ಸ್ಥಳೀಯ ಎನ್ನಬಹುದಾದ ರಂಗ ಚಟುವಟಿಕೆಗಳ ಬಗ್ಗೆ ಅವರಲ್ಲಿ ಬರೆದಿದ್ದಾರೆ.

ಹೆಚ್ಚಿನ ಲೇಖನಗಳು ರಂಗಕ್ರಿಯೆಗಳ ವರ್ತಮಾನವನ್ನು ಹಿಡಿದಿಟ್ಟರೆ, ಉಳಿದವು ಉತ್ತರ ಹಾಗೂ ಹೈದ್ರಾಬಾದ್ ಕರ್ನಾಟಕದ ರಂಗ ಚಟುವಟಿಕೆಗಳನ್ನು ಹಿಡಿದಿಟ್ಟಿವೆ. ಈ ನಡುವೆ ನಾಟಕಕಾರರಾದ ಸಂಸ ಹಾಗೂ ಗಿರೀಶ ಕಾರ್ನಾಡರ ನಾಟಕಗಳ ಬಗ್ಗೆ ಲೇಖಕರು ಬರೆದಿದ್ದಾರೆ.

ಯರಿಸ್ವಾಮಿ ಸರಳವಾಗಿ, ನೇರವಾಗಿ ಮನಮುಟ್ಟುವಂತೆ ಇಲ್ಲಿ ಬರದಿದ್ದಾರೆ. ಕರ್ನಾಟಕದ ಎಲ್ಲ ರಂಗ ಚಟುವಟಿಕೆಗಳ ಬಗ್ಗೆ ಬರೆಯುವಂತಾದರೆ ಈ ಪುಸ್ತಕಕ್ಕೆ ಇನ್ನಷ್ಟು ವಿಸ್ತಾರ ಸಿಗುತ್ತಿತ್ತು. ಇದರೊಂದಿಗೆ ಇಲ್ಲಿನ ಲೇಖನಗಳ ಗಾತ್ರ ಕೂಡ ಚಿಕ್ಕದು. ಇದರಿಂದಾಗಿ ಒಂದು ವಸ್ತುವಿನ ಪೂರ್ಣ ಪ್ರಮಾಣದ ವಿಶ್ಲೇಷಣೆ ಇಲ್ಲಿ ಸಾಧ್ಯವಾಗಿಲ್ಲ. ಇದು ಈ ಪುಸ್ತಕದ ಮಿತಿಯೂ ಆಗಿದೆ.

ಶೀರ್ಷಿಕೆ: ರಂಗ ಸಂಗಮ ಲೇಖಕರು: ಸಿರಿಗೆರೆ ಯರಿಸ್ವಾಮಿ ಪ್ರಕಾಶಕರು : ಅನ್ನಪೂರ್ಣ ಪ್ರಕಾಶನ ಪುಟಗಳು : 64 ಬೆಲೆ:ರೂ.40/-

ಕೃಪೆ : ಪ್ರಜಾವಾಣಿ

ಜುಗಲಬಂದಿ ಚಿಂತಕ

ಅತ್ಯುತ್ತಮ ಕತೆ ಕಾದಂಬರಿ ಬರೆದು, ವಿಮರ್ಶ ಮಾರ್ಗವನ್ನು ರೂಪಿಸಿ, ಸಂಸ್ಕೃತಿ ಚಿಂತನೆಗೆ ಹೊರಳಿ ಅಲ್ಲಿ ಗಟ್ಟಿಯಾಗಿ ನಿಲ್ಲಲು ಅನಂತಮೂರ್ತಿಯವರು ಹವಣಿಸಿದ್ದು ಚಲಾವಣೆಯ ಒತ್ತಡವೇ?

ಸಮಾಜವಾದಿಯಾಗಿ ಸಾಹಿತ್ಯಲೋಕ ಪ್ರವೇಶಿಸಿ, ಸಂಸ್ಕೃತಿ ಚಿಂತಕರಾಗಿ ಬೆಳೆದು ಈಗ `ಸಮಾಜವಾದಿಎಂದು ಕೇವಲ ಹೇಳಿಕೊಳ್ಳಬೇಕಾದ ತಮ್ಮ ಬೆಳವಣಿಗೆಯನ್ನು ಅನಂತಮೂರ್ತಿ ನೇರವಾಗಿ ಎದುರಿಸಿದ್ದಾರೆಯೇ

ಇಂಥ ಪ್ರಶ್ನೆಗಳನ್ನು ಕೇಳುತ್ತಿರುವವರು ಜಿ.ಕೆ.ರವೀಂದ್ರಕುಮಾರ್. ಅನಂತಮೂರ್ತಿಯವರು ತಮ್ಮ ಏಕಾಂತವನ್ನು ಕಳೆದುಕೊಂಡಿದ್ದಾರೆ. ಗಾಂಧೀಜಿಯನ್ನು ಹೆಜ್ಜೆಹೆಜ್ಜೆಗೂ ಜ್ಞಾಪಿಸಿಕೊಳ್ಳುವ ಅವರು ಗಾಂಧೀಜಿಯ ಮೌನವನ್ನು ಬಲವಂತವಾಗಿ ಆದರೂ ಒಂದು ವ್ರತದಂತೆ ಕಾಣಬೇಕಾಗಿದೆ ಎಂದೂ ರವೀಂದ್ರಕುಮಾರ್ ಅಭಿಪ್ರಾಯ.

ಚೇತನ ಸಾಹಿತ್ಯ ಮಾಲೆ ಆಧುನಿಕ ಬರಹಗಾರರು ಮಾಲಿಕೆಯಲ್ಲಿ ಜಿ.ಎಸ್.ಭಟ್ಟ ಸಂಪಾದಕತ್ವದಲ್ಲಿ ಹಿರಿಯ ಚೇತನಗಳನ್ನು ಪರಿಚಯ ಮಾಡಿಕೊಡುವ ಕಿರುಹೊತ್ತಿಗೆಗಳನ್ನು ಪ್ರಕಟಿಸುತ್ತಿದೆ. ಈ ಮಾಲಿಕೆಯ ಇತ್ತೀಚಿನ ಪ್ರಕಟಣೆ `ಜುಗಲಬಂದಿ ಚಿಂತಕ – ಯು ಆರ್ ಅನಂತಮೂರ್ತಿ‘.

ಅನಂತಮೂರ್ತಿ `ಷೇಕ್ ಆಗಿರುವರೆ ಎಂಬ ಪ್ರಶ್ನೆಯಿಂದ ಹಿಡಿದು, ತಮ್ಮ ಕುರಿತ ಟೀಕೆ ಟಿಪ್ಪಣಿಗಳಲ್ಲಿ ಅವರು ಕಳೆದುದೆಷ್ಟು ಬೆಳೆದುದೆಷ್ಟು ಎಂಬ ಪ್ರಶ್ನೆಯ ತನಕ ರವೀಂದ್ರಕುಮಾರ್ ಅವರ ಕೃತಿ ವಸ್ತುನಿಷ್ಟ. ಬಹುಶಃ ಒಬ್ಬ ಲೇಖಕನನ್ನು ಇಷ್ಟು ಸಮಗ್ರವಾಗಿ ಮೆಚ್ಚಿಕೊಳ್ಳುತ್ತಲೇ `ಕೋರ್ಟ ಮಾರ್ಷಲ್ಮಾಡುವ ಅಪರೂಪದ ಕೃತಿ ಇದು. ಇಲ್ಲಿ ಅವರನ್ನು ವಿರೋಧಿಸುವವರಿಗೂ ಮೆಚ್ಚುವವರಿಗೂ ತಮ್ಮ ತಮ್ಮ ವಾದಗಳನ್ನು ಸಮರ್ಥಿಸಿಕೊಳ್ಳುವುದಕ್ಕೆ ಸಾಕಷ್ಟು ಸಾಮಾಗ್ರಿ ಲಭ್ಯ.

ಪುಸ್ತಕದ ಗುಣಮಟ್ಟ, ಬಳಸಿದ ಕಾಗದ ಮತ್ತು ವಿನ್ಯಾಸ ಇನ್ನಷ್ಟು ಸೊಗಸಾಗಿರಬೇಕಿತ್ತು.

ಶೀರ್ಷಿಕೆ: ಜುಗಲಬಂದಿ ಚಿಂತಕ ಯು. ಆರ್. ಅನಂತಮೂರ್ತಿ ಲೇಖಕರು: ಜಿ. ಕೆ. ರವೀಂದ್ರ ಕುಮಾರ್ ಪ್ರಕಾಶಕರು : ಚೇತನ ಪ್ರಿಂಟರ್ಸ್ ಪುಟಗಳು : 128 ಬೆಲೆ:ರೂ.60/-

ಕೃಪೆ : ಕನ್ನಡ ಪ್ರಭಾ

ಬೈಯುವುದು ಹೇಗೆ?

ಲೆಕ್ಕದ ಭಯ ಹೋಗಲಾಡಿಸುವ ಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವ ಆರ್. ಶ್ರೀ ನಾಗೇಶ್ `ಮಕ್ಕಳನ್ನು ಬೈಯ್ಯುವುದು ಹೇಗೆ?’ ಎಂಬ ಅಪರೂಪದ ಪುಸ್ತಕವನ್ನು ಹೊರತಂದಿದ್ದಾರೆ.

ಮಕ್ಕಳ ಮೇಲೆ ಸಿಟ್ಟು ಬರುತ್ತದೆ. ಆ ಸಿಟ್ಟಿಗೆ ನಾವೇ ಕಾರಣಕರ್ತರೂ ಆಗಿರುತ್ತೇವೆ ಅನ್ನುವುದನ್ನು ಮರೆತು ಮಕ್ಕಳನ್ನು ಬೈಯುತ್ತೇವೆ. ಆದರೆ ಆ ಬೈಗಳು ಅವರನ್ನು ತಿದ್ದುವಂತಿರಬೇಕು ಎಂಬ ಮಾತನ್ನು ಎಲ್ಲರೂ ಹೇಳುತ್ತಾರೆ. ಹಾಗೆ, ಸಕಾರಾತ್ಮಕವಾಗಿ ಬೈಯುವುದು ಹೇಗೆ ಎಂಬ ಕಲೆಯನ್ನು ಇಲ್ಲಿ ಶ್ರೀ ನಾಗೇಶ್ ಹೇಳಲೆತ್ನಿಸಿದ್ದಾರೆ. ಒಂದು ಉದಾಹರಣೆ ನೋಡಿ; `ಅಪ್ಪ ಬರಲಿ ತಾಳುಎಂದು ಅಮ್ಮಂದಿರು ಮಕ್ಕಳನ್ನು ಬೈಯುವುದಿದೆ. ಆಗ ಮಗುವಿಗೆ ಅಮ್ಮನ ಕೈಲಿ ಏನೂ ಮಾಡೋಕ್ಕಾಗೋಲ್ಲ. ಆದ್ದರಿಂದ ಅಮ್ಮನಿಗೆ ಹೆದರಬೇಕಾಗಿಲ್ಲ. ಅಪ್ಪನಿಗೆ ಗೊತ್ತಾಗದ ಹಾಗೆ ನೋಡಿಕೊಂಡರೆ ಸಾಕು ಎಂಬ ಭಾವನೆ ಬರುತ್ತದೆ. ಅಂಥ ಹೊತ್ತಲ್ಲಿ ಅಪ್ಪ ಬಂದಾಗ `ಅಮ್ಮ ಸುಮ್ನೆ ನನ್ನನ್ನು ಬೈತಿರ್ತಾಳೆಅಂತ ಚಾಡಿ ಹೇಳುವ ಅಪಾಯವೂ ಇರುತ್ತದೆ.

ಇಂಥ ಅಪರೂಪದ ಉಪಯುಕ್ತ ಮಾಹಿತಿಗಳು ಈ ಕೃತಿಯಲ್ಲಿ ಉದ್ದಕ್ಕೂ ಸಿಗುತ್ತದೆ. ಈ ಮಾಲಿಕೆಯಲ್ಲಿ ಗಂಡನನ್ನು ಬೈಯುವುದು ಹೇಗೆ, ಹೆಂಡತಿಯನ್ನು ಬೈಯುವುದು ಹೇಗೆ, ಕೆಟ್ಟ ಪುಸ್ತಕವನ್ನು ಬೈಯುವುದು ಹೇಗೆ ಎಂಬಿತ್ಯಾದಿ ಕುತೂಹಲಕರ ಆಯಾಮಗಳನ್ನೂ ಲೇಖಕರು ಸ್ಪರ್ಶಿಸಬಹುದು ಎನ್ನುವುದು ಕೇವಲ ತಮಾಷೆ.

ಶೀರ್ಷಿಕೆ: ಮಕ್ಕಳನ್ನು ಬೈಯುವುದು ಹೇಗೆ? ಲೇಖಕರು: ಆರ್. ಶ್ರೀ ನಾಗೇಶ್ ಪ್ರಕಾಶಕರು : ವಟೀ ಕುಟೀರ ಪುಟಗಳು : 80 ಬೆಲೆ:ರೂ.45/-

ಕೃಪೆ : ಕನ್ನಡ ಪ್ರಭಾ

21-09-2008 ಟಾಪ್ -10 (ಅಂಕಿತ ಪುಸ್ತಕ, ಸಪ್ನ ಬುಕ್ ಹೌಸ್)

ಅಂಕಿತ ಪುಸ್ತಕ (ದೂ.26617100, 26617755)

1. ಕುವೆಂಪು ದರ್ಶನ (ಕುವೆಂಪು ದೃಷ್ಟಿಕೋನ ಕುರಿತು) ಲೆ:ದೇಜಗೌ, ಪ್ರ:ಕನ್ನಡ ವಿಶ್ವವಿದ್ಯಾಲಯ, ಹಂಪಿ, ಬೆ:ರೂ.400/-

2. ಫಸ್ಟ್ ಹಾಫ್ (ಐವತ್ತರ ರವಿ ಬೆಳೆಗೆರೆಗೆ ಅಕ್ಕರೆಯ ಕೊಡುಗೆ) ಸಂ:ಶರತ್ ಕಲ್ಕೊಡ್, ಪ್ರ:ಭಾವನಾ ಪ್ರಕಾಶನ, ಬೆಂಗಳೂರು ಬೆ:ರೂ.500/-

3. ಮೋಕ್ಷಗುಂಡಂ ವಿಶ್ವೇಶ್ವರಯ್ಯ (ಒಬ್ಬ ಕರ್ಮಯೋಗಿಯ ಕಥೆ) ಲೆ:ವಿ.ಎಸ್.ನಾರಾಯಣ ರಾವ್, ಪ್ರ:ಅಂಕಿತ ಪುಸ್ತಕ, ಬೆಂಗಳೂರು ಬೆ:ರೂ.225/-

4. ಭಾರತದ ನದಿಗಳು (ಒಂದು ವಿಸ್ತೃತ ಪರಿಚಯ) ಲೆ:ಟಿ. ಗಿರಿಜ, ಪ್ರ:ನಿಹಾರಿಕಾ ಪ್ರಕಾಶನ, ದಾವಣಗೆರೆ ಬೆ:ರೂ.350/-

5. ಅನಾದಿ (ಮೊಗಳ್ಳಿಯವರ ಕಾದಂಬರಿ) ಲೆ:ಮೊಗಳ್ಳಿ ಗಣೇಶ್, ಪ್ರ:ಪಲ್ಲವ ಪ್ರಕಾಶನ, ಚನ್ನಪಟ್ಟಣ ಬೆ:ರೂ.60/-

6. ಪತಂಜಲಿ ಯೋಗಸೂತ್ರ (ಆಚಾರ್ಯ ರಜನೀಶರ ಚಿಂತನೆಗಳು) ಲೆ:ಓಶೋ, ಪ್ರ:ಅನುಭವ ಪ್ರಕಾಶನ, ಬೆಂಗಳೂರು ಬೆ:ರೂ.130/-

7. ಮಬ್ಬಿನ ಹಾಗೆ ಕಣಿವೆಯಾಸಿ (ಶಿವಪ್ರಕಾಶರ ಹೊಸ ಕವನ ಸಂಕಲನ) ಲೆ:ಎಚ್.ಎಸ್.ಶಿವಪ್ರಕಾಶ್, ಪ್ರ:ಅಭಿನವ, ಬೆಂಗಳೂರು ಬೆ:ರೂ.50/-

8. ಸಾಹಿತಿಗಳು… ರಸನಿಮಿಷಗಳು (ಪ್ರಸಿದ್ಧ ಸಾಹಿತಿಗಳ ಬದುಕಿನ ರಸನಿಮಿಷಗಳ ಚಿತ್ರಣ) ಲೆ:ವೈ.ಎನ್.ಗುಂಡೂರಾವ್, ಪ್ರ:ಅಳಿಲು ಸೇವಾ ಸಂಸ್ಥೆ, ಬೆಂಗಳೂರು ಬೆ:ರೂ.95/-

9. ಧರ್ಮ ಪರೀಕ್ಷೆ (ರಾಜಕಾರಣ-ಧರ್ಮ-ಸಂಸ್ಕೃತಿ ಚಿಂತನೆಗಳು) ಲೆ:ಡಾ.ರಹಮತ್ ತರೀಕರೆ, ಪ್ರ:ನವಕರ್ನಾಟಕ ಪ್ರಕಾಶನ, ಬೆಂಗಳೂರು ಬೆ:ರೂ.140/-

10. ತಲಪರಿಗೆ (ಜೀವ ಪೊರೆಯುವ ಜಲನಿಧಿ) ಸಂೆ:ಮಲ್ಲಿಕಾರ್ಜುನ ಹೊಸಪಾಳ್ಯ, ಪ್ರ:ಭೂಷಣ್ ಮಿಡಿಗೇಶಿ ಧಾನ್ಯ ಸಂಸ್ಥೆ, ತುಮಕೂರು ಬೆ:ರೂ.100/-

ಸಪ್ನ ಬುಕ್ ಹೌಸ್ (ದೂ.40114455, ಫ್ಯಾಕ್ಸ್:22269648)

1. ಫಸ್ಟ್ ಹಾಫ್ ಸಂ:ಶರತ್ ಕಲ್ಕೊಡ್, ಪ್ರ:ಭಾವನಾ ಪ್ರಕಾಶನ, ಬೆಂಗಳೂರು ಬೆ:ರೂ.500/-

2. ಹಾಡು ಹಾದಿಯ ಕತೆಗಳು ಲೇ:ಜೋಗಿ, ಪ್ರ:ಅಂಕಿತ ಪುಸ್ತಕ, ಬೆಂಗಳೂರು, ಬೆ:ರೂ.95/-

3. ವ್ಯಕ್ತಿ ವಿಶಿಷ್ಟ ಸಿದ್ಧಾಂತ ಮತ್ತು ಯಮಳ ಪ್ರಶ್ನೆ ಲೇ:ಪೂರ್ಣಚಂದ್ರ ತೇಜಸ್ವಿ, ಪ್ರ:ಪುಸ್ತಕ ಪ್ರಕಾಶನ, ಮೈಸೂರು, ಬೆ:ರೂ.51/-

4. ಮನೆಯಲ್ಲಿ ಪ್ರಕೃತಿ ಚಿಕಿತ್ಸೆ ಲೇ:ಗಿರಿಜಾ ಶಾಸ್ತ್ರಿ, ಪ್ರ:ಸಪ್ನ ಬುಕ್ ಹೌಸ್, ಬೆಂಗಳೂರು ಬೆ:ರೂ.70/-

5. ಬೃಹತ್ ಚಿಂತನೆಯ ತಂತ್ರ, ಲೇ:ಡಾ.ಡೇವಿಡ್ ಜೆ ಷ್ವಾರ್ಟ್ಸ್, ಪ್ರ:ವಾಸನ್ ಪಬ್ಲಿಕೇಷನ್ಸ್,ಬೆಂಗಳೂರು ಬೆ:ರೂ.195/-

6. ಒಂದು ಹುಲ್ಲಿನ ಕ್ರಾಂತಿ ಲೇ:ಸಂತೋಷ ಕೌಲಗಿ ಪ್ರ:ನವಕರ್ನಟಕ ಪ್ರಕಾಶನ, ಬೆಂಗಳೂರು ಬೆ:ರೂ.50/-

7. ಅಪಾರ್ಥ, ಅಕ್ರಮಗಳಿಗೆ ಒಳಗಾಗಿರುವ ಹಿಂದೂ ಧರ್ಮ ಲೆ:ಡಾ.ಚಿದಾನಂದಮೂರ್ತಿ; ಪ್ರ:ಭಾರತ ವಿಕಾಸ ಪರಿಷತ್, ಬೆಂಗಳೂರು ಬೆ:ರೂ.100/-

8. ಹೂ ಬಿಸಿಲಿಗೆ ನೆರಳು: ನೂರೆಂಟು ಮಾತು-4, ಲೇ:ವಿಶ್ವೇಶ್ವರ ಭಟ್ ಪ್ರ:ಅಂಕಿತ ಪುಸ್ತಕ, ಬೆಂಗಳೂರು, ಬೆ:ರೂ.130/-

9. ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ ಲೆ:ಷ.ಶೆಟ್ಟರ್ ಪ್ರ:ಅಭಿನವ, ವಿಜಯನಗರ, ಬೆಂಗಳೂರು ಬೆ:ರೂ.150/-

10. ಸ್ಚಾಮಿ ವಿವೇಕಾನಂದ ಲೇ:ಕುವೆಂಪು ಪ್ರ:ಶ್ರೀ ರಾಮಕೃಷ್ಣಾಶ್ರ, ಮೈಸೂರು ಬೆ:ರೂ.35/-

ಕೃಪೆ : ವಿಜಯ ಕರ್ನಾಟಕ, ಕನ್ನಡ ಪ್ರಭಾ

ಕಡಲಿಗೆ ಕಳಿಸಿದ ದೀಪ

ಹೆಂಗರುಳಿನ ಕವಿ ಟಿ. ಯಲ್ಲಪ್ಪ ಅವರ ಇಲ್ಲಿನ ಕವಿತೆಗಳು ಭಿನ್ನವಾದ ಲಯ, ಲವಲವಿಕೆಯಿಂದ ಗಮನ ಸೆಳೆಯುತ್ತವೆ. ಕವಿತೆಗೆ ಅವರು ಆಯ್ದುಕೊಳ್ಳುವ ವಿಷಯ `ಪದ್ಯ ಇಷ್ಟು ಲೈಟಾದರೆ ಹೇಗೆ ಸ್ವಾಮಿ?’ ಎಂದೇನೂ ಅನ್ನಿಸುವುದಿಲ್ಲ.

ಕೆಲವು ಕವಿತೆಗಳು ತೆಳುವಾದರೂ `ಇಲ್ಲಿ ಹೆಜ್ಜೆಗಳ ಗುರುತಿಲ್ಲ, ಗಜ್ಜೆಗಳ ಸಪ್ಪಳವೂ ಇಲ್ಲ, ನಾನೇ ಕುಣಿಯುವುದ ಕಲಿತುಕೊಂಡೆ. . .” ಎಂಬ ಸ್ವಂತಿಕೆಯನ್ನು ಕಂಡುಕೊಳ್ಳುವ ಇಲ್ಲಿನ ಕವಿತೆಗಳು ಕವಿಯ ಮುಂದಿನ ಹೆಜ್ಜೆಯ ಬಗ್ಗೆ ಭರವಸೆ ಹುಟ್ಟಿಸುತ್ತವೆ.

ಶೀರ್ಷಿಕೆ: ಕಡಲಿಗೆ ಕಳಿಸಿದ ದೀಪ ಲೇಖಕರು: ಟಿ. ಯಲ್ಲಪ್ಪ ಪ್ರಕಾಶಕರು : ಸಂಚಯ ಪ್ರಕಾಶನ ಪುಟಗಳು : 80 ಬೆಲೆ:ರೂ.50/-

ಕೃಪೆ : ಸುಧಾ