ಅಂಕಿತ ಪುಸ್ತಕ ಟಾಪ್ -10 (26-10-2008)

ಅಂಕಿತ ಪುಸ್ತಕ (ದೂ.26617100, 26617755)

1. ಸುಮ್ಮನಿರಬಾರದೇ…? (ಪ್ರಯಾಸಕರ ಬದುಕಿಗೆ ಗುಡ್ ಬೈ) ಲೇ: ನೆಲ್ಲಿಕೆರೆ ವಿಜಯಕುಮಾರ್, ಪ್ರ:ಸುಮ್ ಸುಮ್ನೆ ಪ್ರಕಾಶನ, ನೊಣವಿಕೆರೆ ಬೆ:ರೂ.85/-

2. ಶಾಸ್ತ್ರೀಯ ಭಾಷೆಯಾಗಿ ಕನ್ನಡ (ಹಿನ್ನೆಲೆ ಮುನ್ನೆಲೆ), ಲೇ:ಡಾ.ಎಂ.ಚಿದಾನಂದ ಮೂರ್ತಿ, ಪ್ರೊ.ಎಲ್.ಎಸ್.ಶೇಷಗಿರಿರಾವ್, ಗೊ.ರು.ಚನ್ನಬಸಪ್ಪ, ,ಪ್ರ:ಕನ್ನಡ ಗೆಳೆಯರ ಬಳಗ, ಬೆಂಗಳೂರು, ಬೆ:ರೂ.10/-

3. ಇಪ್ಪತ್ತೆಂಟು ಹಣತೆಗಳು (ನಿತ್ಯ ಜೀವನದಲ್ಲಿ ಬೆಳಕಾಗುವ ಕೆಲವು ವೈಚಾರಿಕ ಲೇಖನಗಳು) ಲೇ:ತೀರ್ಥರಾಂ ವಳಲಂಬೆ, ಪ್ರ:ಯಾನ ಪ್ರಕಾಶನ, ಮಂಗಳೂರು ಬೆ:ರೂ.75/-

4. ನೀನು ಇರುವಂತೆಯೇ ಇರು (ಶ್ರೀ ರಮಣ ಮಹರ್ಷಿಗಳ ಬೋಧಾಮೃತ) ಲೆ:ಡೇವಿಡ್ ಗಾಡ್ ಮನ್ ಅ:ಶ್ರೀ ವೈ.ಎಂ.ಗಾಣಿಗೇರ ಪ್ರ: ಸಮಾಜ ಪುಸ್ತಕಾಲಯ, ಧಾರವಾಡ, ಬೆ:ರೂ.65/-

5. ಹಿಂದೂ ಧರ್ಮ (ಧರ್ಮಕ್ಕೆ ಒದಗಿರುವ ಕೆಲವು ಆತಂಕಗಳ ಪರಿಚಯ) ಲೆ:ಡಾ.ಎಂ.ಚಿದಾನಂದ ಮೂತರ್ಿ, ಪ್ರ:ಭಾರತ ವಿಕಾಸ ಪರಿಷತ್, ಬೆಂಗಳೂರು, ಬೆ:ರೂ.50/-

6. ರ್ವಾಲೋ (ಹೆಚ್ಚು ಬಾರಿ ಮುದ್ರಿತವಾಗಿರುವ ಜನಪ್ರಿಯ ಕಾದಂಬರಿ) ಲೆ:ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪ್ರ:ಪುಸ್ತಕ ಪ್ರಕಾಶನ, ಮೂಡಿಗೆರೆ, ಬೆ:ರೂ.75/-

7. ಕಲಾಮ್ ಕಮಾಲ್ (ರಾಷ್ಟ್ರಪತಿ ಕಲಾಮ್ ಕುರಿತು ಅವರ ಕಾರ್ಯದರ್ಶಿಯವರ ನೆನಪುಗಳು), ಲೇ:ಪಿ.ಎಂ.ನಾಯರ್,ಅ:ವಿಶ್ವೇಶ್ವರ ಭಟ್,ಪ್ರ:ಅಂಕಿತ ಪುಸ್ತಕ, ಬೆಂಗಳೂರು ಬೆ:ರೂ.130/-

8. ಕಲ್ಲು ಕರಗುವ ಸಮಯ (ಕಥಾ ಸಂಕಲನ) ಲೆ:ಪಿ. ಲಂಕೇಶ್, ಪ್ರ:ಲಂಕೇಶ್ ಪ್ರಕಾಶನ, ಬೆಂಗಳೂರು ಬೆ:ರೂ.125/-

9. ಆರ್ಷಧರ್ಮ (ಹಿಂದೂಧರ್ಮ-ಆಚಾರ ವಿಚಾರಗಳು) ಲೆ:ಬಿ.ವಿ.ಶರ್ಮಾಪಂಡಿತ್, ಪ್ರ:ಸಾಧನ ಪ್ರಕಾಶನ, ಬೆಂಗಳೂರು ಬೆ:ರೂ.150/-

10. ಡಿ ಕಂಪನಿ (ಮುಂಬೈ ಭೂಗತ ಜಗತ್ತಿನ ಕಥೆ), ಲೆ:ರವಿ ಬೆಳಗೆರೆ, ಪ್ರ:ಭಾವನಾ ಪ್ರಕಾಶನ ಬೆ:ರೂ.250/-

ಕೃಪೆ : ವಿಜಯ ಕರ್ನಾಟಕ

ಜುಂಜಪ್ಪ

ಜುಂಜಪ್ಪ ಕಾಡುಗೊಲ್ಲ ಬುಡಕಟ್ಟಿನ ಜನಪ್ರಿಯ ಸಾಂಸ್ಕೃತಿಕ ವೀರ. ಆತನ ಕುರಿತು ಗೊಲ್ಲ ಸಮುದಾಯದ ಹಿರಿಯರು ವಿವಿಧ ಸಂದರ್ಭಗಳಲ್ಲಿ ಪುನರ್ ಸೃಷ್ಟಿಸಿದ ಅಪೂರ್ಣ ಕತೆಗಳನ್ನು ಇಟ್ಟುಕೊಂಡು ಸಮಗ್ರ ಚಿತ್ರಣ ದೊರೆಯುವ ಹಾಗೆ ಕತೆಗಳನ್ನು ಶಿವಣ್ಣ ಇಲ್ಲಿ ಪುನರ್ರಚಿಸಿದ್ದಾರೆ. ಎತ್ತಪ್ಪ – ಜುಂಜಪ್ಪರ ಕುರಿತು ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಸುದೀರ್ಘ ಕ್ಷೇತ್ರ ಕಾರ್ಯಧಾರಿತ ಮಹಾಪ್ರಬಂಧ ರಚಿಸಿರುವ ಶಿವಣ್ಣ ಅವರು ಅಲ್ಲಿನ ಅಡಿಟಿಪ್ಪಣಿ ಹಾಗೂ ಗಂಭೀರ ಭಾಗಗಳನ್ನು ತೆಗೆದುಹಾಕಿ ಸರಳಗೊಳಿಸಿ ಜನಸಾಮಾನ್ಯರಿಗೆ ಎಟುಕುವಂತೆ ಈ ಕತೆಗಳನ್ನು ಕಟ್ಟಿಕೊಟ್ಟಿದ್ದಾರೆ. ಾ

ಜನಪ್ರಿಯ ಮಾಸಿಕ `ಮಯೂರದಲ್ಲಿ ಈಗಾಗಲೇ ಇಲ್ಲಿನ ಬಹುತೇಕ ಕತೆಗಳು ಪ್ರಕಟವಾಗಿವೆ. ಜಿ.ಕೆ.ಶಿವಣ್ಣನವರ ಅರ್ಥಗರ್ಭಿತ ರೇಖಾಚಿತ್ರಗಳು ಹಾಗೂ ಕೃಷ್ಣ ರಾಯಚೂರು ಅವರ ಮುಖಪುಟ ವಿನ್ಯಾಸದೊಂದಿಗೆ ಇದೀಗ ಪುಸ್ತಕ ರೂಪದಲ್ಲಿ ಸುಂದರವಾಗಿ ಮೂಡಿಬಂದಿದೆ.

ಶೀರ್ಷಿಕೆ: ಜುಂಜಪ್ಪ : ಕಾಡುಗೊಲ್ಲ ಬುಡಕಟ್ಟಿನ ಸಾಂಸ್ಕೃತಿಕ ವೀರನ ಕತೆ ಲೇಖಕರು: ಮೀರಾಸಾಬಿಹಳ್ಳಿ ಶಿವಣ್ಣ ಪ್ರಕಾಶಕರು: ಪಟೇಲ್ ಪಬ್ಲಿಕೇಶನ್ಸ್ ಪುಟಗಳು : 152 ಬೆಲೆ:ರೂ. 100/-

ಕೃಪೆ : ಸುಧಾ

ಎದೆಯ ಹೊಲದಲಿ ಬಿತ್ತಿ ಬೆಳೆವೆವು ಅಮರ ಪ್ರೀತಿಯ ಕಾಳನು

ಕನ್ನಡದ ಮಕ್ಕಳ ರಂಗಭೂಮಿಯಲ್ಲಿ ಡಾ. ಆರ್.ವಿ. ಭಂಡಾರಿ ಆದ್ಯರು. ಮಕ್ಕಳ ಕತೆ, ಕಾದಂಬರಿ, ನಾಟಕ ಯಾವುದೇ ಇರಲಿ ಇವುಗಳ ರಚನೆಯಲ್ಲಿ ಅವರು `ಪ್ರಸಿದ್ಧ’ರಲ್ಲದಿದ್ದರೂ `ಸಿದ್ಧ’ರು. ಮಕ್ಕಳ ರಂಗಭೂಮಿಯ ಚಹರೆ ಇನ್ನೂ ಸ್ಪಷ್ಟವಾಗುತ್ತಿದ್ದ ಕಾಲದಲ್ಲಿಯೇ ಅವರು ಇಂದು ನಾವು ಯಾವುದನ್ನು ಮಕ್ಕಳ ರಂಗಭೂಮಿಯ ಗಂಭೀರ ಪ್ರಯೋಗ ಅನ್ನುತ್ತಿದ್ದೇವೆಯೋ ಅಂತಹ ಮಾದರಿಗಳನ್ನು ರಚಿಸಿದವರು, ಪ್ರಯೋಗಿಸಿದವರು.

ಆರ್.ವಿ. ಮಕ್ಕಳ ನಾಟಕಗಳನ್ನು `ಚಂದಕ್ಕಾಗಿ’ ಬರೆದವರಲ್ಲ. ಅದನ್ನು ಚಂದಗೊಳಿಸಲಿಕ್ಕಾಗಿಯೇ ಕಷ್ಟಪಟ್ಟವರಲ್ಲ. ನಿರ್ದಷ್ಟ `ಆಶಯಗಳು’ ಅದರ ಬೆನ್ನ ಹಿಂದೆಯೇ ಇರುತ್ತದೆ. ಆದರೆ ಅವು ಗೊಂದಲಗೊಳ್ಳದೇ ಸರಳ, ಸಹಜವಾಗಿ ರೂಪಿತವಾಗುತ್ತವೆ. ಹಾಗಾಗಿಯೇ ಅವರ ಎಲ್ಲ ಮಕ್ಕಳ ನಾಟಕಗಳೂ ಪ್ರಯೋಗಿಸಲ್ಪಟ್ಟಿವೆ. `ಬೆಳಕು ಹಂಚಿದ ಬಾಲಕ’, `ಬೆಳಕಿನೆಡೆಗೆ’, `ಉಪ್ಪಿನ ಸತ್ಯಾಗ್ರಹ’, ಮುದುಕನೂ ಹುಲಿಯೂ’ ಇವೆಲ್ಲಾ ಮಕ್ಕಳ ರಂಗಭೂಮಿಯ ಮಹತ್ವದ ದಾಖಲೆಗಳಾಗಿವೆ. ಆಶಯಗಳು ಸುಂದರ ಆಕೃತಿಗಳಾಗಿವೆ.

ಇಲ್ಲಿ ಎರಡು ನಾಟಕಗಳಿವೆ.

`ಪ್ರೀತಿಯ ಕಾಳು’ – ಮನುಷ್ಯನ ಎದೆಗೆ ಪ್ರೀತಿಯನ್ನು ತುಂಬುವ ಮಹತ್ತರ ಆಶಯವನ್ನು ಪಡೆದುದು. ತುಂಬ ಬಳಸಿ ಬಳಸಿ ಕ್ಷೀಷೆಗೊಂಡ ಕಥನ ಕ್ರಮವೊಂದನ್ನು ಆರ್.ವಿ. ಇಲ್ಲಿ ಹೊಸದಾಗಿ ನಿರೂಪಿಸಿದ್ದಾರೆ. ಅದನ್ನು ರೂಪಕವಾಗಿಸಿದ್ದಾರೆ. ಕಾವ್ಯಾತ್ಮಕವಾದ ಸರಳ ಲಯದಲ್ಲಿ ಇಡೀ ನಾಟಕ ಜೀಕುತ್ತದೆ. ರೂಪಾಂತರ ಕ್ರಿಯೆಗೊಂದು ಸೊಗಸಾದ ಉದಾಹರಣೆ ಇದು.

`ಒಂದೇ ಬಣ್ಣದ ಹಕ್ಕಿಗಳು’ – ಬಾಲ ಕಾರ್ಮಕರ ಬದುಕನ್ನು ಕುರಿತದ್ದು. ಹದಗೆಟ್ಟ ಬದುಕಿನಲ್ಲಿ ಆದರ್ಶದ ಹೆಜ್ಜೆಗಳ ಇಡುವ, ಬದುಕಿನ ಅಮೃತಕ್ಕೆ ಹೆಣಗುವ ಗರುಡನ ಕಥೆ ಇದು.

ಈ ಎರಡು ನಾಟಕಗಳೂ ಹಸಿವಿನ ಕುರಿತು ಮಾತನಾಡುತ್ತವೆ. ಅದು ಪ್ರೀತಿಯ ಹಸಿವಾಗಿರಬಹುದು ಅಥವಾ ಅನ್ನದ ಹಸಿವಾಗಿರಬಹುದು. ಆಳದಲ್ಲಿ ಪ್ರೀತಿಗೂ ಅನ್ನಕ್ಕೂ ಇರುವ ಒಳ ಸಂಬಂಧವನ್ನು ನಾಟಕ ಧ್ವನಿಸುತ್ತದೆ. ಇವುಗಳಲ್ಲಿ ಆದರ್ಶವಿದೆ, ಕನಸಿದೆ. ತತ್ಕಾಲದಲ್ಲಿ ನನಸಾಗದ ಆದರೆ ಭವಿಷ್ಯದಲ್ಲಿ ಬದುಕನ್ನು ಧನಾತ್ಮಕವಾಗಿ ಕಾಣುವ ಹಂಬಲವಿದೆ. ಅದನ್ನು ತಲುಪುವ ದಾರಿಯ ಕುರಿತು ಉದ್ದೇಶಿತ ನಿಲುವಿದೆ. ಹಾಗಾಗಿ ಇದು ಓದುಗನನ್ನೂ/ನೋಡುಗನನ್ನೂ ಚಿಂತನೆಗೆ ಹಚ್ಚುತ್ತದೆ.

ಡಾ.ಆರ್.ವಿ. ಇರುವುದೇ ಇಲ್ಲಿ.

ಎಂದು ಶ್ರೀ ಪಾದ ಭಟ್ ಅವರ ಬೆನ್ನುಡಿ ಹೊಂದಿರುವ ಈ ಪುಸ್ತಕದಲ್ಲಿ ನಾಟಕಕ್ಕೆ ಹೊಂದುವ ರೇಖಾಚಿತ್ರಗಳು ಪುಸ್ತಕದ ಚಂದವನ್ನು ಹೆಚ್ಚಿಸಿವೆ.

ಶೀರ್ಷಿಕೆ: ಬಣ್ಣದ ಹಕ್ಕಿ(ಮಕ್ಕಳಿಗಾಗಿ ಎರಡು ನಾಟಕಗಳು) ಲೇಖಕರು:ಆರ್.ವಿ.ಭಂಡಾರಿ ಪ್ರಕಾಶಕರು: ಬಂಡಾಯ ಪ್ರಕಾಶನ ಪುಟಗಳು:52 ಬೆಲೆ:ರೂ. 15/-

ಡಾ. ಆರ್. ವಿ. ಭಂಡಾರಿ ಅವರಿಗೆ ಶೃದ್ಧಾಂಜಲಿ

ಬೆಳಕು ಹಂಚಿದ ಬಾಲಕನನ್ನು ಕೆತ್ತಿದ ಡಾ. ಆರ್.ವಿ. ಭಂದಾರಿ ಡಾ ಇನ್ನಿಲ್ಲ. ಅವರ ಕೆಲವು ಕೃತಿಗಳು ಇವು.

ಕಣ್ಣೇಕಟ್ಟೆ ಕಾಡೇಗೂಡೆ (ಕವನ ಸಂಕಲನ)

ಕೊಲೆಗಾರ ಪತ್ತೆಯಾಗಲಿಲ್ಲ (ಕವನ ಸಂಕಲನ)

ಬೆಂಕಿಯ ಮಧ್ಯೆ (ಕಾದಂಬರಿ)

ಬಿರುಗಾಳಿ (ಕಾದಂಬರಿ)

ಗೋಡೆಗಳು ಮತ್ತು ನೆರೆ ಹಾವಳಿ (ಕಾದಂಬರಿ)

ತಲೆಮಾರು (ಕಾದಂಬರಿ)

ಯಾನ ಮತ್ತು ಇತರ ನಾಟಕಗಳು (ಮಕ್ಕಳ ನಾಟಕಗಳು)

ಕೇವಲ ಸಹಿ (ನವ ಸಾಕ್ಷರ ಸಾಹಿತ್ಯ)

ಇಟ್ಟ ಹೆಜ್ಜೆ ಮುಂದಕೆ (ನವ ಸಾಕ್ಷರ ಸಾಹಿತ್ಯ)

ಐದು ಯಕ್ಷಗಾನ ಏಕಾಂಕ ಪ್ರಸಂಗಗಳು (ನವ ಸಾಕ್ಷರ ಸಾಹಿತ್ಯ)

ಅಪ್ಪಿಕೋ ಮತ್ತೆರಡು ಮಕ್ಕಳ ನಾಟಕ (ಮಕ್ಕಳ ನಾಟಕಗಳು)

ಬೆಳಕಿನೆಡೆಗೆ (13 ಮಕ್ಕಳ ನಾಟಕಗಳು)

ಸುಭಾಶ್ಚಂದ್ರ ಬೋಸ್ (ಜೀವನ ಚರಿತ್ರೆ)

ಆಡು ಬಾ – ಹಾಡು ಬಾ (ಮಕ್ಕಳ ಪದ್ಯ)

ಯಶವಂತನ ಯಶೋಗೀತೆ (ಕಾದಂಬರಿ)

ಸಮಾಜವಾದಿ ವಾಸ್ತವ (ವಿಮರ್ಶೆ)

ವರ್ಣದಿಂದ ವರ್ಗದೆಡೆಗೆ (ವಿಮರ್ಶೆ)

ಕನ್ನಡ ಕಾದಂಬರಿಯಲ್ಲಿ ವರ್ಣ ಮತ್ತು ವರ್ಗ ಸಂಘರ್ಷ (ವಿಮರ್ಶೆ)

ಒಳಧ್ವನಿ (ವಿಮರ್ಶೆ)

ಸೆಳಕು (ವಿಮರ್ಶೆ)

ಸಾಹಿತ್ಯ ಮತ್ತು ಪ್ರಭುತ್ವ (ವಿಮರ್ಶೆ)

ಕನ್ನಡದಲ್ಲಿ ಇಂಗ್ಲೀಷ್ ವ್ಯಾಕರಣ

ಹಿರಿಯ ಬಂಡಾಯ ಸಾಹಿತಿ ಆರ್.ವಿ.ಭಂಡಾರಿ ಇನ್ನಿಲ್ಲ.

ಹಿರಿಯ ಸಾಹಿತಿ ಹಾಗೂ ನಿವೃತ್ತ ಶಿಕ್ಷಕ ಆರ್.ವಿ.ಭಂಡಾರಿ (72) ದೀರ್ಘಕಾಲದ ಅಸ್ವಸ್ಥತೆಯ ನಂತರ ಶನಿವಾರ ಮಧ್ಯಾಹ್ನ ಮಣಿಪಾಲದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಸಾಹಿತ್ಯ ಕ್ಷೇತ್ರದಲ್ಲಿ ಬಂಡಾಯ ಸಾಹಿತಿಯೆಂದೇ ಪರಿಚಿತರಾಗಿದ್ದ ಇವರು ಬಂಡಾಯ ಸಾಹಿತ್ಯದ ಆರಂಭದ ಚಳುವಳಿಯ ದಿನಗಳಲ್ಲಿ ಅದರ ಮುಂಚೂಣಿಯಲ್ಲಿದ್ದ ಸಾಹಿತಿಗಳಲ್ಲೊಬ್ಬರಾಗಿದ್ದರು.

ಕಣ್ಣೇಕಟ್ಟೆ ಕಾಡೇಗೂಡೆ (ಕವನ ಸಂಕಲನ), ಬೆಂಕಿಯ ಮಧ್ಯೆ, ಬಿರುಗಾಳಿ, ಯಶವಂತನ ಯಶೋಗೀತೆ (ಮೂರೂ ಕಾದಂಬರಿ), ಯಾನ, ಬೆಳಕಿನೆಡೆಗೆ (ಮಕ್ಕಳ ನಾಟಕಗಳು), ಕನ್ನಡ ಕಾದಂಬರಿಯಲ್ಲಿ ವರ್ಣ ಮತ್ತು ವರ್ಗ ಸಂಘರ್ಷ (ವೈಚಾರಿಕ ವಿಮರ್ಶಾ ಸಂಕಲನ) ಮೊದಲಾದ ಕೃತಿಗಳನ್ನು ರಚಿಸಿದ್ದ ಭಂಡಾರಿಯವರಿಗೆ 2005ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಲಭಿಸಿತ್ತು. ಅವರು ಜೋಯಿಡಾದಲ್ಲಿ ನಡೆದ 12ನೇ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಅವರಿಗೆ ಉಪನ್ಯಾಸಕ ವಿಠ್ಠಲ ಭಂಡಾರಿ, ಕವಯತ್ರಿ ಮಾಧವಿ ಭಂಡಾರಿ ಸೇರಿದಂತೆ ಮೂವರು ಮಕ್ಕಳಿದ್ದಾರೆ. ಮೃತರ ಅಂತ್ಯಕ್ರಿಯೆ ಭಾನುವಾರ ಬೆಳಿಗ್ಗೆ ಅವರ ಊರಾದ ಹೊನ್ನಾವರ ತಾಲ್ಲೂಕಿನ ಕೆರೆಕೋಣದಲ್ಲಿ ನಡೆಯಲಿದೆ.

ಆರ್.ವಿ.ಭಂಡಾರಿ ಅವರ ನಿಧನಕ್ಕೆ ನಾಟಕ ನಿರ್ದೇಶಕ ಕಿರಣ ಭಟ್ಟ, ಜಿಲ್ಲಾ ಸಾಹಿತ್ಯ ಪರಿಷದ್ ಅಧ್ಯಕ್ಷ ರೋಹಿದಾಸ್ ನಾಯಕ್, ಕಾರ್ಯದರ್ಶಿ ಅರವಿಂದ ಕರ್ಕಿಕೋಡಿ ಮತ್ತಿತರರು ಸಂತಾಪ ಸೂಚಿಸಿದ್ದಾರೆ.

ಹಾಗೇ ಡಾ.ಭಂಡಾರಿ ಅವರ ನಿಧನಕ್ಕೆ ಚಿಂತಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಬರಗೂರು ರಾಮಚಂದ್ರಪ್ಪ ತೀರ್ವ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ವಾರ್ತೆ

ಹೆಂತಾ ಚೆಂದಿತ್ತಾ

ಪುಸ್ತಕದ ಶೀರ್ಷಿಕೆ ನೋಡಿದರೆ ಜಾನಪದ ಲಾವಣಿಗಳ ಸಂಪಾದಿತ ಗ್ರಂಥ ಇದಾಗಿರಬಹುದು ಎನಿಸುತ್ತದೆ. ಲಾವಣಿ ಶೈಲಿಯಲ್ಲಿ ಬರೆದಿರುವ ಗೀತೆಗಳು ಇವು. `ಇವನ್ನು ಬೇಕಾದರೆ ಭಾವಗೀತಾತ್ಮಕ ಲಾವಣಿಗಳು ಎಂದು ಕರೆಯಿರಿಎಂದು ಕವಿ ಪೋಲೀಸ್ ಪಾಟೀಲ ಅವರೇ ಹೇಳಿದ್ದಾರೆ. ಪಾಟೀಲರು ಕವಿ ಅಷ್ಟೇ ಅಲ್ಲ. ಉತ್ತಮ ಹಾಡುಗಾರರೂ ಸಹ. ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಣದ ಶಿಬಿರಗಳಲ್ಲಿ ಭಾಗವಹಿಸಿದಾಗ ತಾವೇ ರಚಿಸಿ ಹಾಡಿದ ಲಾವಣಿಗಳು ಇವು. ಒಟ್ಟು 55 ಲಾವಣಿಗಳು ಈ ಸಂಕಲನದಲ್ಲಿವೆ.

ನಿಶ್ವಿತ ಉದ್ದೇಶಕ್ಕೆ ರಚಿಸಿದ ಗೀತೆಗಳಲ್ಲಿ ಸಾರ್ವತ್ರಿಕ ಮೌಲ್ಯ ಇರುವುದೆ ಎಂಬ ಚರ್ಚೆಯ ಹಂಗು ಕವಿಗೆ ಇಲ್ಲ. ಜನಪದ ಶೈಲಿಯಲ್ಲಿ ಹಾಡುತ್ತಾ ಹಾಡುತ್ತಾ ಕವಿತೆ ಕಟ್ಟುವ ಪ್ರಯತ್ನವನ್ನು ಅವರು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ದೇಸಿ ಸಿದ್ದ ಅಡುಗೆಯಲ್ಲಿ ಆಧುನಿಕ ಸಂವೇದನೆ ಕಸಿಗೊಂಡ ಪಾಕ ಇದು. ಇದೊಂದೇ ಅಲ್ಲ, ಅವರ ಎಲ್ಲ ಕವಿತಾ ಸಂಕಲನಗಳೂ, ನಾಟಕಗಳೂ ಜಾನಪದ ಸಂಕಲನಗಳಂತೆ ಭಾಸವಾಗುತ್ತವೆ. ಹಾಗಾಗಿ ಕನ್ನಡ ಕಾವ್ಯಲೋಕದಲ್ಲಿ ಅವರ ಸ್ಥಾನ ವಿಶಿಷ್ಟವಾಗಿದೆ.

ಶೀರ್ಷಿಕೆ: ಹೆಂತಾ ಚೆಂದಿತ್ತಾ ಹಿಂದುಸ್ತಾನ (ಆಯ್ದ ಲಾವಣಿಗಳು) ಲೇಖಕರು: ಬಿ.ಆರ್.ಪೋಲೀಸ್ ಪಾಟೀಲ್ ಪ್ರಕಾಶಕರು: ವಾತಲ್ಯ ಪ್ರಕಾಶನ ಪುಟಗಳು : 94 ಬೆಲೆ:ರೂ. 60/-

ಕೃಪೆ : ಸುಧಾ

ಹಾರಕೂಡದ ಸಂಸ್ಥೆ ಪ್ರಕಟಿಸಿದ ಸಿಪಿಕೆ ವಿಚಾರಗಳು

ಸಿ.ಪಿ.ಕೆ ಹೆಸರಿನಲ್ಲಿ ಬರಹಗಳು (ಕೊನೆಯ ಪಕ್ಷ ಒಂದು ಪತ್ರವಾದರೂ) ಪ್ರಕಟವಾಗದ ಪತ್ರಿಕೆಗಳೇ ಇಲ್ಲ ಎಂದು ಹೇಳಬಹುದು. ಪ್ರಜಾವಾಣಿ, ಸುಧಾ ಸಮೂಹದ ಪತ್ರಿಕೆಗಳ ಓದುಗರಿಗಂತೂ ಅವರ ಚಿಂತನೆಗಳು ಚಿರಪರಿಚಿತ. ಕನ್ನಡದ ಹಿರಿಯ ಲೇಖಕರೂ ವಿದ್ವಾಂಸರೂ ಆದ ಡಾ.ಸಿ.ಪಿ.ಕೃಷ್ಣಕುಮಾರ್ ತಮ್ಮ ಹೆಸರನ್ನು ಸಿಪಿಕೆ ಎಂದು ಮೂರೇ ಅಕ್ಷರಕ್ಕೆ ಕಿರಿದುಗೊಳಿಸಿಕೊಂಡಷ್ಟೇ ಸಾಂದ್ರವಾಗಿ, ಪರಿಣಾಮಕಾರಿಯಾಗಿ ಬರೆಯಬಲ್ಲ ಲೇಖಕರು. ವಿವಿಧ ಸಂದರ್ಭದಲ್ಲಿ ಅವರು ಬರೆದ 51 ಚಿಂತನೆಗಳ ಧಾರೆ ಇದು.

ಘನ ವಿದ್ವಾಂಸರಾದ ಸಿಪಿಕೆ ಚಿಕ್ಕಪುಟ್ಟದಕ್ಕೆಲ್ಲಾ ಪ್ರತಿಕ್ರಯಿಸುತ್ತಾರೆ. ಎಲ್ಲದಕ್ಕೂ ಬರೆಯುತ್ತಾರೆ ಎಂದು ಜರಿಯುವವರಿದ್ದಾರೆ. ಆದರೆ ಸಿಪಿಕೆ. ಅದಕ್ಕೆಲ್ಲ ತಲೆಕೆಡಿಸಿಕೊಂಡವರಲ್ಲ. ವ್ಯಾಪಕ ಸಮುದಾಯಕ್ಕೆ ತಲುಪುವ ಪತ್ರಿಕೆಯ ಅಗಾಧ ಸಾಮರ್ಥ್ಯದ ಅರಿವು ಅವರಿಗಿದೆ. `ಕಾವೇರಿಯಿಂದ ಗೋದಾವರಿಯವರೆಗಿರ್ಪ ನಾಡು…ಎಂಬಂತೆ ಮೈಸೂರಿನಲ್ಲಿ ಕುಳಿತು ಬರೆದ ಅವರ ಬರಹಗಳನ್ನು ಬೀದರ ಜಿಲ್ಲೆಯ ಹಾರಕೂಡದ ಸಂಸ್ಥೆ ಪ್ರಕಟಿಸಲು ಮುಂದೆ ಬಂದಿದೆ. ಇದೂ ಒಂದು ರೀತಿ ಪತ್ರಿಕೆಗಳಿಂದ ಸಾಧ್ಯವಾದ ಸಂವಹನ. ಪ್ರಾಚೀನವನ್ನು ಇಂದಿಗೆ ಪ್ರಸ್ತುತಗೊಳಿಸುವುದು, ಹಳೆಯದಕ್ಕೆ ಹೊಸ ವ್ಯಾಖ್ಯಾನ ನೀಡುವುದು ಇಲ್ಲಿಯ ಬರಹಗಳ ವೈಶಿಷ್ಟ್ಯ. ಆದ್ದರಿಂದಲೇ ಇವು ಹಳೇ ಬೇರು, ಹೊಸ ಚಿಗುರಿಗೆ ಇಷ್ಟವಾಗುವ ಚಿಂತನೆಗಳು.

ಶೀರ್ಷಿಕೆ :ಚಿಂತನ ಧಾರೆ ಲೇಖಕರು:ಡಾ. ಸಿ. ಪಿ. ಕೃಷ್ಣ ಕುಮಾರ್ ಪ್ರಕಾಶಕರು : ಶ್ರೀ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠ ಪುಟಗಳು:136 ಬೆಲೆ: ರೂ.60/-

ಕೃಪೆ : ಸುಧಾ

ಕದಂಬ ವನ

ರಾಜಶೇಖರ ಕದಂಬ ಮೈಸೂರಿನ ರಂಗಚಟುವಟಿಕೆಗಳಲ್ಲಿ ಸರ್ವಾತರ್ಯಾಮಿ. ರಂಗಕರ್ಮಿಗಳ, ನಟನಟಿಯರ ಸಖ್ಯ ಬೆಳೆಸಿಕೊಂಡು ಅವರ ಏಳಿಗೆಗಾಗಿ ಸದ್ದುಗದ್ದಲವಿಲ್ಲದೆ ಓಡಾಡುತ್ತಾ, ಅವರಿಗೆಲ್ಲಾ ಸಲ್ಲಬೇಕಾದ ಗೌರವಾದರಗಳಿಗಾಗಿ ಓಡಾಡುವ ಹಿರಿಯ ಚೇತನ ಎನ್ನುತ್ತಾರೆ ನ. ರತ್ನ.

ಕದಂಬ ಬರೆದಿರುವ `108 ರಂಗಮುಖಗಳುಪುಸ್ತಕ ಕರ್ನಟಕದಲ್ಲಿರುವ ರಂಗಕರ್ಮಿಗಳ ಪರಿಚಯ. ಎಲ್ಲಾ ಭಾಗಗಳ ಕಲಾವಿದರನ್ನು ಪರಿಚಯಿಸುವ ಕೆಲಸ ಮಾಡಿದ್ದಾರೆ ಕದಂಬ. ಪ್ರಸ್ತುತ ರಂಗಭೂಮಿಯಲ್ಲಿ ಪ್ರಚಲಿತವಿರುವ ಹಿಂದೆ ಸಾಕಷ್ಟು ಕೆಲಸ ಮಾಡಿ ಸಂಧ್ಯಾಕಾಲದಲ್ಲಿರುವ ವಯೋವೃದ್ಧ ಕಲಾವಿದರ ಪರಿಚಯವನ್ನು ಮಾಡುವ ಅಪರೂಪದ ಕೆಲಸ ಕದಂಬ ಮಾಡಿದ್ದಾರೆ.

ಶೀರ್ಷಿಕೆ : 108 ರಂಗಮುಖಗಳು ಲೇಖಕರು : ರಾಜಶೇಖರ ಕದಂಬ ಪ್ರಕಾಶಕರು : ಭಾರತಿ ಪ್ರಕಾಶನ ಪುಟಗಳು : 270 ಬೆಲೆ: ರೂ.150/-

ಕೃಪೆ : ಕನ್ನಡ ಪ್ರಭ

ಮೂರ್ತಿಯವರ ಮೊನಚು

ನಾಡಿನ ಹಿರಿಯರು, ರಂಗಕರ್ಮಿಗಳು ಎಂದು ಖ್ಯಾತರಾದವರು ಎ.ಎಸ್.ಮೂರ್ತಿ. ಮೂರ್ತಿ ವಯಸ್ಸಿನಲ್ಲಿ ಹಿರಿಯರಾದರೂ ಕೀ ರ್ತಿಯೂ ಅಷ್ಟೇ ದೊಡ್ಡದು.

`ಒಂದು ವಿಧದಲ್ಲಿ ನಾಟಕವನ್ನು ಅವರು ಬಾಳಿನ ಅತ್ಯಂತ ಪ್ರಮುಖ ಕಾರ್ಯ ಎಂದು ತೀರ್ಮಾ ನಿಸಿಬಿಟ್ಟಿದ್ದರು. ಒಂದು ವಿಧದಲ್ಲಿ ಅದು ಅವರಿಗೆ ರಕ್ತಗತವಾಗಿ ಬಂದ ಆಸಕ್ತಿ. ಅವರ ತಂದೆ ಅ.ನ.ಸುಬ್ಬರಾಯರು ಸ್ವತಃ ನಾಟಕಕಾರರೂ ರಂಗಕರ್ಮಿಗಳೂ ಆಗಿದ್ದರು. ಅವರಿಗೆ ಕಲೆಯೇ ಜೀವನವಾಗಿತ್ತು’.

`ಕಲಾಮಂದಿರದ ಆಶ್ರಯದಲ್ಲಿ ಎ.ಎಸ್.ಮೂರ್ತಿಯವರು ಎಷ್ಟೊಂದು ಜನ ಯುವಕ ಯುವತಿಯರನ್ನು ಅಭಿನಯ ಕಲೆಯಲ್ಲಿ ತಯಾರು ಮಾಡಿದರು ಎಂಬುದೇ ಆಶ್ಚರ್ಯಕರವಾಗದ ವಿಷಯ’ ಎನ್ನುತ್ತಾರೆ ಜಿ.ವೆಂಕಟಸುಬ್ಬಯ್ಯ. ಎ.ಎಸ್.ಮೂರ್ತಿಯವರ ಕಲೆಯ ಕುರಿತು ಎಲ್ಲರೂ ಅಚ್ಚರಿಗೊಳ್ಳುವುದು ಅತ್ಯಂತ ಸಹಜ. ಅದರಲ್ಲೂ `ದೇಸಿ v/s ಪರದೇಸಿ’ ಕಿರುನಾಟಕ ಮೂರ್ತಿಯವರ ವಿಡಂಬನೆಯ ಮೊನಚನ್ನು ತೋರಿಸುತ್ತದೆ. ಪರದೇಸೀ ಮೋಹ, ಪರಭಾಷೆಯ ಮೋಹ, ಪರ ಸಂಸ್ಕೃತಿಯ ಆಕರ್ಷಣೆ ಇವೆಲ್ಲವನ್ನೂ ಹಿರಿಯರಾದ ಮೂರ್ತಯವರು ಕೆತ್ತುವ ರೀತಿಯಿದೆಯಲ್ಲ! ಅವರಿಗೆ ಅವರೇ ಸಾಟಿ. `ನಟರ ಹೆಸರುಗಳಲ್ಲಿ ಕತಿ-ಛತ್ರಿ, ಬಂಗಾರಿ-ಸಿಂಗಾರಿ ಗಳಲ್ಲೂ ಕೂಡಾ ವಿಡಂಬನೆಯಿದೆ. ಕೆಂಡೇಗೌಡ-ಚಂಡೇಗೌಡರ ಜತೆ ಕೂಡಾ ಹಾಗೆಯೇ’ ಎನ್ನುತ್ತಾರೆ ವೆಂಕಟಸುಬ್ಬಯ್ಯ.

ಶೀರ್ಷಿಕೆ:ದೇಸಿ v/s ಪರದೇಸಿ ಲೇಖಕರು:ಎ.ಎಸ್.ಮೂರ್ತಿ ಪ್ರಕಾಶಕರು : ಸುಂದರ ಪ್ರಕಾಶನ ಪುಟಗಳು:38 ಬೆಲೆ: ರೂ.30/-

ಕೃಪೆ : ಕನ್ನಡ ಪ್ರಭ

ಗುಲಾಮ ಪದ್ಧತಿಯ ವಿರುದ್ಧ ಸೆಣಸಿದ ಕಪ್ಪು ಮಹಿಳೆಯರ ಆತ್ಮಕತೆಗಳು

ಗುಲಾಮ ಪದ್ಧತಿಯ ವಿರುದ್ಧ ಸೆಣಸಿದ ಕಪ್ಪು ಮಹಿಳೆಯರ ಆತ್ಮಕಥೆಗಳ ಸಂಕಲನವೇ ಕಪ್ಪು ಹಕ್ಕಿಯ ಬೆಳಕಿನ ಹಾಡುಪುಸ್ತಕ. ಇಲ್ಲಿನ ಆತ್ಮಕಥೆಗಳನ್ನು ಎಂ.ಆರ್. ಕಮಲ ಕನ್ನಡಕ್ಕೆ ಅನುವಾದಿಸಿದ್ದಾರೆ. ಗುಲಾಮಗಿರಿಯ ಇತಿಹಾಸ, ಅಂದಿನ ರಾಜಕೀಯ ಸನ್ನಿವೇಶ, ಗುಲಾಮರ ಆತ್ಮಕಥೆಗಳನ್ನು ಒಳಗೊಂಡಿರುವ ಪುಸ್ತಕವೊಂದು ಕನ್ನಡದಲ್ಲಿ ಪ್ರಕಟವಾಗುತ್ತಿರುವುದು ಇದೇ ಮೊದಲಬಾರಿಯಾಗಿದೆ. ಇಲ್ಲಿ ಅನುವಾದಿಸಲಾದ ಎಲ್ಲ ಆತ್ಮಕಥೆಗಳು ಹೆಣ್ಣುಮಕ್ಕಳದು ಅನ್ನುವುದು ಈ ಪುಸ್ತಕದ ಮಹತ್ವವನ್ನು ಇನ್ನಷ್ಟು ಹೆಚ್ಚಿಸಿದೆ.

ಕಪ್ಪು ಜನಾಂಗ ಸೃಷ್ಟಿಸಿರುವ ಆತ್ಮಕಥೆಗಳು ಐತಿಹಾಸಿಕ ಮಹತ್ವ ಪಡೆದ ಸಾಹಿತ್ಯ-ಸಮಾಜಶಾಸ್ತ್ರೀಯ-ಸಾಂಸ್ಕೃತಿಕ ಸಂವಾದಿ ದಾಖಲೆಗಳಾಗಿವೆ. ಬಿಡುಗಡೆಗಾಗಿ ಅವರು ನಡೆಸಿದ ಹೋರಾಟ ಆ ಜನಾಂಗದ ಕೆಚ್ಚೆದೆಯನ್ನು ಹೇಳುತ್ತಲೇ, ಯುರೋಪಿಯನ್ನರ ನಯ ವಂಚಕತನದ ಕ್ರೌರ್ಯವನ್ನು ಅನಾವರಣಗೊಳಿಸುತ್ತದೆ.

ಹಾಗೆ ನೋಡಿದರೆ, ಮೌಖಿಕವಾದುದನ್ನು ಬಿಟ್ಟರೆ, ಲಿಖಿತ ಸಾಹಿತ್ಯ ಪರಂಪರೆಯಾಗಲಿ, ಶಿಕ್ಷಣವಾಗಲೀ ಇಲ್ಲದ ಕಪ್ಪು ಜನಾಂಗ ಇಂಗ್ಲಿಷ್ ಭಾಷೆಯನ್ನು ಕಲಿತು ತಂಡೋಪತಂಡವಾಗಿ, ಅದರಲ್ಲೂ ಮಹಿಳೆಯರು, ಆತ್ಮಕಥೆ, ಕಾವ್ಯ, ಪ್ರಬಂಧ, ಕಾದಂಬರಿ ಹೀಗೆ ವಿವಿಧ ಪ್ರಕಾರಗಳಲ್ಲಿ ತಮ್ಮ ಅಭಿವ್ಯಕ್ತಿಯನ್ನು ಸಾಧಿಸಲು ಆರಂಭಿಸಿದ್ದು ಒಂದು ಆಧುನಿಕ ಭಾಷಾ ವಿಸ್ಮಯವಾಗಿದೆ.

ಈ ಬರವಣಿಗೆಯ ಪ್ರಕ್ರಿಯೆಯು ಮನುಷ್ಯರು-ಮನುಷ್ಯರನ್ನು ಶೋಷಿಸುವ ವ್ಯವಸ್ಥೆಯ ಕುರಿತು, ಬಿಡುಗಡೆಯ ಕುರಿತು, ಮುಂದುವರಿದ ಜನಾಂಗಗಳು ಒಂದು ಜನಾಂಗಕ್ಕೆ ತಿರಸ್ಕರಿಸಿದ ಮಾನವ ಹಕ್ಕುಗಳ ಕುರಿತು ಸಾರ್ವಜನಿಕವಾಗಿ ಹೊಸ ಸಂವಾದ-ಚರ್ಚೆ ಆರಂಭವಾಗುವಂತೆ ಮಾಡಿತು. ಮಾತ್ರವಲ್ಲ, ಹೊಸ ಸಮಾಜದಲ್ಲಿ ಬದುಕಿನ ಬೇರೆ ಬೇರೆ ನೆಲೆಗಳಲ್ಲಿ ಆ ಜನಾಂಗ ತಲೆಯೆತ್ತಿ ನಿಲ್ಲಲು ಅಗತ್ಯವಾಗುವ ಆತ್ಮವಿಶ್ವಾಸವನ್ನು ತುಂಬಿತು.

ಆದರೆ, ಇದಕ್ಕಾಗಿ ಅವರು ಮುನ್ನೂರು ವರ್ಷಗಳ ಕಾಲ ನಿರಂತರವಾಗಿ ಕೊಂಚವೂ ವಿಶ್ರಾಂತಿಸದೆ ಬಡಿದಾಡಬೇಕಾಯಿತು. ಅಸ್ತಿತ್ವ ಮತ್ತು ಬದುಕಿಗಾಗಿ ಸಾರ್ವಜನಿಕವಾಗಿ ಹೋರಾಡುವಾಗಲೂ ಕಪ್ಪು ಜನಾಂಗ ತಮ್ಮ ತಾಳ್ಮೆ, ವಿವೇಕ, ಮಾನವೀಯ ಅನುಕಂಪ ಮತ್ತು ಸ್ಥೈರ್ಯಗಳನ್ನು ಕಳೆದುಕೊಳ್ಳದಿರುವುದು ಅದರ ಬಹು ದೊಡ್ಡ ಗುಣವಾಗಿದೆ. ಈ ಬಗೆಯ ಮಾನವೀಯ ಅಂಶಗಳ ಖಜಾನೆಯನ್ನೇ ತಮ್ಮ ನಿರೂಪಣೆಯಲ್ಲಿಟ್ಟುಕೊಂಡಿರುತ್ತಿದ್ದ ಆತ್ಮಕಥೆಗಳು ಪ್ರಕಟವಾದದ್ದೇ ಸಾವಿರ ಸಾವಿರಗಟ್ಟಲೆ ಪ್ರತಿಗಳು ಸಭೆ-ಸಮಾರಂಭ, ಪ್ರತಿಭಟನಾ ಮೆರವಣಿಗೆಗಳಲ್ಲಿ ಮಾರಾಟವಾಗುತ್ತಿದ್ದವು.

ಇಲ್ಲಿ ನಾಲ್ಕು ಆತ್ಮಕಥೆ ಮತ್ತು ಒಂದು ಆತ್ಮಚರಿತ್ರೆಯನ್ನು ಆಯ್ದು, ಸಂಗ್ರಹಿಸಿ ಅನುವಾದಿಸಲಾಗಿದೆ. ಹಾಗೆ ಆರಿಸುವಾಗ ಐತಿಹಾಸಿಕ ಮಹತ್ವದೊಂದಿಗೆ ವೈವಿಧ್ಯವನ್ನು ಮಾನದಂಡವಾಗಿ ಬಳಸಲಾಗಿದೆ. ಈ ಎಲ್ಲ ಮಹಿಳೆಯರು ಬಿಡುಗಡೆಗಾಗಿ ಹೋರಾಡಿ, ಸ್ವಾತಂತ್ರ್ಯ ಪಡೆದು ತಾವು ಬದುಕಿರುವಾಗಲೇ ತಮ್ಮ ಸಾಧನೆ-ಸೇವೆಗಳ ಮೂಲಕ ಜನಾನುರಾಗಿಗಳಾದವರು. ಮೊದಲ ಆತ್ಮಕಥೆಯ ನಾಯಕಿ ಎಲಿಜಬೆತ್, ಲಿಂಕನ್ ಕುಟುಂಬಕ್ಕೆ ತುಂಬ ಹತ್ತಿರವಾಗಿದ್ದವಳು. ಲಿಂಕನ್ ರ ಪತ್ನಿ ಮೇರಿಯ ಆತ್ಮಸಖಿಯಾಗಿದ್ದವಳು. ಆದರೆ, ಈ ಎಲ್ಲವನ್ನೂ ಅವಳು ಪಡೆದದ್ದು ತನ್ನ ಪ್ರತಿಭೆಯ ಮೂಲಕ ಎನ್ನುವುದು ಗಮನಾರ್ಹ ವಿಷಯವಾಗಿದೆ. ಇನ್ನುಳಿದ ನಾಲ್ವರು ಕೂಡ ಬೇರೆ ಬೇರೆ ಕಾರಣಗಳಿಗೆ ಮುಖ್ಯರಾದವರೇ.

ಗುಲಾಮಗಿರಿಯ ದುಃಖ ಸಾವಿನ ದುಃಖಕ್ಕಿಂತಲೂ ಮಿಗಿಲು.

ಗಂಡನ ಸಾವು, ಶವ ಸಂಸ್ಕಾರದ ವಿಷಯ ತಿಳಿದು ತೀವ್ರವಾಗಿ ದುಃಖಿಸುತ್ತಿದ್ದ ಮಗಳಿಗೆ ತಾಯಿಯ ಮಾತು:

`ನೋಡು, ನನ್ನ ಗಂಡನನ್ನು ದಕ್ಷಿಣಕ್ಕೆ ಮಾರಿದರು. ಅವನು ಬದುಕಿದ್ದಾನೋ ಸತ್ತಿದ್ದಾನೋ ಅದೂ ನನಗೆ ಗೊತ್ತಿಲ್ಲ. ಸಂತೋಷದಿಂದ ಇದ್ದಾನೋ, ಚಾವಟಿ ಏಟು ತಿಂದುಕೊಂಡು ಇದ್ದಾನೋ, ಹಸಿವಿನ ಸಂಕಟದಿಂದ ಸಾಯ್ತಾ ಇದ್ದಾನೋ ಯಾವುದೊಂದೂ ಗೊತ್ತಿಲ್ಲ. ಆದ್ರೆ ಮಗಳೆ, ನಿನ್ನ ಗಂಡ ಸತ್ತು ಸ್ವರ್ಗದಲ್ಲಿದ್ದಾನೆ!

ಕರಿಯರ ಜೀವನ್ಮುಖಿ ನಿಲುವಿಗೆ ಒಂದು ಉದಾಹರಣೆ.

`ಅಪ್ಪನನ್ನು ದಕ್ಷಿಣದವರಿಗೆ ಮಾರಿದಾಗಲೇ ಮಕ್ಕಳನ್ನು ಗುಲಾಮಗಿರಿಯ ಬಂಧನದಿಂದ ಬಿಡುಗಡೆಗೊಳಿಸುವ ನಿರ್ಧಾರವನ್ನು ಅವ್ವ ಮಾಡಿದ್ದಳು. ಸ್ವತಂತ್ರವಾಗಿ ಉಸಿರಾಡುವುದನ್ನು ಕಲಿಯಬೇಕೆಂದು ನಮ್ಮಿಬ್ಬರಿಗೂ ಬೋಧೆ ಮಾಡುತ್ತಿದ್ದಳು. ಅಕ್ಕ ನ್ಯಾನ್ಸಿಯ ಪಲಾಯನದ ಕತೆ ಯಜಮಾನನಿಂದ ಕೇಳಿದಾಗ ಅವ್ವ ಹೊರಗೆ ಕೋಪಗೊಂಡಂತೆ ನಟಿಸಿದರೂ ಮನಸ್ಸಿನಲ್ಲಿ ನೂರು ಬಾರಿಯಾದರೂ ದೇವರಿಗೆ ವಂದಿಸಿರಬೇಕು. ಮುಖವಾಡದ ಮರೆಯಲ್ಲಿ ಎಷ್ಟೆಲ್ಲ ನೋವು, ಸಂತಸ, ವಿಷಾದ, ಕಳವಳ ಈ ಗುಲಾಮರಿಗೆ! ಅವ್ವ ಮನೆಗೆ ಬಂದ ತಕ್ಷಣ ಚಪ್ಪಾಳೆ ತಟ್ಟಿ ಕುಣಿಯಲಾರಂಭಿಸಿದಳು. ಕತ್ತನ್ನು ಅತ್ತಿತ್ತ ಅಲುಗಾಡಿಸುತ್ತಾ ನರ್ತಿಸುತ್ತಿದ್ದ ಅವ್ವನ ಕಂಠದಿಂದ ಸುಮಧುರ ಹಾಡು ತೇಲಿ ಬರುತ್ತಿತ್ತು. ಪುಟ್ಟ ಹುಡುಗಿಯಾಗಿದ್ದ ನಾನು ಮೋಡಿಗೊಳಗಾದವಳಂತಿದ್ದೆ

ಹೀಗೆ ಕಪ್ಪು ಜನಾಂಗದ ನೋವುಗಳನ್ನು ಒಳಗೊಂಡ ಈ ಪುಸ್ತಕ ಗುಲಾಮ ಇತಿಹಾಸದ ಬಗ್ಗೆ ತಿಳುವಳಿಕೆ ಇಲ್ಲದವರಿಗಾಗಿ ಮಹತ್ವದ ಮಾಹಿತಿಯನ್ನೂ ಒಳಗೊಂಡಿದೆ.

ವಿಶಾಲಮತಿ (ಪುಸ್ತಕದ ಮುನ್ನುಡಿ ಮತ್ತು ಬೆನ್ನುಡಿಯ ಸಹಾಯದಿಂದ)

ಶೀರ್ಷಿಕೆ : ಕಪ್ಪು ಹಕ್ಕಿಯ ಬೆಳಕಿನ ಹಾಡು ಅನುವಾದ ಎಂ ಆರ್ ಕಮಲ ಪ್ರಕಾಶಕರು : ಕಥನ ಪ್ರಕಾಶನ ಪುಟಗಳು : 192 ಬೆಲೆ: ರೂ.75/-