ಚಿತ್ರ-ಕತೆ

chitra-kathe-cp

ಕತೆಗಾರ, ಅನುವಾದಕ ಎ.ಎನ್.ಪ್ರಸನ್ನ ನಾಟಕ, ಕಿರುತೆರೆ, ಸಿನಿಮಾರಂಗದಲ್ಲೂ ತಮ್ಮ ಆಸಕ್ತಿ ಹರಿಯಬಿಟ್ಟವರು. ಅವರ `ಚಿತ್ರ-ಕತೆ’ ಪುಸ್ತಕ ಜಾಗತಿಕ ಸಿನಿಮಾಗಳ ಬಗ್ಗೆ ಮಾಹಿತಿ ನೀಡುವ ಪುಸ್ತಕಗಳಲ್ಲಿ ಒಂದು.

ಸಿನೆಮಾ ಒಂದು ಭಾಷೆ ಎಂದು ಹೇಳುತ್ತಲೇ ಅದೊಂದು ಕಲಾಪ್ರಕಾರ ಎನ್ನುವ ಲೇಖಕರು ಪುಸ್ತಕದಲ್ಲಿ ಅದನ್ನು ವಿವರಿಸಿದ್ದಾರೆ. ಸಿನೆಮಾ ಭಾಷೆಯ ರೀತಿ ಕೆಲಸ ಮಾಡುತ್ತದೆ. ಅದು ಹಾಗೆ ಕೆಲಸ ಮಾಡುವುದರಿಂದ ಕತೆಯನ್ನು ಪ್ರಸ್ತುತಪಡಿಸುವುದಿಲ್ಲ. ಕತೆಯನ್ನು ಹೇಳುತ್ತದೆ. ಅದರಿಂದಲೇ ಸಿನಿಮಾವನ್ನು ಅರ್ಥಮಾಡಿಕೊಳ್ಳುವುದು ಸುಲಭ ಎಂಬುದು ಅವರ ಅಭಿಪ್ರಾಯ. ಅಲ್ಲದೆ ಸಿನಿಮಾವನ್ನು ನೋಡುವುದಕ್ಕಿಂತ ನೋಡದ ಭಾಗದಿಂದಲೇ ಹೆಚ್ಚು ತಿಳಿಯಲು ಸಾಧ್ಯ. ಚಲನಚಿತ್ರಗಳಲ್ಲಿ ಈ ಗುಣ ತುಂಬಾ ಮುಖ್ಯ. ಅದರಿಂದಲೇ ಒಳ್ಳೆಯ ಮತ್ತು ಕೆಟ್ಟ ಸಿನಿಮಾ ಎಂದು ವರ್ಗೀಕರಣ ಮಾಡಲಾಗುತ್ತದೆ.

1895ರಲ್ಲಿ ಫ್ರಾನ್ಸ್ ನಲ್ಲಿ ಹುಟ್ಟಿದ ಸಿನಿಮಾ ಅನಂತರ ಬೆಳೆದು ಬಂದ ಬಗೆ, ನಿರೂಪಣೆಯಲ್ಲಿ ಆದ ಬದಲಾವಣೆ, ತಾಂತ್ರಿಕ ಅಂಶಗಳ ಅಳವಡಿಕೆ ಕುರಿತು ಅವರು ಜಗತ್ತಿನ ಪ್ರಮುಖ ಚಲನಚಿತ್ರಗಳ ಬಗ್ಗೆ ಬರೆಯುತ್ತಾ ವಿವರಿಸುತ್ತಾರೆ. ಮೊದಲ ಪತ್ತೇದಾರಿ ಸಿನಿಮಾ, ಮೊದಲ ಹಾಸ್ಯ ಸಿನಮಾ ಸೇರಿದಂತೆ ಪ್ರಾತಿನಿಧಿಕ ಚಿತ್ರಗಳು ಬೆಳೆದು ಬಂದ ಬಗ್ಗೆ ಅವರ ಲೇಖನಗಳು ಮಾಹಿತಿ ನೀಡುತ್ತವೆ. ಜಾಗತಿಕ ಸಿನಿಮಾಗಳಲ್ಲಿ ಶ್ರೇಷ್ಟ ಎನ್ನಿಸಿರುವ ಸಿಟಿಜೆನ್ ಕೇನ್, ಬೈಸಿಕಲ್ ಥೀಫ್, ರಾಶೋಮಾನ್, ಬಿಟ್ಟರ್ ಶುಗರ್, ಟಾಕ್ ಟು ಹರ್, ಬ್ಲೋ ಅಪ್ ಸೇರಿದಂತೆ ಹಲವು ಚಿತ್ರಗಳ ಮಾಹಿತಿಯನ್ನು ಸರಳವಾಗಿ ವಿವರಿಸುತ್ತಾರೆ. ಪುಸ್ತಕವನ್ನು ಮೆಚ್ಚಿ ಚಿತ್ರ ನಿದರ್ೇಶಕ ಗಿರೀಶ್ ಕಾಸರವಳ್ಳಿ ಬೆನ್ನುಪುಟದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿನಿಮಾದಲ್ಲಿ ಆಸಕ್ತಿ ಇರುವವರಿಗೂ ಇದು ಮಾಹಿತಿಯುಕ್ತ ಪುಸ್ತಕವಾಗಬಲ್ಲದು. ಚಿತ್ರ-ಕತೆ (ಜಗತ್ತಿನ ಸಿನಿಮಾಗಳ ಅವಲೋಕನ)

ಶೀರ್ಷಿಕೆ : ಚಿತ್ರ-ಕತೆ ಲೇಖಕರು : ಎ.ಎನ್.ಪ್ರಸನ್ನ ಪ್ರಕಾಶಕರು : ಚಿಂತನ ಪುಸ್ತಕ ಪುಟಗಳು :260 ಬೆಲೆ: ರೂ.140/-

ಕೃಪೆ : ಪ್ರಜಾವಾಣಿ

ಆ ದಿಶೆಯಲ್ಲಿ ಯೋಚಿಸಿ, ಯೋಜನೆ ರೂಪಿಸಿ, ಕಾರ್ಯಕ್ಕೆ ಇಳಿಯಿರಿ

scan0018-1

ನಮ್ಮ ನಾಡಿನ ಹಿರಿಯ ಮುತ್ಸದ್ದಿ ಸಂಗಾತಿ ಬೇವಿಂಜೆ ವಿಷ್ಣು ಕಕ್ಕಿಲ್ಲಾಯ (ಬಿವಿಕೆ) ಅವರಿಗೆ ಈಗ 90 ವರ್ಷ. ಭಾರತ ಕಮ್ಯೂನಿಸ್ಟ್ ಪಕ್ಷದ ನಾಯಕರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳುವಳಿಕಾರರಾಗಿ, ರಾಜ್ಯಸಭೆ ಮತ್ತು ಕರ್ನಾಟಕದ ಶಾಸನ ಸಭೆಗಳ ಸದಸ್ಯರಾಗಿ, ರೈತ ಕಾರ್ಮಿಕ ನಾಯಕರಾಗಿ ಇವರು ಸಲ್ಲಿಸಿರುವ ಸೇವೆ ಇತಿಹಾಸದ ಪುಟಗಳಲ್ಲಿ ಸೇರಿಹೋಗಿದೆ. ಬಿವಿಕೆ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿರುವ ವೈಚಾರಿಕ ಸಾಹಿತ್ಯ ಸಂಪದ ಹಲವು ಬಾರಿ ಕನ್ನಡ ಸಾಹಿತ್ಯ ಅಕಾಡಮಿಯ ಗೌರವಕ್ಕೆ, ಓದುಗರ ಆದರಕ್ಕೆ ಪಾತ್ರವಾಗಿದ್ದು, ಅವುಗಳು ಬರುವ ದಿನಗಳಲ್ಲೂ ಪರಿಗಣನೆಗೆ ಬರುವಂಥವು. ನೊಂದವರಿಗೆ ದನಿ ನೀಡಿದ ಈ ಅಜ್ಜನಿಗೆ ನಮ್ಮ ಅಭಿಮಾನಿ ವಿದ್ವಜ್ಜನ ಅರ್ಪಿಸುತ್ತಿರುವ ಮೆಚ್ಚಿಗೆಯ ಕಾಣಿಕೆ ಈ `ನಿರಂತನ

ಬಿವಿಕೆಯವರು ತಮ್ಮ ಬಾಳಿನಲ್ಲಿ ಹಚ್ಚಿಕೊಂಡು, ಕಟಿಬದ್ಧ ಕಲಕಳಿಯಿಂದ ಹೋರಾಡಿದ, ಇಂದಿಗೂ ಪ್ರಸ್ತುತವಾದ ಹಲವು ಜ್ವಲಂತ ಸಮಸ್ಯೆಗಳನ್ನು ಕುರಿತು ನಾಡಿನ ಪ್ರಗತಿಶೀಲ ವಿದ್ವಾಂಸರು ಈ ಗ್ರಂಥಕ್ಕಾಗಿ ಮೌಲಿಕ ಲೇಖನಗಳನ್ನು ನೀಡಿ ನುಡಿ ನಮಾನವನ್ನು ಸಲ್ಲಿಸಿದ್ದಾರೆ. ಬಂಡವಾಳ ವ್ಯವಸ್ಥೆಯ ನಿರಂತರ ಶೋಷಣೆಯ ಬೆಳವಣಿಗೆ, ರಾಷ್ಟ್ರ, ರಾಜ್ಯ ಪರಿಕಲ್ಪನೆಗಳ ಸಂಘರ್ಷ, ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮೂಡಿಬರುವ ಪ್ರತಿರೋಧದ ನೆಲೆಗಳು, ಮಾರ್ಕ್ಸ್ ಮತ್ತು ವಿಜ್ಞಾನ, ಮಹಿಳಾ ಅಭಿವೃದ್ಧಿ ಅಧ್ಯಯನ, ಹಾಲಿ ತಪ್ಪುತ್ತಿರುವ ವಿದೇಶಾಂಗ ನೀತಿ, ಸ್ವಾತಂತ್ರ್ಯ ಸಂಗ್ರಾಮದ ಆಶಯಗಳು. ಮೌಲ್ಯಗಳು ಮತ್ತು ವಾಸ್ತವ, ರೈತ ಕಾರ್ಮಿಕ ಚಳುವಳಿಗಳು, ಕೋಮುವಾದಕ್ಕೆ ತುತ್ತಾದ ಸಮಾಜದಲ್ಲಿ ಧರ್ಮನಿರಪೇಕ್ಷತೆಗೆ ಕುಗ್ಗುತ್ತಿರುವ ಅವಕಾಶಗಳು ಹೀಗೆಲ್ಲ `ನಿರಂತರದ ತುಂಬಾ ಗಂಭೀರವಾದ ಬರಹಗಳು ತುಂಬಿದೆ. `ನಿರಂತರನಮ್ಮ ನಾಡಿನ ಹೆಸರಾಂತ ವಿದ್ವಜ್ಜನರು ನೀಡಿರುವ ಮಹತ್ವದ, ಮೌಲಿಕ ಲೇಖನಗಳನ್ನೇ ಅಲ್ಲದೇ, ಕಕ್ಕಿಲ್ಲಯರ ಅಭಿಮಾನಿಗಳು ಬರೆದ ಅಭಿನಂದನಾ ಬರಹಗಳನ್ನೂ ಒಳಗೊಂಡಿದೆ. ಒಟ್ಟಾರೆ ಸಂಗ್ರಹಯೋಗ್ಯವಾದ ವೈಚಾರಿಕತೆಯ ಖನಿಯಾಗಿ ರೂಪುಗೊಂಡಿದೆ ಈ `ನಿರಂತರ

– ಪುಸ್ತಕದ ಬೆನ್ನುಡಿಯಿಂದ

ಪುಸ್ತಕದ ಆರಂಭದಲ್ಲಿ ಬಿವಿಕೆಯವರ ಕೈಬರಹದಲ್ಲಿ ಇರುವ `ಸಂಗಾತಿಗಳಿಗೆ ಒಂದು ಮನವಿ’ಇಂದಾಗಿ ಈ ಪುಸ್ತಕ ಇನ್ನಷ್ಟು ಆತ್ಮೀಯವಾಗುತ್ತದೆ. ಇದು `ಆ ದಿಶೆಯಲ್ಲಿ ಯೋಚಿಸಿ, ಯೋಜನೆ ರೂಪಿಸಿ, ಕಾರ್ಯಕ್ಕೆ ಇಳಿಯಿರಿ’ ಎಂದು ಕಿರಿಯ ಸಂಗಾತಿಗಳಿಗೆ ಮನವಿ ಮಾಡುತ್ತದೆ.
– ವಿಶಾಲಮತಿ

ಶೀರ್ಷಿಕೆ: ನಿರಂತರ ಸಂಪಾದಕರು: ಕೆ.ಎಸ್.ಪಾರ್ಥಸಾರಥಿ ಪ್ರಕಾಶನ:ಎಮ್.ಎಸ್. ಕೃಷ್ಣನ್ ಸ್ಮರಣ ಸಂಸ್ಥೆ ಪುಟಗಳು:532 ಬೆಲೆ:ರೂ.300/-


ಸಂಗಾತಿ – ಕವನ ಸಂಕಲನ

scan0017-1

ಈ ಕವನ ಸಂಕಲನದಲ್ಲಿ 106 ಕವಿತೆಗಳಿವೆ. ಜನಸಾಮಾನ್ಯರಿಗೆ ಅರ್ಥವಾಗುವ ಸರಳ ಭಾಷೆಯನ್ನೇ ಬಳಸಿ ಶಿಕ್ಷಣ, ಸಂಸ್ಕಾರ, ಪರಿಸರ, ನೈತಿಕತೆ, ಸಾಮಾಜಿಕ ಕಳಕಳಿ, ಪ್ರೇಮ, ತ್ಯಾಗ ಮುಂತಾದ ಮೌಲ್ಯಗಳನ್ನು ಸಾರುವ ನಿಟ್ಟಿನಲ್ಲಿ ಕವನಗಳನ್ನು ರಚಿಸಿದ್ದಾರೆ. ಕವಿತೆಗಳಲ್ಲಿ ವೈವಿಧ್ಯತೆಯಿದೆ. ಕವಿಗೆ ಸಂಗೀತದ ಲಯದ ಜ್ಞಾನವಿರುವುದರಿಂದ ಇಲ್ಲಿನ ಬಹುಪಾಲು ಕವಿತೆಗಳು ಹಾಡಲು ಯೋಗ್ಯವಾಗಿವೆ. ಕವಿತೆಗಳ ಸಂಯೋಜನೆಯನ್ನು ರಾಗಕ್ಕೆ ಹೊಂದುವಂತೆ ರಚಿಸಲಾಗಿದೆ. ಶೀರ್ಷಿಕೆ: ಸಂಗಾತಿ ಲೇಖಕರು: ಶಂಕರ ಎಸ್. ಲಮಾಣಿ ಪ್ರಕಾಶಕರು: ಶ್ರೀಲಮಾಣಿ ಪ್ರಕಾಶನ ಜಮಖಂಡಿ ಪುಟ: 132 ಬೆಲೆ:ರೂ. 120/-

ಕೃಪೆ : ಸಂಯುಕ್ತ ಕರ್ನಾಟಕ

ಜಾಗತೀಕರಣ ಮತ್ತು ಗ್ರಾಮ ಭಾರತ

scan0014-1

ಹಂಪಿ ಕನ್ನಡ ವಿಶ್ವ ವಿದ್ಯಾಲಯಕ್ಕೆ ಲೇಖಕರು ಡಾಕ್ಟರೇಟ್ ಪದವಿಗಾಗಿ ಸಲ್ಲಿಸಿದ ಪ್ರೌಢ ಪ್ರಬಂಧ ಈಗ ಪುಸ್ತಕ ರೂಪದಲ್ಲಿ ಹೊರಬಂದಿದೆ. ಇಲ್ಲಿನ ಕೆಲವು ಲೇಖನಗಳು ಈ ಹಿಂದೆ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಜಾಗತೀಕರಣದ ಹಲವು ಮಗ್ಗಲುಗಳನ್ನು ಇಲ್ಲಿ ದಾಖಲಿಸಿದ್ದಾರೆ. ಗ್ರಾಮ ಭಾರತದ ಮೇಲೆ ಜಾಗತೀಕರಣದ ಪ್ರಭಾವ ಕುರಿತು ಚರ್ಚಿಸಿದ್ದಾರೆ.

ದೇಶದ ಬೃಹತ್ ಮಾನವ ಸಂಪನ್ಮೂಲವನ್ನು ಶಿಕ್ಷಣ, ಆರೋಗ್ಯ, ನೀಡಿ ಸದುಪಯೋಗಪಡಿಸಿಕೊಂಡರೆ ಮಾತ್ರ ಜಾಗತೀಕರಣದ ಲಾಭ ಭಾರತಕ್ಕೆ ಆಗಬಹುದು. ಈ ಪ್ರಕ್ರಿಯೆಯಲ್ಲಿ ಭಾರತ ಎಚ್ಚರದಿಂದ ಹೆಜ್ಜೆ ಇಡಬೇಕಾಗುವುದು ಎಂದು ಲೇಖಕರು ಅಭಿಪ್ರಾಯ ಪಡುತ್ತಾರೆ.

ಯುವಶಕ್ತಿಯ ಸದ್ಬಳಕೆ, ಪ್ರಾಕೃತಿಕ ಸಂಪತ್ತಿನ ಮಿತಬಳಕೆ, ಆಡಳಿತದಲ್ಲಿ ಶಿಸ್ತು, ಪಾರದರ್ಶಕತೆ, ರಾಜಕೀಯ ಸ್ಥಿರತೆಯನ್ನು ಹೊಂದಿ ಮೇಲಿನ ಅಂಶಗಳನ್ನು ಬಳಸಿಕೊಂಡು ಜಾಗತೀಕರಣವನ್ನು ಸ್ವಾಗತಿಸಬೇಕೆಂದು ಲೇಖಕರ ಅನಿಸಿಕೆಯಾಗಿದೆ.

ಧೀರ್ಘ ಪ್ರಸ್ತಾವನೆ, ಮುನ್ನುಡಿಯೊಂದಿಗೆ ಪುಸ್ತಕ ಬಹಳಷ್ಟು ಸಾಧ್ಯತೆಗಳನ್ನು ಮುಂದಿಡುತ್ತದೆ.

ಶೀರ್ಷಿಕೆ:ಜಾಗತೀಕರಣ ಮತ್ತು ಗ್ರಾಮ ಭಾರತ ಲೇಖಕರು:ಡಾ.ಎನ್.ಜಗದೀಶಕೊಪ್ಪ ಪ್ರಕಾಶಕರು:ಸಿಂಚನ ಗ್ರಂಥಮಾಲೆ ಹಾವೇರಿ ಪುಟ:312 ಬೆಲೆ:ರೂ.160/-

ಕೃಪೆ : ಸಂಯುಕ್ತ ಕರ್ನಾಟಕ

ಮಂಗಳೂರಿನಲ್ಲಿ ಮಿನಿ ಕತೆಗಳ ಮಿನಿ ಪುಸ್ತಕದ ಬಿಡುಗಡೆ.

b-negative-cr-final-1

ರಾಜ್ಯದ ಸಾಹಿತಿಗಳು, ಕಲಾವಿದರು, ಚಿಂತಕರು ಕೂಡಿ, ನಮ್ಮ ಕಡಲ ನಾಡು, ಮಂಗಳೂರಿನಲ್ಲಿ ಆಯೋಜಿಸಿದ ಸೌಹಾರ್ದ ನಡಿಗೆ, ಸೌಹಾರ್ದ ಸಮಾವೇಶದಲ್ಲಿ ಕೆ.ಎಸ್. ರವಿಕುಮಾರ್ ಅವರ ಬಿ ನೆಗೆಟಿವ್ – ನೋವಿನದೊಂದು ಮೂಟೆ ಪುಸ್ತಕ ಬಿಡುಗಡೆಯಾಗಲಿದೆ.

ರಂಗ ನಿರ್ದೇಶಕರಾದ ಪ್ರಸನ್ನ, ಸಾಹಿತಿಗಳಾದ ರಂಜಾನ್ ದರ್ಗಾ, ಡಾ. ಮೀನಾಕ್ಷಿ ಬಾಳಿ, ಸಮುದಾಯ ಸಂಘಟನೆಯ ಅಧ್ಯಕ್ಷರಾದ ಪ್ರೊಫೆಸರ್ ಆರ್ ಕೆ ಹುಡಗಿ, ಟೀವೀ ಧಾರಾವಾಹಿ ನಿರ್ದೇಶಕರಾದ ಬಿ. ಸುರೇಶ್ ಮುಂತಾದ ವಿವಿಧ ರಂಗದ ದಿಗ್ಗಜರ ಸಮ್ಮುಖದಲ್ಲಿ ಈ ಪುಸ್ತಕ ಇಂದು (14-3-2009) ಸಂಜೆ 4 ಗಂಟೆಗೆ ಬಿಡುಗಡೆಯಾಗಲಿದೆ.

ಕರ್ನಾಟಕ ಸೌಹಾರ್ದ ಪರಂಪರೆಯನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆಯ ಬಗ್ಗೆ ಮನವರಿಕೆ ಮಾಡಿಸಬಲ್ಲ ಮಿನಿ ಕತೆಗಳ ಸಂಕಲನವಾದ ಈ ಪುಸ್ತಕ ಎಲ್ಲರ ಕಿಸೆ (pocket) ಗೆ ಬೆಲೆ ಹಾಗೂ ಅಳತೆ ಎರಡೂ ರೀತಿಯಿಂದ ನಿಲುಕುವಂತಹ ಪುಸ್ತಕ.

ಹೌದು ಇದೊಂದು pocket book. ಇದರ ಬೆಲೆ ಕೇವಲ ಇಪ್ಪತ್ತು ರೂಪಾಯಿ ಮಾತ್ರ.

ಕನ್ನಡ ಮಾತ್ರವೇ ಓದಬಲ್ಲ ಹಿರಿಯರು ಮತ್ತು ಇಂಗ್ಲೀಷ್ ಮಾತ್ರವೇ ಓದಬಲ್ಲ ಕಿರಿಯರಿರುವ ಈಗಿನ ಸನ್ನಿವೇಶದಲ್ಲಿ ಮನೆ ಮಂದಿಯೆಲ್ಲ ಓದಬಲ್ಲ ಪುಸ್ತಕ ಇದು.

ಇದು ಚಿಂತನ ಪುಸ್ತಕದ ಕೊಡುಗೆ.

ಕೃಪೆ –  http://chinthanapusthaka.wordpress.com/

ಸಹಯಾನ, ಸ್ಪಂದನ

scan0004-1

ಉತ್ತರ ಕನ್ನಡದ ಎಡ ಪಂಥೀಯ ಚಿಂತಕ, ಸಾಹಿತಿ, ಚಳವಳಿಗಾರ ಆರ್.ವಿ.ಭಂಡಾರಿಯವರ ಕೃತಿಗಳ ಕುರಿತ ಈ ಪುಸ್ತಕ, ಚಳವಳಿಗಳು ಮಾಯವಾಗಿರುವ ಈ ಕಾಲದಲ್ಲಿ ಹಿರಿದಾದ ಒಂದು ಆಶಯ ಹೊಂದಿದೆಯೆಂದೇ ಹೇಳಬೇಕು. ನಾಡಿನ ಸಾಹಿತ್ಯ ಚಿಂತನೆಯ ಮುಖ್ಯ ವಾಹಿನಿಗೆ ಭಂಡಾರಿಯವರ ವಿಚಾರಗಳು ಹರಿದುಬಂದ ಸಮಯವನ್ನು ವಿಮರ್ಶಕ ಕೇಶವ ಶರ್ಮ ಹೀಗೆ ಗುರುತಿಸುತ್ತಾರೆ : `1979ರಲ್ಲಿ ಬಂಡಾಯ ಮತ್ತು ಸಮುದಾಯ ಚಳವಳಿಗಳು ಮುಂಚೂಣಿಗೆ ಬರದೇ ಹೋಗಿದ್ದಲ್ಲಿ ಆರ್.ವಿ. ಯಂಥವರು ಬರೆಯುವ ವಾತಾವರಣ ನಿರ್ಮಾಣವಾಗುತ್ತಿತ್ತೆ ಎಂಬುದು ಕೇಳಿಕೊಳ್ಳಬೇಕಾದ ಪ್ರಶ್ನೆ. ಹೊನ್ನಾವರ ಅರೆ ಅಂಗಡಿಯಂತಹ ಮೂಲೆಯಲ್ಲಿದ್ದುಕೊಂಡು ಯಾವ `ಗಾಡ್ ಫಾದರ್ಸಹಾಯವೂ ಇಲ್ಲದೆ ಅವರು ಏರಿದ ಎತ್ತರ ದೊಡ್ಡದು.ಅವರ ವಿಮರ್ಶಾ ಬರಹಗಳ ಸಂಕಲನವನ್ನು ಪರಿಶೀಲಿಸುತ್ತಾ ಹಿರಿಯ ವಿಮರ್ಶಕ ಸಿ.ಎನ್.ಆರ್. ಈ ಸಂದಿಗ್ಧವನ್ನು ಮುಂದಿಡುತ್ತಾರೆ : ಭಂಡಾರಿಯವರ ಈ ಲೇಖನಗಳು ಸಾಹಿತ್ಯ ಕೃತಿಗಳ ಬಗ್ಗೆ ಎಡ ಪಂಥೀಯರಿಗೆ ಎದುರಾಗುವ ದ್ವಂದ್ವಗಳನ್ನು ದರ್ಶಿಸುತ್ತದೆ. `ಕೆಳ ರಚನೆ – ಮೇಲ್ ರಚನೆಎಂಬ ಮಾರ್ಕ್ಸ್ ನ ರೂಪಕಗಳನ್ನು ಒಂದು `ವೈಜ್ಞಾನಿಕ ಪ್ರಮೇಯದಂತೆ ಕಾಣುವ ಎಡ ಪಂಥೀಯರಿಗೆ ಸಾಹಿತ್ಯವೂ ಸೇರಿದಂತೆ ಕಲೆಗಳು ಒಂದು ಸವಾಲಾಗುತ್ತದೆ. . .ಇದು ಸಾಹಿತ್ಯ ಜಗತ್ತಿನ ಪುರಾತನ ವಾಗ್ವಾದ. ಮರಿ ಮಾರ್ಕ್ಸ್ ವಾದಿಗಳು ಉತ್ತರ ಹುಡುಕುವ ಉತ್ಸಾಹ ತೋರಿಯಾರೆ?

ಭಂಡಾರಿಯವರ ಸಾಹಿತ್ಯವನ್ನು ಅವಲೋಕಿಸುತ್ತಾ ಕವಿ, ಚಿಂತಾಮಣಿ ಕೊಡ್ಲೆಕೆರೆ ಹೀಗೆ ಬರೆದು ಕೆಲವದರಲ್ಲಿ ಸಿದ್ಧಿಸುವ ಕಲಾತ್ಮಕ ಔನತ್ಯವನ್ನು ಪ್ರಶಂಸಿಸುತ್ತಾರೆ: `ಭಂಡಾರಿಯವರು ಈ ಸಮಾಜದ ಒಂದು ಜಾತಿಯ ಕಡೆಯಿಂದ ಪ್ರಯಾಣ ಆರಂಭಿಸುವವರಾದರೆ, ನಾನು ಇನ್ನೊಂದು ಕಡೆಯಿಂದ ಆರಂಭಿಸುವವನು. . . ಮಾನವ ಜೀವನದ ಹಾಗೂ ಸಾಹಿತ್ಯ ಸೃಷ್ಟಿಯ ಅತ್ಯುತ್ತಮ ಕ್ಷಣಗಳೆಲ್ಲವೂ ಎಲ್ಲ ಬಗೆಯ ಕ್ಷುದ್ರ ಗಡಿಗಳನ್ನು ಮೀರುವ ಯತ್ನದಲ್ಲಿದೆ. . . ನಮಗೇ ಅರಿವಿಲ್ಲದಂತೆ, ಅತ್ಯುತ್ತಮ ಸಂಗೀತದ, ಕಾವ್ಯದ, ನಾಟಕ, ಯಕ್ಷಗಾನಗಳ ರಸಾನುಭವದಲ್ಲಿ ನಾವು ಉನ್ನತ ಸ್ಥಿತಿ ತಲುಪುತ್ತೇವೆ.ಅವರ `ಮೀನಪಳ್ದಿಕಥಾಸಂಕಲನದ ಬಹುಪಾಲು ಸಂದರ್ಭದಲ್ಲಿ ಹೆಚ್ಚಿನವರೆಲ್ಲರೂ ಜಾತಿಯ ಹುಳುಗಳು. ಆದರೆ ದಲಿತ ನಿಂಗಪ್ಪ ಮಾಸ್ತರರಂಥವರ ಅಸಹಾಯಕತೆ, ಅತಂತ್ರ ಭಾವ ಹೆಚ್ಚಿಸುವವರಿರುವಂತೆಯೇ ಅವರನ್ನು ಬೆಂಬಲಿಸುವ ರಂಗನಾಥ ಜೋಯ್ಸ ಹೆಸರಿಲ್ಲದ ಒಬ್ಬ ವಿದ್ಯಾರ್ಥಿನಿ ಇರುವುದು ಸಮಾದಾನ. ಮರಾಠಿಯಲ್ಲಿ ಪ್ರಕಟಗೊಂಡ ದಮನಿತರ ಆತ್ಮಕತೆಗಳು ಕನ್ನಡಿಗರ ಭಾವಕೋಶಕ್ಕೆ ಹೊಸದೊಂದು ಆದ್ರ್ರತೆಯನ್ನೇ ನೀಡಿದವು. ಭಂಡಾರಿಯವರ `ಮಂಚನೀಳ್ಗತೆ ಕುರಿತು ಕಿರಿಯ ತಲೆಮಾರಿನ ಯೋಗೀಶ್ ಜಿ ಬರೆಯುವಾಗ ಅಂತಹುದೇ ಒಂದು ಅನುಭವವಾಗುತ್ತದೆ: `ಆರ್.ವಿ.ಯವರ ಕತೆಗಳನ್ನು ಓದುತ್ತ ಬೆಳೆಯುತ್ತಿರುವವನು ನಾನು . . . `ಭಾವನಾಮಾಸಿಕದಲ್ಲಿ ಪ್ರಕಟವಾದ `ಮಂಚದಂತಹ ಕತೆಗಳನ್ನು ಪರೀಕ್ಷೆಗೆ ನಿಗದಿಪಡಿಸಿದ ಪಠ್ಯದಂತೆ ನಿಷ್ಠೆಯಿಂದ ಓದಿದ್ದೆ.

ವಿ.ಎನ್.ವಿ

ಶೀರ್ಷಿಕೆ: ಸಹಯಾನ ಲೇಖಕರು: ಆರ್.ವಿ.ಭಂಡಾರಿ ಪ್ರಕಾಶಕರು: ಚಿಂತನ ಪುಸ್ತಕ ಪುಟಗಳು:125 ಬೆಲೆ:ರೂ.50/-

ಕೃಪೆ : ವಿಜಯ ಕರ್ನಾಟಕ

ಸ್ವಾಮಿ ಅಂಡ್ ಹಿಸ್ `ಫೆಂಡ್ಸ್’!

scan0009

ಕನ್ನಡದಲ್ಲಿ ವ್ಯಂಗ್ಯಚಿತ್ರಗಳ ಸಂಗ್ರಹಗಳು ಕಡಿಮೆ. ಆದರೆ ಈಗ ಹಿರಿಯ ವ್ಯಂಗ್ಯಚಿತ್ರಕಾರ ಕೆ ಆರ್ ಸ್ವಾಮಿಯವರ ಕಾರ್ಟೂನುಗಳು ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳುತ್ತಿವೆ. ಒಂದಲ್ಲ, ಎರಡು ಪುಸ್ತಕಗಳು. ಮೊದಲ ಪುಸ್ತಕದ ಹೆಸರು `ಬ್ರಹ್ಮಗಂಟು-ನಗೆ ನೂರೆಂಟು‘. ಇಲ್ಲಿನ ವ್ಯಂಗ್ಯಚಿತ್ರಗಳೆಲ್ಲಾ ವೈವಾಹಿಕ ಬದುಕಿನತ್ತ ಬೀರಿದ ನಗೆನೋಟಗಳು. ಹೆಚ್ಚಿನವು ಮದುವೆ ಮಂಟಪದಲ್ಲೇ ನಡೆಯುವ ಮೋಜಿನ ಪ್ರಸಂಗಗಳು. ಉಬ್ಬು ಹಲ್ಲು, ಕಪ್ಪು ಹುಡುಗಿ, ವರದಕ್ಷಿಣೆಯಂಥ ಹಳೆಯ ಸಂಗತಿಗಳಿಂದ ಹಿಡಿದು ವೆಬ್ ಕ್ಯಾಮರಾ ಮುಂದೆ ಕುಳಿತು ನಡೆಸುವ ಮದುವೆಗಳವರೆಗೂ ಇಲ್ಲಿನ ಕಾರ್ಟೂನುಗಳ ವ್ಯಾಪ್ತಿ ಇದೆ. ಸ್ವಾಮಿ ಇವನ್ನು ಹಲವು ವರ್ಷಗಳ ಅವಧಿಯಲ್ಲಿ ಬರೆದದ್ದು ಎಂಬುದನ್ನೂ ನಾವು ನೆನಪಿಡಬೇಕು. ಓದುತ್ತಿದ್ದರೆ ನಗು ಸಹಜವಾಗಿ ಉಕ್ಕುತ್ತದೆ. ಸಿಲ್ಲಿ ಎನ್ನುವ ಕಾರ್ಟೂನುಗಳು ಇಲ್ಲಿಲ್ಲವೇ ಇಲ್ಲ ಎನ್ನಬಹುದು. ಒಮ್ಮೆಗೇ ಹತ್ತಾರು ಹಳೆಯ ಯುಗಾದಿ, ದೀಪಾವಳಿ ವಿಶೇಷಾಂಕಗಳನ್ನು ಹರಡಿಕೊಂಡು ಕೂತ ಅನುಭವವಾಗುತ್ತದೆ.

ಎರಡನೇ ಪುಸ್ತಕದಲ್ಲಿರುವ ಕಾರ್ಟೂನುಗಳಿಗೆ ಅಡಿಬರಹಗಳಿಲ್ಲ. ಹಾಗಾಗಿ `ಲಾಫ್ಟರ್ ಡೋಸ್ಎಂಬ ಹೆಸರಿನ ಈ ಇಂಗ್ಲೀಷ್ ಪುಸ್ತಕಕ್ಕೆ ಭಾಷೆಯ ಹಂಗಿಲ್ಲ. `ಶಂಕರ್ಸ್ ವೀಕ್ಲಿ‘, `ಎನ್ಲೈಟ್ನಂತಹ ಇಂಗ್ಲೀಷ್ ನಿಯತಕಾಲಿಕಗಳಲ್ಲಿ ಪ್ರಕಟವಾದ ಚಿತ್ರಗಳೂ ಈ ಸಂಗ್ರಹದಲ್ಲಿವೆ. ಮಾತಿಲ್ಲದೆ ಸುಮ್ಮನೆ ನೋಡಿದ್ದಕ್ಕೇ ನಗಿಸುವ ಈ ಚಿತ್ರಗಳು ಕೊಡುವ ಮಜಾನೇ ಬೇರೆ.

ಈ ಎರಡೂ ವಿಭಿನ್ನ ಆಕಾರದ, ಆಕರ್ಷಕ ಪುಸ್ತಕಗಳನ್ನು ಈ ಬುಧವಾರ (ಮಾಚ್ 11) ಬೆಳಿಗ್ಗೆ 10 ಗಂಟೆಗೆ ಎಂಜಿ ರೋಡ್ ಹತ್ತಿರದ ಇಂಡಿಯನ್ ಕಾರ್ಟೂನ್ ಗ್ಯಾಲರಿಯಲ್ಲಿ ಗಿರೀಶ್ ಕಾಸರವಳ್ಳಿ ಬಿಡುಗಡೆ ಮಾಡಲಿದ್ದಾರೆ. ಅಂದಿನಿಂದ ಈ ತಿಂಗಳ 26ನೇ ತಾರೀಖಿನವರೆಗೆ ಸ್ವಾಮಿಯವರ ವ್ಯಂಗ್ಯಚಿತ್ರಗಳ ಪ್ರದರ್ಶನವೂ ಏರ್ಪಾಟಾಗಿದೆ. ಅಲ್ಲಿ ಹೋದರೆ ಕಾರ್ಟೂನುಗಳ ಲೋಕದಲ್ಲಿ ಒಂದಷ್ಟು ಹೊತ್ತು ಕಳೆದುಹೋಗಬಹುದು. ಅದು ಸಾಧ್ಯವಾಗದಿದ್ದರೂ ಪುಸ್ತಕಗಳನ್ನು ನೋಡಿ ನಗಲು ಮರೆಯದಿರಿ

ಕೃಪೆ – ವಿಜಯ ಕರ್ನಾಟಕ

ಕೃಷಿ ಕಾರ್ಯ ಮೂಲತಃ ಸ್ತ್ರೀಯರ ಆವಿಷ್ಕಾರ

scan0007-1

`ಮಾತೆಯರು ಮಾನ್ಯರಾಗಿದ್ದಾಗಡಾ. ದೇವಿಪ್ರಸಾದ್ ಚಟ್ಟೋಪಧ್ಯಾಯರ ಪುಟ್ಟ ಅಂತೆಯೇ ವಿಚಾರ ಪ್ರಚೋದಕ ಪುಸ್ತಕ.

ಕೃಷಿಕಾರ್ಯದ ತಿಳುವಳಿಕೆಯಿಂದಲೇ ಎಲ್ಲ ನಾಗರೀಕತೆಗಳು ಉಗಮಗೊಂಡವು. ಈಜಿಪ್ಟ್, ಮೆಸಪಟೋಮಿಯ ಮತ್ತು ಮೊಹೆಂಜೋದಾರೋ – ಈ ಅಪರೂಪದ ಹಾಗೂ ವಿಸ್ಮಯಕರ ನಾಗರೀಕತೆಗಳೆಲ್ಲಾ ನದಿ ದಂಡೆಗಳ ಮೇಲೆಯೇ ಬೆಳೆದವಲ್ಲವೇ? ಕೃಷಿಕಾರ್ಯದ ತಿಳುವಳಿಕೆ ಖಗೋಳ ವಿಜ್ಞಾನದ, ತರುವಾಯ ಇತರ ವಿಜ್ಞಾನಗಳ ಆವಿಷ್ಕಾರಕ್ಕೆ ಕಾರಣವಾಯಿತು.

ಕೃಷಿ ಕೆಲಸದ ಆವಿಷ್ಕಾರವೇ ನಾಗರೀಕತೆಗಳ ಬುನಾದಿ ಎಂಬುದು ಸರಿಯಷ್ಟೆ. ಆದರೆ ಈ ಆವಿಷ್ಕಾರದ ಮೂಲ ಕಾರಣಕರ್ತರು ಯಾರು? ಪುರುಷರೋ? ಸ್ತ್ರೀಯರೋ? ಉತ್ತರ ಕೇಳಿದರೆ ಈಗಿನವರಾದ ನಮಗೆ ಆಶ್ಚರ್ಯವಾಗಬಹುದು. ಏಕೆಂದರೆ ಕೃಷಿ ಕಾರ್ಯ ಮೂಲತಃ ಪುರುಷ ಆವಿಷ್ಕಾರವೇನೂ ಆಗಿರಲಿಲ್ಲ. ಅದು ಸ್ತ್ರೀಯರ ಆವಿಷ್ಕಾರ!

ಇಂಥ ಹಲವು ವಿಷಯಗಳನ್ನು ತಿಳಿಸಿಕೊಡುವ ಈ ಪುಸ್ತಕವನ್ನು ಕಲ್ಕತ್ತೆಯ ನ್ಯಾಷನಲ್ ಲೈಬ್ರರಿಯ ಶ್ರೀ ಜಿ.ಕುಮಾರಪ್ಪ ಅವರು ಬಂಗಾಳಿ ಭಾಷೆಯಿಂದ ಅನುವಾದಿಸಿದ್ದಾರೆ.

`ನಾವೀಗ ಮಾತೃಪ್ರಧಾನ ಸಮಾಜವನ್ನು ಮನಸ್ಸಿನಲ್ಲಿರಿಸಿಕೊಂಡು ಭಾರತೀಯ ಸಂಸ್ಕೃತಿಯನ್ನು ತಿಳಿಯುವ ಪ್ರಯತ್ನವನ್ನು ಮಾಡೋಣ

ವೈದಿಕ ಕಾಲದ ಜನರ ವಿಚಾರವನ್ನು ಮೊದಲು ಆಲೋಚಿಸೋಣ. ಯಾವುದು ಅವರ ಜೀವನಾಧಾರದ ಮೂಲ ಉದ್ದೇಶವಾಗಿದ್ದಿತು? ಪಶುಪಾಲನೆ. ಅವರು ಕೃಷಿ ಕಾರ್ಯ ತಿಳಿದಿದ್ದರೇ? ತಿಳಿದಿದ್ದರೆ, ಎಷ್ಟರ ಮಟ್ಟಿಗೆ? ಇದರ ಬಗ್ಗೆ ವಿಭಿನ್ನವಾದ ಚಚರ್ೆಗಳಿವೆ. ಆದರೆ ಅವರ ಜೀವನೋಪಾಯಕ್ಕೆ ಆದಿ ಕಾಲದಲ್ಲಿ ವ್ಯವಸಾಯವು ಮೂಲ ಉದ್ಯೋಗವಾಗಿರಲಿಲ್ಲ. ಬದಲಾಗಿ ಪಶುಪಾಲನೆ ಎನ್ನುವ ವಿಚಾರದಲ್ಲಿ ಯಾವುದೇ ಸಂದೇಹಗಳಿಲ್ಲ.

ಇದು ಸರಿ ಇದ್ದಲ್ಲಿ, ಅವರ ಸಮಾಜದ ಲಕ್ಷಣಗಳು ಹೇಗಿದ್ದವು? ಆ ಸಮಾಜ ಪಿತೃ ಪ್ರಧಾನ ಸಮಾಜವಾಗಿದ್ದಿತು. ಆ ಸಮಾಜದ ಮನುಷ್ಯನು ಕಲ್ಪಿಸಿದ ದೇವಾನುದೇವತೆಗಳಲ್ಲಿ ದೇವನು ದೊಡ್ಡವನೋ? ಅಥವಾ ದೇವಿಯೋ? ನಿಶ್ಚಯವಾಗಿಯೂ ಪುರುಷ ದೇವತೆಗಳು ಅಗ್ರಸ್ಥಾನದಲ್ಲಿದ್ದಾರೆ. …. …. ….

ಆದರೆ ಭಾರತೀಯ ಸಂಸ್ಕೃತಿ ಎಂದು ಹೇಳುವಲ್ಲಿ ವಾಸ್ತವವಾಗಿ ವೈದಿಕ ಕಾಲದ ಕಾಣಿಕೆ ಎಷ್ಟು? ಬಹಳ ಕಡಿಮೆ. ನಮ್ಮ ಬಂಗಾಳದ ಅಥವಾ ಯಾವುದೇ ಬೇರೆ ಭಾಗದ ವಿಚಾರವನ್ನೇ ನೋಡುವಾ. ದುರ್ಗಾ, ಕಾಳಿ, ಜಗದ್ಧಾತ್ರಿ, ಅನ್ನಪೂರ್ಣಾ, ಲಕ್ಷ್ಮಿ – ಇನ್ನಷ್ಟು. ಇವರೆಲ್ಲಾ ದೇವಿಯರು, ದೇವರುಗಳಲ್ಲ. ಅಲ್ಲದೆ, ವೇದಕಾಲದ ದೇವಗಣದೊಂದಿಗೆ ಇವರ ಸಂಪರ್ಕ ಹೆಚ್ಚೇನೂ ಇಲ್ಲ. ವಾಸ್ತವವಾಗಿ, ವೇದಕಾಲದ ಈ ಪುರುಷ ದೇವತೆಗಳು ದೇಶದ ಜನರ ಮನಸ್ಸಿನಲ್ಲಿ ಸ್ಥಾನವನ್ನೇನೂ ಗಳಿಸಿಕೊಂಡಿಲ್ಲ. ಇಂದ್ರ, ಮಿತ್ರ, ವರುಣ, ಪೂಷನ್, ಮಾತರಿಶ್ವನ್, ಅಗ್ನಿ ಮುಂತಾದವರೆಲ್ಲರನ್ನೂ ಕುರಿತು ತಲೆ ಕೆಡಿಸಿಕೊಳ್ಳುತ್ತಿರುವವರು ಕೇವಲ ಪಂಡಿತರು ಮಾತ್ರ.

ಖಾಸಿಯರನ್ನು ಕುರಿತು ಆಲೋಚಿಸುವಾಗ ನಾವು ಒಂದು ವಿಚಾರವನ್ನು ಕಂಡುಕೊಂಡಿದ್ದೇವೆ: ದೇವ-ದೇವತೆಗಳ ವಿಚಾರ ಎಷ್ಟು ಮುಖ್ಯ ಎನ್ನುವುದೇ ಆ ವಿಚಾರ. ಆ ದೇವರುಗಳಲ್ಲಿ ಪುರುಷ ದೇವತೆಗಳ ಮಹಾತ್ಮೆಯನ್ನು ಸ್ತ್ರೀ ದೇವತೆಗಳ ಮಹಾತ್ಮೆ ಮುಚ್ಚಿ ಹಾಕಿದ್ದಲ್ಲಿ, ಮಾತೃಪ್ರಧಾನ ಸಮಾಜದ ಸ್ಮೃತಿ ಇದರ ಹಿನ್ನೆಲೆಯಲ್ಲಿ ಅಡಗಿದೆ, ಎಂದು ನಾವು ಸಂದೇಹ ಪಡಬೇಕಾಗಿದೆ.

… … ….

ಭಾರತೀಯ ನಾಗರೀಕತೆಯ ಮೂಲದಲ್ಲಿ ಮಾತೃ ಪ್ರಧಾನ ಸಮಾಜದ ಇತಿಹಾಸವಿರುವ ಕಾರಣವು ಅಸ್ಪಷ್ಟವೇನೂ ಅಲ್ಲ. …

ಹೀಗೆ ಕಾರಣ ಸಹಿತವಾಗಿ ಮಾನವ ನಾಗರೀಕತೆಗೆ ಮಹಿಳೆಯ ಪಾತ್ರ ಬಹು ದೊಡ್ಡದು ಎಂದು ಈ ಪುಸ್ತಕದಲ್ಲಿ ಪ್ರತಿಪಾದಿತವಾಗಿದೆ. ಅಲ್ಲದೆ ಸ್ತ್ರೀ ಪ್ರಧಾನ ಸಮಾಜ ಹೇಗೆ ಪುರುಷ ಪ್ರಧಾನವಾಗಿ ಮಾರ್ಪಡುತ್ತದೆ ಹಾಗೇ ಪುರುಷ ಪ್ರಧಾನವಾಗಿದ್ದ ಸಮಾಜ ಹೇಗೆ ಸ್ತ್ರೀ ಪ್ರಧಾನವಾಗಿ ಮಾರ್ಪಡುತ್ತದೆ ಎನ್ನುವುದು ಈ ಪುಸ್ತಕದಿಂದ ನಾವು ತಿಳಿಯಬಹದುದು. ಆ ತಿಳುವಳಿಕೆಯ ಆಧಾರದಲ್ಲಿ ಪುರುಷ ಪ್ರಧಾನ ಅಥವಾ ಸ್ತ್ರೀ ಪ್ರಧಾನ ಸಂಸ್ಕೃತಿಯನ್ನು ಹಿಂದೆ ಬಿಟ್ಟು ಲಿಂಗ ಭೇದವಿಲ್ಲದ ಸಮಾಜ ನಿರ್ಮಾಣ ಮಾಡಬೇಕಾಗಿದೆ ಎಂದು ಈ ಪುಸ್ತಕ ಓದಿದಾಗ ನನಗೆ ಅನಿಸಿದ ಭಾವನೆ.

– ವಿಶಾಲಮತಿ

ಶೀರ್ಷಿಕೆ: ಮಾತೆಯರು ಮಾನ್ಯರಾಗಿದ್ದಾಗ ಲೇಖಕರು: ಡಾ.ದೇವಿಪ್ರಸಾದ್ ಚಟ್ಟೋಪಧ್ಯಾಯ ಪ್ರಕಾಶಕರು: ನವಕರ್ನಾಟಕ ಪ್ರಕಾಶನ ಪುಟಗಳು:55 ಬೆಲೆ:ರೂ.20/-

ಮತ್ತೆ ಉಮರ್

scan0001

ಉಮರ್ ಖಯ್ಯಾಮನ ರೂಬಾಯತುಗಳನ್ನು ಡಿವಿಜಿ ಕನ್ನಡಕ್ಕೆ ತಂದಿದ್ದರು. ಕೆಲವು ವರುಷಗಳ ಹಿಂದೆ ಶಾ. ಬಾಲೂರಾವ್ ಕೂಡ ಅವನ್ನು ಅನುವಾದಿಸಿದ್ದರು. ಇದೀಗ ಅವು ಜಗದೀಶ್ ಕೊಪ್ಪ ಅನುವಾದದಲ್ಲಿ ಮತ್ತೆ ಕನ್ನಡಕ್ಕೆ ಕಾಲಿಟಿವೆ.

ಖಯ್ಯಾಮ್ ಕವಿತೆಗಳ ಇಂಗ್ಲೀಷ್ ಅನುವಾದಗಳ ಪೈಕಿ ಅತ್ಯುತ್ತಮ ಎಂದು ಕರೆಸಿಕೊಳ್ಳುವುದು ಪಿಟ್ ಜೆರಾಲ್ಡ್ ಅವರ ಭಾಷಾಂತರ. ಡಿ.ವಿ.ಜಿ ಮತ್ತು ಬಾಲೂರಾವ್ ಕೂಡ ಅದನ್ನೇ ಇಟ್ಟುಕೊಂಡು ಕವಿತೆಗಳನ್ನು ಅನುವಾದ ಮಾಡಿದ್ದರು. ಜಗದೀಶ್ ಕೂಡ ಅದನ್ನೇ ಮುಂದಿಟ್ಟುಕೊಂಡಿದ್ದಾರೆ.

There was the Door to which I found no Key;

There was the Veil through which I might not see:

Some little talk awhile of ME and THEE

There was-and then no more of THEE and ME.

ಖಯ್ಯಾಮನ ಈ ಜನಪ್ರಿಯ ರೂಬಾಯತನ್ನು ಡಿವಿಜಿ ಹೀಗೆ ಅನುವಾದಿಸಿದ್ದರು:

ಹಿಂದೊಂದು ಬಾಗಿಲ್; ಆ ಬೀಗಕ್ಕೆ ಕೈ ಕೈಯಿಲ್ಲ.

ಮುಂದೊಂದು ತೆರೆ; ಅದನ್ನೆತ್ತಿ ನೋಡಲಳವಲ್ಲ.

ಈ ಎಡೆಯೊಳೊಂದೆರಡು ದಿನ ನಾನು ನೀನೆಂದು

ಹರಟುವೆವು; ಬಳಿಕಿಲ್ಲ, ನಾನು ನೀನುಗಳು

ಆ ಕಾಲಕ್ಕೊಪ್ಪುವ ಭಾಷೆಗೆ ತಕ್ಕಂತೆ ಡಿವಿಜಿ ಅನುವಾದಿಸಿದ್ದರೆ, ಆಮೇಲೆ ಅದನ್ನು ಶಾ. ಬಾಲೂರಾವ್ ಲಯವನ್ನು ಬಿಟ್ಟು ಅರ್ಥವನ್ನಷ್ಟೇ ಉಳಿಸಿಕೊಂಡು ಕನ್ನಡಕ್ಕೆ ತಂದರು. ಇದೀಗ ಕೊಪ್ಪ ಅವರ ಅನುವಾದ ಹೀಗಿದೆ:

ಸಖಿ, ಅಲ್ಲೊಂದು ಮರವಿರಲಿ

ಆ ಮರದಡಿಯಲ್ಲಿ

ಒಂದಿನಿತು ರೊಟ್ಟಿ

ಬಟ್ಟಲು ತುಂಬ ಮದ್ಯ

ಜೊತೆಗೆ ನೀನು

ನಿನ್ನ ಹಾಡುಗಳ ಅನುರಣಗಳಿರಲಿ

ಇವಿಷ್ಟು ಸಾಕು

ಸ್ವರ್ಗವಾದರೂ ಏಕೆ ಬೇಕು?

ಅನುರಣವೋ ಅನುರಣನವೋ ಎಂಬ ಜಿಜ್ಞಾಸೆ ಹಾಗೇ ಉಳಿದುಕೊಳ್ಳುತ್ತದೆ.

ಶೀರ್ಷಿಕೆ: ಉಮರ್ ಖಯ್ಯಾಮನ ಪದ್ಯಗಳು ಲೇಖಕರು: ಎನ್.ಜಗದೀಶ್ ಕೊಪ್ಪ ಪ್ರಕಾಶಕರು: ಲಡಾಯಿ ಪ್ರಕಾಶನ ಪುಟಗಳು:80 ಬೆಲೆ:ರೂ.50/-

ಕೃಪೆ : ಕನ್ನಡ ಪ್ರಭ

ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ

scan0040-1

ಮನಸೂರೆ

ಮನಸೂರೆ ಹೋಯಿತೋ

ಹೋ ಇದ್ದಕ್ಕಿದ್ದಂತೆ

ಈ ಗೀತೆ ಹಾಡಿದುದು

ಹೊಸ ಸಪ್ನ ಬಿದ್ದಂತೆ

ಅಂತೆ, ಇಂತೆ, ಎನ್ನುತ್ತಾ

ಮನಮೀರಿ ನಾನಿಂತೆ.

ಕಳಚಿ ಬಿದ್ದಿತು ಗೆಳೆಯ

ಜಗದ ಸಂತೆಯ ಚಿಂತೆ

ಮಲ್ಲಿಕಾರ್ಜುನ ಮನ್ಸೂರರ ಗಾಯನ ಕೇಳಿ ಬೇಂದ್ರೆ ಬರೆದ ಸಾಲುಗಳಿವು. ಈ ಗಾನಜೀವನದ ಮಹೋತ್ಸವದ ಗಳಿಗೆಗಳನ್ನು ಕುರಿತು ಮನ್ಸೂರರು 1983ರಲ್ಲೇ ಬರೆದಿದ್ದರು. ಆ ಅನುಭವದ ಸವಿಬುತ್ತಿಗಂಟಿಗೆ `ನನ್ನ ರಸಯಾತ್ರೆಎಂದು ಹೆಸರಿಟ್ಟಿದ್ದರು. ಅದೀಗ 25 ವರುಷಗಳ ನಂತರ ಮರುಮುದ್ರಣ ಕಾಣುತ್ತಿದೆ.

ಮನ್ಸೂರರನ್ನು ಈ ಕೃತಿ ಬರೆಯುವಂತೆ ಒತ್ತಾಯಿಸಿದವರು ಅನಕೃ. ಆಮೇಲೆ ಪುಲ ದೇಶಪಾಂಡೆ, ರಮೇಶ ನಾಡಕರ್ಣಿ ಮತ್ತು ಬಿಎ ಸನದಿಯವರು ಬೆನ್ನು ಬಿಡದೇ ಕಾಡಿದಾಗ ಹೊರಬಂದದ್ದು `ನನ್ನ ರಸಯಾತ್ರೆಎಂದು ಮನ್ಸೂರರು ಬರೆದುಕೊಂಡಿದ್ದಾರೆ.

ಮನ್ಸೂರರು ವಚನಗಳನ್ನು ಹಾಡುವಂತೆ ಪ್ರೇರೇಪಿಸಿದ್ದು ಅನಕೃ. ಆ ಪುಟ್ಟ ಪ್ರಸಂಗ ಹೀಗೆ:

ಕೃಷ್ಣರಾಯರು ನನ್ನ ಹಾಡನ್ನು ಕೇಳಿ ತುಂಬಾ ಸಂತೋಷಪಟ್ಟರು. ನಮ್ಮ ಸ್ನೇಹ ಬೆಳೆಯಿತು. ಅವರೊಮ್ಮೆ `ನೀವೇಕೆ ವಚನವನ್ನು ಹಾಡುವುದಿಲ್ಲ?’ ಎಂದು ಕೇಳಿದರು ಮತ್ತು ತಾವೇ ಅತ್ತಿಕೊಳ್ಳಗುಡ್ಡದ ಮೇಲೆ `ವಚನದಲ್ಲಿ ನಾಮಾಮೃತ ತುಂಬಿಹಾಡಿ ತೋರಿಸಿದರು.

ಹೀಗೆ ನೆನಪಿಸಿಕೊಳ್ಳುತ್ತಾ ಮನ್ಸೂರರು ಬರೆಯುತ್ತಾರೆ, `ನನಗೆ ಇದುವರೆಗೆ ಸಿಕ್ಕ ಶ್ರೇಯದಲ್ಲಿ ನನ್ನ ಸಾಧನೆಯಷ್ಟೇ ಗೆಳೆಯರ ಸ್ನೇಹ ಸೌಹಾರ್ದಗಳ ಪಾಲೂ ಉಂಟು.

ಹಿರಿಯ ಗಾಯಕನ ಜೀವನಕತೆಯನ್ನು ಓದುತ್ತಾ ನಮ್ಮ ಜೀವನಪ್ರೀತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂಬುದಕ್ಕೆ `ನನ್ನ ರಸಯಾತ್ರೆಉದಾಹರಣೆ.

ಶೀರ್ಷಿಕೆ: ನನ್ನ ರಸಯಾತ್ರೆ ಲೇಖಕರು: ಮಲ್ಲಿಕಾರ್ಜುನ ಮನ್ಸೂರ್ ಪ್ರಕಾಶಕರು: ಅಭಿನವ ಪುಟಗಳು:120 ಬೆಲೆ:ರೂ.60/-

ಕೃಪೆ : ಕನ್ನಡ ಪ್ರಭ