ಈ ಶಾಲೆ ನನಗೆ ಇಷ್ಟವಾಯಿತು

scan0015

“ಈಗ ನೀನು ಈ ಶಾಲೆಯ ವಿದ್ಯಾರ್ಥಿನಿ” ಎಂದು ಮುಖ್ಯೋಪಧ್ಯಾಯರು ಹೇಳಿದ ಮೇಲೆ ತೊತ್ತೊ-ಚಾನ್ ನಾಳೆ ಬೆಳಗಾಗುವುದನ್ನೇ ಕಾಯ್ದಳು. ಈ ಮೊದಲು ಆಕೆ ಎಂದೂ ಹಾಗೆ ಕಾಯ್ದಿರಲಿಲ್ಲ.

ಪುಟ್ಟ ತೊತ್ತೊ-ಚಾನ್ ತೊಮೊಯೆ ಗಾಕುಯೆನ್ ಶಾಲೆಯ ವಾತಾವರಣ ತಾನು ಹಾಗೂ ತನ್ನ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಇಷ್ಟವಾಗಬೇಕು ಹಾಗೂ ಸಮವಸ್ತ್ರ ಮತ್ತು ಪಠ್ಯಕ್ರಮಕ್ಕಿಂತ ಮಕ್ಕಳಿಗೆ ಬೇಕಾದ ಸ್ವಾದಿಷ್ಟ ಊಟದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಮುಖ್ಯೋಪದ್ಯಾಯರು ಇರಬೇಕು ಎಂದು ಆಶಿಸಿದ್ದಳು. ಅಲ್ಲಿ ಎಲ್ಲ ಮಕ್ಕಳು ಸಂಗೀತ ಕಲಿಯುತ್ತಿದ್ದರು, ಆಟವಾಡುತ್ತಿದ್ದರು, ಬೇಸಿಗೆಯಲ್ಲಿ ಹೊರಗೆ ಕ್ಯಾಂಪು ಹಾಕುತ್ತಿದ್ದರು, ಬಿಸಿನೀರಿನ ಬುಗ್ಗೆಯಲ್ಲಿ ನಡೆದಾಡುತ್ತಿದ್ದರು, ನಾಟಕ ಆಡುತ್ತಿದ್ದರು ಹಾಗೂ ಬಯಲಿನಲ್ಲಿ ಅಡುಗೆ ಮಾಡುವ ಆನಂದ ಅನುಭವಿಸುತ್ತಿದ್ದರು. ಆ ಮಕ್ಕಳಲ್ಲಿ ಕೆಲವರು ಹಾಡುಗಾರರಿದ್ದರು, ಆಟಗಾರರಿದ್ದರು ಹಾಗೂ ಒಬ್ಬ ಭಾವೀ ಡಾಕ್ಟರ‍್ ಕೂಡಾ ಇದ್ದ.

ಇದೆಲ್ಲವೂ ಸ್ನೇಹಶೀಲ ಹಾಗೂ ಕಲ್ಪನಾಶೀಲ ಮುಖ್ಯೋಪಧ್ಯಾಯ ಶ್ರೀ ಕೊಬಾಯಾಶಿ ಅವರಿಂದ ಸಾಧ್ಯವಾಯಿತು. ಅವರು ತೊತ್ತೊ-ಚಾನ್ ಗೆ ಯಾವಾಗಲೂ ಹೇಳುತ್ತಿದ್ದರು. “ನೀನು ಖಂಡಿತಾ ಒಳ್ಳೆಯ ಹುಡುಗಿ!”. ನಿಸ್ಸಂದೇಹವಾಗಿ ಅವರು ಇದೇ ಪ್ರೋತ್ಸಾಹಕ ಮಾತನ್ನು ಇತರ ಮಕ್ಕಳಿಗೂ ಹೇಳುತ್ತಿದ್ದಿರಬೇಕು. ಮಕ್ಕಳನ್ನು ಉಲ್ಲಾಸದಿಂದಿಡುವ ಕಡೆಗೆ ಅವರು ಹೆಚ್ಚಿನ ಗಮನ ಹರಿಸುತ್ತಿದ್ದರು. ಅವಳ ಶಾಲೆ ಮಕ್ಕಳಿಗೆ ಮನೆಯಿಂದ ದೂರವಿರುವ ಮತ್ತೊಂದು ಮನೆಯಂತಿತ್ತು. ಆಗಿನ ಪುಟ್ಟ ಹುಡುಗಿ ತೊತ್ತೊ-ಚಾನ್ ಈಗ ದೊಡ್ಡವಳಾಗಿ ತೆತ್ಸುಕೋ ಕುರೋಯಾನಾಗಿ ಎಂಬ ಹೆಸರಿನಲ್ಲಿ ಜಪಾನಿನಾದ್ಯಂತ ಪ್ರಸಿದ್ಧಿ ಪಡೆದ ಯಶಸ್ವೀ ಟೆಲಿವಿಷನ್ ಕಲಾವಿದೆ. ಜಪಾನಿನಿಂದ ಯುನಿಸೆಫ್ ನ ಸದ್ಭಾವನಾ ರಾಯಬಾರಿಯಾಗಿ ನೇಮಕಗೊಂಡಿರುವ ಅವರಿಂದ ಮಕ್ಕಳು, ಹಾಗೆಯೇ ಮಕ್ಕಳ ಜೊತೆಯೇ ಒಂದಲ್ಲ ಒಂದು ರೀತಿಯ ಸಂಬಂಧವನ್ನು ಹೊಂದಿರುವ ಶಿಕ್ಷಕರು, ತಂದೆ-ತಾಯಿಯರು, ಅಜ್ಜ-ಅಜ್ಜಿಯರು ತಿಳಿದುಕೊಳ್ಳುವುದು ಬಹಳಷ್ಟಿದೆ. ಜಪಾನಿನ ಈ ಜನಪ್ರಿಯ ಪುಸ್ತಕ ತನ್ನ ಪ್ರಭಾವಶಾಲಿ ಸಂದೇಶ ಸಾರುತ್ತಿದೆ:

ಅರಳಲಿ ಹೂಗಳು ನೂರಾರು

ನಡೆಯಲಿ ವಿಚಾರ ಸಂಘರ್ಷಗಳು ಸಾವಿರಾರು.

– ಪುಸ್ತಕದ ಬೆನ್ನುಡಿಯಿಂದ

ಮಕ್ಕಳ ಕುರಿತು ಮಕ್ಕಳೇ ಪ್ರಧಾನ ಪಾತ್ರದಲ್ಲಿರುವ ಒಂದು ಕಾದಂಬರಿ ತೊತ್ತೊ-ಚಾನ್ . ‘ತೊತ್ತೊ-ಚಾನ್’ ಅತ್ಯಂತ ಹೆಚ್ಚು ಬಾಷೆಗಳಿಗೆ ಅನುವಾದಗೊಂಡ ಅತ್ಯಂತ ಹೆಚ್ಚು ಮಾರಾಟ ಕಂಡ ಕೃತಿ. ಈ ಬೇಸಿಗೆ ರಜೆಯಲ್ಲಿ ನಿಮ್ಮ ಮಕ್ಕಳಿಗೆ ಓದಿಸಿ ನೀವೂ ಓದಿ ಎಂಬ ಆಶಯ ‘ಕನ್ನಡ ಪ್ರಭ’ ದ್ದು.

ಶೀರ್ಷಿಕೆ: ತೊತ್ತೊ-ಚಾನ್ ಲೇಖಕರು:ತೆತ್ಸುಕೊ ಕುರೋಯಾನಾಗಿ ಅನುವಾದ:ವಿ.ಗಾಯತ್ರಿ  ಪ್ರಕಾಶಕರು:ನ್ಯಾಷನಲ್ ಬುಕ್ ಟ್ರಸ್ಟ್  ಪುಟಗಳು:೧೫೩ ಬೆಲೆ:ರೂ೪೦/-

ಸಂಕ್ರಮಣ

scan0013

ಸರಳ ಭಾಷೆ, ನಿರೂಪಣೆ, ನೇರ ಶೈಲಿಯಿಂದ ಗಮನ ಸೆಳೆಯುವ ಲೇಖಕಿ ವಸುಮತಿ ಉಡುಪ. ಕಾದಂಬರಿ, ಕಥಾಸಂಕಲನ, ಪ್ರಬಂಧ . . . ಹೀಗೆ ಗುರುತಿಸಿಕೊಂಡಿರುವ ವಸುಮತಿ ಉಡುಪ ಅವರು ಕತೆ ಹೇಳುವ ರೀತಿಯಲ್ಲಿ ಕ್ಲಿಷ್ಟತೆಯಿಲ್ಲ. ಮಹಿಳಾ ಓದುಗರಿಗಂತೂ ಅವರ ಕಥೆಗಳು ಅಚ್ಚುಮೆಚ್ಚು. ಅವರ ಕಥೆಗಳ ಸಂಗ್ರಹ ‘ಸಂಕ್ರಮಣ’ ಈಗ ಹೊರಬಂದಿದೆ. ಮಲೆನಾಡಿನ ಪರಿಸರ, ಭಾಷೆ, ಜೀವನ ಶೈಲಿ ಇವರ ಬಹುತೇಕ ಕಥೆಗಳ ವಸ್ತು. ಈ ಸಂಕಲನದ ಬೆಲೆ ೯೫ ರೂಪಾಯಿ. ೧೭ ಕಥೆಗಳ ಓದಿಗೆ ಇದೇನೂ ಹೆಚ್ಚೆನಿಸುವುದಿಲ್ಲ

ಶೀರ್ಷಿಕೆ: ಸಂಕ್ರಮಣ ಲೇಖಕರು:ವಸುಮತಿ ಉಡುಪ ಪ್ರಕಾಶಕರು : ಅಂಕಿತ ಪ್ರಕಾಶನ ಬೆಲೆ:ರೂ.೯೫/-

ಕೃಪೆ:ಉದಯವಾಣಿ

ಅರಳಲೊಂದು ನಾಳೆ, ತೆರೆಯಿರಿಂದು ಹಾಳೆ – ಅಂಕಿತ ಟಾಪ್ 10

scan0014

1. ಮಾಯಾಲೋಕ  (ತೇಜಸ್ವಿ ಕೊನೇ ಕಾದಂಬರಿ):  ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪುಸ್ತಕ ಪ್ರಕಾಶನ ಮೂಡಿಗೆರೆ, ಬೆಲೆ:ರೂ.೧೯೮/-
2. ಮೇಜರ‍್ ಸಂದೀಪ್ ಹತ್ಯೆ (ಮುಂಬೈ ಮಾರಣ ಹೋಮದ ಕಥೆ) : ರವಿ ಬೆಳಗೆರೆ, ಭಾವನಾ ಪ್ರಕಾಶನ, ಬೆಂಗಳೂರು, ಬೆಲೆ:ರೂ.೧೫೦/-
3. ಹೊಸ ತಲೆಮಾರಿನ ತಲ್ಲಣ : (ಯುವ ಲೇಖಕರ ಅನುಭವ, ಚಿಂತನೆ) ಸಂ:ರಹಮತ್ ತರಿಕೆರೆ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಬೆಲೆ:ರೂ.೮೦/-
4. ಅಂತರಂಗದ ಪಿಸುನುಡಿ (ಕಥಾ ಸಂಕಲನ): ವಸುಮತಿ ಉಡುಪ, ಅಂಕಿತ ಪುಸ್ತಕ, ಬೆಂಗಳೂರು ಬೆಲೆ:ರೂ.೧೨೦/-
5. ಕುಂತಿಯ ಅಂತರಾಳ (ಮಹಾಭಾರತದ ಮತ್ತೊಂದು ನೋಟ): ತಾರಾಮೂರ್ತಿ, ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನ, ಬೆಂಗಳೂರು ಬೆಲೆ:ರೂ.೫೦/-
6. ಹಳ್ಳ ಬಂತು ಹಳ್ಳ (ಕೇಂದ್ರ ಸಾಹಿತ್ಯ ಅಕಾಡಮಿ ಪುರಸ್ಕೃತ ಕಾದಂಬರಿ): ಶ್ರೀನಿವಾಸ ವೈದ್ಯ, ಮನೋಹರ ಗ್ರಂಥಮಾಲಾ, ಧಾರವಾಡ ಬೆಲೆ:ರೂ.೨೦೦/-
7. ಬತ್ತಿದ ಕೊಳವೆ ಬಾವಿಯಲ್ಲಿ ಉಕ್ಕಿದ ಗಂಗೆ : ಎನ್.ಜೆ.ದೇವರಾಜ ರೆಡ್ಡಿ, ನವಕರ್ನಾಟಕ ಪ್ರಕಾಶನ, ಬೆಂಗಳೂರು, ಬೆಲೆ:ರೂ.೮೦/-
8. ನೀಲು-೨ (ಲಂಕೇಶರ ಕಾವ್ಯ) : ಪಿ.ಲಂಕೇಶ್, ಲಂಕೇಶ್ ಪ್ರಕಾಶನ, ಬೆಂಗಳೂರು, ಬೆಲೆ:ರೂ.೧೫೦/-
9. ಪ್ರಿಯ ಓದುಗರೇ (ಅಂಕಣ ಬರಹಗಳು) : ಸಂಧ್ಯಾ ಪೈ, ತುಲಾ ಪಬ್ಲಿಕೇಷನ್ಸ್, ಮಣಿಪಾಲ, ಬೆಲೆ:ರೂ.೧೦೦/-
10. ಪ್ಲೇಟೋವಿನ ಆದರ್ಶ ರಾಜ್ಯ (ಪ್ರಸಿದ್ಧ ತತ್ವಜ್ಞಾನಿಯ ಪರಿಕಲ್ಪನೆ): ಎಂ.ಎ.ವೆಂಕಟರಾವ್, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ಬೆಲೆ:ರೂ.೭೦/-

ಕೃಪೆ:ವಿಜಯ ಕರ್ನಾಟಕ

ಕುಂತಿಯ ಅಂತರಾಳ

scan0011

ಈ ಪುಸ್ತಕದಲ್ಲಿ ಸಾಗುವ ದೀರ್ಘ ಸ್ವಗತ (ಸಹಜವಾಗಿಯೇ) ಮಹಾಭಾರತದ ಮುಖ್ಯ ಪಾತ್ರ ಕುಂತಿಯದ್ದು. ಪುಟಗಟ್ಟಲೆ ಇದು ಹರಿಯುತ್ತದೆ ಮತ್ತು ಈಗಾಗಲೇ ಕುಂತಿಯ ಕುರಿತು ಗೊತ್ತಿರುವ (ಇನ್ನಿತರರು ಬರೆದ ಪುಸ್ತಕಗಳಿಂದಾಗಿ) ಹಲವು ಸಂಗತಿ, ಭಾವನೆ, ತಲ್ಲಣ, ಇಬ್ಬಂದಿಗಳನ್ನು ತನ್ನದೇ ಶೈಲಿಯಲ್ಲಿ ನಿರೂಪಿಸುತ್ತದೆ. ಇದಕ್ಕಾಗಿ ಲೇಖಕಿ ಸಾಕಷ್ಟು ಹೋಮ್ ವರ್ಕ್ ಸಹ ಮಾಡಿದ್ದಾರೆ. ಓದುತ್ತಾ ಓದುತ್ತಾ ನಮಗೆ ಕಾಣಿಸುವ ಅಸಂಬದ್ಧತೆ, ಅಭಾಸ, ತರ್ಕವಲ್ಲದ ತರ್ಕ, ಸೂಕ್ತವೆನಿಸದ ವಿವರಣೆ ಬರೆದಿಟ್ಟುಕೊಂಡರೆ ಮುಂದೊಮ್ಮೆ ನಾವೂ `ಕುಂತಿಯ ಅಂತರಾಳಕುರಿತು ಕಿರು ಪುಸ್ತಕ ಬರೆಯಬಹುದು!

ಶೀರ್ಷಿಕೆ: ಕುಂತಿಯ ಅಂತರಾಳ ಲೇಖಕರು:ತಾರಾ ಮೂರ್ತಿ ಪ್ರಕಾಶಕರು: ಬಿ.ಎಮ್.ಶ್ರೀ ಪ್ರತಿಷ್ಠಾನ, ಬೆಂಗಳೂರು ಬೆಲೆ:ರೂ.50/-

ಕೃಪೆ:ವಿಜಯ ಕರ್ನಾಟಕ

ಅಂತರಂಗದ ಪಿಸುನುಡಿ

scan0009

ಇದು ವಸುಮತಿ ಉಡುಪ ಅವರ ಇತ್ತೀಚಿನ ಕತೆಗಳ ಸಂಕಲನ. ಶುದ್ಧ ಸಾಂಸಾರಿಕ ಕತೆಗಳು ಎನ್ನಬಹುದಾದವು ಇಲ್ಲಿವೆಯಾದೂ ಲೇಖಕಿ ಕಾಲ ದೇಶಕ್ಕೆ ತಕ್ಕಂತೆ ಸಾಂಸಾರಿಕ ಕತೆಗಳ ಹಂದರದಲ್ಲೇ ಹತ್ತು ಹಲವು ಸಮಸ್ಯೆಗಳನ್ನು ಹೆಣೆಯುತ್ತಾರೆ. ಅದು ಅತ್ಯಾಚಾರಕ್ಕೊಳಗಾದ ಮಹಿಳೆಯ ವಿವಾಹ ಕುರಿತಂತೆ ಇರಬಹುದು, ಕಷ್ಟಜೀವಿ ಅಮಾಯಕ ತಮ್ಮನಿಗೆ, ಆತನ ಸುಶಿಕ್ಷಿತ, ಸ್ಫುರದ್ರೂಪಿ, ಚಾಲಾಕಿ ಅಣ್ಣ ಮತ್ತು (ತಮ್ಮನ ಹೆಂಡತಿಯಾಗಿ ಮನೆ ಸೇರುವ) ಆತನ ಪ್ರೇಯಸಿ ಮಾಡುವ ಘೋರ ವಿದ್ರೋಹ ಇರಬಹುದು, ತಾನು ಬಹುವಾಗಿ ಮೆಚ್ಚುವ ಪತಿ, ತನ್ನ ಮಾತು, ಧೋರಣೆಗಳಲ್ಲಿಯಾದರೂ ತನ್ನನ್ನು ಪರ ಪುರುಷನಿಂದ ರಕ್ಷಿಸುವಷ್ಟು ಧೀರನಾಗಿಲ್ಲವೇಕೆ ಎನ್ನುವ ಹೆಂಡತಿಯ ಸಣ್ಣ ನಿರಾಸೆ ಇರಬಹುದು… ಎಲ್ಲ ಬಿಕ್ಕಟ್ಟುಗಳಿಗೂ ಒಂದು ಪರಿಹಾರವನ್ನು ಕತೆಗಳು ಸೂಚಿಸುತ್ತವೆಯಾದರೂ ಅದರ ನಿರ್ವಹಣೆ ಸಾಕಷ್ಟು ಸೂಕ್ಷ್ಮವಾಗಿಯೂ, ಅನೇಕ ಸ್ತರಗಳಲ್ಲೂ ನಡೆಯುವಂತೆ ಲೇಖಕಿ `ಯೋಜಿಸುತ್ತಾರೆ’. ಆದರೂ ಸಣ್ಣ ಕತೆಯೆಂಬ ಸಾಹಿತ್ಯ ಪ್ರಕಾರ ಇವೆಲ್ಲವನ್ನೂ ಮೀರಿದ ಏನನ್ನೋ ಸೆರೆ ಹಿಡಿಯಲು ಪ್ರಯತ್ನಿಸಬೇಕು ಎನ್ನುವುದು ವಸುಮತಿಯವರ ಕೃತಿಗಳನ್ನು ಓದುವಾಗ ಉಂಟಾಗುವ ಹಳಹಳಿಕೆ.

ಶೀರ್ಷಿಕೆ: ಅಂತರಂಗದ ಪಿಸುನುಡಿ ಲೇಖಕರು:ವಸುಮತಿ ಉಡುಪ ಪ್ರಕಾಶಕರು: ಅಂಕಿತ ಪುಸ್ತಕ ಬೆಲೆ: ರೂ.120/-

ಕೃಪೆ : ವಿಜಯ ಕರ್ನಾಟಕ

ಕರ್ಕಿ ಮೇಳ ಶುರುವಾಗಿದ್ದು ಸುಮಾರು 1800 ರಲ್ಲಿ

scan00011

ಈ ಪುಸ್ತಕ ನಾರಾಯಣ ಮಧ್ಯಸ್ಥ ಅವರ ಅಧ್ಯಯನದ ಫಲವಾಗಿದೆ. ಅವರು ಉತ್ತರ ಕನ್ನಡದ ಹೊನ್ನಾವರದ ಕರ್ಕಿ ಯಕ್ಷಗಾನ ಮೇಳದ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಎಂದಿನ ಅಕಡಮಿಕ್ ಅಧ್ಯಯನದ ಕ್ರಮವನ್ನು ಅನುಸರಿಸಿರುವ ಮಧ್ಯಸ್ಥರು ಮೊದಲ ಮೂರು ಅಧ್ಯಾಯಗಳನ್ನು ಅಧ್ಯಯನದ ಉದ್ದೇಶ, ವ್ಯಾಪ್ತಿ, ಯಕ್ಷಗಾನದ ಹಿನ್ನೆಲೆಗೆ ಮೀಸಲಾಗಿರಿಸಿದ್ದಾರೆ.

ಉತ್ತರ ಕನ್ನಡ ತಿಟ್ಟಿನ ಪರಂಪರೆ ಪ್ರಸಂಗ, ಬಣ್ಣಗಾರಿಕೆ, ನೃತ್ಯಾಭಿನಯ, ಮುದ್ರೆಗಳ ಬಳಕೆ, ಹಿಮ್ಮೇಳಗಳ ವಿಶೇಷತೆಯಿಂದಾಗಿ ಪಡುವಲಪಾಯ ಯಕ್ಷಗಾನದಲ್ಲಿ ತನ್ನದೇ ಆದ ಪರಂಪರೆ ಮತ್ತು ವೈಶಿಷ್ಟ್ಯವನ್ನು ಪಡೆದುಕೊಂಡಿದೆ – ಎಂದು ಗುರುತಿಸುತ್ತಾರೆ ಲೇಖಕರು. ಈ ಪರಂಪರೆಯ ಮೊದಲ ಮೇಳ ಕರ್ಕಿಯ ಹಾಸ್ಯಗಾರ ಮೇಳ. ಕರ್ಕಿ ಮೇಳ ಶುರುವಾಗಿದ್ದು ಸುಮಾರು 1800 ರಲ್ಲಿ. ಎರಡು ಶತಮಾನಕ್ಕೂ ಹೆಚ್ಚು ಕಾಲ ನಡೆದುಬಂದ ದಾಖಲೆ ಅದರದ್ದು. ನಡುವೆ ಈ ಮೇಳ ಬಡೋದೆಯ ಸಂಸ್ಥಾನದ ಮೆಚ್ಚುಗೆಗೂ ಪಾತ್ರವಾಗಿತ್ತಲ್ಲದೆ, ಹನ್ನೆರಡು ನೂರು ರೂಪಾಯಿಯ ವರುಷಾಸನವು ಅದಕ್ಕೆ ಸಿಗುತ್ತಿತ್ತು. ಒಂಬತ್ತು ತಲೆಮಾರುಗಳ ಕಾಲ ನಡೆಸಿಕೊಂಡು ಬಂದ ಅಪರೂಪದ ಮೇಳ ಇದು. ಅದು ಯಕ್ಷಗಾನದ ಇತಿಹಾಸದ ಸಂದರ್ಭದಲ್ಲಿ ವಿಶೇಷವಾದ ದಾಖಲೆ. ಆದರೆ ಈ ಮೇಳಕ್ಕೆ ಪ್ರಸಾದಿತ ಯಕ್ಷಗಾನ ಮಂಡಳಿ ಕರ್ಕಿ  ಎಂಬ ಹೆಸರು ಬಂದಿದ್ದು 1942ರಲ್ಲಿ. ಈ ನಡುವೆ ಕ್ರಿಯಾಶೀಲವಾಗಿಲ್ಲದ ಕಾಲವೂ ಇತ್ತು.

ಇಂಥ ಕುತೂಹಲಕಾರಿಯಾದ ಹಾಗೂ ಮೇಳಕ್ಕೆ ಸಂಬಂಧಿಸಿದ ಹಲವಾರು ವಿವರಗಳನ್ನು ಇಲ್ಲಿ ಕೊಟ್ಟಿದ್ದಾರೆ ನಾರಾಯಣ ಮಧ್ಯಸ್ಥ. ಇಲ್ಲಿ ವಿವರಗಳು ಮಾತ್ರ ಇರುವುದರಿಂದ ಮೇಳದ ಬಗ್ಗೆ ಒಂದು ಸ್ಥೂಲ ಚಿತ್ರವನ್ನು ಗ್ರಹಿಸುವುದು ಕಷ್ಟವಾಗುತ್ತದೆ. ಅದಕ್ಕೊಂದು ಸುಸಂಗತ ನಿರೂಪಣೆ ಇದ್ದರೆ ಬರವಣಿಗೆ ಕಳೆಕಟ್ಟುತ್ತಿತ್ತು. ಆದರೂ ಯಕ್ಷಗಾನದ ಬಗ್ಗೆ ಕುತೂಹಲ ಇರುವವರಿಗೆ ಇದೊಂದು ಆಕರವಾಗುವುದರಲ್ಲಿ ಸಂದೇಹವಿಲ್ಲ.

ಶೀರ್ಷಿಕೆ: ಕರ್ಕಿ ಹಾಸ್ಯಗಾರ ಮೇಳ ಸಂಪ್ರದಾಯ ಮತ್ತು ಪ್ರಯೋಗಶೀಲತೆ ಲೇಖಕರು: ಡಾ.ನಾರಾಯಣ ಮಧ್ಯಸ್ಥ ಪ್ರಕಾಶಕರು: ಬಂಡಾರ ಪ್ರಕಾಶನ, ಮಸ್ಕಿ, ರಾಯಚೂರು ಜಿಲ್ಲೆ  ಪುಟಗಳು:176 ಬೆಲೆ :ರೂ.150/-

ಕೃಪೆ: ಪ್ರಜಾವಾಣಿ

ಚರಿತ್ರೆಯನ್ನು ಮುಚ್ಚಿರುವ ಪುರಾಣ, ದಂತಕಥೆಗಳ ಮುಸುಕನ್ನು ಸರಿಸಿ

scan0001

ದಾಮೋದರ ಧರ್ಮಾನಂದ ಕೊಸಾಂಬಿಯವರು ಆಧುನಿಕ ಭಾರತದ ಕೆಲವೇ ಶ್ರೇಷ್ಠ ವಿದ್ವಾಂಸರಲ್ಲಿ ಪ್ರಮುಖರು (1907-1966). ಅವರ ಬರವಣಿಗೆ ವೈಜ್ಞಾನಿಕ, ವಸ್ತುನಿಷ್ಠ ಪರಿಶೀಲನೆಗೆ ಹೆಸರಾಗಿದೆ. ವಿಜ್ಞಾನ, ಪುರಾತತ್ವ ಶಾಸ್ತ್ರ, ಸಾಹಿತ್ಯ, ಭಾಷಾ ಶಾಸ್ತ್ರ, ಸಂಸ್ಕೃತಿ – ಹೀಗೆ ಜ್ಞಾನದ ಹಲವು ಕ್ಷೇತ್ರಗಳಲ್ಲಿ ಆಳವಾದ ಅರಿವನ್ನು ಸಂಪಾದಿಸಿ ಅದನ್ನು ತಮ್ಮ ಅನೇಕ ಲೇಖನಗಳ ಮೂಲಕ ಓದುಗರೊಂದಿಗೆ ಹಂಚಿಕೊಂಡಿದ್ದಾರೆ.
ಕೊಸಾಂಬಿಯವರ `ದಿ ಕಲ್ಚರ್ ಅಂಡ್ ಸಿವಿಲೈಸೇಷನ್ ಆಫ್ ಏನ್ಶಿಯೆಂಟ್ ಇಂಡಿಯಾ ಇನ್ ಹಿಸ್ಟೋರಿಕಲ್ ಔಟ್ಲೈನ್ ನ `ದಿ ಆರ್ಯನ್’ ಎಂಬ ಅಧ್ಯಾಯದ ಕನ್ನಡಾನುವಾದ ಈ ಪುಸ್ತಿಕೆ. ಆ ಗ್ರಂಥದಲ್ಲಿ ಕೊಸಾಂಬಿಯವರು ಭಾರತದ ಇತಿಹಾಸವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಪರಿಶೀಲಿಸಿ ಇಲ್ಲಿನ ಚರಿತ್ರೆ, ಸಂಸ್ಕೃತಿಗಳನ್ನು ನಮಗೆ ಪರಿಚಯಿಸಿದ್ದಾರೆ. ಈ ದೇಶದ ನಿಜವಾದ ಚರಿತ್ರೆಯನ್ನು ಮುಚ್ಚಿರುವ ಪುರಾಣ, ದಂತಕಥೆಗಳ ಮುಸುಕನ್ನು ಸರಿಸಿ ನಮ್ಮ ಪರಂಪರೆಯ ನಿಜವಾದ ಚಿತ್ರವನ್ನು ನೀಡಿದ್ದಾರೆ. ಈ ಪುಸ್ತಕದ ಆಕರ ಗ್ರಂಥವು ಪ್ರಾಚೀನ ಭಾರತದ ಸಂಸ್ಕೃತಿ ಹಾಗೂ ನಾಗರೀಕತೆಯನ್ನು ಐತಿಹಾಸಿಕವಾಗಿ, ವಸ್ತುನಿಷ್ಠವಾಗಿ ಅರ್ಥಮಾಡಿಕೊಳ್ಳಲು ಇಚ್ಛಿಸುವವರು ತಪ್ಪದೇ ಓದಬೇಕಾದ ಗ್ರಂಥ.
–    ಪುಸ್ತಕದ ಬೆನ್ನುಪುಟದಿಂದ
ಶೀರ್ಷಿಕೆ : ಆರ್ಯರು      ಲೇಖಕರು: ಡಿ.ಡಿ.ಕೊಸಾಂಬಿ     ಅನುವಾದ : ನಗರಕೆರೆ ರಮೇಶ್   ಪ್ರಕಾಶಕರು: ಬೆಳ್ಳಿಚುಕ್ಕಿ ಪ್ರಕಾಶನ       ಪುಟಗಳು:33