ಮಹಿಳಾ ಆರೋಗ್ಯ; ಒಂದು ಮರುಚಿಂತನೆ

mahilaa aarogya ondu maruchinthane

ಡಾ.ಕೆ.ಸರೋಜಾ ಅವರು ಮಹಿಳೆಯರ ಆರೋಗ್ಯ ಕುರಿತಂತೆ ಹಲವಾರು ಲೇಖನಗಳನ್ನೂ ಪುಸ್ತಕಗಳನ್ನೂ ಬರೆದಿದ್ದಾರೆ. ಮಹಿಳೆಯರ ಆರೋಗ್ಯದ ಬಗ್ಗೆ ಆಳವಾದ ತಿಳುವಳಿಕೆಯನ್ನು ಅವರು ಪಡೆದು `ಮಹಿಳಾ ಆರೋಗ್ಯ; ಒಂದು ಮರುಚಿಂತನೆ’ ಎಂಬ ಗ್ರಂಥವನ್ನು ರಚನೆ ಮಾಡಿದ್ದಾರೆ. `ಜೀವನ್ ಭದ್ರಾಣಿ ಪಶ್ಯತಿ’ ಎಂಬ ಹಳೆಯ ಮಾತೊಂದುಂಟು. ಪ್ರತಿಯೊಬ್ಬರೂ ತಮ್ಮ ಸ್ವಾಸ್ಥ್ಯದ ಕಡೆ ಲಕ್ಷ್ಯ ವಹಿಸಬೇಕು. ಒಂದು ಪಕ್ಷ ಲಕ್ಷ್ಯ ವಹಿಸದಿದ್ದರೆ ಜೀವಕ್ಕೆ ಹಾನಿ. ಆ ಹಾನಿಯಿಂದ ಕುಟುಂಬದ ಹಾನಿ. ಹೀಗಾಗಿ, ಇದೊಂದು ಸ್ವಾಸ್ಥ್ಯದ ದುರಂತದಮಾಲೆ ಆದೀತು. ಮಹಿಳೆಯರ ದೇಹ ಮತ್ತು ವಿಶಿಷ್ಟವಾದುದು. ಪ್ರಸ್ತುತ ಗ್ರಂಥದಲ್ಲಿ ಮನೋದೇಹಿಯಾದ ಮಹಿಳೆಯರ ಆರೋಗ್ಯದ ಬಗೆಗೆ ಸೂಕ್ಷ್ಮವೂ, ಸ್ಥೂಲವೂ ಆದ ವಿವರಗಳಿವೆ. ಪ್ರತಿಯೊಬ್ಬ ಮಹಿಳೆಯೂ ಜೀವನಕ್ರಮದಲ್ಲಿ ವಹಿಸಬೇಕಾದ ಎಚ್ಚರಿಕೆಯನ್ನು ಲೇಖಕರು ಸೂಚಿಸಿದ್ದಾರೆ. ದೇಹದ ಸ್ವಾಸ್ಥ್ಯವು ಮನಸ್ಸಿನ ನೆಮ್ಮದಿಗೆ ಕಾರಣವಾಗುವ ವಿವಿಧ ಬಗೆಗಳನ್ನು ಸರಳವಾಗಿಯೂ ಹಿತವಾಗಿಯೂ ನಿರೂಪಿಸಿದ್ದಾರೆ. ಈ ಗ್ರಂಥದ ಓದಿನಿಂದ ಮಹಿಳೆಯರು ಜೀವನದಲ್ಲಿ ವಹಿಸಬೇಕಾದ ಎಚ್ಚರದ ಬಗೆಗೆ ಹೊಸ ತಿಳುವಳಿಕೆ ಒಡಮೂಡೀತು ಎಂದು ನಾನು ತಿಳಿದಿದ್ದೇನೆ. ಇಂಥದೊಂದು ಉಪಯುಕ್ತ ಗ್ರಂಥವನ್ನು ಬರೆದುಕೊಟ್ಟ ಡಾ. ಕೆ. ಸರೋಜಾ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ವಂದನೆಗಳು.
– ಬೆನ್ನುಡಿಯಿಂದ
ಶೀರ್ಷಿಕೆ : ಮಹಿಳಾ ಆರೋಗ್ಯ – ಒಂದು ಮರುಚಿಂತನೆ ಲೇಖಕರು:ಡಾ.ಕೆ.ಸರೋಜಾ ಪ್ರಕಾಶಕರು:ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ  ಪುಟ:156 ಬೆಲೆ:ರೂ.100/-

ಸಣ್ಣ ಕತೆ; ಸ್ವರೂಪ-ಚಿಂತನೆ

kalpita vasthava1

ಸಣ್ಣಕತೆ ಹೊಸಗನ್ನಡ ಸಾಹಿತ್ಯದಲ್ಲಿ ಒಂದು ಪ್ರಕಾರವಾಗಿ ರೂಪುಗೊಂಡಿದ್ದರೂ ಕತೆಯನ್ನು ಹೇಳುವ ಪರಂಪರೆ ಹೊಸದೇನೂ ಅಲ್ಲ. ಇಂಗ್ಲೀಷ್ ಸಾಹಿತ್ಯದ ಪರಿಚಯದಿಂದ ಸಣ್ಣಕತೆಯ ಮಾದರಿ ಹುಟ್ಟಿಕೊಂಡಿದೆ ಎಂದು ವಿಮರ್ಶಕರು ಪರಿಭಾವಿಸಿಕೊಂಡು ಬಂದಿದ್ದಾರೆ. ಅಂಥ ಗ್ರಹಿಕೆಯಿಂದ ಇಪ್ಪತ್ತನೆಯ ಶತಮಾನದ ಆರಂಭದಿಂದ ಇದುವರೆಗೆ ಬಂದಿರುವ ಕಥಾ ಸಾಮಾಗ್ರಿಯನ್ನು ನೋಡಲಾಗುತ್ತಿದೆ. ಗಿರಡ್ಡಿ ಗೋವಿಂದರಾಜ ಅವರ ವಿಮರ್ಶಾ ಲೇಖನಗಳ ಸಂಗ್ರಹ `ಕಲ್ಪಿತ ವಾಸ್ತವ: ಕನ್ನಡ ಸಣ್ಣಕತೆ’ ಇದೇ ಜಾಡಿನಲ್ಲಿ ಸಾಗಿರುವ ಚಿಂತನೆ. ಗಿರಡ್ಡಿ ಗೋವಿಂದರಾಜ `ಇಂದಿನ ಸಣ್ಣ ಕತೆ ನಮ್ಮ ಪ್ರಾಚೀನ ಕಥಾಪರಂಪರೆಯ ಸಹಜ ಬೆಳವಣಿಗೆಯ ಫಲವಲ್ಲ; ಪಶ್ಚಿಮದ ಆಧುನಿಕ ಸಣ್ಣ ಕತೆಯ ಸಂಪರ್ಕದಲ್ಲಿ ನಾವು ಬಂದಿರದಿದ್ದರೆ ಈಗಿನ ರೂಪದ ಸಣ್ಣಕತೆ ನಮ್ಮಲ್ಲಿ ಹುಟ್ಟುತ್ತಿರಲಿಲ್ಲ’ ಎಂದು ಸ್ಪಷ್ಟವಾಗಿಯೇ ಹೇಳಿ ತಮ್ಮ ಚಿಂತನೆಯ ದಿಕ್ಕನ್ನು ಖಚಿತಪಡಿಸಿದ್ದಾರೆ. ಇಲ್ಲಿನ ಎಲ್ಲ ೧೪ ಲೇಖನಗಳಲ್ಲಿಯೂ ಕನ್ನಡ ಸಣ್ಣಕತೆ ಬೆಳವಣಿಗೆ ಕುರಿತಾಗಿ ಅವರ ವಿವರ ವಿಶ್ಲೇಷಣೆ, ತೀರ್ಮಾನಗಳಿವೆ.

೪೫ ವರ್ಷಗಳ ಕಾಲಾವಧಿಯಲ್ಲಿ ಬರೆದಿರುವ ಇಲ್ಲಿನ ಲೇಖನಗಳಲ್ಲಿ ಕನ್ನಡ ಸಣ್ಣ ಕತೆಯ ಬೆಳವಣಿಗೆಯ ವಿವಿಧ ಹಂತಗಳನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ ಎಂಬ ವಿವರಣೆಯೂ ಇದೆ. ಲೇಖನಗಳಲ್ಲಿ ವ್ಯತ್ಯಾಸಗಳೂ ಅಭಿಪ್ರಾಯಭೇದಗಳೂ, ಮೊದಲಿನ ನಿಲುವಿಗೆ ತಿದ್ದುಪಡಿಗಳೂ ಆಗಿರುವುದನ್ನು ದಾಖಲಿಸಲಾಗಿದೆ. ಮಾಸ್ತಿಯವರನ್ನು ಕನ್ನಡದ ಸಣ್ಣ ಕತೆಯ ಯುಗಪ್ರವರ್ತಕರೆಂದು ಗುರುತಿಸಿರುವ ಗಿರಡ್ಡಿಯವರು ತಮಗೆ ಮುಖ್ಯವೆನಿಸಿದೆ ಆನಂದ, ಬಾಗಲೋಡಿ ದೇವರಾಯ, ಶಾಂತಾದೇವಿ ಕಣವಿ, ಶಾಂತಿನಾಥ ದೇಸಾಯಿ, ಜಯಂತ ಕಾಯ್ಕಿಣಿ, ಸುರೇಂದ್ರನಾಥ ಅವರ ಕತೆಗಳ ಕುರಿತಾಗಿ ವಿಸ್ತೃತವಾಗಿ ವಿಶ್ಲೇಷಣೆ ನಡೆಸಿದ್ದಾರೆ. ವ್ಯಾಪಕ ಅಧ್ಯಯನದ ಹಿನ್ನೆಲೆ ಇರುವ ಗಿರಡ್ಡಿ ಕನ್ನಡ ಸಣ್ಣಕತೆ ಬೆಳೆದು ಬಂದ ಬಗೆಯನ್ನು ವಿವರವಾಗಿ ದಾಖಲಿಸಿದ್ದಾರೆ.

`ಮರೆಯಬಾರದ ಹಳೆಯ ಕತೆಗಳು’  ಮಾಲಿಕೆಯಲ್ಲಿ ಅವರು ಪಂಜೆ, ಕೇರೂರರು, ಎಮ್.ಎನ್. ಕಾಮತ್, ಎಸ್.ಜಿ.ಶಾಸ್ತ್ರಿ , ಕೊರಡ್ಕಲ್, ಎ.ಆರ‍್.ಕೃಷ್ಣಶಾಸ್ತ್ರಿ, ಕುಲಕರ್ಣಿ ಶ್ರೀನಿವಾಸ, ಕಡಂಗೋಡ್ಲು, ಕೃಷ್ಣಕುಮಾರ ಕಲ್ಲೂರ, ಪ.ರಮಾನಂದ, ವಿ.ಜಿ.ಶ್ಯಾನಬಾಗ, ಶ್ರೀಸ್ವಾಮಿ, ಹ.ಪಿ.ಜೋಷಿ, ಸೇಡಿಯಾಪು ಕೃಷ್ಣಭಟ್ಟ, ನವರತ್ನ ರಾಮರಾಯ, ಟೇಂಗ್ಸೆ ಗೋವಿಂದರಾಯ, ಕ್ಷೀರಸಾಗರ, ಬೇಂದ್ರೆ, ಹೊಯಿಸಳ, ಮೇವುಂಡಿ ಮಲ್ಲಾರಿ, ಟಿ.ಎಸ್.ಸಂಜೀವರಾಯ, ಭಾರತೀಪ್ರಿಯ ಮೊದಲಾಗಿ 28 ಕತೆಗಾರರ ವ್ಯಕ್ತಿತ್ವ-ಕೃತಿ ಪರಿಚಯಗಳನ್ನು ಮಾಡಿಕೊಟ್ಟಿದ್ದಾರೆ.

ಇಲ್ಲಿನ ಮೂರು ಲೇಖನಗಳು ಕನ್ನಡ ಸಣ್ಣಕತೆ ನಿರ್ದಿಷ್ಟ ಕಾಲಘಟ್ಟದಲ್ಲಿ ಸಾಗಿಬಂದ ಮಜಲುಗಳನ್ನು ಪರಿಚಯಿಸುತ್ತವೆ. ಇದು ಕಳೆದ ಶತಮಾನದ 90 ರ ದಶಕದವರೆಗಿನ ಕಾಲಘಟ್ಟಕ್ಕೆ ನಿಂತುಹೋಗಿರುವುದನ್ನು ಗಮನಿಸಬಹುದಾಗಿದೆ. ಸಾಹಿತ್ಯ ಚರಿತ್ರಕಾರರು ನವೋದಯ, ನವ್ಯ ಎಂದು ಸ್ಥೂಲವಾಗಿ ಹೇಳುವ ಕಾಲಾವಧಿಯ ಲೇಖಕರು ಮಾತ್ರವೇ ಇಲ್ಲಿ ಪರಿಶೀಲನೆಗೆ ಒಳಗಾಗಿದ್ದಾರೆ. ಹೊಸ ಪೀಳಿಗೆಯ ನೂರಾರು ಬರಹಗಾರರು ಪ್ರವೇಶ ಪಡೆಯುತ್ತಿರುವ ನವ್ಯೋತ್ತರ ಕಾಲದ ಯಾವೊಬ್ಬ ಲೇಖಕರ ಕಥಾಸಾಹಿತ್ಯ ಕೃಷಿಯ ಬಗ್ಗೆಯೂ ಇಲ್ಲಿ ವಿಸ್ತ್ರತ ಚರ್ಚೆ ನಡೆದಿಲ್ಲ. ಅದಕ್ಕೆ ಸಂಬಂಧಿಸಿ `ಇತ್ತೀಚೆಗೆ ಬರೆಯುತ್ತಿರುವ ಅನೇಕ ಮಹತ್ವದ ಕತೆಗಾರ್ತಿಯರ ಬಗ್ಗೆ, ಕಿರಿಯ ಕತೆಗಾರರ ಬಗ್ಗೆ ಇಲ್ಲಿ ಪ್ರಸ್ತಾಪಿಸಲಾಗಿಲ್ಲ.’ ಎಂಬ ಅರಿವು ತಮಗಿದೆ ಎಂದು ಲೇಖಕರು ಹೇಳಿಕೊಂಡಿದ್ದಾರೆ.

ತಮ್ಮ ಈ ಸಂಕಲನದಿಂದ ಹೊಸದಾಗಿ ಕತೆಗಳನ್ನು ಬರೆಯುವವರಿಗೆ ಒಂದಿಷ್ಟು ಮಾರ್ಗದರ್ಶನ ಸಿಗಬಹುದೆಂಬ ನಿರೀಕ್ಷೆಯನ್ನು ಗೋವಿಂದರಾಜರು ಪ್ರಕಟಿಸಿದ್ದಾರೆ. ಜೊತೆಗೆ ಇಲ್ಲಿನ ಎಲ್ಲಾ ಲೇಖನಗಳೂ `ತಮ್ಮ ಸಮಗ್ರ ವಿಮರ್ಶೆ’ ಸಂಕಲನ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯ ಹೊರತಂದ ಹೊನ್ನಾರು ಮಾಲಿಕೆಯ `ಪ್ರಮಾಣು’ ಗ್ರಂಥದಲ್ಲಿ ಇರುವುದನ್ನು ತಿಳಿಸಿದ್ದಾರೆ.

ಶೀರ್ಷಿಕೆ: ಕಲ್ಪಿತ ವಾಸ್ತವ: ಕನ್ನಡ ಸಣ್ಣ ಕತೆ ಲೇಖಕರು:ಗಿರಡ್ಡಿ ಗೋವಿಂದರಾಜ ಪ್ರಕಾಶಕರು:ಸಾಹಿತ್ಯ ಪ್ರಕಾಶನ ಪುಟ:352 ಬೆಲೆ:ರೂ.250/-(ಕ್ಯಾಲಿಕೋ) ರೂ.200/-(ಸಾದಾ ಪ್ರತಿ)

ಕೃಪೆ: ಪ್ರಜಾವಾಣಿ

ತಾವು ಒಬ್ಬ ಓದುಗ ಎಂಬ ವಿನಯದಿಂದಲೇ

talamalada haadi 1

ಆನಂದ ಋಗ್ವೇದಿಯವರು ಕವಿ, ಕಥೆಗಾರ ಹಾಗೂ ನಾಟಕಕಾರರೂ ಆಗಿದ್ದಾರೆ. ಅವರು ಬರೆದ ವಿಮರ್ಶಾತ್ಮಕ ಲೇಖನಗಳ ಸಂಗ್ರಹ ಇದು. ಇದು ಕೇವಲ ವಿಮರ್ಶಾತ್ಮಕ ಲೇಖನಗಳ ಸಂಗ್ರಹ ಮಾತ್ರವಾಗಿಲ್ಲ. ಇಲ್ಲಿ ಕನ್ನಡ ಲೇಖಕರ ಕುರಿತಂತೆ ನುಡಿ ಚಿತ್ರಗಳೂ ಇವೆ. ಈ ಭಾಗದಲ್ಲಿ ಅಕಾಲಿಕ ನಿಧನ ಹೊಂದಿದ ವಿಭಾ ತಿರಕಪಡಿ, ಮುದೇನೂರು ಸಂಗಣ್ಣ, ಚಿ.ಶ್ರೀನಿವಾಸರಾಜು ಅವರ ಕುರಿತ ನುಡಿಚಿತ್ರಗಳು ಆಪ್ತವಾಗಿವೆ. ಇವೆಲ್ಲವೂ ಅವರ ವೈಯಕ್ತಿಕ ಸಂಬಂಧ ಹಾಗೂ ನೆನಪುಗಳಿಂದ ಕಟ್ಟಿದ ನುಡಿಚಿತ್ರಗಳಾಗಿವೆ.

`ಹಾದಿ ಒಂದು’ ಎಂಬ ಭಾಗದಲ್ಲಿ ಹಿ.ಚಿ.ಬೋರಲಿಂಗಯ್ಯ, ಬಾಳಾಸಾಹೇಬ ಲೋಕಾಪುರ, ಮಹಾಶ್ವೇತಾದೇವಿ, ಎಸ್.ಎಸ್.ಹಿರೇಮಠ, ಸುರೇಂದ್ರನಾಥ್, ಎಂ.ವ್ಯಾಸ ಮುಂತಾದವರ ಪುಸ್ತಕಗಳನ್ನು ಲೇಖಕರು ವಿಮರ್ಶಿಸಿದ್ದಾರೆ. ಇವೆಲ್ಲ ಅಕಾಡೆಮಿಕ್ ಶಿಸ್ತಿನ ಬರಹಗಳು. ಆದರೂ, ಲೇಖಕರು ತಾವು ಒಬ್ಬ ಓದುಗ ಎಂಬ ವಿನಯದಿಂದಲೇ ಈ ಪುಸ್ತಕಗಳನ್ನು ಪ್ರವೇಶಿಸುತ್ತಾರೆ. ಒಂದು ತಾತ್ವಿಕ ಅಭಿಪ್ರಾಯಗಳಿಗೆ ಬರುತ್ತಾರೆ. ಪುಸ್ತಕದ ಮೂರನೇ ಭಾಗದಲ್ಲಿ ಲೇಖಕರು ವಿವಿಧ ಸಂದರ್ಭದಲ್ಲಿ ಪ್ರತಿಕ್ರಯಿಸಿದ್ದು ಹಾಗೂ ಅವರ ಮುನ್ನುಡಿಗಳು ಇವೆ. ಇಂದಿನ ಕಾಲದ ಹಾಗೂ ಇಂದು ಬರೆಯುತ್ತಿರುವ ಲೇಖಕರ ತಳಮಳವನ್ನು ಸರಿಯಾಗಿ ಇವು ವ್ಯಕ್ತಪಡಿಸುತ್ತವೆ ಎಂದು ಹೇಳಬಹುದು.

ಶೀರ್ಷಿಕೆ : ತಳಮಳದ ಹಾದಿ (ಸಾಹಿತ್ಯ ಅಭ್ಯಾಸಿಯ ವಿಮರ್ಶಾತ್ಮಕ ಟಿಪ್ಪಣಿಗಳು) ಲೇಖಕರು:ಆನಂದ ಋಗ್ವೇದಿ ಪ್ರಕಾಶಕರು:ಪಲ್ಲವ ಪ್ರಕಾಶನ ಪುಟ:120 ಬೆಲೆ:ರೂ.80/-

ಕೃಪೆ: ಪ್ರಜಾವಾಣಿ

ನಾನೊಬ್ಬ ಎ.ಬಿ.ಸಿ.ಡಿ.

hasivembo maye1

ಪ್ರೊ. ಉಷಾ ಕೃಷ್ಣಮೂರ್ತಿ ಅವರ ಚೊಚ್ಚಲ ಕವನ ಸಂಕಲನ `ಹಸಿವೆಂಬೋ ಮಾಯೆ’ಯಲ್ಲಿನ ನಲವತ್ತಾರು ಕವಿತೆಗಳಲ್ಲಿ ಒಡೆದು ಕಾಣುವುದು ಕವಯತ್ರಿಯ ಸಾಹಿತ್ಯಿಕ ಹಸಿವು. ಹಾಸನದ ಎ.ವಿ.ಕೆ. ಮಹಿಳಾ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿರುವ ಉಷಾ ಈಗ ನಿವೃತ್ತರು. ವೃತ್ತಿಯಿಂದ ನಿವೃತ್ತರಾಗಿ ಕಾವ್ಯದ ಧ್ಯಾನದಲ್ಲಿ ಮುಳುಗಿರುವ ಅವರ ಕವಿತೆಗಳಲ್ಲಿ ಮಾಗಿದ ಬದುಕು ಪ್ರತಿಫಲಿಸುತ್ತದೆ.

ಪ್ರಾಮಾಣಿಕತೆ ಹಾಗೂ ಸೋಗಿಲ್ಲದ ಜೀವನ ಪ್ರೀತಿ `ಹಸಿವೆಂಬೋ ಮಾಯೆ’ ಸಂಕಲನದಲ್ಲಿ ಎದ್ದು ಕಾಣುವ ಗುಣಗಳು. ಬದಲಾದ ಕಾಲದ ಬಗೆಗಿನ ವಿಷಾದ ಒಡೆದು ಕಾಣುತ್ತದಾದರೂ, ಈ ವಿಷಾದ ಜೀವನ ಪ್ರೀತಿಯನ್ನೇನೂ ಮಸುಕುಗೊಳಿಸುವುದಿಲ್ಲ. ಈ ಕವಿತೆಗಳ ಕವಯತ್ರಿಗೆ ಕವಿತೆ ಕಸರತ್ತಿನ ಸಂಗತಿಯಲ್ಲ; ಒಲಿದಂತೆ ಹಾಡುವ ಜೀವನ ವಿಧಾನ. ಅವರ ಸರಳ ಭಾಷೆ ಕೂಡ ಕವಿತೆಗಳ ರುಚಿ ಹೆಚ್ಚಿಸುವಂತಿದೆ.

`ನಾನೊಬ್ಬ ಎ.ಬಿ.ಸಿ.ಡಿ.’ ಉಷಾ ಅವರ ಕಾವ್ಯದ ಪ್ರಾತಿನಿಧಿಕ ಕವಿತೆಯಂತೆ ಕಾಣುತ್ತದೆ. ಜಾಗತೀಕರಣದ ದ್ವಂದ್ವದಲ್ಲಿ ಸಿಲುಕಿರುವ ಯುವಪೀಳಿಗೆಯ ತಳಮಳಗಳನ್ನು ಈ ಕವಿತೆ ಸಮರ್ಥವಾಗಿ ಚಿತ್ರಿಸುತ್ತದೆ. `ನೀರಿನಿಂದ ಹೊರತೆಗೆದ ಮನಸ್ಥಿತಿ ನನ್ನದು’ ಎನ್ನುವ ತಳಮಳದ ಜೊತೆಯಲ್ಲಿಯೇ – `ಆದರೂ ನಾನು ಗೆಲ್ಲಲೆ ಬೇಕು ಅನ್ನುವ ಧನಾತ್ಮಕ ನಿಲುವು ಇವತ್ತಿಗೆ ಅನಿವಾರ್ಯವಾದುದು.

ಕೆಲವೊಮ್ಮೆ ಉಷಾ ಅವರ ಕವಿತೆ ವಾಚ್ಯವೆನ್ನಿಸುವುದಿದೆ. `ಧೂಳು ಕವಿದ ಕನ್ನಡಿ’ ಕವಿತೆಯಲ್ಲಿ, ಮೇಜಿನ ಮೇಲೆ ಕವಿದ ಧೂಳಿನಲ್ಲಿ ಪೋರನೊಬ್ಬ ಹಸ್ತಾಕ್ಷರ ಬರೆಯುವುದು ಜೀವಂತ ಕ್ಷಣ. ಆದರೆ ಕಾವ್ಯದ ಈ ಅಮೃತ ಕ್ಷಣಗಳು ಮುಂದಿನ ಸಾಲುಗಳಲ್ಲಿ ತೆಳುವಾಗುತ್ತದೆ. ಆದರೂ, ಕವಯತ್ರಿಯ ಜೀವಪರ ಧೋರಣೆ ಕವಿತೆಯನ್ನು ಸಹನೀಯಗೊಳಿಸುತ್ತದೆ. ಇಂಥ ಆರೋಗ್ಯಕರ ನಿಲುವಿನ ಕಾರಣದಿಂದಲೇ- `ಮುಕ್ತಿಗೆ ಅರ್ಹರು’, `ಮೂರ್ತಿ ಕಿರಿದಾದರೇನು’, `ಗುಟುಕು ಹಾಲಿನ ಮಹತ್ತು’, `ರೈಲು ಚೆಂಬಿನ ಪಯಣ’, `ಎಳೆ ಕಂದನ ಸೊಗಸು’ ಮುಂತಾದ ಕವಿತೆಳು ಇಷ್ಟವಾಗುತ್ತವೆ.

ಶೀರ್ಷಿಕೆ: ಹಸಿವೆಂಬೊ ಮಾಯೆ  ಲೇಖಕರು:ಪ್ರೊ.ಉಷಾ ಕೃಷ್ಣಮೂರ್ತಿ ಪ್ರಕಾಶಕರು:ಸಿ.ವಿ.ಜಿ. ಪ್ರಕಾಶನ ಪುಟ:116 ಬೆಲೆ:ರೂ.70/-

ಕೃಪೆ: ಪ್ರಜಾವಾಣಿ

ಜುಲೈ ೫ ರಂದು ಬಿಡುಗಡೆಯಾದ ಕೆಲವು ಪುಸ್ತಕಗಳು

scan0007(2)ಶೀರ್ಷಿಕೆ:ನೂರೆಂಟು ಸುಭಾಷಿತಗಳು ಲೇಖಕರು:ಮಹಾಬಲ ಸೀತಾಳಭಾವಿ ಪ್ರಕಾಶನ:ಅಂಕಿತ ಪುಸ್ತಕ

scan0004ಶೀರ್ಷಿಕೆ:ಆಂಟನ್ ಚೆಕಾಫ್ ಕಥೆಗಳು ಪ್ರಕಾಶನ:ಅಂಕಿತ ಪುಸ್ತಕ

scan0008(2)ಶೀರ್ಷಿಕೆ:ಪಟ್ಟದ ಗೊಂಬೆಯೂ ಪರದೇಶವೂ ಲೇಖಕರು:ಶಾಂತಾ ನಾಗರಾಜ್ ಪ್ರಕಾಶಕರು:ಅಂಕಿತ ಪುಸ್ತಕ

scan0005(2)

ಶೀರ್ಷಿಕೆ:ನನ್ನ ಅಜ್ಜಿಯ ಜಗತ್ತು ಲೇಖಕರು:ರಜನೀ ನರಹಳ್ಳಿ ಪ್ರಕಾಶಕರು:ಸುಮುಖ ಪ್ರಕಾಶನ

scan0006

ಶೀರ್ಷಿಕೆ:ಘಳಿಗೆಗೊಂದು ಗುಳಿಗೆ ಲೇಖಕರು:ಸಿ.ಎನ್.ಕೃಷ್ಣಮಾಚಾರ‍್ ಪ್ರಕಾಶಕರು:ಸುಮುಖ ಪ್ರಕಾಶನ

ಕೃಪೆ: ಉದಯವಾಣಿ

ವಿಶ್ವದಲ್ಲಿ ಅನ್ಯಾಯವಾದ ಪ್ರತಿಯೊಂದು ಸಲ ನೀವು ಕೋಪದಿಂದ ಕಂಪಿಸಬಲ್ಲಿರಾದರೆ…

che book

ಕ್ರಾಂತಿಯ ಹಂಬಲ ಹೋರಾಟಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಂಡು ಪಡೆದ ಪಕ್ವ ದೃಷ್ಟಿಕೋನ ನನ್ನ ಹಿಂದಿನ ವೈದ್ಯಕೀಯ ವಿದ್ಯಾರ್ಥಿದೆಸೆಯಲ್ಲಿ ಇರಲಿಲ್ಲ. ನಾನು ಎಲ್ಲರಂತೆ ಯಶಸ್ವಿಗೆ ಆಶಿಸಿದೆ; ನಾನೊಬ್ಬ ಪ್ರಸಿದ್ಧ ಸಂಶೋಧಕನಾಗಿ, ಬಿಡುವಿಲ್ಲದೆ ದುಡಿದು, ಮಾನವ ಜೀವಿಗಳೆಲ್ಲರಿಗೂ ಲಾಭವಾಗುವಂತಹ ಏನಾದರೂ ಸಂಶೋಧನೆ ಮಾಡುವ ಕನಸು ಕಾಣುತ್ತಿದ್ದೆ. ಆದರೆ ಇವೆಲ್ಲ ವೈಯಕ್ತಿಕ ಯಶಸ್ಸಿಗಾಗಿ ಕಟ್ಟಿದ ಕನಸುಗಳು. ನಮ್ಮೆಲ್ಲರಂತೆ ನಾನೂ ಸಹ ನಮ್ಮ ಪರಿಸರದಿಂದ ರೂಪಿತವಾದ ವ್ಯಕ್ತಿಯಾಗಿದ್ದೆ.

“……..ದಾರಿದ್ರದಿಂದಾಗಿ, ಹೇಗೆ ತಂದೆ ತಾಯಿಯರು ತಮ್ಮ ಮಕ್ಕಳ ರೋಗಗಳಿಗೆ ಔಷಧಿ ಕೊಡಲಾರದಾಗಿದ್ದರೆಂಬುದನ್ನು ಕಂಡೆ. ಹಸಿವೆ ಮತ್ತು ನರಳಿಕೆಗಳಿಂದ ಪೀಡಿತನಾದ ತಂದೆ ತನ್ನ ಮಗು ಸಾಯುವುದನ್ನು ನಿರ್ವಿಕಾರನಾಗಿ ಸಹಿಸಿಕೊಳ್ಳುವಷ್ಟು ಪಶುಪ್ರಾಯನಾಗಿ ಮನುಷ್ಯನು ಅಧಃಪಾತಾಳಕ್ಕೆ ಜಾರುವುದನ್ನು ಕಂಡೆ. ಪ್ರಸಿದ್ಧ ಸಂಶೋಧಕನಾಗುವುದಕ್ಕಿಂತ, ಅಥವಾ ಆರೋಗ್ಯ ಶಾಸ್ತ್ರಕ್ಕೆ ಒಂದು ಅಮೂಲ್ಯ ಕೊಡುಗೆ ಕೊಡುವುದಕ್ಕಿಂತಲೂ ಯಾವ ರೀತಿಯಲ್ಲೂ ಕನಿಷ್ಟವೆಂದು ಹೇಳಲಾಗದ ಜೀವನದ ದ್ಯೇಯ ಇನ್ನೊಂದು ಇದೆಯೆಂದು ನಾನು ಕಂಡುಕೊಂಡೆ….. ಈ ಜನರ ಸಹಾಯಕ್ಕೆ ನಾನು ಒದಗಬೇಕೆಂಬ ಜ್ಞಾನೋದಯವಾಗಿತ್ತು.

ಇದು ವಿಶ್ವದಲ್ಲಿ ಅನ್ಯಾಯವಾದ ಪ್ರತಿಯೊಂದು ಸಲ ನೀವು ಕೋಪದಿಂದ ಕಂಪಿಸಬಲ್ಲಿರಾದರೆ ನಾವು ಸಂಗಾತಿಗಳು! ಎಂದ ಅಗ್ರಗಣ್ಯ ಕ್ರಾಂತಿಕಾರಿ ಮತ್ತು ಲ್ಯಾಟಿನ್ ಅಮೆರಿಕಾದ ಜನತೆಗಳ ರಾಷ್ಟ್ರೀಯ ವಿಮೋಚನಾ ಹೋರಾಟಗಾರ ಆರ್ನೆಸ್ಟೋ ಚೆ ಗುವಾರರ ಜೀವನದ ಬಗ್ಗೆ ಐ. ಲವ್ರೆತ್ಸ್ಕಿ (ಡಾ.ಐ.ಆರ‍್.ಗ್ರಿಗುಲೆವಿಚ್, ಸೋವಿಯತ್ ಒಕ್ಕೂಟದ ವಿಜ್ಞಾನಗಳ ಅಕಾದೆಮಿಯ ಕರೆಸ್ಪಾಂಡಿಂಗ್ ಸದಸ್ಯ) ಬರೆದ ಪುಸ್ತಕ ಇದು.

ಈ ಪುಸ್ತಕಕ್ಕೆ ಲೇಖಕರು ಅನೇಕ ದಾಖಲೆಗಳನ್ನು, ಪತ್ರಿಕಾ ವರದಿ-ಲೇಖನಗಳನ್ನು, ಚೆ ಗುವಾರ ಅವರ ಮಿತ್ರರು, ಸಂಬಂಧಿಕರು ಮತ್ತು ಅವರ ಜೊತೆಗೂಡಿ ಹೋರಾಡಿದ ಸಂಗಾತಿಗಳೊಡನೆಯ ಸಂಭಾಷಣೆಗಳ ಟಿಪ್ಪಣಿಗಳನ್ನು ಬಳಸಿಕೊಂಡಿದ್ದಾರೆ.

ಈ ಪುಸ್ತಕವನ್ನು ಕನ್ನಡಕ್ಕೆ ತಂದವರು ಗೊ.ರು.ಚನ್ನಬಸಪ್ಪ, ಸೂರ್ಯಕಾಂತ ಸೊನ್ನದ ಹಾಗೂ ಕೆ.ಪಿ.ಸ್ವಾಮಿ

– ಪುಸ್ತಕದ ಬೆನ್ನುಡಿಯಿಂದ
ಶೀರ್ಷಿಕೆ : ಆರ್ನೆಸ್ಟೋ ಚೆ ಗುವಾರ     ಮೂಲ ಲೇಖಕರು:ಐ ಲಾವ್ರೆತ್ ಸ್ಕಿ ಪ್ರಕಾಶಕರು:ನವಕರ್ನಾಟಕ ಪುಟ:504 ಬೆಲೆ:ರೂ.40/-(ಪ್ರಥಮ ಮುದ್ರಣದ ಬೆಲೆ)