ಕರಿಕೆಯ ಕುಡಿ

scan0004

ಕವಿ, ಜಾನಪದ ಸಂಶೋಧಕ ವಿ.ಗ. ನಾಯಕ ಆಗಾಗ ಬರೆದ ತಮ್ಮ ಅಂಕಣ ಬರಹಗಳನ್ನು `ಕರಿಕೆಯ ಕುಡಿಯಲ್ಲಿ ಕೊಟ್ಟಿದ್ದಾರೆ. 37 ಕುಡಿಗಳು ಇಲ್ಲಿವೆ. ಉತ್ಸಾಹಿಗಳೂ, ಸೂಕ್ಷ್ಮಮತಿಗಳೂ ಜೊತೆಗೆ ವಿನಯವಂತರೂ ಆದ ಲೇಖಕರು `ಇಲ್ಲಿನ ಬರಹ ಹೆಮ್ಮರವೂ ಅಲ್ಲ, ಮರ, ಗಿಡ, ಹೂ, ಬಳ್ಳಿಗಳ ಸಾಲಿಗೆ ಸೇರುವಂಥದ್ದೂ ಅಲ್ಲ. ಒಂದೊಂದೂ ಕರಿಕೆಯ ಕುಡಿಎಂದಿದ್ದಾರೆ. ಕರಿಕೆಯ ಕುಡಿ ದೇವರ ಪೂಜೆಗೆಂದು ಬಳಸುವ ಹುಲ್ಲಿನ ಜಾತಿ. ಅಂದರೆ, ಪುಟ್ಟದಾದರೂ ಅದರ ಮಹತ್ವ ಅದಕ್ಕಿದ್ದೇ ಇದೆ.

ಲೇಖಕರು ಸಾಹಿತ್ಯ, ಸಂಸ್ಕೃತಿ, ವ್ಯಕ್ತಿ, ಜಾತಿ ಹೀಗೆ ಅನೇಕ ವಸ್ತುಗಳನ್ನು ತಮ್ಮ ಅಂಕಣದ ವ್ಯಾಪ್ತಿಗೆ ತಂದಿದ್ದಾರೆ. ಕೆಲವನ್ನು ಬಿಟ್ಟರೆ ಉತ್ತರ ಹಾಗೂ ದಕ್ಷಿಣ ಕನ್ನಡದ ವ್ಯಕ್ತಿ ಹಾಗೂ ಸಂಗತಿಗಳೇ ಅವರ ಬರಹದಲ್ಲಿ ಮುಖ್ಯ ವಸ್ತುಗಳಾಗಿವೆ.

ತುಂಡು, ತುಂಡು ವಾಕ್ಯಗಳು, ಅಸ್ಖಲಿತವಾದ ಭಾವನಾತ್ಮಕ ಭಾಷೆ ವಿ.ಗ.ನಾಯಕರ ಬರಹಗಳ ಶೈಲಿಯಾಗಿದೆ. ಅವರು ಆಯ್ದುಕೊಳ್ಳುವ ವಸ್ತುಗಳು ಕೂಡಾ ಬೇರೆ ರೀತಿಯವೇ. ಮುನ್ನೆಲೆಯಲ್ಲಿ ಪ್ರಧಾನವಾಗಿ ಹೆಚ್ಚು ಕಾಣಿಸಿಕೊಳ್ಳದ ವ್ಯಕ್ತಿಗಳೇ ಅವರ ಬರಹಗಳ ವಸ್ತು. ಬಂಡಾಯ ಲೇಖಕ ಆರ‍್.ವಿ.ಭಂಡಾರಿ, ಕವಿ ರಾಧಾಕೃಷ್ಣ ಉಳಿಯತ್ತಡ್ಕ, ಲೇಖಕ ಗಣಪತಿ ದಿವಾಣ, ಎನ್.ಆರ‍್.ನಾಯಕ . . . ಹೀಗೆ ಅನೇಕರ ಸಾಧನೆ ನಾಯಕರ ಬರವಣಿಗೆಗೆ ಕಾರಣವಾಗುತ್ತದೆ. ಈ ಎಲ್ಲ ಕಾರಣಗಳಿಗಾಗಿಯೇ ಈ ಪುಸ್ತಕವೂ ಓದುಗರ ಮೆಚ್ಚುಗೆಗೂ ಕಾರಣವಾಗುವಂತಿದೆ.

ಶೀರ್ಷಿಕೆ:ಕರಿಕೆಯ ಕುಡಿ (ಅಂಕಣ ಬರಹಗಳು) ಲೇಖಕರು:ವಿ.ಗ. ನಾಯಕ ಪ್ರಕಾಶಕರು: ಸ್ಮೃತಿ ಪ್ರಕಾಶನ ಪುಟಗಳು: 136 ಬೆಲೆ:ರೂ.75/-

ಕೃಪೆ : ಪ್ರಜಾವಾಣಿ

ಕನ್ನಡದಲ್ಲಿ ಕಾಳೀಪಟ್ನಂ ರಾಮಾರಾವ್

scan0003

ಆಂಧ್ರಪ್ರದೇಶದ ಶ್ರೀಕಾಕುಳಂ ಚಿಲ್ಲೆಯ ಮುರಪಾಕದವರಾದ ಕಾಳೀಪಟ್ನಂ ರಾಮಾರಾವ್ ತೆಲುಗಿನ ಪ್ರಸಿದ್ಧ ಕಥಾಲೇಖಕ. `ಕಾ.ರಾ.ಮಾಸ್ಟಾರುಎಂದೇ ಆಂಧ್ರದ ಸಾಹಿತ್ಯ ಲೋಕದಲ್ಲಿ ಗುರುತಿಸಲ್ಪಡುವ ರಾಮಾರಾವ್ ಈವರೆಗೆ ಬರೆದದ್ದು ಕಡಿಮೆ. ೨೫ ಕಥೆಗಳನ್ನಷ್ಟೇ ಅವರು ಬರೆದಿರುವುದು. `ರಾಗಮಾಯಿ, `ಅಭಿಮಾನಾಲು ಅವರ ಕಾದಂಬರಿಗಳು.

ಮಾಕ್ಸ್೯ವಾದಿ ಸಿದ್ಧಾಂತದಿಂದ ಪ್ರಭಾವಿತರಾದ ಈ ಲೇಖಕ ತಾವು ನೆಲಸಿರುವ ಶ್ರೀಕಾಕುಳಂ ಜಿಲ್ಲೆಯ ಕಥನವನ್ನೇ ತಮ್ಮ ಕಥೆಗಳಲ್ಲಿ ಬರೆದಿದ್ದಾರೆ. ಈ ಲೇಖಕನ ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ ಕವಿ, ಕಥೆಗಾರ ಚಿದಾನಂದ ಸಾಲಿ.

ಈ ಸಂಕಲನದಲ್ಲೂ ಕಾಳೀಪಟ್ನಂ ರಾಮಾರಾವ್ 25 ಕಥೆಗಳಲ್ಲಿ ಆಯ್ದ ಒಂಬತ್ತು ಕಥೆಗಳು ಮಾತ್ರ. ಕೊಳ್ಳುವವರಿಗೆ ಭಾರವಾಗುತ್ತದೆ ಎಂಬ ಕಾರಣಕ್ಕೆ ರಾಮಾರಾವ್ ಅವರ ತುಂಬಾ ಜನಕ್ಕೆ ಇಷ್ಟವಾಗಿರುವ ಕಥೆಗಳನ್ನು ಮಾತ್ರ ಸೇರಿಸಿ ಈ ಸಂಕಲನವನ್ನು ಪ್ರಕಟಿಸಿದ್ದಾರೆ.

ಅತ್ಯಂತ ಚಿಕ್ಕ ವಾಕ್ಯಗಳು, ದೀರ್ಘವಾದ ಕಥೆಗಳು, ಚಿಕ್ಕ ತಲೆ ಬರಹ (ಯಜ್ಞ, ಹಿಂಸೆ, ನೋ ರೂಮ್, ನೋವು … ಇತ್ಯಾದಿ( ರಾಮಾರಾವ್ ಅವರ ಕಥೆಗಳ ವಿಶೇಷ ಅಂಶಗಳು. ಅವರ ಸರಳ ನಿರೂಪಣೆಯ ಶೈಲಿಯನ್ನು ಕನ್ನಡ ನುಡಿಗಟ್ಟಿಗೆ ಅನುವಾದಿಸಿದ್ದಾರೆ ಚಿದಾನಂದ ಸಾಲಿ. ಅನುವಾದ ರಾಮರಾವು ಕಥಾಲೋಕವನ್ನು ಅರಿಯಲು ಸಹಾಯವಾಗುವಂತಿದೆ. ಭಿನ್ನವಾದ ಹಾಗೂ ದೀರ್ಘ ಎನಿಸುವ ಈ ಕಥೆಗಳು ಓದುತ್ತಾ ಓದುತ್ತಾ ಮರಳು ಮಾಡುವಷ್ಟು ಶಕ್ತಿಶಾಲಿಯಾಗಿವೆ.

ಶೀರ್ಷಿಕೆ:ಯಜ್ಞ (ಒಂಬತ್ತು ಕತೆಗಳು ) ಲೇಖಕರು:ಕಾಳೀಪಟ್ನಂ ರಾಮಾರಾವ್ ಕನ್ನಡಕ್ಕೆ:ಚಿದಾನಂದ ಸಾಲಿ ಪ್ರಕಾಶಕರು: ಸಾಹಿತ್ಯ ಅಕಾಡಮಿ ಪುಟಗಳು: 328 ಬೆಲೆ:ರೂ.200/-

ಕೃಪೆ : ಪ್ರಜಾವಾಣಿ

 

 

ಕತ್ತಲೆ ರಾಕ್ಷಸರಿಗೆ ಬೆಳಕು

scan0002

ಹಿರಿಯ ವಿದ್ವಾಂಸರಾದ ಎಲ್. ಬಸವರಾಜು ಬರೆದ ತಾತ್ವಿಕ ಚಿಂತನೆಗಳನ್ನು ಇಲ್ಲಿನ ಪುಟ್ಟ ಬರಹಗಳು ಒಳಗೊಂಡಿವೆ. ಸುಮಾರು ೧೭೦ ಬರಹಗಳನ್ನು ಒಳಗೊಂಡಿರುವ ಈ ಪುಸ್ತಕ ಬದುಕು ಹಾಗೂ ಜಗತ್ತಿನ ಕುರಿತಾಗಿ ತಾತ್ವಿಕವಾಗಿ ಚಿಂತಿಸುತ್ತದೆ ಮತ್ತು ಓದಿದವರನ್ನು ಯೋಚನೆಗೆ ಹಚ್ಚುತ್ತದೆ. ಇಲ್ಲೆಲ್ಲ ಎಲ್.ಬಿ. ಅವರ ಅಗಾಧ ಪಾಂಡಿತ್ಯ, ಜೀವನಾನುಭವ ತಿಳಿಜಲದಂತೆ ಪ್ರವಹಿಸುವುದನ್ನು ಕಾಣಬಹುದು.

ಇಲ್ಲಿ ಲೇಖಕರು ಮುಟ್ಟದ ವಿಷಯವೇ ಇಲ್ಲ ಎನ್ನಬಹುದು. ಪ್ರೀತಿಯಿಂದ, ಯೋಗದವರೆಗೆ, ಚಟದಿಂದ ದೇವರ ಬಗ್ಗೆ, ಅಂಬಿಗನಿಂದ ಬುದ್ಧನವರೆಗೆ ಅವರು ಚಿಂತನೆಯ ಒರೆಗೆ ಹಚ್ಚದ ವಿಷಯವೇ ಇಲ್ಲ. ಸಾಮಾನ್ಯ ಓದುಗರನ್ನು ಗಮನದಲ್ಲಿಟ್ಟುಕೊಂಡು ಮಾಡಿದ ಬರಹವಾದ್ದರಿಂದ ತೀರ ಸರಳವಾದ ವರ್ತಮಾನದ ಬಳಕೆಯ ಭಾಷೆ ಇಲ್ಲಿನ ಬರಹಗಳಿಗೆ ದೊರಕಿದೆ. ಬದುಕಿನ ಅನೇಕ ಸಂಗತಿಗಳು ಲೋಕಜ್ಞಾನವಾಗಿ ಓದುಗರನ್ನು ಮುಟ್ಟುವಂತಿದೆ. ಹಾಗಾಗಿ ಅವು ಎಲ್ಲರನ್ನೂ ಸೆಳೆಯುವ, ಉಳಿಯುವ ಗುಣವನ್ನು ಪಡೆದಿದೆ. ಅಂದಹಾಗೆ, ಈ ಬರಹಗಳು ಈಗಾಗಲೇ `ಪ್ರಜಾವಾಣಿ’ಯ `ಬಾಳಬುತ್ತಿ’, `ಅರಿವಿನ ಅಂತರಾಳ’ ಅಂಕಣಗಳಲ್ಲಿ ಪ್ರಕಟವಾಗಿ ಓದುಗರ ಮೆಚ್ಚುಗೆಯನ್ನು ಪಡೆದಿವೆ.
ಶೀರ್ಷಿಕೆ:ಕತ್ತಲೆ ರಾಕ್ಷಸರಿಗೆ ಬೆಳಕು (ತಾತ್ವಿಕ ಚಿಂತನ ಬರಹಗಳು) ಲೇಖಕರು:ಡಾ. ಎಲ್. ಬಸವರಾಜು ಪ್ರಕಾಶನ: ರೂಪ ಪ್ರಕಾಶನ ಪುಟಗಳು: 320 ಬೆಲೆ:ರೂ.200/-

 

 

 

ಕೃಪೆ : ಪ್ರಜಾವಾಣಿ

 

 

ಶಂಕರ ಮೊಕಾಶಿ ಪುಣೇಕರ ಅವರ ಬರಹಗಳು

scan0001

‘ಅವಧೇಶ್ವರಿ’, `ಗಂಗವ್ವ ಗಂಗಾಮಾಯಿ’,`ನಟ ನಾರಾಯಣ’ ದಂಥ ಕನ್ನಡದ ಪ್ರಮುಖ ಕಾದಂಬರಿಗಳನ್ನು ಬರೆದ ಶಂಕರ ಮೊಕಾಶಿ ಪುಣೇಕರ ಅನನ್ಯ ಒಳನೋಟಗಳ ವಿಮರ್ಶಕರೂ ಆಗಿದ್ದರು. ಅವರು ಭಾರತೀಯ ಸಂಸ್ಕ್ರತಿಯನ್ನು ಅಭ್ಯಸಿಸಿ ಬರೆದ ಲೇಖನಗಳು, ಕನ್ನಡ ಸಾಹಿತ್ಯದ ಕುರಿತಾದ ಅವರ ಲೇಖನಗಳು, ಕನ್ನಡ ಸಾಹಿತ್ಯದ ಕುರಿತಾದ ಅವರ ಲೇಖನಗಳು ತಮ್ಮ ವಿಶಿಷ್ಠ ಒಳನೋಟಗಳಿಂದಾಗಿಯೇ ಗಮನ ಸೆಳೆಯುತ್ತವೆ.

ಇಂಥ ಲೇಖಕನ ಲೇಖನಗಳನ್ನು ಒಂದೆಡೆ ತಂದಿದ್ದಾರೆ ಜಿ.ಬಿ.ಹರೀಶ್. ಇದರೊಂದಿಗೆ ಸುಮತೀಂದ್ರ ನಾಡಿಗ್, ಮಲ್ಲೇಪುರಂ ಜಿ. ವೆಂಕಟೇಶ್, ರಹಮತ್ ತರೀಕೆರೆಯವರು ಮಾಡಿದ ಅವರ ವ್ಯಕ್ತಿತ್ವವನ್ನು ಇಡಿಯಾಗಿ ಪ್ರಕಟಿಸುವ ಸಂದರ್ಶನಗಳನ್ನು ಗಮನಿಸಬಹುದು. ಇಲ್ಲಿ ಕೆಲವು ಕನ್ನಡದ ಕೃತಿಗಳ ಕುರಿತಾಗಿ ಮೊಕಾಶಿಯವರು ಬರೆದ ಬರಹಗಳೂ ಇವೆ.

ಮೊಕಾಶಿಯವರ ಲೇಖನಗಳಿಗೆ ವಿಭಿನ್ನವಾದ ವಿಮರ್ಶಾತ್ಮಕ ನೋಟಗಳು ಇವೆ. ಅದು ಅವರ `ವೇದ ಪುರಾಣ – ಮಹಾಕಾವ್ಯ’, `ಕಾವ್ಯದಲ್ಲಿ ಸ್ಮೃತಿ, ಬುದ್ಧಿ ಹಾಗೂ ಸಾಂಗತಿಕ ಪ್ರಜ್ಞೆ’, `ಭಾಷಾ ಬೋಧನೆಯಲ್ಲಿ ಚಾಮ್ ಸ್ಕಿ – ಸ್ಕಿನ್ನರ‍್ ಪ್ರಾಯೋಗಿಕ ವಿಧಾನ’ದಂತಹ ಅನೇಕ ಲೇಖನಗಳಲ್ಲಿ ಕಾಣುತ್ತದೆ. ಶಂಕರ ಮೊಕಾಶಿ ಪುಣೇಕರರ ಲೇಖನಗಳನ್ನು ಓದುವುದೆಂದರೆ ಅದೊಂದು ಬೇರೆಯಾದ ದರ್ಶನವನ್ನು ನೀಡುವ ಪ್ರಯಾಣವೇ

ಶೀರ್ಷಿಕೆ: ನೀರಬೆಳಗು (ಶಂಕರ ಮೊಕಾಶಿ ಪುಣೇಕರ ಅವರ ಬರಹಗಳು) ಸಂ:ಜಿ.ಬಿ.ಹರೀಶ ಪ್ರಕಾಶಕರು:ಸಪ್ನ ಬುಕ್ ಹೌಸ್ ಪುಟ:360 ಬೆಲೆ:ರೂ.175/-

ಕೃಪೆ: ಪ್ರಜಾವಾಣಿ