ಒಂದು ಅಸಮಗ್ರ ಆತ್ಮಕಥನ

 

ಹಿರಿಯ ಕವಿ ಜಿ. ಎಸ್. ಶಿವರುದ್ರಪ್ಪ ತಮ್ಮ ಆತ್ಮಕಥೆಯನ್ನು ಪ್ರಕಟಿಸಿದ್ದಾರೆ. ಬಹು ಹಿಂದೆಯೇ ಪ್ರಕಟವಾದ ಈ ಪುಸ್ತಕ ಈಗ ಮೂರನೆಯ ಮುದ್ರಣವನ್ನು ಕಂಡಿದೆ. ಇದನ್ನು ಜಿ. ಎಸ್. ಎಸ್. `ಒಂದು ಅಸಮಗ್ರ ಆತ್ಮಕಥನ’ ಎಂದು ಕರೆದುಕೊಂಡಿದ್ದಾರೆ. ಏಕೆಂದರೆ ಕವಿಗಳೇ ಹೇಳಿಕೊಂಡಂತೆ, `ನನ್ನನ್ನು ಕುರಿತು ನಾನು ನಿಸ್ಸಂಕೋಚವಾಗಿ ಹೇಳಿಕೊಳ್ಳಲಾಗದ ಅನೇಕ ನಿರ್ಬಂಧಗಳಲ್ಲಿ – ಅವು ವೈಯಕ್ತಿಕವಾಗಿರಬಹುದು, ಸಾಮಾಜಿಕವಾಗಿರಬಹುದು, ಸಾಂಸ್ಕೃತಿಕವಾಗಿರಬಹುದು – ನಾನು ಹಾಗೂ ನನ್ನಂಥವರು ಬದುಕುತ್ತಿದ್ದೇವೆ ಎಂಬ ಕಾರಣದಿಂದ; ಮತ್ತು ಒಬ್ಬ ಸೃಜನಶೀಲ ಲೇಖಕ ವಾಸ್ತವವಾಗಿ ತನ್ನ ಬರಹಗಳಲ್ಲೇ ತನ್ನ ನಿಜವಾದ ಆತ್ಮಕತೆಯನ್ನು ಬರೆದುಕೊಂಡಿರುತ್ತಾನೆ ಎಂದು ನಾನು ತಿಳಿದುಕೊಂಡಿರುವುದರಿಂದ” ಎಂದಿದ್ದಾರೆ.

 ಇದೇನೇ ಇದ್ದರೂ ಕನ್ನಡದಲ್ಲಿ ಆತ್ಮಕಥನಗಳು ಕುತೂಹಲಕಾರಿಯಾದ ಸಾಂಸ್ಕೃತಿಕ ದಾಖಲೆಗಳಾಗಿವೆ. ಅವು ತಮ್ಮ ಆತ್ಮಕಥೆಯನ್ನು ನಿರೂಪಿಸುವುದರೊಂದಿಗೆ ರಾಜಕೀಯವಾದ, ಸಾಮಾಜಿಕವಾದ ಕಥೆಯನ್ನೂ ಏಕಕಾಲದಲ್ಲಿ ಹೇಳುತ್ತಿರುತ್ತವೆ. ಈ ದೃಷ್ಟಿಯಲ್ಲಿ ಜಿ.ಎಸ್.ಎಸ್. ಅವರ ಕುರಿತಂತೆ ಪೂರ್ಣವಾದ ಚಿತ್ರವನ್ನೇನೂ ಕೊಡುವುದಿಲ್ಲ. ಅವೆಲ್ಲ ಚೂರುಪಾರು ಚಿತ್ರಗಳೇ. ಅವನ್ನೆಲ್ಲ ಪೂರ್ಣ ಮಾಡುವಂಥ ಸಮಗ್ರ ಆತ್ಮಕಥೆಯನ್ನು ನಾವು ಜಿ.ಎಸ್.ಎಸ್. ರಿಂದ ನಿರೀಕ್ಷಿಸಬಹುದು.

 ಶೀರ್ಷಿಕೆ: ಚತುರಂಗ (ಒಂದು ಅಸಮಗ್ರ ಆತ್ಮಕಥನ) ಲೇಖಕರು : ಜಿ. ಎಸ್. ಶಿವರುದ್ರಪ್ಪ ಪ್ರಕಾಶಕರು : ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ ಪುಟಗಳು: 87 ಬೆಲೆ: ರೂ. 40/-

ಕೃಪೆ: ಪ್ರಜಾವಾಣಿ

ಸರಳ ಸುಲಭ ರಚನೆಯ ಕವನಗಳು

ಸುಮಾರು 97 ಕವಿತೆಗಳನ್ನು ತಮ್ಮ ಕವನ ಸಂಗ್ರಹ `ಸ್ವಗತ ದಲ್ಲಿ ನೀಡಿದ್ದಾರೆ ಎಸ್. ಪ್ರಸಾದಸ್ವಾಮಿ. ಸರಳವಾಗಿ ಬರೆಯುವುದನ್ನು ತಮ್ಮ ಉದ್ದೇಶವನ್ನಾಗಿ ಉಳ್ಳ ಕವಿ ಸರಳ ಸುಲಭ ರಚನೆಗಳನ್ನು ಇಲ್ಲಿ ನೀಡಿದ್ದಾರೆ.

`ಒಲುಮೆ ಗಿಲುಮೆಯ ಮಾತು ಅಲ್ಲಿರಲಿ ಈಗನೀ ಹೆಣ್ಣು ನಾ ಗಂಡು ಅಷ್ಟೆ ಸಾಕು(

ನಲ್ಲೆಗೆ/ ೨೧) ಎಂದು ಬರೆದಿರುವುದು ಅವರ ಸರಳವಾಗಿ ಕವಿತೆಗಳನ್ನು ಹೇಳುವುದಕ್ಕೆ ಉದಾಹರಣೆಯಾಗಬಹುದು.`

ಕಾವ್ಯದ ಲಯದಲ್ಲಿ ನೀವು ತುಂಬ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.., ಅಡಿಗ, ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬ ಅರ್ಥಪೂರ್ಣವಾಗಿ ದುಡಿಸಿಕೊಂಡಿದ್ದೀರಿಎಂದು ಪುಸ್ತಕದ ಹಿನ್ನುಡಿಯಲ್ಲಿ ವಿಮರ್ಶಕ ಜಿ. ರಾಜಶೇಖರ ಬರೆದಿದ್ದಾರೆ. ಓದುಗರನ್ನು ಮುಟ್ಟುವ ಉದ್ದೇಶ ಹೊಂದಿರುವ ಕವಿ ಮಾತುಗಾರಿಕೆಯನ್ನು ಕಡಿಮೆ ಮಾಡಿ ಕಾವ್ಯ ಅಂಶದ ಕಡೆಗೆ ಗಮನ ಕೊಡುವ ಅಗತ್ಯ ಎನ್ನುವುದು ಕವಿತೆಗಳನ್ನು ಓದಿದಾಗ ಕಂಡು ಬರುವ ಅಂಶ.

ಶೀರ್ಷಿಕೆ: ಸ್ವಗತ (ಕವಿತೆಗಳು) ಲೇಖಕರು: ಡಾ. ಎಸ್. ಪ್ರಸಾದಸ್ವಾಮಿ ಪ್ರಕಾಶಕರು: ಅವಿರತ ಪುಸ್ತಕ ನಂ.70, 9ನೇ ತಿರುವು, 1ನೇ ಮುಖ್ಯರಸ್ತೆ, ಬಿಡಿಎ ಬಡಾವಣೆ, ಆವಲಹಳ್ಳಿ ಬೆಂಗಳೂರು 560 085 ಪುಟಗಳು:132 ಬೆಲೆ:ರೂ.70/-

ಕೃಪೆ: ಪ್ರಜಾವಾಣಿ

 

ಅಪರಾಧ, ಪೊಲೀಸರು ಹಾಗೂ ಕಾನೂನಿನ ಅರಿವು ಉಂಟುಮಾಡಬಹುದಾದ ಪುಸ್ತಕ

ಇಡೀ ಜಗತ್ತು ಆತಂಕವಾದದ ಬಿಸಿಯನ್ನು ಅನುಭವಿಸುತ್ತಿದೆ. ಅದರ ರೂಪಗಳು ಹಲವು. ಅವುಗಳ ಮೂಲ ಆಸಕ್ತಿ ಮಾತ್ರ ಜನರಿಗೆ ತೊಂದರೆ ಉಂಟು ಮಾಡುವುದೇ ಆಗಿದೆ. ಆತಂಕವಾದ ಹಾಗೂ ಅಪರಾಧ ಜಗತ್ತಿನ ಪರಿಚಯವನ್ನು ಹಿರಿಯ ಪೊಲೀಸ್ ಅಧಿಕಾರಿ ಡಿ.ವಿ. ಗುರುಪ್ರಸಾದ್ ಇಲ್ಲಿ ಮಾಡಿಕೊಟ್ಟಿದ್ದಾರೆ.

ಅಪರಾಧ ಹಾಗೂ ಅಪರಾಧಿಗಳ ವೈಭವೀಕರಣ ಹೆಚ್ಚುತ್ತಿರುವ ಸಂದರ್ಭದಲ್ಲಿ ಗುರುಪ್ರಸಾದ್ ಕನ್ನಡದಲ್ಲಿ ಜನರಿಗೆ ಉಪಯುಕ್ತವಾಗುವ ಮಾಹಿತಿಗಳನ್ನು ಅದರ ಎಲ್ಲ ವಿವರಗಳೊಂದಿಗೆ ನೀಡಿದ್ದಾರೆ. ಇದರಲ್ಲಿ ಮುಂಬೈ ಮೇಲಿನ ದಾಳಿ, ಇತ್ತೀಚೆಗೆ ಹೆಚ್ಚುತ್ತಿರುವ ಸೈಬರ‍್ ಅಪರಾಧ, ವಂಚಕರು, ನಕ್ಸಲರ ಕುರಿತಂತೆ ಇಲ್ಲಿ ಬರೆಯಲಾಗಿದೆ. ಇದರೊಂದಿಗೆ ಅವುಗಳ ಕುರಿತಂತೆ ಅವರ ಚಿಂತನೆಯನ್ನೂ ನಾವು ಮನಗಾಣಬಹುದು.

ಅಪರಾಧ, ಪೊಲೀಸರು ಹಾಗೂ ಕಾನೂನಿನ ಅರಿವು ಉಂಟುಮಾಡಬಹುದಾದ ಪುಸ್ತಕ ಇದು. ಇಲ್ಲಿರುವ 49 ಲೇಖನಗಳಲ್ಲಿ ಜನರಿಗೆ ಅರಿವು ಮೂಡಿಸುವ ಪೊಲೀಸ್ ಅಧಿಕಾರಿಯ ಕೆಲಸವನ್ನು ಗುರುಪ್ರಸಾದ್ ಯಶಸ್ವಿಯಾಗಿ ಮಾಡಿದ್ದಾರೆ.

ಶೀರ್ಷಿಕೆ: ಆತಂಕವಾದದ ಸವಾಲು (ಭದ್ರತೆ, ಸುರಕ್ಷತೆ ಹಾಗೂ ಪೊಲೀಸ್ ವಿಷಯಗಳ ಬಗ್ಗೆ ವೈಚಾರಿಕ ಲೇಖನಗಳು) ಲೇಖಕರು: ಡಾ. ಡಿ.ವಿ. ಗುರುಪ್ರಸಾದ್ ಪ್ರಕಾಶನ: ಸಪ್ನ ಬುಕ್ ಹೌಸ್ ಪುಟಗಳು:223 ಬೆಲೆ:ರೂ.110/-

ಕೃಪೆ : ಪ್ರಜಾವಾಣಿ

ಪುಸ್ತಕ ಹಬ್ಬದಲ್ಲಿ ನಮ್ಮ ಸ್ಟಾಲ್ – 254 ಪುಸ್ತಕ ಪ್ರೀತಿ

scan0002

ಪುಸ್ತಕ ಹಬ್ಬ

scan0001

ಅರಮನೆ ಮೈದಾನದಲ್ಲಿ ಶುಕ್ರವಾರ ಆರಂಭವಾಗುವ ಪುಸ್ತಕೋತ್ಸವದಲ್ಲಿ 340 ಕ್ಕೂ ಹೆಚ್ಚು ಮಳಿಗೆಗಳಿವೆ. ಲಕ್ಷಾಂತರ ಪುಸ್ತಕಗಳಿವೆ. ಇದೊಂದು ಜ್ಞಾನ ಭಂಡಾರ.

ಪುಸ್ತಕ ಪ್ರಿಯರು ಕಾತರದಿಂದ ನಿರೀಕ್ಷಿಸುವ ಬೆಂಗಳೂರು ಪುಸ್ತಕ ಹಬ್ಬ ಶುಕ್ರವಾರ 06-11-2009 ದಿಂದ ಹತ್ತು ದಿನ ಕಾಲ ಅರಮನೆ ಮೈದಾನದಲ್ಲಿ ನಡೆಯಲಿದೆ.

ಏಷ್ಯಾದ ಎರಡನೇ ಅತಿ ದೊಡ್ಡ ಪುಸ್ತಕೋತ್ಸವ ಎನ್ನುವುದು ಇದರ ಹೆಗ್ಗಳಿಕೆ. ಈ ಬಾರಿಯದು ಏಳನೇ ವರ್ಷದ ಪುಸ್ತಕೋತ್ಸವ.

ಮೂರು ಲಕ್ಷಕ್ಕೂ ಅಧಿಕ ಮಂದಿ ಪುಸ್ತಕ ಪ್ರೇಮಿಗಳು ಭೇಟಿ ಸಂಘಟಕರ ಅಂದಾಜು. ಈ ಕಾರಣದಿಂದಾಗಿಯೇ ದೇಶದ ಪ್ರಮುಖ ಪ್ರಕಾಶಕರು ತಮ್ಮ ಪುಸ್ತಕಗಳ ಬೃಹತ್ ಸಂಗ್ರಹದೊಡನೆ ಇಲ್ಲಿ ಭಾಗವಹಿಸುತ್ತಿದ್ದಾರೆ.

ಈ ಬಾರಿ 340ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಬೆಂಗಳೂರು ಪುಸ್ತಕೋತ್ಸವ 2009 ರ ಕಾರ್ಯಕ್ರಮ ನಿರ್ದೇಶಕ ಬಿ. ಎಸ್. ರಘುರಾಮ್ ಹೇಳುತ್ತಾರೆ.

ಈ ಬಾರಿ ಕನ್ನಡ ಮಳಿಗೆಗಳಿಗೆ ಪುಸ್ತಕ ಪ್ರಾಧಿಕಾರ ರಿಯಾಯ್ತಿ ನೀಡಿದೆ. ಹೀಗಾಗಿ ಕನ್ನಡ ಪ್ರಕಾಶಕರಿಗೆ ಸುಲಭ ದರದಲ್ಲಿ ಮಳಿಗೆಗಳು ದೊರೆಯಲಿವೆ.

ಈ ಬಾರಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪುಸ್ತಕೋತ್ಸವಕ್ಕೆ ಉಚಿತ ಪ್ರವೇಶ. ಆದರೆ ಸಾರ್ವಜನಿಕರಿಗೆ 20 ರೂ ಶುಲ್ಕ.

ಸಾಂಸ್ಕೃತಿಕ ಕಾರ್ಯಕ್ರಮ : ಪುಸ್ತಕೋತ್ಸವದ ಅವಧಿಯಲ್ಲಿ ಪ್ರತಿದಿನ ಸಂಜೆ 6 ರಿಂದ 8 ರವರೆಗೆ ಸಾಂಸ್ಕೃತಿಕ ರಸದೌತಣ ಆಯೋಜಿಸಲಾಗುತ್ತದೆ.

ಇದಕ್ಕಾಗಿ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ವಿನಾಯಕ ಕೃಷ್ಣ ಗೋಕಾಕ ಸಾಂಸ್ಕೃತಿಕ ವೇದಿಕೆ ನಿರ್ಮಿಸಲಾಗಿದೆ. ಏಕೆಂದರೆ ಇದು ಗೋಕಾಕರ ಜನ್ಮ ಶತಮಾನೋತ್ಸವ ವರ್ಷ.

– ಆರ‍್. ಬಿ. ಕೃಪೆ : ಪ್ರಜಾವಾಣಿ

ವಿಮೋಚನೆಯ ಸಮರದ ಅನುಭವ ಮತ್ತು ನೆನಪು

910 cover blog

 ತಮ್ಮ ಹದಿನಾಲ್ಕನೆಯ ವಯಸ್ಸಿಗೇ ಬ್ರಿಟೀಷರ ವಿರುದ್ಧ ಪ್ರತಿಭಟಿಸುವ ಮನೋಭಾವವನ್ನು ಗಟ್ಟಿಗೊಳಿಸಿಕೊಂಡು ಮುಂದಡಿ ಇಟ್ಟ ಮೇಜರ‍್ ಜೈಪಾಲ್ ಸಿಂಗ್ ರವರ ನೆನಪುಗಳನ್ನು ಮಂಡಿಸುವ ಪುಸ್ತಕ `ವಿಮೋಚನೆಯ ಸಮರದಲ್ಲಿ’. ಜೈಪಾಲ್ ಸಿಂಗ್ ರವರು ಉತ್ತರ ಪ್ರದೇಶದವರು. ಅಲ್ಲಿಯ ಮುಜಾಪುರ‍್ ನಗರ ಜಿಲ್ಲೆಯ ಒಂದು ಹಳ್ಳಿಯ ಬಡ ಜಾಟ್ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದ ಜೈಪಾಲ್ ಸಿಂಗ್, ಜಾಟ್ ಜನಾಂಗದ ಹುಮ್ಮಸ್ಸು, ಎದೆಗಾರಿಕೆ, ಆಕ್ರೋಶ, ಮೈಕಟ್ಟನ್ನು ಹಾಗೇ ಸ್ವಾಭಿಮಾನವನ್ನು ಪ್ರತಿಬಿಂಬಿಸುವಂತಿದ್ದರು. ಅವರು ಬೆಳೆಯುತ್ತಾ ಬಂದಂತೆ ಆಗಿನ ದಿನಗಳಲ್ಲಿ ಬ್ರಿಟೀಷರನ್ನು ಬಗ್ಗು ಬಡಿಯಲು ತಮ್ಮದೇ ತಂತ್ರ ಉಪಯೋಗಿಸಿದರು.

ಅಂದರೆ ಬೇರೆಯವರಂತೆ ಹೊರಗಿನಿಂದ ಬ್ರಿಟೀಷರ ವಿರುದ್ಧ ಬಡಿದಾಡದೆ ಅವರ ಸೈನ್ಯವನ್ನೇ ಸೇರಿದರು. ಆದರೆ ಇದು ಅಪಾಯಕಾರಿಯಾಗಿತ್ತು. ಕೊಂಚ ಏರುಪೇರಾದರೂ ಜೈಪಾಲ್ ಗೆ ಮರಣದಂಡನೆಯೇ ಶಿಕ್ಷೆಯಾಗುತ್ತಿತ್ತು. ಆದರೂ ಹಿಂಜರಿಯದೆ ತಮ್ಮ ತಂತ್ರ ಸಫಲಗೊಳಿಸಲು ಶ್ರಮಿಸಿದರು. ಹೀಗೆ ಅವರು ಈ ದಾರಿಯಲ್ಲಿ ಸಾಗುವ ವೇಳೆ ಆದ ಅನುಭವಗಳನ್ನು ಜೈಪಾಲರು ಈ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.

ಈ ವಿಚಾರಗಳು ಈ ಹಿಂದೆಯೇ `ಐಕ್ಯರಂಗ’ ಎಂಬ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿರುವಂತಹದ್ದು. ಅದು ಹಾಗೇ ಉಳಿದು ಹೋಗದಿರಲೆಂದು ವಿಶ್ವ ಕುಂದಾಪುರರವರು ಎಲ್ಲಾ ಲೇಖನಗಳನ್ನು ಒಂದೆಡೆ ಸೇರಿಸಿ ಈ ಅಮೂಲ್ಯ ಪುಸ್ತಕವನ್ನು ಕನ್ನಡಿಗರಿಗೆ ನೀಡಿದ್ದಾರೆ. ಇಲ್ಲಿ ಎಳೆಎಳೆಯಾಗಿ ಜೈಪಾಲರ ಹೋರಾಟದ ಜೀವನ ಓದುಗರೆದುರಿಗೆ ತೆರೆದುಕೊಳ್ಳುತ್ತದೆ. ಪ್ರಧಾನಿ ಜವಾಹರಲಾಲ್ ನೆಹರೂರವರಿಗೆ ಜೈಪಾಲರು ಬರೆದ ಪತ್ರವೂ ಇದೆ. ಇಲ್ಲಿ ಅವರು ಬ್ರಿಟೀಷರ ವಿರುದ್ಧ ಹೋರಾಡಲು ಮುಂದಾದ ಗಳಿಗೆ, ಕಾರಣ, ರೀತಿಗಳ ಬಗೆಗೆ ಹೇಳಿಕೊಂಡಿದ್ದಾರೆ. ಹಾಗೆಯೇ ಆಗಿನ ಇತರರ ಹೋರಾಟಗಳ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಇಲ್ಲಿ ಕೇವಲ ಜೈಪಾಲರ ನೆನಪುಗಳಷ್ಟೇ ಇರದೆ, ಅವರೊಂದಿಗೆ ಒಡನಾಡಿದ ಎಲ್. ಬಿ. ಗಂಗಾಧರ ರಾವ್ ರವರ ಅಭಿಪ್ರಾಯ ಲೇಖನವೂ ಇರುವುದು ಉಪಯುಕ್ತವೆನಿಸಿದೆ.

ಮೊದಲ ಅಧ್ಯಾಯ `ನನ್ನ ದೇಶಕ್ಕಾಗಿ ಕರ್ತವ್ಯ ಚ್ಯುತೆ ಎಸಗಿದೆ’ ಯಲ್ಲಿ ಜೈಪಾಲರು ತಮ್ಮ ಭೂಗತ ಜೀವನವನ್ನು ಕೊನೆಗೊಳಿಸಿ ಹೊರಬಂದಾಗ ಜನರು ಅವರಿಗೆ ಸ್ಪಂದಿಸಿದ ರೀತಿಯನ್ನು ಓದುತ್ತಿದ್ದರೆ ಇಂದಿನ ನೀರಸಗೊಂಡಿರುವ ಸಾಮಾಜಿಕ ಪ್ರಜ್ಞೆಯ ಬಗೆಗೆ ಯೋಚಿಸುವಂತಾಗುತ್ತದೆ. ಇಡೀ ಪುಸ್ತಕದಲ್ಲಿ ಬರುವ ಬ್ರಿಟಿಷ್ ಸೈನ್ಯದೊಳಗಿನ ದೇಶಪ್ರೇಮಿ ವಿಭಾಗಗಳನ್ನು ಸಂಘಟಿಸುವಲ್ಲಿ ಅವರು ವಹಿಸಿದ ಅಮೋಘ ಪಾತ್ರದ ಬಗ್ಗೆ ಭಾರತದ ಎಡಪಂಥೀಯ ವಲಯಗಳ ಆಚೆಗೆ ಅಷ್ಟಾಗಿ ತಿಳಿದಿಲ್ಲ” ಎಂಬ ಮಾತು ನಮ್ಮ ದೇಶದ ಸಾಮಾಜಿಕ ಜೀವನ ಎದುರಿಸುತ್ತಿರುವ ವಿಪರ್ಯಾಸದ ಸ್ಥಿತಿಯನ್ನು ಎದುರಿಗೆ ತರುತ್ತದೆ. ಇವತ್ತಿನ ಯುವಜನತೆಗೆ ರಿಯಾಲಿಟಿ ಶೋಗಳ ಸೆಲೆಬ್ರಿಟಿಗಳೇ ಮಾದರಿಯಾಗುತ್ತಿದ್ದಾರೆಯೇ ಹೊರತು ದೇಶದ ಸ್ವಾಭಿಮಾನವನ್ನು ಕಾಪಾಡಲು ಹೋರಾಡಿದವರು ಆದರ್ಶವಾಗುವುದು ಆಗುತ್ತಿಲ್ಲ. ಅಂದರೆ ಅವರಿಗೆ ಈ ಮಹಾನ್ ಹೋರಾಟಗಾರರು ತಲುಪುತ್ತಿಲ್ಲ. ಇಂತಹ ಪುಸ್ತಕಗಳು ಇದೇ ಮಾದರಿಯಲ್ಲಿ ಓದುಗರಿಗೆ ದೊರಕಿದರೆ ಆ ಒಂದು ಕೊರಗು-ಕೊರತೆ ಕೊಂಚಮಟ್ಟಿಗಾದರೂ ಕಡಿಮೆಯಾಗಿ ಮುಂದಿನ ದಿನಗಳಲ್ಲಿ ಜೈಪಾಲ್ ಸಿಂಗ್ ಥರದವರು ದೇಶದ ಮಕ್ಕಳಿಗೆ ಆಪ್ತರಾಗಬಲ್ಲರು. ಈ ನಿಟ್ಟಿನಲ್ಲಿ ವಿಮೋಚನೆಯ ಹಾದಿಯಲ್ಲಿ ಒಂದು ಒಳ್ಳೆಯ ಪ್ರಯತ್ನ.

ಈ ಪುಸ್ತಕ ಜೈಪಾಲ್ ರ ವೈಯಕ್ತಿಕ ಅನುಭವ, ಅಭಿಪ್ರಾಯಗಳನ್ನು ಹೇಳುವಂತೆಯೇ ಅಂದಿನ ದೇಶದ ಸ್ಥಿತಿಗತಿಗಳನ್ನು ಓದುಗರ ಮನಸ್ಸಿಗೆ ನಾಟಿಸುತ್ತವೆ. ಇಲ್ಲಿಯವರೆಗೂ ದೇಶದ ವಿಭಜನೆಯನ್ನು ಒಂದು ಕೋನದಲ್ಲಿ ನೋಡಿದ್ದವರಿಗೆ ಈ ಪುಸ್ತಕ ಅದರ ಬೇರೊಂದು ಮುಖವನ್ನು ತೋರುತ್ತದೆ. ಬ್ರಿಟಿಷರ ಷಡ್ಯಂತ್ರದೆದುರು ಸಿಡಿದೇಳದ ಕಾಂಗ್ರೆಸ್ ಹೇಗೆ ಗೋಸುಂಬೆತನದಿಂದ ವರ್ತಿಸಿತು ಎಂಬುದರ ಪರಿಚಯ ಇಲ್ಲಾಗುತ್ತದೆ. ಇಂತಹ ಹಲವು ವಿಚಾರಗಳನ್ನು ಜೈಪಾಲರು ಪುಸ್ತಕದುದ್ದಕ್ಕೂ ಹೇಳುತ್ತಲೇ ಆವತ್ತಿನ ದಿನಗಳ ಕುರಿತಾಗಿ ಜನ ತಿಳಿದಿರುವುದನ್ನು ಚಿಂತನೆಗೆ ಹಚ್ಚುವಂತೆ ಮಾಡುತ್ತಾರೆ. ದೇಶವನ್ನು ಕಾಡುತ್ತಿರುವ ಮೂಲಭೂತವಾದ ಮತ್ತು ಪ್ರತ್ಯೇಕತಾವಾದಗಳು ಬ್ರಿಟಿಷರ ಕುತಂತ್ರದ ಫಲ ಎಂಬುದನ್ನು ಜೈಪಾಲರು ಸ್ಪಷ್ಟವಾಗಿ ಹೇಳುವುದು, ಆ ಸಮಸ್ಯೆಗಳ ಕುರಿತಾಗಿ ಎಚ್ಚೆತ್ತುಕೊಂಡು ಒಂದು ಉತ್ತರ ಕಂಡುಕೊಳ್ಳಲು ಪ್ರೇರಣೆಯಂತಿದೆ.

ಜೈಪಾಲ್ ರವರು ಬ್ರಿಟಿಷರ ವಿರುದ್ಧದ ತಮ್ಮ ಹೋರಾಟದಲ್ಲಿ ಕಂಡ ಪೋರ್ಟ ವಿಲಿಯಂ ಜೈಲುವಾಸದ ಅನುಭವವನ್ನು ಓದಿದ ಕೂಡಲೇ ಕಮ್ಯುನಿಸ್ಟ್ ಪಕ್ಷದ ವಿಚಾರಗಳನ್ನು ಮೆಚ್ಚಿ ಅವರ ಮುಂದಾಳುತನದಲ್ಲಿಯೇ ತೆಲಂಗಾಣ ರೈತರ ಸಶಸ್ತ್ರ ಹೋರಾಟದಲ್ಲಿ ಭಾಗಿಯಾಗಿದ್ದು, ಅಲ್ಲಿ ಅವರು ಆ ಹೋರಾಟಕ್ಕೊಂದು ಕೆಚ್ಚು ತುಂಬಿದ್ದು ತೆಲಂಗಾಣ ಹೋರಾಟಕ್ಕೆ ನೀಡಿದ ಕಾಣಿಕೆ ಏನೆಂಬುದು ಈ ಪುಸ್ತಕ ಕಾಣಿಸುತ್ತದೆ. ಆಪರೇಷನ್ ಅಸೈಲಮ್ ನ ಲೇಖನ ಬ್ರಿಟಿಷರ ಕುತಂತ್ರಗಳನ್ನು ಅನಾವರಣಗೊಳಿಸುತ್ತದೆ. ಬ್ರಿಟಿಷ್ ಸೈನ್ಯದ ಅಧಿಕಾರಿ ಹುದ್ದೆಯಿಂದ ಸಿ.ಪಿ.ಐ.(ಎಂ) ನ ಕೇಂದ್ರ ನಾಯಕತ್ವದವರೆಗಿನ ಜೈಪಾಲ್ ಸಿಂಗ್ ರ ಜೀವನ ಯಾತ್ರೆಯನ್ನು ಹೇಳುತ್ತ ಈ ಕೃತಿ ಭಾರತವನ್ನು ಮತ್ತೊಂದು ದೃಷ್ಟಿಯಲ್ಲಿ ತಿಳಿಯಲಾದರೂ ಓದಲೇಬೇಕಾದಂತಹುದು. – ಎಸ್. ಎನ್.

ಶೀರ್ಷಿಕೆ: ವಿಮೋಚನೆಯ ಸಮರದಲ್ಲಿ – ಮೇಜರ‍್ ಜೈಪಾಲ್ ಸಿಂಗ್ ನೆನಪುಗಳು ಅನುವಾದಕರು: ವಿಶ್ವ ಕುಂದಾಪುರ ಪ್ರಕಾಶನ: ಕ್ರಿಯಾ ಪ್ರಕಾಶನ ಪುಟ: ೧೯೪ ಬೆಲೆ:ರೂ.೮೦/-

ಕೃಪೆ : ಲಂಕೇಶ್ ಪತ್ರಿಕೆ