ಪಿಸುಮಾತಿನ ಗಟ್ಟಿತನ

 

ನೀಲಾ ಅವರು ವಾರಪತ್ರಿಕೆಯೊಂದಕ್ಕಾಗಿ ಬರೆದ ಅಂಕಣ ಬರಹಗಳ ಸಂಕಲನವಿದು. ಇದು ನೀಲಾರ ಮೂರನೇ ಕೃತಿ. ಕಾಮ್ರೇಡ್ ನೀಲಾ ಸಂಘಟನಾಕಾರ್ತಿಯಾಗಿ, ಹೋರಾಟಗಾರ್ತಿಯಾಗಿ ಜನರ ಮಧ್ಯೆ ಓಡಾಡಿದ ಹೆಜ್ಜೆ ಗುರುತುಗಳು ಈ ಕೃತಿಯಲ್ಲಿ ನಿಚ್ಚಳವಾಗಿ ಗೋಚರಿಸುತ್ತವೆ. ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದವರ ಬದುಕು ಬವಣೆ, ವಿಶೇಷವಾಗಿ ಬದುಕಿನಲ್ಲಿ ನೊಂದು, ಬೆಂದ ಮಹಿಳೆಯರ ಬದುಕು ನೀಲಾರ ಹೆಚ್ಚಿನ ಅಂಕಣದ ವಸ್ತು. ಹಳ್ಳಿಗಳಲ್ಲಿ ಇಂದಿಗೂ ಇರುವ ಯಾಜಮಾನ್ಯ ಪದ್ಧತಿ, ಪುರುಷ ಪ್ರಧಾನ ವ್ಯವಸ್ಥೆ, ಎಲ್ಲೆಡೆ ಕಂಡುಬರುವ ಲಿಂಗ ತಾರತಮ್ಯ, ಕೋಮುವಾದಿಮೂಲಭೂತವಾದಿತ್ವ ಮೇಲುಗೈಯಾಗುತ್ತಿರುವುದು, ಬಡತನವನ್ನು ಮೆಟ್ಟಿ ನಿಲ್ಲುವ ಸ್ವಾಭಿಮಾನಿ ಮಹಿಳೆಯರು ಇತ್ಯಾದಿ ಹತ್ತು ಹಲವು ವಿಚಾರಗಳನ್ನು ಲೇಖಕಿ ಅವಲೋಕಿಸುತ್ತಾ, ವಿಶ್ಲೇಷಿಸುತ್ತಾರೆ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವಿಗಳ ಹಕ್ಕುಗಳಿಗಾಗಿ ಹತ್ತು ಹಲವೆಡೆ ಓಡಾಡಿ, ಅವರೊಂದಿಗೆ ಸೇರಿ ಆಡಳಿತಶಾಹಿ ವ್ಯವಸ್ಥೆಯ ವಿರುದ್ಧ ನಡೆಸುವ ಹೋರಾಟ, ಕೊನೆಗೂ ಕೆಲಸಗಾರರಿಗೆ ನ್ಯಾಯ ದಕ್ಕುವ ಚಿತ್ರಣ ಅನೇಕ ಬರಹಗಳಲ್ಲಿದೆ.

ಕಲ್ಬುರ್ಗಿ ಬೀದಿಬದಿಯಲ್ಲಿ ಸುಲಿಗಾಯಿ ಮಾರುವ ಮಹಿಳೆಯರು ತಮ್ಮನ್ನು ತಡವಲು ಬಂದ ಗಂಡಸರಿಗೆ ಎಲ್ಲರೂ ಒಟ್ಟಾಗಿ ಚಳ್ಳೆಹಣ್ಣು ತಿನ್ನಿಸುವುದು, ಡಾರ್ಜಿಲಿಂಗ್ ನ ಕೊರೆಯುವ ಚಳಿಯಲ್ಲಿ ಮಾಸದ ನಗುವಿನೊಂದಿಗೆ ಎದುರುಗೊಳ್ಳುವ ಕೂಲಿ ಹೆಂಗಸರು, ಬಲಾತ್ಕಾರದಿಂದ ದೇವದಾಸಿಯಾದ ಮಲ್ಲಮ್ಮ ಹೋರಾಟಕ್ಕೆ ಸಜ್ಜಾಗುವುದು, ಏನೇನೋ ಕಷ್ಟಗಳನ್ನೆದುರಿಸಿದ ನಂತರವೂ ಮತ್ತದೇ ಛಲದಿಂದ ಬದುಕು ಕಟ್ಟಿಕೊಡುವ ದ್ರೌಪದಿ ಇವರೆಲ್ಲ ಓದುಗರನ್ನು ಕಾಡುತ್ತ, ತಮ್ಮ ಸ್ವಾಭಿಮಾನ, ಗಟ್ಟಿ ನೆಲೆ ಕಂಡುಕೊಳ್ಳುವ ಕೆಚ್ಚಿನಿಂದ ಅಚ್ಚರಿ ಮೂಡಿಸುತ್ತಾರೆ.

ಆಡಳಿತಶಾಹಿ ವ್ಯವಸ್ಥೆಯ ಭ್ರಷ್ಟಾಚಾರ ಮತ್ತು ಅದಕ್ಷತೆ, ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ ಇಂತಹ ವಿಷಯಗಳನ್ನು ಲೇಖಕಿ ತಮ್ಮ ಹೋರಾಟದ ಸ್ವಂತ ಅನುಭವದಿಂದ ಅನಾವರಣಗೊಳಿಸುತ್ತಾ ಹೋಗಿದ್ದಾರೆ. ಪ್ರಾಯಶಃ ಅವರ ರಾಜಕೀಯ ಸೈದ್ಧಾಂತಿಕ ಹಿನ್ನೆಲೆಯಿಂದ ಇರಬಹುದು, ಕೆಲವು ಅಂಕಣಗಳ ಕೆಲವು ಪ್ಯಾರಾಗಳು ಸಿ.ಪಿ.ಎಂ. ಪಕ್ಷದ ಪ್ರಚಾರದಂತೆಯೋ, ಪ್ರಣಾಳಿಕೆಯಂತೆಯೋ ಭಾಸವಾಗಲೂಬಹುದು. ಇನ್ನು ಕೆಲವೆಡೆ ಲೇಖಕಿ ಎಲ್ಲವನ್ನೂ ಕೋಮುವಾದ ಎಂಬ ಕೆಂಪು ಗಾಜಿನಿಂದ ನೋಡುವುದೇಕೆ, ಎಲ್ಲದರ ಹಿಂದೆ ಕೋಮುವಾದವನ್ನು ಹುಡುಕಲು ಯತ್ನಿಸುವುದೇಕೆ ಎಂದು ಅನಿಸದೇ ಇರದು. ಹೈದರಾಬಾದ್ ಕರ್ನಾಟಕದ ಆಡುಭಾಷೆಯ ಸಂಭಾಷಣೆಗಳು, ತಮಗನ್ನಿಸಿದ್ದನ್ನು ಓದುಗರಿಗೆ ಸರಳವಾಗಿ ದಾಟಿಸುವ ಲೇಖಕಿಯ ಶೈಲಿ ಕೃತಿಯನ್ನು ಆಸಕ್ತಿಯಿಂದ ಓದಿಸಿಕೊಂಡು ಹೋಗುತ್ತದೆ. ಜನಪ್ರಿಯ ಅಂಕಣ ಬರಹಗಳ ಜಾಡಿನಿಂದ ದೂರವೇ ನಿಲ್ಲುವ ಈ ಬರಹಗಳು ಓದುಗರನ್ನು ಗಾಢ ಯೋಚನೆಗೆ ಹಚ್ಚುತ್ತವೆ. ಯಾಕೆ ಹೀಗೆ, ಪರಿಹಾರವೇನು ಎಂದು ಕೇಳಿಕೊಳ್ಳುವಂತೆ ಕಾಡುತ್ತವೆ.ಸುಮಂಗಲಾ

ಶೀರ್ಷಿಕೆ:ನೆಲದ ಪಿಸುಮಾತು ಲೇಖಕರು:ಕೆ ನೀಲಾ ಪ್ರಕಾಶಕರು: ಚಿಂತನ ಪ್ರಕಾಶನ ಪುಟ :102 ಬೆಲೆ:ರೂ.60/-

ಕೃಪೆ:ಸಂಡೇ ಟೈಮ್ಸ್ ಆಫ್ ಇಂಡಿಯಾ

ಆನಂದ ತೇಲ್ ತುಂಬ್ಡೆ ಅವರಿಂದ ಪುಸ್ತಕ ಬಿಡುಗಡೆ

ಕೃಪೆ : ವಾರ್ತಾ ಭಾರತಿ

ನೀ ಹೋದ ಮರುದಿನ ಮೊದಲ್ಹಂಗೆ ನಮ್ಮ ಬದುಕು ಆಗ್ಯಾದೋ ಬಾಬಾ ಸಾಹೇಬ ಅಂಬೇಡ್ಕರ‍್

ಶೀರ್ಷಿಕೆ : ಅಂಬೇಡ್ಕರೋತ್ತರ ದಲಿತ ಸಂಘರ್ಷ ದಾರಿದಿಕ್ಕು ಲೇಖಕರು : ಆನಂದ್ ತೇಲ್ ತುಂಬ್ಡೆ ಅನುವಾದಕರು : ರಾಹು ಪ್ರಕಾಶಕರು : ಚಿಂತನ ಪುಸ್ತಕ ಪುಟಗಳು: 176 ಬೆಲೆ: ರೂ.120/-

ಛಾಯಾಗ್ರಾಹಕ ಜಂಬುಕೇಶ್ವರ ಅಭಿನಂದನ ಗ್ರಂಥ

ಕರ್ನಾಟಕದ ಛಾಯಾಗ್ರಾಹಕರಾದ ಎಸ್. ಎಂ. ಜಂಬುಕೇಶ್ವರ ಅವರ ಕುರಿತಂತೆ ಹೊರತರಲಾದ ಅಭಿನಂದನ ಗ್ರಂಥವಿದು. ಛಾಯಾಗ್ರಹಣ ಮಾತ್ರವಲ್ಲ ಜಂಬುಕೇಶ್ವರ ಕಲಾವಿದರೂ ಕೂಡಾ. ಅವರು ಜಲವರ್ಣ, ತೈಲವರ್ಣದಲ್ಲಿ ಚಿತ್ರಗಳನ್ನು ಬಿಡಿಸುವುದರ ಮೂಲಕ ಸಾಕಷ್ಟು ಸಾಧನೆ ಮಾಡಿದ್ದಾರೆ. ಆದರೆ, ಬಹುಮುಖ್ಯವಾಗಿ ಅವರನ್ನು ಗುರುತಿಸುವುದು ಛಾಯಾಗ್ರಾಹಕರೆಂದೇ.

ಈ ಅಭಿನಂದನ ಗ್ರಂಥದ ಮುಖ್ಯ ಅಂಶ ಜಂಬುಕೇಶ್ವರ ಅವರು ತಮ್ಮ ಬದುಕಿನ ಕುರಿತಂತೆ ವಿವರಗಳನ್ನು ಕೊಡುತ್ತದೆ. ಇದರ ಮುಂದುವರಿಕೆಯಾಗಿ ಅವರ ಪತ್ನಿ, ಮಗ, ಗೆಳೆಯರು, ಆತ್ಮೀಯರು ಬರೆದಿದ್ದಾರೆ. ಇದಲ್ಲದೆ ಜಂಬುಕೇಶ್ವರ ಅವರು ತೆಗೆದ ಅಪರೂಪದ ಛಾಯಾಚಿತ್ರಗಳು ಇವೆ. ಇನ್ನುಳಿದ ಭಾಗಗಳು ಚಿತ್ರಕಲೆ, ಛಾಯಾಚಿತ್ರ, ಪತ್ರಿಕೋದ್ಯಮ ಕುರಿತಂತೆ ಲೇಖನಗಳನ್ನು ಒಳಗೊಂಡಿದೆ. ಇವೆಲ್ಲ ಬರಹಗಳು ಜಂಬುಕೇಶ್ವರ ಅವರ ಆಸಕ್ತಿಯ ಮತ್ತು ಅವರು ಸಾಕಷ್ಟು ಕೆಲಸ ಮಾಡಿದ ಕ್ಷೇತ್ರಗಳಾಗಿವೆ. ಇದರಲ್ಲಿನ ಮುಖ್ಯ ಲೇಖನ `ಛಾಯಾಚಿತ್ರ ಪತ್ರಿಕೋದ್ಯಮ’ (ಟಿ. ಎಸ್. ಸತ್ಯನ್) ಎಂಬುದು. ಇಂಥ ವಿಶೇಷ ಲೇಖನಗಳಿಂದ ಈ ಪುಸ್ತಕ ವ್ಯಕ್ತಿಯೊಬ್ಬನ ಸಾಧನೆಯ ಭಜನೆಯಾಗದೆ ಅರ್ಥಪೂರ್ಣವಾದ ದಾಖಲೆಯಾಗಿದೆ ಎನ್ನಬಹುದು.

ಶೀರ್ಷಿಕೆ: ಬಹುಮುಖಿ (ಎಸ್.ಎಂ.ಜಂಬುಕೇಶ್ವರ ಅಭಿನಂದನಾ ಗ್ರಂಥ) ಪ್ರಧಾನ ಸಂಪಾದಕ: ಜಿ.ಎಸ್.ಭಟ್ಟ ಸಂ:ಎಸ್.ಶಿವಲಿಂಗಪ್ಪ ಪ್ರಕಾಶಕರು: ಅಭಿನಂದನಾ ಸಮಿತಿ, ಸರಸ್ವತಿಪುರಂ, ಮೈಸೂರು ಪುಟಗಳು:323 ಬೆಲೆ:ರೂ.200/-

ಕೃಪೆ : ಪ್ರಜಾವಾಣಿ