ಕರ್ನಾಟಕ ಚರಿತ್ರೆ ಮತ್ತು ಸಂಸ್ಕೃತಿ – ಸಂಶೋಧನಾ ಲೇಖನಗಳನ್ನೊಳಗೊಂಡ ಈ ಕೃತಿಯನ್ನು ವಸು ಎಂ.ವಿ.ಯವರು ಸಂಪಾದಿಸಿದ್ದಾರೆ. ಅಶ್ವತ್ಥನಾರಾಯಣ, ಉಷಾದೇವಿ ಎಂ.ವಿ., ಶಶಿಧರ್ ಎಂ. ಸಂಪಾದಕ ಬಳಗದಲ್ಲಿದ್ದಾರೆ.
ಈ ಕೃತಿಯ 30 ಲೇಖನಗಳಲ್ಲಿ ಒಂದೊಂದು ಲೇಖನವೂ ಕರ್ನಾಟಕದಲ್ಲಿ ಇತಿಹಾಸ ಸಂಶೋಧನೆಯ ಒಂದೊಂದು ಸವಾಲನ್ನು ಪ್ರತಿನಿಧಿಸುತ್ತದೆ. ವಿಷಯ, ಆಕರ, ಒಳತೋಟಿಯಲ್ಲಿ ಹರಿಯುವ ಧೋರಣೆ, ಸಂಶೋಧಕರ ಹಿನ್ನೆಲೆ ಎಲ್ಲಕ್ಕೂ ಒಂದು ಅರ್ಥ ಕಾಣಿಸುತ್ತದೆ. ಲೇಖನಗಳ ಸಾಮ್ಯತೆಯ ಆಧಾರದ ಮೇಲೆ ಉಪಶೀರ್ಷಿಕೆಯೊಂದಿಗೆ ವಿಭಾಗಿಸಲಾಗಿದ್ದು `ಸಾಹಿತ್ಯದೊಳಗಣ ಚರಿತ್ರೆ‘ ಭಾಗದ ಎಲ್ಲ ಲೇಖನಗಳು ಒಂದಲ್ಲ ಒಂದು ರೀತಿಯಲ್ಲಿ ಸಾಹಿತ್ಯದಲ್ಲಿ ಪ್ರವೇಶ ಪಡೆದುಕೊಳ್ಳುತ್ತಿವೆ. `ಪ್ರಾಕ್ತನ ಶೋಧನ‘ದಡಿಯಲ್ಲಿ ಸಂಶೋಧನಾ ಸಿದ್ಧತೆ ಎದ್ದು ಕಾಣುತ್ತದೆ. `ಚರಿತ್ರೆ ಕಟ್ಟಿದ ಮೈಸೂರು‘ ವಿಭಾಗದಲ್ಲಿ ಹೆಚ್ಚಿನ ಲೇಖನಗಳು ಸೇರಿದ್ದು `ಹೆಣ್ಣು ಕಂಡ ನೆಲೆಗಳು‘ ಭಾಗದಲ್ಲಿ ಕಾಣುವ ಮೂರು ಲೇಖನಗಳು ಹೆಣ್ಣಿಗೆ ಚರಿತ್ರೆ ಕಟ್ಟುವಾಗ ದಕ್ಕಬಹುದಾದ ಮೂರು ಭಿನ್ನ ಹಾದಿಗಳಾಗಿವೆ. `ಹೊಸ ಪ್ರಶ್ನೆಗಳು‘ ವಿಭಾಗದ ಲೇಖನಗಳು ಐಡೆಂಟಿಟಿಯ ವಿಚಾರಗಳನ್ನು ಪ್ರಮುಖವಾಗಿ ನೋಡುತ್ತಿವೆ. ಆಂಗ್ಲದಲ್ಲಿ ಕಟ್ಟಿದ ಚರಿತ್ರೆ-ಕರ್ನಾಟಕದ ವಿಚಾರವನ್ನು ಇಂಗ್ಲಿಷ್ ನಲ್ಲಿ ಹೇಳುವ ಪ್ರಯತ್ನವಾಗಿದ್ದು, ಹಲವಾರು ವಿದ್ವಾಂಸರು, ಸಂಶೋಧಕರು ಈ ಕೃತಿಗಾಗಿ ಕೆಲಸ ಮಾಡಿದ್ದು ಇದೊಂದು ಉತ್ತಮ ಗ್ರಂಥವಾಗಿದೆ.
ಶೀರ್ಷಿಕೆ: ಕನ್ನಡದೊಳ್ ಭಾವಿಸಿದ ಜನಪದಂ ಸಂಪಾದಕರು:ಡಾ. ವಸು ಎಂ.ವಿ. ಪ್ರಕಟಣೆ:ಚಿಂತನ ಪುಸ್ತಕ ಪುಟ:440 ಬೆಲೆ:ರೂ.375/-
ಕೃಪೆ:ಸಂಯುಕ್ತ ಕರ್ನಾಟಕ
Filed under: ಐತಿಹಾಸಿಕ | Tagged: ಕನ್ನಡದೊಳ್ ಭಾವಿಸಿದ ಜನಪದಂ, ಚಿಂತನ ಪುಸ್ತಕ, ಡಾ. ವಸು ಎಂ.ವಿ., ಸಂಯುಕ್ತ ಕರ್ನಾಟಕ | 3 Comments »