ವಿದ್ಯಾರ್ಥಿಗಳಿಗೆ ಉಪಯುಕ್ತ ಆಕರ ಗ್ರಂಥ

ಕನ್ನಡನಾಡು ಪ್ರಾರಂಭದಿಂದಲೇ ಸಂಸ್ಕೃತಿ ಮತ್ತು ರಾಜಕೀಯದ ಹೆಜ್ಜೆ ಮೂಡಿಸಿ ಬೆಳೆದುಬಂದಿದೆ. ಆ ಚರಿತ್ರೆಯನ್ನು ಕುರಿತ ಆಹ್ವಾನಿತ ಬರಹಗಳ ಸಂಪಾದಿತ ಕೃತಿ ಇದು. ವಿವಿಧ ಲೇಖಕರು ತಮ್ಮ ಅಪಾರವಾದ ಓದಿನ ಫಲವಾಗಿ ಕನ್ನಡದ ಬಗ್ಗೆ ಹೆಮ್ಮೆಪಟ್ಟುಕೊಳ್ಳುವಂತೆ ವಿಷಯ ನಿರೂಪಣೆ ಮಾಡಿದ್ದಾರೆ. ಹೆಚ್ಚಿನ ಲೇಖಕರೆಲ್ಲ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ವಿಭಾಗ ಮತ್ತು ಚರಿತ್ರೆಯ ವಿಭಾಗಗಳಲ್ಲಿ ಜವಾಬ್ದಾರಿಯುತ ಸ್ಥಾನಗಳಲ್ಲಿದ್ದು ಈ ಬೃಹತ್ ಕೃತಿಯನ್ನು ರೂಪಿಸಲು ನೆರವಾಗಿದ್ದಾರೆ. ಹಾಗಾಗಿ ಈ ಲೇಖನಗಳಿಗೆ ಹೆಚ್ಚಿನ ಮೌಲ್ಯವಿದೆ. ಕನ್ನಡನಾಡಿನ ನೆಲ-ಜಲ ಆಡಳಿತಕ್ಕೆ ಇಷ್ಟೊಂದು ವಿಶಾಲ ವ್ಯಾಪ್ತಿ ಇರುವುದು ಈ ಕೃತಿಯಿಂದ ಮನದಟ್ಟಾಗುತ್ತದೆ. ಚರಿತ್ರೆಯ ಹಾಗೂ ಕನ್ನಡದ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಉಪಯುಕ್ತ ಆಕರ ಗ್ರಂಥವಿದು.

ಶೀರ್ಷಿಕೆ: ಕನ್ನಡದೊಳ್ ಭಾವಿಸಿದ ಜನಪದಂ (ಕರ್ನಾಟಕ ಚರಿತ್ರೆ ಮತ್ತು ಸಂಸ್ಕೃತಿ – ಸಂಶೋಧನಾ ಲೇಖನಗಳು ಸಂಪಾದಕರು:ವಸು ಎಂ ವಿ. ಪ್ರಕಾಶಕರು: ವಸು ಎಂ ವಿ.ಪುಟ:452 ಬೆಲೆ:ರೂ.375/-


ಕೃಪೆ:ಹೊಸತು ಮಾಸ ಪತ್ರಿಕೆ

ಇಂದು ವಿಶ್ವ ಭೂಮಿ ದಿನಕ್ಕೆ 40 ತುಂಬಿತು


ಇಂದು ವಿಶ್ವ ಭೂಮಿ ದಿನಕ್ಕೆ 40 ತುಂಬಿತು. ವಿಶ್ವ ಭೂಮಿ ದಿನ ಅಂದರೆ ಭೂಮಿತಾಯಿಯ ಬಗ್ಗೆ ಪ್ರೀತಿ ವಿಶ್ವಾಸ ಗೌರವವನ್ನು ತೋರಿಸಿ ಆಕೆಯ ಆರೈಕೆ ಮಾಡುವ ಮತ್ತು ನಮ್ಮ ಮಕ್ಕಳು ಇದೇ ದಾರಿಯಲ್ಲಿ ಮುನ್ನಡೆಯುವಂತೆ ಮಾಡುವ ಕರ್ತವ್ಯವನ್ನು ನೆನಪಿಸುವ ದಿನ.  ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಚಿಟಿಕೆ ಹೊಡೆಯಿರಿ. www.earthday.org/earthday2010 , http://www.earthday.org/earthday2010 , http://www.earthday.org/pledges/make-children-habituate-planting-trees-will-save-our-earth-educate-people-use-solar-power

ಇತ್ತೀಚೆಗೆ ಭೂಮಿ ತಾಯಿಗೆ ಜ್ವರ ಬರುತ್ತಿದೆ. ಯಾಕೆ ಬರುತ್ತಿರಬಹುದು. ಭೂಮಿ ತಾಯಿಯ ಜ್ವರವನ್ನು ಇಳಿಸಲು ನಾವು ಏನು ಮಾಡಬಹುದು. ಭೂಮಿ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಮಕ್ಕಳಿಗೆ ತಿಳಿಸಿಕೊಡದೆ ಭೂಮಿಯ ಆರೈಕೆ ಬಗ್ಗೆ ಅವರ ಮನವೊಲಿಸುವುದು ಅಸಾಧ್ಯ. ಅದಕ್ಕಾಗಿಯೇ ಈ ಪುಸ್ತಕ.

ಈ ಪುಸ್ತಕ ಮಕ್ಕಳಲ್ಲಿ ಹಾಗೂ ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವತ್ತ ಒಂದು ಹೆಜ್ಜೆ. ಭೂಮಿಯ ಬಗ್ಗೆ, ನಿಸರ್ಗದ ಬಗ್ಗೆ, ಸಮಾಜದ ಬಗ್ಗೆ, ವಿಜ್ಞಾನದ ಬಗ್ಗೆ ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲಿ ಮಾಹಿತಿ ಒದಗಿಸುತ್ತದೆ. ಈ ಪುಸ್ತಕ.

ಶೀರ್ಷಿಕೆ: ನಿಸರ್ಗ ಸಮಾಜ ವಿಜ್ಞಾನ ಲೇಖಕರು:ಕೆ. ಕೆ. ಕೃಷ್ಣಕುಮಾರ‍್ ಅನುವಾದ: ಎಚ್. ಎಸ್. ನಿರಂಜನಾರಾಧ್ಯ, ಸಿ. ಯತಿರಾಜು ಪ್ರಕಾಶಕರು : ಭಾರತ ಜ್ಞಾನ ವಿಜ್ಞಾನ ಸಮಿತಿ, ಕರ್ನಾಟಕ ಪುಟ:104 ಬೆಲೆ. ರೂ.15/-

ಪ್ರಶಸ್ತಿಗಾಗಿ ಕಂಗ್ರಾಜುಲೇಶನ್ಸ್ !!!

ಕರ್ನಾಟಕ ಸಾಹಿತ್ಯ ಅಕಾಡೆಮಿಯ 2008ನೇ ಸಾಲಿನ ಲಲಿತ ಪ್ರಬಂಧ ವಿಭಾಗದಲ್ಲಿ ಪುಸ್ತಕ ಪ್ರಶಸ್ತಿ ಪಡೆದ ಕೃತಿ.

ಒಳ್ಳೆಯ ಕತೆ ಬರೆಯುವವರೆಲ್ಲರೂ ಒಳ್ಳೆಯ ಪ್ರಬಂಧಗಳನ್ನು ಬರೆಯುತ್ತಾರೆಂದು ಹೇಳುವುದಕ್ಕೆ ಸಾಧ್ಯವಿಲ್ಲ. “ಹೊರಗೂ ಮಳೆ ಒಳಗೂ ಮಳೆ” ಎಂಬ ಅತ್ಯುತ್ತಮ ಕಥಾಸಂಕಲನ ಕೊಟ್ಟ ನಮ್ಮ ನಡುವಿನ ಪ್ರತಿಭಾಶಾಲಿ ಕತೆಗಾರ ಚ.ಹ. ರಘುನಾಥ ಒಳ್ಳೆಯ ಪ್ರಬಂಧಗಳನ್ನು ಬರೆದಿದ್ದಾರೆನ್ನುವುದಕ್ಕೆ ಈ ಪ್ರಬಂಧಗಳು ಸಾಕ್ಷಿ. ಇಲ್ಲಿಯ `ರಾಗಿಮುದ್ದೆ’, `ಅಧರಂ ಮಧುರಂ’, `ಮಳೆಯ ಮೂರು ಹನಿ’, `ಜಾತ್ರೆಯೆಂಬ ಕಾಮನಬಿಲ್ಲು’ ಇತ್ಯಾದಿ ಪ್ರಬಂಧಗಳು ತಮ್ಮ ಕ್ಲಾಸಿಕ್ ಲಕ್ಷಣಗಳಿಂದ ಬೆರಗುಗೊಳಿಸುತ್ತವೆ. ಕಾವ್ಯದ ಭಾಷೆಯನ್ನು ಪಡೆದು ಆಕರ್ಷಣೀಯವಾಗಿವೆ. ಸ್ವಾನುಭವಜನ್ಯ ವಿಷಯಗಳನ್ನು ಒಳಗೊಂಡರೂ ಸ್ವಪ್ರತಿಷ್ಠೆಯನ್ನು ಮೆರೆಸುವುದಿಲ್ಲ. ಬಡತನದ ಬಾಲ್ಯದ ನೆನಪುಗಳಂತೆ ಕಂಡರೂ ಇಲ್ಲಿ ಆಕ್ರೋಶವಿಲ್ಲ. ಸಾಮಾಜಿಕ ಸ್ಥಿತಿಗತಿಗಳಿಗೆ ಸ್ಪಂದಿಸುವ ಸಂವೇದನಾಶೀಲ ಲೇಖಕನೊಬ್ಬನ ಮನಸ್ಸಿಗೆ ಹಿಡಿದ ಕನ್ನಡಿಯಾಗಿವೆ. ತನ್ನ ಪಾಡಿಗೆ ತಾನು ಮೌನವಾಗಿ ಅಧ್ಯಯನದಲ್ಲಿ ತೊಡಗಿರುವ ನನಗೆ ಗೊತ್ತಿರುವ ಈ ಲೇಖಕ ತನ್ನ ಸ್ವಂತ ದನಿಯಲ್ಲಿ ಮಾತನಾಡುತ್ತಿದ್ದಾನೆನ್ನುವುದು ವಿಶೇಷ.

ಚ. ಹ. ರಘುನಾಥರು ವೃತ್ತಿಯಲ್ಲಿ ಪತ್ರಕರ್ತರಾಗಿದ್ದರೂ ಜರ್ನಲಿಸ್ಟಿಕ್ ಭಾಷೆಗೆ ಒಳಗಾಗುವುದಿಲ್ಲವಾದುದರಿಂದ ಇಲ್ಲಿಯ ಪ್ರಬಂಧಗಳೆಲ್ಲ ಶುದ್ಧ ರೂಪದ `ಎಸ್ಸೇ’ಗಳಾಗಿ ಸಾರ್ಥಕವಾಗಿವೆ.

– ಗೋಪಾಲಕೃಷ್ಣ ಪೈ (ಪುಸ್ತಕದ ಬೆನ್ನುಡಿಯಿಂದ)

ಶೀರ್ಷಿಕೆ: ರಾಗಿಮುದ್ದೆ ಲೇಖಕರು:ರಘುನಾಥ ಚ. ಹ. ಪ್ರಕಾಶಕರು:ಛಂದ ಪುಸ್ತಕ ಫುಟಗಳು:88 ಬೆಲೆ:ರೂ.40/-

ಐವರು ಸಾಹಿತಿಗಳಿಗೆ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ

oora-olagana-bayalu

ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಗಣನೀಯ ಸೇವೆ ಸಲ್ಲಿಸಿರುವ ಹಿರಿಯ ಸಾಹಿತಿಗಳಾದ ಡಾ.ಶಶಿಕಲಾ ಮೋಳ್ದಿ, ಡಾ.ಗುರುಮೂರ್ತಿ ಪೆಂಡಕೂರು, ಪ್ರೊ.ಕಿ.ರಂ.ನಾಗರಾಜ್, ಡಾ.ಪಿ.ಕೆ.ರಾಜಶೇಖರ್ ಮತ್ತು ಮೂಡ್ನಾಕೂಡು ಚಿನ್ನಸ್ವಾಮಿ ಅವರನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ 2008ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪುಸ್ತಕ ಪ್ರಶಸ್ತಿ ಪುರಸ್ಕೃತರ ವಿವರ: ಕಾವ್ಯ- ಕರ್ಣರಾಗ (ಡಾ.ಎಲ್.ಹನುಮಂತಯ್ಯ), ಕಾದಂಬರಿ- ಉಲ್ಲಂಘನೆ (ಡಾ.ನಾ.ಮೊಗಸಾಲೆ), ಸಣ್ಣಕತೆ- ಊರ ಒಳಗಣ ಬಯಲು (ಡಾ.ವಿನಯಾ) ಇವನು ತಂದ ಮೀನಿಗೆ ನಾ ಮಸಾಲೆ ಮಾಡುವುದು ಎನ್ನುವಂತೆ ಸಲೀಸಾಗಿ ನಾಟಕ- ಅಲ್ಲಮನ ಬಯಲಾಟ (ಲಕ್ಷ್ಮೀಪತಿ ಕೋಲಾರ), ಲಲಿತ ಪ್ರಬಂಧ- ರಾಗಿಮುದ್ದೆ (ರಘುನಾಥ ಚ.ಹ.), ಪ್ರವಾಸ ಸಾಹಿತ್ಯ- ಪಶ್ಚಿಮ ಮುಖಿ (ಟಿ.ಆರ್.ಅನಂತರಾಮು), ಜೀವನ ಚರಿತ್ರೆ/ಆತ್ಮಕಥನ- ಯಾರು ನಾನು?-ಜೀವನ ಕಥನ (ಫ.ಶಿ.ಭಾಂಡಗೆ).ಸಾಹಿತ್ಯ ವಿಮರ್ಶೆ- ತಕರಾರು (ಡಾ.ಮೊಗಳ್ಳಿ ಗಣೇಶ್), ಗ್ರಂಥ ಸಂಪಾದನೆ- ಕುಮಾರವ್ಯಾಸ ಭಾರತ (ಸಂಪಾದಕ- ಅ.ರಾ.ಸೇತುರಾಮರಾವ್), ಮಕ್ಕಳ ಸಾಹಿತ್ಯ- ಪದ್ಯದ ಮರ (ಕೃಷ್ಣಮೂರ್ತಿ ಬಿಳಿಗೆರೆ), ವಿಜ್ಞಾನ ಸಾಹಿತ್ಯ- ಕಲ್ಪವೃಕ್ಷದ ಜಾಡು ಹಿಡಿದು (ಡಾ.ಎಚ್.ಆರ್.ಕೃಷ್ಣಮೂರ್ತಿ), ಮಾನವಿಕ- ಒಡಲ ತುಡಿತಕ್ಕೆ ಕೇಡು (ಮಂಜುನಾಥ ಅದ್ದೆ).

ಸಂಶೋಧನೆ- ನೂರೊಂದು ಬರಹ (ಡಾ.ವೀರಣ್ಣ ರಾಜೂರ), ಅನುವಾದ (ಸೃಜನಶೀಲ)- ನಾನು ಅವನಲ್ಲ… ಅವಳು…! (ಡಾ.ತಮಿಳ್ ಸೆಲ್ವಿ), ಅನುವಾದ (ಸೃಜನೇತರ)- ಪಾಪ ನಿವೇದನೆ (ಡಾ.ಬಂಜಗೆರೆ ಜಯಪ್ರಕಾಶ್), ಸಂಕೀರ್ಣ- ಪರಿಭಾಷೆ (ಡಾ.ಮಾಧವ ಪೆರಾಜೆ) ಮತ್ತು ಲೇಖಕರ ಮೊದಲ ಕೃತಿ- ಕಡಲಿಗೆ ಕಳಿಸಿದ ದೀಪ ಕಡಲಿಗೆ ಕಳಿಸಿದ ದೀಪ (ಟಿ.ಯಲ್ಲಪ್ಪ).

– ಪ್ರಜಾವಾಣಿ ವಾರ್ತೆ

ಎಲ್ಲವನ್ನು ಕೊಟ್ಟಿರುವೆ ಏನ ಬೇಡಲಿ! ಜಗವನೆನಗೆ ಬಿಟ್ಟಿರುವೆ, ಏಕೆ ಕಾಡಲಿ!

ದಿನ ನಿತ್ಯದ ಕಿಟಿಕಿಟಿ ಶ್ರಮದ ನಂತರವೂ ಜೀವನ ಪ್ರೀತಿಯನ್ನು ಮೈ ಮನದಲ್ಲಿ ತುಂಬಿಕೊಳಬಯಸುವವರಿಗೆ ತಮ್ಮ ಕವನಗಳ ಮೂಲಕ ಎಲ್ಲವನ್ನೂ ಕೊಟ್ಟ ಕೆ.ಎಸ್.ನ. ಅವರನ್ನು ಮತ್ತೆ ಏನನ್ನೂ ಬೇಡಬೇಕಾಗಿಲ್ಲ.

ನನ್ನವಳು ನನ್ನೆದೆಯ ಹೊನ್ನಾಡನಾಳುವಳು ಬೆಳಗುಗೆನ್ನೆಯ ಚೆನ್ನೆ ನನ್ನ ಮಡದಿ!

ಶಾನುಭೋಗರ ಮಗಳು ರತ್ನದಂತಹ ಹುಡುಗಿ; ಗಂಡು ಸಿಕ್ಕುವುದೊಂದು ಕಷ್ಟವಲ್ಲ; ಸರಿಯಾಗಿ ಗಂಡೊದಗಿ ಹೆಣ್ಣು ಸುಖವಾಗಿರಲಿ ತಡವಾದರೇನಂತೆ?- ನಷ್ಟವಿಲ್ಲ

ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು ಚೆಂದ ನಿನಗಾವುದೆಂದು –   ನಮ್ಮೂರು ಹೊನ್ನೂರೋ, ನಿಮ್ಮೂರು ನವಿಲೂರೋ

ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು ಒಳಗೆ ಬರಲಪ್ಪಣೆಯೆ ದೊರೆಯೇ

ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು, ನಿದ್ದೆ ಬರುವಳು ಹೊದ್ದು ಮಲಗು, ಮಗುವೇ ಸುತ್ತಿ ಹೊರಳಾಡದಿರು, ಮತ್ತೆ ಹಟ ಹೂಡದಿರು, ನಿದ್ದೆ ಬರುವಳು ಕದ್ದು ಮಲಗು, ಮಗುವೆ.

ಕೇತಕಿಯ ಬನಗಳಲಿ ಸಂಚರಿಸದಿರು ಚೆಲುವೆ, ಸರ್ಪಮಂದಿರವಂತೆ ತಂಪಿನೊಡಲು

 ಹತ್ತು ವರುಷದ ಹಿಂದೆ ಮುತ್ತೂರ ತೇರಿನಲಿ ಅತ್ತಿತ್ತ ಸುಳಿದವರು ನೀವಲ್ಲವೇ?  ಹತ್ತಿರದ ಹೆಣ್ಣೆಂದು ಮತ್ತೆ ಮುತ್ತೂರಿನಲಿ ಒಪ್ಪಿ ಕೈ ಹಿಡಿದವರು ನೀವಲ್ಲವೇ?

. . ..                                                                                                                                                                                            ತೊತ್ತೆಂದು ಜರೆದವರು, ಮುತ್ತೆಂದು ಕರೆದವರು ಎತ್ತರದ ಮನೆಯವರು ನೀವಲ್ಲವೆ                                                                                            .

. .  .                                                                                                                                                                                               ಬಡತನವೋ, ಸಿರಿತನವೊ, ಯಾರಿರಲಿ, ಎಲ್ಲಿರಲಿ, ದೊರೆಯಾಗಿ ಮೆರೆದವರು ನೀವಲ್ಲವೇ? ಗಂಡನಿಗೆ ಒಪ್ಪಾಗಿ ಕಂದನಿಗೆ ದಿಕ್ಕಾಗಿ, ಪಯಣದಲಿ ಜೊತೆಯಾಗಿ ನಾನಿಲ್ಲವೇ?

 ಸಂಬಳದ ಸಂಜೆ ಒಳಜೇಬು ಬೆಳಕಾಗಿರಲು ಮುಗುಳು ನಗೆ ಸೂಸಬೇಕು  ತಂದ ಹಣ ತುಂಡಾಗಿ ತಲೆನೋವು ಬಂದಿರಲು ಮಂದಲಗೆ ಹಾಕಬೇಕು.

`ಹಿಂದಿನ ಸಾಲಿನ ಹುಡುಗರು’ ಎಂದರೆ ನಮಗೇನೇನೂ ಭಯವಿಲ್ಲ! ನಮ್ಮಿಂದಾಗದು ಶಾಲೆಗೆ ತೊಂದರೆ; ನಮಗೆಂದೆಂದೂ ಜಯವಿಲ್ಲ! 

. . .                                                                                                                                                                                             ಪುಸ್ತಕ ಓದದೆ ಪ್ರೀತಿಯನರಿತೆವು; ಗೆಲ್ಲದೆ ಹೆಮ್ಮೆಯ ಗಳಿಸಿದೆವು; ನಾವೀ ಶಾಲೆಯನೆಂದೂ ಬಿಡೆವು; ನೆಮ್ಮದಿಯಾಗಿಯೆ ಉಳಿಯುವೆವು!

 ಮಲ್ಲಿಗೆ ಕವಿಯ ಈ ಎಲ್ಲಾ ಕವಿತೆಗಳನ್ನು ಓದಿ ಹಗುರಾಗದವರು ಯಾರು?

ಸುವರ್ಣ ಕರ್ನಾಟಕ ವರ್ಷದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೈಗೆತ್ತಿಕೊಂಡ ಅನೇಕ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದು ಕನ್ನಡ ಪ್ರಮುಖ ಲೇಖಕರ ಸಮಗ್ರ ವಾಙ್ಮಯವನ್ನು ಮರುಮುದ್ರಣದ ಮೂಲಕ ಕನ್ನಡ ಓದುಗರಿಗೆ ಸುಲಭ ಬೆಲೆಯಲ್ಲಿ ದೊರಕಿಸುವುದು. ಈ ಯೋಜನೆಯಡಿ ಈಗ ಡಾ.ಕೆ.ಎಸ್.ನರಸಿಂಹಸ್ವಾಮಿಯವರ ಸಮಗ್ರ ವಾಙ್ಮಯ ಆರು ಸಂಪುಟಗಳಲ್ಲಿ ಪ್ರಕಟಗೊಳ್ಳುತಿದೆ.

ಆಧುನಿಕ ಕನ್ನಡದ ಅತಿಶ್ರೇಷ್ಟ ಕವಿಗಳಲ್ಲಿ ಕೆ.ಎಸ್.ನ. ಒಬ್ಬರು. ೧೯೪೨ರಲ್ಲಿ ಪ್ರಕಟವಾದ ಅವರ `ಮೈಸೂರ ಮಲ್ಲಿಗೆ’ಯಿಂದ ಅಪಾರ ಜನಪ್ರಿಯತೆಯನ್ನು ಗಳಿಸಿದ ಕೆ.ಎಸ್.ನ. ತಮ್ಮ ಕೊನೆಯ ದಿನಗಳವರೆಗೂ ಕಾವ್ಯಕ್ಷೇತ್ರದಲ್ಲಿ ಕ್ರಿಯಾಶೀಲರಾಗಿಯೇ ಇದ್ದು ಒಟ್ಟು ಹದಿನಾರು ಕವನ ಸಂಕಲನಗಳನ್ನು ರಚಿಸಿದರು. ಕಾವ್ಯ ಸೃಷ್ಟಿಯಷ್ಟೇ ಅಲ್ಲದೆ ಅನುವಾದ, ವಿಮರ್ಶೆ, ಸಣ್ಣಕಥೆ ಇತ್ಯಾದಿ ಪ್ರಬೇಧಗಳಲ್ಲಿಯೂ ಸಾಕಷ್ಟು ಕೆಲಸ ಮಾಡಿದ ಕೆ.ಎಸ್.ನ. ಅವರ ಒಟ್ಟು ಕೃತಿಗಳ ಸಂಖ್ಯೆ ಮೂವತ್ತೈದು.

ಈ ಯೋಜನೆಯ ಮೊದಲೆರಡು ಸಂಪುಟಗಳೂ ಅವರ ಸಮಗ್ರ ಕಾವ್ಯಗಳನ್ನೊಳಗೊಂಡಿದ್ದರೆ, ಉಳಿದ ನಾಲ್ಕರಲ್ಲಿ ಅವರ ಇನ್ನಿತರ ಸಾಹಿತ್ಯ ರಚನೆಗಳು ಸಂಗ್ರಹಗೊಂಡಿವೆ.

ಶೀರ್ಷಿಕೆ: ಕೆ.ಎಸ್.ನರಸಿಂಹಸ್ವಾಮಿ ಸಮಗ್ರ ವಾಙ್ಮಯ ಸಂಪುಟ ಒಂದು: ಕಾವ್ಯ ೧ ಸಂಪಾದಕರು: ಡಾ. ಸಿ.ಎನ್.ರಾಮಚಂದ್ರನ್ ಪ್ರಕಾಶಕರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪುಟಗಳು:484 ಬೆಲೆ:ರೂ.110/-