ನಗರದ ಬಹುತೇಕ ಪುಸ್ತಕ ಮಳಿಗೆಗಳು ನಗರ ಕೇಂದ್ರಿತವಾಗಿವೆ. ಇಲ್ಲವೇ ನಗರದ ದಕ್ಷಿಣ ಭಾಗದಲ್ಲೇ ಹೆಚ್ಚು ಪುಸ್ತಕ ಮಳಿಗೆಗಳನ್ನೂ ಕಾಣಬಹುದು. ಆದರೆ, ನಗರದ ಉತ್ತರ ವಲಯ ಉತ್ತಮ ಪುಸ್ತಕ ಮಳಿಗೆಗಳಿಂದ ವಂಚಿತವಾಗಿದೆ ಎಂಬುದು ಪುಸ್ತಕಪ್ರಿಯರ ದೂರು.
ಈ ದೂರಿನ ನಡುವೆಯೇ ಸದ್ದಿಲ್ಲದೇ ಓದುಗರ ಪ್ರೀತಿಗೆ ಪಾತ್ರವಾಗಿರುವ ಅಪರೂಪದ ಪುಸ್ತಕ ಮಳಿಗೆಯೊಂದು ಮಹಾಲಕ್ಷ್ಮೀ ಲೇಔಟ್ನ 4ನೇ ಅಡ್ಡರಸ್ತೆಯಲ್ಲಿದೆ. ಅದುವೇ ‘ಪುಸ್ತಕ ಪ್ರೀತಿ’.
ಈ ಮಳಿಗೆಯ ಒಳಹೊಕ್ಕರೆ, ಹೆಸರಿಗೆ ತಕ್ಕಂತೆ ಓದುಗರಿಗೆ ಪ್ರಿಯವಾಗುವ ವಿವಿಧ ಬಗೆಯ ಪುಸ್ತಕಗಳ ಸಂಗ್ರಹವೇ ಮೇಳೈಸಿದೆ. ಮೂವತ್ತು ಸಮಾನಮನಸ್ಕರ ಬಳಗವನ್ನೊಳಗೊಂಡ ‘ಕ್ರಿಯಾ ಮಾಧ್ಯಮ’ದ ಘಟಕವಾಗಿ ರೂಪುಗೊಂಡಿರುವ ‘ಪುಸ್ತಕ ಪ್ರೀತಿ’ ಇತರ ಪುಸ್ತಕ ಮಳಿಗೆಗಿಂತ ಭಿನ್ನ ಅಭಿರುಚಿಯನ್ನು ಹೊಂದಿದೆ.
ಮಳಿಗೆಯ ಬಾಹ್ಯ ನೋಟವೇ ಓದುಗರನ್ನು ಆಕರ್ಷಿಸುತ್ತದೆ. ಹಸೆಚಿತ್ರಗಳ ಮೂಲಕ ಓದುಗರ ಮನಸೆಳೆಯುವ ಈ ಮಳಿಗೆಯಲ್ಲಿ ವೈಚಾರಿಕ, ಪ್ರಗತಿಪರ ಪುಸ್ತಕಗಳಿಗೆ ಆದ್ಯತೆ. ಉಳಿದಂತೆ ಇತರ ಜನಪ್ರಿಯ ಪುಸ್ತಕಗಳಿಗೂ ಇಲ್ಲಿ ಸ್ಥಾನವುಂಟು.
ಮುಖ್ಯವಾಗಿ ಪ್ರಚಲಿತ ವಿದ್ಯಮಾನಗಳು, ಅಭಿವೃದ್ಧಿ, ರಾಜಕೀಯ, ಮಹಿಳೆ, ಮಕ್ಕಳು, ಮಾಧ್ಯಮ, ಸಾಹಿತ್ಯ, ವಿಜ್ಞಾನ, ಸಾಧಕರ ಜೀವನ ಚರಿತ್ರೆಗಳು ಇಲ್ಲಿ ಲಭ್ಯ. ಕನ್ನಡದ ಮತ್ತು ನೆರೆ ರಾಜ್ಯಗಳ ಎಲ್ಲ ಪ್ರಗತಿಪರ ಕೃತಿಗಳು, ಪ್ರಕಟಣೆಗಳನ್ನು ಒಂದೇ ಸೂರಿನಡಿ ದೊರಕುವಂತೆ ಮಾಡುವುದು. ಲೆಫ್ಟ್ ವರ್ಡ್, ನವಯಾನ ಮುಂತಾದ ಇಂಗ್ಲಿಷ್ ಪ್ರಕಾಶನಗಳ ಪ್ರಕಟಣೆ ಗಳನ್ನು ಪುಸ್ತಕ ಪ್ರಿಯರಿಗೆ ದೊರೆಯುವಂತೆ ಮಾಡುವುದೇ ಈ ಮಳಿಗೆಯ ಮುಖ್ಯ ಗುರಿ.
‘ವೈಯಕ್ತಿಕ ಲಾಭದ ಆಸೆ ಇಲ್ಲದೆ, ಓದುಗರಿಗೆ ಹೆಚ್ಚು ಬೌದ್ಧಿಕ ಲಾಭ ಕೊಡುವ ಪುಸ್ತಕಗಳನ್ನು ಒದಗಿಸುವುದು ನಮ್ಮ ಮಳಿಗೆಯ ಮುಖ್ಯ ಉದ್ದೇಶ. ಇಲ್ಲಿ ಮಳಿಗೆಯ ಲಾಭ–ನಷ್ಟಕ್ಕಿಂತ ಓದುಗರ ವ್ಯಕ್ತಿತ್ವದ ಮೇಲೆ ನಮ್ಮ ಪುಸ್ತಕಗಳು ಲಾಭದಾಯಕ ಪರಿಣಾಮ ಬೀರಿದರೆ ನಮ್ಮ ಶ್ರಮ ಸಾರ್ಥಕ’ ಎನ್ನುತ್ತಾರೆ ಮಳಿಗೆಯ ನಿರ್ದೇಶಕರಲ್ಲಿ ಒಬ್ಬರಾದ ಎನ್.ಕೆ. ವೇದರಾಜ.
‘ಉತ್ಪ್ರೇಕ್ಷಿತ ವಾತಾವರಣದ ಮಾರ್ಕೆಟಿಂಗ್ ಟ್ರೇಡ್ ಅನ್ನು ಒಡೆದು, ವಾಸ್ತವ ನೆಲೆಯ ವಾತಾವರಣವನ್ನು ಓದುಗರಿಗೆ ಪರಿಚಯ ಮಾಡಿಕೊಡುವುದು ನಮ್ಮ ಗುರಿ. ವೈಚಾರಿಕ ಮತ್ತು ಪ್ರಗತಿಪರ ಓದುಗರು ಯಾವಾಗಲೂ ಇದ್ದೇ ಇರುತ್ತಾರೆ. ಅವರಿಗೆ ಸಕಾಲದಲ್ಲಿ ಪುಸ್ತಕಗಳು ತಲುಪುವ ವ್ಯವಸ್ಥೆ ಮಾಡಬೇಕಷ್ಟೇ. ಹಾಗಾಗಿ, ಇಂಥ ಓದುಗರನ್ನೇ ಕೇಂದ್ರಿತವಾಗಿಟ್ಟುಕೊಂಡು ಈ ಮಳಿಗೆಯನ್ನು ರೂಪಿಸಲಾಗಿದೆ. ಮುಖ್ಯವಾಗಿ ಇಂಗ್ಲಿಷ್ನಲ್ಲಿ ಬರುವ ವೈಚಾರಿಕ ಮತ್ತು ಪ್ರಗತಿಪರ ಪುಸ್ತಕಗಳ ಅನುವಾದಗಳ ಸಂಗ್ರಹ ನಮ್ಮಲ್ಲಿ ಹೆಚ್ಚು ಮಾರಾಟವಾಗುತ್ತವೆ’ ಎನ್ನುತ್ತಾರೆ ಅವರು.
ಪುಸ್ತಕದ ಜತೆ ‘ತಿಂಗಳ ಮಾತುಕತೆ’
‘ಪುಸ್ತಕ ಪ್ರೀತಿ’ಯ ಮತ್ತೊಂದು ವಿಶೇಷವೆಂದರೆ ಓದುಗರೊಂದಿಗೆ ನೇರ ಸಂವಹನ ನಡೆಸಲು, ಅವರ ಅಭಿರುಚಿ ವೃದ್ಧಿ ಹಾಗೂ ಮಾರ್ಗದರ್ಶನಕ್ಕಾಗಿ ಪ್ರತಿ ತಿಂಗಳೂ ‘ತಿಂಗಳ ಮಾತುಕತೆ’ ಎಂಬ ಕಾರ್ಯಕ್ರಮ ನಡೆಸುವುದು. ಕಳೆದ ಮೂರು ತಿಂಗಳಿನಿಂದ ಆರಂಭವಾಗಿರುವ ‘ತಿಂಗಳ ಮಾತುಕತೆ’ಗೆ ಈಗಾಗಲೇ ಓದುಗರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
‘ಅಪವ್ಯಾಖ್ಯಾನಗಳನ್ನು ನಿಜವ್ಯಾಖ್ಯಾನಗಳಿಂದ ಹಿಮ್ಮೆಟ್ಟಿಸಲು ಪುಸ್ತಕ ಪ್ರೀತಿಯ ಮಾತುಕತೆ’ ಎಂದು ಮೊದಲ ತಿಂಗಳ ಮಾತುಕತೆ ಉದ್ಘಾಟಿಸಿದ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಮಳಿಗೆಯ ಕುರಿತು ಮೆಚ್ಚುಗೆ ಮಾತುಗಳನ್ನಾಡಿರುವುದು ‘ಪುಸ್ತಕ ಪ್ರೀತಿ’ಗೆ ದೊರೆತ ಮೆಚ್ಚುಗೆ.
ಮೊದಲ ತಿಂಗಳ ಪುಸ್ತಕ ಮಾತುಕತೆಯಲ್ಲಿ ಹಾವೇರಿ ಜಾನಪದ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಚಂದ್ರ ಪೂಜಾರಿ ಅವರ ‘ಅಭಿವೃದ್ಧಿ ಮತ್ತು ರಾಜಕೀಯ’, ಎರಡನೇ ತಿಂಗಳ ಪುಸ್ತಕ ಮಾತುಕತೆಯಲ್ಲಿ ಎಂ. ಅಬ್ದುಲ್ ರೆಹಮಾನ್ ಪಾಷಾ ಅವರ ‘ನಂಬಿಕೆ, ಮೂಢನಂಬಿಕೆ ಮತ್ತು ವೈಜ್ಞಾನಿಕ ಮನೋವೃತ್ತಿ’ ಕೃತಿಯ ಬಗ್ಗೆ ಹಾಗೂ ಮೂರನೇ ತಿಂಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಅವರ ಚಿಂತನೆಗಳ ಕುರಿತು ಮಾತುಕತೆ ನಡೆಸಲಾಗಿದೆ. ಅಕ್ಟೋಬರ್ ತಿಂಗಳ ಮಾತುಕತೆಗೆ ‘ಬಿಪಿನ್ ಚಂದ್ರ’ ಅವರ ಕೃತಿಯನ್ನು ಆಯ್ದುಕೊಳ್ಳಲಾಗಿದೆ. ಇದೇ 18ರಂದು ಮಾತುಕತೆ ನಡೆಯಲಿದೆ ಎಂದು ಮಾಹಿತಿ ನೀಡುತ್ತಾರೆ ‘ಪುಸ್ತಕ ಪ್ರೀತಿ’ಯ ನಿರ್ದೇಶಕ ಚಂದ್ರಶೇಖರ್.
‘ನಗರದ ವಿವಿಧೆಡೆ ‘ಪುಸ್ತಕ ಪ್ರೀತಿ’ ಮಳಿಗೆಯ ಶಾಖೆಗಳನ್ನು ತೆರೆಯುವ ಚಿಂತನೆ ನಮ್ಮ ಬಳಗಕ್ಕಿದೆ. ಮುಖ್ಯವಾಗಿ ಓದುಗರ ಬಳಿಯೇ ಮಳಿಗೆಯನ್ನು ಕೊಂಡೊಯ್ಯುವ ‘ಸಂಚಾರಿ ಮಳಿಗೆ’ ಯೋಜನೆ ಶೀಘ್ರದಲ್ಲೇ ಆರಂಭವಾಗಲಿದೆ. ಜನರಿರುವ ಬಳಿಯೇ ಈ ಮಳಿಗೆ ಸಂಚರಿಸಲಿದ್ದು, ಜನರಿಗೆ ಬೇಕಾದ ಪುಸ್ತಕಗಳು ಅವರ ಬಳಿಯೇ ಸುಲಭವಾಗಿ ದೊರೆಯುವ ವ್ಯವಸ್ಥೆ ಇದಾಗಿದೆ’ ಎಂದು ಯೋಜನೆಯ ರೂಪರೇಷೆಯನ್ನು ವಿವರಿಸುತ್ತಾರೆ ಅವರು.
ಪುಸ್ತಕೋದ್ಯಮವನ್ನೇ ಗುರಿಯಾಗಿಸಿಕೊಂಡ ಪುಸ್ತಕಗಳ ಮಳಿಗೆ ನಡುವೆ ಓದುಗರ ಅಭಿರುಚಿ ಮತ್ತು ವೈಚಾರಿಕತೆಯನ್ನೇ ಕೇಂದ್ರಿವಾಗಿರಿಸಿಕೊಂಡಿರುವ ‘ಪುಸ್ತಕ ಪ್ರೀತಿ’ ಅಪರೂಪದ ಮಳಿಗೆ ಎನ್ನಲಡ್ಡಿಯಿಲ್ಲ. ಸಂಪರ್ಕಕ್ಕೆ: 90360–82005, 080–23494488. ಇಮೇಲ್: kriyamadhyama@gmail.com