ಪುಸ್ತಕ ಪುರಸ್ಕಾರ ಪ್ರಧಾನ ಸಮಾರಂಭಕ್ಕೆ ಆಹ್ವಾನ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 2015ನೇ ಸಾಲಿನ ಗೌರವ ಪ್ರಶಸ್ತಿ ಪಡೆದಿರುವ ಪ್ರತಿಷ್ಟಿತ ಅನುವಾದಕರಿಗೆ ಹಾಗೂ 2014ನೇ ಸಾಲಿನ ಶ್ರೇಷ್ಟ ಅನುವಾದಕ್ಕಾಗಿ ಪುರಸ್ಕೃತರಾದವರಿಗೆ ಅಭಿನಂದನೆಗಳು.

20160314_161800

ಆಹಾ! ವಿಶ್ವ ಕಥಾ ಕೋಶ ಮತ್ತೆ ಕನ್ನಡಿಗರಿಗೆ ಲಭ್ಯವಾಗಲಿದೆ!!!

ಈ ಕಥಾಸಂಕಲನದ ಸಂಕಲನದ ಆಕರ್ಷಣೆ ಇದರ ಸಂಪಾದಕ ನಿರಂಜನ ಎಂಬುದರಲ್ಲಿದೆ. ಅಷ್ಟೇ ಅಲ್ಲ ಇದರ ಎಲ್ಲಾ ಸಂಪುಟಗಳು ನಿರಂಜನ ಅವರ ಪ್ರಾಸ್ತಾವಿಕ ಮಾತುಗಳನ್ನು ಹೊಂದಿದೆ. ಈ ಪ್ರಸ್ತಾವನೆಗಳು ಆ ಸಂಪುಟ ಯಾವ ದೇಶಗಳ ಕತೆಗಳಿಗೆ ಸಂಬಂಧಿಸಿದ್ದೋ ಆ ದೇಶಗಳ ಭೂಗೋಳ, ಇತಿಹಾಸ ಎಲ್ಲಾ ಚುಟಕಾದರೂ ಮಾಹಿತಿ ಭರಿತವಾಗಿವೆ.

ಈ ಮೇಲಿನ ಸಂಪುಟಗಳನ್ನು ಹೊಂದಿರುವ ಈ ವಿಶ್ವ ಕಥಾ ಕೋಶದಲ್ಲಿ ಮೇಲೆ ಪಟ್ಟಿಮಾಡಿದ ಶೀರ್ಷಿಕೆಗಳಡಿಯಲ್ಲಿ ಭಾರತ (ಎರಡು ಸಂಪುಟ – ಧರಣಿ ಮಂಡಲ ಮಧ್ಯದೊಳಗೆ ಕನ್ನಡದ ಕತೆಗಳಾದರೆ ಸುಭಾಷಿಣಿ – ಇತರ ಭಾರತೀಯ ಕತೆಗಳೊಂದಿಗೆ ಭಾರತದ ನೆರೆ ಹೊರೆ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ಬರ್ಮಾದ ಕತೆಗಳ ಸಂಗ್ರಹ. ಇವಲ್ಲದೆ, ಆಫ್ರಿಕಾ ಖಂಡ, ವಿಯೆಟ್ನಾಮ್, ಮಂಗೋಲಿಯಾ, ಚೀನ, ಜಪಾನ್, ಕೊರಿಯಾ, ಇಂಗ್ಲಂಡ್, ಹಂಗರಿ, ರುಮಾನಿಯ, ಆಸ್ಟ್ರೇಲಿಯಾ, ನ್ಯುಜಿಲ್ಯಾಂಡ್, ರಷ್ಯ, ಐರ್ಲೆಂಡ್, ವೇಲ್ಸ್, ಸ್ಕಾಟ್ಲೆಂಡ್, ಜೆಕೊಸ್ಲೋವಾಕಿಯಾ, ಪೋಲೆಂಡ್, ಯಗೋಸ್ಲಾವಿಯಾ, ಅಲ್ಬೇನಿಯಾ, ಬಲ್ಗೇರಿಯಾ, ಅಮೆರಿಕ, ಕೆನಡಾ, ಮೆಕ್ಸಿಕೋ, ಐಸ್ಲ್ಯಾಂಡ್, ಡೆನ್ಮಾರ್ಕ್, ನಾರ್ವೆ, ಸ್ವೀಡನ್, ಫಿನ್ ಲ್ಯಾಂಡ್, ಇಟಲಿ, ಆಸ್ಟ್ರೇಲಿಯಾ, ಗ್ರೀಸ್, ಸೈಪ್ರಸ್, ಟರ್ಕಿ, ಹಾಲೆಂಡ್, ಬೆಲ್ಜಿಯಂ, ಸ್ವಿಟ್ಜರ‍್ಲ್ಯಾಂಡ್, ಜರ್ಮನಿ, ಸ್ಪೈನ್, ಪೋರ್ತುಗಲ್, ಇಂಡೋನೇಷ್ಯಾ, ಫಿಲಿಪೈನ್ಸ್, ಮಲಯ, ಸಿಂಗಾಪುರ, ಥಾಯ್ ಲ್ಯಾಂಡ್, ಫ್ರಾನ್ಸ್, ಕ್ಯೂಬಾ, ಜಮೇಯಿಕಾ, ಪಶ್ಚಿಮ ಏಷ್ಯಾ, ದಕ್ಷಿಣ ಅಮೇರಿಕಾ ದೇಶಗಳ ಕತೆಗಳು 24 ಸಂಪುಟಗಳಲ್ಲಿ ಓದಬಹುದು. ಕೊನೆಯ ಸಂಪುಟದಲ್ಲಿ ಪ್ರಾಚೀನ ಪಂಚ ಮಹಾಕಾವ್ಯಗಳಿಂದ ಆಯ್ದ ಕತೆಗಳು ಇವೆ.

 

 

ಇಂಡೋನೇಶಿಯಾದ ಎಳೆಯ ಬರಹಗಾರ್ತಿಯ ಸರಳ ಕತೆಗಳು

ಶೀರ್ಷಿಕೆ: ಅಮ್ಮನಿಗೆ ಹಜ್ ಬಯಕೆ ಲೇಖಕರು : ಆಸ್ಮಾ ನಾಡಿಯಾ  ಅನುವಾದ:ಎಚ್. ಎನ್. ಗೀತಾ; ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ ಪುಟ:೧೧೧  ಬೆಲೆ: ರೂ.70/-

ಗ್ರಾಮೀಣ ಬದುಕಿನ ಆಳ-ವಿಸ್ತಾರ ಹೊಂದಿರುವ ಕತೆಗಳು

ದ.ರಾ. ಬೇಂದ್ರೆ ಕಾವ್ಯ ಪುರಸ್ಕಾರ ಗಳಿಸಿದ ಕವನ ಸಂಕಲನ `ಕನಸು ಮಾರುವ ಹುಡುಗಿ’ ಕಥಾಸಂಕಲನಗಳಾದ `ಮೂಕ ಹಕ್ಕಿ ನಕ್ಕಾಗ’, `ಬಾರಪ್ಪಾ ಬಾರೋ ಮಳೆರಾಯ’ ಹಾಗೂ ಕಾದಂಬರಿ `ಸಪ್ನ ಗೆಜ್ಜೆ’ ಗಳ ಮೂಲಕ ಈಗಾಗಲೇ ಸಾರಸ್ವತ ಲೋಕದಲ್ಲಿ ಯುವ ಬರಹಗಾರರಾಗಿ ಗುರುತಿಸಿಕೊಂಡು ಗಟ್ಟಿ ಹೆಜ್ಜೆಯನ್ನಿಟ್ಟಿರುವ ವೈ.ಎಸ್.ಹರಗಿಯವರ ಈ ಮೂರನೇ ಕಥಾಸಂಕಲನ `ದೇವ್ರು ಬರ್ತಾನೆ ದಾರಿಬಿಡಿ’. ಸಣ್ಣ ಕತೆಗಳ ಲಕ್ಷಣ ಏನೆಲ್ಲಾ ಒಳಗೊಂಡ ಇಲ್ಲಿಯ ಕಥೆಗಳು ಗ್ರಾಮೀಣ ಬದುಕಿನ ಆಳ-ವಿಸ್ತಾರವನ್ನು ಕಂಡು, ಉಂಡು ಅನುಭವದ ರಸಘಟ್ಟಿಯಾಗಿ ಹುಟ್ಟಿಕೊಂಡಿವೆ. ಇದರಿಂದಾಗಿಯೇ ಈ ಕತೆಗಳಲ್ಲಿ ಬಡವರು, ಸಣ್ಣ ಪುಟ್ಟ ಕಾರುಬಾರಿನವರು, ಕೆಲಸ ಇಲ್ಲದವರು ಹೀಗೆ ಸಮಾಜದ ಸಾಮಾನ್ಯ ಸ್ತರದವರು ಉಸಿರಾಡುತ್ತಾರೆ. ಸಮಾಜದಲ್ಲಿ ನೆಲೆ ನಿಲ್ಲಲು ಹರಸಾಹಸ ಪಡುತ್ತಾರೆ, ಬದುಕಿಗಾಗಿ ಹೋರಾಡುತ್ತಾರೆ, ಏನೂ ಇಲ್ಲದೆಯೂ ಎಲ್ಲವನ್ನು ಒಳಗೊಂಡವರಂತೆ ಸುಖಿಸುತ್ತಾರೆ. ತಮ್ಮದೇ ಪ್ರಪಂಚವನ್ನು ಕಟ್ಟಿಕೊಳ್ಳುತ್ತಾರೆ. ಇದು ಸಾಧ್ಯವಾಗುವುದು ಹರಗಿಯವರಿಗೆ, ಆ ಎಲ್ಲಾ  ಜನರ ಬಗೆಗಿರುವ ಪ್ರೀತಿ, ಅಭಿಮಾನ, ಸಹಾನುಭೂತಿಗಳಿಂದ. ಉತ್ತರ ಕರ್ನಾಟಕ ಭಾಷೆ ಇಲ್ಲಿಯ ಬಾಹ್ಯ ಸ್ತೋತ್ರವಾದರೆ, ಒಳಹರಿವು ಅನುಕಂಪ, ಇವೆರಡನ್ನೂ ಸಮರಸಗೊಳಿಸುತ್ತದೆ. ಲೇಖಕರದ್ದೇ ಆದ ಶೈಲಿ ಇವು ಮುಪ್ಪುರಿಗೊಂಡಾಗ ಕಥಾ ವಿಸ್ತರಣೆ ಪ್ರಿಯವಾಗುತ್ತದೆ. ಇದರಲ್ಲಿ ಎಲ್ಲಾ ಕತೆಗಳ ಪಾತ್ರಗಳು – ಸ್ವತಂತ್ರವಾಗಿ ಇರಬಹುದು, ಪ್ರತಿ ಪಾತ್ರಗಳಿಂದಾದರೂ ಆಗಬಹುದು – ಸಜೀವವಾಗಿ ಓದುಗರ ಮನೋಮಂದಿರದಲ್ಲಿ ನೆಲೆ ನಿಲ್ಲುತ್ತವೆ, ನೆನಪಾದಾಗಲೆಲ್ಲಾ ನಮ್ಮನ್ನು ಕಾಡುತ್ತವೆ, ಪರಿಹಾರಕ್ಕಾಗಿ ಬೇಡುತ್ತವೆ, ಓದುಗನ ಅನುಕಂಪದ ನಿಟ್ಟುಸಿರ ಬಿಸಿಗೆ ಬಾಡುತ್ತದೆ.
-ಪ್ರೊ. ಸಿ. ಉಪೇಂದ್ರ ಸೋಮಯಾಜಿ (ಬೆನ್ನುಡಿಯಿಂದ)

ಶೀರ್ಷಿಕೆ: ದೇವ್ರು ಬರ್ತಾನೆ ದೇವ್ರು  ಲೇಖಕರು:ವೈ.ಎಸ್.ಹರಗಿ ಪ್ರಕಾಶಕರು:ಶ್ರೀನಿವಾದ ಪುಸ್ತಕ ಪ್ರಕಾಶನ  ಪುಟ:118 ಬೆಲೆ:ರೂ.60/- ಪ್ರಕಟಣೆ: 2010

ವರ್ಧಮಾನ ಪ್ರಶಸ್ತಿ ವಿಜೇತರಿಗೆ ಅಭಿನಂದನೆಗಳು


ಕನ್ನಡದ ಮುಖ್ಯ ವಿಮರ್ಶಕರಾದ ಡಾ.ಎಚ್.ಎಸ್.ರಾಘವೇಂದ್ರ ರಾವ್ ಅವರು ತಮ್ಮ `ತರು ತಳೆದ ಪುಷ್ಪ’ ವಿಮರ್ಶಾ ಕೃತಿಗೆ ವರ್ಧಮಾನ ಪ್ರಶಸ್ತಿ ಪಡೆದಿದ್ದಾರೆ. ಹಾಗೂ ಉದಯೋನ್ಮುಖ ಲೇಖಕ ವಸುದೇಂದ್ರ ತಮ್ಮ `ಯುಗಾದಿ’ ಕಥಾ ಸಂಕಲನಕ್ಕೆ ಉದಯೋನ್ಮುಖ ವರ್ಧಮಾನ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರಿಬ್ಬರಿಗೂ ನಮ್ಮ ಪ್ರೀತಿಪೂರ್ವಕ, ಗೌರವಪೂರ್ವಕ ಅಭಿನಂದನೆಗಳು.

`ನನಗೆ ಭಾವನೆಗಳಿಲ್ಲದ ಲೋಕದಲ್ಲಿ ನಂಬಿಗೆಯಿಲ್ಲ, ನಾವು ದ್ವೀಪಗಳಾಗುವುದು ಬೇಡ, ಗೋಡೆ ಕಟ್ಟುವುದು ಬೇಡ, ನಾವು ಸೇತುವೆ ಕಟ್ಠೋಣ ದೀಪ ಹಚ್ಚೋಣ. ‘ ಇದು ಖ್ಯಾತ ವಿಮರ್ಶಕ ಡಾ.ಎಚ್.ಎಸ್.ರಾಘವೇಂದ್ರ ರಾವ್ ಅವರು ಮೂಡುಬಿದಿರೆಯ ರಮಾರಾಣಿ ಸಂಶೋಧನೆ ಕೇಂದ್ರದಲ್ಲಿ ಭಾನುವಾರ ನಡೆದ ವರ್ಧಮಾನ ಪ್ರಶಸ್ತಿ ಪೀಠದ ವರ್ಧಮಾನ ಪ್ರಶಸ್ತಿ ಸ್ವೀಕರಿಸಿ ಹೇಳಿದ ಮಾತು.

`ಕತೆಗಾರರು ಕಡಿಮೆ ಮಾ ತಾಡಿದ್ರೆ ಒಳ್ಳೆಯದು. ಅವರು ಹೇಳುವುದನ್ನು ಕತೆಯಲ್ಲಿ ಹೇಳುತ್ತಾನೆ. ನನಗೆ ಮನುಷ್ಯನೇ ನನಗೇ ಶ್ರೇಷ್ಠ ಧರ್ಮ.’ ಇದು ವರ್ಧಮಾನ ಉದಯೋನ್ಮುಖ ಪ್ರಶಸ್ತಿ ಸ್ವೀಕರಿಸಿದ ವಸುದೇಂದ್ರ ಅವರ ಅಭಿಪ್ರಾಯ.

ಕೃಪೆ: http://www.gulfkannadiga.com/news-30693.html

http://www.daijiworld.com/news/news_disp.asp?n_id=84900&n_tit=Moodbidri%3A+Let%92s+Not+Turn+Into+Islands%2C+but+Build+Bridges+%96+Dr+HSR+

ವರ್ಧಮಾನ ಪ್ರಶಸ್ತಿ ಪಡೆದ ಕೃತಿ

ಈ ಪುಸ್ತಕವು ನಾನು ಪತ್ರಿಕೆಗಳಿಗೆಂದು ಬರೆದ ಹಲವು ಅಂಕಣಗಳು ಮತ್ತು ಕೆಲವು ಬಿಡಿ ಬರಹಗಳ ಸಂಕಲನ. ಮೊದಲ ಮೂವತ್ಮೂರು ಬರಹಗಳು `ಜನವಾಹಿನಿ’ ದಿನಪತ್ರಿಕೆಯ ಭಾನುವಾರದ ಪುರವಣಿಯಲ್ಲಿ 08-03-2001 ರಿಂದ 28-10-2001 ರ ಅವಧಿಯಲ್ಲಿ ನಿರಂತರವಾಗಿ ಪ್ರಕಟವಾದವು. ಆ ಅಂಕಣಕ್ಕೂ `ತರು ತಳೆದ ಪುಷ್ಪ’ ಎಂಬ ಶೀರ್ಷಿಕೆಯೇ ಇತ್ತು. ಉಳಿದವು ಬೇರೆ ಕಡೆ ಪ್ರಕಟವಾದರೂ ಆಶಯಗಳ ಸಾಮ್ಯದಿಂದ ಇಲ್ಲಿ ಜಾಗ ಪಡೆದಿವೆ.

ಹಲವು ವರ್ಷಗಳಿಂದ, ಪತ್ರಿಕೆಗಳಿಗೆ ಬರೆಯುವುದನ್ನು ತಪ್ಪಿಸಿಕೊಳ್ಳುತ್ತಾ ಬಂದ ನನಗೆ ಈ ಬಗೆಯ ಬರವಣಿಗೆ ಕೊಂಚ ಹೊಸದು. ಸಾಹಿತ್ಯಕ ಪತ್ರಿಕೆಗಳಲ್ಲಿ ಬರೆಯುವುದಕ್ಕೂ ಸಾಕಷ್ಟು ದೊಡ್ಡ ಓದುಗ ಸಮುದಾಯವನ್ನು ತಲುಪುವ ಪತ್ರಿಕೆಗಳಲ್ಲಿ ಬರೆಯುವುದಕ್ಕೂ ವ್ಯತ್ಯಾಸವಿದೆ. ಸಂವಹನಶೀಲತೆ ಮತ್ತು ಸಂಕೀರ್ಣತೆಗಳ ನಡುವಿನ ಸಮತೋಲನವನ್ನು ಕಾಪಾಡಿಕೊಳ್ಳುವುದು ಕಷ್ಟ. ಹಾಗೆಂದು ಸರಳವಾದ ವಿವರಣೆಗಳನ್ನು ನೀಡೋಣವೆಂದರೆ ಪುಟಮಿತಿ, ಪದಮಿತಿಗಳು ಅಡ್ಡಬರುತ್ತವೆ. ಇದು ಪತ್ರಿಕೆಗಳನ್ನು ಓದುವವರ ಬೌದ್ಧಿಕ ಸಾಮರ್ಥ್ಯವನ್ನು ಶಂಕಿಸುವ ಹುಂಬ ಕೆಲಸ ಅಲ್ಲ. ವಿಮರ್ಶೆಗೆ ಸಹಜವಾದ ಪರಿಭಾಷೆಯನ್ನು ಎಷ್ಟು ಹೇಗೆ ಬಳಸಬಹುದು ಎನ್ನುವುದು ಇಲ್ಲಿನ ಪ್ರಶ್ನೆ. ಹೆಚ್ಚು ರಾಜಿಗಳನ್ನು ಮಾಡಿಕೊಳ್ಳದೆ ಬರೆದರೆ, ಇಂಥ ಬರವಣಿಗೆಯು ಕಲಿಯುವ, ಕಲಿಸುವ ಕೆಲಸವೂ ಆಗಬಹುದು. ಪತ್ರಿಕೆಗಳನ್ನು ಓದುವವರೆಲ್ಲರೂ ಇಂಥ ಅಂಕಣಗಳನ್ನು ಓದುವುದಿಲ್ಲವೆಂಬ ವಾಸ್ತವಜ್ಞಾನವು ಇಲ್ಲಿನ ನನ್ನ ಧೋರಣೆಯನ್ನು ರೂಪಿಸಿದೆ.

ನನ್ನ ಆಯ್ಕೆಯ ಪುಸ್ತಕಗಳ ಬಗ್ಗೆ ಬರೆಯುವ ಸ್ವಾತಂತ್ರವು ನನಗೆ ಸಿಕ್ಕಿತ್ತು. ಸಂಪಾದಕರ ಸೆನ್ಸಾರ‍್ ಇರಲಿಲ್ಲ. ನಮ್ಮ ಸಂಸ್ಕೃತಿಗೆ ಮುಖ್ಯವೆಂದು ತೋರಿದ, ನನಗೆ ಸಂತೋಷಕೊಟ್ಟ ಕೃತಿಗಳನ್ನು ನಾನು ಆರಿಸಿಕೊಂಡಿದ್ದೇನೆ. ಸಾಂಸ್ಕೃತಿಕ ಹಾಗೂ ಸಾಮಾಜಿಕ ಸನ್ನಿವೇಶಗಳ ಬಗ್ಗೆ ಕಾಳಜಿಯಿಟ್ಟುಕೊಂಡೇ ಕೃತಿ ಕೇಂದ್ರಿತವಾದ ಸಾಹಿತ್ಯಕ ವಿಧಾನಗಳನ್ನು ಬಳಸುವುದು ಇಲ್ಲಿ ನನ್ನ ಆಯ್ಕೆಯಾಗಿದೆ. ಕಾಲಮಿತಿ ಹಾಗೂ ಪದಮಿತಿಗಳಲ್ಲಿ ಬರೆಯುವುದು ಅನಿವಾರ್ಯವಾದ ಈ ಕೆಲಸವು ನನಗೆ ಕೆಲವು ಪಾಠಗಳನ್ನು ಕಲಿಸಿದೆ. ಬರೆದುದನ್ನು ಮತ್ತೆ ಓದುವುದರಿಂದ ಹಿಡಿದು ಸೂಕ್ತ ಪದಗಳ ಆಯ್ಕೆ ಮತ್ತು ವಾಕ್ಯರಚನೆಗಳವರೆಗೆ ಈ ಕಲಿಕೆಯ ಹರಹಿದೆ.

-ಪುಸ್ತಕದ ಲೇಖಕರ ಮಾತಿನಿಂದ
ಶೀರ್ಷಿಕೆ: ತರು ತಳೆದ ಪುಷ್ಪ ಲೇಖಕರು:ಎಚ್ ಎಸ್ ರಾಘವೇಂದ್ರ ರಾವ್ ಪ್ರಕಾಶನ:ಕ್ರೈಸ್ಟ್ ಕಾಲೇಜು ಕನ್ನಡ ಸಂಘ ಪುಟ:200 ಬೆಲೆ:


ವರ್ಧಮಾನ ಉದಯೋನ್ಮುಖ ಪ್ರಶಸ್ತಿ ಪಡೆದ ಕೃತಿ

`ಯುಗಾದಿ’ ಕತೆಯಲ್ಲಿ ಹೊಸ ತಲೆಮಾರಿನ ಜೀವನ ಕ್ರಮವೊಂದನ್ನು ಹಳೆಯ ತಲೆಮಾರಿನ ಕಣ್ಣುಗಳಿಂದ ಕಾಣುವ ಪ್ರಯತ್ನವಿದೆ. ತಾವು ಬದುಕಿ ಬಂದ ರೀತಿಗೆ ತಮ್ಮ ಮಗ ಬದುಕುತ್ತಿರುವ ರೀತಿಯನ್ನು ಹೋಲಿಸುತ್ತಾ ಅದನ್ನು ತಮ್ಮ ಗ್ರಹಿಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವ ಗೋಪಣ್ಣ ಮಾಸ್ತರರಿಗೆ ಆಗುವ ಗಲಿಬಿಲಿಗಳು ಮನನೀಯವಾಗಿವೆ. ಮುಖ್ಯವಾದ ಸಂಗತಿ ಎಂದರೆ ತಮ್ಮ ಮಗನ ಜೀವನದ ಇತಿಮಿತಿಗಳು ಗೋಚರಿಸುವಂತೆ ಹೊಸ ತಲೆಮಾರಿನ ಪ್ರಚಂಡ ಶಕ್ತಿಯ ಅರಿವೂ ಅವರಿಗೆ ಆಗುವುದು; ತಮಗೆ ಅಸಾಧ್ಯವಾಗಿದ್ದು, ಕಷ್ಟಸಾಧ್ಯವಾಗಿದ್ದು ತನ್ನ ಮಗನಿಗೆ ಸುಲಭವಾಗಿ, ಸರಳವಾಗಿ ಸಾಧ್ಯವಾಗುತ್ತಿರುವುದು. ಈ ಕತೆ ಗುರುತಿಸುವ ಮತ್ತೊಂದು ಮಹತ್ವದ ಸಂಗತಿ ಎಂದರೆ ಗೋಪಣ್ಣ ಮಾಸ್ತರರಿಗೆ ತಮ್ಮ ಮಗನ ಜೀವನಕ್ರಮ, ಅವನ ಆದ್ಯತೆಗಳು, ಮೌಲ್ಯಗಳು ಇನ್ನೂ ಅರ್ಥವಾಗದ ನಿಗೂಢ, ಅರ್ಥೈಸಿಕೊಳ್ಳಲಾಗದ ಗೋಜಲು; ಆದರೆ ಪ್ರಹ್ಲಾದನಿಗೆ ತನ್ನ ಅಪ್ಪ ಹಾಗೆ ಒಂದು ಸಮಸ್ಯೆ ಏನಲ್ಲ. ಅಂದರೆ ಹೊಸ ತಲೆಮಾರನ್ನು ಹಳೆಯ ತಲೆಮಾರು ಅರ್ಥ ಮಾಡಿಕೊಳ್ಳುವ ಜಟಿಲ ಪ್ರಕ್ರಿಯೆಯೊಂದರ ಕಥನವಾಗಿ `ಯುಗಾದಿ’ ಯನ್ನು ಓದಬಹುದಾಗಿದೆ. `ಬೆಟ್ಟದ ಜೀವ’ದ ಗೋಪಾಲಯ್ಯನಿಗೆ ತನ್ನ ಮಗ ಶಂಭುವಿನ ಜೀವನಕ್ರಮದ ಭೌತಿಕ ಸ್ವರೂಪ ಅದರ ಅಧಿಕೃತ ವಿವರಗಳಲ್ಲಿ ಅರಿವಿಗೇ ಬರುವುದಿಲ್ಲ.ಅವರಿಬ್ಬರ ಜಗತ್ತುಗಳು ನಿಜವಾಗಿ ಸಂಧಿಸುವುದೇ ಇಲ್ಲ.

ಅಡಿಗರ `ವರ್ಧಮಾನ’, ಅನಂತಮೂರ್ತಿಯವರ `ಸೂರ್ಯನಕುದುರೆ’ ಮುಂತಾದ ಕೃತಿಗಳಲ್ಲಿ ಹೊಸ ತಲೆಮಾರಿನಲ್ಲಿ ಸುಪ್ತವಾಗಿರುವ ವಿಕಾಸದ ಸಾಧ್ಯತೆಗಳು ಅಸ್ಪಷ್ಟವಾಗಿಯಾದರೂ ಗೋಚರಿಸುತ್ತವೆ. ವಸುಧೇಂದ್ರರ , `ಯುಗಾದಿ’ಯಲ್ಲಿ ಎರಡೂ ಜಗತ್ತುಗಳು ಭೌತಿಕವಾಗಿ ಸಂಧಿಸುವುದಷ್ಟೇ ಅಲ್ಲ ಹೆಚ್ಚಿನ ಸಹಾನುಭೂತಿಯಲ್ಲಿ ಅರ್ಥಪೂರ್ಣವಾದ ಅನುಸಂಧಾನಕ್ಕಾಗಿ ಪ್ರಯತ್ನಿಸುವ ವಿನ್ಯಾಸವೊಂದು ಸೂಚಿತವಾಗುತ್ತದೆ.

– ಟಿ.ಪಿ. ಅಶೋಕ

ಶೀರ್ಷಿಕೆ:ಯುಗಾದಿ ಲೇಖಕರು:ವಸುದೇಂದ್ರ ಪ್ರಕಾಶನ:ಛಂದ ಪ್ರಕಾಶನ ಪುಟ:206 ಬೆಲೆ:ರೂ.95

ಸತ್ಯಕ್ಕಿಂತ ಅನುಕಂಪವೇ ದೊಡ್ಡದು


ಶೀರ್ಷಿಕೆ: ಕ್ರೌಂಚ ಪಕ್ಷಿಗಳು  ಲೇಖಕರು:ವೈದೇಹಿ ಪ್ರಕಾಶಕರು:ಅಕ್ಷರ ಪ್ರಕಾಶನ  ಪುಟಗಳು:96  ಬೆಲೆ:ರೂ.60/-

ಕೃಪೆ: ದೇಶ ಕಾಲ ವಿಶೇಷ

ಸಾಮಾನ್ಯರಲ್ಲಿ ಸಾಮಾನ್ಯರೂ ಪ್ರತಿಭಟನೆಯ ಮೂಲಕ ತಮ್ಮದೇ ಆದ ಅಸ್ಮಿತೆಯನ್ನು ಕಾಣುವುದು


ಶೀರ್ಷಿಕೆ: ಜಯಂತ ಕಾಯ್ಕಿಣಿ  ಲೇಖಕರು:ಕಥಾ ಸಂಕಲನ  ಪ್ರಕಾಶಕರು:ಅಂಕಿತ ಪುಸ್ತಕ  ಪುಟಗಳು:124  ಬೆಲೆ:ರೂ.60/-


ಕೃಪೆ: ದೇಶ ಕಾಲ ವಿಶೇಷ

ಕನ್ನಡದಲ್ಲಿ ಕಾಳೀಪಟ್ನಂ ರಾಮಾರಾವ್

scan0003

ಆಂಧ್ರಪ್ರದೇಶದ ಶ್ರೀಕಾಕುಳಂ ಚಿಲ್ಲೆಯ ಮುರಪಾಕದವರಾದ ಕಾಳೀಪಟ್ನಂ ರಾಮಾರಾವ್ ತೆಲುಗಿನ ಪ್ರಸಿದ್ಧ ಕಥಾಲೇಖಕ. `ಕಾ.ರಾ.ಮಾಸ್ಟಾರುಎಂದೇ ಆಂಧ್ರದ ಸಾಹಿತ್ಯ ಲೋಕದಲ್ಲಿ ಗುರುತಿಸಲ್ಪಡುವ ರಾಮಾರಾವ್ ಈವರೆಗೆ ಬರೆದದ್ದು ಕಡಿಮೆ. ೨೫ ಕಥೆಗಳನ್ನಷ್ಟೇ ಅವರು ಬರೆದಿರುವುದು. `ರಾಗಮಾಯಿ, `ಅಭಿಮಾನಾಲು ಅವರ ಕಾದಂಬರಿಗಳು.

ಮಾಕ್ಸ್೯ವಾದಿ ಸಿದ್ಧಾಂತದಿಂದ ಪ್ರಭಾವಿತರಾದ ಈ ಲೇಖಕ ತಾವು ನೆಲಸಿರುವ ಶ್ರೀಕಾಕುಳಂ ಜಿಲ್ಲೆಯ ಕಥನವನ್ನೇ ತಮ್ಮ ಕಥೆಗಳಲ್ಲಿ ಬರೆದಿದ್ದಾರೆ. ಈ ಲೇಖಕನ ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ ಕವಿ, ಕಥೆಗಾರ ಚಿದಾನಂದ ಸಾಲಿ.

ಈ ಸಂಕಲನದಲ್ಲೂ ಕಾಳೀಪಟ್ನಂ ರಾಮಾರಾವ್ 25 ಕಥೆಗಳಲ್ಲಿ ಆಯ್ದ ಒಂಬತ್ತು ಕಥೆಗಳು ಮಾತ್ರ. ಕೊಳ್ಳುವವರಿಗೆ ಭಾರವಾಗುತ್ತದೆ ಎಂಬ ಕಾರಣಕ್ಕೆ ರಾಮಾರಾವ್ ಅವರ ತುಂಬಾ ಜನಕ್ಕೆ ಇಷ್ಟವಾಗಿರುವ ಕಥೆಗಳನ್ನು ಮಾತ್ರ ಸೇರಿಸಿ ಈ ಸಂಕಲನವನ್ನು ಪ್ರಕಟಿಸಿದ್ದಾರೆ.

ಅತ್ಯಂತ ಚಿಕ್ಕ ವಾಕ್ಯಗಳು, ದೀರ್ಘವಾದ ಕಥೆಗಳು, ಚಿಕ್ಕ ತಲೆ ಬರಹ (ಯಜ್ಞ, ಹಿಂಸೆ, ನೋ ರೂಮ್, ನೋವು … ಇತ್ಯಾದಿ( ರಾಮಾರಾವ್ ಅವರ ಕಥೆಗಳ ವಿಶೇಷ ಅಂಶಗಳು. ಅವರ ಸರಳ ನಿರೂಪಣೆಯ ಶೈಲಿಯನ್ನು ಕನ್ನಡ ನುಡಿಗಟ್ಟಿಗೆ ಅನುವಾದಿಸಿದ್ದಾರೆ ಚಿದಾನಂದ ಸಾಲಿ. ಅನುವಾದ ರಾಮರಾವು ಕಥಾಲೋಕವನ್ನು ಅರಿಯಲು ಸಹಾಯವಾಗುವಂತಿದೆ. ಭಿನ್ನವಾದ ಹಾಗೂ ದೀರ್ಘ ಎನಿಸುವ ಈ ಕಥೆಗಳು ಓದುತ್ತಾ ಓದುತ್ತಾ ಮರಳು ಮಾಡುವಷ್ಟು ಶಕ್ತಿಶಾಲಿಯಾಗಿವೆ.

ಶೀರ್ಷಿಕೆ:ಯಜ್ಞ (ಒಂಬತ್ತು ಕತೆಗಳು ) ಲೇಖಕರು:ಕಾಳೀಪಟ್ನಂ ರಾಮಾರಾವ್ ಕನ್ನಡಕ್ಕೆ:ಚಿದಾನಂದ ಸಾಲಿ ಪ್ರಕಾಶಕರು: ಸಾಹಿತ್ಯ ಅಕಾಡಮಿ ಪುಟಗಳು: 328 ಬೆಲೆ:ರೂ.200/-

ಕೃಪೆ : ಪ್ರಜಾವಾಣಿ

 

 

ಒಡೆದ ಕೋಟೆ, ಅಗ್ನಿ ಪರ್ವತ ಇತ್ಯಾದಿ

scan0011
ತಮಿಳಿನ ಮುಖ್ಯ ಲೇಖಕರ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಪಾ.ಶ. ಶ್ರೀನಿವಾಸ. ಈ ಸಂಕಲನದಲ್ಲಿ ಕಲ್ಕಿ, ಅಖಿಲನ, ಜಯಕಾಂತನ್, ಇಂದುಮತಿ ಮೊದಲಾದ ಕತೆಗಾರರ ಎಂಟು ಕತೆಗಳು ಇವೆ.
ಕಲ್ಕಿಯವರ ‘ಒಡೆದ ಕೋಟೆ’, ಅಖಿಲನ್ ಅವರ ‘ಅಗ್ನಿ ಪರ್ವತ’, ಜಯಕಾಂತನ್ ಅವರ ‘ಉಪವಾಸ ವ್ರತ’, ಇಂದುಮತಿ ಅವರ ‘ಮೆರವಣಿಗೆ”, ಮಾಲನ ಅವರ ‘ಜಾಗ’, ಇಲ್ಲಿನ ಮುಖ್ಯ ಕಥೆಗಳಾಗಿವೆ. ಇವೆಲ್ಲವನ್ನೂ ಶ್ರೀನಿವಾಸ ಮೂಲದ ಅಂದಗೆಡದಂತೆ ಅನುವಾದಿಸಿದ್ದಾರೆ. ಭಾರತೀಯ ಭಾಷೆಗಳ ಕತೆಗಳ ಬಗ್ಗೆ ಕುತೂಹಲ ಇರುವವರಿಗೆ ಇದೊಂದು ಒಳ್ಳೆಯ ಓದಾಗುತ್ತದೆ.
ಇದರೊಂದಿಗೆ ತಮಿಳು ಕತೆಗಳ ಬಗ್ಗೆ ಚಿಕ್ಕದಾದ ಪ್ರವೇಶವನ್ನು ಅನುವಾದಕರು ಕೊಟ್ಟಿದ್ದಾರೆ. ಇದು, ಕಥೆಗಳ ಮೊದಲಿಗೆ ಬರುವ ಲೇಖಕರ ಪರಿಚಯ ಕಥೆಗಳನ್ನು ಒಟ್ಟಾರೆ ಅರಿಯಲು ಸಹಾಯಕವಾಗಿವೆ. ಇಲ್ಲಿ ಅನುವಾದಗೊಂಡಿರುವ ಕಥೆಗಾರರೆಲ್ಲ ಹಿರಿಯ ತಲೆಮಾರಿಗೆ ಸೇರಿದವರು. ಯುವ ಕಥೆಗಾರರ ಕತೆಗಳು ಇಲ್ಲದಿರುವುದು ಈ ಸಂಕಲನದ ಕೊರತೆ ಎಂದೇ ಹೇಳಬಹುದು.

ಶೀರ್ಷಿಕೆ : ಪ್ರಸಾದ (ತಮಿಳು ಸಣ್ಣ ಕತೆಗಳ ಸಂಕಲನ) ಅನು:ಪಾ.ಶ.ಶ್ರೀನಿವಾಸ  ಪ್ರಕಾಶಕರು:ಪ್ರಿಯದರ್ಶಿನಿ ಪ್ರಕಾಶನ ಪುಟ:೧೪೮ ಬೆಲೆ: ರೂ.100/-

ಕೃಪೆ: ಪ್ರಜಾವಾಣಿ

ಸಂಕ್ರಮಣ

scan0013

ಸರಳ ಭಾಷೆ, ನಿರೂಪಣೆ, ನೇರ ಶೈಲಿಯಿಂದ ಗಮನ ಸೆಳೆಯುವ ಲೇಖಕಿ ವಸುಮತಿ ಉಡುಪ. ಕಾದಂಬರಿ, ಕಥಾಸಂಕಲನ, ಪ್ರಬಂಧ . . . ಹೀಗೆ ಗುರುತಿಸಿಕೊಂಡಿರುವ ವಸುಮತಿ ಉಡುಪ ಅವರು ಕತೆ ಹೇಳುವ ರೀತಿಯಲ್ಲಿ ಕ್ಲಿಷ್ಟತೆಯಿಲ್ಲ. ಮಹಿಳಾ ಓದುಗರಿಗಂತೂ ಅವರ ಕಥೆಗಳು ಅಚ್ಚುಮೆಚ್ಚು. ಅವರ ಕಥೆಗಳ ಸಂಗ್ರಹ ‘ಸಂಕ್ರಮಣ’ ಈಗ ಹೊರಬಂದಿದೆ. ಮಲೆನಾಡಿನ ಪರಿಸರ, ಭಾಷೆ, ಜೀವನ ಶೈಲಿ ಇವರ ಬಹುತೇಕ ಕಥೆಗಳ ವಸ್ತು. ಈ ಸಂಕಲನದ ಬೆಲೆ ೯೫ ರೂಪಾಯಿ. ೧೭ ಕಥೆಗಳ ಓದಿಗೆ ಇದೇನೂ ಹೆಚ್ಚೆನಿಸುವುದಿಲ್ಲ

ಶೀರ್ಷಿಕೆ: ಸಂಕ್ರಮಣ ಲೇಖಕರು:ವಸುಮತಿ ಉಡುಪ ಪ್ರಕಾಶಕರು : ಅಂಕಿತ ಪ್ರಕಾಶನ ಬೆಲೆ:ರೂ.೯೫/-

ಕೃಪೆ:ಉದಯವಾಣಿ