ಅದು ಬಲು ಕಷ್ಟದ ಕೆಲಸ

ನಿಮ್ಮ ಮಾತುಕತೆಗಳಲ್ಲಿ ಹುದುಗಿದ ಬೆಕ್ಕು

ಸಂಶಯದ ಪಂಜವೆತ್ತಿ

ನನ್ನ ನಂಬಿಕೆಯ ನೀಯತ್ತು ಹಕ್ಕು

ಕೊನೆಗೆ ಸಾಚಾತನವನ್ನು ಪರಚಿ, ಒತ್ತಿ

ನೋವಿಗೆ ಕಣ್ಣು ತುಂಬಿದ್ದರೂ

ಚೆಲ್ಲಿದ ರಕ್ತದಲ್ಲಿ ರಾಷ್ಟ್ರೀಯತೆಯ ಧಾತುಗಳ

ನನ್ನೆದುರಿನಲ್ಲೇ ತನಿಖೆ ಮಾಡುವುದನ್ನು

ಹುಸಿನಗುತ್ತಾ ಎದುರಿಸುವುದಿದೆಯಲ್ಲಾ

ಅದು ಬಲು ಕಷ್ಟದ ಕೆಲಸ

 – ಕೆ ಎಸ್ ನಿಸಾರ್ ಅಹ್ಮದ್

ಸಾವಿರಾರು ನೂರಾರು ವರ್ಷಗಳಿಂದ ಬಾಳಿ ಬದುಕಿ ಬಹುತ್ವದ ಭಾರತ ಕಟ್ಟಿದವರಿಗೆ, ಇಲ್ಲಿನ ಮಣ್ಣಿನ ಕಣಕಣದಲ್ಲೂ ರಕ್ತವನ್ನೇ ಬೆವರಾಗಿಸಿದವರಿಗೆ, ಈ ನೆಲದೊಂದಿಗಿನ ಸಂಬಂಧದ ದಾಖಲೆ ಒದಗಿಸಿ ಎಂದು ಕೇಳುವುದೇ ಮೂರ್ಖತನ. ಇಂತಹ ಮೂರ್ಖತನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜಾತಿ, ಧರ್ಮ, ಭಾಷೆ, ಪ್ರದೇಶ, ಲಿಂಗ ಬೇಧಗಳನ್ನು ಮೀರಿ ದೇಶದಾದ್ಯಂತ ಪ್ರತಿಭಟನೆಯ ಕಿಚ್ಚು ಹಬ್ಬಿದೆ. ಸ್ವಾತಂತ್ರ್ಯ ಚಳುವಳಿಯನ್ನು ನೆನಪಿಸುವಂತೆ ಸಾಗರದ ಅಲೆಗಳಂತೆ ಜನ ಮುನ್ನುಗ್ಗುತ್ತಿದ್ದಾರೆ.

ಈ ಶತಮಾನದ ’ಅವಮಾನಿತ ಕಾಲ’ ಎಂದೇ ವ್ಯಾಖ್ಯಾನಿಸಬಹುದಾದ ಈ  ಕಾಲದಲ್ಲಿ ಕಾವ್ಯ ಬೀದಿಗೆ ಬರದಿರಲು ಸಾಧ್ಯವೇ ಇಲ್ಲ.

ಕೊಪ್ಪಳದ ಕವಿ ಹಾಗೂ ಪತ್ರಕರ್ತ ಸಿರಾಜ್ ಬಿಸರಳ್ಳಿಯವರು ಇತ್ತೀಚೆಗೆ ನಡೆದ ಆನೆಗೊಂದಿ ಉತ್ಸವದಲ್ಲಿ ತಾವು ರಚಿಸಿದ್ದ ’ನಿನ್ನ ದಾಖಲೆ ಯಾವಾಗ ನೀಡುತ್ತಿ?’ ಎಂ ಕವಿತೆಯೊಂದನ್ನು ಓದಿದರು. ಪ್ರಭುತ್ವದ ಭಕ್ತರು  ನೀಡಿದ ದೂರಿನ ಮೇರೆಗೆ ಪೊಲೀಸರು ಕವಿಯ ಮೇಲೆ ಎಫ್ ಐ ಆರ್ ಹಾಕಿದ್ದಾರೆ. ಕವಿಗಳನ್ನು ದೇಶದ್ರೋಹಿಗಳೆಂದು, ಕವಿತೆಗಳನ್ನು ದೇಶದ್ರೋಹದ, ಧರ್ಮದ್ರೋಹದ ಕೃತ್ಯಗಳು ಎಂದು ಪರಿಗಣಿಸುವ ಪರಿಪಾಠ ಇಂದು ನೆನ್ನೆಯದೇನೂ ಅಲ್ಲ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ’ನರಬಲಿ’ ಎಂಬ ಕವಿತೆ ಬರೆದ ದ.ರಾ.ಬೇಂದ್ರೆಯವರನ್ನೂ ಜೈಲಿಗೆ ತಳ್ಳಿತ್ತು ಅಂದಿನ ಬ್ರಿಟಿಶ್ ಸರ್ಕಾರ. ಆ ಮೆಲೆಯೂ ಇಂತ ಪ್ರಕರಣಗಳು ಆಗಾಗ ನಡೆದದ್ದಿದೆ.  ಆದರೆ ಪ್ರತಿರೋಧದ ದನಿಗೆ ಮುಖಾಮುಖಿಯಾಗಲು ಬೆದರಿದ ಪ್ರಭುತ್ವ  ಇಂದು ಈ ದಾಳಿಯನ್ನು ತೀವ್ರಗೊಳಿಸಿದೆ.

ಒಂದು ಕವಿತೆಯ ಮೇಲೆ ಎಫ್ ಐ ಆರ್ ದಾಖಲಿಸಿದ್ದನ್ನು ಪ್ರತಿಭಟಿಸಿ, ಸಿ.ಎ.ಎ-ಎನ್.ಆರ್.ಸಿ-ಎನ್.ಪಿ.ಆರ್ ಗಳನ್ನು ಪ್ರಶ್ನಿಸುವ, ಪ್ರಭುತ್ವಕ್ಕೆ ಸೆಡ್ಡು ಹೊಡೆಯುವ ಸಾಲು ಸಾಲು ಕವಿತೆಗಳು ಬಂದಿವೆ. ಅಕ್ಷರ ಲೋಕದ ಈ ಸಾತ್ವಿಕ ಪ್ರತಿರೋಧ ಹೇಗಿದೆ ಎಂದರೆ ಸಿರಾಜ್ ಬಿಸರಳ್ಳಿಯವರ ಪದ್ಯ ಕೇವಲ ಎರಡು ದಿನಗಳಲ್ಲಿ ೧೧ ಭಾಷೆಗಳಿಗೆ ಅನುವಾದವಾಗಿ ’ವೈರಲ್ ಆಗಿದೆ. ಈಗಾಗಲೇ ಎನ್‌ಆರ್‌ಸಿ-ಪ್ರತಿರೋಧದ ಸಭೆ, ರ‍್ಯಾಲಿ, ಮೆರವಣಿಗೆಗಳಲ್ಲಿ ಕವಿತೆ ವಾಚನ ಸಾಮಾನ್ಯವಾಗಿದೆ. ಅತ್ಯಂತ ಸೃಜನಶೀಲ ಪೋಸ್ಟರುಗಳು, ಬ್ಯಾನರುಗಳು, ಕಲಾಕೃತಿಗಳು ದೇಶದಾದ್ಯಂತ ಪ್ರತಿರೋಧದ ಭಾಗವಾಗಿ ಬಂದಿವೆ. ಒಟ್ಟಾರೆಯಾಗಿ ಇದನ್ನು ’ಎನ್‌ಆರ್‌ಸಿ ವಿರುದ್ಧ ಕಲಾ ಪ್ರತಿರೋಧ’ ಎಂದು ಕರೆಯಬಹುದಾದಷ್ಟು ನಿಚ್ಚಳವಾದ ಟ್ರೆಂಡ್ ಆಗಿದೆ.

’ನಿನ್ನ ದಾಖಲೆ ಯಾವಾಗ ನೀಡುತ್ತಿ?’ ಇಂತಹ ಕಲಾ ಪ್ರತಿರೋಧದ ಕವಿತೆಗಳ ಸಂಕಲನ. ಇಲ್ಲಿ ಕನ್ನಡದಲ್ಲಿ ಪ್ರಮುಖವಾಗಿ ಎನ್‌ಆರ್‌ಸಿ ಗೆ ಪ್ರತಿರೋಧದ ಹಿನ್ನೆಲೆಯಲ್ಲಿ ಬಂದ ಕವಿತೆಗಳಿವೆ. ಇವಲ್ಲದೆ ಚಳುವಳಿಯ ’ಅಧಿಕೃತ ಗೀತೆ’ಯೇ ಆಗಿರುವ ವರುಣ್ ಗ್ರೋವರ್ ಅವರ ’ಹಮ್ ಕಾಗಜ್ ನಹೀ ದಿಖಾಯೆಂಗೆ’ ಸೇರಿದಂತೆ ಹಿಂದಿ, ಇಂಗ್ಲೀಷ್ ಮತ್ತಿತರ ಭಾಷೆಗಳಲ್ಲಿ ಎನ್.ಆರ್.ಸಿ ಗೆ ಪ್ರತಿರೋಧ ಚಳುವಳಿಯ ಭಾಗವಾಗಿ ಬಂದ ಕೆಲವು ಪ್ರಮುಖ ಕವಿತೆಗಳ ಅನುವಾದಗಳೂ ಇವೆ. ಇಲ್ಲಿರುವ ಕವಿತೆಗಳಲ್ಲಿ ’ನನ್ನ ದಾಖಲೆ ಕೇಳುವ ಮೊದಲು ನಿಮ್ಮ ದಾಖಲೆ ತೋರಿಸಿ’ ಎಂದು ಸವಾಲು ಹಾಕುವ ’ಅವರ’ ಕೆಟ್ಟ ಭೀಕರ ದಾಖಲೆಗಳನ್ನು ಬಯಲಿಗೆಳೆಯುವ ಕವಿತೆಗಳು ಒಂದು ವಿಧ. ನಮ್ಮ ಗುರುತು ದಾಖಲೆಗಳಲ್ಲಿ ಅಲ್ಲ, ನೆಲದಲ್ಲಿ ಹಾಸುಹೊಕ್ಕಾಗಿರುವ ನಮ್ಮ ಬದುಕಿನ ವಿವಿಧ ಆಯಾಮಗಳಲ್ಲಿ ಇದೆ ಎಂದು ದೃಢವಾಗಿ ತಿಳಿಹೇಳುವ ಕವಿತೆಗಳು ಇನ್ನೊಂದು ವಿಧ. ಕವಿತೆಗೆ ಬೆದರಿ ಕೇಸು ಹಾಕುವುದನ್ನು ಮತ್ತಿತರ ದಮನ ಕ್ರಮಗಳನ್ನು ಎದುರಿಸುವ, ಲೇವಡಿ ಮಾಡುವ, ಜನರ ದನಿಯಾಗಬಲ್ಲ ಕಾವ್ಯದ ಶಕ್ತಿಯನ್ನು ಎತ್ತಿ ಹಿಡಿಯುವ ಕವಿತೆಗಳು ಮಗದೊಂದು ವಿಧ. ಇವಲ್ಲದೆ ಹಿಟ್ಟರನ ನಾಜಿವಾದ ಅವನೊಂದಿಗೆ ಸತ್ತಿಲ್ಲ ಎಂಬುದರ ಕುರಿತು ಬರೆದ ಆಡೆನ್ ಅವರ ಚಾರಿತ್ರಿಕ ಕವಿತೆಯ ಅನುವಾದವೂ ಇಲ್ಲಿದೆ. ಸರ್ವಾಧಿಕಾರಿ, ಅದರಲ್ಲೂ ಧರ್ಮದ ಹೆಸರಿನಲ್ಲಿ ಸಮರ್ಥಿಸಿಕೊಳ್ಳುವ, ಪ್ರಭುತ್ವಗಳ ದಮನದ ವಿರುದ್ಧ ಚಳುವಳಿಗಳ ಪ್ರತಿರೋಧದ ಗೀತೆಯಾಗಿದ್ದು, ಎನ್‌ಆರ್‌ಸಿ ವಿರುದ್ಧ ಚಳುವಳಿಯಲ್ಲೂ ವ್ಯಾಪಕವಾಗಿ ಕೇಳಿ ಬಂದಿರುವ ಫೈಜ್ ಅಹ್ಮದ್ ಫೈಜ್ ಅವರ ’ಹಮ್ ದೇಖೇಂಗೆ’ಯ ಅನುವಾದವೂ ಇದೆ. ಇವಲ್ಲದೆ ಪ್ರತಿರೋಧದ ಭಾಗವಾಗಿ ಬಂದ ಪೋಸ್ಟರುಗಳು, ಕಲಾಕೃತಿಗಳು ಇಲ್ಲಿವೆ.

ಶೀರ್ಷಿಕೆ: ನಿನ್ನ ದಾಖಲೆ ಯಾವಾಗ ನೀಡುತ್ತೀ? ಎನ್ ಆರ್ ಸಿ ಗೆ ಕಲಾ ಪ್ರತಿರೋಧ ಸಂಪಾದಕರು ಯಮುನಾ ಗಾಂವ್ಕರ್ ಪ್ರಕಾಶಕರು ಕ್ರಿಯಾ ಮಾಧ್ಯಮ ಪ್ರೈ.ಲಿ. ಪುಟಗಳು:64 ಬೆಲೆ: ರೂ.50/- ಪ್ರಕಟಣಾ ವರ್ಷ:2020

 

ಪುಸ್ತಕ ಪುರಸ್ಕಾರ ಪ್ರಧಾನ ಸಮಾರಂಭಕ್ಕೆ ಆಹ್ವಾನ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 2015ನೇ ಸಾಲಿನ ಗೌರವ ಪ್ರಶಸ್ತಿ ಪಡೆದಿರುವ ಪ್ರತಿಷ್ಟಿತ ಅನುವಾದಕರಿಗೆ ಹಾಗೂ 2014ನೇ ಸಾಲಿನ ಶ್ರೇಷ್ಟ ಅನುವಾದಕ್ಕಾಗಿ ಪುರಸ್ಕೃತರಾದವರಿಗೆ ಅಭಿನಂದನೆಗಳು.

20160314_161800

ಎಸ್.ರಂಗಸ್ವಾಮಿ ಅವರ ಚೊಚ್ಚಿಲ ಕವನ ಸಂಕಲನ ಪ್ರೀತಿ ಮತ್ತು ನೆತ್ತರು

pp blog 001pp blog 002

ಕಾವ್ಯದ ಪ್ರಾಥಮಿಕ ಪರಿಕರಗಳೊಂದಿಗೆ `ನೆನೆವ ಪರಿ ಹೊಸತು’ ಎಂಬಂತೆ ಕಾವ್ಯಕ್ಕಷ್ಟೇ ಸಾಧ್ಯವಾಗಬಲ್ಲ ಸೂಕ್ಷ್ಮ ಕಾಣ್ಕೆಗಳು, ಒಳನೋಟಗಳು, ಭಿನ್ನವೂ, ಅಮೂರ್ತ ಸೌಂದರ್ಯಾತ್ಮಕವೂ ಆದಂತಹ ಪರಿಕಲ್ಪನೆಗಳನ್ನು ಇಟ್ಟುಕೊಂಡೇ ಕವಿತೆಯನ್ನು ಬರೆವ ಉಮೇದು ತೋರಬೇಕಿದೆ. ಈ ಕಾವ್ಯ ಸಿದ್ಧತೆಯ ಕೆಲವಾದರೂ ಲಕ್ಷಣಗಳನ್ನು ಕವಿ ಮಿತ್ರ ರಂಗಸ್ವಾಮಿಯವರು ಅಲ್ಲಲ್ಲಿ ಇಣುಕಿ ಹಾಕಿಸಿರುವುದು ಅವರ ಕಾವ್ಯ ಪ್ರಯೋಗದ ಬಗ್ಗೆ ಆಸೆ, ನಿರೀಕ್ಷೆಗಳನ್ನು ಇಟ್ಟು ಕೊಳ್ಳಬಹುದೆಂಬ ಭರವಸೆಯನ್ನು ನೀಡುತ್ತವೆ. ಅವರ `ವಿಪರ್ಯಾಸ’, `ಸಾಕ್ಷೀಭೂತಗಳು’, `ಬದುಕಿನಲ್ಲೊಂದು ದಿನ’ ಮತ್ತು `ಬಂಧನದೊಳಗೊಂದು ರಾಜಿ’ ಎಂಬ ಕವಿತೆಗಳ ಬಿಗಿಬಂಧ, ಭಾಷಾ ಪ್ರಯೋಗ ಹಾಗೂ ಅಭಿವ್ಯಕ್ತಿ ವಿಧಾನಗಳನ್ನು ಕಂಡವರಿಗೆ ಇದು ಈ ಕವಿಗೆ ಅಸಾಧ್ಯವಾದುದೇನೂ ಅಲ್ಲವೆನಿಸುತ್ತದೆ. ಒಂದು ಹಂತದ ಈ ಯಶಸ್ವೀ ಪ್ರಯೋಗಗಳನ್ನು ದಾಟಿ ಕವಿ ರಂಗಸ್ವಾಮಿಯವರು ತಮ್ಮ ಶ್ರೇಷ್ಟ ಕಾವ್ಯದ ಅಸಲೀ ಕಸುಬುದಾರಿಕೆಗೆ ಹೊರಳಲಿ ಎಂದು ಮನದುಂಬಿ ಹಾರೈಸುತ್ತೇನೆ.
-ಲಕ್ಷ್ಮೀಪತಿ ಕೋಲಾರ
(ಪುಸ್ತಕದ ಮುನ್ನುಡಿಯಿಂದ)
ಶೀರ್ಷಿಕೆ: ಪ್ರೀತಿ ಮತ್ತು ನೆತ್ತರು ಲೇಖಕರು:ಎಸ್.ರಂಗಸ್ವಾಮಿ ಪ್ರಕಾಶನ: ಬರಹ ಪಬ್ಲಿಷಿಂಗ್ ಹೌಸ್ ಬೆಂಗಳೂರು ಪುಟ:56 ಬೆಲೆ:ರೂ.50/-

`ರೊಟ್ಟಿ ಮತ್ತು ಗುಲಾಬಿ’ ಘೋಷಣೆಯ ವಿಶ್ವ ಮಹಿಳಾ ದಿನಾಚರಣೆಗೆ ನೂರರ ಸಂಭ್ರಮ

ರೊಟ್ಟಿ – ತುಂಬಿದ ಹೊಟ್ಟೆಯ ಹಾಗೂ  ಗುಲಾಬಿ – ಗೌರವಾನ್ವಿತ ಬದುಕಿನ ಸಂಕೇತ. ಕೆಲವು ಮಹಿಳೆಯರು ಮಹಿಳೆ ಎನ್ನುವ ಕಾರಣದಿಂದಲೇ ಹಸಿವಿನಿಂದ ಬಳಲುತ್ತಿದ್ದರೆ ಇನ್ನೊಂದು ಭಾಗ ಹಸಿವಿನಿಂದಲ್ಲದಿದ್ದರೂ ತನ್ನೆಲ್ಲಾ ಕೊಡುಗೆಯಿದ್ದರೂ ನಿರ್ಧಾರದಲ್ಲಿ ಹೆಣ್ಣು ಎನ್ನುವ ಕಾರಣಕ್ಕೆ `ಎರಡನೇ ದರ್ಜೆ’ಗೆ ತಳ್ಳಲ್ಪಡುವ ಅವಮಾನದಿಂದ ಬಳಲುತ್ತಿದ್ದಾಳೆ.

ಮಹಿಳೆಯ ಕುರಿತಾದ ಜೀವವಿರೋಧಿ ತಾರತಮ್ಯದ ವಿರುದ್ಧ ಹೋರಾಡಿದ, ಹೋರಾಡುತ್ತಿರುವ ಕೋಟಿ ಮಹಿಳೆಯರಿಗೆ ನಮ್ಮ ಧನ್ಯವಾದಗಳು. ಇಂತಹ ಸಮರಧೀರ ಮಹಿಳೆಯರಿಂದಾಗಿಯೇ (ನಿರಂತರ ಹೋರಾಟದ ನೂರು ವರ್ಷಗಳ ನಂತರವೂ) ಮಹಿಳೆಯರಿಗೆ ಕೆ(ಹ)ಲವು ಕೊರತೆಗಳಿದ್ದರೂ ಇಷ್ಟಾದರೂ ಒಳ್ಳೆಯ ಸ್ಥಾನ ಮಾನ ಸಿಕ್ಕಿದೆ. ಈ ಕೊರತೆಗಳ ನಿರ್ಮೂಲನೆಗಾಗಿ ನಾವು `ವಿಶ್ವ ಮಹಿಳಾ ದಿನ’ದ ಹೋರಾಟದ ಪರಂಪರೆಯನ್ನು ಮುಂದುವರಿಸಬೇಕಾಗಿದೆ.

ಮಹಿಳೆಯ ಗುಣಗಾನ ಮಾಡುವ ನೆಪದಲ್ಲಿ ಮಹಿಳೆಯ ಮೇಲೆ `ಕ್ಷಮೆ’ ಎನ್ನುವ ಗುಣವನ್ನು ಹೊರಿಸಿ ತಾನು ಅನುಭವಿಸುವ ಹಸಿವು ಅಪಮಾನ ಗಳನ್ನು ಸಹಿಸಿಕೊಂಡಿರು ಎನ್ನುವ `ಕ್ಷಮಯಾ ಧರಿತ್ರೀ’ ಎನ್ನುವ ಧರ್ಮವಾಕ್ಯ ಮಹಿಳೆಯರನ್ನು ಹೋರಾಟದ ಹಾದಿಯಿಂದ ವಿಮುಖಳಾಗಿಸು ಒಂದು ಹುನ್ನಾರ ಎನ್ನುವುದು ಮಹಿಳೆ ಅರಿತಿರಬೇಕು. ಸಮ್ಮಾನ, ಗೌರವಗಳಿಲ್ಲದ ಬರಿಯ ಹೊಗಳಿಕೆ ಇನ್ನು ಸಾಕು.

ದುಡಿಮೆಯ ಮೂಲಕ ಹಸಿವನ್ನು ನೀಗಿಸಿಕೊಳ್ಳುವ ಹಾಗೂ ಗೌರವಾನ್ವಿತ ಬದುಕನ್ನು ನಡೆಸುವುದೇ ಎಲ್ಲಾ ಮಹಿಳೆಯರ ಗುರಿಯಾಗಿರಲಿ. ಯಾವುದೇ ರೀತಿಯ ದುಡಿಮೆಯಿರಲಿ ಅದು ಮಹಿಳೆಯ ಹಸಿವನ್ನು ನೀಗುವುದು ಮಾತ್ರವಲ್ಲದೇ ಅವಳು ಗೌರವ ಪಡೆಯಲು ಅನುಕೂಲವಾಗುವಂತಿರಬೇಕು. ಅಂತಹ ದುಡಿಮೆಯ ಹಕ್ಕು ಮಹಿಳೆಯರದಾಗಬೇಕು. ಆಗಲಷ್ಟೇ ನೂರು ವರ್ಷಗಳಿಂದ ವಿವಿಧ ಬೇಡಿಕೆಗಳನ್ನಿಟ್ಟು ಹೋರಾಡಿದ ಮಹಿಳೆಯರ ಹೋರಾಟದ ಯಶಸ್ವಿಯಾಗಿದೆ ಎನ್ನಬಹುದು.

`ವಿಶ್ವ ಮಹಿಳಾ ದಿನ’ ನೂರು ವರ್ಷಗಳನ್ನು ದಾಟಿದ ಈ ಸಂದರ್ಭದಲ್ಲಿ `ಚಿಂತನ ಪುಸ್ತಕ’ ಹೊರ ತಂದಿರುವ `ಅಂತರ ರಾಷ್ಟ್ರೀಯ ಮಹಿಳಾ ದಿನ ಶತಮಾನೋತ್ಸವ ಮಾಲಿಕೆ’ ಯಲ್ಲಿ ಯೋಜಿಸಿದ 12 ಪುಸ್ತಕಗಳಲ್ಲಿ ಈಗಾಗಲೇ ಹೊರಬಂದ 4 ಪುಸ್ತಕಗಳ ಪರಿಚಯ ಇಲ್ಲಿದೆ.


ಶೀರ್ಷಿಕೆ: ಮಹಿಳಾ ವಿಮೋಚನೆಯ ಹೋರಾಟಗಳ ನೂರು ವರ್ಷಗಳು ಪ್ರಕಾಶಕರು: ಚಿಂತನ ಪುಸ್ತಕ ಲೇಖಕರು:ಎಸ್.ಕೆ.ಗೀತಾ ಪುಟ:88+4 ಬೆಲೆ:ರೂ.70/-


ಶೀರ್ಷಿಕೆ: ನೀನುಂಟು ನಿನ್ನ ರೆಕ್ಕೆಯುಂಟು ಪ್ರಕಾಶಕರು:ಚಿಂತನ ಪುಸ್ತಕ ಸಂಪಾದಕರು: ಮಾಧವಿ ಭಂಡಾರಿ ಕೆರೆಕೋಣ ಪುಟ:136+4 ಬೆಲೆ:ರೂ.95/-

ಶೀರ್ಷಿಕೆ: ವಿಶ್ವ ಮಹಿಳಾ ದಿನದ ರೂವಾರಿ ಕ್ಲಾರಾ ಜೆಟ್ಕಿನ್ ಪ್ರಕಾಶಕರು:ಚಿಂತನ ಪುಸ್ತಕ ಲೇಖಕರು: ಡಾ.ಎನ್.ಗಾಯತ್ರಿ ಪುಟ: 118+4 ಬೆಲೆ:ರೂ.80/-


ಶೀರ್ಷಿಕೆ: ದಶಕದ ಮಹಿಳಾ ಸಾಹಿತ್ಯದಲ್ಲಿ ಪ್ರತಿರೋಧದ ನೆಲೆಗಳು ಪ್ರಕಾಶಕರು:ಚಿಂತನ ಪುಸ್ತಕ ಸಂಪಾದಕರು:ಡಾ.ಸಬಿಹಾ ಭೂಮಿಗೌಡ ಪುಟ:96+4 ಬೆಲೆ:ರೂ.70

ಹೇಳಿ ಮುಗಿಸುವ `ಅಸೀಮ ಕಾವ್ಯ’

ಕಂಡದ್ದಕ್ಕೆ ಅನುಭವಿಸಿದ್ದಕ್ಕೆ ತನ್ನೊಳಗಿನಿಂದ ಮಾತುಗಳನ್ನು ಹುಟ್ಟಿಸಿಕೊಳ್ಳದಿರುವ ಕವಿಗೆ ಹೊರಗೆ ಸಿದ್ಧವಾಗಿರುವ ಪದಗಳನ್ನು ಒದಗಿಸಿಕೊಳ್ಳುವುದರಲ್ಲಿಯೇ ಹೆಚ್ಚು ಆಸಕ್ತಿ ಇದ್ದಂತಿದೆ.

`ಅಸೀಮ ರೂಪಿ’ ನಾಲ್ಕು ದಶಕಗಳಿಂದ ಇಲ್ಲಿಯವರೆಗೆ ದೊಡ್ಡರಂಗೇಗೌಡ ಅವರು ಬರೆದಿರುವ ಆಯ್ದ ಕವಿತೆಗಳು ಹಾಗೂ ಭಾವಗೀತೆಗಳ ಸಂಕಲನ. ಈ ಸಂಗ್ರಹದಲ್ಲಿ 327 ರಚನೆಗಳಿವೆ. ಆದ ದುಃಖ, ಪುಳಕ, ಸಂಗಾತಿಗಳು ಉಳಿಸಿಹೋದ ನೆನಪು, ಅಳಿಸಿಹೋದ ಕನಸು, ಪುಟಿದೇಳುವ ಕನ್ನಡಾಭಿಮಾನ, ಯುಗಾದಿಯ ಸಡಗರ, ಮೆಚ್ಚಿನ ಮೇಷ್ಟ್ರು, ಮೊಮ್ಮಗನ ತುಂಟಾಟ, ಕಾಡುವ ಹಿರಿಯರು, ಸಮಾಜಹಿತ- ಈ ಎಲ್ಲದರ ಬಗೆಗೂ ಉತ್ಸಾಹಮಿಶ್ರಿತ ಉದ್ಗಾರದಲ್ಲಿ ಹೇಳುವ ರಚನೆಗಳಿವು. ಹೇಳುವಾಗ ಕವಿತೆಯ ಆಕಾರದಲ್ಲಿ, ಲಯ, ಪ್ರಾಸವಿಟ್ಟು ವಿಶೇಷಣಗಳನ್ನು ಕವಿ ಬೆರಸಿಡುವರು.

`ಭವ್ಯತೆ ದಿವ್ಯತೆ ಭೋ ಅಚ್ಚರಿ’, `ನಮ್ಮ ನಾಕ ಪ್ರೇಮಲೋಕ’, `ಅವಳ ತ್ಯಾಗ ಅನುಪಮ’, `ಕಲ್ಪನೆ ನೀನು ವಾಸ್ತವ ನಾನು’, `ಸೌಮ್ಯ ನಾನು ಸೌಮ್ಯಿ ನೀನು’,`ನಾದ ಸುಧೆಯ ಸಿರಿ’, `ಒಳಿತೆನೆಸಗುವುದೇ ನಮ್ಮ ಅಭಿಲಾಶೆಯಾಗಲಿ’- ಇಲ್ಲಿನ ರಚನೆಗಳ ನಮೂನೆ ಇಂತಿವೆ.

ಕಂಡದ್ದಕ್ಕೆ ಅನುಭವಿಸಿದ್ದಕ್ಕೆ ತನ್ನೊಳಗಿನಿಂದ ಮಾತುಗಳನ್ನು ಹುಟ್ಟಿಸಿಕೊಳ್ಳದಿರುವ ಕವಿಗೆ ಹೊರಗೆ ಸಿದ್ಧವಾಗಿರುವ ಪದಗಳನ್ನು ಒದಗಿಸಿಕೊಳ್ಳುವುದರಲ್ಲಿಯೇ ಹೆಚ್ಚು ಆಸಕ್ತಿ ಇದ್ದಂತಿದೆ.

ಅಸೀಮ ರೂಪಿ, ಈಂಟು, ಅಸದಳ, ತಿಮಿರ, ಅದಮ್ಯ, ಘೇರಾಯಿಸು, ವಿಜಯೀಭವ, ದವಳಾಂಜಲಿ, ಬಕುಳೆ, ಸ್ಫುರದ್ಗೀತ, ಅಳಲಹೊಳೆ, ಚೆಲುವಿನ ಚಿತ್ತಾರ, ಓಜೆ, ಅನುಬಂಧ, ಕಿಂಕಿಣಿ, ಸೌಶೀಲ್ಯ, ಮಧುರ, ನೈರಾಶ್ಯೆ, ಹೃದಯಚಿತ್ತಾರ, ಆಚಂದ್ರಾರ್ಕ, ನಾಟ್ಯಸಿರಿ, ಅಂತರಾತ್ಮ…, ಇಂಥ ಅಪಾರವಾದ ಪದಪುಂಜವನ್ನು ಕವಿ ಬಳಸುತ್ತಾರೆ.

ನಮ್ಮ ವರ್ತಮಾನದಲ್ಲಿ ಬಿರುಸಿನಿಂದ ಓಡಾಡುವ ದೇಶ, ದೇಶಿ, ದೇಶೀಕರಣ, ಸಂಸ್ಕೃತಿ, ಸಮುದಾಯ, ಕೋಮುಗಲಭೆ, ಜಾಗತೀಕರಣ, ಧರ್ಮ ಇತ್ಯಾದಿಗಳನ್ನು ಕವಿ ಸಾಲಾಗಿ ತಂದಿಡುತ್ತಾರೆ. `ಸೌಹಾರ್ದ-ಸಾಮರಸ್ಯ’ ರಚನೆಯನ್ನು ಗಮನಿಸಿ.

ಕೋಮುಗಲಭೆ ಮಾನವೀಯತೆ ಹತ್ಯೆ
ಧೂಳಿಪಟವಾಗುತ್ತಿದೆ ಎಲ್ಲ ಮೌಲ್ಯ
ಸ್ನೇಹ-ಪ್ರೀತಿ ಈಗ ಒಡೆದ ಹಾಲು
ದ್ವೇಷ ಈರ್ಶೆ ಎಲ್ಲೆಲ್ಲೂ ಸಾಲು ಸಾಲು

`ಮಹಾಕವಿ ಕುವೆಂಪು: ಕನ್ನಡದ ಶೃಂಗ ಶಿಖರ’ ಶೀರ್ಷಿಕೆಯ ರಚನೆಯನ್ನು ಗಮನಿಸಬೇಕು. ಈ ರಚನೆ ಮುಗಿಯುವುದು ಹೀಗೆ:

ಕುವೆಂಪು ನೀವೇನೆ ಪುರುಷೋತ್ತಮ! ನಿಮ್ಮ ಬರಹ ಸಹೃದಯನಿಗೆ ಹೃದಯಂಗಮ!

ಇನ್ನೊಂದು ರಚನೆ ಗಮನಿಸಿ:
ಅನುಕ್ಷಣವು ಶರಣೆನುವೆ: ಅನುದಿನವೂ ಶರಣೆನುವೆ
ಸಿದ್ಧಗಂಗೆ ಸಿದ್ಧಿಯೋಗಿಗೆ ಭಕ್ತಿಯಲ್ಲಿ ಶರಣೆನುವೆ: ಪ್ರೀತಿಯಲಿ ಶರಣೆನುವೆ
ಶಿವರೂಪಿ ಧರ್ಮಗುರುವುಗೆ

ಈ ರೀತಿಯ ವಂದನಾ ಸಲ್ಲಿಕೆ `ಕೆಂಪೇಗೌಡರ ಗುಣಗಾನ’, `ಬುದ್ಧ: ಬೆಳಕಿನಹಾದಿ’, `ಅಕ್ಕರೆಯ ಅಣ್ಣ ಕೆ.ವಿ. ಸುಬ್ಬಣ್ಣ’- ರಚನೆಗಳಲ್ಲಿಯೂ ಕಾಣಬಹುದು.

ನೋಡಿದ್ದು ಅನುಭವಿಸಿದ್ದು ಏನೋ ಇದೆಯಾದರೂ ಕವಿಗೆ ಯಾವುದನ್ನು ಮುಟ್ಟಿ ಮಿಡಿಸುವ ಮನಸ್ಸಿಲ್ಲವಾದರೂ ಎಲ್ಲವನ್ನು ಹೇಳಿ ಮುಗಿಸಿಬಿಡಬೇಕು ಎಂಬ ನಿರ್ಧಾರವಿದೆ. ಹೆಸರಿಸುವುದು, ಭಾವದ ಹೆಸರಿಡುವುದು, ಏನೇನಾಗುತ್ತಿದೆ ತೋರಿಸುವುದು, ತನ್ನ ಬಗೆಗೇ ಮರುಗುವುದು, ಬದಲಾಗಲಿ ಸಮಾಜ ಎನ್ನುವ ಇಲ್ಲಿನ ಯಾವುದೇ ರಚನೆ ಅಚ್ಚಾದ ಪದ ಸಮುಚ್ಚಯವಾಗಿ ಮಾತ್ರವೇ ತೋರುವುದರಿಂದ ಕವಿತೆ-ಭಾವಗೀತೆ ಎಂದು ಹೇಳಲು ಸಾಧ್ಯವಾಗದು.

`ಕವಿತೆ ಕಟ್ಟುವ ಕಾಯಕ’ (ಡಾ ಕೆ.ವಿ. ನಾರಾಯಣ), `ಸ್ನೇಹನುಡಿ’ (ಸು.ರುದ್ರಮೂರ್ತಿ ಶಾಸ್ತ್ರಿ), `ಗೀತೆಗಳ ಗುಂಗು ದೇಸೀ ಸೊಬಗು’ (ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್), `ದೊಡ್ಡರಂಗೇಗೌಡರ ಕವಿತೆಗಳ ಅಂತರಂಗದ ಧ್ವನಿ’ (ಡಿ.ಎಸ್.ಶ್ರೀನಿವಾಸ ಪ್ರಸಾದ್)- ಈ ಬರಹಗಳು ಇಲ್ಲಿನ ರಚನೆಗಳ ನೆಪದಲ್ಲಿ ಆಡಿರುವ ಮಾತುಗಳು ಕವಿಯನ್ನೇ ಆಲಂಗಿಸಲು ಮುಂದಾಗಿರುವುದರಿಂದ ಇವು ಕವಿತೆಯಲ್ಲ ಎಂದು ಹೇಳುವುದನ್ನೇ ಮರೆತಿವೆ.

-ಆರ್. ಸುಧೀಂದ್ರ ಕುಮಾರ್

ಶೀರ್ಷಿಕೆ: ಅಸೀಮ ರೂಪಿ ಲೇಖಕರು: ಡಾ. ದೊಡ್ಡರಂಗೇಗೌಡ, ಪ್ರಕಾಶನ : ಜ್ಞಾನಪೀಠ ಪ್ರಕಾಶನ, ಬೆಂಗಳೂರು ಪುಟ:368; ಬೆಲೆ: ರೂ. 250/-
ಕೃಪೆ : ಪ್ರಜಾವಾಣಿ

ಬಡವನಿಗೆ ಹೊಟ್ಟೆ ಹಸಿವು ಸಂಗಾತಿ ಹಾಗೂ ಶ್ರೀಮಂತನಿಗೆ ಅದು ಗೇಟಿನಾಚೆಯ ಅಪರಿಚಿತ ಅತಿಥಿ

“ಒಲೆಯೊಳಗೆ ಬೆಕ್ಕು, ಒಡಲೊಳಗೆ ಬೆಂಕಿ” ಇದು ಹಸಿದ ಬಡವನ ಮನೆಯ ದಾರುಣ ಚಿತ್ರ ನೀಡುವ, ಆರ‍್. ವಿ. ಭಂಡಾರಿಯವರ ಕವನದ ಒಂದು ಸಾಲು. ಹಸಿವಿನ ತೀವ್ರತೆಯನ್ನು ಹೆಚ್ಚು ಬಡವರಿರುವ ನಮ್ಮ ದೇಶದಲ್ಲಿ ಹೊಸದಾಗಿ ಪರಿಚಯಿಸುವ ಮೊದಲೇ ಜನ ಅದನ್ನು ಅನುಭವಿಸಿದ್ದಾರೆ. ವರ್ಣನೆಗಿಂತಲೂ ಭೀಕರತೆ ಮತ್ತು ಆಳ ಹಸಿವಿಗಿದೆ. ಬಡವನಿಗೆ ಹೊಟ್ಟೆ ಹಸಿವು ಸಂಗಾತಿ ಹಾಗೂ ಶ್ರೀಮಂತನಿಗೆ ಅದು ಗೇಟಿನಾಚೆಯ ಅಪರಿಚಿತ ಅತಿಥಿ. `ಗರೀಬಿ ಹಟಾವ್’,`ರೋಟಿ, ಕಪಡಾ, ಮಕಾನ್’ ಇವೆಲ್ಲಾ ಘೋಷಣೆಗಳು ಸ್ವಾತಂತ್ಯ್ರಾ ನಂತರದ ಉತ್ಸಾಹದ ಸ್ಯಾಂಪಲ್ ಮಾತ್ರ. ಅದನ್ನೆಲ್ಲ ದಾಟಿ ಹಸಿವು ಈಗ ಜಾಗತಿಕ ಸಮಸ್ಯೆಯ ಸ್ವರೂಪ ಪಡೆದಿದ್ದು ಅನ್ನಕ್ಕಾಗಿ ಎಲ್ಲೆಡೆ ಹಾಹಾಕಾರವೆದ್ದಿದೆ. ಕೆಳವರ್ಗದ ಜನ ಹೊಟ್ಟೆಪಾಡಿಗೆ ಪಡುವ ಬವಣೆಯನ್ನು ಕೃತಿಯ ಸಂಪಾದಕ ಶ್ರೀ ವಿಠಲ್ ಭಂಡಾರಿ ಸ್ವತಃ ಕಣ್ಣಾರೆ ಕಂಡ ಘಟನೆಗಳ ಮೂಲಕ ಪ್ರಸ್ತಾಪಿಸಿದ್ದಾರೆ. ಇತರ ಕವಿ-ಸಾಹಿತಿಗಳಿಂದಲೂ ಈ ಬಗ್ಗೆ ಸಾಕಷ್ಟು ಸಾಹಿತ್ಯ ನಿರ್ಮಾಣವೂ ಆಗಿದೆ. ಕೆಲವು ಆಯ್ದ ಕವನಗಳನ್ನು ಈ ಪುಸ್ತಕದಲ್ಲಿ ಸಂಗ್ರಹಿಸಲಾಗಿದೆ

-ಇಂದಿರಾಕುಮಾರಿ

ಶೀರ್ಷಿಕೆ: ಒಡಲ ಬೆಂಕಿ ಸಂಪಾದಕರು:ವಿಠಲ್ ಭಂಡಾರಿ ಪ್ರಕಾಶಕರು: ಚಿಂತನ ಪುಸ್ತಕ ಪುಟ:92 ಬೆಲೆ:ರೂ.30/-

ಕೃಪೆ:ಹೊಸತು ಮಾಸ ಪತ್ರಿಕೆ

ಎಲ್ಲವನ್ನು ಕೊಟ್ಟಿರುವೆ ಏನ ಬೇಡಲಿ! ಜಗವನೆನಗೆ ಬಿಟ್ಟಿರುವೆ, ಏಕೆ ಕಾಡಲಿ!

ದಿನ ನಿತ್ಯದ ಕಿಟಿಕಿಟಿ ಶ್ರಮದ ನಂತರವೂ ಜೀವನ ಪ್ರೀತಿಯನ್ನು ಮೈ ಮನದಲ್ಲಿ ತುಂಬಿಕೊಳಬಯಸುವವರಿಗೆ ತಮ್ಮ ಕವನಗಳ ಮೂಲಕ ಎಲ್ಲವನ್ನೂ ಕೊಟ್ಟ ಕೆ.ಎಸ್.ನ. ಅವರನ್ನು ಮತ್ತೆ ಏನನ್ನೂ ಬೇಡಬೇಕಾಗಿಲ್ಲ.

ನನ್ನವಳು ನನ್ನೆದೆಯ ಹೊನ್ನಾಡನಾಳುವಳು ಬೆಳಗುಗೆನ್ನೆಯ ಚೆನ್ನೆ ನನ್ನ ಮಡದಿ!

ಶಾನುಭೋಗರ ಮಗಳು ರತ್ನದಂತಹ ಹುಡುಗಿ; ಗಂಡು ಸಿಕ್ಕುವುದೊಂದು ಕಷ್ಟವಲ್ಲ; ಸರಿಯಾಗಿ ಗಂಡೊದಗಿ ಹೆಣ್ಣು ಸುಖವಾಗಿರಲಿ ತಡವಾದರೇನಂತೆ?- ನಷ್ಟವಿಲ್ಲ

ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು ಚೆಂದ ನಿನಗಾವುದೆಂದು –   ನಮ್ಮೂರು ಹೊನ್ನೂರೋ, ನಿಮ್ಮೂರು ನವಿಲೂರೋ

ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು ಒಳಗೆ ಬರಲಪ್ಪಣೆಯೆ ದೊರೆಯೇ

ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು, ನಿದ್ದೆ ಬರುವಳು ಹೊದ್ದು ಮಲಗು, ಮಗುವೇ ಸುತ್ತಿ ಹೊರಳಾಡದಿರು, ಮತ್ತೆ ಹಟ ಹೂಡದಿರು, ನಿದ್ದೆ ಬರುವಳು ಕದ್ದು ಮಲಗು, ಮಗುವೆ.

ಕೇತಕಿಯ ಬನಗಳಲಿ ಸಂಚರಿಸದಿರು ಚೆಲುವೆ, ಸರ್ಪಮಂದಿರವಂತೆ ತಂಪಿನೊಡಲು

 ಹತ್ತು ವರುಷದ ಹಿಂದೆ ಮುತ್ತೂರ ತೇರಿನಲಿ ಅತ್ತಿತ್ತ ಸುಳಿದವರು ನೀವಲ್ಲವೇ?  ಹತ್ತಿರದ ಹೆಣ್ಣೆಂದು ಮತ್ತೆ ಮುತ್ತೂರಿನಲಿ ಒಪ್ಪಿ ಕೈ ಹಿಡಿದವರು ನೀವಲ್ಲವೇ?

. . ..                                                                                                                                                                                            ತೊತ್ತೆಂದು ಜರೆದವರು, ಮುತ್ತೆಂದು ಕರೆದವರು ಎತ್ತರದ ಮನೆಯವರು ನೀವಲ್ಲವೆ                                                                                            .

. .  .                                                                                                                                                                                               ಬಡತನವೋ, ಸಿರಿತನವೊ, ಯಾರಿರಲಿ, ಎಲ್ಲಿರಲಿ, ದೊರೆಯಾಗಿ ಮೆರೆದವರು ನೀವಲ್ಲವೇ? ಗಂಡನಿಗೆ ಒಪ್ಪಾಗಿ ಕಂದನಿಗೆ ದಿಕ್ಕಾಗಿ, ಪಯಣದಲಿ ಜೊತೆಯಾಗಿ ನಾನಿಲ್ಲವೇ?

 ಸಂಬಳದ ಸಂಜೆ ಒಳಜೇಬು ಬೆಳಕಾಗಿರಲು ಮುಗುಳು ನಗೆ ಸೂಸಬೇಕು  ತಂದ ಹಣ ತುಂಡಾಗಿ ತಲೆನೋವು ಬಂದಿರಲು ಮಂದಲಗೆ ಹಾಕಬೇಕು.

`ಹಿಂದಿನ ಸಾಲಿನ ಹುಡುಗರು’ ಎಂದರೆ ನಮಗೇನೇನೂ ಭಯವಿಲ್ಲ! ನಮ್ಮಿಂದಾಗದು ಶಾಲೆಗೆ ತೊಂದರೆ; ನಮಗೆಂದೆಂದೂ ಜಯವಿಲ್ಲ! 

. . .                                                                                                                                                                                             ಪುಸ್ತಕ ಓದದೆ ಪ್ರೀತಿಯನರಿತೆವು; ಗೆಲ್ಲದೆ ಹೆಮ್ಮೆಯ ಗಳಿಸಿದೆವು; ನಾವೀ ಶಾಲೆಯನೆಂದೂ ಬಿಡೆವು; ನೆಮ್ಮದಿಯಾಗಿಯೆ ಉಳಿಯುವೆವು!

 ಮಲ್ಲಿಗೆ ಕವಿಯ ಈ ಎಲ್ಲಾ ಕವಿತೆಗಳನ್ನು ಓದಿ ಹಗುರಾಗದವರು ಯಾರು?

ಸುವರ್ಣ ಕರ್ನಾಟಕ ವರ್ಷದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೈಗೆತ್ತಿಕೊಂಡ ಅನೇಕ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದು ಕನ್ನಡ ಪ್ರಮುಖ ಲೇಖಕರ ಸಮಗ್ರ ವಾಙ್ಮಯವನ್ನು ಮರುಮುದ್ರಣದ ಮೂಲಕ ಕನ್ನಡ ಓದುಗರಿಗೆ ಸುಲಭ ಬೆಲೆಯಲ್ಲಿ ದೊರಕಿಸುವುದು. ಈ ಯೋಜನೆಯಡಿ ಈಗ ಡಾ.ಕೆ.ಎಸ್.ನರಸಿಂಹಸ್ವಾಮಿಯವರ ಸಮಗ್ರ ವಾಙ್ಮಯ ಆರು ಸಂಪುಟಗಳಲ್ಲಿ ಪ್ರಕಟಗೊಳ್ಳುತಿದೆ.

ಆಧುನಿಕ ಕನ್ನಡದ ಅತಿಶ್ರೇಷ್ಟ ಕವಿಗಳಲ್ಲಿ ಕೆ.ಎಸ್.ನ. ಒಬ್ಬರು. ೧೯೪೨ರಲ್ಲಿ ಪ್ರಕಟವಾದ ಅವರ `ಮೈಸೂರ ಮಲ್ಲಿಗೆ’ಯಿಂದ ಅಪಾರ ಜನಪ್ರಿಯತೆಯನ್ನು ಗಳಿಸಿದ ಕೆ.ಎಸ್.ನ. ತಮ್ಮ ಕೊನೆಯ ದಿನಗಳವರೆಗೂ ಕಾವ್ಯಕ್ಷೇತ್ರದಲ್ಲಿ ಕ್ರಿಯಾಶೀಲರಾಗಿಯೇ ಇದ್ದು ಒಟ್ಟು ಹದಿನಾರು ಕವನ ಸಂಕಲನಗಳನ್ನು ರಚಿಸಿದರು. ಕಾವ್ಯ ಸೃಷ್ಟಿಯಷ್ಟೇ ಅಲ್ಲದೆ ಅನುವಾದ, ವಿಮರ್ಶೆ, ಸಣ್ಣಕಥೆ ಇತ್ಯಾದಿ ಪ್ರಬೇಧಗಳಲ್ಲಿಯೂ ಸಾಕಷ್ಟು ಕೆಲಸ ಮಾಡಿದ ಕೆ.ಎಸ್.ನ. ಅವರ ಒಟ್ಟು ಕೃತಿಗಳ ಸಂಖ್ಯೆ ಮೂವತ್ತೈದು.

ಈ ಯೋಜನೆಯ ಮೊದಲೆರಡು ಸಂಪುಟಗಳೂ ಅವರ ಸಮಗ್ರ ಕಾವ್ಯಗಳನ್ನೊಳಗೊಂಡಿದ್ದರೆ, ಉಳಿದ ನಾಲ್ಕರಲ್ಲಿ ಅವರ ಇನ್ನಿತರ ಸಾಹಿತ್ಯ ರಚನೆಗಳು ಸಂಗ್ರಹಗೊಂಡಿವೆ.

ಶೀರ್ಷಿಕೆ: ಕೆ.ಎಸ್.ನರಸಿಂಹಸ್ವಾಮಿ ಸಮಗ್ರ ವಾಙ್ಮಯ ಸಂಪುಟ ಒಂದು: ಕಾವ್ಯ ೧ ಸಂಪಾದಕರು: ಡಾ. ಸಿ.ಎನ್.ರಾಮಚಂದ್ರನ್ ಪ್ರಕಾಶಕರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪುಟಗಳು:484 ಬೆಲೆ:ರೂ.110/-

ಸರಳ ಸುಲಭ ರಚನೆಯ ಕವನಗಳು

ಸುಮಾರು 97 ಕವಿತೆಗಳನ್ನು ತಮ್ಮ ಕವನ ಸಂಗ್ರಹ `ಸ್ವಗತ ದಲ್ಲಿ ನೀಡಿದ್ದಾರೆ ಎಸ್. ಪ್ರಸಾದಸ್ವಾಮಿ. ಸರಳವಾಗಿ ಬರೆಯುವುದನ್ನು ತಮ್ಮ ಉದ್ದೇಶವನ್ನಾಗಿ ಉಳ್ಳ ಕವಿ ಸರಳ ಸುಲಭ ರಚನೆಗಳನ್ನು ಇಲ್ಲಿ ನೀಡಿದ್ದಾರೆ.

`ಒಲುಮೆ ಗಿಲುಮೆಯ ಮಾತು ಅಲ್ಲಿರಲಿ ಈಗನೀ ಹೆಣ್ಣು ನಾ ಗಂಡು ಅಷ್ಟೆ ಸಾಕು(

ನಲ್ಲೆಗೆ/ ೨೧) ಎಂದು ಬರೆದಿರುವುದು ಅವರ ಸರಳವಾಗಿ ಕವಿತೆಗಳನ್ನು ಹೇಳುವುದಕ್ಕೆ ಉದಾಹರಣೆಯಾಗಬಹುದು.`

ಕಾವ್ಯದ ಲಯದಲ್ಲಿ ನೀವು ತುಂಬ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.., ಅಡಿಗ, ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬ ಅರ್ಥಪೂರ್ಣವಾಗಿ ದುಡಿಸಿಕೊಂಡಿದ್ದೀರಿಎಂದು ಪುಸ್ತಕದ ಹಿನ್ನುಡಿಯಲ್ಲಿ ವಿಮರ್ಶಕ ಜಿ. ರಾಜಶೇಖರ ಬರೆದಿದ್ದಾರೆ. ಓದುಗರನ್ನು ಮುಟ್ಟುವ ಉದ್ದೇಶ ಹೊಂದಿರುವ ಕವಿ ಮಾತುಗಾರಿಕೆಯನ್ನು ಕಡಿಮೆ ಮಾಡಿ ಕಾವ್ಯ ಅಂಶದ ಕಡೆಗೆ ಗಮನ ಕೊಡುವ ಅಗತ್ಯ ಎನ್ನುವುದು ಕವಿತೆಗಳನ್ನು ಓದಿದಾಗ ಕಂಡು ಬರುವ ಅಂಶ.

ಶೀರ್ಷಿಕೆ: ಸ್ವಗತ (ಕವಿತೆಗಳು) ಲೇಖಕರು: ಡಾ. ಎಸ್. ಪ್ರಸಾದಸ್ವಾಮಿ ಪ್ರಕಾಶಕರು: ಅವಿರತ ಪುಸ್ತಕ ನಂ.70, 9ನೇ ತಿರುವು, 1ನೇ ಮುಖ್ಯರಸ್ತೆ, ಬಿಡಿಎ ಬಡಾವಣೆ, ಆವಲಹಳ್ಳಿ ಬೆಂಗಳೂರು 560 085 ಪುಟಗಳು:132 ಬೆಲೆ:ರೂ.70/-

ಕೃಪೆ: ಪ್ರಜಾವಾಣಿ

 

ನಾನೊಬ್ಬ ಎ.ಬಿ.ಸಿ.ಡಿ.

hasivembo maye1

ಪ್ರೊ. ಉಷಾ ಕೃಷ್ಣಮೂರ್ತಿ ಅವರ ಚೊಚ್ಚಲ ಕವನ ಸಂಕಲನ `ಹಸಿವೆಂಬೋ ಮಾಯೆ’ಯಲ್ಲಿನ ನಲವತ್ತಾರು ಕವಿತೆಗಳಲ್ಲಿ ಒಡೆದು ಕಾಣುವುದು ಕವಯತ್ರಿಯ ಸಾಹಿತ್ಯಿಕ ಹಸಿವು. ಹಾಸನದ ಎ.ವಿ.ಕೆ. ಮಹಿಳಾ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿರುವ ಉಷಾ ಈಗ ನಿವೃತ್ತರು. ವೃತ್ತಿಯಿಂದ ನಿವೃತ್ತರಾಗಿ ಕಾವ್ಯದ ಧ್ಯಾನದಲ್ಲಿ ಮುಳುಗಿರುವ ಅವರ ಕವಿತೆಗಳಲ್ಲಿ ಮಾಗಿದ ಬದುಕು ಪ್ರತಿಫಲಿಸುತ್ತದೆ.

ಪ್ರಾಮಾಣಿಕತೆ ಹಾಗೂ ಸೋಗಿಲ್ಲದ ಜೀವನ ಪ್ರೀತಿ `ಹಸಿವೆಂಬೋ ಮಾಯೆ’ ಸಂಕಲನದಲ್ಲಿ ಎದ್ದು ಕಾಣುವ ಗುಣಗಳು. ಬದಲಾದ ಕಾಲದ ಬಗೆಗಿನ ವಿಷಾದ ಒಡೆದು ಕಾಣುತ್ತದಾದರೂ, ಈ ವಿಷಾದ ಜೀವನ ಪ್ರೀತಿಯನ್ನೇನೂ ಮಸುಕುಗೊಳಿಸುವುದಿಲ್ಲ. ಈ ಕವಿತೆಗಳ ಕವಯತ್ರಿಗೆ ಕವಿತೆ ಕಸರತ್ತಿನ ಸಂಗತಿಯಲ್ಲ; ಒಲಿದಂತೆ ಹಾಡುವ ಜೀವನ ವಿಧಾನ. ಅವರ ಸರಳ ಭಾಷೆ ಕೂಡ ಕವಿತೆಗಳ ರುಚಿ ಹೆಚ್ಚಿಸುವಂತಿದೆ.

`ನಾನೊಬ್ಬ ಎ.ಬಿ.ಸಿ.ಡಿ.’ ಉಷಾ ಅವರ ಕಾವ್ಯದ ಪ್ರಾತಿನಿಧಿಕ ಕವಿತೆಯಂತೆ ಕಾಣುತ್ತದೆ. ಜಾಗತೀಕರಣದ ದ್ವಂದ್ವದಲ್ಲಿ ಸಿಲುಕಿರುವ ಯುವಪೀಳಿಗೆಯ ತಳಮಳಗಳನ್ನು ಈ ಕವಿತೆ ಸಮರ್ಥವಾಗಿ ಚಿತ್ರಿಸುತ್ತದೆ. `ನೀರಿನಿಂದ ಹೊರತೆಗೆದ ಮನಸ್ಥಿತಿ ನನ್ನದು’ ಎನ್ನುವ ತಳಮಳದ ಜೊತೆಯಲ್ಲಿಯೇ – `ಆದರೂ ನಾನು ಗೆಲ್ಲಲೆ ಬೇಕು ಅನ್ನುವ ಧನಾತ್ಮಕ ನಿಲುವು ಇವತ್ತಿಗೆ ಅನಿವಾರ್ಯವಾದುದು.

ಕೆಲವೊಮ್ಮೆ ಉಷಾ ಅವರ ಕವಿತೆ ವಾಚ್ಯವೆನ್ನಿಸುವುದಿದೆ. `ಧೂಳು ಕವಿದ ಕನ್ನಡಿ’ ಕವಿತೆಯಲ್ಲಿ, ಮೇಜಿನ ಮೇಲೆ ಕವಿದ ಧೂಳಿನಲ್ಲಿ ಪೋರನೊಬ್ಬ ಹಸ್ತಾಕ್ಷರ ಬರೆಯುವುದು ಜೀವಂತ ಕ್ಷಣ. ಆದರೆ ಕಾವ್ಯದ ಈ ಅಮೃತ ಕ್ಷಣಗಳು ಮುಂದಿನ ಸಾಲುಗಳಲ್ಲಿ ತೆಳುವಾಗುತ್ತದೆ. ಆದರೂ, ಕವಯತ್ರಿಯ ಜೀವಪರ ಧೋರಣೆ ಕವಿತೆಯನ್ನು ಸಹನೀಯಗೊಳಿಸುತ್ತದೆ. ಇಂಥ ಆರೋಗ್ಯಕರ ನಿಲುವಿನ ಕಾರಣದಿಂದಲೇ- `ಮುಕ್ತಿಗೆ ಅರ್ಹರು’, `ಮೂರ್ತಿ ಕಿರಿದಾದರೇನು’, `ಗುಟುಕು ಹಾಲಿನ ಮಹತ್ತು’, `ರೈಲು ಚೆಂಬಿನ ಪಯಣ’, `ಎಳೆ ಕಂದನ ಸೊಗಸು’ ಮುಂತಾದ ಕವಿತೆಳು ಇಷ್ಟವಾಗುತ್ತವೆ.

ಶೀರ್ಷಿಕೆ: ಹಸಿವೆಂಬೊ ಮಾಯೆ  ಲೇಖಕರು:ಪ್ರೊ.ಉಷಾ ಕೃಷ್ಣಮೂರ್ತಿ ಪ್ರಕಾಶಕರು:ಸಿ.ವಿ.ಜಿ. ಪ್ರಕಾಶನ ಪುಟ:116 ಬೆಲೆ:ರೂ.70/-

ಕೃಪೆ: ಪ್ರಜಾವಾಣಿ

ಕೂಗು ಕೇಕೆಗೆ ಕಾಲು ಅಂದುಗೆ ಘಲಿರು ಘಲಿರಿನ ನೂಪುರ

scan0005

‘ಎಳೆಯ ಬೆರಳುಗಳೊಳಗೆ ಯಾವುದೋ ವೀಣೆ ನುಡಿದಿದೆ ಸುಮಧುರ
ಕೂಗು ಕೇಕೆಗೆ ಕಾಲು ಅಂದುಗೆ ಘಲಿರು ಘಲಿರಿನ ನೂಪುರ’
(ನನ್ನ ಮಗು/ಪು.37)
ಎಂದು ಲಯಬದ್ಧವಾಗಿ ಬರೆಯುವ ಛಾಯಾ ಭಗವತಿಯವರ ಮೊದಲ ಸಂಕಲನವಿದು. ತುಂಬಾ ಪುಟ್ಟ ಕವನ ಸಂಗ್ರಹವಾದ ಇದರಲ್ಲಿ 19 ಕವಿತೆಗಳಿವೆ. ರಮ್ಯವಾದ, ಬಾಲ್ಯವನ್ನು ನೆನಪಿಸುವ ಚಿತ್ರಗಳು ಇದರಲ್ಲಿವೆ. ಹೆಣ್ಣಿನ ಬದುಕಿನ ಹಂತಗಳಾದ ಬಾಲ್ಯ, ಹರೆಯ, ಮದುವೆ, ತಾಯ್ತನ ಇಲ್ಲಿ ಕವಿತೆಗಳಾಗಿವೆ.
ಕೆಲವೆಡೆ ಪ್ರಾಸಬದ್ಧವಾಗಿ, ಲಯಬದ್ಧವಾಗಿ ಬರೆಯುವ ಕವಿ ಒಂದು ಸುಂದರ ಚಿತ್ರವನ್ನು ಕಣ್ಣಮುಂದೆ ತಂದು ನಿಲ್ಲಿಸುವಲ್ಲಿ ಯಶಸ್ವಿಯಾಗುತ್ತಾರೆ. ತಮ್ಮ ಸೀಮಿತ ಅನುಭವದ ಕುರಿತು ಬರೆಯುವಾಗಲೂ ಅದರ ಮಿತಿಯಲ್ಲೇ ಒಂದು ಗ್ರಹಿಕೆಯನ್ನು ಅವರು ಕೊಡುತ್ತಾರೆ.
ಈ ಸಂಕಲನ ಮುಖ್ಯ ಕವಿತೆಯಾದ `ಪುಟಾಣಿ ಕೆಂಪು ಶೂ’ ನಲ್ಲಿ ಕೂಡ ಒಂದು ಮಧ್ಯಮವರ್ಗದ ಮಾನವೀಯ ಚಿತ್ರವಿದೆ. ಇಂಥವನ್ನು ಚಿತ್ರಿಸುವಾಗಲೆಲ್ಲ ಇಲ್ಲಿನ ಕೆಲವು ಕವಿತೆಗಳು ಯಶಸ್ವಿಯಾಗಿವೆ. `ಬಾಲ್ಯ ಮತ್ತು ಒಂದೆರಡು ಚಿತ್ರಗಳು’, `ಅವಳು’, `ಈಗೇಕೆ ಹೀಗೆ’, `ವಿಪರ್ಯಾಸ’  ಇಂತಹ ಸಫಲ ಚಿತ್ರಗಳಲ್ಲಿ ಕೆಲವು.

ಶೀರ್ಷಿಕೆ:ಪುಟಾಣಿ ಕೆಂಪು ಶೂ ಲೇಖಕರು:ಛಾಯಾ ಭಗವತಿ ಪ್ರಕಾಶಕರು:ಲೋಹಿಯಾ ಪ್ರಕಾಶನ ಪುಟ:56 ಬೆಲೆ:30/-

ಕೃಪೆ:ಪ್ರಜಾವಾಣಿ