ಖ್ಯಾತ ಲೇಖಕ ಬೊಳುವಾರು ಮಹ್ಮದ್ ಕುಂಞ ಬರೆದ ಹಲ್ಲಾ ಬೋಲ್ ಪುಸ್ತಕಕ್ಕೆ ಹೊಳಹು ನೀಡುವ ಮುನ್ನುಡಿ

ಸಫ್ದರ್ ಹಾಶ್ಮಿಯ ಸಾವು ಮತ್ತು ಬದುಕಿನ ಕುರಿತಾದ ‘ಹಲ್ಲಾಬೋಲ್’ ಪುಸ್ತಕವು ಅಕ್ಟೋಬರ್ 30 ರಂದು ಸಂಜೆ  5 ಗಂಟೆಗೆ ಬಿಡುಗಡೆಯಾಗುತ್ತಿದೆ. ಸುಧನ್ವ ದೇಶಪಾಂಡೆಯವರ ಮೂಲಕೃತಿಯನ್ನು  ಕನ್ನಡಕ್ಕೆ ಎಂ.ಜಿ.ವೆಂಕಟೇಶ್ ಅನುವಾದಿಸಿದ್ದಾರೆ.  ಕ್ರಿಯಾ ಮಾಧ್ಯಮ ಪುಸ್ತಕವನ್ನು ಹೊರತರುತ್ತಿದೆ. ಖ್ಯಾತ ಚಲನಚಿತ್ರ ನಟ ನಸೀರುದ್ದೀನ್ ಶಾ ಬಿಡುಗಡೆ ಮಾಡಲಿದ್ದಾರೆ.  ಈ ಸಂದರ್ಭದಲ್ಲಿ ಪುಸ್ತಕದ ಕುರಿತು ಹೊಳಹು ನೀಡುವ ಖ್ಯಾತ ಲೇಖಕ ಬೊಳುವಾರು ಮಹ್ಮದ್ ಕುಂಞ ಪುಸ್ತಕಕ್ಕೆ ಬರೆದ ಮುನ್ನುಡಿ

ಚಂದವನ್ನು ಕೊಂದ ಬಳಿಕ…

`ನಾವು ಪಯಣಿಸಬೇಕಾಗಿರುವ ಬಸ್ಸು,

ಒಂದಲ್ಲ ಒಂದು ದಿನ, ಸಮಯಕ್ಕೆ ಸರಿಯಾಗಿ ಬಂದೇ ಬರಲಿದೆ’

          `ನಿಮ್ಮ ಒಬ್ಬರು ಆ ರಸ್ತೆಯಲ್ಲಿ ಸಾಯುತ್ತಿದ್ದಾರೆ. ಅಲ್ಲಿ ಎಲ್ಲ ಕಡೆಗಳಲ್ಲೂ ಹೆಣಗಳು ಬಿದ್ದಿವೆ. ಐದು ಹೆಣಗಳು..!’ ಹೆಣ್ಣು ಮಗಳೊಬ್ಬಳು, ನಾವು ಬೀದಿನಾಟಕ ಪ್ರದರ್ಶಿಸಿದ್ದ ಜಾಗದತ್ತ ಕೈ ತೋರಿಸುತ್ತಾ ಆತಂಕದಿAದ ಹೇಳಿದ್ದಳು. ಸಿ.ಐ.ಟಿ.ಯು. ಕಚೇರಿಯನ್ನು `ಅವರು’ ಧ್ವಂಸ ಮಾಡುತ್ತಿರುವುದನ್ನು ಕಣ್ಣಾರೆ ಕಂಡಿದ್ದರೂ, ಕೊಂದಿದ್ದಾರೆ ಎಂಬುದನ್ನು ನಂಬಲು ಸಾಧ್ಯವಾಗಿದ್ದಿರಲಿಲ್ಲ. ಅದೂ ಐದು ಹೆಣಗಳು! ಯಾಕೋ ಉತ್ಪ್ರೇಕ್ಷೆ ಅನ್ನಿಸಿತ್ತು. ಅಲ್ಲಿಗೆ ಹೋಗಿ ನೋಡಲು ನಿರ್ಧರಿಸಿದೆವು. ಬ್ರಿಜೇಶ್ ಮುಂದೆ ಹೊರಟ. ಅವನ ಹಿಂದೆ ನಾನು, ನನ್ನ ಹಿಂದೆ ಬಿಸ್ವಜೀತ್. ಬ್ರಿಜೇಶನಿಗೆ ಅಲ್ಲೇನೋ ಕಂಡಿರಬೇಕು. ಬಾಣದಂತೆ ಚಿಮ್ಮಿದ. ಅವನೇಕೆ ಹಾಗೆ ಓಡಿದನೆಂಬುದು ಅರ್ಥವಾಗದೆ, ನಾನೂ ಅತ್ತ ಧಾವಿಸಿದೆ. ಅವನು ಮೂಲೆಯಲ್ಲಿ ತಿರುಗಿದ. ನಾನೂ ತಿರುಗಿದೆ. ಅವನು ನೆಲದಲ್ಲಿ ಬಿದ್ದಿದ್ದ ಮನುಷ್ಯನೊಬ್ಬನ ಬಳಿ ನಿಂತುಬಿಟ್ಟಿದ್ದ. ಬಿದ್ದಿದ್ದವನು ನಮ್ಮ ಕಲಾವಿದರಲ್ಲಿ ಒಬ್ಬನಾದ ವಿನೋದ್’ನಂತೆ ಕಾಣಿಸಿದ್ದ ಒಂದು ಕ್ಷಣ; ಅಲ್ಲ. ಆನಂತರ ಕಾಣಿಸಿದ್ದು ಆ ಹಸಿರು ಸ್ವೆಟರ್.  ಚಂದದ ಸಫ್ದರ್.’

*******

          ಸುಮಾರು ನಾಲ್ಕು ದಶಕಗಳ ಹಿಂದಿನ ಒಂದು ಮಧ್ಯಾಹ್ನದ ಹೊತ್ತು. ಚರಣ ಸಿಂಗರ ಪ್ರಧಾನಿತ್ವದ ಸುಡುವ ತಿಂಗಳು ಎಂಬ ನೆನಪು. ದೆಹಲಿಯ ಆರ್.ಕೆ. ಪುರಂ’ನಲ್ಲಿರುವ ಕರ್ನಾಟಕ ಸಂಘದ ಬಳಿಯಿದ್ದ  ಬಸ್ ನಿಲ್ದಾಣದಲ್ಲಿ ನಿಂತಿದ್ದೆ. ನನ್ನ ಎಡಬಲಗಳಲ್ಲಿ ಸುಮಾರು ಒಂದು ಹತ್ತು ಮಂದಿ,  ಕತ್ತುಗಳನ್ನೆತ್ತಿ  ಅತ್ತಿತ್ತ  ನೋಡುತ್ತಾ, `ಇಸ್ಕಿ ಮಾ.., ಯೇ ದೇಶ್ ಕಭೀಭೀ ಸುಧರ್ನೇವಾಲೀ ನಹೀ..’ ಎಂದೆಲ್ಲ ಗೊಣಗುತ್ತಾ, ಬಾರದ ಬಸ್ಸುಗಳಿಗೆ ಶಾಪ ಹಾಕುತ್ತಿದ್ದರು. ಅಷ್ಟರಲ್ಲಿ ವಿದ್ಯಾರ್ಥಿಗಳಂತೆ ಕಾಣಿಸುತ್ತಿದ್ದ ಒಂದಷ್ಟು ಹುಡುಗ ಹುಡುಗಿಯರು ಆಕಾಶದಿಂದ ಉದುರಿ ಬಿದ್ದವರಂತೆ ನಮ್ಮೆದುರು ಕಾಣಿಸಿಕೊಂಡಾಗ, ಪಕ್ಕದಲ್ಲಿ ನಿಂತಿದ್ದ ವಯಸ್ಸಾದ ಮಹಿಳೆಯೊಬ್ಬಳು, `ಓಹ್..! ಖುದುರತ್ಕೇ ಫರಿಸ್ತೇ ಯಹಾಂ ಭೀ ಆಗಯೇ..’ ಎಂದು ಉದ್ಗರಿಸಿದ್ದಳು! ನಾನು ಅಚ್ಚರಿಯಿಂದ ಆಕೆಯತ್ತ ಪ್ರಶ್ನೆಯಂತೆ ಬಾಗಿದಾಗ, `ತುಮ್ ದೇಖ್ತೇ ರಹೋ.., ಯೇ ಬಚ್ಚೋಂಕೋ ಜಾದಾ ಉಮರ್ ದೇನೇಕೇ ಲಿಯೇ ಈಶ್ವರ್ ಸೇ ದುವಾ ಕರೋ..’ ಎಂದಿದ್ದಳು.

          `ನಾವು  ನಿಮ್ಮೆದುರು ಒಂದು ನಾಟಕ ಆಡಿ ತೋರಿಸಲಿದ್ದೇವೆ. ದಯವಿಟ್ಟು ನೀವೆಲ್ಲ ಸಹಕರಿಸಬೇಕು..’ ಎತ್ತರದ ಸಣಕಲು ಯುವಕನೊಬ್ಬ ಗಟ್ಟಿಯಾಗಿ ಹೇಳುತ್ತಿದ್ದಂತೆಯೇ ಮತ್ತಿಬ್ಬರು ಹುಡುಗರು, `ಜನನಾಟ್ಯ ಮಂಚ್’ ಎಂದು ಹಿಂದಿಯಲ್ಲಿ ಬರೆದಿದ್ದ ಎರಡು ಮಾರು ಅಗಲದ ಬ್ಯಾನರ್ ಹಿಡಿದುಕೊಂಡು ಬಂದರು. ಹುಡುಗಿಯೊಬ್ಬಳು ಡಿಟಿಸಿ (ದೆಹಲಿ ಸಾರಿಗೆ..?) ಎಂದು ಬರೆದಿದ್ದ ಫಲಕವೊಂದನ್ನು ಹಿಡಿದು ನಿಂತಳು. ಅವಳ ಎಡಬಲದಲ್ಲಿ ಬಂದು ನಿಂತ ಐದಾರು ಹುಡುಗರು. `ನಾವು ಪಯಣಿಸಬೇಕಾಗಿರುವ ಬಸ್ ಒಂದಲ್ಲ ಒಂದು ದಿನ ಸಮಯಕ್ಕೆ ಸರಿಯಾಗಿ ಬಂದೇ ಬರಲಿದೆ.’ ಎಂದು ಗಟ್ಟಿಯಾಗಿ ಹೇಳಿದಾಗ, ತಮ್ಮ ತಮ್ಮ ಬಸ್ಸುಗಳಿಗಾಗಿ ಕಾತರಿಸುತ್ತಿದ್ದ ನನ್ನಂತಹ ಪ್ರಯಾಣಿಕರೆಲ್ಲ, ಎಲ್ಲವನ್ನೂ ಮರೆತು `ಡೀಟೀಸೀ ಕಾ ದಾಂದಲೀ’ ನಾಟಕದ ಪಾತ್ರಗಳಾಗಿ ಬಿಟ್ಟಿದ್ದೆವು.

*********

          ನಲುವತ್ತು ವರ್ಷಗಳ ಹಿಂದೆ (1979) ದೆಹಲಿಯ `ಜನನಾಟ್ಯ ಮಂಚ’ವನ್ನು ಕನ್ನಡ ನಾಡಿಗೆ ಪರಿಚಯಿಸಿದವರು, `ಸಮುದಾಯ’ ಸಂಘಟನೆಯ ರೂವಾರಿಗಳಲ್ಲೊಬ್ಬರಾಗಿದ್ದ ಎಸ್. ಮಾಲತಿಯವರು. ಇಂದಿನ ದಿನಗಳಲ್ಲಿ ಕೆಲವರಿಗೆ ಬಿಸಿತುಪ್ಪದಂತಾಗಿರುವ, ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಹುಡುಗ ಹುಡುಗಿಯರನ್ನು, ತಾವು ಸಂಪಾದಿಸುತ್ತಿದ್ದ `ಸಮುದಾಯ ವಾರ್ತಾಪತ್ರ’ದ `ಮಂಚ’ದಲ್ಲಿರಿಸಿ ಜೋಗುಳ ಹಾಡಿದ್ದ ತಾಯಿ ಅವರು. 

          ಮಾತುಗಳಿಂದಲೇ ಮಂಟಪ ಕಟ್ಟುವ ಬೀದಿ ನಾಟಕದ ಮಾತುಗಳಿಗೆ ವ್ಯಾಕರಣದ ಹಂಗಿಲ್ಲ. ಮಾತುಗಳು ನಾಟಕವಾಗಿ ಬೆಳೆಯುವುದು ಅಭಿನಯಿಸುವವರ ಬದುಕಿನ ಅನುಭವಗಳಿಂದ. ಅದೊಂದು ಸಮರಶೀಲ ರಾಜಕೀಯದ `ಪ್ರತಿಭಟನಾ ರಂಗಭೂಮಿ’. ರಾಜಕೀಯ ಅಥವಾ ಪ್ರತಿಭಟನೆ ಎಂದ ಕೂಡಲೇ ಮೂಗು ಮುರಿಯಬೇಕಾಗಿಲ್ಲ. ಪ್ರಜಾಪ್ರಭುತ್ವ ಉಳಿಯುವುದು ಮತ್ತು ಬೆಳೆಯುವುದು ಪ್ರಜೆಪರವಾಗಿರುವ ರಾಜಕೀಯ ಪ್ರತಿಭಟನೆಗಳಿಂದಲೇ. ಸಫ್ದರ್ ಹೇಳುವಂತೆ, `ಪರಿಚಿತ ವಸ್ತುಗಳಿಂದಲೇ ಭೀತಿಗೊಳಿಸುವ ಬೀದಿ ನಾಟಕಗಳು ಸಾಕ್ಷ್ಯಚಿತ್ರಗಳಂತೆ ಸಂಕ್ಷಿಪ್ತ.’ ಅವುಗಳ ಪರಿಣಾಮಗಳು ಹೊರನೋಟದಲ್ಲಿ ಭಾವನಾತ್ಮಕವಾಗಿ ಕಾಣಿಸಿದರೂ ಅವು ತರ್ಕಬದ್ಧ. ಸೂಕ್ಷ್ಮವಾದ ಅಥವಾ ಆಳವಾದ ವಿಶ್ಲೇಷಣೆಗಳು ಬೀದಿನಾಟಕಗಳಲ್ಲಿ ಇರಲೇಬೇಕೆಂದಿಲ್ಲ.  ಆದ್ದರಿಂದಲೇ ಅವು ಸಾಮಾನ್ಯ ಪ್ರೇಕ್ಷಕರ ಮನಸ್ಸುಗಳೊಳಗೆ  ನೇರವಾಗಿ ನುಗ್ಗುತ್ತವೆ ಮತ್ತು ಬಹಳ  ಕಾಲ ಕಾಡುತ್ತವೆ. ತಮ್ಮ ಸುತ್ತಮುತ್ತ ಘಟಿಸುತ್ತಿರುವ ಸಮಕಾಲೀನ ಸಂಗತಿಗಳಿಗೆ ಪ್ರೇಕ್ಷಕರ ನಿಲುವುಗಳನ್ನು ರೂಪಿಸುತ್ತವೆ. ಸಾಂಸ್ಕೃತಿಕ ಹಸಿವುನಿಂದ ಕೂಡಿರುವ ಜನತೆಗೆ ಆರೋಗ್ಯಕರ ಮನರಂಜನೆಯನ್ನೂ ಒದಗಿಸುತ್ತವೆ. ಅಧ್ಬುತ ಮತ್ತು ತಮಾಷೆಗಳು ಸಕಾಲಿಕವಾಗಿ ಪ್ರಕಟಗೊಳ್ಳುವುದೇ ಬೀದಿ ನಾಟಕಗಳ ಹೆಗ್ಗಳಿಕೆ.

          ಬೇರೆ ಪ್ರದರ್ಶನ ಪ್ರಕಾರಗಳಿಗೆ ತೀರಾ ಅನಿವಾರ್ಯವೇನೂ ಆಗಿರದ ಶಿಸ್ತನ್ನು  ಬೀದಿನಾಟಕಗಳು ಹೆಚ್ಚಾಗಿ ಬಯಸುವುದರಿಂದಲೇ ಇರಬೇಕು, ಅವು ಯಾವನೇ `ಸ್ಟಾರ್’ಗೂ ಮೇಲೇರುವ ಏಣಿಯಾಗಲಿಲ್ಲ. ಹಾಗೆಂದು ಬೀದಿನಾಟಕಗಳು ಪ್ರೊಸೇನಿಯಮ್ ನಾಟಕಗಳ ವಿರುದ್ಧದ ಬಂಡಾಯವೆಂಬಂತೆಯೂ ಕಾಣಿಸಿಕೊಳ್ಳಲಿಲ್ಲ. ಹಾಗಾಗಿರುತ್ತಿದ್ದರೆ, ಕನ್ನಡ ನಾಟಕಗಳಿಗೆ ಹೊಸದಿಕ್ಕು ಕೊಟ್ಟ `ಸಮುದಾಯ’ದ  ಯಶಸ್ವೀ ನಾಟಕಗಳಾದ ಹುತ್ತವ ಬಡಿದರೆ, ತಾಯಿ, ಗೆಲಿಲಿಯೋ’ಗಳ ಜೊತೆಯಲ್ಲೇ `ಬೆಲ್ಚಿ’ ಬೀದಿ ನಾಟಕವು 2500 ಪ್ರದರ್ಶನಗಳನ್ನು ಕಾಣಲು ಸಾಧ್ಯವಾಗುತ್ತಿರಲಿಲ್ಲ. ಈ ಎಲ್ಲ ಕಾರಣಗಳಿಂದಾಗಿಯೇ ಕನ್ನಡದ ರಂಗ ಚಟುವಟಿಕೆಗಳು `ಜನಪರ ಚಳುವಳಿ’ಗಳತ್ತ ಹೊರಳಿಕೊಂಡವು.  ಬಾದಲ್ ಸರ್ಕಾರ್ ಅವರ ಮುಕ್ತ ರಂಗಭೂಮಿ ಕನ್ನಡ ನೆಲಕ್ಕೆ ಕಾಲಿಟ್ಟದ್ದು ಆಗ. ಸಾವಿರಾರು ಪ್ರದರ್ಶನಗಳನ್ನು ಕಂಡ ಬೀದಿನಾಟಕಗಳಾದ ಬೆಲ್ಚಿ, ಪತ್ರೆ ಸಂಗಪ್ಪನ ಕೊಲೆ, ಮೆಶೀನ್, ಆಲಿಘರ್, ಹತ್ಯಾರೇ’ಗಳು ಕನ್ನಡ ನಾಡಿನ ಮನೆಯಂಗಳದ ಮಾತುಗಳಾದದ್ದು ಆಗ. ಈ ಎಲ್ಲದರ ಬೆನ್ನ ಹಿಂದೆಯೂ, `ಸತ್ಯವನ್ನಷ್ಟೇ ಹೇಳುವೆ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ’ ಎಂದು ನಡುಬೀದಿಯ ನ್ಯಾಯಾಲಯದಲ್ಲಿ ಪ್ರಮಾಣ ಮಾಡುತ್ತಿದ್ದ ಮಾತ್ರವಲ್ಲ, ಪ್ರೇಕ್ಷಕರಿಂದಲೂ ಪ್ರಮಾಣ ಮಾಡಿಸುತ್ತಿದ್ದ `ಸಫ್ದರ್’  ಎಂಬ  ಚಂದದ ಹುಡುಗನ `ಹಲ್ಲಾ ಬೋಲ್’ ಪ್ರಭಾವ ಎದ್ದು ಕಾಣಿಸುತ್ತದೆ. 

          ಸುಧನ್ವ ದೇಶಪಾಂಡೆಯವರು, ತಮ್ಮ `ಹಲ್ಲಾ ಬೋಲ್’ ಕೃತಿರಚನೆಗಾಗಿ ಗೆಳೆಯ ಸಫ್ದರ್ ಹಾಶ್ಮಿಯ ಜೊತೆಗಿದ್ದ, ಕನ್ನಡ ನಾಟಕಾಸಕ್ತರಲ್ಲಿ ಕೆಲವರಿಗಾದರೂ ಪರಿಚಯವಿರಬಹುದಾದ, ಆದಿತ್ಯ ನಿಗಮ್, ಬಿಜೇಂದರ್ ಸಿಂಗ್, ಬೃಂದಾ ಕಾರೆಟ್, ಕಾಜಲ್ ಘೋಷ್, ಮಲಯಶ್ರೀ ಹಾಶ್ಮಿ, ಸುಭೋದ್ ವರ್ಮಾ, ಕಮಲಾ ಭಾಸಿನ್, ಸೀತಾರಾಮ್ ಯೆಚೂರಿ.. ಹೀಗೆ ಹಲವರ ನೆನಪುಗಳನ್ನೂ ಬಳಸಿಕೊಂಡಿದ್ದಾರೆ. ದೆಹಲಿಯ `ವೈಕಿಂಗ್’ ನವರು, `ಫಿಫ್ತ್ ಪ್ಲೇಮ್’ ಎಂಬ ಹೆಸರಲ್ಲಿ ಪ್ರಕಟಿಸಿದ್ದ, ಸಫ್ದರ್ ತಾಯಿ ಖಮರ್ ಅಜಾದ್ ಹಾಶ್ಮಿಯವರ `ಪಾಂಚ್ವಾ ಚಿರಾಗ್’ ಹಾಗೂ ಹಬೀಬ್ ತನ್ವೀರ್ ಅವರ `ಸಫ್ದರ್ ನೆನಪುಗಳು’ ಕೃತಿಗಳ ಮಾಹಿತಿಗಳೂ ಇವೆ. `ನಮಗೆ ತಿಳಿದಿರುವುದನ್ನಷ್ಟೇ ನಮ್ಮಿಂದ ಊಹಿಸಿಕೊಳ್ಳಲು ಸಾಧ್ಯ’ ಎಂಬ ಶೆಲ್ಲಿಯ ಮಾತುಗಳೂ ಇಲ್ಲಿ ಪ್ರಸ್ತುತ. ಪುಸ್ತಕವೊಂದು ಕವರ್ ಪೇಜ್’ನಲ್ಲಿರುವ ಲೇಖಕರ ಹೆಸರನ್ನು ಅದೆಷ್ಟೇ `ಟಾಂ ಟಾಂ’ ಮಾಡಿದರೂ, ಅದೊಂದು ಸಾಮೂಹಿಕ ಸೃಷ್ಟಿಯೇ ಆಗಿರುತ್ತದೆ. ರಂಗಭೂಮಿಯಂತೂ ಒಬ್ಬನ ಖಾಸಗಿ ಸೊತ್ತಾಗಲು ಸಾಧ್ಯವೇ ಇಲ್ಲ. . `ಜನನಾಟ್ಯ ಮಂಚ’ ಇಲ್ಲದಿರುತ್ತಿದ್ದರೆ ಅಥವಾ `ಜನಮ್’ ಇಲ್ಲದಿರುತ್ತಿದ್ದರೆ `ಸಫ್ದರ್’ ಇರುತ್ತಿರಲಿಲ್ಲ.

          ಈ ದೇಶದ ನಡುಬೀದಿಯಲ್ಲಿ ಕೊಲೆಯಾದ ಕಲೆಗಾರನೊಬ್ಬನ ಸಾವು ಮತ್ತು ಬದುಕಿನ ಕತೆಯನ್ನು (ಗಮನಿಸಬೇಕು – ಬದುಕು ಮತ್ತು ಸಾವಿನ ಕತೆಯಲ್ಲ), ಕಣ್ಣಿಗೆ ಕಟ್ಟುವಂತೆ ದಾಖಲಿಸಿದ್ದ ಸುಧನ್ವ ದೇಶಪಾಂಡೆಯವರ ಆಂಗ್ಲ  ಭಾಷೆಯ  `ಹಲ್ಲಾ ಬೋಲ್’ ಕೃತಿಯ ಕನ್ನಡ ರೂಪ ಇದು. ಇದರಲ್ಲಿ, ಸಫ್ದರ್ ಹಾಶ್ಮಿಯವರ ಸಾವಿನ ಕತೆಯನ್ನು, ಅವರ ಬದುಕಿನ ಕತೆಗಳ ಜೊತೆಗೆ ಹೆಣೆಯಲಾಗಿದೆ. ಬೀದಿ ನಾಟಕಗಳಂತೆಯೇ ಪದ-ವ್ಯಾಕರಣಗಳ ಹಂಗಿಲ್ಲದೆ, ನೆನಪುಗಳ ಬುಟ್ಟಿಗಳನ್ನು ರಸ್ತೆಬದಿಯ ಅಂಗಡಿಗಳಲ್ಲಿ ತೆರೆದಿರಿಸುವ ಪರಿಯಲ್ಲಿ ಜೋಡಿಸಿಕೊಂಡ ಮಾತುಗಳನ್ನು ಮತ್ತೊಂದು ಭಾಷೆಯಲ್ಲಿ ಕಟ್ಟಿಕೊಡುವುದು ಬಲು ಕಷ್ಟದ ಕೆಲಸ. ಕಳೆದ ನಾಲ್ಕೈದು ದಶಕಗಳಿಂದ `ಸಮುದಾಯ’ ಸಂಘಟನೆಯ ಭಾಗವೇ ಆಗಿರುವ ಕಾರಣಕ್ಕೋ ಏನೋ, ಯಾವುದೇ ತಡವರಿಕೆಯಿಲ್ಲದೆ ಅವುಗಳನ್ನೆಲ್ಲ `ಹಲ್ಲಾ ಬೋಲ್’ ಎಂದು ಕನ್ನಡದಲ್ಲಿ ಹೆಣೆದಿರುವ ಸಂಗಾತಿಯ ಸಾಹಸಕ್ಕೆ `ಭಳಿರೇ’ ಎನ್ನುವೆ.

          `ಸಫ್ದರ್’ ಎಂಬ ಹೆಸರಲ್ಲಿ ಓಡಾಡುತ್ತಿದ್ದ, ರಸ್ತೆ ಬದಿಯ ಗಾಡಿಗಳೆದುರು ಚಹ ಹೀರುತ್ತಿದ್ದ, ಪಕ್ಕದ ಗಲ್ಲಿಯಲ್ಲಿ ಕಾಣಿಸಿದ್ದವರನ್ನು ಗಟ್ಟಿಧ್ವನಿಯಲ್ಲಿ ಮುಟ್ಟಿ ಮಾತಾಡಿಸುತ್ತಿದ್ದ ಮನುಷ್ಯನೊಬ್ಬನ ಕೆಂಪು ರಕ್ತವನ್ನು ನಡುಬೀದಿಯಲ್ಲಿ ಚೆಲ್ಲಿದ ದೇಶ ನಮ್ಮದು. ಆದರೆ, ದೇಹದೊಂದಿಗೆ ಸಫ್ದರ್ ಕೂಡಾ ಸತ್ತುಹೋಗಬಹುದು ಎಂದು ನಂಬಿದ್ದ ಕೊಲೆಗಾರರಿಗೆ ಸಹಜವಾಗಿ ನಿರಾಸೆಯಾಗಿದೆ. ಸಿಟ್ಟೂ ಬಂದಿದೆ. `ಸಫ್ದರ್ ಚಿಂತನೆ’ಗಳನ್ನು ಮತ್ತೊಮ್ಮೆ ಕೊಲ್ಲುವ ಸಲುವಾಗಿ ಸುಳ್ಳು ಸುಳ್ಳು ಕಾರಣಗಳನ್ನು ಸೃಷ್ಟಿಸಲಾಗುತ್ತಿದೆ. ಇಂತಹ ಹೊತ್ತಲ್ಲಿ, ಒಂದಷ್ಟು ಹೊತ್ತಾದರೂ ಮನುಷ್ಯರಾಗುವಂತೆ ನಮ್ಮನ್ನು ಒತ್ತಾಯಿಸುವ ಈ ನೋವಿನ ಕೃತಿಯನ್ನು ಕನ್ನಡಕ್ಕೆ ಪರಿಚಯಿಸುತ್ತಿರುವ `ಸಮುದಾಯ’ದ ಎಂ.ಜಿ. ವೆಂಕಟೇಶ್  ಅವರ ಹತ್ತಿರದ ಸಂಗಾತಿಗಳಲ್ಲಿ ನಾನೂ ಒಬ್ಬ ಎಂಬುದು ನನಗೂ ಹೆಮ್ಮೆಯ ಸಂಗತಿ.

ಬೊಳುವಾರು ಮಹಮದ್ ಕುಂಞ

ಮೇ 1, 2020


ಹಲ್ಲಾಬೋಲ್ ಸಫ್ದರ್ ಹಾಶ್ಮಿಯ ಸಾವು ಮತ್ತು ಬದುಕು

ಮೂಲ :ಸುಧನ್ವ ದೇಶಪಾಂಡೆ   ಅನುವಾದ : ಎಂ.ಜಿ.ವೆಂಕಟೇಶ್ 

ಕ್ರಿಯಾ ಮಾಧ್ಯಮ ಪ್ರೈ.ಲಿ. ಪುಟಗಳು:280 ಬೆಲೆ  ರೂ.200 

ಪ್ರತಿಗಳಿಗಾಗಿ ಸಂಪರ್ಕಿಸಿ 90360 82005, 080-23494488, 9916595916

ಹಲ್ಲಾ ಬೋಲ್ ಎಂಬ ಶಬ್ದಗಳನ್ನು ಕೇಳಿದೊಡನೆ ನೆನಪಾಗುವುದು ಸಫ್ದರ್ ಹಾಶ್ಮಿ

ಶೀರ್ಷಿಕೆ : ಹಲ್ಲಾಬೋಲ್ – ಸಫ್ದರ್ ಹಾಶ್ಮಿಯ ಸಾವು ಮತ್ತು ಬದುಕು ಮೂಲ :ಸುಧನ್ವ ದೇಶಪಾಂಡೆ ಅನುವಾದ ಎಂ.ಜಿ.ವೆಂಕಟೇಶ್ ಪ್ರಕಾಶನ : ಕ್ರಿಯಾ ಮಾಧ್ಯಮ ಪ್ರೈ.ಲಿ. ಪುಟಗಳು:280 ಬೆಲೆ ರೂ.200 ಪ್ರಕಟಣಾ ವರ್ಷ:2020

ಪೋಸ್ಟ್ ಮಾರ್ಟ್‍ಂ ವರದಿ ಸಹ, ನಾವು ಎತ್ತಿಕೊಂಡು ಆಸ್ಪತ್ರೆಗೆ ಹೋದಾಗ ಅವನ ಕಿವಿ, ಮೂಗು ಮತ್ತು ಗಂಟಲಿನಿಂದ ರಕ್ತ ಸ್ರಾವವಾಗುತ್ತಿದ್ದದ್ದನ್ನು ಗುರುತಿಸಿತ್ತು. ವರದಿಯಲ್ಲಿ ಮೆದುಳು ಚಿಪ್ಪು ಮತ್ತು ಹಣೆಗೆ ಆಳವಾದ ಸೀಳು ಗಾಯದ ಬಗ್ಗೆ ವಿವರಣೆಯಿತ್ತು. ಅವನ ತಲೆಗೆ ಕನಿಷ್ಟ ಇಪ್ಪತ್ತು ಬಾರಿಯಾದರೂ ಕಬ್ಬಿಣ ರಾಡಿನಿಂದ ಹೊಡೆದಿರಬಹುದು ಎಂದು ಅದರಲ್ಲಿ ಬರೆದಿತ್ತು. – ಈ ಪುಸ್ತಕದಿಂದ

೧೯೮೦ರ ದಶಕದ ಮಧ್ಯಾವಧಿ. ಕೋಮು ಸೌಹಾರ್ದತಾ ಸಮಿತಿ

ಪ್ರಧಾನಮಂತ್ರಿ ಇಂದಿರಾಗಾಂಧಿ ಅವರು ಅಕ್ಟೋಬರ್ ೩೧, ೧೯೮೪ರಂದು ತಮ್ಮ ಸಿಖ್ ಅಂಗರಕ್ಷಕರಿಂದ ಹತ್ಯೆಗೀಡಾದರು. ಆ ನಂತರ ಸಿಖ್ ವಿರೋಧಿ ಹತ್ಯಾಕಾಂಡ ಪ್ರಾರಂಭವಾಗಿ ಸುಮಾರು ಮೂರು ಸಾವಿರ ಜೀವಗಳನ್ನು ಬಲಿತೆಗೆದುಕೊಳ್ಳುವುದು ಅಲ್ಲದೇ ನಮ್ಮ ಸಮಾಜ, ಹಿಂದೂ-ಸಿಖ್ ಬಾಂಧವ್ಯ, ದೆಹಲಿ ನಗರದ ಬಗ್ಗೆ ಮತ್ತು ಕಾಂಗ್ರೆಸ್ ಪಕ್ಷದ ಬಗ್ಗೆ ಬಹಳ ಕಾಲದಿಂದ ಇದ್ದ ನಂಬಿಕೆಗಳು ನುಚ್ಚುನೂರಾದವು. ಈ ಮಾರಣ ಹೋಮಕ್ಕೆ ತತ್ತರಿಸಿದ ಸಾವಿರಾರು ಸಿಖ್ಖರು ನಗರದ ತಮ್ಮ ಪ್ರೀತಿಯ ಬಂಧುಗಳನ್ನು, ಮನೆ, ವ್ಯವಹಾರಗಳನ್ನು ಕಳೆದುಕೊಂಡು ನಗರದ ವಿವಿಧ ಕಡೆಗಳಲ್ಲಿ ರಚಿಸಲಾದ ಕ್ಯಾಂಪ್‌ಗಳಿಗೆ ಹೋಗಬೇಕಾಯಿತು. ದೆಹಲಿ ವಿಶ್ವವಿದ್ಯಾನಿಲಯದ ಉತ್ತರ ಕ್ಯಾಂಪಸ್ಸಿನಲ್ಲಿ ಮೊದಲು ಶಾಂತಿ ಮೆರವಣಿಗೆ ನಡೆದಾಗ ಉರಿದಿದ್ದ ಕೆಂಡ ಹೊಗೆಯಾಡುತ್ತಲೇ ಇತ್ತು. ಗಾಯ ಹಸಿಯಾಗಿಯೇ ಇತ್ತು. ಶಾಂತಿ ಮೆರವಣಿಗೆ ಕ್ಯಾಂಪಸ್‌ನ ಎಲ್ಲ ಕಾಲೇಜುಗಳನ್ನು ಮತ್ತು ಮುಖ್ಯ ವಿಭಾಗಗಳನ್ನು ಮುಟ್ಟುತ್ತಲೇ ಸಾಗಿತು. ಶಾಲಾ ಕಾಲೇಜಿನಲ್ಲಿ ಮೆರವಣಿಗೆ ಕೊನೆಗೊಂಡು ಸಾರ್ವಜನಿಕ ಸಭೆ ನಡೆಯಿತು. ಕೆಲವು ಭಾಷಣಕಾರರು ಸಭೆಯನ್ನು ಉದ್ದೇಶಿಸಿ ಮಾತನಾಡುವವರಿದ್ದು ಆ ವೇಳೆಗೆ ಅತಿಥೇಯ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನ ಸೇರಿದ್ದರು.

ಅವರಲ್ಲಿ ಬಹುತೇಕರು ಯುವಜನರು. ಅವರು ಕೋಪಗೊಂಡಿದ್ದು ಪ್ರತಿಕಾರಕ್ಕಾಗಿ ಕುದಿಯುತ್ತಿದ್ದರು. ಅವರ ಕಣ್ಣುಗಳು ನೋವಿನಿಂದ ಉರಿಯುತ್ತಿದ್ದು, ದ್ವೇಷ ಮತ್ತು ದುಃಖಭರಿತವಾಗಿದ್ದವು. ಪ್ರತೀಕಾರದ ವಾತಾವರಣವಿತ್ತು.

ಭಾಷಣಗಳ ಮೊದಲು ‘ಪರ್ಚಮ್’ ಗುಂಪಿನಿಂದ ಹಾಡುಗಳ ಕಾರ್ಯಕ್ರಮವಿತ್ತು. ಹಾಡುವುದು ಅಸಾಧ್ಯವಾಗಿತ್ತು. ಅವರ ಬಹಳಷ್ಟು ಕೋಪ ಅಲ್ಲಿ ಬಹುಸಂಖ್ಯೆಯಲ್ಲಿ ನೆರೆದಿದ್ದ ಪೋಲಿಸರ ವಿರುದ್ಧವಿತ್ತು. ವಿದ್ಯಾರ್ಥಿಗಳು ಉದ್ರಿಕ್ತರಾಗಿದ್ದರು. ಹಿಂದಿನ ದಿನಗಳಲ್ಲಿ ನಡೆದ ಆಸ್ತಿಹಾನಿಯಲ್ಲಿ ರಕ್ತ ಹರಿಯುತ್ತಿದ್ದಾಗ ದುಷ್ಕೃತ್ಯದಲ್ಲಿ ಪೊಲೀಸರು ಶಾಮೀಲಾಗಿದ್ದರು. ಒಂದು ಅಪಾಯಕಾರಿ ಸನ್ನಿವೇಶ ಪ್ರಾರಂಭವಾಗುತ್ತಿತ್ತು. ಶಾಂತಿ ಮೆರವಣಿಗೆ ಸಂಘಟಕರಿಗೆ ಮುಂದಿನ ಆಗುಹೋಗುಗಳ ಬಗ್ಗೆ ಆತಂಕವಿತ್ತು.

ಸಫ್ದರ್ ‘ಪರ್ಚಮ್’ನ ಅತ್ಯಂತ ಕಿರಿಯ ಸದಸ್ಯಳಾದ, ತೆಳ್ಳಗಿನ ಪದವಿಪೂರ್ವ ವಿದ್ಯಾರ್ಥಿನಿ ಸುಮಂಗಲಾ ದಾಮೋದರನ್  (ಇಎಂಎಸ್ ಅವರ ಮೊಮ್ಮಗಳು) ಕಡೆಗೆ ತಿರುಗಿದನು. ಅವನು ಮೈಕ್ ಕೈಗೆತ್ತಿಕೊಂಡು ‘ಜಾನೆವಾಲೇ ಸಿಪಾಯಿ’ ಹಾಡನ್ನು ಹಾಡಲು ಹೇಳಿದ. ೧೯೪೦ರಲ್ಲಿ ಈ ಯುದ್ಧ ವಿರೋಧಿ-ಗೀತೆಯನ್ನು ರಚಿಸಿದ್ದು ಹೈದರಾಬಾದ್‌ನ ಕಮ್ಯೂನಿಸ್ಟ್ ಕವಿ ಮಕ್ದೂಮ್ ಮೋಹಿಯುದ್ದೀನ್. ಅದನ್ನು ಸಲೀಲ್ ಚೌಧರಿ ೧೯೬೦ರಲ್ಲಿ ’ಉಸ್ನೇ ಕಹಾ ಥಾ’ ಚಿತ್ರಕ್ಕೆ ಅಳವಡಿಸಿ ಸಂಗೀತ ನೀಡಿದ್ದರು. ಅಲ್ಲಿವರೆಗೆ ‘ಪರ್ಚಮ್’ ಯಾವಾಗಲೂ ಗುಂಪು ಗಾಯನ ಮಾಡುತ್ತಿದ್ದರು. ತಂಡದಿಂದ ಒಬ್ಬರೇ ಹಾಡಿದ ಮೊದಲ ಗೀತೆ ಇದಾಗಿತ್ತು. ಅದನ್ನು ಅವರು ಹಿಂದೆ ಎಂದೂ ಹಾಡಿರಲಿಲ್ಲ. ಯುವ ಗಾಯಕಿ ತಬ್ಬಲಿಯಂತೆ ಭಯಭೀತಳಾಗಿದ್ದಳು.

‘ಹಾಡು, ಹೆದರಬೇಡ ಹಾಡು’

ಸಫ್ದರ್ ಉತ್ತೇಜಿಸಿದನು. ಸುಮಂಗಲ ಹಿಂಜರಿಯುತ್ತಿದ್ದಳು. ಸಫ್ದರ್ ಅವಳ ಹಿಂದೆಯೇ ಇದ್ದ. ಅವಳು ಮತ್ತೆ ಹಾಡಲು ಪ್ರಾರಂಭಿಸಿದಳು. ಅವಳ ಮಧುರ ಧ್ವನಿ ಇದ್ದಕ್ಕಿದಂತೆ ಶಕ್ತಿಶಾಲಿಯಾಯಿತು. ಅವಳ ಅಂತರಂಗದ ಆಳದಿಂದ ಹೊರಟ ಆ ಪೂರ್ಣಧ್ವನಿ ಅವಳ ಸಣ್ಣ ಆಕಾರವನ್ನು ಮುಚ್ಚಿತ್ತು. ಅದು ಅಲ್ಲಿದ್ದ ಎಲ್ಲರನ್ನೂ ತಲುಪಿ ಶಾಂತವಾಗಿಸಿತು. ಹಾಡು ಮುಂದುವರೆದಂತೆ ಯುವಕ ಯುವತಿಯರು ಸ್ತಂಭಿತರಾಗಿದ್ದರು. ಸಿಪಾಯಿ ಯುದ್ಧಕ್ಕೆ ಹೊರಡುವಾಗ ಅವನ ದುಃಖಿತ ಹೆಂಡತಿ ಮತ್ತು ಹಸಿದ ಮಕ್ಕಳ ಕುರಿತಾದ ಹಾಡು, ಸುಡುತ್ತಿದ್ದ ಹೆಣಗಳ ವಾಸನೆ – ಎಲ್ಲಾ ಕಡೆಯಿಂದ ಎದ್ದು ಬದುಕೇ ಅಳುತ್ತಿರುವಂತೆ ಭಾಸವಾಗುತ್ತಿತ್ತು.

ಪ್ರೇಕ್ಷಕರಲ್ಲಿ ಯಾರೋ ಒಬ್ಬರು ಅಳತೊಡಗಿದರು. ಮುಂದಿನ ಕೆಲವು ನಿಮಿಷಗಳಲ್ಲಿ ಸುಮಾರು ಜನ ಅಳುತ್ತಿದ್ದರು. ಅಳದಿದ್ದವರೂ ಉಕ್ಕಿಬರುತ್ತಿದ್ದ ಭಾವನೆಯನ್ನು ತಡೆಯಲು ಯತ್ನಿಸುತ್ತಿದ್ದರು. ಅಲ್ಲಿ ಒದ್ದೆಯಾಗದಿದ್ದ ಕಣ್ಣುಗಳೇ ಇರಲಿಲ್ಲ. ಸಂಪೂರ್ಣವಾಗಿ ಕಾರ್ಯಾಚರಣೆಗಾಗಿ ಸಿದ್ಧರಾಗಿದ್ದ ಪೋಲಿಸರು, ಅಲ್ಲಿ ಬದಲಾದ ಮನಸ್ಥಿತಿಯನ್ನು ನೋಡಿ ಆಶ್ಚರ್ಯಚಕಿತರಾದರು.

ಅಸಾಧ್ಯವೆನಿಸಿದ್ದು ನಡೆದಿತ್ತು. ೧೯೪೦ರಲ್ಲಿ ಮುಸ್ಲಿಂ ಹೆಸರಿನ ಹೈದರಾಬಾದಿ ಕಮ್ಯುನಿಸ್ಟ್ ಕವಿಯಿಂದ ರಚಿತವಾದ ಒಂದು ಹಾಡು, ೧೯೬೦ರ ಒಂದು ಚಲನಚಿತ್ರಕ್ಕೆ ಒಬ್ಬ ಬಂಗಾಳಿ ಅಳವಡಿಸಿದ್ದ, ಪದವಿಪೂರ್ವ ತರಗತಿಯ ಹಿಂದು ಹೆಸರಿನ ಮಲೆಯಾಳಿ ಯುವತಿ ಹಾಡಿದ ಹಾಡು, ಹತ್ಯಾಕಾಂಡದಿಂದ ಕುದಿಯುತ್ತಿದ್ದ ಕೋಪೋದ್ರಿಕ್ತರಾಗಿದ್ದ ನೂರಾರು ಸಿಖ್ ಯುವಕರಲ್ಲಿ ಬದಲಾವಣೆ ತಂದಿತ್ತು. ಇಲ್ಲಿ ಹೋಲಿಸಬಹುದಾದ್ದು, ಹೊಂದಿಕೆಯಾಗಬಹುದಾದ್ದು ಏನೂ ಇಲ್ಲ. ಆದರೂ ಈ ಹಾಡು, ಭಾವಪೂರ್ಣ ಮತ್ತು ಮನಕಲಕುವ ಹಾಡು-ನೊಂದವರ ಎರಡು ಗುಂಪುಗಳನ್ನು, ಪೀಳಿಗೆಗಳು, ಭೂಗೋಳ ಮತ್ತು ಹಿಂಸಾಚಾರದ ಎಲ್ಲೆಗಳನ್ನೂ ಮೀರಿ ಜೋಡಿಸಿತ್ತು.

-ಪುಸ್ತಕದಿಂದ

ಕ್ಯೂಬಾ ಎಂದರೆ ಕ್ಯಾಸ್ಟ್ರೋ, ಕ್ಯಾಸ್ಟ್ರೋ ಎಂದರೆ ಕ್ಯೂಬಾ ಅನ್ನುವಂತೆ ಬದುಕಿದ ಕ್ಯಾಸ್ಟ್ರೋ ಜನ್ಮದಿನವಾದ ಇಂದು ಅವರನ್ನು ನೆನೆಸೋಣ

ಕ್ಯೂಬಾ ಎಂದರೆ ಕ್ಯಾಸ್ಟ್ರೋ, ಕ್ಯಾಸ್ಟ್ರೋ ಎಂದರೆ ಕ್ಯೂಬಾ – ಈ ಎರಡನ್ನು ಪ್ರತ್ಯೇಕಿಸಿ ನೋಡಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಫೀಡೆಲ್ ಕ್ಯಾಸ್ಟ್ರೊ ತಮ್ಮ ದೇಶವನ್ನು, ತಮ್ಮ ಜನರನ್ನು ಬದುಕಿದರು.

ದೈತ್ಯ ಅಮೆರಿಕಾ ಸಂಯುಕ್ತ ಸಂಸ್ಥಾನದ ಮಗ್ಗುಲಲ್ಲಿರುವ ಕ್ಯೂಬಾ ಎಂಬ ಪುಟ್ಟ ದೇಶದ ಅಧ್ಯಕ್ಷರಾಗಿದ್ದ ಫೀಡೆಲ್ ಕ್ಯಾಸ್ಟ್ರೊ 5 ದಶಕಗಳಷ್ಟು ಸುದೀರ್ಘ ಕಾಲ ಅಧಿಕಾರದಲ್ಲಿದ್ದವರು. 1959ರಿಂದ 76ರವರೆಗೆ ಅಧ್ಯಕ್ಷರಾಗಿಯೂ 1976ರಿಂದ 2008ರವರೆಗೆ ಅಧ್ಯಕ್ಷರಾಗಿಯೂ ಕ್ಯೂಬಾವನ್ನು ಮುನ್ನಡೆಸಿದ ಕ್ಯಾಸ್ಟ್ರೋ, ನಂತರದಲ್ಲಿ ರಾಜಕೀಯ ನಿವೃತ್ತಿ ಪಡೆದಿದ್ದರು. ಅಲ್ಲಿಂದ ಮುಂದೆ ಅವರು ಸಾರ್ವಜನಿಕರ ನಡುವೆ ಕಾಣಿಸಿಕೊಂಡಿದ್ದು ಬಹಳ ಅಪರೂಪ. ಹಾಗಿದ್ದೂ ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಕಮ್ಯುನಿಸ್ಟ್ ಪಕ್ಷದ ಸಭೆಯಲ್ಲಿ ಭಾಗವಹಿಸಿ, “ನಾನು ಜೀವನದಲ್ಲಿ ಇಷ್ಟು ವರ್ಷಗಳನ್ನು ನೋಡ್ತೇನೆ ಅಂದುಕೊಂಡಿರಲಿಲ್ಲ, ಕ್ಯೂಬಾವನ್ನು ಚೆನ್ನಾಗಿ ನೊಡಿಕೊಳ್ಳಿ” ಎಂದು ಭಾವುಕರಾಗಿ ಮಾತನಾಡಿದ್ದರು. ಅವರ ಈ ಮಾತು ಈ ಹೊತ್ತು ಕ್ಯೂಬನ್ನರ ಪಾಲಿಗೆ ಅಂತಿಮ ಸಂದೇಶದಂತೆ ಮಹತ್ವದ್ದಾಗಿಯೂ, ಭವಿಷ್ಯದ ದಿನಗಳಿಗೆ ನಿರ್ದೇಶನದಂತೆಯೂ ಇದೆ.

ಜಾಗತಿಕ ರಾಜಕೀಯ ಪಂಡಿತರು, ಟೀಕಾಕಾರರು ಏನೇ ಹೇಳಿದರೂ ಬಹುಪಾಲು ಕ್ಯೂಬನ್ನರು ತಮ್ಮ ಪ್ರೀತಿಯ ನಾಯಕನನ್ನು ಬಿಟ್ಟುಕೊಡುವುದಿಲ್ಲ. “ಎಲ್ಲ ದೇಶಗಳಲ್ಲೂ ಒಂದಲ್ಲ ಒಂದು ಸಮಸ್ಯೆ ಇರುವಂತೆಯೇ ಕ್ಯೂಬಾದಲ್ಲೂ ಇದೆ. ಆದರೆ ನೀವು ಮನೆಯಿಲ್ಲದೆ ಬೀದಿಯ ಮೇಲೆ ವಾಸಿಸುವ ಒಬ್ಬನೇ ಒಬ್ಬ ಕ್ಯೂಬನ್ ಪ್ರಜೆಯನ್ನು ನೋಡಲಾರಿರಿ” ಎಂದು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಮತ್ತು ಅದಕ್ಕೆ ಕಾರಣರಾದ ಕ್ಯಾಸ್ಟ್ರೋರನ್ನು ಮನದುಂಬಿ ನೆನೆಯುತ್ತಾರೆ.

ತನ್ನ ನೆಲಕ್ಕಾಗಿ ಬಾಳಿ ಬದುಕಿದ, ಸಮಾನತೆ ಮತ್ತು ಸರ್ವೋದಯಕ್ಕಾಗಿ ಶ್ರಮಿಸಿದ ನಾಯಕನೊಬ್ಬನ ಯಶಸ್ಸಿಗೆ ಇದಕ್ಕಿಂತ ದೊಡ್ಡ ಮಾನದಂಡ ತಾನೆ ಏನಿದ್ದೀತು!?

ಸರ್ವಾಧಿಕಾರವನ್ನು ಎದುರಿಸಿ ನಿಂತ ಹೋರಾಟದಲ್ಲಿ ಬಂಧಿಯಾಗಿ ವಿಚಾರಣೆಗೆ ಒಳಗಾದಾಗ ತನ್ನ ಪರವಾಗಿ ತಾನೇ ವಾದ ಮಾಡಿದ ವಿಶಿಷ್ಟ ವ್ಯಕ್ತಿ ಫೀಡೆಲ್ ಕ್ಯಾಸ್ಟ್ರೋ. 1953 ಅಕ್ಟೋಬರ್ 6 ರಂದು ತಮ್ಮ ವಾದದ ಕೊನೆಯಲ್ಲಿ ಲಿಖಿತ ರೂಪದಲ್ಲಿ ಓದಿದ ದೀರ್ಘ ಭಾಷಣದ ಅಂತಿಮ ವಾಕ್ಯವೇ “ಇತಿಹಾಸ ನನ್ನನ್ನು ಮುಕ್ತಗೊಳಿಸುತ್ತದೆ”. ಈ ಲಿಖಿತ ಭಾಷಣವು ಒಂದು ದಸ್ತಾವೇಜು. ಇದು ದಬ್ಬಾಳಿಕೆ (tyranny) ವಿರುದ್ಧ ಕ್ರಾಂತಿಕಾರಿ ಸಂಘರ್ಷದ ಒಂದು ಪ್ರಣಾಳಿಕೆ, ಕಾರ್ಯಕ್ರಮ, ಆರೋಪ ಮತ್ತು ಖಂಡನೆಯಾಗಿದೆ. ಜೊತೆಗೆ ಕಾನೂನಾತ್ಮಕ, ನೈತಿಕ, ತಾತ್ವಿಕ ಮತ್ತು ರಾಜಕೀಯ ಪ್ರತಿವಾದವಾಗಿದೆ. ಇದು ಒಂದು ರೀತಿ ಕ್ಯೂಬನ್ ಕ್ರಾಂತಿಯ ಮೂಲಭೂತ ದಸ್ತಾವೇಜು. ಕ್ಯೂಬಾ ಮತ್ತು ಲ್ಯಾಟಿನ್ ಅಮೇರಿಕಾದಲ್ಲಿ ರಾಜಕೀಯ ತತ್ವ ಮತ್ತು ಕ್ರಾಂತಿಕಾರಿ ಕಾರ್ಯಾಚರಣೆಯ ಚರಿತ್ರೆಯಲ್ಲಿ ಒಂದು ಪ್ರಮುಖ ಪಠ್ಯವಾಗಿದೆ.

ಇಂತಹ ಮಹಾನ್ ಚೇತನದ ಜೀವನ ಚರಿತ್ರೆ ಕನ್ನಡದ ಓದುಗರಿಗಾಗಿ ಪ್ರಕಟಣೆಗೊಂಡಿದೆ

-ಕೃಪೆ ಜನಶಕ್ತಿ ವಾರಪತ್ರಿಕೆ, ಮಾಧ್ಯಮನೆಟ್

ಶೀರ್ಷಿಕೆ : ಕ್ಯಾಸ್ಟ್ರೋ ಕತೆ ಮೂಲ:ಇಗ್ನೀಷಿಯಾ ರಮೋನೆಟ್  ಕನ್ನಡಕ್ಕೆ : ಕೆ.ಪ್ರಕಾಶ್ ಪ್ರಕಾಶನ : ಕ್ರಿಯಾ ಪುಸ್ತಕ ಪುಟ :  286   ಬೆಲೆ : ರೂ.225 ಪ್ರಕಟಣಾ ವರ್ಷ : 2017

 

 

ಪುಸ್ತಕ ಪುರಸ್ಕಾರ ಪ್ರಧಾನ ಸಮಾರಂಭಕ್ಕೆ ಆಹ್ವಾನ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 2015ನೇ ಸಾಲಿನ ಗೌರವ ಪ್ರಶಸ್ತಿ ಪಡೆದಿರುವ ಪ್ರತಿಷ್ಟಿತ ಅನುವಾದಕರಿಗೆ ಹಾಗೂ 2014ನೇ ಸಾಲಿನ ಶ್ರೇಷ್ಟ ಅನುವಾದಕ್ಕಾಗಿ ಪುರಸ್ಕೃತರಾದವರಿಗೆ ಅಭಿನಂದನೆಗಳು.

20160314_161800

ಸ್ವಾತಂತ್ರ್ಯ ಸಮರ ಇತಿಹಾಸದ ಹೊಳೆಯುವ ನಕ್ಷತ್ರ ಭಗತ್ ಸಿಂಗ್

ಶೀರ್ಷಿಕೆ: ಅಮರ ಹುತಾತ್ಮ ಸರದಾರ್ ಭಗತ್ ಸಿಂಗ್ ಲೇಖಕರು:ಜಿತೇಂದ್ರನಾಥ ಸಾನ್ಯಾಲ್ ಅನುವಾದ:ಟಿ.ಜಿ.ಪ್ರಭಾಶಂಕರ ಪ್ರಕಾಶಕರು : ನ್ಯಾಷನಲ್ ಬುಕ್ ಟ್ರಸ್ಟ್  ಪುಟ:೩೨೪ ಬೆಲೆ:ರೂ.೧೩೦/-

ಸಂವಿಧಾನ ಶಿಲ್ಪಿ ಡಾ. ಬಿ.ಆರ‍್.ಅಂಬೇಡ್ಕರ‍್

ಭಾರತೀಯ ಸಮಾಜದಲ್ಲಿ ಜಾತಿ ವ್ಯವಸ್ಥೆ ಮತ್ತು ಅದರ ಭಾಗವಾದ ಅಸ್ಪೃಶ್ಯತೆಯ ಪ್ರಶ್ನೆ ಮತ್ತೆ- ಮತ್ತೆ ಏಳುತ್ತಾ ಬಂದಿದೆ. ಇದರಲ್ಲಿ ಅಡಕವಾಗಿರುವ ಅಸಮಾನತೆ ಮತ್ತು ಶೋಷಣೆಯ ಅಂಶಗಳ ಮೇಲೆ ಚರ್ಚೆಗಳು, ಆಂದೋಲನಗಳು ನಡೆಯುತ್ತ ಬಂದಿವೆ. ಆಧುನಿಕ ಭಾರತದಲ್ಲಿ ಡಾ. ಅಂಬೇಡ್ಕರ್ ಅವರ ನೇತೃತ್ವದ ಹೋರಾಟ ಇಂತವುಗಳಲ್ಲಿ ಪ್ರಮುಖವಾದದ್ದು. ಈ ಅವಿರತ ಹೋರಾಟಗಾರ ದಲಿತ ವಿಭಾಗಗಳಲ್ಲಿ ಆತ್ಮವಿಶ್ವಾಸವನ್ನು ತುಂಬಿದರು, ಮೇಲ್ಜಾತಿ ಆಪಾಢಭೂತಿತನಗಳನ್ನು ಬಯಲಿಗೆಳೆದರು, ಸ್ವಾತಂತ್ರ್ಯ ಹೋರಾಟ ಕಾಲದಲ್ಲೂ, ನಂತರವೂ ಕಾಂಗ್ರೆಸ್ ಮತ್ತು ಅದರ ನೀತಿಗಳನ್ನು ಬಯಲಿಗೆಳೆದರು. ಆದರೆ ಅಂತಿಮವಾಗಿ ಹಿಂದೂ ಸಮಾಜದ ಅನ್ಯಾಯಗಳಿಂದ ತಪ್ಪಿಸಿಕೊಳ್ಳಲು ಬೌದ್ಧ ಧರ್ಮವನ್ನು ಅಂಗೀಕರಿಸಿ ಎಂದು ತಮ್ಮ ಅನುಯಾಯಿಗಳಿಗೆ ಹೇಳಿದರು. ಇದರಿಂದ ದಲಿತರ ಪರಿಸ್ಥಿತಿ ಬದಲಾಗಲಿಲ್ಲ. ಈಗಲೂ ಒಂದೆಡೆ ಅಂಬೇಡ್ಕರ್‌ರವರನ್ನು ಅಧಿಕೃತವಾಗಿ ಹಾಡಿ ಹೊಗಳಲಾಗುತ್ತಿದೆ, ಅವರ ಹೆಸರನ್ನು ಬಳಸಿಕೊಳ್ಳಲು ಆಳುವ ವರ್ಗಗಳ ಪಕ್ಷಗಳ ನಡುವೆ ಪೈಪೋಟಿ ನಡೆದಿದೆ; ಇನ್ನೊಂದೆಡೆ ಸಮಾನತೆಯ ಟೊಳ್ಳು ಹೇಳಿಕೆಗಳು, ಮೀಸಲಾತಿ ಇತ್ಯಾದಿಗಳು ಕೇಳಬರುತ್ತಿವೆಯೇ ಹೊರತು ಬಹುಪಾಲು ದಲಿತರ ಬದುಕಿನ ಬವಣೆಗಳು ಕೊನೆಗಾಣುತ್ತಿಲ್ಲ. ಇದು ಸಮಾನತೆಗಾಗಿ ದುಡಿಯುತ್ತಿರುವ ಸಾಮಾಜಿಕ ಕಾರ್ಯಕರ್ತರ ಮುಂದೆ ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ.

ಇಂತಹ ಸನ್ನಿವೇಶದಲ್ಲಿ ಡಾ. ಅಂಬೇಡ್ಕರ್‌ರವರ ಜೀವನ ಮತ್ತು ಹೋರಾಟದ ಒಂದು ವಸ್ತುನಿಷ್ಟ ಪರಾಮರ್ಶೆ ಇಂತಹ ಕಾರ್ಯಕರ್ತರಿಗೆ ಮುಂದಿನ ದಾರಿ ತೋರಬಲ್ಲದು. ಅವರ ಕರ್ಮಭೂಮಿಯಾದ ಮಹಾರಾಷ್ಟ್ರದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕಾರ್ಮಿಕ ಮುಂದಾಳು ಪ್ರಭಾಕರ ಸಂಝಗಿರಿಯವರು ಇಂತಹ ಒಂದು ಪರಾಮರ್ಶೆಯನ್ನು ಡಾ.ಅಂಬೇಡ್ಕರ್‌ರವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಮಾಡಿದ್ದರು. ಮುಂದೆ ಅದು ಪುಸ್ತಕರೂಪದಲ್ಲಿ ಭಾರತದ ಹಲವು ಭಾಷೆಗಳಲ್ಲಿ ಪ್ರಕಟವಾಯಿತು. ಅದರ ಅನುವಾದ ಈ ಪುಸ್ತಕ.

ಶೀರ್ಷಿಕೆ: ಡಾ. ಬಿ.ಆರ‍್.ಅಂಬೇಡ್ಕರ‍್ – ಜೀವನ ಮತ್ತು ಹೋರಾಟ ಲೇಖಕರು: ಪ್ರಭಾಕರ‍್ ಸಂಝಗಿರಿ ಅನುವಾದ:ಸಬಿತಾ ಶರ್ಮ ಪ್ರಕಾಶಕರು: ಕ್ರಿಯಾ ಪ್ರಕಾಶನ ಪುಟ: 48+4 ಬೆಲೆ:ರೂ.15/-

ಬೋಳುವಾರ‍್ ಮಹಮ್ಮದ್ ಕುಞ್ಙಿ ಅವರಿಗೆ ಮತ್ತೊಮ್ಮೆ ಅಭಿನಂದನೆಗಳು

Dr U R Anathamurthy will release the English version and Prof G Siddaramaiah, Former Chairman of Kannada Pustaka Pradhikara will release the reprinted Kannada version.
Author Bolwar Mahamad Kunhi and Translator Rajagopal Acharya [Arya] will be present.

ಕನ್ನಡದಿಂದ ಇಂಗ್ಲೀಷ್ ಗೆ ಅನುವಾದಿಸಲ್ಪಟ್ಟ ವಿಶೇಷ ಪುಸ್ತಕಗಳಲ್ಲೊಂದು ಈ ಪುಸ್ತಕ. ಬೋಳುವಾರ‍್ ಮಹಮ್ಮದ್ ಕುಞ್ಙಿ ಅವರಿಗೆ ಮತ್ತೊಮ್ಮೆ ಅಭಿನಂದನೆಗಳು.

`ಪಾಪು ಗಾಂಧಿ, ಗಾಂಧಿ ಬಾಪು ಆದ ಕತೆ’ ಇಂಗ್ಲೀಷ್ ಗೆ ಅನುವಾದವಾಗಿದ್ದು ನಮ್ಮೆಲ್ಲರಿಗೆ ಹೆಮ್ಮೆ ತರುವ ವಿಷಯ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಈ ಪುಸ್ತಕದ ಪರಿಚಯ ಹಿಂದೆ ಪುಸ್ತಕ ಪ್ರೀತಿಯಲ್ಲಿ ಬಂದಾಗೆ ಉತ್ತರ ಕನ್ನಡದ ಕಿರಣ್ ಭಟ್ ಅವರು ಈ ರೀತಿ ಸ್ಪಂದಿಸಿದ್ದರು.

ಕನ್ನಡದ ಮಕ್ಕಳಿಗೆ ಗಾಂಧಿಯನ್ನು ಸರಳವಾಗಿ ಪರಿಚಯಿಸಬಲ್ಲ ಅತ್ಯುತ್ತಮ ಪುಸ್ತಕ ಇದು.
ಈ ಪುಸ್ತಕವನ್ನಧರಿಸಿ ನಾವು `ಚಿಂತನ ರಂಗ ಅಧ್ಯಯನ ಕೇಂದ್ರ’ ದ `ಚಿಂತನ ರೆಪರ್ಟರಿ’ ಗಾಗಿ `ಪಾಪು ಬಾಪು ಆದ ಕತೆ’ ನಾಟಕವನ್ನು ಕಳೆದ ವರ್ಷ ಆಡಿದ್ದೆವು.
ಹಳ್ಳಿಯ ಶಾಲೆಗಳಲ್ಲಿ, ಸಾರ್ವಜನಿಕರಿಗಾಗಿ ಸುಮಾರು ಅರವತ್ತು ಪ್ರದರ್ಶನಗಳನ್ನು ನೀಡಿದ್ದೆವು. ರೆಪರ್ಟರಿಯ ತಿರುಗಾಟದ ಜೊತೆಯಲ್ಲಿ ಈ ಪುಸ್ತಕವನ್ನೂ ಒಯ್ದು ಸಾಕಷ್ಟು ಸಂಖ್ಯೆಯಲ್ಲಿ ಮಾರಿದ್ದೆವು.

ಇದು ಕನ್ನಡ ಬಾರದ ಇಂಗ್ಲೀಷ್ ಓದಬಲ್ಲ ನಮ್ಮ ಕಂದಮ್ಮಗಳಿಗೆ ಉಡುಗೊರೆಯಾಗಿ ಕೊಡಲೇ ಬೇಕಾದ ಒಂದು ಒಳ್ಳೆಯ ಪುಸ್ತಕ.

ಮಹಾತ್ಮ ಗಾಂಧಿಯೆಂದರೆ ಯಾರಿಗೂ ನಿಲುಕದ ಅತಿಮಾನವನಲ್ಲ

ಬೋಳುವಾರು ಮಹಮದ್ ಕುಞ್ಞಿ ಅವರಿಗೆ ಅಭಿನಂದನೆಗಳು

 

ಜ್ಯೋತಿಬಸು ಅಧಿಕೃತ ಜೀವನ ಚರಿತ್ರೆ

ಜ್ಯೋತಿಬಸು ಕೂಡಾ ರಾತ್ರೋರಾತ್ರಿ ರಾಜಕೀಯ ಶಿಖರಕ್ಕೇರಿಲ್ಲ. ಈ ಎತ್ತರದ ಸ್ಥಾನ ಅವರಿಗೆ ಲಭಿಸಿರುವುದರ ಹಿಂದೆ ಅತುಲ ತ್ಯಾಗವಿದೆ; ಸಹನೆ ಸಂಕಟಗಳ ಪರಂಪರೆಯಿದೆ; ರಾಜಕೀಯ ಚತುರತೆಯಿದೆ; ತಾತ್ವಿಕ ಬದ್ಧತೆಯಿದೆ; ಜನತೆಯ ಬಗ್ಗೆ ಅಪಾರ ಪ್ರೀತಿ, ವಿಶ್ವಾಸವಿದೆ. ಎಲ್ಲಕ್ಕೂ ಮಿಗಿಲಾಗಿ, ವಾಸ್ತವದ ಸಮಸ್ಯೆಗಳ ಸಂಕೀರ್ಣತೆಯನ್ನು ಅರಿತು ಅದಕ್ಕನುಗುಣವಾಗಿ ಸೈದ್ಧಾಂತಿಕ ನಿಲುವುಗಳನ್ನು ಅನ್ವಯಿಸಿ ಆಚರಿಸುವ ಔಚಿತ್ಯ ಪ್ರಜ್ಞೆಯಿದೆ; ಸಂಘಟನಾ ನಿಪುಣತೆಯಿದೆ. ಅವರೊಬ್ಬ ಅಚಲ ನಿರ್ಧಾರದ ಮನುಷ್ಯ. ಶ್ಲಾಘನೀಯ ನಮ್ರತೆ, ಜಿದ್ದಿನ ಜಿಗುಟುತನ ಅವರ ವ್ಯಕ್ತಿತ್ವದ ಅವಿಭಾಜ್ಯ ಅಂಗಗಳಾಗಿವೆ. ಯಾರ ಮೇಲೂ ದಬ್ಬಾಳಿಕೆ ನಡೆಸದ ಅಧಿಕಾರವಾಣಿ ಅವರಿಗೆ ಒಲಿದು ಬಂದಿದೆ. ಸೈದ್ಧಾಂತಿಕ ಬದ್ಧತೆ ಮತ್ತು ಜನಮಾನಸಕ್ಕೆ ಸ್ಪಂದಿಸಬಲ್ಲ ವಿನಮ್ರತೆ ಈ ಎರಡನ್ನೂ ಏಕೀರ್ಭವಿಸಿದ ವಿರಳ ವ್ಯಕ್ತಿತ್ವ ಅವರಿಗೆ ಸಿದ್ಧಿಸಿದೆ. ಅವರನ್ನು ಒಬ್ಬ ಮಹಾನ್ ವ್ಯಕ್ತಿಯೆಂದು ಕರೆಯಬಹುದೇ? ಬಸು ಅವರ ಮಹಾನತೆಯಿರುವುದು ಅವರ ಸಪ್ರಮಾಣ ಪ್ರಜ್ಞೆಯಲ್ಲಿ; ಯಾವುದನ್ನೂ ಅತಿಗೆ ಒಯ್ಯದ ಸಂಯಮದಲ್ಲಿ; ಹಿತಮಿತವಾದುದ್ದರ ಆಯ್ಕೆಯಲ್ಲಿ ತೋರುವ ವಿವೇಕ ಮತ್ತು ಸಂದರ್ಭಕ್ಕೆ ಸೂಕ್ತವಾಗಿ ಭ್ರಾಮಕ ಅಧಿಕಾರದ ನಡುವಿನ ಭಿನ್ನತೆಯನ್ನು ಗುರುತಿಸುವ ಪರಿಜ್ಞಾನ ಅವರಲ್ಲಿ ಮೂರ್ತಗೊಂಡಿದೆ. ಒಂದು ಕೆಲಸಕ್ಕೆ ಒಬ್ಬ ನಿರ್ದಿಷ್ಟ ವ್ಯಕ್ತಿ ಅನಿವಾರ್ಯವೆಂಬುವುದೇ ಚಾರಿತ್ರಿಕ ಮಹಾನತೆಯ ನಿರ್ಧಾರದ ಅಂಶ ಎಂದು ಒಪ್ಪುವುದಾದರೆ, ಬಸು ಅದರಿಂದ ಬಹು ದೂರ ಇಲ್ಲವೆಂಬುದನ್ನು ಅಲ್ಲಗಳೆಯಲಾಗದು. . . .

ಬಸು ಯಾರದೋ ತಾಳಕ್ಕೆ ತಕ್ಕಂತೆ ಕುಣಿಯುವ ಸೂತ್ರದ ಬೊಂಬೆಯಂಥ ಮುಖ್ಯಮಂತ್ರಿಯಾಗಲು ಬಯಸಲಿಲ್ಲ. ಹಾಗೆಂದೇ ಅಧಿಕಾರ ವಹಿಸಿಕೊಂಡ ಮೊಟ್ಟಮೊದಲ ದಿನವೇ ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಸ್ಪಷ್ಟವಾಗಿ ಹೇಳಿದರು: “ನಾವು ನಮ್ಮ ಕಾರ್ಯಕ್ರಮವನ್ನು ಜಾರಿಗೊಳಿಸುವುದು ರೈಟರ್ಸ್ ಬಿಲ್ಡಿಂಗ್ ನಿಂದಲ್ಲ. ಬದಲಾಗಿ, ಹೊಲ ನೆಲಗಳಿಂದ; ಫ್ಯಾಕ್ಟರಿ ಫಾರ್ಮುಗಳಿಂದ. ನಮ್ಮ ಶಕ್ತಿಯಿರುವುದೇ ಅಲ್ಲ. ಜನಸಾಮಾನ್ಯರ ಸಹಾಯದ ಮೂಲಕವೇ ನಾವು ನಮ್ಮ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕಾಗಿದೆ.”……

ಚುರುಕುತನವೇ ಮೈವೆತ್ತಂತಿದ್ದ ಬಸುಗೆ ಯಾವುದೇ ಕೆಲಸ ಮುಂದೂಡುವುದೆಂದರೆ ಎಳ್ಳಷ್ಟೂ ಆಗಿ ಬರುತ್ತಿರಲಿಲ್ಲ. ಮೈಗಳ್ಳತನದಿಂದ ಕೆಲಸವನ್ನು ಮುಂದೆ ತಳ್ಳುವುದೆಂದರೆ ಅವರಿಗೆ ಮೈಯೆಲ್ಲಾ ಸಿಟ್ಟು. ಇವತ್ತಿಗೂ ತ್ವರಿತ ನಿರ್ಧಾರಗಳಿಗೆ ಬಸು ಮತ್ತೊಂದು ಹೆಸರು. “ಯಾವುದೇ ಕೆಲಸ ಸಾಧ್ಯವೋ, ಇಲ್ಲವೋ ಎಂಬುವುದನ್ನು ಖಂಡತುಂಡವಾಗಿ ಹೇಳಿಬಿಡಬೇಕು. ಸುಮ್ಮನೆ ಡೆಸ್ಕಿನ ಮೇಳೆ ಫೈಲುಗಳ ರಾಶಿ ಒಟ್ಟಿಕೊಂಡಿರಬಾರದು. ಅದೊಂದು ಕಣ್ಣಿಗೆ ಹುಣ್ಣು ಇದ್ದಂತೆ ಎಂದು ನಾನು ಯಾವಾಗಲೂ ನನ್ನ ಸಹೋದ್ಯೋಗಿಗಳಿಗೆ ಹೇಳುತ್ತಿದ್ದೆ.” – ಎಂದು ಬಸು ತಮ್ಮ ಕಾರ್ಯವೈಖರಿಯ ಬಗ್ಗೆ ವಿವರಿಸುತ್ತಾರೆ. ತಮ್ಮ ಸಹೋದ್ಯೋಗಿಗಳಿಗೆ ಸದಾ ಸಲಹೆ ಸೂಚನೆಗಳನ್ನು ಕೊಡುತ್ತಲೇ ಇದ್ದ ಬಸು. ಸಮರ್ಥರ ಸಾಧನೆಗಳನ್ನು ಕಂಡು ಮೆಚ್ಚಿ ಕೊಂಡಾಡುತ್ತಿದ್ದದ್ದೂ ಇದೆ. ಇದಕ್ಕೆ ಸಂಬಂಧಿಸಿ ಯತೀನ್ ಚಕ್ರವರ್ತಿ ಒಂದು ನಿದರ್ಶನ ಕೊಡುತ್ತಾರೆ.
. . .
– ಪುಸ್ತಕದ ಪುಟಗಳಿಂದ

ಶೀರ್ಷಿಕೆ: ಜ್ಯೋತಿಬಸು ಅಧಿಕೃತ ಜೀವನ ಚರಿತ್ರೆ ಲೇಖಕರು:ಪ್ರೊ. ಸುರಭಿ ಬ್ಯಾನರ್ಜಿ ಅನುವಾದ:ರಾಹು ಪ್ರಕಾಶನ: ಚಿಂತನ ಪುಸ್ತಕ ಪುಟಗಳು:432 ಬೆಲೆ:ರೂ.250/-

ವಿಶ್ವದಲ್ಲಿ ಅನ್ಯಾಯವಾದ ಪ್ರತಿಯೊಂದು ಸಲ ನೀವು ಕೋಪದಿಂದ ಕಂಪಿಸಬಲ್ಲಿರಾದರೆ…

che book

ಕ್ರಾಂತಿಯ ಹಂಬಲ ಹೋರಾಟಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಂಡು ಪಡೆದ ಪಕ್ವ ದೃಷ್ಟಿಕೋನ ನನ್ನ ಹಿಂದಿನ ವೈದ್ಯಕೀಯ ವಿದ್ಯಾರ್ಥಿದೆಸೆಯಲ್ಲಿ ಇರಲಿಲ್ಲ. ನಾನು ಎಲ್ಲರಂತೆ ಯಶಸ್ವಿಗೆ ಆಶಿಸಿದೆ; ನಾನೊಬ್ಬ ಪ್ರಸಿದ್ಧ ಸಂಶೋಧಕನಾಗಿ, ಬಿಡುವಿಲ್ಲದೆ ದುಡಿದು, ಮಾನವ ಜೀವಿಗಳೆಲ್ಲರಿಗೂ ಲಾಭವಾಗುವಂತಹ ಏನಾದರೂ ಸಂಶೋಧನೆ ಮಾಡುವ ಕನಸು ಕಾಣುತ್ತಿದ್ದೆ. ಆದರೆ ಇವೆಲ್ಲ ವೈಯಕ್ತಿಕ ಯಶಸ್ಸಿಗಾಗಿ ಕಟ್ಟಿದ ಕನಸುಗಳು. ನಮ್ಮೆಲ್ಲರಂತೆ ನಾನೂ ಸಹ ನಮ್ಮ ಪರಿಸರದಿಂದ ರೂಪಿತವಾದ ವ್ಯಕ್ತಿಯಾಗಿದ್ದೆ.

“……..ದಾರಿದ್ರದಿಂದಾಗಿ, ಹೇಗೆ ತಂದೆ ತಾಯಿಯರು ತಮ್ಮ ಮಕ್ಕಳ ರೋಗಗಳಿಗೆ ಔಷಧಿ ಕೊಡಲಾರದಾಗಿದ್ದರೆಂಬುದನ್ನು ಕಂಡೆ. ಹಸಿವೆ ಮತ್ತು ನರಳಿಕೆಗಳಿಂದ ಪೀಡಿತನಾದ ತಂದೆ ತನ್ನ ಮಗು ಸಾಯುವುದನ್ನು ನಿರ್ವಿಕಾರನಾಗಿ ಸಹಿಸಿಕೊಳ್ಳುವಷ್ಟು ಪಶುಪ್ರಾಯನಾಗಿ ಮನುಷ್ಯನು ಅಧಃಪಾತಾಳಕ್ಕೆ ಜಾರುವುದನ್ನು ಕಂಡೆ. ಪ್ರಸಿದ್ಧ ಸಂಶೋಧಕನಾಗುವುದಕ್ಕಿಂತ, ಅಥವಾ ಆರೋಗ್ಯ ಶಾಸ್ತ್ರಕ್ಕೆ ಒಂದು ಅಮೂಲ್ಯ ಕೊಡುಗೆ ಕೊಡುವುದಕ್ಕಿಂತಲೂ ಯಾವ ರೀತಿಯಲ್ಲೂ ಕನಿಷ್ಟವೆಂದು ಹೇಳಲಾಗದ ಜೀವನದ ದ್ಯೇಯ ಇನ್ನೊಂದು ಇದೆಯೆಂದು ನಾನು ಕಂಡುಕೊಂಡೆ….. ಈ ಜನರ ಸಹಾಯಕ್ಕೆ ನಾನು ಒದಗಬೇಕೆಂಬ ಜ್ಞಾನೋದಯವಾಗಿತ್ತು.

ಇದು ವಿಶ್ವದಲ್ಲಿ ಅನ್ಯಾಯವಾದ ಪ್ರತಿಯೊಂದು ಸಲ ನೀವು ಕೋಪದಿಂದ ಕಂಪಿಸಬಲ್ಲಿರಾದರೆ ನಾವು ಸಂಗಾತಿಗಳು! ಎಂದ ಅಗ್ರಗಣ್ಯ ಕ್ರಾಂತಿಕಾರಿ ಮತ್ತು ಲ್ಯಾಟಿನ್ ಅಮೆರಿಕಾದ ಜನತೆಗಳ ರಾಷ್ಟ್ರೀಯ ವಿಮೋಚನಾ ಹೋರಾಟಗಾರ ಆರ್ನೆಸ್ಟೋ ಚೆ ಗುವಾರರ ಜೀವನದ ಬಗ್ಗೆ ಐ. ಲವ್ರೆತ್ಸ್ಕಿ (ಡಾ.ಐ.ಆರ‍್.ಗ್ರಿಗುಲೆವಿಚ್, ಸೋವಿಯತ್ ಒಕ್ಕೂಟದ ವಿಜ್ಞಾನಗಳ ಅಕಾದೆಮಿಯ ಕರೆಸ್ಪಾಂಡಿಂಗ್ ಸದಸ್ಯ) ಬರೆದ ಪುಸ್ತಕ ಇದು.

ಈ ಪುಸ್ತಕಕ್ಕೆ ಲೇಖಕರು ಅನೇಕ ದಾಖಲೆಗಳನ್ನು, ಪತ್ರಿಕಾ ವರದಿ-ಲೇಖನಗಳನ್ನು, ಚೆ ಗುವಾರ ಅವರ ಮಿತ್ರರು, ಸಂಬಂಧಿಕರು ಮತ್ತು ಅವರ ಜೊತೆಗೂಡಿ ಹೋರಾಡಿದ ಸಂಗಾತಿಗಳೊಡನೆಯ ಸಂಭಾಷಣೆಗಳ ಟಿಪ್ಪಣಿಗಳನ್ನು ಬಳಸಿಕೊಂಡಿದ್ದಾರೆ.

ಈ ಪುಸ್ತಕವನ್ನು ಕನ್ನಡಕ್ಕೆ ತಂದವರು ಗೊ.ರು.ಚನ್ನಬಸಪ್ಪ, ಸೂರ್ಯಕಾಂತ ಸೊನ್ನದ ಹಾಗೂ ಕೆ.ಪಿ.ಸ್ವಾಮಿ

– ಪುಸ್ತಕದ ಬೆನ್ನುಡಿಯಿಂದ
ಶೀರ್ಷಿಕೆ : ಆರ್ನೆಸ್ಟೋ ಚೆ ಗುವಾರ     ಮೂಲ ಲೇಖಕರು:ಐ ಲಾವ್ರೆತ್ ಸ್ಕಿ ಪ್ರಕಾಶಕರು:ನವಕರ್ನಾಟಕ ಪುಟ:504 ಬೆಲೆ:ರೂ.40/-(ಪ್ರಥಮ ಮುದ್ರಣದ ಬೆಲೆ)

ವಸ್ತುನಿಷ್ಟ ವ್ಯಕ್ತಿ ಚಿತ್ರಣ.

p-lankeshಇಪ್ಪತ್ತನೆಯ ಶತಮಾನದಲ್ಲಿ ಕನ್ನಡ ಸಾಹಿತ್ಯವನ್ನು ತಮ್ಮ ವೈವಿಧ್ಯಮಯ ಬರವಣಿಗೆಗಳಿಂದ ಶ್ರೀಮಂತಗೊಳಿಸಿದವರಲ್ಲಿ ಪಿ.ಲಂಕೇಶ್ ಅವರೂ ಒಬ್ಬರು. ಭಾರತದ ಸಾಹಿತ್ಯ ಅಕಾಡೆಮಿಯು `ಭಾರತೀಯ ಸಾಹಿತ್ಯ ನಿರ್ಮಾಪಕರು ಮಾಲಿಕೆಯಲ್ಲಿ ಲಂಕೇಶ್ ಅವರ ಸಮಗ್ರ ವ್ಯಕ್ತಿತ್ವ ಹಾಗೂ ಬರವಣಿಗೆಯನ್ನು ಕುರಿತು ಪ್ರಕಟಿಸಿದ ಪರಿಚಯ ರೂಪದ ಪುಸ್ತಕ ಇದು. ಲಂಕೇಶ್ ಅವರು ಅಧ್ಯಾಪಕರಾಗಿ, ಕವಿಯಾಗಿ, ನಾಟಕಕಾರರಾಗಿ, ವಿಮರ್ಶಕರಾಗಿ, ಪತ್ರಕರ್ತರಾಗಿ ಕ್ರಿಯಾಶೀಲರಾಗಿದ್ದ ಸುದೀರ್ಘ ಅವಧಿಯಲ್ಲಿ ಅವರ ಒಡನಾಡಿಯಾಗಿದ್ದ ಕೆ.ಮರುಳಸಿದ್ದಪ್ಪ ಅವರು ಈ ಕೃತಿಯನ್ನು ಬರೆದಿದ್ದಾರೆ. ಅತಿ ಪರಿಚಯದಿಂದ ವಸ್ತುನಿಷ್ಠತೆಗೆ ಭಂಗ ಬರಬಹುದೆಂಬ ಆಕ್ಷೇಪಕ್ಕೆ ಆಸ್ಪದವೇ ಇಲ್ಲದಂತೆ ಅವರು ಲಂಕೇಶ್ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿದ್ದಾರೆ. ಗುಣಗಳನ್ನು ಮಾತ್ರವಲ್ಲದೆ ದೋಷಗಳನ್ನೂ ನಿರ್ದಾಕ್ಷಿಣ್ಯವಾಗಿ ನಮೂದಿಸಿದ್ದಾರೆ. ಆದ್ದರಿಂದಲೇ ಇದು ಲಂಕೇಶ್ ಅವರ ವ್ಯಕ್ತಿತ್ವವನ್ನು ಸರಿಯಾಗಿ ಬಿಚ್ಚಿಡುತ್ತದೆ. ಸಾಹಿತ್ಯದ ವಿದ್ಯಾರ್ಥಿಗಳಿಗೆ ಲಂಕೇಶ್ ಅವರ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸೂಕ್ತವಾದ ಪೂರಕ ಹಿನ್ನೆಲೆಯನ್ನು ನೀಡುತ್ತದೆ.

ಪಾಳ್ಯದ ಲಂಕೇಶ್ (1935-2000), ತಮ್ಮ ಸಾಹಿತ್ಯ ಬರಹಗಳಿಂದ ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರವನ್ನು ಸಮೃದ್ಧಗೊಳಿಸಿದ ಹಲವು ಪ್ರತಿಭಾವಂತರನ್ನು ನೀಡಿದ ಶಿವಮೊಗ್ಗ ಜಿಲ್ಲೆಯವರು. ಇಂಗ್ಲೀಷ್ ಉಪನ್ಯಾಸಕರಾಗಿ ವೃತ್ತಿಯನ್ನು ಆರಂಭಿಸಿದ್ದರೂ ಕವನ, ಕತೆ, ನಾಟಕ, ಕಾದಂಬರಿ, ವಿಮರ್ಶೆ, ಸಂಪಾದಿತ ಕೃತಿಗಳ ಮೂಲಕ ಸಾಹಿತ್ಯ ವಲಯಕ್ಕೆ ಪರಿಚಿತರಾದರು. ಬರವಣಿಗೆಗೆ ಮಾತ್ರ ಸೀಮಿತವಾಗದೆ ಚಲನಚಿತ್ರ ನಿರ್ದೇಶನಕ್ಕೂ ಕೈ ಹಾಕಿ ಯಶಸ್ವಿಯಾದರು. ಉಪನ್ಯಾಸ ವೃತ್ತಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಸ್ವತಂತ್ರವಾಗಿ ತಮ್ಮದೇ ಹೆಸರಿನ ವಾರಪತ್ರಿಕೆಯನ್ನು ಹೊರತಂದು ಅದರಲ್ಲೂ ತಮ್ಮ ಛಾಪನ್ನು ಮೂಡಿಸಿದರು. ಮಹತ್ವದ ಸೃಜನಶೀಲ ಬರಹಗಾರ ಎಂಬಷ್ಟಕ್ಕೆ ಲಂಕೇಶರ ವ್ಯಕ್ತಿತ್ವದ ಚಿತ್ರಣ ಪೂರ್ಣಗೊಳ್ಳುವುದಿಲ್ಲ; ಅವರು ತಮ್ಮ ಪತ್ರಿಕೆಯ ಮೂಲಕ ಒಂದು ಜೀವಂತ ಸಂಸ್ಕೃತಿ ನಿರ್ಮಾಣಕ್ಕಾಗಿ ದುಡಿದವರು. ಕಳೆದ ಶತಮಾನದ ಎಂಬತ್ತರ ದಶಕದಿಂದ ಕನ್ನಡ ನಾಡಿನ ವೈಚಾರಿಕತೆ, ಸಾಮಾಜಿಕ ಬದ್ಧತೆ ಮತ್ತು ಪ್ರಗತಿಪರ ರಾಜಕೀಯ ಚಿಂತನೆಯ ಹಿಂದೆ ಲಂಕೇಶರ ಕೊಡುಗೆ ನಿರ್ವಿವಾದ – ಎಂಬುದನ್ನು ಅವರ ಬರವಣಿಗೆಗಳನ್ನೇ ಆಧರಿಸಿ ಇಲ್ಲಿ ಪ್ರತಿಪಾದಿಸಲಾಗಿದೆ. ಹತ್ತು ಅಧ್ಯಾಯಗಳಿಗೆ ವಿಸ್ತರಿಸಿದ ಈ ಕೃತಿಯಲ್ಲಿ ಲಂಕೇಶರ ವರ್ಣಮಯ ವ್ಯಕ್ತಿತ್ವ ಹಾಗೂ ಬಹುಮುಖ ಪ್ರತಿಭೆಯ ಸಮಗ್ರ ಚಿತ್ರಣವನ್ನು ಮರುಳಸಿದ್ದಪ್ಪನವರು ಸಮರ್ಪಕವಾಗಿ ಕಟ್ಟಿಕೊಟ್ಟಿದ್ದಾರೆ.

ಶೀರ್ಷಿಕೆ: ಪಿ.ಲಂಕೇಶ್ ಲೇಖಕರು: ಕೆ. ಮರುಳಸಿದ್ದಪ್ಪ ಪ್ರಕಾಶಕರು: ಸಾಹಿತ್ಯ ಅಕಾಡಮಿ, ನವದೆಹಲಿ ಪುಟಗಳು:178 ಬೆಲೆ:ರೂ.40/-

ಕೃಪೆ : ಪ್ರಜಾವಾಣಿ