2021ರ ಮಹಿಳಾ ದಿನವನ್ನು ಮಹಿಳಾ ರೈತ ಹೋರಾಟಗಾರರ ಸಮ್ಮಾನದಲ್ಲಿ ಆಚರಿಸೋಣ

ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಇಂದು 102 ದಿನ ತುಂಬಿತು. ಈ ಐತಿಹಾಸಿಕ ರೈತ ಹೋರಾಟದ ಸಂಯೋಜಕರು ತಮ್ಮ ಹೋರಾಟದಲ್ಲಿ ಪುರುಷ ರೈತರಷ್ಟೇ ಕಾಣಿಕೆ ಮಹಿಳಾ ರೈತರದ್ದೂ ಇದೆ ಎಂದು ಘೋಷಿಸಿದ್ದಾರೆ ಮಾತ್ರವಲ್ಲದೇ ಇಂದಿನ ದಿನವನ್ನು ಮಹಿಳಾ ರೈತರ ದಿನವಾಗಿ ಆಚರಿಸುತ್ತಿದ್ದಾರೆ.
ರೈತರ ಈ ಐತಿಹಾಸಿಕ ಹೋರಾಟವನ್ನು ದಾಖಲಿಸಿಲೆಂದೇ ಅದರಲ್ಲಿ ಭಾಗವಹಿಸಿ ಹೋರಾಟದ ಅನುಭವವನ್ನು ಕನ್ನಡಿಗರಿಗೆ ಉಣಬಡಿಸಿದ ನವೀನ್ ಕುಮಾರ್ ಅವರು ತಮ್ಮ ದಿನಚರಿ ದಾಖಲು ಮಾಡಿದ ಈ ಪುಸ್ತಕದಲ್ಲಿ ಅಲ್ಲಿಯ ಕೆಲವು ಒಳನೋಟಗಳನ್ನು ಹಿಡಿದಿಟ್ಟಿದ್ದಾರೆ. ಅವುಗಳಲ್ಲಿ ಒಂದು ಅಲ್ಲಿ ಢಾಳಾಗಿ ಕಂಡುಬರುತ್ತಿದ್ದ ಮಹಿಳಾ ಶಕ್ತಿ.
ಹಾಗಾಗಿ ನಾವು ಭಾರತೀಯ ಮಹಿಳೆಯರು 2021ರ ಮಹಿಳಾ ದಿನವನ್ನು ಮಹಿಳಾ ರೈತ ಹೋರಾಟಗಾರರ ಸಮ್ಮಾನದಲ್ಲಿ ಆಚರಿಸೋಣ.

ಶೀರ್ಷಿಕೆ : ಕದನ ಕಣ – ದೆಹಲಿ ಗಡಿಗಳಲ್ಲಿ ರೈತರೊಂದಿಗೆ ಲೇಖಕರು ಹೆಚ್. ಆರ್.ನವೀನ್ ಕುಮಾರ್ ಪ್ರಕಾಶಕರು:ಕ್ರಿಯಾ ಮಾಧ್ಯಮ ಪ್ರೈ.ಲಿ. ಬೆಲೆ:ರೂ.120/- ಪುಟಗಳು:132 ಪ್ರಕಟಣಾ ವರ್ಷ:2021

ಮೈಸೂರು ದಸರ! ಎಷ್ಟೊಂದು ಸುಂದರ!!!

ಈ ಪುಸ್ತಕದಲ್ಲಿ ವಿಜಯನಗರದಿಂದ ಮೈಸೂರಿನ ಒಡೆಯರು ದಸರಾವನ್ನು ಹೇಗೆ ಮುಂದುವರಿಸಿಕೊಂಡು ಬಂದರು. ರಾಜ್ಯದ ಇತರೆಡೆಗಳಲ್ಲಿ ಎಲ್ಲೆಲ್ಲಿ ದಸರಾ ಆಚರಣೆಯಿದೆ. ಮೈಸೂರಿನ ಸುತ್ತಮುತ್ತಲಿನ ಪ್ರಸಿದ್ಧ ಪ್ರದೇಶಗಳಾವುವು, ಮೈಸೂರು ಒಡೆಯರ ಸಾಧನೆ, ಆಳ್ವಿಕೆ, ಮೈಸೂರು ಅರಮನೆ, ಚಿನ್ನದ ಸಿಂಹಾಸನ, ಜಂಬೂಸವಾರಿ ಹೀಗೆ ಹಲವಾರು ಮಾಹಿತಿಗಳನ್ನೊಳಗೊಂಡಿದೆ. ಇದು ಈ ಪುಸ್ತಕದ ಸ್ವರೂಪ.

ಶೀರ್ಷಿಕೆ: ಮೈಸೂರು ದಸರಾ ಸಂಪಾದಕರು: ಗೌರಿ ಸುಂದರ‍್ ಪ್ರಕಾಶಕರು: ಸುಂದರ ಪ್ರಕಾಶನ ಪುಟ:313 ಬೆಲೆ:ರೂ.395/-

ಭವಿಷ್ಯದಲ್ಲಿ ಹೆಣ್ಣಿಗೆ `ದ್ರೌಪದಿ’ಯ ಕಷ್ಟ ಬರದಿರಲಿ!!!

odala-thuditakke-kedu

`ವರದಕ್ಷಿಣೆ ಎಂಬುದು ಹುಟ್ಟದಿರುವ ಹೆಣ್ಣುಮಗುವಿಗೂ ಕಡುವೈರಿ‘. ಅತಿ ಹೆಚ್ಚು ಹೆಣ್ಣು ಭ್ರೂಣಹತ್ಯೆ ನಡೆಯುವ ಜಿಲ್ಲೆಗಳಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನದಲ್ಲಿರುವ ಮಂಡ್ಯ ಜಿಲ್ಲೆ ಕ್ಷೇತ್ರಕಾರ್ಯ ಸಂದರ್ಭದಲ್ಲಿ ಕಂಡುಕೊಂಡ ಅಂಶವಿದು ಎಂದು ಪುಸ್ತಕದ ಮುನ್ನುಡಿಯಲ್ಲಿ ವಿಮೋಚನಾ ಮಹಿಳಾ ಹಕ್ಕುಗಳ ವೇದಿಕೆಯ ಡೋನಾ ಫರ್ನಾಂಡೀಸ್ ಹೇಳುತ್ತಾರೆ.

ಮಂಡ್ಯ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹೆಣ್ಣು ಭ್ರೂಣ ಹತ್ಯೆಗಳಿಗೆ ಕಾರಣಗಳೇನು ಎಂಬುದನ್ನು ಕ್ಷೇತ್ರಕಾರ್ಯ ಆಧರಿಸಿದ ಅಧ್ಯಯನದಲ್ಲಿ ಕಂಡುಕೊಂಡ ಅಂಶಗಳನ್ನು ಈ ಕೃತಿ ವಿವರವಾಗಿ ದಾಖಲಿಸಿದೆ. `ಮಂಡ್ಯದ ಏಳು ತಾಲ್ಲೂಕುಗಳ ನೂರಾರು ಹಳ್ಳಿಗಳಲ್ಲಿ ಎಲ್ಲ ವಯೋಮಾನದ ಜನರೂ ಹೆಣ್ಣು ಭ್ರೂಣ ಹತ್ಯೆಗೆ ಕೊಡುವ ದೊಡ್ಡ ಕಾರಣವೆಂದರೆ ವರದಕ್ಷಿಣೆ. ತಮ್ಮ ಹೆಣ್ಣುಮಗಳ ಮದುವೆಗಾಗಿ ಸಾಲ ಮಾಡಿ ನರಳುವ, ಅದಕ್ಕಾಗಿ ಇದ್ದ ಹೊಲ ಗದ್ದೆ ಕಳೆದುಕೊಂಡು ನರಳುವ ಜನರು ಮಂಡ್ಯದ ಗ್ರಾಮೀಣ ಭಾಗದಲ್ಲಿ ಸರ್ವೇ ಸಾಮಾನ್ಯ‘ (ಪುಟ 90) ಎಂದು ಇಲ್ಲಿ ವಿಶ್ಲೇಷಿಸಲಾಗಿದೆ.

ಆಧುನಿಕ ಅಭಿವೃದ್ಧಿಯ ನೀತಿಗಳು ಆಳದಲ್ಲಿ ಜನಮಾನಸವನ್ನು ಕಂಗೆಡಿಸುವಂತಹದಾಗಿರುತ್ತದೆ. ಕೃಷ್ಣರಾಜಸಾಗರದ ನೀರಾವರಿಗೆ ಬೃಹತ್ ವಿಸ್ತರಣೆ ಸಿಕ್ಕಂತೆಲ್ಲಾ ಸಾಮಾಜಿಕ ಬದುಕಿನಲ್ಲಿ ತಮಗಿದ್ದ ಪಾತ್ರ ಮತ್ತು ಮನ್ನಣೆ ಎರಡನ್ನೂ ಮಂಡ್ಯದ ಮಹಿಳಾ ಸಂಕುಲ ಕಳೆದುಕೊಳ್ಳುತ್ತಾ ಬಂದಿದೆ ಎಂಬುದನ್ನು ಈ ಕೃತಿ ಗುರುತಿಸುತ್ತದೆ. ಇದೇ ರೀತಿ ಸರಿಸುಮಾರು ಸಂಪೂರ್ಣವಾಗಿ ನೀರಾವರಿಗೆ ಒಳಗಾಗಿರುವ ಸಕ್ಕರೆಯ ಕಣಜ ಬೆಳಗಾವಿ ಜಿಲ್ಲೆ ಅತಿ ಹೆಚ್ಚು ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವ ಜಿಲ್ಲೆಯಾಗಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದೆ. ಆಸಕ್ತಿಯ ಸಂಗತಿ ಎಂದರೆ, 0-6 ವಯೋಮಾನದ ಗಂಡು-ಹೆಣ್ಣು ಮಕ್ಕಳ ಅನುಪಾತ ಹೆಚ್ಚಿರುವ ಜಿಲ್ಲೆಗಳಲ್ಲಿ ಕೊಡಗು ಮೊದಲ ಸ್ಥಾನ ಪಡೆದರೆ ಕೋಲಾರ ಎರಡನೆಯ ಸ್ಥಾನ ಪಡೆದಿದೆ. `ವೈದಿಕ ಧರ್ಮಕ್ಕೆ ಹೊರತಾದ ಕೊಡವ ಸಂಸ್ಕೃತಿಯನ್ನು ಹೊಂದಿರುವ ಕೊಡಗು ಹಾಗೂ ವೈದಿಕ ಧರ್ಮಕ್ಕೆ ಪಾರಂಪರಿಕವಾಗಿ ಸೆಡ್ಡು ಹೊಡೆದಿರುವ ಪರಿಶಿಷ್ಟ ಜಾತಿಗಳು ಹೆಚ್ಚಾಗಿರುವ ಕೋಲಾರದಲ್ಲಿ ಹೆಂಗಸರ ಸಂಖ್ಯೆ ಹೆಚ್ಚಾಗಿ ಇರುವುದು ಸಾಮಾಜಿಕವಾಗಿ ಅತಿ ಮಹತ್ವದ ವಿಚಾರವಾಗಿದೆ‘ (ಪುಟ 33). ಇದೇ ರೀತಿ ಹುಣಸೂರು ತಾಲ್ಲೂಕಿನಲ್ಲಿ 1000 ಗಂಡು ಮಕ್ಕಳಿಗೆ 1009 ಹೆಣ್ಣು ಮಕ್ಕಳಿರುವ ಸಕಾರಾತ್ಮಕ ಪ್ರವೃತ್ತಿಗೆ, ಈ ಪ್ರದೇಶದಲ್ಲಿ ಬಹುಸಂಖ್ಯೆಯಲ್ಲಿರುವ ಆದಿವಾಸಿ ಜನಸಮುದಾಯದ ಕೊಡುಗೆ ಕಾರಣ ಎಂಬಂತಹ ಹೆಚ್ಚಿನ ಸಾಮಾಜಿಕ ಅಧ್ಯಯನಗಳಿಗೆ ಪ್ರೇರಕವಾಗಬಹುದಾದ ಅಂಶಗಳನ್ನೂ, ಈ ಕೃತಿಯಲ್ಲಿ ಚರ್ಚಿಸಲಾಗಿದೆ.

ಇಲ್ಲಿ ದಾಖಲಾಗಿರುವ ಮಂಡ್ಯ ಜಿಲ್ಲೆಯ ಏಳೂ ತಾಲ್ಲೂಕುಗಳಲ್ಲಿ ನಡೆದಿರುವ ಹೆಣ್ಣು ಭ್ರೂಣಹತ್ಯೆಗಳ ವೈವಿಧ್ಯಮಯ ಪ್ರಕರಣಗಳು ಮತ್ತು ಪುತ್ರವ್ಯಾಮೋಹದ ನೈಜ ಕಥೆಗಳು ಬೆಚ್ಚಿ ಬೀಳಿಸುವಂತಿವೆ. ಹೆಣ್ಣು ಭ್ರೂಣಹತ್ಯೆ ಪಿಡುಗಾಗಿ ಬೆಳೆಯುತ್ತಿರುವುದಕ್ಕೆ ತಂತ್ರಜ್ಞಾನದ ಕೊಡುಗೆಗಳು, ನರ್ಸಿಂಗ್ ಹೋಮ್ ಗಳ ಪಾತ್ರ, ಕಾನೂನಿನ ಮಿತಿ ಹಾಗೂ ಈ ಪಿಡುಗಿನ ವಿರುದ್ಧ ನಡೆಯುತ್ತಿರುವ ಹೋರಾಟಗಳ ಚಿತ್ರಣವನ್ನೂ ಈ ಕೃತಿ ಕಟ್ಟಿ ಕೊಟ್ಟಿದೆ.

ಕಳೆದ ಎರಡೂವರೆ ದಶಕಗಳಲ್ಲಿ ಆಧುನಿಕ ಭಾರತದ ಪಿಡುಗಾಗಿ ಹೆಣ್ಣು ಭ್ರೂಣ ಹತ್ಯೆ ಬೆಳೆದ ಬಗೆಯ ಅವಲೋಕನ ಇಲ್ಲಿದೆ. ಜಾಗತಿಕ ನೋಟದಿಂದ ಹಿಡಿದು ಭಾರತದಲ್ಲಿ ಇದು ಆವರಿಸಿದ ರೀತಿಯ ಹಿನ್ನೋಟವೂ ಇದೆ. `ಇಂದಿಗೂ ಈ ಪಿಡುಗಿನ ವಿರುದ್ಧ ಇರುವ ಪಿಸಿ ಹಾಗೂ ಪಿಎನ್ಡಿಟಿ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ. ದೇಶದ ಉದ್ದಕ್ಕೆ ಹೆಣ್ಣು ಭ್ರೂಣಹತ್ಯೆಯ ಪ್ರಕರಣಗಳನ್ನು ಕಾನೂನಿನ ಅಡಿಯಲ್ಲಿ ದಾಖಲಿಸಿಕೊಂಡು ಸರಿಯಾದ ಕ್ರಮದಲ್ಲಿ ವಿಚಾರಣೆ ನಡೆಸಿದ ಒಬ್ಬ ಜಿಲ್ಲಾ ಆರೋಗ್ಯ ಅಧಿಕಾರಿಯೂ ನಮಗೆ ನೋಡಲು ಸಿಗುವುದಿಲ್ಲ. ಈ ಕಾಯ್ದೆಯ ಅಡಿಯಲ್ಲೆ ಹೆಣ್ಣು ಭ್ರೂಣ ಹತ್ಯೆಗಳು ಅಬಾಧಿತವಾಗಿ ನಡೆಯುತ್ತಲೇ ಇವೆ. (ಪುಟ 101) ಎಂದು ಹೇಳುವ ಈ ಪುಸ್ತಕ ಹೆಣ್ಣು ಮಗುವಿನ ಉಳಿವಿನ ಬಗ್ಗೆ ಚಿಂತನೆಗೆ ಪ್ರೇರೇಪಿಸುತ್ತದೆ.

ಶೀರ್ಷಿಕೆ: ಒಡಲ ತುಡಿತಕ್ಕೆ ಕೇಡು  ಲೇಖಕರು: ಮಂಜುನಾಥ ಅದ್ದೆ  ಪ್ರಕಾಶಕರು: ಸ್ತ್ರೀಲೇಖ ಪ್ರಕಟಣೆ  ಪುಟಗಳು:126 ಬೆಲೆ:ರೂ.150/-
ಕೃಪೆ : ಪ್ರಜಾವಾಣಿ


ತಲಪರಿಗೆ – ವಿಶಿಷ್ಟ ಪಾರಂಪರಿಕ ಜಲನಿಧಿ

ಕನ್ನಡದಲ್ಲಿ ಇದು ತಲಪರಿಗೆ( ಹಾಗೆಂದರೇನು ಎಂದು ಕೇಳಬೇಡಿ!) ಕುರಿತ ಮೊದಲ ಪುಸ್ತಕ ಎಂಬ ಹೆಚ್ಚುಗಾರಿಕೆ ಇದಕ್ಕಿದೆ. ಇಂಬು ಕೊಡುವಂತೆ `ಹನಿಗೂಡಿಸೋಣಖ್ಯಾತಿಯ `ಮಳೆಶ್ರೀಪಡ್ರೆ `ತಲಪರಿಕೆಗಳ ಅದ್ಭುತ ಪ್ರಪಂಚದ ಬಾಗಿಲು ನನ್ನೆದುರು ತೆರೆದದ್ದು ತಿಂಗಳುಗಳ ಈಚೆಗೆ. ಇಷ್ಟರಲ್ಲೇ ಅವು ನನ್ನನ್ನು ನಿಬ್ಬೆರಗಾಗಿಸಿವೆ.

ಈಗ ಧೈರ್ಯವಾಗಿ ಹೇಳಬಲ್ಲೆ, ಈ ಜಲನಿಧಿಗಳು ತುಮಕೂರಿಗೆ ಮಾತ್ರವಲ್ಲ, ರಾಜ್ಯಕ್ಕೆ, ದೇಶಕ್ಕೇ ಅಭಿಮಾನಎಂದು ಉದ್ಗರಿಸಿದ್ದಾರೆ. (ವಿಷಯ ಕುರಿತು ಶುದ್ಧಾಂಗ ಅಜ್ಞಾನ ಹೊಂದಿರುವವರಿಗಾಗಿ ಈ ಟಿಪ್ : ತಲಪರಿಗೆಗಳು ತುಮಕೂರು ಜಿಲ್ಲೆಯಲ್ಲಿ ಕಂಡುಬರುವ ಅತ್ಯಂತ ವಿಶಿಷ್ಟ ಪಾರಂಪರಿಕ ಜಲಮೂಲಗಳು. ಕೋಲಾರ, ಚಿತ್ರದುರ್ಗ, ಬಳ್ಳಾರಿಯ ಕೆಲಭಾಗಗಳಲ್ಲೂ ಇವೆ. ಸಮುದಾಯ ಆಧರಿತವಾದ ಇವು ಶತಮಾನಗಳ ಕಾಲ ಕೃಷಿ ಮತ್ತು ಕುಡಿಯುವ ನೀರಿನ ಆಸರೆಗಳಾಗಿದ್ದವು.)

ಪಾರಂಪರಿಕ ಜಲಮೂಲಗಳನ್ನು ಮರೆಸಿದ ಕೊಳವೆ ಬಾವಿ ಆವಿಷ್ಕಾರವೇ ತಲಪರಿಗೆಗಳನ್ನೂ ಹಿನ್ನೆಲೆಗೆ ಸರಿಸಿತು ಎಂದು ಅಭಿಪ್ರಾಯಪಡುವ ಅವರು ಅವುಗಳ ಪುನರುಜ್ಜೀವನ ಬಹಳ ಉತ್ತಮ ಆಯ್ಕೆ ಎಂದು ತಿಳಿಸಿದ್ದಾರೆ. ವಿಸ್ತಾರವಾದ ಕ್ಷೇತ್ರಕಾರ್ಯ ಹಾಗೂ ಕಾರ್ಯಾಗಾರ ಈ ಪುಸ್ತಕದ ಬೆನ್ನಿಗಿದೆ.

`ಎಳನೀರಿನ ಕೊಡ ತಲಪರಿಗೆ‘, `ಬಯಲು ಸೀಮೆಯ ಜಲನಿಧಿ‘, `ಜೀವ ವೈವಿಧ್ಯದ ತಾಣ‘, `ತಲಪರಿಗೆ ವ್ಯವಸ್ಥೆಯ ಸಮಸ್ಯೆಗಳು‘, `ಎಂದೂ ಬತ್ತದ ತಲಪರಿಗೆಗಳುಮುಂತಾದ ಶೀರ್ಷಿಕಯಡಿ ನಾನಾ ಲೇಖಕರು ಬರೆದಿರುವ ಲೇಖನಗಳ ಅಧ್ಯಯನದ ಎಲ್ಲ ಮಗ್ಗುಲುಗಳನ್ನೂ ತೆರೆದಿಟ್ಟಿವೆ.

ಸಾಮಾಜಿಕ ಜವಾಬ್ದಾರಿ ಹೊಂದಿದ್ದೇವೆ ಎಂದು ಹೇಳಿಕೊಳ್ಳುವವರೆಲ್ಲರೂ ಅಗತ್ಯವಾಗಿ ಓದಬೇಕಾದ ಪುಸ್ತಕ.

ಶೀರ್ಷಿಕೆ: ತಲಪರಿಗೆ – ಜೀವ ಪೊರೆಯುವ ಜಲನಿಧಿ ಲೇಖಕರು: ಮಲ್ಲಿಕಾರ್ಜುನ ಹೊಸಾಪಾಳ್ಯ ಭೂಷಣ್ ಮಿಡಿಗೇಶಿ ಪ್ರಕಾಶಕರು : ಧ್ಯಾನ ಸಂಸ್ಥೆ ಪುಟಗಳು : 130 ಬೆಲೆ:ರೂ.100/-

ಕೃಪೆ : ವಿಜಯ ಕರ್ನಾಟಕ