ಯಾವ ಆಶೋತ್ತರಗಳು ಮತ್ತು ಪ್ರಶ್ನೆಗಳು ಈ ಚುನಾವಣೆಯಲ್ಲಿ ಮಹತ್ವ ಪಡೆಯಬೇಕಾಗಿದೆ

ಕರ್ನಾಟಕದ ಹದಿನಾರನೇ ವಿಧಾನಸಭೆಯನ್ನು ಆರಿಸುವ ಪ್ರಕ್ರಿಯೆ ಆರಂಭವಾಗಿದೆ. ೧೫ನೇ ವಿಧಾನಸಭೆಯಲ್ಲಿ ಜನಾದೇಶವನ್ನು ಬದಿಗೊತ್ತಿ, ಸರಕಾರಗಳು ರಚನೆಗೊಂಡ ರೀತಿ, ಮತ್ತು ಅದಕ್ಕೆ ತಕ್ಕಂತೆ ಕಳೆದ ಐದು ವರ್ಷಗಳ ಆಳ್ವಿಕೆಯ ಒಟ್ಟು ಸ್ವರೂಪ ಪ್ರಜಾಪ್ರಭುತ್ವವಾದಿಗಳ ವಿಶ್ವಾಸದ ಬುಡವನ್ನೇ ಅಲುಗಾಡಿಸುವಂತಿತ್ತು. ಈಗ ಮತ್ತೆ ಚುನಾವಣಾ ಪ್ರಕ್ರಿಯೆಯಲ್ಲೂ ಅದೇ ಪ್ರವೃತ್ತಿ ಕಾಣಬರುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಮೂಲತತ್ವವಾದ ಪ್ರಜೆಯೇ ಅಥವ ಜನತೆಯೇ ಸಾರ್ವಭೌಮ ಎಂಬುದನ್ನು ಮತ್ತೆ ಮುನ್ನೆಲೆಗೆ ತರುವುದು ಹೇಗೆ, ಜನರ ಪ್ರಶ್ನೆಗಳು, ಆಶೋತ್ತರಗಳು ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ಪ್ರಧಾನ ಪಾತ್ರ ವಹಿಸುವಂತೆ ಮಾಡುವುದು ಹೇಗೆ ಎಂದು ರಾಜ್ಯದಲ್ಲಿ ಹಲವಾರು ನಾಗರಿಕ ಗುಂಪುಗಳು ಗಂಭೀರವಾಗಿ ಯೋಚಿಸುತ್ತಿರುವುದು ಭರವಸೆ ಮೂಡಿಸುತ್ತಿರುವ ಸಂಗತಿ.

ಕರ್ನಾಟಕದ ಪ್ರಮುಖ ಜನವಿಭಾಗಗಳ ಯಾವ ಆಶೋತ್ತರಗಳು ಮತ್ತು ಪ್ರಶ್ನೆಗಳು ಈ ಚುನಾವಣೆಯಲ್ಲಿ ಮಹತ್ವ ಪಡೆಯಬೇಕಾಗಿದೆ ಎಂದು ಈ ಪುಸ್ತಕದಲ್ಲಿರುವ ಲೇಖನಗಳಲ್ಲಿ ಆಯಾಯ ಕ್ಷೇತ್ರಗಳ/ಜನವಿಭಾಗಗಳ ಪ್ರಣಾಳಿಕೆಯ ರೂಪದಲ್ಲಿ ಮುಂದಿಟ್ಟಿದ್ದಾರೆ. ಇವುಗಳಲ್ಲಿ `ವಾರ್ತಾ ಭಾರತಿ’ಯಲ್ಲಿ ಈಗಾಗಲೇ ಪ್ರಕಟವಾದದ್ದದ್ದು ಮಾತ್ರವಲ್ಲದೇ ಇನ್ನೂ ಕೆಲವು ಲೇಖನಗಳಿವೆ.

ಇದು ರಾಜ್ಯದ ಪ್ರಜಾಪ್ರಭುತ್ವವನ್ನು ಸರಿದಾರಿಗೆ ತರುವ ಪ್ರಯತ್ನದಲ್ಲಿರುವ ಕರ್ನಾಟಕದ ಪ್ರಜ್ಞಾಶೀಲ ಮತದಾರರಿಗೆ ವಿಶೇಷ ಕೊಡುಗೆ ಎಂದೇ ಹೇಳಬಹುದು.

ಶೀರ್ಷಿಕೆ : ಜನಪ್ರಣಾಳಿಕೆ 2023; ಪ್ರಕಾಶಕರು: ಕ್ರಿಯಾ ಮಾಧ್ಯಮ; ಪ್ರಕಟಣಾ ವರ್ಷ:2023; ಲೇಖಕರು: ನಾಡಿನ ಒಬ್ಬ ಪ್ರಮುಖ ಅರ್ಥಶಾಸ್ತçಜ್ಞ ಪ್ರೊ. ಟಿ.ಆರ್.ಚಂದ್ರಶೇಖರ್, ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿದ್ದ  ಕೃಷಿ ಆರ್ಥಿಕ ತಜ್ಞ ಡಾ. ಪ್ರಕಾಶ ಕಮ್ಮರಡಿ, ಸಾಂಸ್ಕೃತಿಕ ಚಿಂತಕ ಡಾ.ಪುರುಷೋತ್ತಮ ಬಿಳಿಮಲೆ ಮುಂತಾದವರು. ಪುಟಗಳ ಸಂಖ್ಯೆ:100 ಬೆಲೆ:ರೂ.80/-

ಏಂಗೆಲ್ಸ್ ಚಿಂತನೆಯ ಬೆಳಕಿನಲ್ಲಿ ಮಹಿಳಾ ವಿಮೋಚನೆ ಚರ್ಚಾಗೋಷ್ಟಿಯಲ್ಲಿ ಪುಸ್ತಕ ಬಿಡುಗಡೆ ಏಂಗೆಲ್ಸ್ 200 ಪುಸ್ತಕ ಸರಣಿಯ ಪುಸ್ತಕ ಕುಟುಂಬ ಖಾಸಗಿ ಆಸ್ತಿ ಮತ್ತು ಪ್ರಭುತ್ವ ಇವುಗಳ ಉಗಮ

ಬಿಎಂಶ್ರೀ ಪ್ರತಿಷ್ಠಾನದಲ್ಲಿ ನಡೆಯುವ ಚರ್ಚಾಗೋಷ್ಟಿಯಲ್ಲಿ (zoom link ಮೂಲಕವಾದರೂ)

ಭಾಗವಹಿಸಿ

ಈ ಪುಸ್ತಕದ ಬಗ್ಗೆ ಮಹಿಳಾ ಹೋರಾಟಗಾರ್ತಿ, ಲೇಖಕಿ, ಚಿಂತಕಿ ಡಾ. ಎನ್. ಗಾಯತ್ರಿ ಅವರ ಅಭಿಪ್ರಾಯ ಇದು.

ಜಗತ್ತು ಸ್ವೀಕರಿಸಿದ ಮಾರ್ಕ್ಸ್ ವಾದವೆಂಬ ವಿಶಿಷ್ಟ ಲೋಕದೃಷ್ಟಿಗೆ ಕಾರಣಕರ್ತರಾದ ಜೋಡಿ ಪ್ರತಿಭೆಗಳು ಮಾರ್ಕ್ಸ್ ಮತ್ತು ಏಂಗೆಲ್ಸ್. ಇವರಲ್ಲಿ ಏಂಗೆಲ್ಸ್ ಬರೆದ ಕುಟುಂಬ, ಖಾಸಗಿ ಆಸ್ತಿ ಮತ್ತು ಪ್ರಭುತ್ವಗಳ ಉಗಮ – ಇಡೀ ವಿಶ್ವದ ಮೇಲೆ ಬಹುಮುಖ್ಯ ಪ್ರಭಾವ ಮತ್ತು ಪರಿಣಾಮವನ್ನು ಬೀರಿದ ಕೃತಿ. ಈ ಕೃತಿ ಪ್ರಕಟವಾದಂದಿನಿಂದ ಇಲ್ಲಿಯವರೆಗೆ ಜಗತ್ತಿನ ಜ್ಞಾನ ಪ್ರಪಂಚಕ್ಕೆ ವಿಸ್ತಾರವನ್ನು, ವೈಶಾಲ್ಯತೆಯನ್ನು ನೀಡುತ್ತಲೇ ಬಂದಿದೆ. 1884ರಲ್ಲಿ ಏಂಗೆಲ್ಸ್ ತಮ್ಮ ಮೌಲಿಕ ಕೃತಿಯಾದ `ಕುಟುಂಬ, ಖಾಸಗಿ ಆಸ್ತಿ ಮತ್ತು ಪ್ರಭುತ್ವಗಳ ಉಗಮ’ ಕೃತಿಯನ್ನು ರಚಿಸಿದರು. ಮಾನವ ಜನಾಂಗದ ಪ್ರಾಗೈತಿಹಾಸಿಕ ಕಾಲದ ಜೀವನ ವಿಧಾನವನ್ನು ತೆರೆದಿಡುವ ಈ ಗ್ರಂಥವು ಗ್ರೀಸ್, ಐರ್ಲೆಂಡ್ ಮತ್ತು ಜರ್ಮನಿಯ ಪ್ರಾಚೀನ ಸಮಾಜಗಳ ಪರಿಚಯ ಮಾಡಿಕೊಡುತ್ತದೆ. ಆರಂಭಿಕ ಹಂತದ ಸಾಮ್ಯತೆಯ ಸಮಾಜ, ಇವುಗಳ ನಿರ್ದಿಷ್ಟ ಸ್ವರೂಪವನ್ನು ಚರ್ಚಿಸುತ್ತಾ ಕುಟುಂಬದ ಉಗಮವನ್ನು ಏಂಗೆಲ್ಸ್ ಗುರುತಿಸುತ್ತಾರೆ. ಕ್ರಮೇಣ ಬೆಳೆದು ಬಂದ ಸಾಮಾಜಿಕ-ಆರ್ಥಿಕ ಸಂರಚನೆಗಳು ಸಮಾಜವನ್ನು ಒಂದು ಹಂತದಿಂದ ಇನ್ನೊಂದಕ್ಕೆ ಕೊಂಡೊಯ್ಯುತ್ತಿದ್ದಂತೆ ಕುಟುಂಬ, ಖಾಸಗಿ ಆಸ್ತಿಯನ್ನು ಆಧರಿಸಿದ ವರ್ಗ ಸಮಾಜ ಮತ್ತು ಪ್ರಭುತ್ವ ಹುಟ್ಟಿಕೊಳ್ಳುತ್ತವೆ. ಈ ಮೂರು ಘಟಕಗಳಿಗೂ ಇರುವ ಪರಸ್ಪರ ಸಂಬಂಧಗಳನ್ನು ಅರ್ಥಮಾಡಿಕೊಂಡರಷ್ಟೇ ದಮನದ ಸ್ವರೂಪ ಮತ್ತು ಕಾರಣಗಳು ಸ್ಪಷ್ಟವಾಗುತ್ತವೆ.


ಕಾಡು ಮನುಷ್ಯನ ಕಾಲದಿಂದ ನಾಗರಿಕ ಪೂರ್ವ, ನಾಗರಿಕ ಹಂತದ ಕಾಲದವರೆಗೆ ಸಾಗಿರುವ ಮನುಷ್ಯನ ವಿಕಾಸವನ್ನು ಚರ್ಚಿಸುತ್ತ ಮಾನವ ಸಂಸ್ಕೃತಿಯ ಇತಿಹಾಸವನ್ನು ಈ ಕೃತಿ ಬಿಚ್ಚಿಡುತ್ತದೆ. ಸಮಾಜದಲ್ಲಿ ಗಂಡು-ಹೆಣ್ಣಿನ ನಡುವಿನ ಲೈಂಗಿಕ ಸಂಬಂಧಗಳಲ್ಲಿ ಉಂಟಾದ ಬದಲಾವಣೆ ಈ ಚರಿತ್ರೆಯ ಭಾಗವಾಗಿದೆ. ವಿಶ್ವದ ಹಲವಾರು ಸಮಾಜಗಳಲ್ಲಿ ಕಂಡು ಬಂದ ಬಹುಪತ್ನಿತ್ವ, ಬಹುಪತಿತ್ವದಿಂದ ಏಕಪತಿ-ಪತ್ನಿತ್ವದವರೆಗೆ ಸಾಗಿದ ಸಮಾಜದಲ್ಲಿ ಯಾರು ಯಾರನ್ನು ಮದುವೆಯಾಗುತ್ತಿದ್ದರು, ಎನ್ನುವ ವಿವರಗಳು, ಗೋತ್ರ ವ್ಯವಸ್ಥೆ ಬೆಳೆದು ಬಂದ ರೀತಿ ಮುಂತಾದ ವಿಷಯಗಳನ್ನು ಈ ಕೃತಿ ಸುದೀರ್ಘವಾಗಿ ಚರ್ಚಿಸುತ್ತದೆ. ಗಂಡು-ಹೆಣ್ಣು ಇಬ್ಬರೂ ಸೇರಿ ಕೂಡಿಸುತ್ತಿದ್ದ ಕುಟುಂಬದ ಸಂಪತ್ತು ಗಂಡಸಿನ ಪಾಲಾದದ್ದು ಹೇಗೆ, ವಂಶಾವಳಿಯು ತಾಯಿ ಮತ್ತು ತಂದೆಯ ಮೂಲಕ ಹರಿದು ಬಂದ ವಿನ್ಯಾಸವನ್ನು ಕೂಡ ಚರ್ಚಿಸಲಾಗಿದೆ. ಉತ್ಪಾದನಾ ಶಕ್ತಿಯಲ್ಲಾದ ಬದಲಾವಣೆ ಶ್ರಮ ವಿಭಜನೆಯನ್ನು ಹುಟ್ಟಿ ಹಾಕಿದ್ದು ಮತ್ತು ಅದರಿಂದ ಉಂಟಾದ ವರ್ಗಗಳ ವಿಭಜನೆಯಲ್ಲಿ ಮಹಿಳೆ ಬಹುಮುಖ್ಯ ಶೋಷಿತಳಾದಳು, ಎನ್ನುವುದನ್ನು ಇಲ್ಲಿ ನೋಡಬಹುದು. ಇಂದು ನಾವು ಕಾಣುವ ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗ, ಪೊಲೀಸ್, ಸೈನಿಕರು – ಎಲ್ಲವುಗಳ ಆವಿರ್ಭಾವಕ್ಕೂ ಒಂದು ಚರಿತ್ರೆಯಿದೆಯೆಂಬುದರ ಪ್ರಾಥಮಿಕ ತಿಳುವಳಿಕೆಯನ್ನು ಮತ್ತು ಅದರ ಬದಲಾವಣೆಯ ಪ್ರಕ್ರಿಯೆಯನ್ನು ಈ ಕೃತಿ ಸಾದರಪಡಿಸುತ್ತದೆ.

ಇಂದು ನಮ್ಮೆಲ್ಲರ ಬದುಕು ಸಂಕಷ್ಟದಲ್ಲಿದೆ. ಸಮಷ್ಠಿ ಹಿತವು ಗೌಣವಾಗಿ, ವ್ಯಕ್ತಿಹಿತವು ಮೇಲುಗೈಯ್ಯಾಗಿ, ಹಿರಿದು ತಿನ್ನುವುದೇ ಈ ಯುಗದ ಮೌಲ್ಯವಾಗಿರುವ ಸಂದರ್ಭದಲ್ಲಿ ‘ಹೆಣ್ಣು’ ತನ್ನ ಅಸ್ಮಿತೆಯನ್ನು ಕಳೆದುಕೊಂಡು ಭೋಗದ ವಸ್ತುವಾಗಿದ್ದಾಳೆ; ಪುರುಷನ ಆಸ್ತಿಯಾಗಿ, ಕೌಟುಂಬಿಕ ದೌರ್ಜನ್ಯದ ಸುಳಿಯಲ್ಲಿ ಸಿಕ್ಕಿಕೊಂಡಿದ್ದಾಳೆ. ಕುಟುಂಬದೊಳಗಿನ ಅಧಿಕಾರದ ಅಸಮತೋಲನ ಸಂಬಂಧಗಳು, ಆಸ್ತಿರಹಿತ ಹೆಣ್ಣಿನ ನೋವಿಗೆ ಕಾರಣವಾಗಿವೆ. ವಿವಾಹದ ಚೌಕಟ್ಟು ವಿಸ್ತರಿಸಿದೆ. ವಿಭಿನ್ನ ಲಿಂಗಗಳ ಪರಿಕಲ್ಪನೆ ಬದಲಾಗಿದೆ. ಸಲಿಂಗಿಗಳು ಮತ್ತು ತೃತೀಯ ಲಿಂಗಿಗಳ ಜೀವನ ವಿನ್ಯಾಸಗಳು ನಮ್ಮ ಕಣ್ಣ ಮುಂದಿದೆ. ಈ ಎಲ್ಲ ಅಂಶಗಳನ್ನು ಪ್ರತಿಫಲಿಸುವ ಮತ್ತು ನಿಯಂತ್ರಿಸುವ ಪುರುಷಾಧಿಪತ್ಯದ ಪ್ರಭುತ್ವ, ಸಮಾನತೆಯ ಮಾನವೀಯ ಸಮಾಜವನ್ನು ಕನಸಿನ ಗಂಟಾಗಿಸಿದೆ. ಏಕ ಸಂಸ್ಕೃತಿಯ ದಂಡವನ್ನು ಬಹುಜನರ ಮೇಲೆ ಹೇರಲಾಗುತ್ತಿರುವ ಇಂದಿನ ಭಾರತದ ಸಂದರ್ಭದಲ್ಲಿಯಂತೂ ‘ಸಂಸ್ಕೃತಿ’ಯ ಅಪವ್ಯಾಖ್ಯಾನ ಅಮಾನುಷವಾಗಿ ನಡೆದಿದೆ. ಸಂಸ್ಕೃತಿಯೆಂಬುದು ನಿಂತ ನೀರಲ್ಲ, ಅದು ಕಾಲದ ಪ್ರವಾಹದಲ್ಲಿ ಹಲವಾರು ಸ್ಥಿತ್ಯಂತರ ಹೊಂದಿ ಬದಲಾಗಿದೆ ಮತ್ತು ಅದನ್ನು ಗಮನಿಸಿ, ಗುರುತಿಸಿದಾಗ ಮಾತ್ರ ಸಮಾಜದ ಅನಿಷ್ಟಗಳ ವಿರುದ್ಧ ಹೋರಾಡಲು ಸಾಧ್ಯ, ಎಂಬ ತಿಳುವಳಿಕೆಯ ಅಗತ್ಯ ಜರೂರಾಗಿ ಬೇಕಿದೆ. ಇಂತಹ ಅರಿವನ್ನು ಉಂಟು ಮಾಡುವ ಏಂಗೆಲ್ಸ್ ರ `ಕುಟುಂಬ, ಖಾಸಗಿ ಆಸ್ತಿ ಮತ್ತು ಪ್ರಭುತ್ವ’ ಕೃತಿಯ ಓದು ಇಂದಿನ ವರ್ತಮಾನದ ಅಗತ್ಯವೂ ಹೌದು.


ಕುಟುಂಬ ಸಮಾಜದ ಅತಿ ಮುಖ್ಯ ಘಟಕ. ಅದು ಹೆಣ್ಣಿನ ವಿಷಯದಲ್ಲಿ ಬಹು ಮುಖ್ಯ ಶೋಷಕ ಯಂತ್ರವಾಗಿದೆ. ಹೆಣ್ಣು ತನ್ನ ಶೋಷಣೆಯ ವಿರುದ್ಧ ಹೋರಾಡಲು ಅದರ ಚರಿತ್ರೆಯನ್ನು ಅರ್ಥಮಾಡಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಶೋಷಣೆಯ ಚರಿತ್ರೆಯನ್ನು ವಿವರಿಸುವ ಈ ಕೃತಿ ತಮ್ಮ ದಮನದ ವಿರುದ್ಧ ಹೋರಾಟದಲ್ಲಿ ತೊಡಗಿರುವ ಎಲ್ಲರಿಗೂ ಕೈ ದೀವಿಗೆಯಾಗಿದೆ.


ಇದರ ಕನ್ನಡ ಅನುವಾದಗಳು ಈಗಾಗಲೇ ಒಂದೆರಡು ಬಂದಿದ್ದರೂ, ಈ ಅನುವಾದ ಅತ್ಯಂತ ಸರಳವಾದ ಭಾಷೆಯಲ್ಲಿ ಓದಲು ಮತ್ತು ತಿಳಿಯಲು ಅನುಕೂಲಕರವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪುಸ್ತಕದ ಮೊದಲಿಗೆ, ಅನುವಾದಕಿಯು ಬರೆದಿರುವ ದೀರ್ಘ ಮುನ್ನುಡಿಯು ಪುಸ್ತಕದ ಸಾರ ಸರ್ವಸ್ವವನ್ನು ಒಂದೆಡೆ ಹಿಡಿದಿಟ್ಟಿದೆ. ನಾಲ್ಕು ದಶಕಗಳಿಂದ ಕರ್ನಾಟಕದ ಮಹಿಳಾ ಚಳುವಳಿಯಲ್ಲಿ ತೊಡಗಿಕೊಂಡಿರುವ ಜಯಲಕ್ಷ್ಮಿಯವರು ಈ ಕೃತಿಯ ಪ್ರಸ್ತುತತೆಯನ್ನು ಇಂದಿನ ನಮ್ಮ ದೇಶದ ಪರಿಸ್ಥಿತಿಯ ಹಿನ್ನೆಲೆಯಲ್ಲಿಟ್ಟು ವಿವರಿಸಿದ್ದಾರೆ. ಅದಕ್ಕಾಗಿ ಅನುವಾದಕಿಯು ಅಭಿನಂದನಾರ್ಹರು. ಇಂತಹ ಅಗತ್ಯವಾದ ಪುಸ್ತಕದ ಯೋಜನೆಯನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿರಿಸಿರುವ ನವಕರ್ನಾಟಕ ಪ್ರಕಾಶನ ಮತ್ತು ಕ್ರಿಯಾ ಮಾಧ್ಯಮದವರಿಗೆ ಮನಃಪೂರ್ವಕ ವಂದನೆಗಳು.

ಡಾ. ಎನ್. ಗಾಯತ್ರಿ

ಪುಸ್ತಕ ಬಿಡುಗಡೆ – ಏಂಗೆಲ್ಸ್ 200 ಪುಸ್ತಕ ಸರಣಿಯ ಪುಸ್ತಕ ಜರ್ಮನ್ ರೈತಯುದ್ಧ (1524-25)

1524-25ರ ಜರ್ಮನ್ ರೈತ ಯುದ್ಧ 1789ರ ಫ್ರೆಂಚ್ ಕ್ರಾಂತಿಯ ಮೊದಲು ನಡೆದ ಅತ್ಯಂತ ದೊಡ್ಡ ಕ್ರಾಂತಿಕಾರಿ ಹೋರಾಟ. ಇತರ ಹಲವು ಅಂಶಗಳ ಜತೆಗೆ ಲೂಥರ್ ಮಂಡಿಸಿದ ಧಾರ್ಮಿಕ ಸುಧಾರಣೆಗಳ ಹಿನ್ನೆಲೆಯಲ್ಲಿ ಬೆಳೆದು ಬಂದ ಇದು, ಹಲವು ತಿಂಗಳ ಕಾಲ ಮಧ್ಯ ಯುರೋಪಿನ ಈಗಿನ ಜರ್ಮನಿ, ನೆದರ್ ಲ್ಯಾಂಡ್ಸ್ ಗಳ ಬಹುಭಾಗಗಳನ್ನು ಆವರಿಸಿ ಬೃಹತ್ ರೈತ ಯುದ್ಧವಾಗಿತ್ತು.

ಈ ಚಳುವಳಿಯ ಆರಂಭದಲ್ಲೇ ರೂಪಿತವಾಗಿದ್ದ “ರೈತರ ಹನ್ನೆರಡು ಕಟ್ಟಳೆಗಳ” ಜಾರಿಗಾಗಿ ಈ ಯುದ್ಧ ಸಾರಲಾಯಿತು.  ಇದು ರೈತ ಯುದ್ಧ ಹೂಡಿದ ರೈತ ಸಂಘಟನೆಗಳ ಒಕ್ಕೂಟದ ಪ್ರಣಾಳಿಕೆ, ಸಂವಿಧಾನ, ಹಕ್ಕೊತ್ತಾಯಗಳ ಪಟ್ಟಿ, ಗೆದ್ದರೆ ಮುಂಬರುವ ಆಡಳಿತದ ಕಾರ್ಯಸೂಚಿ – ಇವೆಲ್ಲವೂ ಆಗಿತ್ತು. ಇದನ್ನು ಮೊದಲ ಮಾನವ ಹಕ್ಕುಗಳ ಘೋಷಣೆ ಎಂದೂ ಪರಿಗಣಿಸಲಾಗಿದೆ..

ಈ ಯುದ್ಧದಲ್ಲಿ ಸಶಸ್ತ್ರವಾಗಿ ಭಾಗವಹಿಸಿದ ರೈತರ ಸಂಖ್ಯೆ 3 ಲಕ್ಷವನ್ನು ಮೀರಿತ್ತು. ಈ ಯುದ್ಧದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ರೈತರು ಬಲಿಯಾದರು. ಈ ಚಾರಿತ್ರಿಕ ರೈತರ ಯುದ್ಧ ಸೋತರೂ  ಯುರೋಪಿನಲ್ಲೂ ಜಾಗತಿಕವಾಗಿಯೂ ಹಲವು ಸ್ಥಿತ್ಯಂತರಗಳ ಮುನ್ನುಡಿ ಬರೆಯಿತು. ಇಂದಿನವರೆಗೂ ಎಲ್ಲ ರೈತ ಯುದ್ಧಗಳಿಗೆ ಸ್ಫೂರ್ತಿಯ ಚಿಲುಮೆಯಾಗಿದೆ. ಪಾಳೆಯಗಾರಿ ವ್ಯವಸ್ಥೆಯ ವಿರುದ್ಧ ಬಂಡಾಯದ ಪ್ರತೀಕವಾಗಿದೆ.

ಹೆಚ್ಚಿನ ರೈತ ಸಂಬಂಧಿ ಪ್ರಶ್ನೆಗಳನ್ನು ಮೊದಲ ಬಾರಿಗೆ ಅಂದಿನ ಸಂದರ್ಭದಲ್ಲಿ ಎತ್ತಿ ಉತ್ತರಿಸಲು ಪ್ರಯತ್ನಿಸಿದ, ಈ ಕೃತಿ ಇಂದಿಗೂ ಅತ್ಯಂತ ಪ್ರಸ್ತುತ. ಇದು ಏಂಗೆಲ್ಸ್ ಅವರು ಗತಿತಾರ್ಕಿಕ ಭೌತವಾದವನ್ನು ಚರಿತ್ರೆಗೆ ಅನ್ವಯಿಸಿದ ಆರಂಭಿಕ ಪ್ರಯತ್ನಗಳಲ್ಲಿ ಒಂದಾಗಿದ್ದು, ಈ ವಿಧಾನ ಇತರ ಚಾರಿತ್ರಿಕ ವಿದ್ಯಮಾನಗಳ ಸಮಗ್ರ ಅರ್ಥೈಸುವಿಕೆಗೆ ಒಂದು ಮಾದರಿಯನ್ನು ಒದಗಿಸುತ್ತದೆ. ಕ್ರಿಯಾ ಮಾಧ್ಯಮ ಮತ್ತು ನವಕರ್ನಾಟಕ ಜಂಟಿಯಾಗಿ ಹಮ್ಮಿಕೊಂಡಿರುವ ಏಂಗೆಲ್ಸ್-200 ಮಾಲಿಕೆಯ ಈ ಪುಸ್ತಕದ ಬಿಡುಗಡೆಯನ್ನು ಸೆಪ್ಟೆಂಬರ್ 21 (ಬುಧವಾರ) ಸಂಜೆ 5 ಗಂಟೆ ಗೆ ಬಸವನಗುಡಿಯ ಹೊಸ ಕ್ರಿಯಾ ಮಾಧ್ಯಮ ಪುಸ್ತಕ ಮಳಿಗೆ ಯಲ್ಲಿ ಹಮ್ಮಿ ಕೊಂಡಿದೆ. ಚಿಂತಕ ಜಿ.ಎನ್.ನಾಗರಾಜ್ ಈ ಪುಸ್ತಕವನ್ನು ಬಿಡುಗಡೆ ಮಾಡಿ, “ಜರ್ಮನ್ ರೈತ ಯುದ್ಧ ದ ಮರು-ಓದು : ಜನರ ಸಂಕಟಗಳು, ಚಳುವಳಿಗಳು ಮತ್ತು ಧಾರ್ಮಿಕ ರೂಪಗಳು” ಎಂಬ ವಿಷಯದ ಕುರಿತು  ಉಪನ್ಯಾಸ ನೀಡಿ ಸಂವಾದಕ್ಕೆ ಚಾಲನೆ ನೀಡಲಿದ್ದಾರೆ. ಆ ನಂತರ ಇದೇ ವಿಷಯದ ಮೇಲೆ ನಡೆಯಲಿರುವ ಸಂವಾದದಲ್ಲಿ. ರಾಘವೇಂದ್ರ ಕುಷ್ಟಗಿ ಮತ್ತು ಡಾ.ಬಂಜಗೆರೆ ಜಯಪ್ರಕಾಶ್ ಭಾಗವಹಿಸಲಿದ್ದಾರೆ. ರೈತ ನಾಯಕ ನವೀನ್ ಕುಮಾರ್ ಎಚ್.ಆರ್ ಪುಸ್ತಕ ಪರಿಚಯವೂ ಮಾಡಲಿದ್ದಾರೆ.

ZOOM LINK ಮೂಲಕವೂ ಭಾಗವಹಿಸಬಹುದು Meeting Id 81808577900 Password 637705

2021ರ ಮಹಿಳಾ ದಿನವನ್ನು ಮಹಿಳಾ ರೈತ ಹೋರಾಟಗಾರರ ಸಮ್ಮಾನದಲ್ಲಿ ಆಚರಿಸೋಣ

ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಇಂದು 102 ದಿನ ತುಂಬಿತು. ಈ ಐತಿಹಾಸಿಕ ರೈತ ಹೋರಾಟದ ಸಂಯೋಜಕರು ತಮ್ಮ ಹೋರಾಟದಲ್ಲಿ ಪುರುಷ ರೈತರಷ್ಟೇ ಕಾಣಿಕೆ ಮಹಿಳಾ ರೈತರದ್ದೂ ಇದೆ ಎಂದು ಘೋಷಿಸಿದ್ದಾರೆ ಮಾತ್ರವಲ್ಲದೇ ಇಂದಿನ ದಿನವನ್ನು ಮಹಿಳಾ ರೈತರ ದಿನವಾಗಿ ಆಚರಿಸುತ್ತಿದ್ದಾರೆ.
ರೈತರ ಈ ಐತಿಹಾಸಿಕ ಹೋರಾಟವನ್ನು ದಾಖಲಿಸಿಲೆಂದೇ ಅದರಲ್ಲಿ ಭಾಗವಹಿಸಿ ಹೋರಾಟದ ಅನುಭವವನ್ನು ಕನ್ನಡಿಗರಿಗೆ ಉಣಬಡಿಸಿದ ನವೀನ್ ಕುಮಾರ್ ಅವರು ತಮ್ಮ ದಿನಚರಿ ದಾಖಲು ಮಾಡಿದ ಈ ಪುಸ್ತಕದಲ್ಲಿ ಅಲ್ಲಿಯ ಕೆಲವು ಒಳನೋಟಗಳನ್ನು ಹಿಡಿದಿಟ್ಟಿದ್ದಾರೆ. ಅವುಗಳಲ್ಲಿ ಒಂದು ಅಲ್ಲಿ ಢಾಳಾಗಿ ಕಂಡುಬರುತ್ತಿದ್ದ ಮಹಿಳಾ ಶಕ್ತಿ.
ಹಾಗಾಗಿ ನಾವು ಭಾರತೀಯ ಮಹಿಳೆಯರು 2021ರ ಮಹಿಳಾ ದಿನವನ್ನು ಮಹಿಳಾ ರೈತ ಹೋರಾಟಗಾರರ ಸಮ್ಮಾನದಲ್ಲಿ ಆಚರಿಸೋಣ.

ಶೀರ್ಷಿಕೆ : ಕದನ ಕಣ – ದೆಹಲಿ ಗಡಿಗಳಲ್ಲಿ ರೈತರೊಂದಿಗೆ ಲೇಖಕರು ಹೆಚ್. ಆರ್.ನವೀನ್ ಕುಮಾರ್ ಪ್ರಕಾಶಕರು:ಕ್ರಿಯಾ ಮಾಧ್ಯಮ ಪ್ರೈ.ಲಿ. ಬೆಲೆ:ರೂ.120/- ಪುಟಗಳು:132 ಪ್ರಕಟಣಾ ವರ್ಷ:2021

ಇಂದು `ಚೆ’ ಹತ್ಯೆಗೀಡಾದ ದಿನ

`ಚೆ’ ಯನ್ನು ನೆನಪಿಸಿಕೊಳ್ಳುವ ನಿಟ್ಟಿನಲ್ಲಿ ಅವರ `SOCIALISM AND MAN IN CUBA’ ಪುಸ್ತಕದ ಕೆಲವು ವಾಕ್ಯಗಳು ಇಲ್ಲಿವೆ

In order to develop a new culture, work must acquire a new status.14 Human beings-as-commodities cease to exist, and a system is installed that establishes a quota for the fulfillment of one’s social duty. The means of production belong to society, and the machine is merely the trench where duty is performed.
A person begins to become free from thinking of the annoying fact that one needs to work to satisfy one’s animal needs. Individuals start to see themselves reflected in their work and to understand their full stature as human beings through the object created, through the work accomplished. Work no longer entails surrendering a part of one’s being in the form of labor power sold, which no longer belongs to the individual, but becomes an expression of oneself, a contribution to the common life in which one is reflected, the fulfillment of one’s social duty.
We are doing everything possible to give work this new status as a social duty and to link it on the one hand with the development of technology, which will create the conditions for greater freedom, and on the other hand with voluntary work based on the Marxist appreciation that one truly reaches a full human condition when no longer compelled to produce by the physical necessity to sell oneself as a commodity.
Of course, there are still coercive aspects to work, even when it is voluntary. We have not transformed all the coercion that surrounds us into conditioned reflexes of a social character and, in many cases, is still produced under the pressures of one’s environment. (Fidel calls this moral compulsion.) There is still a need to undergo a complete spiritual rebirth in one’s attitude toward one’s own work, freed from the direct pressure of the social environment, though linked to it by new habits. That will be communism.
The change in consciousness does not take place automatically, just as change in the economy does not take place automatically. The alterations are slow and not rhythmic; there are periods of acceleration, periods that are slower, and even retrogressions.

ಹೊಸದೊಂದು ಸಂಸ್ಕೃತಿಯನ್ನು ಹುಟ್ಟು ಹಾಕಲು ಕೆಲಸಕ್ಕೆ ಒಂದು ಹೊಸ ಸ್ಥಾನಮಾನ ದೊರೆಯಬೇಕು. ಮಾನವ ಒಂದು ಸರಕಾಗಿ ಉಳಿಯುವುದಿಲ್ಲ. ಪ್ರತಿಯೊಬ್ಬರೂ ತಮ್ಮ ಭಾಗದ ಸಾಮಾಜಿಕ ಕರ್ತವ್ಯ ಪೂರೈಸುವಂತಹ ವ್ಯವಸ್ಥೆಯೊಂದನ್ನು ಸ್ಥಾಪಿಸಲಾಗುತ್ತದೆ. ಉತ್ಪಾದನೆಯ ಸಾಧನಗಳೆಲ್ಲವೂ ಇಡೀ ಸಮಾಜಕ್ಕೆ ಸೇರಿದವಾಗಿರುತ್ತವೆ. ಮತ್ತು ಯಂತ್ರೋಪಕರಣಗಳು ಕೇವಲ ಕರ್ತವ್ಯ ನಿರ್ವಹಿಸುವ ಕಂದಕಗಳಾಗಿರುತ್ತವೆ. ಒಬ್ಬ ಮಾನವ ತಾನು ತನ್ನ ಮೃಗೀಯ ಅಗತ್ಯಗಳನ್ನು ಪೂರೈಸಿಕೊಳ್ಳಲು ಕೆಲಸ ಮಾಡಬೇಕೆಂಬ ಜಿಗುಪ್ಸೆ ತರುವ ಆಲೋಚನೆಯಿಂದ ಮುಕ್ತನಾಗತೊಡಗುತ್ತಾನೆ. ಅವನು ತನ್ನ ಕೆಲಸದಲ್ಲಿ ತನ್ನ ಪ್ರತಿಫಲನವಾಗುವುದನ್ನು ಕಾಣತೊಡಗುತ್ತಾನೆ ಮತ್ತು ತಾನು ರಚಿಸಿದ ವಸ್ತುಗಳು ಮತ್ತು ಸಾಧಿಸಿದ ಕೆಲಸಗಳ ಮೂಲಕ ಮಾನವನಾಗಿ ತನ್ನ ಔನ್ನತ್ಯವನ್ನು ಅರಿಯತೊಡಗುತ್ತಾನೆ. ಕೆಲಸವೆಂದರೆ ತನ್ನ ಶ್ರಮ ಶಕ್ತಿಯ ಸ್ವರೂಪದಲ್ಲಿ ತನ್ನ ಅಸ್ತಿತ್ವದ ಒಂದು ಭಾಗವನ್ನು ಮಾರುವ ಕ್ರಿಯೆಯಾಗಿ ಉಳಿಯುವುದಿಲ್ಲ, ಅದು ಕೇವಲ ವ್ಯಕ್ತಿಗೆ ಸೇರಿದ್ದಾಗಿ ಉಳಿಯದೆ ಸ್ವಂತದ ಒಂದು ಅಭಿವ್ಯಕ್ತಿಯಾಗುತ್ತದೆ, ಸಮುದಾಯಿಕ ಬದುಕಿಗೆ ಒಂದು ಕಾಣಿಕೆಯಾಗುತ್ತದೆ, ಅದರಲ್ಲಿ ತನ್ನ ಪ್ರತಿಫಲನವನ್ನು, ತನ್ನ ಸಾಮಾಜಿಕ ಕರ್ತವ್ಯದ ಈಡೇರಿಕೆಯನ್ನು ಕಾಣುತ್ತಾನೆ.
ಕೆಲಸಕ್ಕೆ ಒಂದು ಸಾಮಾಜಿಕ ಕರ್ತವ್ಯದ ಹೊಸ ಸ್ಥಾನಮಾನ ನೀಡಲು ನಾವು ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ. ಒಂದೆಡೆ ಅದನ್ನು ಹೆಚ್ಚಿನ ಸ್ವಾತಂತ್ರ್ಯ ನೀಡಬಹುದಾದ ತಂತ್ರಜ್ಞಾನದೊಂದಿಗೆ ಮತ್ತು ಇನ್ನೊಂದೆಡೆ ಮಾನವ ತನ್ನನ್ನು ತಾನು ಒಂದು ಸರಕಾಗಿ ಮಾರಿಕೊಳ್ಳುವ ಭೌತಿಕ ಒತ್ತಾಯವಿಲ್ಲದೆ ಸಂಪೂರ್ಣ ಮಾನವೀಯ ಹಂತ ತಲುಪುತ್ತಾನೆ ಎಂಬ ಮಾಕ್ಸ್ ವಾದಿ ಪರಿಜ್ಞಾನವನ್ನು ಆಧರಿಸಿದ ಸ್ವಯಂಸೇವಾ ಕೆಲಸದೊಂದಿಗೆ ಬೆಸೆಯುವ ಪ್ರಯತ್ನ ನಡೆಸಿದ್ದೇವೆ. ನಿಜ, ಆಗಲೂ ಕೆಲಸ ಸ್ವಯಂಪ್ರೇರಿತವಾಗಿದ್ದಾಗಲೂ ಅದರಲ್ಲಿ ಬಲಪ್ರಯೋಗದ ಅಂಶಗಳು ಇನ್ನೂ ಇರುತ್ತವೆ. ಮಾನವ ಇನ್ನೂ ತನ್ನ ಸುತ್ತಲಿರುವ ಇಂತಹ ಎಲ್ಲಾ ಬಲವಂತವನ್ನು ಒಂದು ಸಾಮಾಜಿಕ ಸ್ವರೂಪದ ಪ್ರತಿಬಿಂಬಗಳಾಗಿ ಪರಿವರ್ತಿಸಿಲ್ಲ. ಎಷ್ಟೋ ಬಾರಿ ತನ್ನ ಪರಿಸರದ ಒತ್ತಡದಿಂದ ಕೆಲಸ ಮಾಡುತ್ತಾನೆ (ಫಿಡೆಲ್ ಇದನ್ನು ನೈತಿಕ ಅನಿವಾರ್ಯತೆಯೆಂದು ಕರೆಯುತ್ತಾರೆ). ತನ್ನ ಸ್ವಂತ ಕೆಲಸದ ವಿಚಾರವಾಗಿ ನೇರ ಒತ್ತಡಗಳು ಮತ್ತು ಸಾಮಾಜಿಕ ವಾತಾವರಣದಿಂದ ಮುಕ್ತವಾಗಿ, ಆದರೆ ಅದೇ ವೇಳೆಗೆ ಹೊಸ ರೂಢಿಗಳಿಗೆ ಬೆಸೆದುಕೊಂಡಂತೆ ಒಂದು ಸಂಪೂರ್ಣ ಆಧ್ಯಾತ್ಮಿಕ ಮರುಹುಟ್ಟನ್ನು ಪಡೆಯುವ ಅಗತ್ಯ ಈಗಲೂ ಇದೆ. ಅದೇ ಕಮ್ಯುನಿಸಂ ಆಗಿರುತ್ತದೆ.
ಆರ್ಥಿಕತೆಯಲ್ಲಿ ಬದಲಾವಣೆ ಹೇಗೆ ತನ್ನಿಂದ ತಾನೆ ಉಂಟಾಗುವುದಿಲ್ಲವೋ ಹಾಗೆಯೇ ಪ್ರಜ್ಞಾಮಟ್ಟದಲ್ಲೂ ಬದಲಾವಣೆ ತನ್ನಿಂದ ತಾನೆ ಉಂಟಾಗುವುದಿಲ್ಲ. ಬದಲಾವಣೆ ನಿಧಾನಗತಿಯಲ್ಲಿರುತ್ತದೆ, ತಾಳಬದ್ಧವಾಗಿರುವುದಿಲ್ಲ. ಇದರಲ್ಲಿ ತೀವ್ರಗತಿಯ ಅವಧಿಗಳಿರುತ್ತವೆ, ಮಂದಗತಿಯ ಅವಧಿಗಳಿರುತ್ತವೆ, ಹಿನ್ನಡೆಯ ಅವಧಿಗಳೂ ಇರುತ್ತವೆ.

ಹಲ್ಲಾ ಬೋಲ್ ಎಂಬ ಶಬ್ದಗಳನ್ನು ಕೇಳಿದೊಡನೆ ನೆನಪಾಗುವುದು ಸಫ್ದರ್ ಹಾಶ್ಮಿ

ಶೀರ್ಷಿಕೆ : ಹಲ್ಲಾಬೋಲ್ – ಸಫ್ದರ್ ಹಾಶ್ಮಿಯ ಸಾವು ಮತ್ತು ಬದುಕು ಮೂಲ :ಸುಧನ್ವ ದೇಶಪಾಂಡೆ ಅನುವಾದ ಎಂ.ಜಿ.ವೆಂಕಟೇಶ್ ಪ್ರಕಾಶನ : ಕ್ರಿಯಾ ಮಾಧ್ಯಮ ಪ್ರೈ.ಲಿ. ಪುಟಗಳು:280 ಬೆಲೆ ರೂ.200 ಪ್ರಕಟಣಾ ವರ್ಷ:2020

ಪೋಸ್ಟ್ ಮಾರ್ಟ್‍ಂ ವರದಿ ಸಹ, ನಾವು ಎತ್ತಿಕೊಂಡು ಆಸ್ಪತ್ರೆಗೆ ಹೋದಾಗ ಅವನ ಕಿವಿ, ಮೂಗು ಮತ್ತು ಗಂಟಲಿನಿಂದ ರಕ್ತ ಸ್ರಾವವಾಗುತ್ತಿದ್ದದ್ದನ್ನು ಗುರುತಿಸಿತ್ತು. ವರದಿಯಲ್ಲಿ ಮೆದುಳು ಚಿಪ್ಪು ಮತ್ತು ಹಣೆಗೆ ಆಳವಾದ ಸೀಳು ಗಾಯದ ಬಗ್ಗೆ ವಿವರಣೆಯಿತ್ತು. ಅವನ ತಲೆಗೆ ಕನಿಷ್ಟ ಇಪ್ಪತ್ತು ಬಾರಿಯಾದರೂ ಕಬ್ಬಿಣ ರಾಡಿನಿಂದ ಹೊಡೆದಿರಬಹುದು ಎಂದು ಅದರಲ್ಲಿ ಬರೆದಿತ್ತು. – ಈ ಪುಸ್ತಕದಿಂದ

೧೯೮೦ರ ದಶಕದ ಮಧ್ಯಾವಧಿ. ಕೋಮು ಸೌಹಾರ್ದತಾ ಸಮಿತಿ

ಪ್ರಧಾನಮಂತ್ರಿ ಇಂದಿರಾಗಾಂಧಿ ಅವರು ಅಕ್ಟೋಬರ್ ೩೧, ೧೯೮೪ರಂದು ತಮ್ಮ ಸಿಖ್ ಅಂಗರಕ್ಷಕರಿಂದ ಹತ್ಯೆಗೀಡಾದರು. ಆ ನಂತರ ಸಿಖ್ ವಿರೋಧಿ ಹತ್ಯಾಕಾಂಡ ಪ್ರಾರಂಭವಾಗಿ ಸುಮಾರು ಮೂರು ಸಾವಿರ ಜೀವಗಳನ್ನು ಬಲಿತೆಗೆದುಕೊಳ್ಳುವುದು ಅಲ್ಲದೇ ನಮ್ಮ ಸಮಾಜ, ಹಿಂದೂ-ಸಿಖ್ ಬಾಂಧವ್ಯ, ದೆಹಲಿ ನಗರದ ಬಗ್ಗೆ ಮತ್ತು ಕಾಂಗ್ರೆಸ್ ಪಕ್ಷದ ಬಗ್ಗೆ ಬಹಳ ಕಾಲದಿಂದ ಇದ್ದ ನಂಬಿಕೆಗಳು ನುಚ್ಚುನೂರಾದವು. ಈ ಮಾರಣ ಹೋಮಕ್ಕೆ ತತ್ತರಿಸಿದ ಸಾವಿರಾರು ಸಿಖ್ಖರು ನಗರದ ತಮ್ಮ ಪ್ರೀತಿಯ ಬಂಧುಗಳನ್ನು, ಮನೆ, ವ್ಯವಹಾರಗಳನ್ನು ಕಳೆದುಕೊಂಡು ನಗರದ ವಿವಿಧ ಕಡೆಗಳಲ್ಲಿ ರಚಿಸಲಾದ ಕ್ಯಾಂಪ್‌ಗಳಿಗೆ ಹೋಗಬೇಕಾಯಿತು. ದೆಹಲಿ ವಿಶ್ವವಿದ್ಯಾನಿಲಯದ ಉತ್ತರ ಕ್ಯಾಂಪಸ್ಸಿನಲ್ಲಿ ಮೊದಲು ಶಾಂತಿ ಮೆರವಣಿಗೆ ನಡೆದಾಗ ಉರಿದಿದ್ದ ಕೆಂಡ ಹೊಗೆಯಾಡುತ್ತಲೇ ಇತ್ತು. ಗಾಯ ಹಸಿಯಾಗಿಯೇ ಇತ್ತು. ಶಾಂತಿ ಮೆರವಣಿಗೆ ಕ್ಯಾಂಪಸ್‌ನ ಎಲ್ಲ ಕಾಲೇಜುಗಳನ್ನು ಮತ್ತು ಮುಖ್ಯ ವಿಭಾಗಗಳನ್ನು ಮುಟ್ಟುತ್ತಲೇ ಸಾಗಿತು. ಶಾಲಾ ಕಾಲೇಜಿನಲ್ಲಿ ಮೆರವಣಿಗೆ ಕೊನೆಗೊಂಡು ಸಾರ್ವಜನಿಕ ಸಭೆ ನಡೆಯಿತು. ಕೆಲವು ಭಾಷಣಕಾರರು ಸಭೆಯನ್ನು ಉದ್ದೇಶಿಸಿ ಮಾತನಾಡುವವರಿದ್ದು ಆ ವೇಳೆಗೆ ಅತಿಥೇಯ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನ ಸೇರಿದ್ದರು.

ಅವರಲ್ಲಿ ಬಹುತೇಕರು ಯುವಜನರು. ಅವರು ಕೋಪಗೊಂಡಿದ್ದು ಪ್ರತಿಕಾರಕ್ಕಾಗಿ ಕುದಿಯುತ್ತಿದ್ದರು. ಅವರ ಕಣ್ಣುಗಳು ನೋವಿನಿಂದ ಉರಿಯುತ್ತಿದ್ದು, ದ್ವೇಷ ಮತ್ತು ದುಃಖಭರಿತವಾಗಿದ್ದವು. ಪ್ರತೀಕಾರದ ವಾತಾವರಣವಿತ್ತು.

ಭಾಷಣಗಳ ಮೊದಲು ‘ಪರ್ಚಮ್’ ಗುಂಪಿನಿಂದ ಹಾಡುಗಳ ಕಾರ್ಯಕ್ರಮವಿತ್ತು. ಹಾಡುವುದು ಅಸಾಧ್ಯವಾಗಿತ್ತು. ಅವರ ಬಹಳಷ್ಟು ಕೋಪ ಅಲ್ಲಿ ಬಹುಸಂಖ್ಯೆಯಲ್ಲಿ ನೆರೆದಿದ್ದ ಪೋಲಿಸರ ವಿರುದ್ಧವಿತ್ತು. ವಿದ್ಯಾರ್ಥಿಗಳು ಉದ್ರಿಕ್ತರಾಗಿದ್ದರು. ಹಿಂದಿನ ದಿನಗಳಲ್ಲಿ ನಡೆದ ಆಸ್ತಿಹಾನಿಯಲ್ಲಿ ರಕ್ತ ಹರಿಯುತ್ತಿದ್ದಾಗ ದುಷ್ಕೃತ್ಯದಲ್ಲಿ ಪೊಲೀಸರು ಶಾಮೀಲಾಗಿದ್ದರು. ಒಂದು ಅಪಾಯಕಾರಿ ಸನ್ನಿವೇಶ ಪ್ರಾರಂಭವಾಗುತ್ತಿತ್ತು. ಶಾಂತಿ ಮೆರವಣಿಗೆ ಸಂಘಟಕರಿಗೆ ಮುಂದಿನ ಆಗುಹೋಗುಗಳ ಬಗ್ಗೆ ಆತಂಕವಿತ್ತು.

ಸಫ್ದರ್ ‘ಪರ್ಚಮ್’ನ ಅತ್ಯಂತ ಕಿರಿಯ ಸದಸ್ಯಳಾದ, ತೆಳ್ಳಗಿನ ಪದವಿಪೂರ್ವ ವಿದ್ಯಾರ್ಥಿನಿ ಸುಮಂಗಲಾ ದಾಮೋದರನ್  (ಇಎಂಎಸ್ ಅವರ ಮೊಮ್ಮಗಳು) ಕಡೆಗೆ ತಿರುಗಿದನು. ಅವನು ಮೈಕ್ ಕೈಗೆತ್ತಿಕೊಂಡು ‘ಜಾನೆವಾಲೇ ಸಿಪಾಯಿ’ ಹಾಡನ್ನು ಹಾಡಲು ಹೇಳಿದ. ೧೯೪೦ರಲ್ಲಿ ಈ ಯುದ್ಧ ವಿರೋಧಿ-ಗೀತೆಯನ್ನು ರಚಿಸಿದ್ದು ಹೈದರಾಬಾದ್‌ನ ಕಮ್ಯೂನಿಸ್ಟ್ ಕವಿ ಮಕ್ದೂಮ್ ಮೋಹಿಯುದ್ದೀನ್. ಅದನ್ನು ಸಲೀಲ್ ಚೌಧರಿ ೧೯೬೦ರಲ್ಲಿ ’ಉಸ್ನೇ ಕಹಾ ಥಾ’ ಚಿತ್ರಕ್ಕೆ ಅಳವಡಿಸಿ ಸಂಗೀತ ನೀಡಿದ್ದರು. ಅಲ್ಲಿವರೆಗೆ ‘ಪರ್ಚಮ್’ ಯಾವಾಗಲೂ ಗುಂಪು ಗಾಯನ ಮಾಡುತ್ತಿದ್ದರು. ತಂಡದಿಂದ ಒಬ್ಬರೇ ಹಾಡಿದ ಮೊದಲ ಗೀತೆ ಇದಾಗಿತ್ತು. ಅದನ್ನು ಅವರು ಹಿಂದೆ ಎಂದೂ ಹಾಡಿರಲಿಲ್ಲ. ಯುವ ಗಾಯಕಿ ತಬ್ಬಲಿಯಂತೆ ಭಯಭೀತಳಾಗಿದ್ದಳು.

‘ಹಾಡು, ಹೆದರಬೇಡ ಹಾಡು’

ಸಫ್ದರ್ ಉತ್ತೇಜಿಸಿದನು. ಸುಮಂಗಲ ಹಿಂಜರಿಯುತ್ತಿದ್ದಳು. ಸಫ್ದರ್ ಅವಳ ಹಿಂದೆಯೇ ಇದ್ದ. ಅವಳು ಮತ್ತೆ ಹಾಡಲು ಪ್ರಾರಂಭಿಸಿದಳು. ಅವಳ ಮಧುರ ಧ್ವನಿ ಇದ್ದಕ್ಕಿದಂತೆ ಶಕ್ತಿಶಾಲಿಯಾಯಿತು. ಅವಳ ಅಂತರಂಗದ ಆಳದಿಂದ ಹೊರಟ ಆ ಪೂರ್ಣಧ್ವನಿ ಅವಳ ಸಣ್ಣ ಆಕಾರವನ್ನು ಮುಚ್ಚಿತ್ತು. ಅದು ಅಲ್ಲಿದ್ದ ಎಲ್ಲರನ್ನೂ ತಲುಪಿ ಶಾಂತವಾಗಿಸಿತು. ಹಾಡು ಮುಂದುವರೆದಂತೆ ಯುವಕ ಯುವತಿಯರು ಸ್ತಂಭಿತರಾಗಿದ್ದರು. ಸಿಪಾಯಿ ಯುದ್ಧಕ್ಕೆ ಹೊರಡುವಾಗ ಅವನ ದುಃಖಿತ ಹೆಂಡತಿ ಮತ್ತು ಹಸಿದ ಮಕ್ಕಳ ಕುರಿತಾದ ಹಾಡು, ಸುಡುತ್ತಿದ್ದ ಹೆಣಗಳ ವಾಸನೆ – ಎಲ್ಲಾ ಕಡೆಯಿಂದ ಎದ್ದು ಬದುಕೇ ಅಳುತ್ತಿರುವಂತೆ ಭಾಸವಾಗುತ್ತಿತ್ತು.

ಪ್ರೇಕ್ಷಕರಲ್ಲಿ ಯಾರೋ ಒಬ್ಬರು ಅಳತೊಡಗಿದರು. ಮುಂದಿನ ಕೆಲವು ನಿಮಿಷಗಳಲ್ಲಿ ಸುಮಾರು ಜನ ಅಳುತ್ತಿದ್ದರು. ಅಳದಿದ್ದವರೂ ಉಕ್ಕಿಬರುತ್ತಿದ್ದ ಭಾವನೆಯನ್ನು ತಡೆಯಲು ಯತ್ನಿಸುತ್ತಿದ್ದರು. ಅಲ್ಲಿ ಒದ್ದೆಯಾಗದಿದ್ದ ಕಣ್ಣುಗಳೇ ಇರಲಿಲ್ಲ. ಸಂಪೂರ್ಣವಾಗಿ ಕಾರ್ಯಾಚರಣೆಗಾಗಿ ಸಿದ್ಧರಾಗಿದ್ದ ಪೋಲಿಸರು, ಅಲ್ಲಿ ಬದಲಾದ ಮನಸ್ಥಿತಿಯನ್ನು ನೋಡಿ ಆಶ್ಚರ್ಯಚಕಿತರಾದರು.

ಅಸಾಧ್ಯವೆನಿಸಿದ್ದು ನಡೆದಿತ್ತು. ೧೯೪೦ರಲ್ಲಿ ಮುಸ್ಲಿಂ ಹೆಸರಿನ ಹೈದರಾಬಾದಿ ಕಮ್ಯುನಿಸ್ಟ್ ಕವಿಯಿಂದ ರಚಿತವಾದ ಒಂದು ಹಾಡು, ೧೯೬೦ರ ಒಂದು ಚಲನಚಿತ್ರಕ್ಕೆ ಒಬ್ಬ ಬಂಗಾಳಿ ಅಳವಡಿಸಿದ್ದ, ಪದವಿಪೂರ್ವ ತರಗತಿಯ ಹಿಂದು ಹೆಸರಿನ ಮಲೆಯಾಳಿ ಯುವತಿ ಹಾಡಿದ ಹಾಡು, ಹತ್ಯಾಕಾಂಡದಿಂದ ಕುದಿಯುತ್ತಿದ್ದ ಕೋಪೋದ್ರಿಕ್ತರಾಗಿದ್ದ ನೂರಾರು ಸಿಖ್ ಯುವಕರಲ್ಲಿ ಬದಲಾವಣೆ ತಂದಿತ್ತು. ಇಲ್ಲಿ ಹೋಲಿಸಬಹುದಾದ್ದು, ಹೊಂದಿಕೆಯಾಗಬಹುದಾದ್ದು ಏನೂ ಇಲ್ಲ. ಆದರೂ ಈ ಹಾಡು, ಭಾವಪೂರ್ಣ ಮತ್ತು ಮನಕಲಕುವ ಹಾಡು-ನೊಂದವರ ಎರಡು ಗುಂಪುಗಳನ್ನು, ಪೀಳಿಗೆಗಳು, ಭೂಗೋಳ ಮತ್ತು ಹಿಂಸಾಚಾರದ ಎಲ್ಲೆಗಳನ್ನೂ ಮೀರಿ ಜೋಡಿಸಿತ್ತು.

-ಪುಸ್ತಕದಿಂದ

ಅಂಬೆಡ್ಕರ್ ಜಯಂತಿಯ ಶುಭಾಶಯಗಳು – ನೀಲಿ ಮತ್ತು ಕೆಂಪು ಬಾವುಟಗಳ ನಡುವಿನ ಮೈತ್ರಿ

ಅಂಬೆಡ್ಕರ್ ಜಯಂತಿಯ ಶುಭಾಶಯಗಳು

ಇತ್ತೀಚಿನ ವರ್ಷಗಳಲ್ಲಿ, ವಿಶೇಷವಾಗಿ ಕಳೆದ ಮೂರು-ನಾಲ್ಕು ವರ್ಷಗಳ ಸಾಮಾಜಿಕ-ರಾಜಕೀಯ-ಆರ್ಥಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಒಂದೆಡೆಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅನುಯಾಯಿಗಳು ಮತ್ತು ಎಡಪಂಥೀಯರು ವಿವಿಧ ಚಳುವಳಿಗಳಲ್ಲಿ ಕೈಜೋಡಿಸುತ್ತಿದ್ದರೆ, ಇನ್ನೊಂದೆಡೆಯಲ್ಲಿ ಅಂಬೇಡ್ಕರ್‌ವಾದಿ-ಎಡರಾಜಕಾರಣದ ಬಗ್ಗೆ ಇವರ ನಡುವೆ ರಾಜಕೀಯ-ಸೈದ್ಧಾಂತಿಕ ಚರ್ಚೆಗಳು ನಡೆಯುತ್ತಿವೆ. ಈ ಚರ್ಚೆಗಳಲ್ಲಿ ಡಾ. ಆನಂದ್ ತೇಲ್ತುಂಬ್ಡೆಯವರ ಕೊಡುಗೆ ಗಮನಾರ್ಹವಾಗಿದೆ. ತಂತ್ರಜ್ಞಾನ ಮತ್ತು ನಿರ್ವಹಣೆಯಲ್ಲಿ ಉನ್ನತ ತರಬೇತಿ ಪಡೆದಿರುವುದೊಂದಿಗೆ, ಇವರು ಬಹಳ ವರ್ಷಗಳಿಂದ ವಿವಿಧ ಜನವಿಭಾಗಗಳ ಚಟುವಟಿಕೆ- ಹೋರಾಟಗಳೊಂದಿಗೆ ಸಂಪರ್ಕ ಹೊಂದಿರುವವರು. ಇದರಿಂದಾಗಿ ಇವರು ಒಬ್ಬ ಪ್ರಮುಖ ರಾಜಕೀಯ ವಿಶ್ಲೇಷಕರಾಗಿ ಹೊಮ್ಮಿದ್ದಾರೆ. ಅಲ್ಲದೆ ನಾಗರಿಕ ಹಕ್ಕುಗಳ ಕಾರ್ಯಕರ್ತರಾಗಿಯೂ, ಅಂಕಣಗಾರರಾಗಿಯೂ ಮತ್ತು ಹಲವು ಪುಸ್ತಕಗಳ ಕರ್ತೃವಾಗಿಯೂ ಇವರು ಪ್ರಖ್ಯಾತರಾಗಿದ್ದಾರೆ.

ನಿಮ್ಮ ಕೈಯಲ್ಲಿರುವ ಈ ಕಿರು ಪುಸ್ತಕ ಕಳೆದ ವರ್ಷ, ಅಂದರೆ ಎಪ್ರಿಲ್ 21,  2017 ರಲ್ಲಿ countercurrents.org

ಯಲ್ಲಿ ಪ್ರಕಟವಾದ ವಿದ್ಯಾಭೂಷಣ ರಾವತ್ ಅವರು ಆನಂದ್ ತೇಲ್ತುಂಬ್ಡೆಯವರೊಂದಿಗೆ ನಡೆಸಿದ ಒಂದು ಸಂವಾದದ ಭಾವಾನುವಾದ. ರಾವತ್ ಅವರು ಕೂಡ ಮಾನವ ಹಕ್ಕುಗಳ ರಂಗದಲ್ಲಿ ಸಕ್ರಿಯರಾಗಿರುವವರು, ಬುಡಮಟ್ಟದ ಕ್ರಿಯೆಗಳಲ್ಲಿ ತನಗೆ ಹೆಚ್ಚು ಆಸಕ್ತಿ ಎನ್ನುವ ಇವರು ಇದೀಗ ಬದಲಾವಣೆ ತರಬೇಕಾದ ಸಮಯ ಎಂದು ನಂಬಿರುವವರು.

ಬಾಬಾ ಸಾಹೇಬ್ ಅಂಬೇಡ್ಕರ್ ಪ್ರೇರಿತ ಚಳುವಳಿ ಮತ್ತು ಎಡಪಂಥೀಯ ಚಳುವಳಿಯ, ಸರಳವಾಗಿ ಹೇಳುವುದಾದರೆ, ನೀಲಿ ಬಾವುಟ ಮತ್ತು ಕೆಂಬಾವುಟದ ನಡುವೆ ವಿವಿಧ ಹೋರಾಟಗಳಲ್ಲಿ ಮೂಡಿ ಬರುತ್ತಿರುವ ಮೈತ್ರಿ ಹಲವರಲ್ಲಿ, ವಿಶೇಷವಾಗಿ ಮಾರ್ಕ್ಸ್‌ವಾದದ/ಎಡಪಂಥೀಯರ ಬಗ್ಗೆ ಪೂರ್ವಾಗ್ರಹವನ್ನು ಇನ್ನೂ ಮೀರದ ಅಂಬೇಡ್ಕರ್‌ವಾದಿಗಳಲ್ಲಿ ಇರುಸು ಮುರುಸು ಉಂಟು ಮಾಡಿರುವುದು ಕೂಡ ಕಂಡು ಬಂದಿದೆ. ಈ ಸಂವಾದದ ಪ್ರಶ್ನೆಗಳಲ್ಲಿಯೂ ಅಲ್ಲಲ್ಲಿ ಇದರ ಛಾಯೆಗಳನ್ನು ಕಾಣಬಹುದು. ಅವನ್ನು ಸೂಚಿಸಿರುವ ಉತ್ತರಗಳಲ್ಲಿ ಕೂಡ ಜನಪರ ಹೋರಾಟಗಳಲ್ಲಿ ಇಂತಹ ಸಹಜ ಮೈತ್ರಿ/ಐಕ್ಯತೆ ಮೂಡಿ ಬರದಿರಲು ಕೆಂಬಾವುಟದವರೇ ಪ್ರಧಾನ ಕಾರಣ ಎಂಬ ದನಿ ಕೇಳಬರುತ್ತದೆ. ಇದು ಎಷ್ಟು ಸರಿ ಎಂಬುದರ ಬಗ್ಗೆ ಇನ್ನಷ್ಟು ಸಂವಾದ, ಅಧ್ಯಯನ, ಚರ್ಚೆಗಳ ಅಗತ್ಯವಿದೆ. ಹೀಗೆ ಮಾಡುವಾಗ ಸ್ವತಃ ತೇಲ್ತುಂಬ್ಡೆಯವರೇ ಎತ್ತಿರುವ, ಕೆಲವು ದಶಕಗಳ ಹಿಂದಿನ ಸಂಘರ್ಷ-ಭಿನ್ನಾಭಿಪ್ರಾಯಗಳು ಈಗ ನಮಗೆ ಎಷ್ಟು ಪ್ರಸ್ತುತ ಎಂಬ ಪ್ರಶ್ನೆಯನ್ನು ಈಗ ಅಂಬೇಡ್ಕರ್‌ವಾದಿಗಳೂ, ಎಡಪಂಥೀಯರೂ ಕೇಳಿಕೊಳ್ಳಬೇಕಾಗಿದೆ. ಡಾ. ಆನಂದ್ ತೇಲ್ತುಂಬ್ಡೆಯವರು ಈ ಸಂವಾದದಲ್ಲಿ ಮುಂದಿಟ್ಟಿರುವ ಅವರ ನಿಷ್ಠುರ ವಿಚಾರ-ವಿಮರ್ಶೆಗಳು ನಮ್ಮ ದೇಶದಲ್ಲಿ ಸಮಾನತೆಯ ಸಮಾಜವೊಂದನ್ನು ಕಟ್ಟುವ ಸವಾಲನ್ನು ಎದುರಿಸುತ್ತಿರುವವರಿಗೆ ಮುನ್ನಡೆಯ ಹಾದಿಯಲ್ಲಿ ಪ್ರಯೋಜನಕಾರಿಯಾಗುವುದರಲ್ಲಿ ಸಂದೇಹವಿಲ್ಲ.

ಶೀರ್ಷಿಕೆ : ಅಂಬೇಡ್ಕರ್ ಮತ್ತು ಎಡರಾಜಕಾರಣ ಮುನ್ನಡೆಯ ಹಾದಿ ಲೇಖಕರು : ವಿದ್ಯಾಭೂಷಣ ರಾವತ್ ಅನು:ಕೃಷ್ಣೇಗೌಡ ಟಿ ಎಲ್

ಪ್ರಕಾಶಕರು :ಚಿಂತನ ಪುಸ್ತಕ  ಪುಟ ಅಳತೆ: ಕ್ರೌನ್ 1/8 ಪುಟಗಳು:70 ಬೆಲೆ:ರೂ.50/- ಮುದ್ರಣ ವರ್ಷ:2018

ಪುಸ್ತಕ ಬಿಡುಗಡೆಗೆ ಆಹ್ವಾನ

narakada-garbhagudiyolage

ಪುಸ್ತಕ ಪ್ರೀತಿ ತಿಂಗಳ ಮಾತುಕತೆಯಲ್ಲಿ ಭಾಗವಹಿಸಿ

PP-Thingala Mathukathe-secularvada

ಸಂವಿಧಾನ ಸಭೆ(25-11-1949)ಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾಷಣ

endinavarege samanateya nirakarane - Front

endinavarege samanateya nirakarane - Back

ಶೀರ್ಷಿಕೆ : ಎಂದಿನವರೆಗೆ ಸಮಾನತೆಯ ನಿರಾಕರಣೆ ಲೇಖಕರು: ಡಾ. ಬಿ.ಆರ್.ಅಂಬೇಡ್ಕರ್ ಅನುವಾದ: ಶಮೀಮಾ ಕೆ.ಪಿ. ಪ್ರಕಾಶಕರು:ಕ್ರಿಯಾ ಪುಸ್ತಕ ಪುಟ:40 ಬೆಲೆ:ರೂ.20/-