ಹಲ್ಲಾ ಬೋಲ್ ಎಂಬ ಶಬ್ದಗಳನ್ನು ಕೇಳಿದೊಡನೆ ನೆನಪಾಗುವುದು ಸಫ್ದರ್ ಹಾಶ್ಮಿ

ಶೀರ್ಷಿಕೆ : ಹಲ್ಲಾಬೋಲ್ – ಸಫ್ದರ್ ಹಾಶ್ಮಿಯ ಸಾವು ಮತ್ತು ಬದುಕು ಮೂಲ :ಸುಧನ್ವ ದೇಶಪಾಂಡೆ ಅನುವಾದ ಎಂ.ಜಿ.ವೆಂಕಟೇಶ್ ಪ್ರಕಾಶನ : ಕ್ರಿಯಾ ಮಾಧ್ಯಮ ಪ್ರೈ.ಲಿ. ಪುಟಗಳು:280 ಬೆಲೆ ರೂ.200 ಪ್ರಕಟಣಾ ವರ್ಷ:2020

ಪೋಸ್ಟ್ ಮಾರ್ಟ್‍ಂ ವರದಿ ಸಹ, ನಾವು ಎತ್ತಿಕೊಂಡು ಆಸ್ಪತ್ರೆಗೆ ಹೋದಾಗ ಅವನ ಕಿವಿ, ಮೂಗು ಮತ್ತು ಗಂಟಲಿನಿಂದ ರಕ್ತ ಸ್ರಾವವಾಗುತ್ತಿದ್ದದ್ದನ್ನು ಗುರುತಿಸಿತ್ತು. ವರದಿಯಲ್ಲಿ ಮೆದುಳು ಚಿಪ್ಪು ಮತ್ತು ಹಣೆಗೆ ಆಳವಾದ ಸೀಳು ಗಾಯದ ಬಗ್ಗೆ ವಿವರಣೆಯಿತ್ತು. ಅವನ ತಲೆಗೆ ಕನಿಷ್ಟ ಇಪ್ಪತ್ತು ಬಾರಿಯಾದರೂ ಕಬ್ಬಿಣ ರಾಡಿನಿಂದ ಹೊಡೆದಿರಬಹುದು ಎಂದು ಅದರಲ್ಲಿ ಬರೆದಿತ್ತು. – ಈ ಪುಸ್ತಕದಿಂದ

೧೯೮೦ರ ದಶಕದ ಮಧ್ಯಾವಧಿ. ಕೋಮು ಸೌಹಾರ್ದತಾ ಸಮಿತಿ

ಪ್ರಧಾನಮಂತ್ರಿ ಇಂದಿರಾಗಾಂಧಿ ಅವರು ಅಕ್ಟೋಬರ್ ೩೧, ೧೯೮೪ರಂದು ತಮ್ಮ ಸಿಖ್ ಅಂಗರಕ್ಷಕರಿಂದ ಹತ್ಯೆಗೀಡಾದರು. ಆ ನಂತರ ಸಿಖ್ ವಿರೋಧಿ ಹತ್ಯಾಕಾಂಡ ಪ್ರಾರಂಭವಾಗಿ ಸುಮಾರು ಮೂರು ಸಾವಿರ ಜೀವಗಳನ್ನು ಬಲಿತೆಗೆದುಕೊಳ್ಳುವುದು ಅಲ್ಲದೇ ನಮ್ಮ ಸಮಾಜ, ಹಿಂದೂ-ಸಿಖ್ ಬಾಂಧವ್ಯ, ದೆಹಲಿ ನಗರದ ಬಗ್ಗೆ ಮತ್ತು ಕಾಂಗ್ರೆಸ್ ಪಕ್ಷದ ಬಗ್ಗೆ ಬಹಳ ಕಾಲದಿಂದ ಇದ್ದ ನಂಬಿಕೆಗಳು ನುಚ್ಚುನೂರಾದವು. ಈ ಮಾರಣ ಹೋಮಕ್ಕೆ ತತ್ತರಿಸಿದ ಸಾವಿರಾರು ಸಿಖ್ಖರು ನಗರದ ತಮ್ಮ ಪ್ರೀತಿಯ ಬಂಧುಗಳನ್ನು, ಮನೆ, ವ್ಯವಹಾರಗಳನ್ನು ಕಳೆದುಕೊಂಡು ನಗರದ ವಿವಿಧ ಕಡೆಗಳಲ್ಲಿ ರಚಿಸಲಾದ ಕ್ಯಾಂಪ್‌ಗಳಿಗೆ ಹೋಗಬೇಕಾಯಿತು. ದೆಹಲಿ ವಿಶ್ವವಿದ್ಯಾನಿಲಯದ ಉತ್ತರ ಕ್ಯಾಂಪಸ್ಸಿನಲ್ಲಿ ಮೊದಲು ಶಾಂತಿ ಮೆರವಣಿಗೆ ನಡೆದಾಗ ಉರಿದಿದ್ದ ಕೆಂಡ ಹೊಗೆಯಾಡುತ್ತಲೇ ಇತ್ತು. ಗಾಯ ಹಸಿಯಾಗಿಯೇ ಇತ್ತು. ಶಾಂತಿ ಮೆರವಣಿಗೆ ಕ್ಯಾಂಪಸ್‌ನ ಎಲ್ಲ ಕಾಲೇಜುಗಳನ್ನು ಮತ್ತು ಮುಖ್ಯ ವಿಭಾಗಗಳನ್ನು ಮುಟ್ಟುತ್ತಲೇ ಸಾಗಿತು. ಶಾಲಾ ಕಾಲೇಜಿನಲ್ಲಿ ಮೆರವಣಿಗೆ ಕೊನೆಗೊಂಡು ಸಾರ್ವಜನಿಕ ಸಭೆ ನಡೆಯಿತು. ಕೆಲವು ಭಾಷಣಕಾರರು ಸಭೆಯನ್ನು ಉದ್ದೇಶಿಸಿ ಮಾತನಾಡುವವರಿದ್ದು ಆ ವೇಳೆಗೆ ಅತಿಥೇಯ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನ ಸೇರಿದ್ದರು.

ಅವರಲ್ಲಿ ಬಹುತೇಕರು ಯುವಜನರು. ಅವರು ಕೋಪಗೊಂಡಿದ್ದು ಪ್ರತಿಕಾರಕ್ಕಾಗಿ ಕುದಿಯುತ್ತಿದ್ದರು. ಅವರ ಕಣ್ಣುಗಳು ನೋವಿನಿಂದ ಉರಿಯುತ್ತಿದ್ದು, ದ್ವೇಷ ಮತ್ತು ದುಃಖಭರಿತವಾಗಿದ್ದವು. ಪ್ರತೀಕಾರದ ವಾತಾವರಣವಿತ್ತು.

ಭಾಷಣಗಳ ಮೊದಲು ‘ಪರ್ಚಮ್’ ಗುಂಪಿನಿಂದ ಹಾಡುಗಳ ಕಾರ್ಯಕ್ರಮವಿತ್ತು. ಹಾಡುವುದು ಅಸಾಧ್ಯವಾಗಿತ್ತು. ಅವರ ಬಹಳಷ್ಟು ಕೋಪ ಅಲ್ಲಿ ಬಹುಸಂಖ್ಯೆಯಲ್ಲಿ ನೆರೆದಿದ್ದ ಪೋಲಿಸರ ವಿರುದ್ಧವಿತ್ತು. ವಿದ್ಯಾರ್ಥಿಗಳು ಉದ್ರಿಕ್ತರಾಗಿದ್ದರು. ಹಿಂದಿನ ದಿನಗಳಲ್ಲಿ ನಡೆದ ಆಸ್ತಿಹಾನಿಯಲ್ಲಿ ರಕ್ತ ಹರಿಯುತ್ತಿದ್ದಾಗ ದುಷ್ಕೃತ್ಯದಲ್ಲಿ ಪೊಲೀಸರು ಶಾಮೀಲಾಗಿದ್ದರು. ಒಂದು ಅಪಾಯಕಾರಿ ಸನ್ನಿವೇಶ ಪ್ರಾರಂಭವಾಗುತ್ತಿತ್ತು. ಶಾಂತಿ ಮೆರವಣಿಗೆ ಸಂಘಟಕರಿಗೆ ಮುಂದಿನ ಆಗುಹೋಗುಗಳ ಬಗ್ಗೆ ಆತಂಕವಿತ್ತು.

ಸಫ್ದರ್ ‘ಪರ್ಚಮ್’ನ ಅತ್ಯಂತ ಕಿರಿಯ ಸದಸ್ಯಳಾದ, ತೆಳ್ಳಗಿನ ಪದವಿಪೂರ್ವ ವಿದ್ಯಾರ್ಥಿನಿ ಸುಮಂಗಲಾ ದಾಮೋದರನ್  (ಇಎಂಎಸ್ ಅವರ ಮೊಮ್ಮಗಳು) ಕಡೆಗೆ ತಿರುಗಿದನು. ಅವನು ಮೈಕ್ ಕೈಗೆತ್ತಿಕೊಂಡು ‘ಜಾನೆವಾಲೇ ಸಿಪಾಯಿ’ ಹಾಡನ್ನು ಹಾಡಲು ಹೇಳಿದ. ೧೯೪೦ರಲ್ಲಿ ಈ ಯುದ್ಧ ವಿರೋಧಿ-ಗೀತೆಯನ್ನು ರಚಿಸಿದ್ದು ಹೈದರಾಬಾದ್‌ನ ಕಮ್ಯೂನಿಸ್ಟ್ ಕವಿ ಮಕ್ದೂಮ್ ಮೋಹಿಯುದ್ದೀನ್. ಅದನ್ನು ಸಲೀಲ್ ಚೌಧರಿ ೧೯೬೦ರಲ್ಲಿ ’ಉಸ್ನೇ ಕಹಾ ಥಾ’ ಚಿತ್ರಕ್ಕೆ ಅಳವಡಿಸಿ ಸಂಗೀತ ನೀಡಿದ್ದರು. ಅಲ್ಲಿವರೆಗೆ ‘ಪರ್ಚಮ್’ ಯಾವಾಗಲೂ ಗುಂಪು ಗಾಯನ ಮಾಡುತ್ತಿದ್ದರು. ತಂಡದಿಂದ ಒಬ್ಬರೇ ಹಾಡಿದ ಮೊದಲ ಗೀತೆ ಇದಾಗಿತ್ತು. ಅದನ್ನು ಅವರು ಹಿಂದೆ ಎಂದೂ ಹಾಡಿರಲಿಲ್ಲ. ಯುವ ಗಾಯಕಿ ತಬ್ಬಲಿಯಂತೆ ಭಯಭೀತಳಾಗಿದ್ದಳು.

‘ಹಾಡು, ಹೆದರಬೇಡ ಹಾಡು’

ಸಫ್ದರ್ ಉತ್ತೇಜಿಸಿದನು. ಸುಮಂಗಲ ಹಿಂಜರಿಯುತ್ತಿದ್ದಳು. ಸಫ್ದರ್ ಅವಳ ಹಿಂದೆಯೇ ಇದ್ದ. ಅವಳು ಮತ್ತೆ ಹಾಡಲು ಪ್ರಾರಂಭಿಸಿದಳು. ಅವಳ ಮಧುರ ಧ್ವನಿ ಇದ್ದಕ್ಕಿದಂತೆ ಶಕ್ತಿಶಾಲಿಯಾಯಿತು. ಅವಳ ಅಂತರಂಗದ ಆಳದಿಂದ ಹೊರಟ ಆ ಪೂರ್ಣಧ್ವನಿ ಅವಳ ಸಣ್ಣ ಆಕಾರವನ್ನು ಮುಚ್ಚಿತ್ತು. ಅದು ಅಲ್ಲಿದ್ದ ಎಲ್ಲರನ್ನೂ ತಲುಪಿ ಶಾಂತವಾಗಿಸಿತು. ಹಾಡು ಮುಂದುವರೆದಂತೆ ಯುವಕ ಯುವತಿಯರು ಸ್ತಂಭಿತರಾಗಿದ್ದರು. ಸಿಪಾಯಿ ಯುದ್ಧಕ್ಕೆ ಹೊರಡುವಾಗ ಅವನ ದುಃಖಿತ ಹೆಂಡತಿ ಮತ್ತು ಹಸಿದ ಮಕ್ಕಳ ಕುರಿತಾದ ಹಾಡು, ಸುಡುತ್ತಿದ್ದ ಹೆಣಗಳ ವಾಸನೆ – ಎಲ್ಲಾ ಕಡೆಯಿಂದ ಎದ್ದು ಬದುಕೇ ಅಳುತ್ತಿರುವಂತೆ ಭಾಸವಾಗುತ್ತಿತ್ತು.

ಪ್ರೇಕ್ಷಕರಲ್ಲಿ ಯಾರೋ ಒಬ್ಬರು ಅಳತೊಡಗಿದರು. ಮುಂದಿನ ಕೆಲವು ನಿಮಿಷಗಳಲ್ಲಿ ಸುಮಾರು ಜನ ಅಳುತ್ತಿದ್ದರು. ಅಳದಿದ್ದವರೂ ಉಕ್ಕಿಬರುತ್ತಿದ್ದ ಭಾವನೆಯನ್ನು ತಡೆಯಲು ಯತ್ನಿಸುತ್ತಿದ್ದರು. ಅಲ್ಲಿ ಒದ್ದೆಯಾಗದಿದ್ದ ಕಣ್ಣುಗಳೇ ಇರಲಿಲ್ಲ. ಸಂಪೂರ್ಣವಾಗಿ ಕಾರ್ಯಾಚರಣೆಗಾಗಿ ಸಿದ್ಧರಾಗಿದ್ದ ಪೋಲಿಸರು, ಅಲ್ಲಿ ಬದಲಾದ ಮನಸ್ಥಿತಿಯನ್ನು ನೋಡಿ ಆಶ್ಚರ್ಯಚಕಿತರಾದರು.

ಅಸಾಧ್ಯವೆನಿಸಿದ್ದು ನಡೆದಿತ್ತು. ೧೯೪೦ರಲ್ಲಿ ಮುಸ್ಲಿಂ ಹೆಸರಿನ ಹೈದರಾಬಾದಿ ಕಮ್ಯುನಿಸ್ಟ್ ಕವಿಯಿಂದ ರಚಿತವಾದ ಒಂದು ಹಾಡು, ೧೯೬೦ರ ಒಂದು ಚಲನಚಿತ್ರಕ್ಕೆ ಒಬ್ಬ ಬಂಗಾಳಿ ಅಳವಡಿಸಿದ್ದ, ಪದವಿಪೂರ್ವ ತರಗತಿಯ ಹಿಂದು ಹೆಸರಿನ ಮಲೆಯಾಳಿ ಯುವತಿ ಹಾಡಿದ ಹಾಡು, ಹತ್ಯಾಕಾಂಡದಿಂದ ಕುದಿಯುತ್ತಿದ್ದ ಕೋಪೋದ್ರಿಕ್ತರಾಗಿದ್ದ ನೂರಾರು ಸಿಖ್ ಯುವಕರಲ್ಲಿ ಬದಲಾವಣೆ ತಂದಿತ್ತು. ಇಲ್ಲಿ ಹೋಲಿಸಬಹುದಾದ್ದು, ಹೊಂದಿಕೆಯಾಗಬಹುದಾದ್ದು ಏನೂ ಇಲ್ಲ. ಆದರೂ ಈ ಹಾಡು, ಭಾವಪೂರ್ಣ ಮತ್ತು ಮನಕಲಕುವ ಹಾಡು-ನೊಂದವರ ಎರಡು ಗುಂಪುಗಳನ್ನು, ಪೀಳಿಗೆಗಳು, ಭೂಗೋಳ ಮತ್ತು ಹಿಂಸಾಚಾರದ ಎಲ್ಲೆಗಳನ್ನೂ ಮೀರಿ ಜೋಡಿಸಿತ್ತು.

-ಪುಸ್ತಕದಿಂದ

ಕೋಟಿ ಕೋಟಿ ಕಪ್ಪು ಜನರ ಮೊಟ್ಟ ಮೊದಲ ಮಾತು – ಅಂಬೇಡ್ಕರ್ ಜಯಂತಿಯ ಶುಭಾಶಯಗಳು

 

scan0002scan0003ಶೀರ್ಷಿಕೆ: Dr. B.R. Ambedkar Life and Work – An Appraisal, ಲೇಖಕರು: Prabhakar Sanzgiri , ಪ್ರಕಾಶಕರು: Kriya Prakashana, ಪುಟಗಳು: 64, ಬೆಲೆ: Rs.30/-

ಹುತಾತ್ಮ ಭಗತ್ ಸಿಂಗರ ಅಲ್ಪಕಾಲದ ಬದುಕಿನ ಅಸಾಮಾನ್ಯ ಹರಹಿನ ಸಂಗ್ರಹರೂಪ


ಕೇವಲ 23 ವರ್ಷಗಳ ಬದುಕು. ಅಷ್ಟರಲ್ಲೇ ಇತಿಹಾಸದಲ್ಲಿ ಒಂದು ಶಾಶ್ವತ ಸ್ಥಾನ ಪಡೆದ ಭಗತ್ ಸಿಂಗ್ ಹುತಾತ್ಮನಾಗಿ ೮೦ ವರ್ಷಗಳಾಗುತ್ತಿದ್ದರೂ ಈಗಲೂ ಯುವಜನರ ಆರಾಧ್ಯ ಮೂರ್ತಿ, ಅದರಲ್ಲೂ ಒಂದು ಸಮಾನತೆಯ ಸಮಾಜದ ಕನಸನ್ನು ತುಂಬಿಕೊಂಡಿರುವವರಿಗೆ. ಧೈರ್ಯ, ಸಾಹಸ, ತ್ಯಾಗ, ಜತೆಗೆ ತಾತ್ವಿಕ ಸ್ಪಷ್ಟತೆ ಮತ್ತು ಜನಮಾನಸವನ್ನು ತಟ್ಟು ಸಾಮರ್ಥ್ಯ ಅವರ ಬದುಕನ್ನು ಅಮರಗಾಥೆಯನ್ನಾಗಿಸಿದೆ. ಸಹಜವಾಗಿಯೇ ಬಾಲಿವುಡ್ ಕೂಡಾ ಈ ಗಾಥೆಯ ಆಕರ್ಷಣೆಗೆ ಒಳಗಾಗದಿಲ್ಲ. ಅವರ ಮೇಲೆ ಕನಿಷ್ಟ ಐದು ಚಲನಚಿತ್ರಗಳು ತಯಾರಾಗಿವೆ. ಬರವಣಿಗೆಗಳಂತೂ ಲೆಕ್ಕವಿಲ್ಲದಷ್ಟು. ಭಗತ್ ಸಿಂಗ್ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಅವರ ಬಗ್ಗೆ ಪ್ರಕಟವಾಗಿರುವ ವಿಶ್ಲೇಷಣೆಗಳನ್ನು ಆಧರಿಸಿ, ಡಾ. ಅಶೋಕ್ ಧವಳೆಯವರು ಬರೆದಿರುವ Shaheed Bhagat Singh: An Immortal Revolutionary ಅವರ ಅಲ್ಪಕಾಲದ ಬದುಕಿನ ಅಸಾಮಾನ್ಯ ಹರಹನ್ನು ಸಂಗ್ರಹ ರೂಪದಲ್ಲಿ ಪ್ರಸ್ತುತಪಡಿಸುವ ಒಂದು ಧೀರ್ಘ ಲೇಖನ.

ಲೇಖಕರು ಹೇಳುವಂತೆ ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳ ಬದುಕು, ಕೃತಿ ಮತ್ತು ವಿಚಾರದ ನಾಲ್ಕು ಉತ್ಕೃಷ್ಟ ಎಳೆಗಳೆಂದರೆ: ಸಾಮ್ರಾಜ್ಯಶಾಹಿಯ ವಿರುದ್ಧ ರಾಜಿಯಿಲ್ಲದ ಹೋರಾಟ; ಕೋಮುವಾದ ಮತ್ತು ಜಾತಿ ದಮನದ ವಿರುದ್ಧ ಎಂದೂ ಕುಗ್ಗದ ಪ್ರತಿರೋಧ; ಭೂಮಾಲಿಕ-ಬಂಡವಾಳಶಾಹಿ ಆಳ್ವಿಕೆಯ ವಿರುದ್ಧ ಜಗ್ಗದ ಹೋರಾಟ; ಮತ್ತು ಸಮಾಜವಾದ ಮಾತ್ರವೇ ನಮ್ಮ ಸಮಾಜದ ಮುಂದಿರುವ ಏಕೈಕ ಪರ್ಯಾಯ ಎಂಬ ಬಗ್ಗೆ ಅಚಲವಾದ ವಿಶ್ವಾಸ.

ಶೀರ್ಷಿಕೆ:ಅಮರ ಕ್ರಾಂತಿಕಾರಿ ಭಗತ್ ಸಿಂಗ್ ಲೇಖಕರು:ಡಾ. ಅಶೋಕ್ ಧವಳೆ ಅನುವಾದ:ಕೃಷ್ಣಪ್ಪ ಕೊಂಚಾಡಿ ಪ್ರಕಾಶನ: ಕ್ರಿಯಾ ಪ್ರಕಾಶನ ಪುಟ:72 ಬೆಲೆ:ರೂ.25/-

ಮಾನವ ಜನಾಂಗದ ವಿಕಾಸಕ್ಕೆ ಎಂದಿನಿಂದಲೂ ವಿಜ್ಞಾನ ಪೂರಕ ಕೆಲಸ ಮಾಡುತ್ತಲೇ ಬಂದಿದೆ

scan0035

ಒಣಗಿದ ಎರಡು ಕಟ್ಟಿಗೆ ತುಂಡುಗಳು ಘರ್ಷಣೆಯಾದರೆ ಬೆಂಕಿ ಹುಟ್ಟಿಕೊಳ್ಳುತ್ತದೆ ಎಂಬ ಸತ್ಯ ನಮಗೆ ಗೋಚರವಾದದ್ದು ಶಿಲಾಯುಗದಲ್ಲೇ. ಯಾರೋ ಒಬ್ಬ ನಮ್ಮ ಪೂರ್ವಿಕ ಇದನ್ನು ಪತ್ತೆ ಹಚ್ಚಿದ. ವಿಜ್ಞಾನದ ಬೇರುಗಳು ಅಲ್ಲಿಂದಲೇ ಟಿಸಿಲೊಡೆದಿವೆ. ವಿಜ್ಞಾನದ ಬೆಳವಣಿಗೆ ಇತ್ತೀಚಿನ ದಿನಗಳಲ್ಲಿ ಶರವೇಗದಲ್ಲಿ ಮುನ್ನಡೆದಿರಬಹುದು. ಆದರೆ ಮಾನವ ಜನಾಂಗದ ವಿಕಾಸಕ್ಕೆ ಎಂದಿನಿಂದಲೂ ವಿಜ್ಞಾನ ಪೂರಕ ಕೆಲಸ ಮಾಡುತ್ತಲೇ ಬಂದಿದೆ. ಅಂತೆಯೇ ಭಾರತೀಯ ಪ್ರಾಚೀನ ವಿಜ್ಞಾನಿಗಳು ಎಂಬ ಗ್ರಂಥದ ಶೀರ್ಷಿಕೆಯೇ ಕುತೂಹಲ ಹುಟ್ಟಿಸುತ್ತದೆ. ವೈದ್ಯಕೀಯ ಶಾಸ್ತ್ರದ ಅಚ್ಚರಿ ಧನ್ವಂತರಿ ಕ್ರಿ.ಪೂ.2000-1000ಕ್ಕೆ ಸೇರಿದವನು. ವೇದಗಳ ಕಾಲದ ವಿಮಾನ ಶಾಸ್ತ್ರಜ್ಞರು, ಬ್ರಹ್ಮಪುತ್ರ, ಜೈನ ಗಣಕರು, ಕಣಾದ, ಪಾಣಿನಿ, ಪರಾಶರ, ಪತಂಜಲಿ, ಗಾರ್ಗೇಯ ಎಲ್ಲರೂ ಕ್ರಿಸ್ತಪೂರ್ವಕ್ಕೆ ಸೇರಿದವರು. ಜತೆಗೆ ಕ್ರಿ.ಶ. ಒಂದನೇ ಶತಮಾನದ ಚರಕನಿಂದ ಹಿಡಿದು ಆರ್ಯಭಟ, ಭಾಸ್ಕರಾಚಾರ್ಯ, ವಿದ್ಯಾರಣ್ಯ ಹಾಗೂ ಕ್ರಿ.ಶ.1760 ರ ಗುಲಾಮ್ ಹುಸೇನ್ ವರೆಗೆ 34 ವಿಜ್ಞಾನಿಗಳ ಕುರಿತು 8-10 ವಾಕ್ಯದಿಂದ ಒಂದೆರಡು ಪುಟಗಳವರೆಗೆ ಲಭ್ಯವಿರುವ ಮಹತ್ವದ ಮಾಹಿತಿಯನ್ನು ಧೂಲೇಕರ್ ಈ ಗ್ರಂಥದಲ್ಲಿ ಕಟ್ಟಿಕೊಡುತ್ತಾರೆ. ಕಾಲ್ಪನಿಕ ರೇಖಾ ಚಿತ್ರಗಳಿವೆ. ಆದರೆ ಇನ್ನಷ್ಟು ಅಂದವಾಗಿ ಮುದ್ರಣವಾಗಿದ್ದರೆ ಮತ್ತಷ್ಟು ಆಕರ್ಷಣೆ ಹುಟ್ಟಿಸುತ್ತಿತ್ತು.

ಶೀರ್ಷಿಕೆ: ಭಾರತೀಯ ಪ್ರಾಚೀನ ವಿಜ್ಞಾನಿಗಳು ಲೇಖಕರು: ಚಂದ್ರಶೇಖರ ಧೂಲೇಕರ್ ಪ್ರಕಾಶಕರು: ರತ್ನಾ ಚಂದ್ರಶೇಖರ್ ಪುಟಗಳು : 80 ಬೆಲೆ: ರೂ.50/-

ಕೃಪೆ : ಸುಧಾ

ಕ್ಯಾಮರಾ ಇಂಜಿನಿಯರ್ ಗುಲಾಂ ಮುಂತಕಾ

`ಮರೆಯಲ್ಲಿರುವ ಮಹಾನುಭಾವರುಮಾಲಿಕೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿರುವ `ಕ್ಯಾಮರಾ ಇಂಜಿನಿಯರ್ ಗುಲಾಂ ಮುಂತಕಾಪುಸ್ತಕ ಎರಡು ರೀತಿಯಿಂದ ಮುಖ್ಯವಾದದು. ಮೊದಲನೆಯದು, ಪ್ರಚಾರದ ಪ್ರಭಾವಳಿಯಿಂದ ದೂರವುಳಿದ ಸಾಧಕನೊಬ್ಬನನ್ನು ಪರಿಚಯಿಸುವುದು. ಎರಡನೆಯದು, ಮುಂತಕಾ ಅವರ ಪರಿಚಯದ ಮೂಲಕ ಅವರ ದಾರಿಯಲ್ಲಿ ನಡೆಯಲು ಕೆಲವರನ್ನಾದರೂ ಕೃತಿ ಪ್ರಭಾವಿಸಬಹುದು ಎನ್ನುವುದು.

ಮುಂತಕಾ ಓರ್ವ ವಿಲಕ್ಷಣ ಛಾಯಾಗ್ರಾಹಕ. ಬೀದರ್ ಈ ಛಾಯಾಗ್ರಾಹಕನನ್ನು ಲೇಖಕರು ಕ್ಯಾಮರಾ ಇಂಜಿನಿಯರ್ ಎನ್ನುತ್ತಾರೆ. ಏಕೆಂದರೆ ಫೋಟೋ ಕ್ಲಿಕ್ಕಿಸುವುದಕ್ಕೆ ಮಾತ್ರಾ ಮುಂತಕಾ ಅವರ ಪ್ರತಿಭೆ ಸೀಮಿತವಲ್ಲ. ಅವರ ಬಳಿ ಜಗತ್ತಿನ ವಿವಿಧ ದೇಶಗಳ ನೂರಾರು ಉತ್ತಮ ಕ್ಯಾಮರಾಗಳ ಸಂಗ್ರಹವಿದೆ. ಆ ಕ್ಯಾಮರಾಗಳನ್ನು ಬಿಚ್ಚಿ, ಒಂದರ ಬಿಡಿಭಾಗವನ್ನು ಮತ್ತೊಂದಕ್ಕೆ ಹೊಂದಿಸುವ ಮೂಲಕ ಕ್ಯಾಮರಾದ ಸಾಮಥ್ರ್ಯವನ್ನು ಹೆಚ್ಚಿಸುವಲ್ಲಿ ಮುಂತಕಾ ಸಿದ್ಧಹಸ್ತರು. ಅವರ ಮಾಂತ್ರಿಕ ಕೈಗಳಲ್ಲಿ ಕ್ಯಾಮರಾದ ಸಾಧ್ಯತೆಗಳು ಹೆಚ್ಚುತ್ತವೆ.

ಮುಂತಕಾ ಅವರ ಬಳಿ ಎಂಟು ಅಡಿ ಉದ್ದ ಹಾಗೂ ಒಂದು ಅಡಿ ಅಗಲದ ಫೋಟೋ ನೆಗೆಟಿವ್ ಇದೆ. ಇದು ಜಗತ್ತಿನ ಅತ್ಯಂತ ದೊಡ್ಡ ನೆಗೆಟಿವ್ ಎಂದು ಪ್ರತಿಪಾದಿಸಿರುವ ಲೇಖಕರು ತಮ್ಮ ಮಾತಿಗೆ ಸಮರ್ಥನೆಯನ್ನೂ ನೀಡಿದ್ದಾರೆ. ಛಾಯಾಗ್ರಹಣ ಕಲೆಯ ಸಾಧ್ಯತೆಗಳನ್ನು ಹೆಚ್ಚಿಸಿರುವ ಮುಂತಕಾ ಅವರ ವಿಶಿಷ್ಟ ಶೈಲಿಯನ್ನು ಸಮರ್ಥವಾಗಿ ಚಿತ್ರಿಸಿರುವಂತೆಯೇ, ಅವರ ವಿಕ್ಷಿಪ್ತ ವ್ಯಕ್ತಿತ್ವದ ಚಿತ್ರಣವೂ ಪುಸ್ತಕದಲ್ಲಿದೆ. ಬೀದರ್ ಗೆ ಬರುವ ಪ್ರಸಿದ್ಧರ ಫೋಟೋ ತೆಗೆಯುವ ಹವ್ಯಾಸ ಅವರದ್ದು.

ಮುಂತಕಾ ಕುರಿತ ಪುಸ್ತಕ ತೆರೆಮರೆಯಲ್ಲಿ ಉಳಿದ ಸಾಧಕನ ಪರಿಚಯವಷ್ಟೇ ಅಲ್ಲ. ಛಾಯಾಗ್ರಹಣದ ಸಾಧ್ಯತೆಗಳ ಅನಾವರಣದ ಬರಹವೂ ಹೌದು. ಬದುಕಿನ ನೆರಳು ಬೆಳಕುಗಳಂತೆಯೇ ಛಾಯಾಚಿತ್ರದ ನೆರಳು ಬೆಳಕನ್ನೂ ಗಂಭೀರವಾಗಿ ಪರಿಗಣಿಸಿರುವ ಮುಂತಕಾ ಅವರ ಕುರಿತ ಪುಸ್ತಕ ಕಥೆಯಂತೆಯೂ ಓದಿಸಿಕೊಳ್ಳುತ್ತದೆ.

ಶೀರ್ಷಿಕೆ : ಕ್ಯಾಮರಾ ಇಂಜಿನಿಯರ್ ಗುಲಾಂ ಮುಂತಕಾ ಲೇಖಕರು : ದೇವು ಪತ್ತಾರ ಪ್ರಕಾಶಕರು : ಕನ್ನಡ ಪುಸ್ತಕ ಪ್ರಾಧಿಕಾರ ಪುಟಗಳು :101 ಬೆಲೆ: ರೂ.50/-

ಕೃಪೆ : ಪ್ರಜಾವಾಣಿ