ಏಂಗೆಲ್ಸ್ ಚಿಂತನೆಯ ಬೆಳಕಿನಲ್ಲಿ ಮಹಿಳಾ ವಿಮೋಚನೆ ಚರ್ಚಾಗೋಷ್ಟಿಯಲ್ಲಿ ಪುಸ್ತಕ ಬಿಡುಗಡೆ ಏಂಗೆಲ್ಸ್ 200 ಪುಸ್ತಕ ಸರಣಿಯ ಪುಸ್ತಕ ಕುಟುಂಬ ಖಾಸಗಿ ಆಸ್ತಿ ಮತ್ತು ಪ್ರಭುತ್ವ ಇವುಗಳ ಉಗಮ

ಬಿಎಂಶ್ರೀ ಪ್ರತಿಷ್ಠಾನದಲ್ಲಿ ನಡೆಯುವ ಚರ್ಚಾಗೋಷ್ಟಿಯಲ್ಲಿ (zoom link ಮೂಲಕವಾದರೂ)

ಭಾಗವಹಿಸಿ

ಈ ಪುಸ್ತಕದ ಬಗ್ಗೆ ಮಹಿಳಾ ಹೋರಾಟಗಾರ್ತಿ, ಲೇಖಕಿ, ಚಿಂತಕಿ ಡಾ. ಎನ್. ಗಾಯತ್ರಿ ಅವರ ಅಭಿಪ್ರಾಯ ಇದು.

ಜಗತ್ತು ಸ್ವೀಕರಿಸಿದ ಮಾರ್ಕ್ಸ್ ವಾದವೆಂಬ ವಿಶಿಷ್ಟ ಲೋಕದೃಷ್ಟಿಗೆ ಕಾರಣಕರ್ತರಾದ ಜೋಡಿ ಪ್ರತಿಭೆಗಳು ಮಾರ್ಕ್ಸ್ ಮತ್ತು ಏಂಗೆಲ್ಸ್. ಇವರಲ್ಲಿ ಏಂಗೆಲ್ಸ್ ಬರೆದ ಕುಟುಂಬ, ಖಾಸಗಿ ಆಸ್ತಿ ಮತ್ತು ಪ್ರಭುತ್ವಗಳ ಉಗಮ – ಇಡೀ ವಿಶ್ವದ ಮೇಲೆ ಬಹುಮುಖ್ಯ ಪ್ರಭಾವ ಮತ್ತು ಪರಿಣಾಮವನ್ನು ಬೀರಿದ ಕೃತಿ. ಈ ಕೃತಿ ಪ್ರಕಟವಾದಂದಿನಿಂದ ಇಲ್ಲಿಯವರೆಗೆ ಜಗತ್ತಿನ ಜ್ಞಾನ ಪ್ರಪಂಚಕ್ಕೆ ವಿಸ್ತಾರವನ್ನು, ವೈಶಾಲ್ಯತೆಯನ್ನು ನೀಡುತ್ತಲೇ ಬಂದಿದೆ. 1884ರಲ್ಲಿ ಏಂಗೆಲ್ಸ್ ತಮ್ಮ ಮೌಲಿಕ ಕೃತಿಯಾದ `ಕುಟುಂಬ, ಖಾಸಗಿ ಆಸ್ತಿ ಮತ್ತು ಪ್ರಭುತ್ವಗಳ ಉಗಮ’ ಕೃತಿಯನ್ನು ರಚಿಸಿದರು. ಮಾನವ ಜನಾಂಗದ ಪ್ರಾಗೈತಿಹಾಸಿಕ ಕಾಲದ ಜೀವನ ವಿಧಾನವನ್ನು ತೆರೆದಿಡುವ ಈ ಗ್ರಂಥವು ಗ್ರೀಸ್, ಐರ್ಲೆಂಡ್ ಮತ್ತು ಜರ್ಮನಿಯ ಪ್ರಾಚೀನ ಸಮಾಜಗಳ ಪರಿಚಯ ಮಾಡಿಕೊಡುತ್ತದೆ. ಆರಂಭಿಕ ಹಂತದ ಸಾಮ್ಯತೆಯ ಸಮಾಜ, ಇವುಗಳ ನಿರ್ದಿಷ್ಟ ಸ್ವರೂಪವನ್ನು ಚರ್ಚಿಸುತ್ತಾ ಕುಟುಂಬದ ಉಗಮವನ್ನು ಏಂಗೆಲ್ಸ್ ಗುರುತಿಸುತ್ತಾರೆ. ಕ್ರಮೇಣ ಬೆಳೆದು ಬಂದ ಸಾಮಾಜಿಕ-ಆರ್ಥಿಕ ಸಂರಚನೆಗಳು ಸಮಾಜವನ್ನು ಒಂದು ಹಂತದಿಂದ ಇನ್ನೊಂದಕ್ಕೆ ಕೊಂಡೊಯ್ಯುತ್ತಿದ್ದಂತೆ ಕುಟುಂಬ, ಖಾಸಗಿ ಆಸ್ತಿಯನ್ನು ಆಧರಿಸಿದ ವರ್ಗ ಸಮಾಜ ಮತ್ತು ಪ್ರಭುತ್ವ ಹುಟ್ಟಿಕೊಳ್ಳುತ್ತವೆ. ಈ ಮೂರು ಘಟಕಗಳಿಗೂ ಇರುವ ಪರಸ್ಪರ ಸಂಬಂಧಗಳನ್ನು ಅರ್ಥಮಾಡಿಕೊಂಡರಷ್ಟೇ ದಮನದ ಸ್ವರೂಪ ಮತ್ತು ಕಾರಣಗಳು ಸ್ಪಷ್ಟವಾಗುತ್ತವೆ.


ಕಾಡು ಮನುಷ್ಯನ ಕಾಲದಿಂದ ನಾಗರಿಕ ಪೂರ್ವ, ನಾಗರಿಕ ಹಂತದ ಕಾಲದವರೆಗೆ ಸಾಗಿರುವ ಮನುಷ್ಯನ ವಿಕಾಸವನ್ನು ಚರ್ಚಿಸುತ್ತ ಮಾನವ ಸಂಸ್ಕೃತಿಯ ಇತಿಹಾಸವನ್ನು ಈ ಕೃತಿ ಬಿಚ್ಚಿಡುತ್ತದೆ. ಸಮಾಜದಲ್ಲಿ ಗಂಡು-ಹೆಣ್ಣಿನ ನಡುವಿನ ಲೈಂಗಿಕ ಸಂಬಂಧಗಳಲ್ಲಿ ಉಂಟಾದ ಬದಲಾವಣೆ ಈ ಚರಿತ್ರೆಯ ಭಾಗವಾಗಿದೆ. ವಿಶ್ವದ ಹಲವಾರು ಸಮಾಜಗಳಲ್ಲಿ ಕಂಡು ಬಂದ ಬಹುಪತ್ನಿತ್ವ, ಬಹುಪತಿತ್ವದಿಂದ ಏಕಪತಿ-ಪತ್ನಿತ್ವದವರೆಗೆ ಸಾಗಿದ ಸಮಾಜದಲ್ಲಿ ಯಾರು ಯಾರನ್ನು ಮದುವೆಯಾಗುತ್ತಿದ್ದರು, ಎನ್ನುವ ವಿವರಗಳು, ಗೋತ್ರ ವ್ಯವಸ್ಥೆ ಬೆಳೆದು ಬಂದ ರೀತಿ ಮುಂತಾದ ವಿಷಯಗಳನ್ನು ಈ ಕೃತಿ ಸುದೀರ್ಘವಾಗಿ ಚರ್ಚಿಸುತ್ತದೆ. ಗಂಡು-ಹೆಣ್ಣು ಇಬ್ಬರೂ ಸೇರಿ ಕೂಡಿಸುತ್ತಿದ್ದ ಕುಟುಂಬದ ಸಂಪತ್ತು ಗಂಡಸಿನ ಪಾಲಾದದ್ದು ಹೇಗೆ, ವಂಶಾವಳಿಯು ತಾಯಿ ಮತ್ತು ತಂದೆಯ ಮೂಲಕ ಹರಿದು ಬಂದ ವಿನ್ಯಾಸವನ್ನು ಕೂಡ ಚರ್ಚಿಸಲಾಗಿದೆ. ಉತ್ಪಾದನಾ ಶಕ್ತಿಯಲ್ಲಾದ ಬದಲಾವಣೆ ಶ್ರಮ ವಿಭಜನೆಯನ್ನು ಹುಟ್ಟಿ ಹಾಕಿದ್ದು ಮತ್ತು ಅದರಿಂದ ಉಂಟಾದ ವರ್ಗಗಳ ವಿಭಜನೆಯಲ್ಲಿ ಮಹಿಳೆ ಬಹುಮುಖ್ಯ ಶೋಷಿತಳಾದಳು, ಎನ್ನುವುದನ್ನು ಇಲ್ಲಿ ನೋಡಬಹುದು. ಇಂದು ನಾವು ಕಾಣುವ ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗ, ಪೊಲೀಸ್, ಸೈನಿಕರು – ಎಲ್ಲವುಗಳ ಆವಿರ್ಭಾವಕ್ಕೂ ಒಂದು ಚರಿತ್ರೆಯಿದೆಯೆಂಬುದರ ಪ್ರಾಥಮಿಕ ತಿಳುವಳಿಕೆಯನ್ನು ಮತ್ತು ಅದರ ಬದಲಾವಣೆಯ ಪ್ರಕ್ರಿಯೆಯನ್ನು ಈ ಕೃತಿ ಸಾದರಪಡಿಸುತ್ತದೆ.

ಇಂದು ನಮ್ಮೆಲ್ಲರ ಬದುಕು ಸಂಕಷ್ಟದಲ್ಲಿದೆ. ಸಮಷ್ಠಿ ಹಿತವು ಗೌಣವಾಗಿ, ವ್ಯಕ್ತಿಹಿತವು ಮೇಲುಗೈಯ್ಯಾಗಿ, ಹಿರಿದು ತಿನ್ನುವುದೇ ಈ ಯುಗದ ಮೌಲ್ಯವಾಗಿರುವ ಸಂದರ್ಭದಲ್ಲಿ ‘ಹೆಣ್ಣು’ ತನ್ನ ಅಸ್ಮಿತೆಯನ್ನು ಕಳೆದುಕೊಂಡು ಭೋಗದ ವಸ್ತುವಾಗಿದ್ದಾಳೆ; ಪುರುಷನ ಆಸ್ತಿಯಾಗಿ, ಕೌಟುಂಬಿಕ ದೌರ್ಜನ್ಯದ ಸುಳಿಯಲ್ಲಿ ಸಿಕ್ಕಿಕೊಂಡಿದ್ದಾಳೆ. ಕುಟುಂಬದೊಳಗಿನ ಅಧಿಕಾರದ ಅಸಮತೋಲನ ಸಂಬಂಧಗಳು, ಆಸ್ತಿರಹಿತ ಹೆಣ್ಣಿನ ನೋವಿಗೆ ಕಾರಣವಾಗಿವೆ. ವಿವಾಹದ ಚೌಕಟ್ಟು ವಿಸ್ತರಿಸಿದೆ. ವಿಭಿನ್ನ ಲಿಂಗಗಳ ಪರಿಕಲ್ಪನೆ ಬದಲಾಗಿದೆ. ಸಲಿಂಗಿಗಳು ಮತ್ತು ತೃತೀಯ ಲಿಂಗಿಗಳ ಜೀವನ ವಿನ್ಯಾಸಗಳು ನಮ್ಮ ಕಣ್ಣ ಮುಂದಿದೆ. ಈ ಎಲ್ಲ ಅಂಶಗಳನ್ನು ಪ್ರತಿಫಲಿಸುವ ಮತ್ತು ನಿಯಂತ್ರಿಸುವ ಪುರುಷಾಧಿಪತ್ಯದ ಪ್ರಭುತ್ವ, ಸಮಾನತೆಯ ಮಾನವೀಯ ಸಮಾಜವನ್ನು ಕನಸಿನ ಗಂಟಾಗಿಸಿದೆ. ಏಕ ಸಂಸ್ಕೃತಿಯ ದಂಡವನ್ನು ಬಹುಜನರ ಮೇಲೆ ಹೇರಲಾಗುತ್ತಿರುವ ಇಂದಿನ ಭಾರತದ ಸಂದರ್ಭದಲ್ಲಿಯಂತೂ ‘ಸಂಸ್ಕೃತಿ’ಯ ಅಪವ್ಯಾಖ್ಯಾನ ಅಮಾನುಷವಾಗಿ ನಡೆದಿದೆ. ಸಂಸ್ಕೃತಿಯೆಂಬುದು ನಿಂತ ನೀರಲ್ಲ, ಅದು ಕಾಲದ ಪ್ರವಾಹದಲ್ಲಿ ಹಲವಾರು ಸ್ಥಿತ್ಯಂತರ ಹೊಂದಿ ಬದಲಾಗಿದೆ ಮತ್ತು ಅದನ್ನು ಗಮನಿಸಿ, ಗುರುತಿಸಿದಾಗ ಮಾತ್ರ ಸಮಾಜದ ಅನಿಷ್ಟಗಳ ವಿರುದ್ಧ ಹೋರಾಡಲು ಸಾಧ್ಯ, ಎಂಬ ತಿಳುವಳಿಕೆಯ ಅಗತ್ಯ ಜರೂರಾಗಿ ಬೇಕಿದೆ. ಇಂತಹ ಅರಿವನ್ನು ಉಂಟು ಮಾಡುವ ಏಂಗೆಲ್ಸ್ ರ `ಕುಟುಂಬ, ಖಾಸಗಿ ಆಸ್ತಿ ಮತ್ತು ಪ್ರಭುತ್ವ’ ಕೃತಿಯ ಓದು ಇಂದಿನ ವರ್ತಮಾನದ ಅಗತ್ಯವೂ ಹೌದು.


ಕುಟುಂಬ ಸಮಾಜದ ಅತಿ ಮುಖ್ಯ ಘಟಕ. ಅದು ಹೆಣ್ಣಿನ ವಿಷಯದಲ್ಲಿ ಬಹು ಮುಖ್ಯ ಶೋಷಕ ಯಂತ್ರವಾಗಿದೆ. ಹೆಣ್ಣು ತನ್ನ ಶೋಷಣೆಯ ವಿರುದ್ಧ ಹೋರಾಡಲು ಅದರ ಚರಿತ್ರೆಯನ್ನು ಅರ್ಥಮಾಡಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಶೋಷಣೆಯ ಚರಿತ್ರೆಯನ್ನು ವಿವರಿಸುವ ಈ ಕೃತಿ ತಮ್ಮ ದಮನದ ವಿರುದ್ಧ ಹೋರಾಟದಲ್ಲಿ ತೊಡಗಿರುವ ಎಲ್ಲರಿಗೂ ಕೈ ದೀವಿಗೆಯಾಗಿದೆ.


ಇದರ ಕನ್ನಡ ಅನುವಾದಗಳು ಈಗಾಗಲೇ ಒಂದೆರಡು ಬಂದಿದ್ದರೂ, ಈ ಅನುವಾದ ಅತ್ಯಂತ ಸರಳವಾದ ಭಾಷೆಯಲ್ಲಿ ಓದಲು ಮತ್ತು ತಿಳಿಯಲು ಅನುಕೂಲಕರವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪುಸ್ತಕದ ಮೊದಲಿಗೆ, ಅನುವಾದಕಿಯು ಬರೆದಿರುವ ದೀರ್ಘ ಮುನ್ನುಡಿಯು ಪುಸ್ತಕದ ಸಾರ ಸರ್ವಸ್ವವನ್ನು ಒಂದೆಡೆ ಹಿಡಿದಿಟ್ಟಿದೆ. ನಾಲ್ಕು ದಶಕಗಳಿಂದ ಕರ್ನಾಟಕದ ಮಹಿಳಾ ಚಳುವಳಿಯಲ್ಲಿ ತೊಡಗಿಕೊಂಡಿರುವ ಜಯಲಕ್ಷ್ಮಿಯವರು ಈ ಕೃತಿಯ ಪ್ರಸ್ತುತತೆಯನ್ನು ಇಂದಿನ ನಮ್ಮ ದೇಶದ ಪರಿಸ್ಥಿತಿಯ ಹಿನ್ನೆಲೆಯಲ್ಲಿಟ್ಟು ವಿವರಿಸಿದ್ದಾರೆ. ಅದಕ್ಕಾಗಿ ಅನುವಾದಕಿಯು ಅಭಿನಂದನಾರ್ಹರು. ಇಂತಹ ಅಗತ್ಯವಾದ ಪುಸ್ತಕದ ಯೋಜನೆಯನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿರಿಸಿರುವ ನವಕರ್ನಾಟಕ ಪ್ರಕಾಶನ ಮತ್ತು ಕ್ರಿಯಾ ಮಾಧ್ಯಮದವರಿಗೆ ಮನಃಪೂರ್ವಕ ವಂದನೆಗಳು.

ಡಾ. ಎನ್. ಗಾಯತ್ರಿ

ರಾಷ್ಟ್ರೀಯವಾದದ ಅರ್ಥ ಹುಡುಕುತ್ತಾ

ಸರಕಾರವೊಂದು ತನ್ನನ್ನು ’ರಾಷ್ಟ್ರ’ದೊಂದಿಗೆ ಸಮೀಕರಿಸಿಕೊಂಡು, ತನ್ನ ಟೀಕಾಕಾರರನ್ನು, ಭಿನ್ನಮತೀಯರನ್ನು ’ರಾಷ್ಟ್ರ-ವಿರೋಧಿ’ ಎಂದು ಕರೆಯುವುದು ಜರೆಯುವುದು ಜಗತ್ತಿನಲ್ಲಾಗಲಿ ಭಾರತದಲ್ಲಾಗಲಿ ಹೊಸದೇನಲ್ಲ. ಅಂತಹವರ ಮೇಲೆ ’ದೇಶದ್ರೋಹ’ದ ಕೇಸು ದಾಖಲಿಸಿ ಬಂಧಿಸುವುದೂ ಹೊಸದಲ್ಲ. ಆದರೆ ಫೆಬ್ರವರಿ ೯, ೨೦೧೬ರಂದು ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿ ಸಂಘದ ಚುನಾಯಿತ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ನನ್ನು ಮತ್ತಿತರ ವಿದ್ಯಾರ್ಥಿಗಳನ್ನು ’ದೇಶದ್ರೋಹ’ದ ಕೇಸು ಹಾಕಿ ಬಂಧಿಸಿದ್ದು ಒಂದು ಹೊಸ ಟ್ರೆಂಡಿನ ಆರಂಭವಾಗಿತ್ತು. ದೇಶವ್ಯಾಪಿಯಾಗಿ ಉನ್ನತ ಶಿಕ್ಷಣದ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ವೆಚ್ಚ ಏರಿಸುವ, ಅದನ್ನು ಬಡ ವಿದ್ಯಾರ್ಥಿಗಳಿಗೆ ನಿಲುಕದಂತೆ ಮಾಡುವ, ಅಲ್ಲಿನ ಕ್ಯಾಂಪಸ್ ಪ್ರಜಾಪ್ರಭುತ್ವವನ್ನು ಕೊನೆಗೊಳಿಸುವ ನೀತಿಗಳ ಜಾರಿ, ಅದನ್ನು ವಿರೋಧಿಸಿದ ಅದಕ್ಕೆ ಪ್ರತಿರೋಧ ಒಡ್ಡಿದ ವಿದ್ಯಾರ್ಥಿ ನಾಯಕರು ಹಾಗೂ ವಿದ್ಯಾರ್ಥಿಗಳ ಮೇಲೆ ಮತ್ತು ಜತೆಗೆ ಎಲ್ಲಾ ರಾಜಕೀಯ ವಿರೋಧಿಗಳ ಮೇಲೆ ’ದೇಶ-ವಿರೋಧಿ’, ’ದೇಶ-ದ್ರೋಹಿ’ ಎಂದು ವ್ಯಾಪಕವಾಗಿ ಅಪಪ್ರಚಾರ ಮಾಡುವುದು, ಖಾಸಗಿ ಸಶಸ್ತ್ರ ಗ್ಯಾಂಗುಗಳು ಅವರ ಮೇಲೆ ದಾಳಿ-ಹಿಂಸಾಚಾರಗಳನ್ನು ಎಸಗುವುದು ಈ ಹೊಸ ಟ್ರೆಂಡಿನ ಮುಖ್ಯ ಗುಣಗಳಾಗಿದ್ದವು. ಜೆಎನ್‌ಯು ಮತ್ತಿತರ ಉನ್ನತ ಶಿಕ್ಷಣಗಳ ಮೇಲೆ ಡಿಸೆಂಬರ್ ೨೦೧೯ರಿಂದ ನಡೆದ ಇನ್ನೊಂದು ಸುತ್ತಿನ ದಾಳಿ ಇನ್ನಷ್ಟು ತೀವ್ರವಾಗಿದ್ದು, ಇದು ತಾರಕಕ್ಕೆ ಮುಟ್ಟಿದೆ.

೨೦೧೬ರಿಂದಲೂ ಇದಕ್ಕೆ ಪ್ರತಿರೋಧವೂ ಬೆಳೆಯುತ್ತಾ ಬಂದಿದೆ ಮತ್ತು ಅದು ಹೆಚ್ಚೆಚ್ಚು ವ್ಯಾಪ್ತಿ ಹಾಗೂ ಆಳಗಳನ್ನು ಪಡೆಯುತ್ತಿದೆ. ಈ ಟ್ರೆಂಡ್ ಒಂದು ಹೊಸ ಸಕಾರಾತ್ಮಕ ಸಂಗತಿಯನ್ನು ಹುಟ್ಟು ಹಾಕಿತ್ತು.  ದೇಶ/ರಾಷ್ಟ್ರವೆಂದರೇನು? ರಾಷ್ಟ್ರವಾದ ಎಂದರೇನು? ರಾಷ್ಟ್ರವಾದದ ಹಲವು ವಿಧಗಳಿವೆಯೆ? ಇದ್ದರೆ ’ಸರಿಯಾದ’ ರಾಷ್ಟ್ರವಾದವನ್ನು ನಿರ್ಧರಿಸುವವರು ಯಾರು? ಒಂದು ಪ್ರದೇಶದ ಅಥವಾ ಒಂದು ಜನವಿಭಾಗದ ಜನರು ತಮ್ಮ ಆಶೋತ್ತರಗಳು ಈಡೇರದಿದ್ದಾಗ ಅಥವಾ ದಮನಕ್ಕೊಳಗಾದಾಗ ಅವರು ಆಳುವವರ ಪ್ರಭುತ್ವದ ಅಧಿಕೃತ ’ರಾಷ್ಟ್ರವಾದ’ವನ್ನು ಪ್ರಶ್ನಿಸುವುದು, ಅದಕ್ಕೆ ಬದಲಿ ಪ್ರಸ್ತಾವಿಸುವುದು ತಪ್ಪೆ? ’ದೇಶದ್ರೋಹ’ವೇ? ೨೦೧೬ರ ಜೆಎನ್‌ಯು ಮೇಲೆ ದಾಳಿಯ ಸಂದರ್ಭದಲ್ಲೇ ಈ ಪ್ರಶ್ನೆಗಳು ಜೆಎನ್‌ಯು ನ ಒಳಗೂ ಹೊರಗೂ ತೀವ್ರ ಚರ್ಚೆಗೆ ಒಳಗಾದವು. ಇದಕ್ಕೆ ಉತ್ತರ ಹುಡುಕುವ ಭಾಗವಾಗಿ ಜೆಎನ್‌ಯು ಅಧ್ಯಾಪಕರ ಸಂಘ ಜೆಎನ್‌ಯು ಆಡಳಿತ ಬ್ಲಾಕಿನ ಅಂಗಳದಲ್ಲಿ ರಾಷ್ಟ್ರವಾದದ ಕುರಿತ ವಿವಿಧ ಜ್ಞಾನಕ್ಷೇತ್ರಗಳ (ಇತಿಹಾಸ, ರಾಜಕೀಯಶಾಸ್ತ್ರ, ಸಮಾಜಶಾಸ್ತ್ರ, ಭಾಷಾಶಾಸ್ತ್ರ ಇತ್ಯಾದಿ) ಹಲವು ಪರಿಣತರಿಂದ ಉಪನ್ಯಾಸ ಮಾಲೆ ಏರ್ಪಡಿಸಿತು. ಸುಮಾರು ಒಂದು ತಿಂಗಳ ಕಾಲ ನಡೆದ ೨೪ ಉಪನ್ಯಾಸಗಳಲ್ಲಿ ರೊಮಿಲಾ ಥಾಪರ್, ಪ್ರಭಾತ್ ಪಟ್ನಾಯಕ್, ಗೋಪಾಲ ಗುರು ರಂತಹ ಪ್ರಸಿದ್ಧ ಜೆಎನ್‌ಯು ಪ್ರಾಧ್ಯಾಪಕರಲ್ಲದೆ, ಅಚಿನ್ ವನೈಕ್, ಜೈರಸ್ ಬಾನಾಜಿ ರಂತಹ ದೇಶ/ವಿದೇಶಗಳ ಪ್ರಸಿದ್ಧ ವಿ.ವಿಗಳ ಪರಿಣತರೂ ಉಪನ್ಯಾಸ ನೀಡಿದರು. ಇದು ೨೦೧೬ರಲ್ಲೇ ಇಂಗ್ಲೀಷಿನಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಯಿತು.

ರಾಷ್ಟ್ರವಾದದ ಬಗೆಗಿನ ಗಂಭೀರ ಚರ್ಚೆಯನ್ನು ಕರ್ನಾಟಕದಲ್ಲೂ ಆರಂಭಿಸುವ ಅಗತ್ಯ ಹಿಂದೆಂದಿಗಿಂತಲೂ ಈ ಆವಶ್ಯಕವಾಗಿದೆ.

ರಾಷ್ಟ್ರವಾದದ ಬಗೆಗಿನ ವಿವಿಧ ಅಭಿಪ್ರಾಯಗಳ, ಹಲವು ಮಗ್ಗುಲುಗಳಿಂದ ನೋಡುವ, ಹಲವು ಆಯಾಮಗಳನ್ನು ಪ್ರಸ್ತುತಪಡಿಸುವ ಈ ಪುಸ್ತಕ, ಕರ್ನಾಟಕದ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಬಹಳ ಉಪಯೋಗಿ ಆಕರ ಗ್ರಂಥವಾಗಬಲ್ಲದು. ರಾಷ್ಟ್ರವಾದದ ಬಗೆಗಿನ ಚರ್ಚೆಯ ಕುರಿತು ಆಸಕ್ತಿ ಇರುವ ಎಲ್ಲರಿಗೂ ಇದೊಂದು ಉತ್ತಮ ಕೈಪಿಡಿ. ಕರ್ನಾಟಕದಲ್ಲಿ ರಾಷ್ಟ್ರವಾದದ ಕುರಿತು ಭಿನ್ನಾಭಿಪ್ರಾಯಗಳನ್ನು ಲಾಠಿ-ಮಚ್ಚುಗಳ ಮತ್ತು ಐಪಿಸಿ ಕಲಮುಗಳ ಭಾಷೆಯಲ್ಲಿ ’ಪರಿಹರಿಸು’ವುದರಿಂದ ಗಂಭೀರ ವಾಗ್ವಾದದತ್ತ ಹೊರಳಿಸುವುದರಲ್ಲಿ ಈ ಪುಸ್ತಕ ನೆರವಾಗಬಲ್ಲದು.

ಶೀರ್ಷಿಕೆ : ಜೆಎನ್ ಯು ಅಂಗಳದಲ್ಲಿ ರಾಷ್ಟ್ರೀಯವಾದದ ಕ್ಲಾಸುಗಳು ಅನುವಾದ : ಬಿ. ಶ್ರೀಪಾದ ಭಟ್ ಪ್ರಕಾಶಕರು : ಕ್ರಿಯಾ ಮಾಧ್ಯಮ ಪ್ರೈ. ಲಿ.      ಪುಟಗಳು : 216 ಬೆಲೆ : ರೂ.180/- ಪ್ರಕಟಣಾ ವರ್ಷ : 2020

ಪುಸ್ತಕ ಪುರಸ್ಕಾರ ಪ್ರಧಾನ ಸಮಾರಂಭಕ್ಕೆ ಆಹ್ವಾನ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 2015ನೇ ಸಾಲಿನ ಗೌರವ ಪ್ರಶಸ್ತಿ ಪಡೆದಿರುವ ಪ್ರತಿಷ್ಟಿತ ಅನುವಾದಕರಿಗೆ ಹಾಗೂ 2014ನೇ ಸಾಲಿನ ಶ್ರೇಷ್ಟ ಅನುವಾದಕ್ಕಾಗಿ ಪುರಸ್ಕೃತರಾದವರಿಗೆ ಅಭಿನಂದನೆಗಳು.

20160314_161800

ಪುಸ್ತಕ ಪ್ರೀತಿ ತಿಂಗಳ ಮಾತುಕತೆಯಲ್ಲಿ ಭಾಗವಹಿಸಿ

PP-Thingala Mathukathe-secularvada

ಜನನುಡಿ – ನುಡಿ ಉತ್ಸವದಲ್ಲಿ ಪುಸ್ತಕ ಬಿಡುಗಡೆ

Inv - Jananudi

ಸಂವಿಧಾನ ಸಭೆ(25-11-1949)ಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾಷಣ

endinavarege samanateya nirakarane - Front

endinavarege samanateya nirakarane - Back

ಶೀರ್ಷಿಕೆ : ಎಂದಿನವರೆಗೆ ಸಮಾನತೆಯ ನಿರಾಕರಣೆ ಲೇಖಕರು: ಡಾ. ಬಿ.ಆರ್.ಅಂಬೇಡ್ಕರ್ ಅನುವಾದ: ಶಮೀಮಾ ಕೆ.ಪಿ. ಪ್ರಕಾಶಕರು:ಕ್ರಿಯಾ ಪುಸ್ತಕ ಪುಟ:40 ಬೆಲೆ:ರೂ.20/-

ಸಂಘ ಪರಿವಾರದ ಇಟಾಲಿಯನ್ ಕನೆಕ್ಷನ್

blog0001Front

blog0001Backಶೀರ್ಷಿಕೆ : ಸಂಘ ಪರಿವಾರದ ಇಟಾಲಿಯನ್ ಕನೆಕ್ಷನ್ ಲೇಖಕರು: ಎ.ಜಿ. ನೂರಾಣಿ, ಮಾರ್ಝಿಯಾ ಕಾಸೋಲರಿ ಅನು:ಟಿ.ಯಶವಂತ ಪ್ರಕಾಶಕರು:ಕ್ರಿಯಾ ಪುಸ್ತಕ ಪುಟ:68 ಬೆಲೆ:ರೂ.60/-

ಬಹುಸಂಖ್ಯಾತವಾದ ಚಿಂತಕರು ಕಂಡಂತೆ

Bahusankyatavada Front

Bahusankyatavada backಶೀರ್ಷಿಕೆ : ಬಹುಸಂಖ್ಯಾತವಾದ ಚಿಂತಕರು ಕಂಡಂತೆ ಸಂಗ್ರಹ – ಅನುವಾದ : ಬಿ. ಶ್ರೀಪಾದ, ಪ್ರಕಾಶರು: ಕ್ರಿಯಾ ಪುಸ್ತಕ  ಬೆಲೆ:65/-

ಅಪವ್ಯಾಖ್ಯಾನಗಳನ್ನು ನಿಜವ್ಯಾಖ್ಯಾನಗಳಿಂದ ಹಿಮ್ಮೆಟ್ಟಿಸಲು ಪುಸ್ತಕಪ್ರೀತಿ ಮಾತುಕತೆ – ಬರಗೂರು

 20140726_155236
ಇದು ಅಪವ್ಯಾಖ್ಯಾನಗಳ ಕಾಲ. ಧರ್ಮ, ಭಕ್ತಿ, ಸಂಸ್ಕೃತಿ, ರಾಜಕೀಯ, ದೇಶಭಕ್ತಿ – ಇವೆಲ್ಲವುಗಳ ಅಪವ್ಯಾಖ್ಯಾನ ನಡೆದಿದೆ. ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿ ಇಂತಹ ಅಪವ್ಯಾಖ್ಯಾನಕ್ಕೆ ಅತ್ಯಂತ ಹೆಚ್ಚು ಒಳಗಾಗಿದೆ. ಅಭಿವೃದ್ಧಿ ಸೇರಿದಂತೆ ಇವುಗಳ ನಿಜ ವ್ಯಾಖ್ಯಾನ ಆಗಬೇಕಾಗಿದೆ. ಪುಸ್ತಕಗಳ ಸುತ್ತ ಮಾತುಕತೆ ಇದರಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಸಫ್ದರ್ ಹಷ್ಮಿ ತಮ್ಮ ಒಂದು ಕವನದಲ್ಲಿ ಹೇಳಿದಂತೆ ‘ಪುಸ್ತಕಗಳು ಮಾತನಾಡುತ್ತವೆ’. ಪುಸ್ತಕಗಳ ಜತೆ ನಮ್ಮದು ಮೌನ ಮಾತುಕತೆ. ಪುಸ್ತಕಪ್ರೀತಿ ಅಂದರೆ ಪುಸ್ತಕಗಳ ಬಗ್ಗೆ ಪ್ರೀತಿ ಮಾತ್ರ ಅಲ್ಲ. ಪುಸ್ತಕಗಳನ್ನು ಓದುವ ಬಗ್ಗೆ ಪ್ರೀತಿ ಅಭಿರುಚಿ ಉಂಟು ಮಾಡುವುದು ಮಾತ್ರವಲ್ಲ. ಮನುಷ್ಯಪ್ರೀತಿ ಸಹ. ನಿಜವಾದ ಮಾನವಪ್ರೀತಿ ಸಮಾನತೆ ಇಲ್ಲದೆ ಸಾಧ್ಯವಿಲ್ಲ.  ಆದ್ದರಿಂದ  ಮಾನವಪ್ರೀತಿ ಇರುವ ಪುಸ್ತಕಗಳು ಪ್ರೀತಿಯನ್ನು ಹಂಚುತ್ತವೆ. ಚಂದ್ರ ಪೂಜಾರಿ ಅವರ  ‘ಅಭಿವೃದ್ಧಿ ಮತ್ತು ರಾಜಕೀಯ’ ಇಂತಹ ಪುಸ್ತಕ. ಭೀತಿಯನ್ನು ಹಂಚುವ ಪುಸ್ತಕಗಳೂ ಇವೆ. 20ನೇ ಶತಮಾನ ವಾಗ್ವಾದಗಳ, ಜಿಗಿತಗಳ, ‘ಅನೇಕ’ಗಳ ಕಾಲವಾಗಿತ್ತು. ಪ್ರಗತಿಪರರಿಗೆ ಆತ್ಮವಿಶ್ವಾಸದ ಕಾಲವಾಗಿತ್ತು. 21ನೇ ಶತಮಾನ ‘ಅನೇಕ’ಗಳನ್ನು ‘ಏಕ’ಗೊಳಿಸಿದ ಕಾಲ – ಏಕ ಧರ್ಮ, ಏಕ ಭಾಷೆ, ಏಕ ಸಿದ್ಧಾಂತ, ಏಕ ಸಂಸ್ಕೃತಿ.  ಪ್ರಗತಿಪರರಿಗೆ ಆತ್ಮಾವಲೋಕನದ ಕಾಲ. ಪ್ರಜಾಪ್ರಭುತ್ವ ಸಮಾನತೆಗಳ ಆಶಯಗಳನ್ನು ಗಟ್ಟಿಗೊಳಿಸುವ  ವಿಸ್ತರಿಸುವ, ‘ಅನೇಕ’ಗಳ ಅನನ್ಯತೆ ಉಳಿಸಿಕೊಳ್ಳುವ, ಬೌದ್ಧಿಕ ವಿಭಜನೆ ಮಾಡದ, ಪುಸ್ತಕಗಳ ಓದು ಮತ್ತು ಅದರ ಬಗ್ಗೆ ಮಾತುಕತೆ ಇಂದಿನ ಅಗತ್ಯ. ಹೊಸ ಅರಿವಿನೊಂದಿಗೆ ಹಳೆಯ ಪುಸ್ತಕಗಳ ಓದು, ಹಳೆಯ ಅರಿವಿನೊಂದಿಗೆ ಹೊಸ ಪುಸ್ತಕಗಳ ಓದು ಬೇಕಾಗಿದೆ.  ‘ಪುಸ್ತಕಪ್ರೀತಿ ತಿಂಗಳ ಮಾತುಕತೆ’ಗಳ ಮಾಲಿಕೆ ಈ ಆಶಯಗಳನ್ನು ಸಾಕಾರಗೊಳಿಸುತ್ತದೆ. ಆ ಮೂಲಕ ಸೈದ್ಧಾಂತಿಕ ರಾಜಕಾರಣವನ್ನು ಗಟ್ಟಿಗೊಳಿಸುತ್ತದೆ. ಜಾತಿಗಳನ್ನು ಮೀರಿದ ಸಾಮಾಜಿಕ ನಾಯಕತ್ವ, ಧರ್ಮಗಳನ್ನು ಮೀರಿದ ಧಾರ್ಮಿಕ ನಾಯಕತ್ವ, ಪಕ್ಷಗಳನ್ನು ಮೀರಿದ ರಾಜಕೀಯ ನಾಯಕತ್ವ ಸಾಧ್ಯ ಮಾಡುತ್ತದೆ ಎಂಬ ವಿಶ್ವಾಸ ನನಗಿದೆ.
20140726_155337 (2)
ಇದು ನಾಡೋಜ ಬರಗೂರು ರಾಮಚಂದ್ರಪ್ಪ ಅವರ ಮಾತುಗಳ ಸಾರ. ಅವರು ‘ಪುಸ್ತಕಪ್ರೀತಿ ತಿಂಗಳ ಮಾತುಕತೆ’ ಮಾಲಿಕೆ ಉದ್ಘಾಟಿಸುತ್ತಿದ್ದರು. ‘ಪುಸ್ತಕಪ್ರೀತಿ’ ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟಿನಲ್ಲಿ ಹೊಸದಾಗಿ ಆರಂಭವಾದ ಪುಸ್ತಕ ಮಳಿಗೆ. ‘ಪುಸ್ತಕಪ್ರೀತಿ’ ಪ್ರತಿ ತಿಂಗಳು ಒಂದು ಪುಸ್ತಕವನ್ನು ಎತ್ತಿಕೊಂಡು ಅದರ ಬಗ್ಗೆ ಮಾತುಕತೆ ಹಮ್ಮಿಕೊಳ್ಳಲಿದೆ. ಈ ಮಾಲಿಕೆಯ ಮೊದಲ ಮಾತುಕತೆ ಪ್ರೊ.ಚಂದ್ರ ಪೂಜಾರಿ ಅವರ ‘ಅಭಿವೃದ್ಧಿ ಮತ್ತು ರಾಜಕೀಯ’ ಎಂಬ ಪುಸ್ತಕದ ಬಗ್ಗೆ ಇತ್ತು. ‘ಪುಸ್ತಕಪ್ರೀತಿ’, ‘ಪುಸ್ತಕಪ್ರೀತಿ ತಿಂಗಳ ಮಾತುಕತೆ’ ಮಾಲಿಕೆಯ ಆಶಯ ಮತ್ತು ಮೊದಲ ಮಾತುಕತೆಯ ಪುಸ್ತಕದ ವಿಷಯ – ಇವನ್ನೆಲ್ಲಾ ಬರಗೂರು ಅವರು, ಬಹುಶಃ ಸಂಘಟಕರು ಸಹ ಕಂಡುಕೊಳ್ಳದಷ್ಟು, ಸಮಗ್ರವಾಗಿ ಮತ್ತು ಮನಮುಟ್ಟುವಂತೆ ಮಂಡಿಸಿದರು.ಐಸೆಕ್(ISEC)ನ ಸಮಾಜವಿಜ್ಞಾನಿ  ಡಾ.ಕೆ.ಜಿ.ಗಾಯತ್ರಿದೇವಿ ಪುಸ್ತಕದ ಸಾರವನ್ನು ಅಚ್ಚುಕಟ್ಟಾಗಿ ಮಂಡಿಸಿ ಚರ್ಚೆಗೆ ಚಾಲನೆ ನೀಡಿದರು. ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಕೆ.ಪ್ರಕಾಶ್ ಪುಸ್ತಕದ ಕೆಲವು ಪ್ರಮುಖ ಆಯಾಮಗಳ ಬಗ್ಗೆ ಬೆಳಕು ಚೆಲ್ಲಿ ಚರ್ಚೆಯನ್ನು ಮುಂದಕ್ಕೊಯ್ದರು. ಆ ಮೇಲೆ ಚರ್ಚೆಯಲ್ಲಿ ಸಭಿಕರು ಭಾಗವಹಿಸಿದರು.
20140726_173653 (2)
1980ರ ದಶಕದ ನಂತರ ಅಕಾಡೆಮಿಕ್ ಚರ್ಚೆಗಳಿಂದ ಮತ್ತು ವಿಶ್ವಸಂಸ್ಥೆಯ ಮಿಲೆನಿಯಂ ಡೆವಲೆಪ್ ಮೆಂಟ್ ಗೋಲ್ಸ್ ನಿಂದ  ಅಭಿವೃದ್ಧಿಯ ಬಗ್ಗೆ ಹೊಮ್ಮಿದ ವಿಚಾರಗಳು ಅಕಾಡೆಮಿಕ್ ಸರಕಾರಿ ವಲಯಗಳಿಗೆ ಸೀಮಿತವಾಗಿದ್ದವು. ‘ಅಭಿವೃದ್ಧಿ ಮತ್ತು ರಾಜಕೀಯ’ ಇವನ್ನು ಜನಪರ ದೃಷ್ಟಿಯಿಂದ ಟೀಕಾತ್ಮಕವಾಗಿ ನೋಡುತ್ತಾ ಜನರ ಮಧ್ಯೆ ಕೊಂಡೊಯ್ಯುವ ವಿಶಿಷ್ಟ ಪ್ರಯತ್ನ. ವಿಶಾಲವಾದ ಕ್ಯಾನ್ವಾಸ್ ಹೊಂದಿದ್ದೂ ನಿರ್ದಿಷ್ಟವಾಗಿದ್ದೂ ಎಲ್ಲರಿಗೂ ನಿಲುಕುವ ಪರಿಭಾಷೆಯಲ್ಲಿ ಸರಾಗವಾಗಿ ಓದಿಸಿಕೊಂಡು ಹೋಗುವ ಕೃತಿ ಇದು. ಜನಪರ ಕಾರ್ಯಕರ್ತರಿಗೆ ಅಭಿವೃದ್ಧಿ ಬಗ್ಗೆ ಉತ್ತಮ ಕೈಪಿಡಿ. ಬಡತನ, ಮಹಿಳೆ, ಜಾತಿ, ಗುರುತಿನ ರಾಜಕೀಯ, ಸಾಂಸ್ಕೃತಿಕ ರಾಜಕೀಯ, ಶಿಕ್ಷಣ ಹಾಗೂ ಅಭಿವೃದ್ಧಿ ನಡುವಿನ ಸಂಬಂಧಗಳನ್ನು ಎಳೆ ಎಳೆಯಾಗಿ ಬಿಡಿಸಿಡುವ ಕೃತಿ. ಅಭಿವೃದ್ಧಿ ಬಗ್ಗೆ ಇರುವ ಹಲವು ಜನ-ವಿರೋಧಿ (ಉದಾ: ಶ್ರೀಮಂತರ ಅಭಿವೃದ್ಧಿ ಸೋರುತ್ತಾ ಕ್ರಮೇಣ  ಬಡವರಿಗೆ ತಲುಪುತ್ತದೆ ಎನ್ನುವ ಟ್ರಿಕಲ್ ಡೌನ್ ಥಿಯರಿ) ಮತ್ತು ಜನ-ಪರ ದೃಷ್ಟಿಕೋಣಗಳನ್ನು ವಿಶ್ಲೇಷಿಸಿ ತಾರ್ಕಿಕವಾಗಿ ನಿರ್ದಿಷ್ಟ ಜನಪರ ದೃಷ್ಟಿ ಮೂಡಿಸುತ್ತದೆ. ಸಾಮಾನ್ಯವಾಗಿ ಯಾವುದೇ ಅಭಿವೃದ್ಧಿಯ ಚರ್ಚೆಯಲ್ಲಿ ಪ್ರಧಾನವಾಗಿ ಯಜಮಾನಿಕೆ ಸ್ಥಾಪಿಸುವ ಜಿಡಿಪಿ ಮತ್ತು ಅಗಾಧ ಗೋಜಲು ಮಾಡುವ ಅಂಕೆಸಂಖ್ಯೆಗಳನ್ನು ಬಹುಶ: ಉದ್ದೇಶಪೂರ್ವಕವಾಗಿಯೇ ಬಿಟ್ಟುಕೊಟ್ಟು ಪರಿಕಲ್ಪನೆಗಳ ಮೇಲೆ ಒತ್ತು ಕೊಡುತ್ತದೆ. 1950ರ ದಶಕದಿಂದ 1970ರವರೆಗಗಿನ ಅಭಿವೃದ್ಧಿ ಮಾದರಿಯನ್ನು ಸೋಶಲಿಸ್ಟ್ ಅಥವಾ ಸೋಶಲ್ ಡೆಮೊಕ್ರಾಟಿಕ್ ಎಂದು ಕರೆಯುವುದು ತಪ್ಪಾಗುತ್ತದೆ. ಇದು ಕ್ಯಾಪಿಟಲಿಸ್ಟ್ ಅಭಿವೃದ್ಧಿಯ  (ಬಂಡವಾಳಶಾಹಿ ಬಳಿ ಸಾಕಷ್ಟು ಬಂಡವಾಳ ಇಲ್ಲದಾಗ ಅಥವಾ ಲಾಭ ಇಲ್ಲದ ಕ್ಷೇತ್ರದಲ್ಲಿ ರಿಸ್ಕ್ ತೆಗೆದುಕೊಳ್ಳಲು ತಯಾರಿಲ್ಲದ)ಮೊದಲ ಹಂತದಲ್ಲಿ ಕಂಡು ಬರುವ ಪ್ರಭುತ್ವ ಬಂಡವಾಳಶಾಹಿ ಅಷ್ಟೆ. ಮೈಸೂರು ಪ್ರಾಂತ್ಯದಲ್ಲಿ ಸಹ ಸ್ವಾತಂತ್ರ್ಯಪೂರ್ವದಲ್ಲಿ ಇಂತಹುದೇ ಮಾದರಿಯನ್ನು ನೋಡಬಹುದು. 1990ರ ದಶಕದ ನಂತರ ವ್ಯಾಪಕವಾಗಿ ಜಾರಿಗೆ ಬಂದ ‘ಮಾರುಕಟ್ಟೆ ನಿರ್ದೇಶಿತ ಮಾದರಿ’ ಕ್ಯಾಪಿಟಲಿಸ್ಟ್ ಮಾದರಿಯ ಇನ್ನೊಂದು ಹಂತ. ಅದಕ್ಕೆ ಮೂಲಕಾರಣವಾದ ಅಂತರ್ರಾಷ್ಟ್ರೀಯ ಹಣಕಾಸು ಬಂಡವಾಳದ ಉದಯ, ಅಲ್ಲದೆ ವಿಕೇಂದ್ರೀಕರಣ, ಪರಿಸರ ತಾಳಿಕೊಳ್ಳುವ ಅಭಿವೃದ್ಧಿ ಇವುಗಳ ಪ್ರಸ್ತಾಪ ಇದ್ದರೆ ಪುಸ್ತಕ ಇನ್ನಷ್ಟು ಸಮಗ್ರವಾಗುತ್ತಿತ್ತು. ಆಮ್ ಆದ್ಮಿ ಪಕ್ಷದ ಅಭಿವೃದ್ಧಿ ಮಾದರಿ, ಗುರುತಿನ ರಾಜಕೀಯ ಇತ್ಯಾದಿಗಳ ಬಗ್ಗೆ ಕೆಲವು ಸಂದೇಹಗಳನ್ನು ವ್ಯಕ್ತಪಡಿಸಲಾಯಿತು. ಇದು ನಡೆದ ಮಾತುಕತೆಗಳ ಸಾರ.
20140726_155300 (2)
ಮಾತುಕತೆಯಲ್ಲಿ ಭಾಗವಹಿಸಿದವರ ಪ್ರಶ್ನೆ, ಸಂದೇಹಗಳಿಗೆ ಪ್ರತಿಕ್ರಿಯಿಸುತ್ತಾ ತಮ್ಮ ಪುಸ್ತಕದ ಸಾರದ ಬಗ್ಗೆ ಪ್ರೊ.ಚಂದ್ರ ಪೂಜಾರಿ ಮಾತನಾಡಿದರು. ಆಮ್ ಆದ್ಮಿ ಪಕ್ಷ ಕ್ಯಾಪಿಟಲಿಸ್ಟ್ ಹಿಡಿತದಲ್ಲಿರುವ ಮಾಧ್ಯಮಗಳ ಸೃಷ್ಟಿ. ಎಡಪಕ್ಷಗಳ ಜನಪರ ಬದಲಿ ಮುನ್ನೆಲೆಗೆ ಬರದಂತೆ ಅದನ್ನು ಮಾಧ್ಯಮಗಳು ಅಬ್ಬರದ ಪ್ರಚಾರ ಕೊಟ್ಟು ಮುಂದಿಟ್ಟವು. ದೆಹಲಿಯಲ್ಲಿ ಅಧಿಕಾರಕ್ಕೆ ಬಂದು ಕೆಲವು ಕ್ಯಾಪಿಟಲಿಸ್ಟ್ -ವಿರೋಧಿ (ಅಂಬಾನಿ ಮೇಲೆ ಚಾರ್ಜ್ ಶೀಟ್, ವಿದ್ಯುತ್ ಕಂಪನಿಗಳ ಆಡಿಟ್) ಕ್ರಮಗಳನ್ನು ಕೈಗೊಂಡ ಕೂಡಲೇ ಅದನ್ನು ಮಾಧ್ಯಮಗಳೇ ನಾಶ ಮಾಡಿದವು. ಆಮ್ ಆದ್ಮಿ ಪಕ್ಷದ ಉದಯ, ಏಳು-ಬೀಳು ಬಗ್ಗೆ ಪುಸ್ತಕದಲ್ಲಿ ವ್ಯಕ್ತಪಡಿಸಿದ  ತಮ್ಮ ಅಭಿಪ್ರಾಯ ಬದಲಾಗಿಲ್ಲ ಎಂದರು.  ಬಡತನ, ನಿರುದ್ಯೋಗ, ಕಾರ್ಮಿಕರ ಶೋಷಣೆ ಇವೆಲ್ಲ ಕ್ಯಾಪಿಟಲಿಸ್ಟ್ ಮಾದರಿಯ ನೀತಿಗಳ ಫಲ. ಸರಕಾರ ಇದನ್ನು  ನಿವಾರಿಸುವುದಿಲ್ಲ ಮಾತ್ರವಲ್ಲ, ಇವನ್ನು ಸೃಷ್ಟಿ ಮಾಡುತ್ತವೆ. ಅಭಿವೃದ್ಧಿಗೆ ಸಂಬಂಧಿಸಿದಂತೆ ಕಾಂಗ್ರೆಸ್-ಬಿಜೆಪಿ ಸೇರಿದಂತೆ ಹಲವು ಪಕ್ಷಗಳ ಧೋರಣೆ ಕ್ಯಾಪಿಟಲಿಸ್ಟ್ ಪರ ಎಂದು ಮುಂದಿನ 5-10 ವರ್ಷಗಳಲ್ಲಿ ಬಹುಪಾಲು ಜನರಿಗೆ ಸ್ಪಷ್ಟವಾಗಲಿದೆ. ಅವುಗಳ ಬಗ್ಗೆ ಭ್ರಮನಿರಸನವಾಗಲಿದೆ. ಈ ಅವಧಿ ಪರ್ಯಾಯ ಅಭಿವೃದ್ದಿ ಮಾದರಿ ಆಧಾರಿತ ಪರ್ಯಾಯ ರಾಜಕೀಯದ ಬಗ್ಗೆ ಜನರಿಗೆ ಮನವರಿಕೆ ಮಾಡಲು ಪ್ರಶಸ್ತವಾದ ಸಮಯ. ಎಡ-ಪ್ರಗತಿಪರ ಪಕ್ಷಗಳಿಗೆ ಇದು ಒಂದು ಸವಾಲು ಮತ್ತು ಮಹಾನ್ ಅವಕಾಶ ಕೂಡಾ. ವರ್ಗ ದೃಷ್ಟಿಕೋಣ ಬಿಟ್ಟು ಕೊಡದೆ ಎಲ್ಲಾ ಸಮುದಾಯಗಳ ತಳಸ್ತರದ ಜನರನ್ನು ಒಗ್ಗೂಡಿಸುವ ಮತ್ತು ಮುಟ್ಟುವ ಹೊಸ ಪರಿಭಾಷೆಯನ್ನು ರೂಪಿಸಬೇಕಾಗಿದೆ ಎಂದು ಅವರು ಹೇಳಿದರು. ಇದು ವಿಚಾರಗಳ ಸಮರ. ಪ್ರಗತಿಪರ ವಿಚಾರಗಳನ್ನು ಜನರ ಪ್ರಜ್ಞೆಯ ಭಾಗವಾಗಿಸುವ ಸಮರ. ಇದರಲ್ಲಿ ಶಿಕ್ಷಿತರು ದೊಡ್ಡ ಪ್ರಮಾಣದಲ್ಲಿ ಭಾಗವಹಿಸಬೇಕು. ಈ ನಿಟ್ಟಿನಲ್ಲಿ ಈ ಪುಸ್ತಕ ಒಂದು ಪ್ರಯತ್ನ ಎಂದು ಚಂದ್ರ ಪೂಜಾರಿಯವರು ಹೇಳಿದರು.
ವಿ.ಜೆ.ಕೆ.ನಾಯರ್ ಅಧ್ಯಕ್ಷೀಯ ಮಾತುಗಳನ್ನು ಆಡುತ್ತಾ ಕ್ಯಾಪಿಟಲಿಸ್ಟ್ ಮಾದರಿಯ ಈಗಿನ ಹಂತದ  ನೀತಿಗಳು 1980ರ ದಶಕದಲ್ಲಿ ವಿಶ್ವಬ್ಯಾಂಕ್ ಹೊರಿಸಿದ ನೀತಿಗಳ ಫಲ ಎಂದು ಬಿ,ಇ.ಎಲ್.ನ ಉದಾಹರಣೆಯೊಂದಿಗೆ ವಿವರಿಸಿದರು. ಈ  ಹಂತದಲ್ಲಿ ಕಾರ್ಮಿಕರಿಂದ ಹೆಚ್ಚುವರಿ ಮೌಲ್ಯ ಕಿತ್ತುಕೊಳ್ಳುವುದರ ಜತೆ, ಎಲ್ಲಾ ದುಡಿಯುವ ಜನರ ಮತ್ತು ಸಾರ್ವಜನಿಕ ಸಂಪತ್ತನ್ನು ಕಿತ್ತುಕೊಳ್ಳುವ ಆದಿಮ ಕ್ಯಾಪಿಟಲ್ ಸಂಗ್ರಹದಲ್ಲಿ ತೊಡಗಿದ್ದಾರೆ ಎಂದರು. ಪುಸ್ತಕಪ್ರೀತಿಯ ಕೆ.ಎಸ್.ವಿಮಲ ಮಾತುಕತೆಯನ್ನು ನಡೆಸಿಕೊಟ್ಟರು.

ಪುಸ್ತಕಪ್ರೀತಿ ತಿಂಗಳ ಮಾತುಕತೆ -1: ಚಂದ್ರ ಪೂಜಾರಿ ಅವರ ‘ಅಭಿವೃದ್ಧಿ ಮತ್ತು ರಾಜಕೀಯ’

Pusthaka Preethi Mathukathe 1-July26