
Filed under: Uncategorized | Leave a Comment »

Filed under: Uncategorized | Leave a Comment »

ಅರಮನೆ ಮೈದಾನದಲ್ಲಿ ಶುಕ್ರವಾರ ಆರಂಭವಾಗುವ ಪುಸ್ತಕೋತ್ಸವದಲ್ಲಿ 340 ಕ್ಕೂ ಹೆಚ್ಚು ಮಳಿಗೆಗಳಿವೆ. ಲಕ್ಷಾಂತರ ಪುಸ್ತಕಗಳಿವೆ. ಇದೊಂದು ಜ್ಞಾನ ಭಂಡಾರ.
ಪುಸ್ತಕ ಪ್ರಿಯರು ಕಾತರದಿಂದ ನಿರೀಕ್ಷಿಸುವ ಬೆಂಗಳೂರು ಪುಸ್ತಕ ಹಬ್ಬ ಶುಕ್ರವಾರ 06-11-2009 ದಿಂದ ಹತ್ತು ದಿನ ಕಾಲ ಅರಮನೆ ಮೈದಾನದಲ್ಲಿ ನಡೆಯಲಿದೆ.
ಏಷ್ಯಾದ ಎರಡನೇ ಅತಿ ದೊಡ್ಡ ಪುಸ್ತಕೋತ್ಸವ ಎನ್ನುವುದು ಇದರ ಹೆಗ್ಗಳಿಕೆ. ಈ ಬಾರಿಯದು ಏಳನೇ ವರ್ಷದ ಪುಸ್ತಕೋತ್ಸವ.
ಮೂರು ಲಕ್ಷಕ್ಕೂ ಅಧಿಕ ಮಂದಿ ಪುಸ್ತಕ ಪ್ರೇಮಿಗಳು ಭೇಟಿ ಸಂಘಟಕರ ಅಂದಾಜು. ಈ ಕಾರಣದಿಂದಾಗಿಯೇ ದೇಶದ ಪ್ರಮುಖ ಪ್ರಕಾಶಕರು ತಮ್ಮ ಪುಸ್ತಕಗಳ ಬೃಹತ್ ಸಂಗ್ರಹದೊಡನೆ ಇಲ್ಲಿ ಭಾಗವಹಿಸುತ್ತಿದ್ದಾರೆ.
ಈ ಬಾರಿ 340ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಬೆಂಗಳೂರು ಪುಸ್ತಕೋತ್ಸವ 2009 ರ ಕಾರ್ಯಕ್ರಮ ನಿರ್ದೇಶಕ ಬಿ. ಎಸ್. ರಘುರಾಮ್ ಹೇಳುತ್ತಾರೆ.
ಈ ಬಾರಿ ಕನ್ನಡ ಮಳಿಗೆಗಳಿಗೆ ಪುಸ್ತಕ ಪ್ರಾಧಿಕಾರ ರಿಯಾಯ್ತಿ ನೀಡಿದೆ. ಹೀಗಾಗಿ ಕನ್ನಡ ಪ್ರಕಾಶಕರಿಗೆ ಸುಲಭ ದರದಲ್ಲಿ ಮಳಿಗೆಗಳು ದೊರೆಯಲಿವೆ.
ಈ ಬಾರಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪುಸ್ತಕೋತ್ಸವಕ್ಕೆ ಉಚಿತ ಪ್ರವೇಶ. ಆದರೆ ಸಾರ್ವಜನಿಕರಿಗೆ 20 ರೂ ಶುಲ್ಕ.
ಸಾಂಸ್ಕೃತಿಕ ಕಾರ್ಯಕ್ರಮ : ಪುಸ್ತಕೋತ್ಸವದ ಅವಧಿಯಲ್ಲಿ ಪ್ರತಿದಿನ ಸಂಜೆ 6 ರಿಂದ 8 ರವರೆಗೆ ಸಾಂಸ್ಕೃತಿಕ ರಸದೌತಣ ಆಯೋಜಿಸಲಾಗುತ್ತದೆ.
ಇದಕ್ಕಾಗಿ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ವಿನಾಯಕ ಕೃಷ್ಣ ಗೋಕಾಕ ಸಾಂಸ್ಕೃತಿಕ ವೇದಿಕೆ ನಿರ್ಮಿಸಲಾಗಿದೆ. ಏಕೆಂದರೆ ಇದು ಗೋಕಾಕರ ಜನ್ಮ ಶತಮಾನೋತ್ಸವ ವರ್ಷ.
- ಆರ್. ಬಿ. ಕೃಪೆ : ಪ್ರಜಾವಾಣಿ
Filed under: Uncategorized | Leave a Comment »

ತಮ್ಮ ಹದಿನಾಲ್ಕನೆಯ ವಯಸ್ಸಿಗೇ ಬ್ರಿಟೀಷರ ವಿರುದ್ಧ ಪ್ರತಿಭಟಿಸುವ ಮನೋಭಾವವನ್ನು ಗಟ್ಟಿಗೊಳಿಸಿಕೊಂಡು ಮುಂದಡಿ ಇಟ್ಟ ಮೇಜರ್ ಜೈಪಾಲ್ ಸಿಂಗ್ ರವರ ನೆನಪುಗಳನ್ನು ಮಂಡಿಸುವ ಪುಸ್ತಕ `ವಿಮೋಚನೆಯ ಸಮರದಲ್ಲಿ’. ಜೈಪಾಲ್ ಸಿಂಗ್ ರವರು ಉತ್ತರ ಪ್ರದೇಶದವರು. ಅಲ್ಲಿಯ ಮುಜಾಪುರ್ ನಗರ ಜಿಲ್ಲೆಯ ಒಂದು ಹಳ್ಳಿಯ ಬಡ ಜಾಟ್ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದ ಜೈಪಾಲ್ ಸಿಂಗ್, ಜಾಟ್ ಜನಾಂಗದ ಹುಮ್ಮಸ್ಸು, ಎದೆಗಾರಿಕೆ, ಆಕ್ರೋಶ, ಮೈಕಟ್ಟನ್ನು ಹಾಗೇ ಸ್ವಾಭಿಮಾನವನ್ನು ಪ್ರತಿಬಿಂಬಿಸುವಂತಿದ್ದರು. ಅವರು ಬೆಳೆಯುತ್ತಾ ಬಂದಂತೆ ಆಗಿನ ದಿನಗಳಲ್ಲಿ ಬ್ರಿಟೀಷರನ್ನು ಬಗ್ಗು ಬಡಿಯಲು ತಮ್ಮದೇ ತಂತ್ರ ಉಪಯೋಗಿಸಿದರು.
ಅಂದರೆ ಬೇರೆಯವರಂತೆ ಹೊರಗಿನಿಂದ ಬ್ರಿಟೀಷರ ವಿರುದ್ಧ ಬಡಿದಾಡದೆ ಅವರ ಸೈನ್ಯವನ್ನೇ ಸೇರಿದರು. ಆದರೆ ಇದು ಅಪಾಯಕಾರಿಯಾಗಿತ್ತು. ಕೊಂಚ ಏರುಪೇರಾದರೂ ಜೈಪಾಲ್ ಗೆ ಮರಣದಂಡನೆಯೇ ಶಿಕ್ಷೆಯಾಗುತ್ತಿತ್ತು. ಆದರೂ ಹಿಂಜರಿಯದೆ ತಮ್ಮ ತಂತ್ರ ಸಫಲಗೊಳಿಸಲು ಶ್ರಮಿಸಿದರು. ಹೀಗೆ ಅವರು ಈ ದಾರಿಯಲ್ಲಿ ಸಾಗುವ ವೇಳೆ ಆದ ಅನುಭವಗಳನ್ನು ಜೈಪಾಲರು ಈ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.
ಈ ವಿಚಾರಗಳು ಈ ಹಿಂದೆಯೇ `ಐಕ್ಯರಂಗ’ ಎಂಬ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿರುವಂತಹದ್ದು. ಅದು ಹಾಗೇ ಉಳಿದು ಹೋಗದಿರಲೆಂದು ವಿಶ್ವ ಕುಂದಾಪುರರವರು ಎಲ್ಲಾ ಲೇಖನಗಳನ್ನು ಒಂದೆಡೆ ಸೇರಿಸಿ ಈ ಅಮೂಲ್ಯ ಪುಸ್ತಕವನ್ನು ಕನ್ನಡಿಗರಿಗೆ ನೀಡಿದ್ದಾರೆ. ಇಲ್ಲಿ ಎಳೆಎಳೆಯಾಗಿ ಜೈಪಾಲರ ಹೋರಾಟದ ಜೀವನ ಓದುಗರೆದುರಿಗೆ ತೆರೆದುಕೊಳ್ಳುತ್ತದೆ. ಪ್ರಧಾನಿ ಜವಾಹರಲಾಲ್ ನೆಹರೂರವರಿಗೆ ಜೈಪಾಲರು ಬರೆದ ಪತ್ರವೂ ಇದೆ. ಇಲ್ಲಿ ಅವರು ಬ್ರಿಟೀಷರ ವಿರುದ್ಧ ಹೋರಾಡಲು ಮುಂದಾದ ಗಳಿಗೆ, ಕಾರಣ, ರೀತಿಗಳ ಬಗೆಗೆ ಹೇಳಿಕೊಂಡಿದ್ದಾರೆ. ಹಾಗೆಯೇ ಆಗಿನ ಇತರರ ಹೋರಾಟಗಳ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಇಲ್ಲಿ ಕೇವಲ ಜೈಪಾಲರ ನೆನಪುಗಳಷ್ಟೇ ಇರದೆ, ಅವರೊಂದಿಗೆ ಒಡನಾಡಿದ ಎಲ್. ಬಿ. ಗಂಗಾಧರ ರಾವ್ ರವರ ಅಭಿಪ್ರಾಯ ಲೇಖನವೂ ಇರುವುದು ಉಪಯುಕ್ತವೆನಿಸಿದೆ.
ಮೊದಲ ಅಧ್ಯಾಯ `ನನ್ನ ದೇಶಕ್ಕಾಗಿ ಕರ್ತವ್ಯ ಚ್ಯುತೆ ಎಸಗಿದೆ’ ಯಲ್ಲಿ ಜೈಪಾಲರು ತಮ್ಮ ಭೂಗತ ಜೀವನವನ್ನು ಕೊನೆಗೊಳಿಸಿ ಹೊರಬಂದಾಗ ಜನರು ಅವರಿಗೆ ಸ್ಪಂದಿಸಿದ ರೀತಿಯನ್ನು ಓದುತ್ತಿದ್ದರೆ ಇಂದಿನ ನೀರಸಗೊಂಡಿರುವ ಸಾಮಾಜಿಕ ಪ್ರಜ್ಞೆಯ ಬಗೆಗೆ ಯೋಚಿಸುವಂತಾಗುತ್ತದೆ. ಇಡೀ ಪುಸ್ತಕದಲ್ಲಿ ಬರುವ ಬ್ರಿಟಿಷ್ ಸೈನ್ಯದೊಳಗಿನ ದೇಶಪ್ರೇಮಿ ವಿಭಾಗಗಳನ್ನು ಸಂಘಟಿಸುವಲ್ಲಿ ಅವರು ವಹಿಸಿದ ಅಮೋಘ ಪಾತ್ರದ ಬಗ್ಗೆ ಭಾರತದ ಎಡಪಂಥೀಯ ವಲಯಗಳ ಆಚೆಗೆ ಅಷ್ಟಾಗಿ ತಿಳಿದಿಲ್ಲ” ಎಂಬ ಮಾತು ನಮ್ಮ ದೇಶದ ಸಾಮಾಜಿಕ ಜೀವನ ಎದುರಿಸುತ್ತಿರುವ ವಿಪರ್ಯಾಸದ ಸ್ಥಿತಿಯನ್ನು ಎದುರಿಗೆ ತರುತ್ತದೆ. ಇವತ್ತಿನ ಯುವಜನತೆಗೆ ರಿಯಾಲಿಟಿ ಶೋಗಳ ಸೆಲೆಬ್ರಿಟಿಗಳೇ ಮಾದರಿಯಾಗುತ್ತಿದ್ದಾರೆಯೇ ಹೊರತು ದೇಶದ ಸ್ವಾಭಿಮಾನವನ್ನು ಕಾಪಾಡಲು ಹೋರಾಡಿದವರು ಆದರ್ಶವಾಗುವುದು ಆಗುತ್ತಿಲ್ಲ. ಅಂದರೆ ಅವರಿಗೆ ಈ ಮಹಾನ್ ಹೋರಾಟಗಾರರು ತಲುಪುತ್ತಿಲ್ಲ. ಇಂತಹ ಪುಸ್ತಕಗಳು ಇದೇ ಮಾದರಿಯಲ್ಲಿ ಓದುಗರಿಗೆ ದೊರಕಿದರೆ ಆ ಒಂದು ಕೊರಗು-ಕೊರತೆ ಕೊಂಚಮಟ್ಟಿಗಾದರೂ ಕಡಿಮೆಯಾಗಿ ಮುಂದಿನ ದಿನಗಳಲ್ಲಿ ಜೈಪಾಲ್ ಸಿಂಗ್ ಥರದವರು ದೇಶದ ಮಕ್ಕಳಿಗೆ ಆಪ್ತರಾಗಬಲ್ಲರು. ಈ ನಿಟ್ಟಿನಲ್ಲಿ ವಿಮೋಚನೆಯ ಹಾದಿಯಲ್ಲಿ ಒಂದು ಒಳ್ಳೆಯ ಪ್ರಯತ್ನ.
ಈ ಪುಸ್ತಕ ಜೈಪಾಲ್ ರ ವೈಯಕ್ತಿಕ ಅನುಭವ, ಅಭಿಪ್ರಾಯಗಳನ್ನು ಹೇಳುವಂತೆಯೇ ಅಂದಿನ ದೇಶದ ಸ್ಥಿತಿಗತಿಗಳನ್ನು ಓದುಗರ ಮನಸ್ಸಿಗೆ ನಾಟಿಸುತ್ತವೆ. ಇಲ್ಲಿಯವರೆಗೂ ದೇಶದ ವಿಭಜನೆಯನ್ನು ಒಂದು ಕೋನದಲ್ಲಿ ನೋಡಿದ್ದವರಿಗೆ ಈ ಪುಸ್ತಕ ಅದರ ಬೇರೊಂದು ಮುಖವನ್ನು ತೋರುತ್ತದೆ. ಬ್ರಿಟಿಷರ ಷಡ್ಯಂತ್ರದೆದುರು ಸಿಡಿದೇಳದ ಕಾಂಗ್ರೆಸ್ ಹೇಗೆ ಗೋಸುಂಬೆತನದಿಂದ ವರ್ತಿಸಿತು ಎಂಬುದರ ಪರಿಚಯ ಇಲ್ಲಾಗುತ್ತದೆ. ಇಂತಹ ಹಲವು ವಿಚಾರಗಳನ್ನು ಜೈಪಾಲರು ಪುಸ್ತಕದುದ್ದಕ್ಕೂ ಹೇಳುತ್ತಲೇ ಆವತ್ತಿನ ದಿನಗಳ ಕುರಿತಾಗಿ ಜನ ತಿಳಿದಿರುವುದನ್ನು ಚಿಂತನೆಗೆ ಹಚ್ಚುವಂತೆ ಮಾಡುತ್ತಾರೆ. ದೇಶವನ್ನು ಕಾಡುತ್ತಿರುವ ಮೂಲಭೂತವಾದ ಮತ್ತು ಪ್ರತ್ಯೇಕತಾವಾದಗಳು ಬ್ರಿಟಿಷರ ಕುತಂತ್ರದ ಫಲ ಎಂಬುದನ್ನು ಜೈಪಾಲರು ಸ್ಪಷ್ಟವಾಗಿ ಹೇಳುವುದು, ಆ ಸಮಸ್ಯೆಗಳ ಕುರಿತಾಗಿ ಎಚ್ಚೆತ್ತುಕೊಂಡು ಒಂದು ಉತ್ತರ ಕಂಡುಕೊಳ್ಳಲು ಪ್ರೇರಣೆಯಂತಿದೆ.
ಜೈಪಾಲ್ ರವರು ಬ್ರಿಟಿಷರ ವಿರುದ್ಧದ ತಮ್ಮ ಹೋರಾಟದಲ್ಲಿ ಕಂಡ ಪೋರ್ಟ ವಿಲಿಯಂ ಜೈಲುವಾಸದ ಅನುಭವವನ್ನು ಓದಿದ ಕೂಡಲೇ ಕಮ್ಯುನಿಸ್ಟ್ ಪಕ್ಷದ ವಿಚಾರಗಳನ್ನು ಮೆಚ್ಚಿ ಅವರ ಮುಂದಾಳುತನದಲ್ಲಿಯೇ ತೆಲಂಗಾಣ ರೈತರ ಸಶಸ್ತ್ರ ಹೋರಾಟದಲ್ಲಿ ಭಾಗಿಯಾಗಿದ್ದು, ಅಲ್ಲಿ ಅವರು ಆ ಹೋರಾಟಕ್ಕೊಂದು ಕೆಚ್ಚು ತುಂಬಿದ್ದು ತೆಲಂಗಾಣ ಹೋರಾಟಕ್ಕೆ ನೀಡಿದ ಕಾಣಿಕೆ ಏನೆಂಬುದು ಈ ಪುಸ್ತಕ ಕಾಣಿಸುತ್ತದೆ. ಆಪರೇಷನ್ ಅಸೈಲಮ್ ನ ಲೇಖನ ಬ್ರಿಟಿಷರ ಕುತಂತ್ರಗಳನ್ನು ಅನಾವರಣಗೊಳಿಸುತ್ತದೆ. ಬ್ರಿಟಿಷ್ ಸೈನ್ಯದ ಅಧಿಕಾರಿ ಹುದ್ದೆಯಿಂದ ಸಿ.ಪಿ.ಐ.(ಎಂ) ನ ಕೇಂದ್ರ ನಾಯಕತ್ವದವರೆಗಿನ ಜೈಪಾಲ್ ಸಿಂಗ್ ರ ಜೀವನ ಯಾತ್ರೆಯನ್ನು ಹೇಳುತ್ತ ಈ ಕೃತಿ ಭಾರತವನ್ನು ಮತ್ತೊಂದು ದೃಷ್ಟಿಯಲ್ಲಿ ತಿಳಿಯಲಾದರೂ ಓದಲೇಬೇಕಾದಂತಹುದು. – ಎಸ್. ಎನ್.
ಶೀರ್ಷಿಕೆ: ವಿಮೋಚನೆಯ ಸಮರದಲ್ಲಿ – ಮೇಜರ್ ಜೈಪಾಲ್ ಸಿಂಗ್ ನೆನಪುಗಳು ಅನುವಾದಕರು: ವಿಶ್ವ ಕುಂದಾಪುರ ಪ್ರಕಾಶನ: ಕ್ರಿಯಾ ಪ್ರಕಾಶನ ಪುಟ: ೧೯೪ ಬೆಲೆ:ರೂ.೮೦/-
ಕೃಪೆ : ಲಂಕೇಶ್ ಪತ್ರಿಕೆ
Filed under: ಆತ್ಮ - ಚರಿತ್ರೆ/ಕಥನ | Tagged: ಕ್ರಿಯಾ ಪ್ರಕಾಶನ, ಮೇಜರ್ ಜೈಪಾಲ್ ಸಿಂಗ್ ನೆನಪುಗಳು, ಲಂಕೇಶ್ ಪತ್ರಿಕೆ, ವಿಮೋಚನೆಯ ಸಮರದಲ್ಲಿ, ವಿಶ್ವ ಕುಂದಾಪುರ | Leave a Comment »

ಕವಿ, ಜಾನಪದ ಸಂಶೋಧಕ ವಿ.ಗ. ನಾಯಕ ಆಗಾಗ ಬರೆದ ತಮ್ಮ ಅಂಕಣ ಬರಹಗಳನ್ನು `ಕರಿಕೆಯ ಕುಡಿ‘ ಯಲ್ಲಿ ಕೊಟ್ಟಿದ್ದಾರೆ. 37 ಕುಡಿಗಳು ಇಲ್ಲಿವೆ. ಉತ್ಸಾಹಿಗಳೂ, ಸೂಕ್ಷ್ಮಮತಿಗಳೂ ಜೊತೆಗೆ ವಿನಯವಂತರೂ ಆದ ಲೇಖಕರು `ಇಲ್ಲಿನ ಬರಹ ಹೆಮ್ಮರವೂ ಅಲ್ಲ, ಮರ, ಗಿಡ, ಹೂ, ಬಳ್ಳಿಗಳ ಸಾಲಿಗೆ ಸೇರುವಂಥದ್ದೂ ಅಲ್ಲ. ಒಂದೊಂದೂ ಕರಿಕೆಯ ಕುಡಿ‘ ಎಂದಿದ್ದಾರೆ. ಕರಿಕೆಯ ಕುಡಿ ದೇವರ ಪೂಜೆಗೆಂದು ಬಳಸುವ ಹುಲ್ಲಿನ ಜಾತಿ. ಅಂದರೆ, ಪುಟ್ಟದಾದರೂ ಅದರ ಮಹತ್ವ ಅದಕ್ಕಿದ್ದೇ ಇದೆ.
ಲೇಖಕರು ಸಾಹಿತ್ಯ, ಸಂಸ್ಕೃತಿ, ವ್ಯಕ್ತಿ, ಜಾತಿ ಹೀಗೆ ಅನೇಕ ವಸ್ತುಗಳನ್ನು ತಮ್ಮ ಅಂಕಣದ ವ್ಯಾಪ್ತಿಗೆ ತಂದಿದ್ದಾರೆ. ಕೆಲವನ್ನು ಬಿಟ್ಟರೆ ಉತ್ತರ ಹಾಗೂ ದಕ್ಷಿಣ ಕನ್ನಡದ ವ್ಯಕ್ತಿ ಹಾಗೂ ಸಂಗತಿಗಳೇ ಅವರ ಬರಹದಲ್ಲಿ ಮುಖ್ಯ ವಸ್ತುಗಳಾಗಿವೆ.
ತುಂಡು, ತುಂಡು ವಾಕ್ಯಗಳು, ಅಸ್ಖಲಿತವಾದ ಭಾವನಾತ್ಮಕ ಭಾಷೆ ವಿ.ಗ.ನಾಯಕರ ಬರಹಗಳ ಶೈಲಿಯಾಗಿದೆ. ಅವರು ಆಯ್ದುಕೊಳ್ಳುವ ವಸ್ತುಗಳು ಕೂಡಾ ಬೇರೆ ರೀತಿಯವೇ. ಮುನ್ನೆಲೆಯಲ್ಲಿ ಪ್ರಧಾನವಾಗಿ ಹೆಚ್ಚು ಕಾಣಿಸಿಕೊಳ್ಳದ ವ್ಯಕ್ತಿಗಳೇ ಅವರ ಬರಹಗಳ ವಸ್ತು. ಬಂಡಾಯ ಲೇಖಕ ಆರ್.ವಿ.ಭಂಡಾರಿ, ಕವಿ ರಾಧಾಕೃಷ್ಣ ಉಳಿಯತ್ತಡ್ಕ, ಲೇಖಕ ಗಣಪತಿ ದಿವಾಣ, ಎನ್.ಆರ್.ನಾಯಕ . . . ಹೀಗೆ ಅನೇಕರ ಸಾಧನೆ ನಾಯಕರ ಬರವಣಿಗೆಗೆ ಕಾರಣವಾಗುತ್ತದೆ. ಈ ಎಲ್ಲ ಕಾರಣಗಳಿಗಾಗಿಯೇ ಈ ಪುಸ್ತಕವೂ ಓದುಗರ ಮೆಚ್ಚುಗೆಗೂ ಕಾರಣವಾಗುವಂತಿದೆ.
ಶೀರ್ಷಿಕೆ:ಕರಿಕೆಯ ಕುಡಿ (ಅಂಕಣ ಬರಹಗಳು) ಲೇಖಕರು:ವಿ.ಗ. ನಾಯಕ ಪ್ರಕಾಶಕರು: ಸ್ಮೃತಿ ಪ್ರಕಾಶನ ಪುಟಗಳು: 136 ಬೆಲೆ:ರೂ.75/-
ಕೃಪೆ : ಪ್ರಜಾವಾಣಿ
Filed under: ವೈಚಾರಿಕ ಸಾಹಿತ್ಯ | Tagged: ಕರಿಕೆಯ ಕುಡಿ, ವಿ.ಗ. ನಾಯಕ, ಸ್ಮೃತಿ ಪ್ರಕಾಶನ | Leave a Comment »

ಆಂಧ್ರಪ್ರದೇಶದ ಶ್ರೀಕಾಕುಳಂ ಚಿಲ್ಲೆಯ ಮುರಪಾಕದವರಾದ ಕಾಳೀಪಟ್ನಂ ರಾಮಾರಾವ್ ತೆಲುಗಿನ ಪ್ರಸಿದ್ಧ ಕಥಾಲೇಖಕ. `ಕಾ.ರಾ.ಮಾಸ್ಟಾರು‘ ಎಂದೇ ಆಂಧ್ರದ ಸಾಹಿತ್ಯ ಲೋಕದಲ್ಲಿ ಗುರುತಿಸಲ್ಪಡುವ ರಾಮಾರಾವ್ ಈವರೆಗೆ ಬರೆದದ್ದು ಕಡಿಮೆ. ೨೫ ಕಥೆಗಳನ್ನಷ್ಟೇ ಅವರು ಬರೆದಿರುವುದು. `ರಾಗಮಾಯಿ‘, `ಅಭಿಮಾನಾಲು‘ ಅವರ ಕಾದಂಬರಿಗಳು.
ಮಾಕ್ಸ್೯ವಾದಿ ಸಿದ್ಧಾಂತದಿಂದ ಪ್ರಭಾವಿತರಾದ ಈ ಲೇಖಕ ತಾವು ನೆಲಸಿರುವ ಶ್ರೀಕಾಕುಳಂ ಜಿಲ್ಲೆಯ ಕಥನವನ್ನೇ ತಮ್ಮ ಕಥೆಗಳಲ್ಲಿ ಬರೆದಿದ್ದಾರೆ. ಈ ಲೇಖಕನ ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ ಕವಿ, ಕಥೆಗಾರ ಚಿದಾನಂದ ಸಾಲಿ.
ಈ ಸಂಕಲನದಲ್ಲೂ ಕಾಳೀಪಟ್ನಂ ರಾಮಾರಾವ್ 25 ಕಥೆಗಳಲ್ಲಿ ಆಯ್ದ ಒಂಬತ್ತು ಕಥೆಗಳು ಮಾತ್ರ. ಕೊಳ್ಳುವವರಿಗೆ ಭಾರವಾಗುತ್ತದೆ ಎಂಬ ಕಾರಣಕ್ಕೆ ರಾಮಾರಾವ್ ಅವರ ತುಂಬಾ ಜನಕ್ಕೆ ಇಷ್ಟವಾಗಿರುವ ಕಥೆಗಳನ್ನು ಮಾತ್ರ ಸೇರಿಸಿ ಈ ಸಂಕಲನವನ್ನು ಪ್ರಕಟಿಸಿದ್ದಾರೆ.
ಅತ್ಯಂತ ಚಿಕ್ಕ ವಾಕ್ಯಗಳು, ದೀರ್ಘವಾದ ಕಥೆಗಳು, ಚಿಕ್ಕ ತಲೆ ಬರಹ (ಯಜ್ಞ, ಹಿಂಸೆ, ನೋ ರೂಮ್, ನೋವು … ಇತ್ಯಾದಿ( ರಾಮಾರಾವ್ ಅವರ ಕಥೆಗಳ ವಿಶೇಷ ಅಂಶಗಳು. ಅವರ ಸರಳ ನಿರೂಪಣೆಯ ಶೈಲಿಯನ್ನು ಕನ್ನಡ ನುಡಿಗಟ್ಟಿಗೆ ಅನುವಾದಿಸಿದ್ದಾರೆ ಚಿದಾನಂದ ಸಾಲಿ. ಅನುವಾದ ರಾಮರಾವು ಕಥಾಲೋಕವನ್ನು ಅರಿಯಲು ಸಹಾಯವಾಗುವಂತಿದೆ. ಭಿನ್ನವಾದ ಹಾಗೂ ದೀರ್ಘ ಎನಿಸುವ ಈ ಕಥೆಗಳು ಓದುತ್ತಾ ಓದುತ್ತಾ ಮರಳು ಮಾಡುವಷ್ಟು ಶಕ್ತಿಶಾಲಿಯಾಗಿವೆ.
ಕೃಪೆ : ಪ್ರಜಾವಾಣಿ
Filed under: ಕಥಾ ಸಂಕಲನ | Tagged: ಕಾಳೀಪಟ್ನಂ ರಾಮಾರಾವ್, ಚಿದಾನಂದ ಸಾಲಿ, ಯಜ್ಞ, ಸಾಹಿತ್ಯ ಅಕಾಡಮಿ | 2 Comments »

ಹಿರಿಯ ವಿದ್ವಾಂಸರಾದ ಎಲ್. ಬಸವರಾಜು ಬರೆದ ತಾತ್ವಿಕ ಚಿಂತನೆಗಳನ್ನು ಇಲ್ಲಿನ ಪುಟ್ಟ ಬರಹಗಳು ಒಳಗೊಂಡಿವೆ. ಸುಮಾರು ೧೭೦ ಬರಹಗಳನ್ನು ಒಳಗೊಂಡಿರುವ ಈ ಪುಸ್ತಕ ಬದುಕು ಹಾಗೂ ಜಗತ್ತಿನ ಕುರಿತಾಗಿ ತಾತ್ವಿಕವಾಗಿ ಚಿಂತಿಸುತ್ತದೆ ಮತ್ತು ಓದಿದವರನ್ನು ಯೋಚನೆಗೆ ಹಚ್ಚುತ್ತದೆ. ಇಲ್ಲೆಲ್ಲ ಎಲ್.ಬಿ. ಅವರ ಅಗಾಧ ಪಾಂಡಿತ್ಯ, ಜೀವನಾನುಭವ ತಿಳಿಜಲದಂತೆ ಪ್ರವಹಿಸುವುದನ್ನು ಕಾಣಬಹುದು.
ಇಲ್ಲಿ ಲೇಖಕರು ಮುಟ್ಟದ ವಿಷಯವೇ ಇಲ್ಲ ಎನ್ನಬಹುದು. ಪ್ರೀತಿಯಿಂದ, ಯೋಗದವರೆಗೆ, ಚಟದಿಂದ ದೇವರ ಬಗ್ಗೆ, ಅಂಬಿಗನಿಂದ ಬುದ್ಧನವರೆಗೆ ಅವರು ಚಿಂತನೆಯ ಒರೆಗೆ ಹಚ್ಚದ ವಿಷಯವೇ ಇಲ್ಲ. ಸಾಮಾನ್ಯ ಓದುಗರನ್ನು ಗಮನದಲ್ಲಿಟ್ಟುಕೊಂಡು ಮಾಡಿದ ಬರಹವಾದ್ದರಿಂದ ತೀರ ಸರಳವಾದ ವರ್ತಮಾನದ ಬಳಕೆಯ ಭಾಷೆ ಇಲ್ಲಿನ ಬರಹಗಳಿಗೆ ದೊರಕಿದೆ. ಬದುಕಿನ ಅನೇಕ ಸಂಗತಿಗಳು ಲೋಕಜ್ಞಾನವಾಗಿ ಓದುಗರನ್ನು ಮುಟ್ಟುವಂತಿದೆ. ಹಾಗಾಗಿ ಅವು ಎಲ್ಲರನ್ನೂ ಸೆಳೆಯುವ, ಉಳಿಯುವ ಗುಣವನ್ನು ಪಡೆದಿದೆ. ಅಂದಹಾಗೆ, ಈ ಬರಹಗಳು ಈಗಾಗಲೇ `ಪ್ರಜಾವಾಣಿ’ಯ `ಬಾಳಬುತ್ತಿ’, `ಅರಿವಿನ ಅಂತರಾಳ’ ಅಂಕಣಗಳಲ್ಲಿ ಪ್ರಕಟವಾಗಿ ಓದುಗರ ಮೆಚ್ಚುಗೆಯನ್ನು ಪಡೆದಿವೆ.
ಶೀರ್ಷಿಕೆ:ಕತ್ತಲೆ ರಾಕ್ಷಸರಿಗೆ ಬೆಳಕು (ತಾತ್ವಿಕ ಚಿಂತನ ಬರಹಗಳು) ಲೇಖಕರು:ಡಾ. ಎಲ್. ಬಸವರಾಜು ಪ್ರಕಾಶನ: ರೂಪ ಪ್ರಕಾಶನ ಪುಟಗಳು: 320 ಬೆಲೆ:ರೂ.200/-
ಕೃಪೆ : ಪ್ರಜಾವಾಣಿ
Filed under: ವೈಚಾರಿಕ ಸಾಹಿತ್ಯ | Tagged: ಕತ್ತಲೆ ರಾಕ್ಷಸರಿಗೆ ಬೆಳಕು, ಡಾ. ಎಲ್. ಬಸವರಾಜು, ತಾತ್ವಿಕ ಚಿಂತನ ಬರಹಗಳು, ರೂಪ ಪ್ರಕಾಶನ | Leave a Comment »

‘ಅವಧೇಶ್ವರಿ’, `ಗಂಗವ್ವ ಗಂಗಾಮಾಯಿ’,`ನಟ ನಾರಾಯಣ’ ದಂಥ ಕನ್ನಡದ ಪ್ರಮುಖ ಕಾದಂಬರಿಗಳನ್ನು ಬರೆದ ಶಂಕರ ಮೊಕಾಶಿ ಪುಣೇಕರ ಅನನ್ಯ ಒಳನೋಟಗಳ ವಿಮರ್ಶಕರೂ ಆಗಿದ್ದರು. ಅವರು ಭಾರತೀಯ ಸಂಸ್ಕ್ರತಿಯನ್ನು ಅಭ್ಯಸಿಸಿ ಬರೆದ ಲೇಖನಗಳು, ಕನ್ನಡ ಸಾಹಿತ್ಯದ ಕುರಿತಾದ ಅವರ ಲೇಖನಗಳು, ಕನ್ನಡ ಸಾಹಿತ್ಯದ ಕುರಿತಾದ ಅವರ ಲೇಖನಗಳು ತಮ್ಮ ವಿಶಿಷ್ಠ ಒಳನೋಟಗಳಿಂದಾಗಿಯೇ ಗಮನ ಸೆಳೆಯುತ್ತವೆ.
ಇಂಥ ಲೇಖಕನ ಲೇಖನಗಳನ್ನು ಒಂದೆಡೆ ತಂದಿದ್ದಾರೆ ಜಿ.ಬಿ.ಹರೀಶ್. ಇದರೊಂದಿಗೆ ಸುಮತೀಂದ್ರ ನಾಡಿಗ್, ಮಲ್ಲೇಪುರಂ ಜಿ. ವೆಂಕಟೇಶ್, ರಹಮತ್ ತರೀಕೆರೆಯವರು ಮಾಡಿದ ಅವರ ವ್ಯಕ್ತಿತ್ವವನ್ನು ಇಡಿಯಾಗಿ ಪ್ರಕಟಿಸುವ ಸಂದರ್ಶನಗಳನ್ನು ಗಮನಿಸಬಹುದು. ಇಲ್ಲಿ ಕೆಲವು ಕನ್ನಡದ ಕೃತಿಗಳ ಕುರಿತಾಗಿ ಮೊಕಾಶಿಯವರು ಬರೆದ ಬರಹಗಳೂ ಇವೆ.
ಮೊಕಾಶಿಯವರ ಲೇಖನಗಳಿಗೆ ವಿಭಿನ್ನವಾದ ವಿಮರ್ಶಾತ್ಮಕ ನೋಟಗಳು ಇವೆ. ಅದು ಅವರ `ವೇದ ಪುರಾಣ – ಮಹಾಕಾವ್ಯ’, `ಕಾವ್ಯದಲ್ಲಿ ಸ್ಮೃತಿ, ಬುದ್ಧಿ ಹಾಗೂ ಸಾಂಗತಿಕ ಪ್ರಜ್ಞೆ’, `ಭಾಷಾ ಬೋಧನೆಯಲ್ಲಿ ಚಾಮ್ ಸ್ಕಿ – ಸ್ಕಿನ್ನರ್ ಪ್ರಾಯೋಗಿಕ ವಿಧಾನ’ದಂತಹ ಅನೇಕ ಲೇಖನಗಳಲ್ಲಿ ಕಾಣುತ್ತದೆ. ಶಂಕರ ಮೊಕಾಶಿ ಪುಣೇಕರರ ಲೇಖನಗಳನ್ನು ಓದುವುದೆಂದರೆ ಅದೊಂದು ಬೇರೆಯಾದ ದರ್ಶನವನ್ನು ನೀಡುವ ಪ್ರಯಾಣವೇ
ಶೀರ್ಷಿಕೆ: ನೀರಬೆಳಗು (ಶಂಕರ ಮೊಕಾಶಿ ಪುಣೇಕರ ಅವರ ಬರಹಗಳು) ಸಂ:ಜಿ.ಬಿ.ಹರೀಶ ಪ್ರಕಾಶಕರು:ಸಪ್ನ ಬುಕ್ ಹೌಸ್ ಪುಟ:360 ಬೆಲೆ:ರೂ.175/-
ಕೃಪೆ: ಪ್ರಜಾವಾಣಿ
Filed under: ವೈಚಾರಿಕ ಸಾಹಿತ್ಯ | Tagged: ಜಿ.ಬಿ.ಹರೀಶ, ನೀರಬೆಳಗು, ಪ್ರಜಾವಾಣಿ, ಶಂಕರ ಮೊಕಾಶಿ ಪುಣೇಕರ, ಸಪ್ನ ಬುಕ್ ಹೌಸ್ | Leave a Comment »

ಡಾ.ಕೆ.ಸರೋಜಾ ಅವರು ಮಹಿಳೆಯರ ಆರೋಗ್ಯ ಕುರಿತಂತೆ ಹಲವಾರು ಲೇಖನಗಳನ್ನೂ ಪುಸ್ತಕಗಳನ್ನೂ ಬರೆದಿದ್ದಾರೆ. ಮಹಿಳೆಯರ ಆರೋಗ್ಯದ ಬಗ್ಗೆ ಆಳವಾದ ತಿಳುವಳಿಕೆಯನ್ನು ಅವರು ಪಡೆದು `ಮಹಿಳಾ ಆರೋಗ್ಯ; ಒಂದು ಮರುಚಿಂತನೆ’ ಎಂಬ ಗ್ರಂಥವನ್ನು ರಚನೆ ಮಾಡಿದ್ದಾರೆ. `ಜೀವನ್ ಭದ್ರಾಣಿ ಪಶ್ಯತಿ’ ಎಂಬ ಹಳೆಯ ಮಾತೊಂದುಂಟು. ಪ್ರತಿಯೊಬ್ಬರೂ ತಮ್ಮ ಸ್ವಾಸ್ಥ್ಯದ ಕಡೆ ಲಕ್ಷ್ಯ ವಹಿಸಬೇಕು. ಒಂದು ಪಕ್ಷ ಲಕ್ಷ್ಯ ವಹಿಸದಿದ್ದರೆ ಜೀವಕ್ಕೆ ಹಾನಿ. ಆ ಹಾನಿಯಿಂದ ಕುಟುಂಬದ ಹಾನಿ. ಹೀಗಾಗಿ, ಇದೊಂದು ಸ್ವಾಸ್ಥ್ಯದ ದುರಂತದಮಾಲೆ ಆದೀತು. ಮಹಿಳೆಯರ ದೇಹ ಮತ್ತು ವಿಶಿಷ್ಟವಾದುದು. ಪ್ರಸ್ತುತ ಗ್ರಂಥದಲ್ಲಿ ಮನೋದೇಹಿಯಾದ ಮಹಿಳೆಯರ ಆರೋಗ್ಯದ ಬಗೆಗೆ ಸೂಕ್ಷ್ಮವೂ, ಸ್ಥೂಲವೂ ಆದ ವಿವರಗಳಿವೆ. ಪ್ರತಿಯೊಬ್ಬ ಮಹಿಳೆಯೂ ಜೀವನಕ್ರಮದಲ್ಲಿ ವಹಿಸಬೇಕಾದ ಎಚ್ಚರಿಕೆಯನ್ನು ಲೇಖಕರು ಸೂಚಿಸಿದ್ದಾರೆ. ದೇಹದ ಸ್ವಾಸ್ಥ್ಯವು ಮನಸ್ಸಿನ ನೆಮ್ಮದಿಗೆ ಕಾರಣವಾಗುವ ವಿವಿಧ ಬಗೆಗಳನ್ನು ಸರಳವಾಗಿಯೂ ಹಿತವಾಗಿಯೂ ನಿರೂಪಿಸಿದ್ದಾರೆ. ಈ ಗ್ರಂಥದ ಓದಿನಿಂದ ಮಹಿಳೆಯರು ಜೀವನದಲ್ಲಿ ವಹಿಸಬೇಕಾದ ಎಚ್ಚರದ ಬಗೆಗೆ ಹೊಸ ತಿಳುವಳಿಕೆ ಒಡಮೂಡೀತು ಎಂದು ನಾನು ತಿಳಿದಿದ್ದೇನೆ. ಇಂಥದೊಂದು ಉಪಯುಕ್ತ ಗ್ರಂಥವನ್ನು ಬರೆದುಕೊಟ್ಟ ಡಾ. ಕೆ. ಸರೋಜಾ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ವಂದನೆಗಳು.
- ಬೆನ್ನುಡಿಯಿಂದ
ಶೀರ್ಷಿಕೆ : ಮಹಿಳಾ ಆರೋಗ್ಯ – ಒಂದು ಮರುಚಿಂತನೆ ಲೇಖಕರು:ಡಾ.ಕೆ.ಸರೋಜಾ ಪ್ರಕಾಶಕರು:ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ಪುಟ:156 ಬೆಲೆ:ರೂ.100/-
Filed under: ವೈದ್ಯಕೀಯ-ಮನಶ್ಯಾಸ್ತ್ | Tagged: ಡಾ.ಕೆ.ಸರೋಜಾ, ಪ್ರಸಾರಾಂಗ ಕನ್ನಡ ವಿಶ, ಮಹಿಳಾ ಆರೋಗ್ಯ - ಒಂದು ಮರುಚಿಂತನೆ | Leave a Comment »

ಸಣ್ಣಕತೆ ಹೊಸಗನ್ನಡ ಸಾಹಿತ್ಯದಲ್ಲಿ ಒಂದು ಪ್ರಕಾರವಾಗಿ ರೂಪುಗೊಂಡಿದ್ದರೂ ಕತೆಯನ್ನು ಹೇಳುವ ಪರಂಪರೆ ಹೊಸದೇನೂ ಅಲ್ಲ. ಇಂಗ್ಲೀಷ್ ಸಾಹಿತ್ಯದ ಪರಿಚಯದಿಂದ ಸಣ್ಣಕತೆಯ ಮಾದರಿ ಹುಟ್ಟಿಕೊಂಡಿದೆ ಎಂದು ವಿಮರ್ಶಕರು ಪರಿಭಾವಿಸಿಕೊಂಡು ಬಂದಿದ್ದಾರೆ. ಅಂಥ ಗ್ರಹಿಕೆಯಿಂದ ಇಪ್ಪತ್ತನೆಯ ಶತಮಾನದ ಆರಂಭದಿಂದ ಇದುವರೆಗೆ ಬಂದಿರುವ ಕಥಾ ಸಾಮಾಗ್ರಿಯನ್ನು ನೋಡಲಾಗುತ್ತಿದೆ. ಗಿರಡ್ಡಿ ಗೋವಿಂದರಾಜ ಅವರ ವಿಮರ್ಶಾ ಲೇಖನಗಳ ಸಂಗ್ರಹ `ಕಲ್ಪಿತ ವಾಸ್ತವ: ಕನ್ನಡ ಸಣ್ಣಕತೆ’ ಇದೇ ಜಾಡಿನಲ್ಲಿ ಸಾಗಿರುವ ಚಿಂತನೆ. ಗಿರಡ್ಡಿ ಗೋವಿಂದರಾಜ `ಇಂದಿನ ಸಣ್ಣ ಕತೆ ನಮ್ಮ ಪ್ರಾಚೀನ ಕಥಾಪರಂಪರೆಯ ಸಹಜ ಬೆಳವಣಿಗೆಯ ಫಲವಲ್ಲ; ಪಶ್ಚಿಮದ ಆಧುನಿಕ ಸಣ್ಣ ಕತೆಯ ಸಂಪರ್ಕದಲ್ಲಿ ನಾವು ಬಂದಿರದಿದ್ದರೆ ಈಗಿನ ರೂಪದ ಸಣ್ಣಕತೆ ನಮ್ಮಲ್ಲಿ ಹುಟ್ಟುತ್ತಿರಲಿಲ್ಲ’ ಎಂದು ಸ್ಪಷ್ಟವಾಗಿಯೇ ಹೇಳಿ ತಮ್ಮ ಚಿಂತನೆಯ ದಿಕ್ಕನ್ನು ಖಚಿತಪಡಿಸಿದ್ದಾರೆ. ಇಲ್ಲಿನ ಎಲ್ಲ ೧೪ ಲೇಖನಗಳಲ್ಲಿಯೂ ಕನ್ನಡ ಸಣ್ಣಕತೆ ಬೆಳವಣಿಗೆ ಕುರಿತಾಗಿ ಅವರ ವಿವರ ವಿಶ್ಲೇಷಣೆ, ತೀರ್ಮಾನಗಳಿವೆ.
೪೫ ವರ್ಷಗಳ ಕಾಲಾವಧಿಯಲ್ಲಿ ಬರೆದಿರುವ ಇಲ್ಲಿನ ಲೇಖನಗಳಲ್ಲಿ ಕನ್ನಡ ಸಣ್ಣ ಕತೆಯ ಬೆಳವಣಿಗೆಯ ವಿವಿಧ ಹಂತಗಳನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ ಎಂಬ ವಿವರಣೆಯೂ ಇದೆ. ಲೇಖನಗಳಲ್ಲಿ ವ್ಯತ್ಯಾಸಗಳೂ ಅಭಿಪ್ರಾಯಭೇದಗಳೂ, ಮೊದಲಿನ ನಿಲುವಿಗೆ ತಿದ್ದುಪಡಿಗಳೂ ಆಗಿರುವುದನ್ನು ದಾಖಲಿಸಲಾಗಿದೆ. ಮಾಸ್ತಿಯವರನ್ನು ಕನ್ನಡದ ಸಣ್ಣ ಕತೆಯ ಯುಗಪ್ರವರ್ತಕರೆಂದು ಗುರುತಿಸಿರುವ ಗಿರಡ್ಡಿಯವರು ತಮಗೆ ಮುಖ್ಯವೆನಿಸಿದೆ ಆನಂದ, ಬಾಗಲೋಡಿ ದೇವರಾಯ, ಶಾಂತಾದೇವಿ ಕಣವಿ, ಶಾಂತಿನಾಥ ದೇಸಾಯಿ, ಜಯಂತ ಕಾಯ್ಕಿಣಿ, ಸುರೇಂದ್ರನಾಥ ಅವರ ಕತೆಗಳ ಕುರಿತಾಗಿ ವಿಸ್ತೃತವಾಗಿ ವಿಶ್ಲೇಷಣೆ ನಡೆಸಿದ್ದಾರೆ. ವ್ಯಾಪಕ ಅಧ್ಯಯನದ ಹಿನ್ನೆಲೆ ಇರುವ ಗಿರಡ್ಡಿ ಕನ್ನಡ ಸಣ್ಣಕತೆ ಬೆಳೆದು ಬಂದ ಬಗೆಯನ್ನು ವಿವರವಾಗಿ ದಾಖಲಿಸಿದ್ದಾರೆ.
`ಮರೆಯಬಾರದ ಹಳೆಯ ಕತೆಗಳು’ ಮಾಲಿಕೆಯಲ್ಲಿ ಅವರು ಪಂಜೆ, ಕೇರೂರರು, ಎಮ್.ಎನ್. ಕಾಮತ್, ಎಸ್.ಜಿ.ಶಾಸ್ತ್ರಿ , ಕೊರಡ್ಕಲ್, ಎ.ಆರ್.ಕೃಷ್ಣಶಾಸ್ತ್ರಿ, ಕುಲಕರ್ಣಿ ಶ್ರೀನಿವಾಸ, ಕಡಂಗೋಡ್ಲು, ಕೃಷ್ಣಕುಮಾರ ಕಲ್ಲೂರ, ಪ.ರಮಾನಂದ, ವಿ.ಜಿ.ಶ್ಯಾನಬಾಗ, ಶ್ರೀಸ್ವಾಮಿ, ಹ.ಪಿ.ಜೋಷಿ, ಸೇಡಿಯಾಪು ಕೃಷ್ಣಭಟ್ಟ, ನವರತ್ನ ರಾಮರಾಯ, ಟೇಂಗ್ಸೆ ಗೋವಿಂದರಾಯ, ಕ್ಷೀರಸಾಗರ, ಬೇಂದ್ರೆ, ಹೊಯಿಸಳ, ಮೇವುಂಡಿ ಮಲ್ಲಾರಿ, ಟಿ.ಎಸ್.ಸಂಜೀವರಾಯ, ಭಾರತೀಪ್ರಿಯ ಮೊದಲಾಗಿ 28 ಕತೆಗಾರರ ವ್ಯಕ್ತಿತ್ವ-ಕೃತಿ ಪರಿಚಯಗಳನ್ನು ಮಾಡಿಕೊಟ್ಟಿದ್ದಾರೆ.
ಇಲ್ಲಿನ ಮೂರು ಲೇಖನಗಳು ಕನ್ನಡ ಸಣ್ಣಕತೆ ನಿರ್ದಿಷ್ಟ ಕಾಲಘಟ್ಟದಲ್ಲಿ ಸಾಗಿಬಂದ ಮಜಲುಗಳನ್ನು ಪರಿಚಯಿಸುತ್ತವೆ. ಇದು ಕಳೆದ ಶತಮಾನದ 90 ರ ದಶಕದವರೆಗಿನ ಕಾಲಘಟ್ಟಕ್ಕೆ ನಿಂತುಹೋಗಿರುವುದನ್ನು ಗಮನಿಸಬಹುದಾಗಿದೆ. ಸಾಹಿತ್ಯ ಚರಿತ್ರಕಾರರು ನವೋದಯ, ನವ್ಯ ಎಂದು ಸ್ಥೂಲವಾಗಿ ಹೇಳುವ ಕಾಲಾವಧಿಯ ಲೇಖಕರು ಮಾತ್ರವೇ ಇಲ್ಲಿ ಪರಿಶೀಲನೆಗೆ ಒಳಗಾಗಿದ್ದಾರೆ. ಹೊಸ ಪೀಳಿಗೆಯ ನೂರಾರು ಬರಹಗಾರರು ಪ್ರವೇಶ ಪಡೆಯುತ್ತಿರುವ ನವ್ಯೋತ್ತರ ಕಾಲದ ಯಾವೊಬ್ಬ ಲೇಖಕರ ಕಥಾಸಾಹಿತ್ಯ ಕೃಷಿಯ ಬಗ್ಗೆಯೂ ಇಲ್ಲಿ ವಿಸ್ತ್ರತ ಚರ್ಚೆ ನಡೆದಿಲ್ಲ. ಅದಕ್ಕೆ ಸಂಬಂಧಿಸಿ `ಇತ್ತೀಚೆಗೆ ಬರೆಯುತ್ತಿರುವ ಅನೇಕ ಮಹತ್ವದ ಕತೆಗಾರ್ತಿಯರ ಬಗ್ಗೆ, ಕಿರಿಯ ಕತೆಗಾರರ ಬಗ್ಗೆ ಇಲ್ಲಿ ಪ್ರಸ್ತಾಪಿಸಲಾಗಿಲ್ಲ.’ ಎಂಬ ಅರಿವು ತಮಗಿದೆ ಎಂದು ಲೇಖಕರು ಹೇಳಿಕೊಂಡಿದ್ದಾರೆ.
ತಮ್ಮ ಈ ಸಂಕಲನದಿಂದ ಹೊಸದಾಗಿ ಕತೆಗಳನ್ನು ಬರೆಯುವವರಿಗೆ ಒಂದಿಷ್ಟು ಮಾರ್ಗದರ್ಶನ ಸಿಗಬಹುದೆಂಬ ನಿರೀಕ್ಷೆಯನ್ನು ಗೋವಿಂದರಾಜರು ಪ್ರಕಟಿಸಿದ್ದಾರೆ. ಜೊತೆಗೆ ಇಲ್ಲಿನ ಎಲ್ಲಾ ಲೇಖನಗಳೂ `ತಮ್ಮ ಸಮಗ್ರ ವಿಮರ್ಶೆ’ ಸಂಕಲನ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯ ಹೊರತಂದ ಹೊನ್ನಾರು ಮಾಲಿಕೆಯ `ಪ್ರಮಾಣು’ ಗ್ರಂಥದಲ್ಲಿ ಇರುವುದನ್ನು ತಿಳಿಸಿದ್ದಾರೆ.
ಶೀರ್ಷಿಕೆ: ಕಲ್ಪಿತ ವಾಸ್ತವ: ಕನ್ನಡ ಸಣ್ಣ ಕತೆ ಲೇಖಕರು:ಗಿರಡ್ಡಿ ಗೋವಿಂದರಾಜ ಪ್ರಕಾಶಕರು:ಸಾಹಿತ್ಯ ಪ್ರಕಾಶನ ಪುಟ:352 ಬೆಲೆ:ರೂ.250/-(ಕ್ಯಾಲಿಕೋ) ರೂ.200/-(ಸಾದಾ ಪ್ರತಿ)
ಕೃಪೆ: ಪ್ರಜಾವಾಣಿ
Filed under: ವೈಜ್ಞಾನಿಕ ಸಾಹಿತ್ಯ | Tagged: ಕಲ್ಪಿತ ವಾಸ್ತವ: ಕನ್ನಡ ಸಣ್ಣ ಕತೆ, ಗಿರಡ್ಡಿ ಗೋವಿಂದರಾಜ, ಪ್ರಜಾವಾಣಿ, ಸಾಹಿತ್ಯ ಪ್ರಕಾಶನ | Leave a Comment »

ಆನಂದ ಋಗ್ವೇದಿಯವರು ಕವಿ, ಕಥೆಗಾರ ಹಾಗೂ ನಾಟಕಕಾರರೂ ಆಗಿದ್ದಾರೆ. ಅವರು ಬರೆದ ವಿಮರ್ಶಾತ್ಮಕ ಲೇಖನಗಳ ಸಂಗ್ರಹ ಇದು. ಇದು ಕೇವಲ ವಿಮರ್ಶಾತ್ಮಕ ಲೇಖನಗಳ ಸಂಗ್ರಹ ಮಾತ್ರವಾಗಿಲ್ಲ. ಇಲ್ಲಿ ಕನ್ನಡ ಲೇಖಕರ ಕುರಿತಂತೆ ನುಡಿ ಚಿತ್ರಗಳೂ ಇವೆ. ಈ ಭಾಗದಲ್ಲಿ ಅಕಾಲಿಕ ನಿಧನ ಹೊಂದಿದ ವಿಭಾ ತಿರಕಪಡಿ, ಮುದೇನೂರು ಸಂಗಣ್ಣ, ಚಿ.ಶ್ರೀನಿವಾಸರಾಜು ಅವರ ಕುರಿತ ನುಡಿಚಿತ್ರಗಳು ಆಪ್ತವಾಗಿವೆ. ಇವೆಲ್ಲವೂ ಅವರ ವೈಯಕ್ತಿಕ ಸಂಬಂಧ ಹಾಗೂ ನೆನಪುಗಳಿಂದ ಕಟ್ಟಿದ ನುಡಿಚಿತ್ರಗಳಾಗಿವೆ.
`ಹಾದಿ ಒಂದು’ ಎಂಬ ಭಾಗದಲ್ಲಿ ಹಿ.ಚಿ.ಬೋರಲಿಂಗಯ್ಯ, ಬಾಳಾಸಾಹೇಬ ಲೋಕಾಪುರ, ಮಹಾಶ್ವೇತಾದೇವಿ, ಎಸ್.ಎಸ್.ಹಿರೇಮಠ, ಸುರೇಂದ್ರನಾಥ್, ಎಂ.ವ್ಯಾಸ ಮುಂತಾದವರ ಪುಸ್ತಕಗಳನ್ನು ಲೇಖಕರು ವಿಮರ್ಶಿಸಿದ್ದಾರೆ. ಇವೆಲ್ಲ ಅಕಾಡೆಮಿಕ್ ಶಿಸ್ತಿನ ಬರಹಗಳು. ಆದರೂ, ಲೇಖಕರು ತಾವು ಒಬ್ಬ ಓದುಗ ಎಂಬ ವಿನಯದಿಂದಲೇ ಈ ಪುಸ್ತಕಗಳನ್ನು ಪ್ರವೇಶಿಸುತ್ತಾರೆ. ಒಂದು ತಾತ್ವಿಕ ಅಭಿಪ್ರಾಯಗಳಿಗೆ ಬರುತ್ತಾರೆ. ಪುಸ್ತಕದ ಮೂರನೇ ಭಾಗದಲ್ಲಿ ಲೇಖಕರು ವಿವಿಧ ಸಂದರ್ಭದಲ್ಲಿ ಪ್ರತಿಕ್ರಯಿಸಿದ್ದು ಹಾಗೂ ಅವರ ಮುನ್ನುಡಿಗಳು ಇವೆ. ಇಂದಿನ ಕಾಲದ ಹಾಗೂ ಇಂದು ಬರೆಯುತ್ತಿರುವ ಲೇಖಕರ ತಳಮಳವನ್ನು ಸರಿಯಾಗಿ ಇವು ವ್ಯಕ್ತಪಡಿಸುತ್ತವೆ ಎಂದು ಹೇಳಬಹುದು.
ಶೀರ್ಷಿಕೆ : ತಳಮಳದ ಹಾದಿ (ಸಾಹಿತ್ಯ ಅಭ್ಯಾಸಿಯ ವಿಮರ್ಶಾತ್ಮಕ ಟಿಪ್ಪಣಿಗಳು) ಲೇಖಕರು:ಆನಂದ ಋಗ್ವೇದಿ ಪ್ರಕಾಶಕರು:ಪಲ್ಲವ ಪ್ರಕಾಶನ ಪುಟ:120 ಬೆಲೆ:ರೂ.80/-
ಕೃಪೆ: ಪ್ರಜಾವಾಣಿ
Filed under: ವಿಮರ್ಶೆ | Tagged: ಆನಂದ ಋಗ್ವೇದಿ, ತಳಮಳದ ಹಾದಿ (ಸಾಹಿತ್ಯ ಅಭ್ಯಾಸಿಯ ವಿಮರ್ಶಾತ್ಮಕ ಟಿಪ್ಪಣಿಗಳು), ಪಲ್ಲವ ಪ್ರಕಾಶನ, ಪ್ರಜಾವಾಣಿ | Leave a Comment »