ಜುಲೈ ೫ ರಂದು ಬಿಡುಗಡೆಯಾದ ಕೆಲವು ಪುಸ್ತಕಗಳು

scan0007(2)ಶೀರ್ಷಿಕೆ:ನೂರೆಂಟು ಸುಭಾಷಿತಗಳು ಲೇಖಕರು:ಮಹಾಬಲ ಸೀತಾಳಭಾವಿ ಪ್ರಕಾಶನ:ಅಂಕಿತ ಪುಸ್ತಕ

scan0004ಶೀರ್ಷಿಕೆ:ಆಂಟನ್ ಚೆಕಾಫ್ ಕಥೆಗಳು ಪ್ರಕಾಶನ:ಅಂಕಿತ ಪುಸ್ತಕ

scan0008(2)ಶೀರ್ಷಿಕೆ:ಪಟ್ಟದ ಗೊಂಬೆಯೂ ಪರದೇಶವೂ ಲೇಖಕರು:ಶಾಂತಾ ನಾಗರಾಜ್ ಪ್ರಕಾಶಕರು:ಅಂಕಿತ ಪುಸ್ತಕ

scan0005(2)

ಶೀರ್ಷಿಕೆ:ನನ್ನ ಅಜ್ಜಿಯ ಜಗತ್ತು ಲೇಖಕರು:ರಜನೀ ನರಹಳ್ಳಿ ಪ್ರಕಾಶಕರು:ಸುಮುಖ ಪ್ರಕಾಶನ

scan0006

ಶೀರ್ಷಿಕೆ:ಘಳಿಗೆಗೊಂದು ಗುಳಿಗೆ ಲೇಖಕರು:ಸಿ.ಎನ್.ಕೃಷ್ಣಮಾಚಾರ‍್ ಪ್ರಕಾಶಕರು:ಸುಮುಖ ಪ್ರಕಾಶನ

ಕೃಪೆ: ಉದಯವಾಣಿ

ವಿಶ್ವದಲ್ಲಿ ಅನ್ಯಾಯವಾದ ಪ್ರತಿಯೊಂದು ಸಲ ನೀವು ಕೋಪದಿಂದ ಕಂಪಿಸಬಲ್ಲಿರಾದರೆ…

che book

ಕ್ರಾಂತಿಯ ಹಂಬಲ ಹೋರಾಟಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಂಡು ಪಡೆದ ಪಕ್ವ ದೃಷ್ಟಿಕೋನ ನನ್ನ ಹಿಂದಿನ ವೈದ್ಯಕೀಯ ವಿದ್ಯಾರ್ಥಿದೆಸೆಯಲ್ಲಿ ಇರಲಿಲ್ಲ. ನಾನು ಎಲ್ಲರಂತೆ ಯಶಸ್ವಿಗೆ ಆಶಿಸಿದೆ; ನಾನೊಬ್ಬ ಪ್ರಸಿದ್ಧ ಸಂಶೋಧಕನಾಗಿ, ಬಿಡುವಿಲ್ಲದೆ ದುಡಿದು, ಮಾನವ ಜೀವಿಗಳೆಲ್ಲರಿಗೂ ಲಾಭವಾಗುವಂತಹ ಏನಾದರೂ ಸಂಶೋಧನೆ ಮಾಡುವ ಕನಸು ಕಾಣುತ್ತಿದ್ದೆ. ಆದರೆ ಇವೆಲ್ಲ ವೈಯಕ್ತಿಕ ಯಶಸ್ಸಿಗಾಗಿ ಕಟ್ಟಿದ ಕನಸುಗಳು. ನಮ್ಮೆಲ್ಲರಂತೆ ನಾನೂ ಸಹ ನಮ್ಮ ಪರಿಸರದಿಂದ ರೂಪಿತವಾದ ವ್ಯಕ್ತಿಯಾಗಿದ್ದೆ.

“……..ದಾರಿದ್ರದಿಂದಾಗಿ, ಹೇಗೆ ತಂದೆ ತಾಯಿಯರು ತಮ್ಮ ಮಕ್ಕಳ ರೋಗಗಳಿಗೆ ಔಷಧಿ ಕೊಡಲಾರದಾಗಿದ್ದರೆಂಬುದನ್ನು ಕಂಡೆ. ಹಸಿವೆ ಮತ್ತು ನರಳಿಕೆಗಳಿಂದ ಪೀಡಿತನಾದ ತಂದೆ ತನ್ನ ಮಗು ಸಾಯುವುದನ್ನು ನಿರ್ವಿಕಾರನಾಗಿ ಸಹಿಸಿಕೊಳ್ಳುವಷ್ಟು ಪಶುಪ್ರಾಯನಾಗಿ ಮನುಷ್ಯನು ಅಧಃಪಾತಾಳಕ್ಕೆ ಜಾರುವುದನ್ನು ಕಂಡೆ. ಪ್ರಸಿದ್ಧ ಸಂಶೋಧಕನಾಗುವುದಕ್ಕಿಂತ, ಅಥವಾ ಆರೋಗ್ಯ ಶಾಸ್ತ್ರಕ್ಕೆ ಒಂದು ಅಮೂಲ್ಯ ಕೊಡುಗೆ ಕೊಡುವುದಕ್ಕಿಂತಲೂ ಯಾವ ರೀತಿಯಲ್ಲೂ ಕನಿಷ್ಟವೆಂದು ಹೇಳಲಾಗದ ಜೀವನದ ದ್ಯೇಯ ಇನ್ನೊಂದು ಇದೆಯೆಂದು ನಾನು ಕಂಡುಕೊಂಡೆ….. ಈ ಜನರ ಸಹಾಯಕ್ಕೆ ನಾನು ಒದಗಬೇಕೆಂಬ ಜ್ಞಾನೋದಯವಾಗಿತ್ತು.

ಇದು ವಿಶ್ವದಲ್ಲಿ ಅನ್ಯಾಯವಾದ ಪ್ರತಿಯೊಂದು ಸಲ ನೀವು ಕೋಪದಿಂದ ಕಂಪಿಸಬಲ್ಲಿರಾದರೆ ನಾವು ಸಂಗಾತಿಗಳು! ಎಂದ ಅಗ್ರಗಣ್ಯ ಕ್ರಾಂತಿಕಾರಿ ಮತ್ತು ಲ್ಯಾಟಿನ್ ಅಮೆರಿಕಾದ ಜನತೆಗಳ ರಾಷ್ಟ್ರೀಯ ವಿಮೋಚನಾ ಹೋರಾಟಗಾರ ಆರ್ನೆಸ್ಟೋ ಚೆ ಗುವಾರರ ಜೀವನದ ಬಗ್ಗೆ ಐ. ಲವ್ರೆತ್ಸ್ಕಿ (ಡಾ.ಐ.ಆರ‍್.ಗ್ರಿಗುಲೆವಿಚ್, ಸೋವಿಯತ್ ಒಕ್ಕೂಟದ ವಿಜ್ಞಾನಗಳ ಅಕಾದೆಮಿಯ ಕರೆಸ್ಪಾಂಡಿಂಗ್ ಸದಸ್ಯ) ಬರೆದ ಪುಸ್ತಕ ಇದು.

ಈ ಪುಸ್ತಕಕ್ಕೆ ಲೇಖಕರು ಅನೇಕ ದಾಖಲೆಗಳನ್ನು, ಪತ್ರಿಕಾ ವರದಿ-ಲೇಖನಗಳನ್ನು, ಚೆ ಗುವಾರ ಅವರ ಮಿತ್ರರು, ಸಂಬಂಧಿಕರು ಮತ್ತು ಅವರ ಜೊತೆಗೂಡಿ ಹೋರಾಡಿದ ಸಂಗಾತಿಗಳೊಡನೆಯ ಸಂಭಾಷಣೆಗಳ ಟಿಪ್ಪಣಿಗಳನ್ನು ಬಳಸಿಕೊಂಡಿದ್ದಾರೆ.

ಈ ಪುಸ್ತಕವನ್ನು ಕನ್ನಡಕ್ಕೆ ತಂದವರು ಗೊ.ರು.ಚನ್ನಬಸಪ್ಪ, ಸೂರ್ಯಕಾಂತ ಸೊನ್ನದ ಹಾಗೂ ಕೆ.ಪಿ.ಸ್ವಾಮಿ

- ಪುಸ್ತಕದ ಬೆನ್ನುಡಿಯಿಂದ
ಶೀರ್ಷಿಕೆ : ಆರ್ನೆಸ್ಟೋ ಚೆ ಗುವಾರ     ಮೂಲ ಲೇಖಕರು:ಐ ಲಾವ್ರೆತ್ ಸ್ಕಿ ಪ್ರಕಾಶಕರು:ನವಕರ್ನಾಟಕ ಪುಟ:504 ಬೆಲೆ:ರೂ.40/-(ಪ್ರಥಮ ಮುದ್ರಣದ ಬೆಲೆ)

ದುರಂತವನ್ನು ರೋಚಕಗೊಳಿಸುವ ಕತೆಯಲ್ಲ

scan0008

2006ರ ಸಪ್ಟೆಂಬರ‍್ 29ರಂದು ಮಹಾರಾಷ್ಟ್ರದ ಖೈರ್ಲಾಂಜಿಯಲ್ಲಿ ಸುರೇಖಾ ಭೋತ್ಮಾಂಗೆ ಮತ್ತವರ ಮಗಳು ಪ್ರಿಯಾಂಕ ಭೋತ್ಮಾಂಗೆಯವರನ್ನು ಬೆತ್ತಲುಗೊಳಿಸಿ ಮೆರವಣಿಗೆ ಮಾಡಿ ಸತತವಾಗಿ ಅತ್ಯಾಚಾರ ನಡೆಸಿ ಕೊಲ್ಲಲಾಯಿತು. ಸುರೇಖಾರ ಮಕ್ಕಳಾದ ರೋಷನ್ ಮತ್ತು ಸುಧೀರ‍್ ರನ್ನು ಕೊಚ್ಚಿ ಕೊಲ್ಲಲಾಯಿತು. ಈ ಭೀಕರ ಹತ್ಯಾಕಾಂಡದಲ್ಲಿ ಇಡೀ ಹಳ್ಳಿಯೇ ತೊಡಗಿಕೊಂಡಿತ್ತು. ಭೋತ್ಮಾಂಗೆಗಳು ದಲಿತರಾಗಿದ್ದರು. ಭೋತ್ಮಾಂಗೆಗಳನ್ನು ಈಗ ಮರೆತುಬಿಡಲಾಗಿದೆ. ಏಕೆಂದರೆ, ಹೇಗಿದ್ದರೂ ಈ ದೇಶದಲ್ಲಿ ದಿನಕ್ಕೆರಡು ದಲಿತರ ಕೊಲೆಯಾಗುತ್ತಲೇ ಇದೆ.
ಡಾ. ಆನಂದ್ ತೇಲ್ ತುಂಬ್ಡೆಯವರು ಸ್ವಾತಂತ್ರೋತ್ತರ ಭಾರತದ ಅತ್ಯಂತ ಹೀನಾಯ ಜಾತಿ ದೌರ್ಜನ್ಯವೊಂದನ್ನು ಈ ಪುಸ್ತಕದಲ್ಲಿ ನಿರೂಪಿಸಿದ್ದಾರೆ ಮತ್ತು ಹೇಗೆ ನಮ್ಮ ಸುತ್ತ ಮುತ್ತ ಸದಾ ಖೈರ್ಲಾಂಜಿಗಳು ಇದ್ದೇ ಇವೆಯೆಂದು ತಿಳಿಸಿಕೊಟ್ಟಿದ್ದಾರೆ.
ಆನಂದ್ ತೇಲ್ ತುಂಬ್ಡೆಯವರ ವಿಶ್ಲೇಷಣೆ ನಮ್ಮ ಸಮಾಜದ ಹೃದಯಕ್ಕೆ ಗ್ಯಾಂಗ್ರೀನ್ ಹಿಡಿದಿರುವುದನ್ನು ಎತ್ತಿತೋರಿಸುತ್ತದೆ. ಆನಂದರ ಪುಸ್ತಕ ಈ ಹತ್ಯೆಯು ಯಾವ ಸಾಮಾಜಿಕ ಸಂದರ್ಭದೊಳಗೆ ಸಂಭವಿಸಿತೆಂಬ ವಿಶ್ಲೇಷಣೆಯನ್ನು ಒದಗಿಸುವುದಲ್ಲದೆ, ಯಾವ ರೀತಿಯಲ್ಲಿ ಸಾಮಾಜಿಕ, ರಾಜಕೀಯ ಮತ್ತು ಪ್ರಭುತ್ವ ಯಂತ್ರಾಂಗಗಳು, ಪೋಲೀಸರು, ಸಮೂಹ ಮಾದ್ಯಮಗಳು ಮತ್ತು ನ್ಯಾಯಾಂಗಗಳು ಎಲ್ಲವೂ ಒಂದಾಗಿ ಇಂಥ ದೌರ್ಜನ್ಯಗಳು ಸಂಭವಿಸುವಂಥಾ ವಾತಾವರಣವನ್ನೂ ಸೃಷ್ಟಿಸಿದವು ಎಂಬುದನ್ನೂ ಮತ್ತು ಅನಂತರ ಹೇಗೆ ಅದನ್ನು ಮುಚ್ಚಿಹಾಕಲು ಪ್ರಯತ್ನಿಸಿದವು ಎಂಬುದನ್ನೂ ವಿವರಿಸುತ್ತದೆ. ಇದು ಅಳಿದುಳಿದ ಊಳಿಗಮಾನ್ಯ ವ್ಯವಸ್ಥೆಯ ಕೊನೆಯ ದಿನಗಳ ಬಗೆಗಿನ ಪುಸ್ತಕವಲ್ಲ. ಬದಲಿಗೆ ನಮ್ಮ ದೇಶದಲ್ಲಿ ಆಧುನಿಕತೆಗೆ ಏನರ್ಥ ಎಂಬುದರ ಬಗೆಗಿನ ಪುಸ್ತಕ ಎನ್ನುತ್ತಾರೆ ಅರುಂಧತಿ ರಾಯ್
ಪುಸ್ತಕದ ಬೆನ್ನುಡಿಯಿಂದ
ತೇಲ್ತುಂಬ್ಡೆಯವರ ಅಧ್ಯಯನ ಸಮಗ್ರವಾದದ್ದು; ಅವರು ದುರಂತವನ್ನು ರೋಚಕಗೊಳಿಸುವುದಿಲ್ಲ. ಆಧುನಿಕತೆ ಮತ್ತು ಜಾಗತೀಕರಣವು ಅಬಲರಲ್ಲಿ ಯಾವುದಾದರೂ ನಿರೀಕ್ಷೆಯನ್ನು ತುಂಬಿದೆಯೇ ಎಂದು ಈ ಪುಸ್ತಕ ನಮ್ಮನ್ನು ಆಲೋಚನೆಗೆ ಹಚ್ಚುತ್ತದೆ.
ಎನ್ನುತ್ತದೆ ದಿ ಟೆಲಿಗ್ರಾಫ್ ಪತ್ರಿಕೆ
ಶೀರ್ಷಿಕೆ: ಖೆರ್ಲಾಂಜಿ  ಲೇಖಕರು:ಆನಂದ್ ತೇಲ್ ತುಂಬ್ಡೆ. ಅನುವಾದ ಸಂಪಾದನೆ:ಶಿವಸುಂದರ‍್ ಪ್ರಕಾಶನ:ಲಂಕೇಶ್ ಪ್ರಕಾಶನ ಪುಟ:277 ಬೆಲೆ:ರೂ.200/-

ಯಾದ್ ವಶೀಮ್ ಗೆ ೨೦೦೭ ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

scan0007

ಐವರಿಗೆ ಸಾಹಿತ್ಯ ಅಕಾಡೆಮಿ ಗರಿ
ಹಿರಿಯ ಸಾಹಿತಿ ಪ್ರೊ.ಅ.ರಾ.ಮಿತ್ರ ರೊಂದಿಗೆ ಹಸನಬಿ ಬೀಳಗಿ, ವಿಷ್ಣು ನಾಯ್ಕ, ಪ್ರೊ.ಮಲ್ಲಿಕಾರ್ಜುನ ಹಿರೇಮಠ ಮತ್ತು ಲಕ್ಷ್ಮಣ್ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ 2008ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
2007ನೇ ಸಾಲಿನ ಪುಸ್ತಕ ಬಹುಮಾನಕ್ಕಾಗಿ ಕಾವ್ಯ ಕಾದಂಬರಿ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಿಂದ 18 ಕೃತಿಗಳನ್ನು ಆಯ್ಕೆ ಮಾಡಲಾಗಿದೆ.
ಬಹುಮಾನಿತ ಕೃತಿಗಳು :
ಕಾವ್ಯ – ಒಡೆಯಲಾರದ ಪ್ರತಿಮೆ – ಬಸವರಾಜ ವಕ್ಕುಂದ
ಕಾದಂಬರಿ – ಯಾದ್ ವಶೀಮ್ – ನೇಮಿಚಂದ್ರ
ಸಣ್ಣಕತೆ – ನನ್ನ ಇನ್ನಷ್ಟು ಕತೆಗಳು – ಮಹಮ್ಮದ್ ಕುಳಾಯಿ
ನಾಟಕ – ದಾಳ – ಪ್ರೊ.ಎಸ್.ಜಿ.ಸಿದ್ಧರಾಮಯ್ಯ
ಲಲಿತ ಪ್ರಬಂಧ – ದೇವರುಗಳ ಟೈಮೇ ಸರಿಯಿಲ್ಲ – ಎಚ್.ಎಲ್.ಕೇಶವಮೂರ್ತಿ
ಪ್ರವಾಸ ಸಾಹಿತ್ಯ – ದುಬೈ ಎಂಬ ಮಾಯಾನಗರಿ – ಸಂಗಮೇಶ ಕೋಟಿ
ಜೀವನ ಚರಿತ್ರೆ – ಬಣ್ಣದ ಬದುಕಿನ ಚಿನ್ನದ ದಿನಗಳು – `ಪ್ರಜಾವಾಣಿ’ಯ ಗಣೇಶ ಅಮೀನಗಡ
ಸಾಹಿತ್ಯ ವಿಮರ್ಶೆ – ಉಲ್ಲೇಖ – ಕೆ.ವಿ.ತಿರುಮಲೇಶ್
ಗ್ರಂಥ ಸಂಪಾದನೆ – ನಂದಪ್ಪದೇವರ ಪ್ರಭುಚರಿತ್ರೆ – ಪ್ರೊ.ಎಸ್.ಉಮಾಪತಿ
ಮಕ್ಕಳ ಸಾಹಿತ್ಯ – ರೋಬೋಟ್ ಮತ್ತು ಚಿನ್ಹೆಗಳು – ನಾ.ಸು.ಭರತನ ಹಳ್ಳಿ
ವಿಜ್ಞಾನ ಸಾಹಿತ್ಯ – ಆಚಿನ ಲೋಕಕ್ಕೆ ಕಾಲಕೋಶ – ನಾಗೇಶ ಹೆಗಡೆ
ಮಾನವಿಕ – ಮಹಿಳಾ ಚಳವಳಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆ – ಹಾಲತಿ ಸೋಮಶೇಖರ‍್
ಸಂಶೋದನೆ – ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ – ಎಸ್.ಶೆಟ್ಟರ‍್
ಅನುವಾದ (ಸೃಜನಶೀಲ) – ನೆಲವೆದ್ದು ಬಡಿಯಿತು – ಚಂದ್ರಕಾಂತ ಪೊಕಳೆ
ಅನುವಾದ (ಸೃಜನೇತರ) – ಅಧಿಕಾರ ಮೀಮಾಂಸೆ – ಪಿ.ವಿ.ನಾರಾಯಣ
ಸಂಕೀರ್ಣ – ವಕೀಲರೊಬ್ಬರ ವಗೈರೆಗಳು – ಸಿ.ಎಚ್.ಹನುಮಂತರಾಯ
ಲೇಖಕರ ಮೊದಲ ಕೃತಿ – ತತ್ರಾಣಿ – ಬಸವರಾಜ ಹೂಗಾರ
ಕನ್ನಡದಿಂದ ಇಂಗ್ಲೀಷ್ ಗೆ ಅನುವಾದ – ಆರಿಜಿನ್ ಆಫ್ ಕ್ರಿಶ್ಚಿಯನ್ ಇನ್ ಅಂಡ್ ಅರೌಂಡ್ ಶ್ರೀರಂಗಪಟ್ಟಣ – ಫಾದರ‍್ ಡಾ.ಐ.ಅಂತಪ್ಪ
ಆಸಕ್ತರು ಅಕಾಡೆಮಿಯ ವೆಬ್ ಸೈಟ್ (www.karnatakasahithyaacademy.org) ನಲ್ಲಿ ಲೇಖಕರ ವಿಳಾಸ, ಪ್ರಶಸ್ತಿ ಮತ್ತು ಇನ್ನಿತರ ಮಾಹಿತಿಗಳನ್ನು ಪಡೆಯಬಹುದು

ಕೃಪೆ – ಪ್ರಜಾವಾಣಿ

ಕೂಗು ಕೇಕೆಗೆ ಕಾಲು ಅಂದುಗೆ ಘಲಿರು ಘಲಿರಿನ ನೂಪುರ

scan0005

‘ಎಳೆಯ ಬೆರಳುಗಳೊಳಗೆ ಯಾವುದೋ ವೀಣೆ ನುಡಿದಿದೆ ಸುಮಧುರ
ಕೂಗು ಕೇಕೆಗೆ ಕಾಲು ಅಂದುಗೆ ಘಲಿರು ಘಲಿರಿನ ನೂಪುರ’
(ನನ್ನ ಮಗು/ಪು.37)
ಎಂದು ಲಯಬದ್ಧವಾಗಿ ಬರೆಯುವ ಛಾಯಾ ಭಗವತಿಯವರ ಮೊದಲ ಸಂಕಲನವಿದು. ತುಂಬಾ ಪುಟ್ಟ ಕವನ ಸಂಗ್ರಹವಾದ ಇದರಲ್ಲಿ 19 ಕವಿತೆಗಳಿವೆ. ರಮ್ಯವಾದ, ಬಾಲ್ಯವನ್ನು ನೆನಪಿಸುವ ಚಿತ್ರಗಳು ಇದರಲ್ಲಿವೆ. ಹೆಣ್ಣಿನ ಬದುಕಿನ ಹಂತಗಳಾದ ಬಾಲ್ಯ, ಹರೆಯ, ಮದುವೆ, ತಾಯ್ತನ ಇಲ್ಲಿ ಕವಿತೆಗಳಾಗಿವೆ.
ಕೆಲವೆಡೆ ಪ್ರಾಸಬದ್ಧವಾಗಿ, ಲಯಬದ್ಧವಾಗಿ ಬರೆಯುವ ಕವಿ ಒಂದು ಸುಂದರ ಚಿತ್ರವನ್ನು ಕಣ್ಣಮುಂದೆ ತಂದು ನಿಲ್ಲಿಸುವಲ್ಲಿ ಯಶಸ್ವಿಯಾಗುತ್ತಾರೆ. ತಮ್ಮ ಸೀಮಿತ ಅನುಭವದ ಕುರಿತು ಬರೆಯುವಾಗಲೂ ಅದರ ಮಿತಿಯಲ್ಲೇ ಒಂದು ಗ್ರಹಿಕೆಯನ್ನು ಅವರು ಕೊಡುತ್ತಾರೆ.
ಈ ಸಂಕಲನ ಮುಖ್ಯ ಕವಿತೆಯಾದ `ಪುಟಾಣಿ ಕೆಂಪು ಶೂ’ ನಲ್ಲಿ ಕೂಡ ಒಂದು ಮಧ್ಯಮವರ್ಗದ ಮಾನವೀಯ ಚಿತ್ರವಿದೆ. ಇಂಥವನ್ನು ಚಿತ್ರಿಸುವಾಗಲೆಲ್ಲ ಇಲ್ಲಿನ ಕೆಲವು ಕವಿತೆಗಳು ಯಶಸ್ವಿಯಾಗಿವೆ. `ಬಾಲ್ಯ ಮತ್ತು ಒಂದೆರಡು ಚಿತ್ರಗಳು’, `ಅವಳು’, `ಈಗೇಕೆ ಹೀಗೆ’, `ವಿಪರ್ಯಾಸ’  ಇಂತಹ ಸಫಲ ಚಿತ್ರಗಳಲ್ಲಿ ಕೆಲವು.

ಶೀರ್ಷಿಕೆ:ಪುಟಾಣಿ ಕೆಂಪು ಶೂ ಲೇಖಕರು:ಛಾಯಾ ಭಗವತಿ ಪ್ರಕಾಶಕರು:ಲೋಹಿಯಾ ಪ್ರಕಾಶನ ಪುಟ:56 ಬೆಲೆ:30/-

ಕೃಪೆ:ಪ್ರಜಾವಾಣಿ

… ನಾನು ಮಧ್ಯಬಿಂದುವಿನಂತೆ ತಟಸ್ಥ,

scan0012
ಇಂದಿರಾ ಸಂತ್ ಮರಾಠಿಯ ಪ್ರಸಿದ್ಧ ಕವಿ. ಭಾವಗೀತೆಯ ಕವಿಯಾಗಿ ಅವರು ಪರಿಚಿತರು. ಅವರ ಮೊದಲ ಕವಿತಾ ಸಂಗ್ರಹ `ಗೊಂಬೆಗಳು’ ಎಂಬುದು. ಬಳಿಕ ಪ್ರಕಟವಾದ `ಗರ್ಭರೇಶಿಮೆ’ ಕವಿತೆಗಳನ್ನು ಸಾಹತ್ಯ ಅಕಾಡೆಮಿ ಮರು ಮುದ್ರಿಸಿದೆ.
ಬದುಕಿನ ದಾರುಣತೆಯನ್ನು ಬಿಂಬಿಸುವ ಕವಿತೆಗಳನ್ನು ಬರೆವ ಇಂದಿರಾ ಸಂತ್ ಬಾಲ್ಯದ ನೆನಪುಗಳು ಹಾಗೂ ದೈನಿಕ ಬದುಕಿನಿಂದ ಕವಿತೆಗಳನ್ನು ಕಟ್ಟಿದವರು. ಹಾಗೂ ನಾವು ನಿತ್ಯ ನೋಡುತ್ತಿರುವ ಸಂಗತಿಗಳಿಂದಲೇ ಕವಿತೆಗಳ ವಸ್ತುಗಳನ್ನು ಅವರು ಆಯ್ದುಕೊಂಡಿರುವುದನ್ನು ಕಾಣಬಹುದು.
… ನಾನು ಮಧ್ಯಬಿಂದುವಿನಂತೆ ತಟಸ್ಥ,
ಮನಮಗ್ನ
ನವಿಲುಗರಿಯ ಮೇಲಿನ ಕಣ್ಣಿನಂತೆ.
(ಮನಮಗ್ನ/ಪು.65)
ಇಂದಿರಾ ಅವರ ದನಿ ಮೆಲು ದನಿಯದು. ಇಂಥ ಚಿತ್ರಗಳು ಸಂಕಲನದ ಅನೇಕ ಕಡೆಗಳಲ್ಲಿ ಇವೆ. ಈ ಆಕರ್ಷಕ ಚಿತ್ರಗಳಿಂದ, ದೈನಿಕದ ಮಾತಿನಿಂದ ಇಲ್ಲಿನ ಕವಿತೆಗಳು ಗಮನ ಸೆಳೆಯುತ್ತವೆ.
ಹಿರಿಯ ವಿದ್ವಾಂಸರಾಗಿದ್ದ ಲ.ರಾ.ಪಂಡಿತ ಈ ಕವಿತೆಗಳನ್ನು ಅನುವಾದಿಸಿದ್ದಾರೆ. ಅವರು ಮರಾಠಿ ಭಾಷೆಯ ಸೊಗಡನ್ನು ಈ ಅನುವಾದದಲ್ಲೂ ತಂದಿದ್ದಾರೆ.

ಶೀರ್ಷಿಕೆ: ಗರ್ಭರೇಶಿಮೆ ಲೇಖಕರು:ಇಂದಿರಾ ಸಂತ್ ಅನು:ಲ.ರಾ.ಪಂಡಿತ್ ಪ್ರಕಾಶಕರು:ಸಾಹಿತ್ಯ ಅಕಾಡೆಮಿ ಪುಟ:140 ಬೆಲೆ:ರೂ.100/-

ಕೃಪೆ: ಪ್ರಜಾವಾಣಿ

ಒಡೆದ ಕೋಟೆ, ಅಗ್ನಿ ಪರ್ವತ ಇತ್ಯಾದಿ

scan0011
ತಮಿಳಿನ ಮುಖ್ಯ ಲೇಖಕರ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಪಾ.ಶ. ಶ್ರೀನಿವಾಸ. ಈ ಸಂಕಲನದಲ್ಲಿ ಕಲ್ಕಿ, ಅಖಿಲನ, ಜಯಕಾಂತನ್, ಇಂದುಮತಿ ಮೊದಲಾದ ಕತೆಗಾರರ ಎಂಟು ಕತೆಗಳು ಇವೆ.
ಕಲ್ಕಿಯವರ ‘ಒಡೆದ ಕೋಟೆ’, ಅಖಿಲನ್ ಅವರ ‘ಅಗ್ನಿ ಪರ್ವತ’, ಜಯಕಾಂತನ್ ಅವರ ‘ಉಪವಾಸ ವ್ರತ’, ಇಂದುಮತಿ ಅವರ ‘ಮೆರವಣಿಗೆ”, ಮಾಲನ ಅವರ ‘ಜಾಗ’, ಇಲ್ಲಿನ ಮುಖ್ಯ ಕಥೆಗಳಾಗಿವೆ. ಇವೆಲ್ಲವನ್ನೂ ಶ್ರೀನಿವಾಸ ಮೂಲದ ಅಂದಗೆಡದಂತೆ ಅನುವಾದಿಸಿದ್ದಾರೆ. ಭಾರತೀಯ ಭಾಷೆಗಳ ಕತೆಗಳ ಬಗ್ಗೆ ಕುತೂಹಲ ಇರುವವರಿಗೆ ಇದೊಂದು ಒಳ್ಳೆಯ ಓದಾಗುತ್ತದೆ.
ಇದರೊಂದಿಗೆ ತಮಿಳು ಕತೆಗಳ ಬಗ್ಗೆ ಚಿಕ್ಕದಾದ ಪ್ರವೇಶವನ್ನು ಅನುವಾದಕರು ಕೊಟ್ಟಿದ್ದಾರೆ. ಇದು, ಕಥೆಗಳ ಮೊದಲಿಗೆ ಬರುವ ಲೇಖಕರ ಪರಿಚಯ ಕಥೆಗಳನ್ನು ಒಟ್ಟಾರೆ ಅರಿಯಲು ಸಹಾಯಕವಾಗಿವೆ. ಇಲ್ಲಿ ಅನುವಾದಗೊಂಡಿರುವ ಕಥೆಗಾರರೆಲ್ಲ ಹಿರಿಯ ತಲೆಮಾರಿಗೆ ಸೇರಿದವರು. ಯುವ ಕಥೆಗಾರರ ಕತೆಗಳು ಇಲ್ಲದಿರುವುದು ಈ ಸಂಕಲನದ ಕೊರತೆ ಎಂದೇ ಹೇಳಬಹುದು.

ಶೀರ್ಷಿಕೆ : ಪ್ರಸಾದ (ತಮಿಳು ಸಣ್ಣ ಕತೆಗಳ ಸಂಕಲನ) ಅನು:ಪಾ.ಶ.ಶ್ರೀನಿವಾಸ  ಪ್ರಕಾಶಕರು:ಪ್ರಿಯದರ್ಶಿನಿ ಪ್ರಕಾಶನ ಪುಟ:೧೪೮ ಬೆಲೆ: ರೂ.100/-

ಕೃಪೆ: ಪ್ರಜಾವಾಣಿ

ಕೊರಗೆಂದರೆ

scan0010

ಕೊರಗೆಂದರೆ
ನಾವು ಎಲ್ಲರಂತೆ ಪ್ರೇಮಿಸಲಿಲ್ಲ
ನಿರೀಕ್ಷೆಗಳೆಲ್ಲ ಹುಸಿಯಾದ ಮೇಲೆ
‘ಹುಸಿ‘ ಎಂಬ ಪದಕ್ಕೆ ಅನ್ವರ್ಥವಾಗಿ
ನಿರೀಕ್ಷೆ ಎಂದು ಬರೆದಿಟ್ಟುಕೊಂಡಿದ್ದೇನೆ
ಹೌದು,
ನಮ್ಮಿಬ್ಬರ ಭೇಟಿಗೆ ಬೆಳದಿಂಗಳು ಚೆಲ್ಲುತ್ತಿದ್ದ
ಚಂದಿರ ಈಗಲೂ ನಿಮ್ಮೂರಲ್ಲಿ ನೆಲಸಿದ್ದಾನ?
(ಬರುವ ನಾಳೆಗಳಿಗೆ ರಾತ್ರಿಗಳೇ ಇರುವುದಿಲ್ಲ-ಪು-೩೬)
ಎಂದು ಸಂಕಲನದ ಮುಖ್ಯ ಕವಿತೆಯಲ್ಲಿ ಚಿತ್ರವತ್ತಾಗಿ ಬರೆಯುವ ಕವಿ ಸಿದ್ದು ದೇವರಮನಿಯವರದು ಒಂದು ರೀತಿಯ ವಿಷಾದಗೀತೆಗಳು. ಇದು ಕವಿಯ ಮೊದಲ ಸಂಕಲನ.
ಇವರ ಕವಿತೆಗಳಲ್ಲಿ ಪ್ರೀತಿಯ ಕನವರಿಕೆಗಳಿವೆ, ಷರೀಫಜ್ಜನಿಗೊಂದು ಪತ್ರವಿದೆ, ಪ್ರಕೃತಿಯ ಕುರಿತಾದ ವ್ಯಾಮೋಹವಿದೆ. ರೋಮ್ಯಾಂಟಿಕ್ ಆಗಿ ಬರೆಯುವ ಕವಿಯ ಸರಳ ಮನಸ್ಸಿನ ಸರಳ ರಚನೆಗಳಿವು. ಸವೆದು ಸವಕಲಾಗಿರುವ ಕವಿಸಮಯಗಳೂ ಇತ್ತೀಚಿನ ಕವಿತೆಗಳಂತೆ ಈ ಕವಿತೆಗಳಲ್ಲೂ ಕಾಣಿಸಿಕೊಂಡಿವೆ.
ಆದರೂ ದೇವರಮನಿ ‘ಅಜ್ಜಿಯಾಗುವುದೆಂದರೆ…’, ‘ಹೀನ ಬದುಕಿನ ನೋವನುಂಡವಳು’, ‘ಬರುವ ನಾಳೆಗಳಿಗೆ ರಾತ್ರಿಗಳೇ ಇರುವುದಿಲ್ಲ’,'ಅರ್ಥವಾಗದ ಚಿತ್ರ ಹಾಳು ಗೋಡೆಯ ಪಾಲು’ ಕವಿತೆಗಳಲ್ಲಿ ಓದುಗರಿಗೆ ಪ್ರಿಯರಾಗುತ್ತಾರೆ. ಕವಿತೆಗಳಿಗಿರುವ ದೊಡ್ಡ ತಲೆಬರಹಗಳು ಕವಿತೆಯ ಬಗ್ಗೆ ಹೆಚ್ಚಿನ ಕುತೂಹಲ ಹುಟ್ಟಿಸುವುದಿಲ್ಲ.
ಶೀರ್ಷಿಕೆ: ಬರುವ ನಾಳೆಗಳಿಗೆ ರಾತ್ರಿಗಳೇ ಇರುವುದಿಲ್ಲ ಲೇಖಕರು:ಸಿದ್ದು ದೇವರಮನಿ ಪ್ರಕಾಶಕರು: ಅಭಿನವ ಪ್ರಕಾಶನ  ಪುಟ:80, ಬೆಲೆ:ರೂ.50/-

ಕೃಪೆ : ಪ್ರಜಾವಾಣಿ

ಹನ್ನೆರಡರ ಹುಡುಗ

scan0009(2)
ಇಟೆಲಿಯ ಪತ್ರಕರ್ತ, ಬರಹಗಾರ ಇಟಾಲೋ ಕಾಲ್ವಿನೋನ ‘ಬ್ಯಾರನ್ ಇನ್ ದಿ ಟ್ರೀಸ್’ ಕಾದಂಬರಿಯನ್ನು ಕೆ.ಪಿ.ಸುರೇಶ ಕನ್ನಡಕ್ಕೆ ತಂದಿದ್ದಾರೆ. ಹನ್ನೆರಡು ವರುಷದ ಹುಡುಗನೊಬ್ಬನ ಸಾಕ್ಷೀ ಪ್ರಜ್ಞೆಯಲ್ಲಿ ನಿರೂಪಿತವಾಗಿರುವ ಕತೆ ಇದು.
‘ಕಾಡು ಮತ್ತು ನಾಡುಗಳ ಮಧ್ಯೆ ಚಲಿಸುತ್ತಾ ಎರಡರಿಂದಲೂ ಬೆಳೆಯುತ್ತಿರುವ ಕನ್ನಡ ಕವಿ’ ಕೆ.ಪಿ.ಸುರೇಶ್ ಅನುವಾದವನ್ನು ಎಚ್.ಎಸ್. ರಾಘವೇಂದ್ರರಾವ್ ಅತಿಯಾಗಿ ಮೆಚ್ಚಿಕೊಂಡಿದ್ದಾರೆ. ‘ಕನ್ನಡ ಕಾದಂಬರಿಗಳ ಈಚಿನ ಚಪಲಗಳನ್ನು ಮೀರಿ, ಬರವಣಿಗೆಯ ಹೊಸ ಸಾಧ್ಯತೆಗಳನ್ನು ಶೋಧಿಸುವ ಈ ಅನುವಾದ ನನಗೆ ಖುಷಿ ಕೊಟ್ಟದೆ‘ ಎಂದಿದ್ದಾರೆ. ಈಚಿನ ಚಪಲಗಳ ಬಗ್ಗೆ ಅವರೊಂದಷ್ಟು ವಿವರವಾಗಿ ಹೇಳಬಹುದಿತ್ತೇನೋ?
ಕಾಲ್ವಿನೋನ ತ್ರಿವಳಿ ಕಾದಂಬರಿಗಳಲ್ಲಿ ಅತ್ಯಂತ ಜನಪ್ರಿಯವಾದ ‘ಬ್ಯಾರನ್ ಇನ್ ದಿ ಟ್ರೀಸ್‘ಕಾದಂಬರಿ ಈಗ ಕನ್ನಡದಲ್ಲಿ ಲಭ್ಯ.

ಶೀರ್ಷಿಕೆ: ಕೊಸಿಮೊ  ಅನುವಾದ:ಕೆ.ಪಿ.ಸುರೇಶ್  ಪ್ರಕಾಶಕರು: ಅಭಿನವ ಪುಟ:216, ಬೆಲೆ:ರೂ.100/-

ಕೃಪೆ : ಕನ್ನಡ ಪ್ರಭ

ರಾಮಬಾಣ

scan0007
ಕರುಣಾಳು ಬಾ ಬೆಳಕೆ
ಮಸುಕಿದೀ ಪಬ್ಬಿನಲಿ
ಕೈ ಹಿಡಿದು ಕುಡಿಸೆನ್ನನು
ವೈ.ಎನ್.ಕೆ. ಬರೆದ ಈ ಅಣಕವಾಡು ಸಾರ್ವಕಾಲಿಕ. ಕನ್ನಡದ ಹಿರಿಯ ಕವಿಗಳೂ ಅಣಕವಾಡು ಬರೆದಿದ್ದಾರೆ. ಹಿರಿಯ ಕವಿಗಳ ಕವಿತೆಗಳೂ ಸೊಗಸಾದ ಅಣಕವಾಡುಗಳಾಗಿ ರಂಜಿಸಿವೆ. ಬ್ರಹ್ಮಮುರಾರಿ ಸದಾಶಿವ ಲಿಂಗಂ ಎಂಬ ಲಿಂಗಾಷ್ಟಕದ ಸಾಲುಗಳನ್ನೂ ಬುದ್ದಿವಂತರು ಅಣಕು ಮಾಡಿದ್ದಾರೆ:
ಮೋಹಿನಿ ಮೋಹಕ ಮಾದಕ ಲಂಚಮ್
ಮಡದಿಯ ಕೋಪ ನಿವಾರಕ ಲಂಚಮ್
ಮಂತ್ರಿಯ ಮನವನು ಗೆಲ್ಲುವ ಲಂಚಮ್
ತತ್ಪ್ರಣಮಾಮಿ ಸದಾಪ್ರಿಯ ಲಂಚಮ್
ಇಂಥ ಸೊಗಸಾದ ಅಣಕವಾಡುಗಳನ್ನು ಬರೆಯುತ್ತಾ ಬಂದಿರುವವರು ಎನ್.ರಾಮನಾಥ್. ‘ಹಗಲು ಹರಿಯಿತು ಇರುಳು ಕರಗಿತು, ಏಳು ಪಯಣಿಗ ಎಚ್ಚರಾ‘ ಎಂಬ ಚಕ್ರತೀರ್ಥದ ಹಾಡು ಅವರ ಅಣಕವಾಡುವಿನಲ್ಲಿ ‘ಕೊರೆತ ಮುಗಿಯಿತು ಸಭೆಯು ಕರಗಿತು ಏಳು ಸಭಿಕನೆ ಎಚ್ಚರಾ‘ ಎಂದಾಗುತ್ತದೆ. ಇದಕ್ಕೆ ಇನ್ನೆರಡು ಅಣಕವಾಡುಗಳನ್ನೂ ಅವರೇ ಕೊಟ್ಟಿದ್ದಾರೆ: ‘ಕದವು ತೆರೆಯಿತು ಇರುಳು ಸರಿಯಿತು ಏಳು ಕುಡುಕನೇ ಎಚ್ಚರ, ಮುಗಿಲು ಹರಿಯಿತು ಮಳೆಯು ಸುರಿಯಿತು ಸಾಗು ಪಯಣಿಗ ಎಚ್ಚರ‘.

ಶೀರ್ಷಿಕೆ: ಮಾಸದ ಅಣಕು ಗೀತೆಗಳು ಲೇಖಕರು:ಎನ್.ರಾಮನಾಥ್ ಪ್ರಕಾಶಕರು: ಪ್ರಶಾಂತ ಪ್ರಕಾಶನ ಪುಟ:118, ಬೆಲೆ:ರೂ.55/-

ಕೃಪೆ : ಕನ್ನಡ ಪ್ರಭ